– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹಾಗೂ ಪೋಷಕ ನಟ ಹರೀಶ್ ರಾಯ್ (ವಯಸ್ಸು 55) ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಅವರು ನಿಧನರಾದರು.
ಹರೀಶ್ ರಾಯ್ ಅವರ ಆರೋಗ್ಯದ ವಿಚಾರವಾಗಿ ಇತ್ತೀಚೆಗೆ ಹಲವು ಕನ್ನಡ ತಾರೆಯರು ಹಾಗೂ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಹಲವು ಸ್ಟಾರ್ಸ್ಗಳು ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿ ಆರ್ಥಿಕ ಸಹಾಯ ಸಹ ಮಾಡಿದ್ದರು.

ಹರೀಶ್ ರಾಯ್ ಅವರು ಸುಮಾರು ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರಗಳಲ್ಲಿಯೂ ನಟಿಸಿ ಗಮನ ಸೆಳೆದಿದ್ದರು. ಖಳನಟನಾಗಿ, ಪೋಷಕ ನಟನಾಗಿ ಅನೇಕ ಚಿತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಶಿವರಾಜ್ಕುಮಾರ್ ಅಭಿನಯದ ‘ಓಂ’ ಚಿತ್ರದಲ್ಲಿ ನಟಿಸಿದ್ದರು.
ಹರೀಶ್ ರಾಯ್ ಅವರು ‘ಸಂಜು ವೆಡ್ಸ್ ಗೀತಾ’ದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದರು. ‘ಸ್ವಯಂವರ’, ‘ಭೂಗತ’, ‘ನನ್ನ ಕನಸಿನ ಹೂವೆ’, ‘ನಲ್ಲ’, ‘ಜಾಫರ್ ಅಲಿಯಾಸ್ ಮುರ್ಗಿ ಜಾಫರ್’, ‘ಜೋಡಿ ಹಕ್ಕಿ’, ‘ತಾಯವ್ವ’ ಮತ್ತು ಮತ್ತಷ್ಟು ಚಿತ್ರಗಳಲ್ಲಿ ಖಳನಟನಾಗಿ ಕಾಣಿಸಿಕೊಂಡರು.
ಅಲ್ಲದೇ ‘ಕೆಜಿಎಫ್ ಚಾಪ್ಟರ್ 1’ ಮತ್ತು ‘ಕೆಜಿಎಫ್ ಚಾಪ್ಟರ್ 2’ ಚಿತ್ರಗಳಲ್ಲಿ “ಚಾಚಾ” ಪಾತ್ರದ ಮೂಲಕ ಅವರು ಮತ್ತೆ ಸ್ಕ್ರೀನ್ ಮೇಲೆ ಪ್ರೇಕ್ಷಕರ ಮೆಚ್ಚುಗೆ ಪಡೆದರು.





