ಆಶಿಷ್‌ ರಾವತ್‌ ಗುಡ್‌ಗಾಂವ್‌ನ ಹೋಟೆಲ್ ಕೋರ್ಟ್‌ ಯಾರ್ಡ್‌ ಮ್ಯಾರಿಯೋಟ್‌ನಲ್ಲಿ ಎಗ್ಝಿಕ್ಯುಟಿವ್ ‌ಶೆಫ್‌ ಆಗಿದ್ದಾರೆ. ಅವರು ತಮ್ಮ ಪಾಕಕಲೆಯಲ್ಲಿ ರೆಸಿಪೀಸ್‌ನ ಹೊಸ ಟೆಕ್ನಿಕ್ಸ್ ತರಬೇಕು ಎನ್ನುತ್ತಾರೆ. ಹೀಗಾಗಿ ತಮ್ಮ ಸಿದ್ಧಾಂತವನ್ನು ಎಲ್ಲಾ ಗೃಹಿಣಿಯರಿಗೂ ಪರಿಚಯಿಸಲೆಂದೇ ಇಲ್ಲಿ ಹಲವಾರು ಬಗೆಯ ಸಲಹೆಗಳನ್ನು ನೀಡಿದ್ದಾರೆ :

ನೀವು ರಾಜಾಸ್ಥಾನಿ ಡಿಶೆಸ್‌ ಪ್ರಿಯರಾದರೆ, ನಿಮಗೆ ಅಲ್ಲಿನ ಚಕ್ಕಿ ಸಬ್ಜಿ ಬಗ್ಗೆ ಗೊತ್ತಿರುತ್ತದೆ. ಚಕ್ಕಿ ಅಂದರೆ ಗ್ಲೂಟೇನ್‌. ಇದನ್ನು ನೀರಿನಲ್ಲಿ ಬೆರೆಸಿಕೊಂಡು ಕೇಕ್‌ ತರಹ ಸ್ಟೀಂ ಮಾಡಿ. ನಂತರ ಇದನ್ನು ಹೆಚ್ಚಿಕೊಂಡು ಮೊಸರಿನ ಗ್ರೇವಿ ಅಥವಾ ಮಸಾಲೆ ಗ್ರೇವಿಯೊಂದಿಗೆ ಅಡುಗೆಗೆ ಬಳಸಿರಿ. ಈ ವ್ಯಂಜನ ನಿಜಕ್ಕೂ ಹೆಲ್ದಿ ಆಗಿದ್ದು, ಪ್ರೋಟೀನ್‌ನ ಪರ್ಯಾಯವೆನಿಸಿದೆ. ಜೊತೆಗೆ ಇದು ತುಂಬಾ ಟೇಸ್ಟಿ ಕೂಡ. ಅದೇ ತರಹ ರಾಜಾಸ್ಥಾನಿ ಬೇಸನ್‌ ಕೆನೆ ಗಟ್ಟೆ ಸಬ್ಜಿ (ಕಡಲೆಹಿಟ್ಟಿನಿಂದ ಕ್ಯೂಬ್ಸ್ ತಯಾರಿಸಿ ಮಾಡುವ ವ್ಯಂಜನ) ಸಹ ಅಷ್ಟೇ ಟೇಸ್ಟಿ ಅನಿಸುತ್ತದೆ.

ಚಿಕೀ ಫ್ಲವರ್‌ ಅಂದರೆ ಹಸಿ ಕಡಲೆಕಾಳಿನ ಹೂವನ್ನು ಬೇಯಿಸಿ, ಅದಕ್ಕೆ ಜೀರಿಗೆ, ಕಾಳು ಮೆಣಸಿನ ಒಗ್ಗರಣೆ ಕೊಡಿ. ನಂತರ ನೀರು ಬೆರೆಸಿ ಇದನ್ನು ಚಪಾತಿ ಹಿಟ್ಟಿನಂತೆ ಕಲಸಿಕೊಂಡು, ಕೇಕ್‌ ತಯಾರಿಸಿ, ಫ್ರೈ ಮಾಡಿ. ನೀವು ಅದಕ್ಕೆ ಯಾವ ಆಕಾರ ಬೇಕಾದರೂ ಕೊಡಬಹುದು. ಇದಕ್ಕೆ ಇನ್ನಿತರ ಮೊಳಕೆ ಕಟ್ಟಿದ ಕಾಳುಗಳು, ಬೇಕಾದ ಮಸಾಲೆ ಬೆರೆಸಿ ವ್ಯಂಜನ ತಯಾರಿಸಿ.

ಹೆಸರುಕಾಳಿನ ತೊವ್ವೆ (ದಾಲ್‌)ಯನ್ನು ಜೀರಿಗೆ ಜಜ್ಜಿದ ಬೆಳ್ಳುಳ್ಳಿಯ ಒಗ್ಗರಣೆ ಕೊಟ್ಟು ತಯಾರಿಸಿದರೆ ಇದು ಬಲು ರುಚಿಯಾಗಿರುತ್ತದೆ. ಚಳಿಗಾಲದಲ್ಲಿ ನಿಮಗೆ ಮಾರ್ಕೆಟ್‌ನಲ್ಲಿ ಎಲ್ಲಾ ತರಹದ ತಾಜಾ ತರಕಾರಿ ಕಡಿಮೆ ದರದಲ್ಲೇ ಸಿಗುತ್ತದೆ. ಅಂದರೆ ಹಸಿರು ಸೊಪ್ಪು, ಸಲಾಡ್‌ ತರಕಾರಿ ಇತ್ಯಾದಿ. ಹೆಲ್ದಿ ಫುಡ್‌ ಕುರಿತು ಮಾತನಾಡಿದರೆ, ಯಾವ ಸೀಸನ್‌ನಲ್ಲಿ ಯಾವ ತರಕಾರಿ ಸಿಗುತ್ತದೋ, ನಾವು ಧಾರಾಳವಾಗಿ ಅದನ್ನೇ ಬಳಸಬೇಕು. ಈ ದೃಷ್ಟಿಯಲ್ಲಿ ದೈನಂದಿನ ಸೊಪ್ಪುಗಳನ್ನು (ಯಾವುದೇ ಆಗಬಹುದು) ಬಳಸಿಕೊಳ್ಳಬಹುದು. ಈ ಸೊಪ್ಪುಗಳಿಗೆ ಟೊಮೇಟೊ ಬೆರೆಸಿ ಯಾವುದೇ ದಾಲ್ ತಯಾರಿಸಬಹುದು. ಆರೋಗ್ಯದ ದೃಷ್ಟಿಯಿಂದ ಮೊಳಕೆ ಕಟ್ಟಿದ ಹೆಸರುಕಾಳಿನ ತೊವ್ವೆ ಬಲು ಉತ್ತಮ. ಆದಷ್ಟೂ ಎಲ್ಲಾ ಬಗೆಯ ಸೊಪ್ಪುಗಳನ್ನು ಬೆರೆಸಿ ದಾಲ್ ತಯಾರಿಸಿ. ಇದಕ್ಕೆ ಈರುಳ್ಳಿ ಬೆಳ್ಳುಳ್ಳಿಯ ಒಗ್ಗರಣೆ ಕೊಡಿ. ಇಂಗು ಬಳಸಿದರೆ ಇದು ಬೇಡ.

ಹಿಂದಿನ ದಿನವೇ ಸೋಯಾಬೀನ್ಸ್ ನೆನೆಹಾಕಿ, ಅದರ ಸಣ್ಣ ಗಾತ್ರದ ಬಾಲ್ಸ್ ತರಹ ಮಾಡಿ, ಬೇಕ್‌ ಮಾಡಿ. ನಂತರ ಇದನ್ನು ಮಸಾಲೆ ಗ್ರೇವಿಯೊಂದಿಗೆ ಬೇಯಿಸಿ ವ್ಯಂಜನ ತಯಾರಿಸಿ. ನಂತರ ತುಸು ಕೊ.ಸೊಪ್ಪು ಪುದೀನಾ ಉದುರಿಸಿ ಸವಿಯಲು ಕೊಡಿ.

ಯಾವುದೇ ಬಗೆಯ ತೊವ್ವೆ, ಗೊಜ್ಜು ಇತ್ಯಾದಿಗಳಿಗೆ ವಿಭಿನ್ನತೆ ಒದಗಿಸಲು, ಅದಕ್ಕೆ ಒಮ್ಮೊಮ್ಮೆ ಸಕ್ಕರೆ ಬಾದಾಮಿ ಅಥವಾ ಗೋಡಂಬಿ ಪೇಸ್ಟ್ ಬೆರೆಸಿ ಟ್ರೈ ಮಾಡಿ, ನಿಜಕ್ಕೂ ರುಚಿ ಹೆಚ್ಚುತ್ತದೆ.

ವಿಭಿನ್ನ ಬಗೆಯ ಚಪಾತಿ ತಯಾರಿಸಲು, ಗೋಧಿಹಿಟ್ಟಿಗೆ ಹಿಂದಿನ ದಿನದ ದಾಲ್ ‌ಬೆರೆಸಿ, ಒಂದಷ್ಟು ಓಮ ಉಪ್ಪು ಸೇರಿಸಿ ಕಲಸಬೇಕು. ನಂತರ ಇದರಿಂದ ಚಪಾತಿ, ಪರೋಟ ತಯಾರಿಸಿ, ಬಲು ರುಚಿಯಾಗಿರುತ್ತದೆ. ಇದಲ್ಲದೆ ಚಳಿಗಾಲದಲ್ಲಿ ತಾಜಾ ಸಿಗುವ ಮೆಂತ್ಯ ಪಾಲಕ್‌ ಸೊಪ್ಪು ಹೆಚ್ಚಿ, ಬೇಯಿಸಿ ಆರಿದ ನಂತರ ರುಬ್ಬಿಕೊಂಡು ಅದರಿಂದ ಚಪಾತಿ, ಪರೋಟ, ಪೂರಿ ತಯಾರಿಸಿ. ಇದರಿಂದ ಚಳಿಗಾಲದ ಬಾಧೆ ತಪ್ಪುವುದಲ್ಲದೆ, ರುಚಿಯೂ ವಿಭಿನ್ನ ಅನಿಸುತ್ತದೆ.

ಗೋಧಿಹಿಟ್ಟಿಗೆ ಅಕ್ಕಿಹಿಟ್ಟು, ರವೆ, ಸೋಯಾ ಹಿಟ್ಟು, ಸಜ್ಜೆ ನವಣೆಗಳ ಹಿಟ್ಟು, ರಾಗಿ ಹಿಟ್ಟು, ಜೋಳದ ಹಿಟ್ಟು ಇತ್ಯಾದಿ 2-3 ಬಗೆಯ ಕಾಂಬಿನೇಷನ್‌ ಕಲಸಿ ಚಪಾತಿ ತಯಾರಿಸಿ. ಇಂಥ ಮಲ್ಟಿಗ್ರೇನ್‌ ಹಿಟ್ಟಿನ ಕಾರಣ ಇವು ಹೆಚ್ಚು ಆರೋಗ್ಯಕರ ಎನಿಸುತ್ತವೆ. ವಿಭಿನ್ನತೆಯ ಜೊತೆಗೆ ಹೆಚ್ಚು ನಾರಿನಂಶ, ಪ್ರೋಟೀನ್‌ ಸಿಗುತ್ತದೆ.

ಅನ್ನ ತಯಾರಿಸುವಾಗ ಅದರ ರುಚಿ ಹೆಚ್ಚಿಸಲು, ಅದಕ್ಕೆ ತುಸು ಉಪ್ಪು ಜೀರಿಗೆ ಹಾಕಿ ಬೇಯಿಸಿ. ಆಹಾರ ಜೀರ್ಣವಾಗಲು ಜೀರಿಗೆ ಸಹಕಾರಿ. ಆಮೇಲೆ ಇದಕ್ಕೆ ನಿಂಬೆಹಣ್ಣು ಸಹ ಹಿಂಡಿಕೊಳ್ಳಬಹುದು. ಅಕ್ಕಿಯಲ್ಲಿನ ಅತಿ ಪಿಷ್ಟದ ಪ್ರಮಾಣವನ್ನು ನಿಂಬೆ ತಗ್ಗಿಸುತ್ತದೆ. ಇಂಥ ಲೆಮನ್‌ ರೈಸ್‌ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಇಷ್ಟು ಮಾತ್ರವಲ್ಲದೆ, ಒಮ್ಮೊಮ್ಮೆ ಕ್ಯಾರೆಟ್‌, ಪಾಲಕ್‌, ಕಾಲಿಫ್ಲವರ್‌, ಟೊಮೇಟೊ ಇತ್ಯಾದಿ ಹೆಚ್ಚಿ ಹಾಕಿ ಬೇಯಿಸಿ, ಈರುಳ್ಳಿ ಜೀರಿಗೆಯ ಒಗ್ಗರಣೆ ಕೊಟ್ಟರೆ ಇನ್ನೂ ರುಚಿ ಹೆಚ್ಚು. ನೀವು ಪ್ರತಿನಿತ್ಯ ತಯಾರಿಸುವ ಅನ್ನ, ರೊಟ್ಟಿ, ಚಪಾತಿ, ಪರೋಟ ಇತ್ಯಾದಿಗಳಲ್ಲಿ ವೈವಿಧ್ಯತೆ ಇರುವಂತೆ ನೋಡಿಕೊಳ್ಳಿ, ಆಗ ಮನೆಮಂದಿ ಮನೆ ಊಟ ಬೋರಿಂಗ್‌ ಎನ್ನುವುದಿಲ್ಲ.

ಈಗಂತೂ ಅನೇಕ ಅನುಕೂಲಗಳ ಕಾರಣ ಮನೆಯಲ್ಲೇ ಎಲ್ಲಾ ಬಗೆಯ ಸಿಹಿ ಖಾದ್ಯ ತಯಾರಿಸಬಹುದು. ಕ್ಯಾರೆಟ್‌, ಸೋರೆಕಾಯಿ, ಸಿಹಿಗುಂಬಳ, ಹೆಸರುಬೇಳೆ ಇತ್ಯಾದಿ ಬಳಸಿ ಸಜ್ಜಿಗೆ ತಯಾರಿಸಬಹುದು. ಅಕ್ಕಿ, ಗೋಧಿ ತರಿ, ಸಬ್ಬಕ್ಕಿ ಇತ್ಯಾದಿಗಳನ್ನು ಮಿಕ್ಸ್ ಮಾಡಿ ವೆರೈಟಿ ಖೀರು ತಯಾರಿಸಿ.

ಹೆಲ್ದಿ ಫುಡ್‌ ದೃಷ್ಟಿಯಿಂದ ನೋಡಿದಾಗ, 1-2 ಚಮಚ ಹೆಚ್ಚುವರಿ ಬೆಣ್ಣೆ ಬೆರೆಸಬಾರದು ಎನ್ನುತ್ತಾರೆ. ಬೆಣ್ಣೆ ಬದಲು ಲೋ ಫ್ಯಾಟ್ ಕ್ರೀಂ ಅಥವಾ ಗಟ್ಟಿ ಮೊಸರು ಬೆರೆಸಿ, ನಿಮ್ಮ ವ್ಯಂಜನದ ರುಚಿ ಕಾಪಾಡಿಕೊಳ್ಳಿ.

ವೆಜ್‌ ಪಲಾವ್ ‌ಅಥವಾ ಬಿರಿಯಾನಿ ತಯಾರಿಸಿದ ನಂತರ, ಅದರ ಮೇಲೆ ಹೆಚ್ಚಿ ಕೆಂಪಗೆ ಬಾಡಿಸಿದ ಈರುಳ್ಳಿ, ಹಸಿ ಪುದೀನಾ ಉದುರಿಸಿ. ಇದು ವ್ಯಂಜನದ ರುಚಿ ಹೆಚ್ಚಿಸುವ ಜೊತೆಗೆ ಅದಕ್ಕೆ ವಿಶಿಷ್ಟ ರಿಚ್‌ ಲುಕ್‌ ಕೊಡುತ್ತದೆ. ನಿಮ್ಮ ಆಯ್ಕೆಯ ಫ್ಲೇವರ್ ಬೆರೆಸುವುದರಿಂದಲೂ ಅಡುಗೆಯಲ್ಲಿ ವೈವಿಧ್ಯತೆ ಬರುತ್ತದೆ.

ಪ್ರಭಾ ಮಾಧವ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ