ಆಹಾ, ನ್ಯೂ ಇಯರ್‌ಈವ್ ನಂದು ಬೆಂಗಳೂರಿನ ಅತ್ಯಾಧುನಿಕ ಹೋಟೆಲ್‌ಗಳ ವೈಭವ ಕೇಳಬೇಕೇ? ಬೆಳಗಾದರೆ ಮೂಡಲಿರುವ ಹೊಸ ವರ್ಷದ ಮೊದಲ ದಿನವನ್ನು ಸ್ವಾಗತಿಸಲು ಹೋಟೆಲ್ ‌ಬ್ಲೂಮೂನ್‌ ಅತಿ ಭ್ಯಾಗಿ ಸಜ್ಜುಗೊಂಡಿತ್ತು. ಎಲ್ಲೆಲ್ಲೂ ಬಣ್ಣ ಬಣ್ಣದ ವಿದ್ಯುದ್ದೀಪಗಳ ಕಣ್ಣು ಕೋರೈಸುವ ಕಾಂತಿ ಹರಡಿ ಆ ಹೋಟೆಲ್ ಧರೆಗಿಳಿದ ನಂದನ ವನದಂತೆ ಶೋಭಿಸುತ್ತಿತ್ತು.

ಅಂದಿನ ವಿಶೇಷ ಮನರಂಜನೆಗಾಗಿ ಹಲವಾರು ಗ್ಲಾಮರಸ್‌ ಕಾರ್ಯಕ್ರಮಗಳು ಸಾಲುಸಾಲಾಗಿ ರೆಡಿಯಾಗಿದ್ದವು. ಗೌತಮ್ ಅಲ್ಲಿಗೆ ತಲುಪಿದಾಗ ಹೆಚ್ಚುಕಡಿಮೆ 10 ಗಂಟೆ ದಾಟಿತ್ತು. ಕೆಲವು ರಸಭರಿತ ಕಾರ್ಯಕ್ರಮಗಳು ಅದಾಗಲೇ ಶುರುವಾಗಿದ್ದವು. ಅತ್ಯಾಧುನಿಕ ಮಾದಕ ಪಾಶ್ಚಾತ್ಯ ನರ್ತನಕ್ಕೆ ಒಬ್ಬ ಗ್ಲಾಮರಸ್‌ ನರ್ತಕಿ ಹೆಜ್ಜೆ ಹಾಕುತ್ತಿದ್ದರೆ, ಗೌತಮನಿಗೆ ಅವಳಿಂದ ಕಣ್ಣು ಕೀಳಲಾಗಲಿಲ್ಲ.

ಗೆಳೆಯರ ಒತ್ತಾಯಕ್ಕೆ ಅವರೊಡಗೂಡಿ ಅಲ್ಲಿಗೆ ಬಂದಿದ್ದ ಗೌತಮ್, ಸ್ನೇಹಿತರ ಸಲುವಾಗಿ ಅನಿವಾರ್ಯವಾಗಿ 2 ಪೆಗ್‌ ಬಿಯರ್‌ಹೀರಬೇಕಾಯ್ತು. ವಿಸ್ಕಿ ತೆಗೆದುಕೊಳ್ಳುವಂತೆ ಗೆಳೆಯರು ಒತ್ತಾಯಿಸಿದಾಗ, ತಾನು ಕಾರಿನಲ್ಲಿ ಬಹು ದೂರ ಪ್ರಯಾಣ ಮುಂದುವರಿಸಬೇಕೆಂದು ಬೇಡವೆಂದು ತಳ್ಳಿದ್ದ. ಆ ನರ್ತಕಿಯ ಮಾದಕ ಮೈಮಾಟ, ಕಡೆದಿಟ್ಟ ಶಿಲ್ಪದಂತಿದ್ದ ಅವಳ ಅಂಗಾಂಗಗಳು ಎಲ್ಲರೂ ಅವಳತ್ತಲೇ ಮತ್ತೆ ಮತ್ತೆ ನೋಡುವಂತೆ ಮಾಡಿದ್ದವು. ನೆಪ ಮಾತ್ರಕ್ಕಿದ್ದ ಅವಳ ಪಾರದರ್ಶಕ ಉಡುಗೆ ಅವಳ ದೇಹಸಿರಿಯನ್ನು ಮುಚ್ಚಿಡಲು ಅಸಾಧ್ಯವಾಗಿತ್ತು. ಗೌತಮನಿಗೆ ಅವಳೊಂದಿಗೆ ಹೆಜ್ಜೆ ಹಾಕಿ ಕುಣಿಯುವ ಮನಸ್ಸಾದರೂ, ತನ್ನನ್ನು ತಾನು ನಿಗ್ರಹಿಸಿಕೊಳ್ಳುತ್ತಾ, ಗೆಳೆಯರೊಂದಿಗೆ ಹರಟುತ್ತಾ, ಅವಳ ಡ್ಯಾನ್ಸ್ ಎಂಜಾಯ್‌ ಮಾಡುತ್ತಿದ್ದ. ಅವನ ಹೆಂಡತಿ ಮೀರಾ ಮತ್ತು ಇಬ್ಬರು ಮಕ್ಕಳು ಹಿಂದಿನ ದಿನ ತಾನೇ ಮುಂಬೈನ ಅವಳ ತವರೂರಾದ ಬಾಂದ್ರಾಗೆ ಹೊರಟಿದ್ದರು. ಹೊಸ ವರ್ಷದ ಸಂಭ್ರಮಾಚರಣೆಯೊಂದಿಗೆ 4-5 ದಿನ ಅಲ್ಲೇ ಕಳೆಯಬೇಕೆಂದು ಮೀರಾ ಆಶಿಸಿದ್ದಳು. ತನ್ನ ಆಫೀಸ್‌ನಲ್ಲಿ ಅತಿ ಮುಖ್ಯವಾದ ಕ್ಲೈಂಟ್ಸ್ ಮೀಟಿಂಗ್‌ ಇದ್ದುದರಿಂದ, ಗೌತಮ್ ಅವಳೊಂದಿಗೆ ಮುಂಬೈಗೆ ಹೋಗಲಾಗಲಿಲ್ಲ. ಅದೆಲ್ಲ ಮೀಟಿಂಗ್ಸ್ ಮುಗಿದ ಮೇಲೆ, ಅವನು ತನ್ನ ಬಹುದಿನಗಳ ಕನಸನ್ನು ನನಸಾಗಿಸಿಕೊಳ್ಳಲು ಧಾವಿಸಿದ. ಮುಂಬೈಗೆ ಹೋಗದಿರಲು ಮೀಟಿಂಗ್‌ಒಂದು ನೆಪವಾಗಿತ್ತಷ್ಟೆ. ಅವನು ತನ್ನ ಖಾಸಾ ಗೆಳತಿ ಸುನೀತಾಳ ಜೊತೆ ಕಾಲ ಕಳೆಯಲು ಬಯಸಿದ್ದ.

ಹೋಟೆಲ್‌ನಲ್ಲಿ ಪಾರ್ಟಿಯ ನಶೆ ರಂಗೇರಿತ್ತು. ನಿಧಾನಕ್ಕೆ ಸಮಯ ಸರಿದು ಗಂಟೆ ಹನ್ನೆರಡಾಯಿತು. ಅಲ್ಲಿದ್ದವರೆಲ್ಲರೂ ಪರಸ್ಪರ ಕೈ ಕುಲುಕಿ, ಅಪ್ಪಿಕೊಂಡು ಶುಭಾಶಾಯ ಕೋರಿದರು. ಗೌತಮ್ ಬಹಳಷ್ಟು ಜನ ಗೆಳೆಯರನ್ನು ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡ. ಅದೆಲ್ಲ ಮುಗಿಸಿಕೊಂಡು ಅವನು ಹೋಟೆಲ್‌ನಿಂದ ಹೊರಟುಬಿಟ್ಟ. ಅವನಿನ್ನೂ ಆ ಡ್ಯಾನ್ಸ್ ಗುಂಗಿನಲ್ಲೇ ಮೈಮರೆತಿದ್ದ, ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ ಕಾರನ್ನು ಮುನ್ನಡೆಸಿದ. ಕಾರು ನಿಧಾನವಾಗಿ ಮುಂದುವರಿದು ಅಂತೂ ಸುನೀತಾಳ ಮನೆ ತಲುಪಿತು.

ಸುನೀತಾಳ ಅಪಾರ್ಟ್‌ಮೆಂಟ್‌ ಬಳಿ ಬಂದು, ಕಾರು ಪಾರ್ಕ್‌ ಮಾಡಿ, 8ನೇ ಮಹಡಿಗೆ ಹೋಗಿ ಅವಳ ಮನೆಯ ಕಾಲಿಂಗ್‌ ಬೆಲ್ ಒತ್ತಿದ. ಬಾಗಿಲು ತೆರೆದ ಸುನೀತಾ, ಮುಗುಳ್ನಗುತ್ತಾ ಅವನನ್ನು ಸ್ವಾಗತಿಸಿದಳು. ಅತ್ಯಾಕರ್ಷಕ ಗ್ಲಾಮರಸ್‌ ಡ್ರೆಸ್‌ನಲ್ಲಿ ಮಿಂಚುತ್ತಿದ್ದ ಸುನೀತಾ, ಒಳಬಂದ ಗೌತಮನ ಎದೆಗೊರಗಿ ಅವನ ಬಾಹುಗಳಲ್ಲಿ ಬಂದಿಯಾದಳು. ಅವಳನ್ನು ಗಾಢವಾಗಿ ಅಪ್ಪಿಕೊಂಡ ಗೌತಮ್, ಅವಳ ತುಟಿಗೆ ಸಿಹಿಯಾಗಿ ಮುತ್ತಿಟ್ಟ. ಕನಸಿನ ಲೋಕದಲ್ಲಿ ಎಂಬಂತೆ ಅವರು ಒಳಗೆ ಹೆಜ್ಜೆಹಾಕುತ್ತಾ ಬಂದು ಸೋಫಾದಲ್ಲಿ ಒರಗಿದರು. ಗೌತಮ್ ಧಾವಿಸಿ ಅವಳನ್ನು ಮತ್ತೆ ಮುದ್ದಿಸಲೆತ್ನಿಸಿದ.

“ಗೌತಮ್, ಯೂ ಆರ್‌ ಟೂ ಫಾಸ್ಟ್! ಇದೀಗ ತಾನೇ ಹೊಸ ವರ್ಷ ಹುಟ್ಟಿದೆ…. ನಾವು ಒಂದಿಷ್ಟು ಹಾಯಾಗಿ ಹರಟೆ ಹೊಡೆದು…. ನಂತರ….” ಎಂದು ಕಣ್ಣು ಹೊಡೆದಳು. ಒಲ್ಲದ ಮನದಿಂದ ತುಸು ದೂರ ಸರಿದು ಕುಳಿತವನನ್ನು ಒಳಗೆ ಬರುವಂತೆ ಕರೆದು, ಡೈನಿಂಗ್‌ ಟೇಬಲ್‌ನತ್ತ ನಡೆದಳು ಸುನೀತಾ.

ಟೇಬಲ್ ಮೇಲೆ ಜೋಡಿಸಿದ್ದ ವಿವಿಧ ಬಾಟಲ್‌ಗಳಿಂದ ಸ್ವಾದಿಷ್ಟ ಕಾಕ್‌ಟೇಲ್ ‌ಸಿದ್ಧಪಡಿಸಿ, ಅವನಿಗೊಂದು ಗ್ಲಾಸ್‌ ನೀಡಿ ತಾನೊಂದು ಗ್ಲಾಸ್‌ ಹಿಡಿದು ಎದುರಿನಲ್ಲಿ ಕುಳಿತಳು. ಡ್ರಿಂಕ್‌ ಸವಿಯುತ್ತಾ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಅಲ್ಲಿಂದ ನಿಧಾನವಾಗಿ ಹರಟುತ್ತಾ ಇಬ್ಬರೂ ಬಾಲ್ಕನಿಯತ್ತ ನಡೆದರು. ಅರ್ಧರಾತ್ರಿಯಲ್ಲಿ ಹೊಳೆಯುತ್ತಿರುವ ಚಂದ್ರತಾರೆಗಳನ್ನು ದಿಟ್ಟಿಸುತ್ತಾ, ತಮ್ಮದೇ ಲೋಕದಲ್ಲಿ ಮೈ ಮರೆತರು.

ಸುನೀತಾ ಶ್ರೀಮಂತ ಹೆಣ್ಣು. ಅವಳ ಗಂಡ ಡಾ. ಸುಂದರ್‌ ಆ ದಿನ ಸಂಜೆಯಷ್ಟೇ 3 ದಿನಗಳ ಕಾನ್ಛರೆನ್ಸ್ ಎಂದು ದೆಹಲಿಗೆ ಹೊರಟಿದ್ದ. ಆತ ನಗರದ ಜನಪ್ರಿಯ ಆರ್ಥೊಪೆಡಿಶಿಯನ್‌. ಅತಿ ಹೆಚ್ಚಿನ ಬೇಡಿಕೆಯಿಂದಾಗಿ ಆತನ ನರ್ಸಿಂಗ್‌ ಹೋಂ ಸದಾ ಗಿಜಿಗುಡುತ್ತಿತ್ತು. ಹೀಗಾಗಿ ದಿನ ತಡರಾತ್ರಿ ಮನೆಗೆ ಬರುವುದಲ್ಲದೆ, ವಾರಾಂತ್ಯಗಳಲ್ಲೂ ಎಮರ್ಜೆನ್ಸಿ ಕೇಸ್‌ ಎಂದು ಅಲ್ಲಿಗೆ ಹೋಗುವುದಿತ್ತು. ಅತಿ ಮಹತ್ವಾಕಾಂಕ್ಷಿ ಹೆಣ್ಣು ಸುನೀತಾ, ಈತನ ಜೊತೆ ಸದಾ ಸರಸಮಯ ದಾಂಪತ್ಯ ಬಯಸಿದ್ದಳು. ಸಮಯಾಭಾವದ ಕಾರಣ ಗಂಡನ ಸಾಂಗತ್ಯ ಅವಳಿಗೆ ಮರೀಚಿಕೆಯಾಗಿತ್ತು.

ಕಾಲೇಜಿನ ದಿನಗಳಿಂದಲೂ ರೊಮ್ಯಾಂಟಿಕ್‌ ಜೀವನದ ಬಗ್ಗೆ ಅನೇಕ ಕನಸುಗಳನ್ನು ಕಂಡಿದ್ದ ಸುನೀತಾ, ಯಾವುದೂ ನನಸಾಗದೆ ಕೊರಗಿದ್ದಳು. ಕುರೂಪಿ ಅಲ್ಲದಿದ್ದರೂ ಚೆಲುವೆಯಲ್ಲದ ಸುನೀತಾ, ಹುಡುಗರ ಪ್ರೇಮ ಪ್ರೀತಿಗಳನ್ನು ದಕ್ಕಿಸಿಕೊಂಡಳಲ್ಲ. ಮೊದಲಿನಿಂದಲೂ ಮೇಲ್ಮಧ್ಯಮ ವರ್ಗದಲ್ಲಿ, ಅನುಕೂಲಕರ ವೈಭವದ ಜೀವನ ರೂಢಿಸಿಕೊಂಡಿದ್ದ ಸುನೀತಾ ಸಂಘಜೀವಿಯಲ್ಲ. ತಾನಾಗಿ ಯಾರನ್ನೂ ಮಾತುಕಥೆ, ಸ್ನೇಹಕ್ಕೆ ಕರೆದವಳಲ್ಲ. ತಾವಾಗಿ ಯಾರಾದರೂ ಮಾತನಾಡಿಸಿದರೆ ಮಾತ್ರ ಅವರ ಜೊತೆ ಬೆರೆಯುತ್ತಿದ್ದ ಮಿತಭಾಷಿ. ಬೇರೆ ಹುಡುಗಿಯರೆಲ್ಲ ಬಾಯ್‌ ಫ್ರೆಂಡ್ಸ್ ಜೊತೆ ಕಾಲೇಜಿನಿಂದ ಬೈಕ್‌ನಲ್ಲಿ ಹೊರಟಾಗ, ಕಾಲೇಜಿನ ಫಂಕ್ಷನ್‌ಗಳಲ್ಲಿ ಜೋಡಿಯಾಗಿ ಸುತ್ತಾಡುವಾಗ, ತನಗಿಲ್ಲದ ಆ ಭಾಗ್ಯ ನೆನೆದು ನಿಡುಸುಯ್ಯುತ್ತಿದ್ದಳು.

ಮೊದಲಿನಿಂದಲೂ ಅವಳ ತಾಯಿ ತಂದೆ ಸುನೀತಾಳ ಮದುವೆ ಬೇಗ ಮಾಡಿ ಮುಗಿಸಬೇಕೆಂದು, ಅವಳು ಪದವಿ ಪಡೆದ ತಕ್ಷಣವೇ ವರನ ಬೇಟೆಗಾರಂಭಿಸಿದರು. ಆದರೆ 32 ತುಂಬಿದರೂ ಅವಳ ಕಂಕಣ ಭಾಗ್ಯವೇಕೋ ಕೂಡಿಬರಲೇ ಇಲ್ಲ. ಅವಳಿಗೆ ಖಾಸಗಿ ಕಂಪನಿಯೊಂದರಲ್ಲಿ ಉತ್ತಮ ಕೆಲಸ ದೊರಕಿತ್ತು. ಐಷಾರಾಮದಿಂದ ಖರ್ಚು ಮಾಡುತ್ತಾ ಹಾಯಾಗಿ ದಿನ ಕಳೆಯುತ್ತಿದ್ದ ಅವಳು, ತನ್ನನ್ನು ಹಲವು ವರಗಳು ತಿರಸ್ಕರಿಸಿದಾಗ ಹತಾಶಳಾದಳು.

ಹೀಗಾಗಿ ಮುಂದಿನ ದಿನಗಳಲ್ಲಿ ವಿನಾಕಾರಣ ಅವಳೇ ಹಲವಾರು ವರಗಳನ್ನು ತಿರಸ್ಕರಿಸಿ, ಸೇಡು ತೀರಿಸಿಕೊಂಡೆ ಎಂದು ತೃಪ್ತಿಪಟ್ಟಳು. ಆದರೆ ಮದುವೆಯಾಗಲೇಬೇಕೆಂದು ಬಯಸಿದ್ದ ಅವಳಿಗೆ 32 ದಾಟಿದ ನಂತರ ಹೆಚ್ಚಿನ ಆಯ್ಕೆಗಳಿರಲಿಲ್ಲ. ಹೀಗಾಗಿ ಸುಮಾರಾದ ವರಗಳನ್ನು ಎಂದೂ ಒಪ್ಪದ ಅವಳು, ವಯಸ್ಸಿನಲ್ಲಿ ತನಗಿಂತಲೂ 10 ವರ್ಷ ಹಿರಿಯವನಾಗಿದ್ದರೂ ಲಕ್ಷಾಧೀಶ್ವರನಾಗಿದ್ದ  ಡಾ. ಸುಂದರ್‌, ಆತನ ವೈಭವೋಪೇತ ಜೀವನಕ್ಕೆ ಮರುಳಾಗಿ ಮದುವೆಯಾದಳು.

ಹೆಚ್ಚಿನ ಚೆಲುವು ಹೊಂದಿರದಿದ್ದರೂ, ಮೊದಲಿನಿಂದಲೂ ಸುನೀತಾ ತನ್ನ ಪರ್ಸನಾಲ್ಟಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಳು. ಪ್ರತಿದಿನ ಜಿಮ್ ಗೆ ಹೋಗುತ್ತಾ, ವಾಕಿಂಗ್‌ ಜಾಗಿಂಗ್‌ನಿಂದ ಪರ್ಫೆಕ್ಟ್ ಫಿಗರ್‌ ಮೇಂಟೇನ್‌ ಮಾಡಿದ್ದಳು. ತುಂಬಿ ತುಳುಕುವ ಅವಳ ಅಂಗಸೌಷ್ಠವ, ಅವಳಿಗೆ ಆಫೀಸ್‌ ವಲಯದಲ್ಲಿ, ಕ್ಲೈಂಟ್‌ ಮೀಟಿಂಗ್ಸ್ ನಲ್ಲಿ ಹಲವು ಹಸಿದ ಕಣ್ಣುಗಳನ್ನು ಪರಿಚಯಿಸಿದ್ದರೂ, ತನ್ನನ್ನು ಮಾತ್ರ ಪ್ರೀತಿಸಿ, ಆರಾಧಿಸುವ ಗಂಡಸಿಗಾಗಿ ತುಡಿಯುತ್ತಿದ್ದಳು.

ಅತಿ ಗಂಭೀರ ಸ್ವಭಾವದ ಡಾ. ಸುಂದರ್‌, ಅವಳು ಬಯಸಿದ ಆದರ್ಶ ಸಂಗಾತಿ ಆಗಲಿಲ್ಲ. ತಾನಾಯಿತು, ತನ್ನ ನರ್ಸಿಂಗ್‌ ಹೋಂ ಆಯಿತು ಎಂದು ಅದಕ್ಕೆ ಸಂಬಂಧಪಟ್ಟ ಇತರ ಊರುಗಳ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾ ತನ್ನದೇ ಪ್ರಪಂಚದಲ್ಲಿ ಕರಗಿಹೋಗಿದ್ದ ಆತನಿಗೆ, ಯುವಮಿಡಿತಗಳ ಹೆಂಡತಿಯ ಭಾವನೆಗಳನ್ನು ಗುರುತಿಸಲು ಆಗಲೇ ಇಲ್ಲ. ಆತ ತಾನಾಗಿ ಹೆಚ್ಚಿನ ಪ್ರೀತಿ ಪ್ರೇಮ ತೋರಿ ಅವಳ ಒಲವು ಬಯಸಿದ್ದರೆ, ಸುನೀತಾ ಅವನಿಗೆ ಒಲಿಯುತ್ತಿದ್ದಳೇನೋ….. ಮೊದಲೇ ಒಲ್ಲದ ಆಯ್ಕೆ, ಅದರ ಮೇಲೆ ಆತನ ನೀರಸ ಪ್ರತಿಕ್ರಿಯೆ…. ಅವಳಿಗೆ ದಾಂಪತ್ಯ ಒಲ್ಲದ ಔತಣವಾಗಿತ್ತು. ಯಾವುದೇ ಏರಿಳಿತಗಳಿಲ್ಲದೆ, ನೀರಸವಾಗಿ ಅವಳ ದಾಂಪತ್ಯ ಜೀವನ ಮುಂದುವರಿದಿತ್ತು. ಯಾಂತ್ರಿಕ ದೈಹಿಕ ಮಿಲನ ಅವಳ ಮಗಳ ಹುಟ್ಟಿಗೆ ಕಾರಣವಾಗಿತ್ತು. ಅವಳೆಂದೂ ತಾನಾಗಿ ಪತಿಯೊಂದಿಗೆ ಸುಮುಖವಾಗಿ ಬೆರೆತುಕೊಳ್ಳಲು ಯತ್ನಿಸಲಿಲ್ಲ. ಕರ್ತವ್ಯಕ್ಕಾಗಿ ಪರಸ್ಪರ ಬದುಕು ಹಂಚಿಕೊಂಡಿದ್ದೇವೆ ಎಂದು ಮದುವೆಯಾದ ಮರುವರ್ಷವೇ ಮಗಳು ಹುಟ್ಟಿದ ನಂತರ ಇಬ್ಬರೂ ಬೇರೆ ಕೋಣೆಗಳಲ್ಲಿ ಮಲಗುತ್ತಿದ್ದರು.

ಮದುವೆ ಇಬ್ಬರ ಪಾಲಿಗೂ ಸ್ಟೇಟಸ್‌ ಸಿಂಬಲ್ ಆಗಿತ್ತು. ಸಮರ್ಪಣಾ ಮನೋಭಾವ ಇಲ್ಲದಿದ್ದರೇನಂತೆ ಸಮಾಜದಲ್ಲಿ ಇಬ್ಬರೂ ಪ್ರತಿಷ್ಠಿತ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಮಗು ಹುಟ್ಟಿದ ಬಳಿಕ ಆತನಿಂದ ವಿಮುಖಳಾಗಿ ಒಂಟಿ ಬದುಕು ಸಾಗಿಸಬೇಕೆಂದು ಅವಳು ಬಯಸಿದ್ದರೂ, ಸಾಂಪ್ರದಾಯಿಕ ಮನೋಭಾವದ ತಾಯಿ ತಂದೆಯರ ಮನಸ್ಸು ಮುರಿಯಬಾರದೆಂದು ತನ್ನ ಸಾಂಸಾರಿಕ ಜೀವನ ಸುಗಮವಾಗಿ ಸಾಗುತ್ತಿದೆ ಎಂಬಂತೆ ತವರಿನವರಿಗೆ ಅವಳು ತೋರಿಸಿಕೊಳ್ಳುತ್ತಿದ್ದಳು. ಬೆಂಗಳೂರಿನ ಪ್ರತಿಷ್ಠಿತ ಬಿಝಿ ಡಾಕ್ಟರ್‌ ಅಳಿಯ ತಮ್ಮಲ್ಲಿಗೆ ಬಂದುಹೋಗದೆ ಇದ್ದದ್ದು, ಅವಳ ತಾಯಿ ತಂದೆಗೆ ದೊಡ್ಡ ವಿಷಯ ಎನಿಸಲಿಲ್ಲ. ಮೊಮ್ಮಗಳು ಹುಟ್ಟಿದ ಮೇಲೆ ಮಗಳ ಜೀವನ ಹಸನಾಯ್ತು ಎಂದೇ ಅವರು ನೆಮ್ಮದಿಯಾಗಿದ್ದರು.

ಅಂತೂ ಸುನೀತಾಳ ಬದುಕು ಹೀಗೇ ಸಾಗಿತ್ತು. ಪತಿ ಪತ್ನಿಯರಲ್ಲಿ ಕಲಹ ಜಗಳ ಇರದಿದ್ದರೂ ಪರಸ್ಪರ ಅನ್ಯೋನ್ಯತೆ, ಸಮರ್ಪಣಾ ಮನೋಭಾವ, ಅನುರಾಗದ ಸೆಳೆತ….. ಹೀಗೆ ಭಾವನಾತ್ಮಕ ಜೊತೆ ಇಲ್ಲದೆ ಜೀವನ ನೀರಸವಾಗಿ, ಯಾಂತ್ರಿಕವಾಗಿತ್ತು. ಮನೆ, ಮಗಳ ಬೆಳವಣಿಗೆ, ಆಫೀಸ್‌…. ಹೀಗೆ ಅವಳ ದಿನಚರಿ ಏರುಪೇರಿಲ್ಲದೆ ಸಾಗುತ್ತಿತ್ತು.

ಈ ಸಂದರ್ಭದಲ್ಲಿ ಗೌತಮ್ ಅವಳ ಜೀವನದಲ್ಲಿ ಪ್ರವೇಶಿಸಿದ. ಗೌತಮ್ ಅವಳ ಕಾಲೇಜ್‌ ಸಹಪಾಠಿ. ಎತ್ತರಕ್ಕೆ ಸೊಗಸುಗಾರನಾಗಿದ್ದ ಅವನು ಕಾಲೇಜಿನ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದು. ಇತರ ಹುಡುಗಿಯರು ಅವನ ಸಹವಾಸಕ್ಕಾಗಿ ಹಾತೊರೆಯುತ್ತಿದ್ದಾಗ, ತನ್ನ ಕೀಳರಿಮೆಯಿಂದಾಗಿ ಸುನೀತಾ ಅವನಿಂದ ದೂರವೇ ಉಳಿದಿದ್ದಳು.

ಹೀಗೆ ಗೌತಮ್ ಕೆಲಸ ಮಾಡುತ್ತಿದ್ದ ಕಂಪನಿಗೆ ಅಗತ್ಯ ಸಾಮಗ್ರಿ ಒದಗಿಸುವ ಸಲುವಾಗಿ, ಕ್ಲೈಂಟ್‌ ಆಗಿ ಅಲ್ಲಿಗೆ ಹೋದ ಸುನೀತಾ, ಅವನೊಂದಿಗೆ ಕಾರ್ಯನಿಮಿತ್ತ ವ್ಯವಹರಿಸಬೇಕಾಯ್ತು. ಹಳೆಯ ಪರಿಚಯ ಪ್ರಯೋಜನಕ್ಕೆ ಬಂತು. ಇಬ್ಬರೂ ಆಗಾಗ ಭೇಟಿಯಾಗುತ್ತಾ ಬಲು ಬೇಗ ಆತ್ಮೀಯರಾದರು. ಹೀಗೆ ಅವರ ಸ್ನೇಹ ಕ್ರಮೇಣ ಗಾಢವಾಯಿತು.

ಇಂಥ ಆಕರ್ಷಕ ವ್ಯಕ್ತಿ ತನ್ನ ಸ್ನೇಹಕ್ಕಾಗಿ ಹಾತೊರೆಯುವುದು, ತನ್ನ ಸಾಂಗತ್ಯದಿಂದ ಮುದಗೊಂಡು ಆರಾಧನಾ ಭಾವದಿಂದ, ಅಭಿಮಾನದಿಂದ ಮೆರೆಸುವುದು ಅವಳಿಗೆ ಎಲ್ಲಿಲ್ಲದ ಆನಂದ ನೀಡಿತು. ಸಹಜವಾಗಿಯೇ ಔಪಚಾರಿಕ ಬಹುವಚನ ದೂರವಾಗಿ ಆತ್ಮೀಯತೆ, ನಿಕಟತೆ, ಸಲಿಗೆಗೆ ಎಡೆಮಾಡಿಕೊಟ್ಟಿತು.

ಆಗಲೇ ಗೌತಮ್ ಸಹ ತನ್ನಂತೆಯೇ ಹೆಣ್ಣಿನ ಗಾಢ ಪ್ರೇಮಕ್ಕಾಗಿ ಹಂಬಲಿಸುತ್ತಿದ್ದಾನೆ ಎಂದು ಸುನೀತಾಳಿಗೆ ಅರಿವಾಯಿತು. ಏಕೆಂದರೆ ಅವನ ಪತ್ನಿ ಮೀರಾ ಆಧುನಿಕ ವಿಚಾರಧಾರೆ ಇಲ್ಲದವಳು. ಶಾಲೆಯಲ್ಲಿ ತನ್ನ ಟೀಚರ್‌ ಕೆಲಸ, ಮನೆಯಲ್ಲಿ ಇಬ್ಬರು ಮಕ್ಕಳು, ಹಬ್ಬಹರಿದಿನ, ದೇವಸ್ಥಾನ, ವ್ರತ ಇತ್ಯಾದಿ ತನ್ನದೇ ಚೌಕಟ್ಟಿನಲ್ಲಿ ಉಳಿದುಬಿಟ್ಟಿದ್ದಳು. ಅವಳಿಗೆ ಗಂಡನ ಬೇಕು ಬೇಡ, ದಾಂಪತ್ಯದ ಅಗತ್ಯ ಯಾವುದರ ಗೊಡವೆಯೂ ಇರಲಿಲ್ಲ. ಹದಿನಾರಾಣೆ ಅಪ್ಪಟ ಗೃಹಿಣಿಯಾಗಿ ರೊಮ್ಯಾನ್ಸ್, ದಾಂಪತ್ಯ ಜೀವನವನ್ನು ಕಡೆಗಣಿಸಿದ್ದ ಹೆಂಡತಿಯಲ್ಲಿ ಅವನಿಗೆ ಯಾವ ಆಸಕ್ತಿಯೂ ಇರಲಿಲ್ಲ.

ಹೀಗೆ ತಾವಿಬ್ಬರೂ ಗಾಢ ಪ್ರೇಮಕ್ಕಾಗಿ ಹಪಹಪಿಸುತ್ತಿದ್ದೇವೆ ಎಂಬುದನ್ನು ಪರಸ್ಪರ ಅರಿತರು. ತನಗಾಗಿ ಗೌತಮ್ ತೋರುತ್ತಿದ್ದ ಕಾಳಜಿ ಹಾಗೂ ಅವನ ಹಾಸ್ಯಪ್ರಜ್ಞೆ ಅವಳಿಗೆ ಬಹಳ ಇಷ್ಟವಾಗಿತ್ತು. ಇಷ್ಟು ದಿನ ತಾನು ಯಾವ ಗಂಡಸಿಗಾಗಿ ಹುಡುಕಾಡುತ್ತಿದ್ದೆನೋ ಅವನೇ ಸಿಕ್ಕಿದನೆಂದು ಹಿಗ್ಗಿದಳು. ಗೌತಮನಿಗೂ ಅವಳ ಸಾಂಗತ್ಯ ಅಷ್ಟೇ ಪ್ರಿಯವಾಗಿತ್ತು. ಯಾವಾಗ ಅವಳನ್ನು ತನ್ನವಳಾಗಿಸಿಕೊಳ್ಳುವೆನೋ ಎಂದು ಹಂಬಲಿಸುತ್ತಿದ್ದ.

ದಿನೇ ದಿನೇ ಮೆಸೇಜ್‌, ಫೋನಿನಲ್ಲಿ ಮಾತುಕಥೆ ಅವರನ್ನು ಬಹಳ ನಿಕಟವರ್ತಿಗಳನ್ನಾಗಿಸಿತು. ಸದವಕಾಶ ಬಳಸಿಕೊಂಡು ತಮ್ಮ ಮಿಲನದ ದಿನಕ್ಕಾಗಿ ಎದುರು ನೋಡುತ್ತಿದ್ದರು. ಇಬ್ಬರಿಗೂ ತಮ್ಮದೇ ಆದ ಇತಿಮಿತಿಗಳಿದ್ದುದರಿಂದ ಅದು ಅಷ್ಟು ಸುಲಭವಲ್ಲವೆಂದು ತಿಳಿದಿತ್ತು. ಸಾಮಾಜಿಕ ಜವಾಬ್ದಾರಿ, ಕೌಟುಂಬಿಕ ವ್ಯವಸ್ಥೆ ಅವರಿಗೆ ಹಾಕಿದ್ದ ಸೀಮಿತ ಚೌಕಟ್ಟನ್ನು ಮೀರುವಂತಿರಲಿಲ್ಲ. ಅದೇ ಊರಲ್ಲಿ ಹೋಟೆಲ್‌‌ನಲ್ಲಿ ಪದೇಪದೇ ಭೇಟಿಯಾಗುವುದು ಕೂಡ ಪರಿಚಿತರ ಕಣ್ಣಿಗೆ ಸಿಲುಕುವುದಾಗಿತ್ತು.

ತಮ್ಮ ಕೆಲಸದ ಮಧ್ಯೆ ಬಿಡುವು ಪಡೆದು ಹೊರ ಊರಿಗೆ ಹೋಗುವಷ್ಟು ಸಮಯಾನುಕೂಲ ಇರಲಿಲ್ಲ.

ಹೀಗಾಗಿ ನ್ಯೂ ಇಯರ್‌ ಈವ್ ನಂದು ವಿಲನವಿರಲಿ ಎಂದು ನಿಶ್ಚಯಿಸಿದರು. ಗೌತಮ್ ಹೆಂಡತಿ ಮೀರಾ ಮುಂಬೈಗೆ ಹೊರಟಿದ್ದರೆ, ಸುನೀತಾಳ ಗಂಡ ಡಾ. ಸುಂದರ್‌ ದೆಹಲಿಗೆ ಹೊರಟಿದ್ದ. ಗೌತಮ್ ತಾನಾಗಿ ಸುನೀತಾಳ ಮನೆಗೆ ಬರುವುದೆಂದು ನಿಗದಿಯಾಯ್ತು.

ಹಳೆಯದನ್ನೆಲ್ಲ ಸ್ಮರಿಸುತ್ತಾ ಇಬ್ಬರೂ ಸುನೀತಾಳ ಬಾಲ್ಕನಿಯಲ್ಲಿ ರಸನಿಮಿಷಗಳನ್ನು ಕಳೆದರು. ಸುನೀತಾ ನೀಡಿದ್ದ ಕಾಕ್‌ಟೇಲ್ ಇಬ್ಬರಿಗೂ ನಿಶೆ ಏರಿಸಿತ್ತು. ಇಬ್ಬರೂ ಪರಸ್ಪರ ಕೈ ಹಿಡಿದು ಬಳಸಿದರು, ಚುಂಬಿಸಿದರು. ಮತ್ತಿನಲ್ಲೆಂಬಂತೆ ಅವಳ ಬೆಡ್‌ ರೂಂ ಕಡೆ ನಡೆದರು.

ಮಾರನೇ ಬೆಳಗ್ಗೆ ಸುನೀತಾ ಕಣ್ಣುಬಿಟ್ಟಾಗ ಹೊಸ ವರ್ಷದ ಮೊದಲ ದಿನದಲ್ಲಿ ಸೂರ್ಯ ಉದಯಿಸಿ ಎಷ್ಟೋ ಹೊತ್ತಾಗಿತ್ತು. ಅವಳಿಗೆ ಮೈಯೆಲ್ಲ ಹಿಂಡಿ, ಹೀರಿ ಹಿಪ್ಪೆ ಮಾಡಿದಂತೆ ನೋವು ಆವರಿಸಿತ್ತು. ಮೈಮುರಿದು ಆಕಳಿಸುತ್ತಾ ಏಳೋಣವೆಂದರೂ ಆಗದೆ ಧಸಕ್‌ ಎಂದು ಉರುಳಿಕೊಂಡಳು. ನಿಧಾನವಾಗಿ ಹಿಂದಿನ ರಾತ್ರಿ ನಡೆದುದೆಲ್ಲ ನೆನಪಿಗೆ ಬಂದಿತು. ತನ್ನ ಈಗಿನ ದೈಹಿಕ ಯಾತನೆಗೆ ಗೌತಮನ ಮೃಗೀಯ ವರ್ತನೆಯೇ ಕಾರಣವೆಂದು ತಿಳಿಯಿತು. ಕ್ಷಣಿಕ ಕಾಮಕ್ಕೆ ಬಲಿಯಾದ ತಾನೂ ಸಹ ಅದಕ್ಕೆ ಭಾಗೀದಾರಳೆಂದು ತನ್ನಲ್ಲೇ ಕೊರಗಿದಳು.

ತನಗೆ ಬೇಕಾದ್ದನ್ನು ಪಡೆದ ತೃಪ್ತಿಯಿಂದ, ಬೆಳಗ್ಗೆ ಎದ್ದು ಒಂದು ಮಾತನ್ನೂ ತಿಳಿಸದೆ ಮಖೇಡಿಯಂತೆ ಓಡಿಹೋಗಿದ್ದ ಗೌತಮನ ಬಗ್ಗೆ ಅವಳಿಗೆ ತಿರಸ್ಕಾರ ಉಕ್ಕಿ ಬಂದಿತು. ಹಾಗೆಯೇ ಅಂಥವನನ್ನು ಬಯಸಿ ಇಂಥ ಕೆಲಸ ಮಾಡಿದೆನಲ್ಲ ಎಂದು ಅವಳಿಗೆ ತನ್ನ ಬಗ್ಗೆಯೂ ಅಪಾರ ಕೆಡುಕೆನಿಸಿತು. ಸ್ವಾರ್ಥ ಸಾಧಿಸಿಕೊಂಡ ತಕ್ಷಣ ನರಿಬುದ್ಧಿ ತೋರಿ, ತನ್ನನ್ನು ಚೀಪ್‌ ಕಾಲ್ ‌ಗರ್ಲ್ ಎಂಬಂತೆ ನಿರ್ಲಕ್ಶಿಸಿ ಓಡಿಹೋದವನನ್ನು ಚೆನ್ನಾಗಿ ಉಗಿಯೋಣವೆನಿಸಿ ಪಕ್ಕದಲ್ಲಿ ಫೋನ್‌ಗಾಗಿ ತಡಕಾಡಿದಳು.

ಆದರೆ ಅದು ಕೈಗೆ ಸಿಗಲಿಲ್ಲ. ಎಲ್ಲಿ ಹೋಗಿರಬಹುದು? ಬಹುಶಃ ಬೆಡ್‌ ರೂಮಿನ ಮೂಲೆಯಲ್ಲಿದ್ದ ಡ್ರೆಸ್ಸಿಂಗ್‌ ಟೇಬಲ್ ಬಳಿ ಬಿಟ್ಟಿರಬಹುದು ಎಂದೆನಿಸಿ ಅಲ್ಲಿ ಹೋಗಿ ನೋಡಿದಳು. ಅಲ್ಲಿ ಫೋನೇನೋ ಇತ್ತು……. ಆದರೆ ಅದು ಅವಳದಾಗಿರಲಿಲ್ಲ. ಕೈಗೆತ್ತಿಕೊಂಡು ಅದನ್ನು ಒತ್ತಿದ ತಕ್ಷಣ ಗೌತಮನಿಗೆ ಸಂಬಂಧಪಟ್ಟ ವಿವರಗಳು ಸಿಕ್ಕಿದವು. ಅಲ್ಲಿ ಅವನ ಹೆಂಡತಿ ಮೀರಾ ಮತ್ತು ಮಕ್ಕಳ ಫೋಟೋ ಸ್ಕ್ರೀನ್‌ ಸೇವರ್‌ ಆಗಿತ್ತು. ಸಿಟ್ಟಿನಿಂದ ಅದನ್ನು ಪಕ್ಕಕ್ಕೆ ಒಗೆದಳು. ಅವನೊಂದಿಗೆ ಹೇಗಾದರೂ ಸಂಪರ್ಕ ಸಾಧಿಸೋಣವೆಂದು ಅವನ ಫೋನ್‌ ನಂಬರ್‌ ನೆನಪಿಸಿಕೊಂಡಳು. ಆದರದು ಅವಳ ನೆನಪಿಗೆ ಬರಲೇ ಇಲ್ಲ. 2 ದಿನಗಳಿಂದ ಅವಳ ಲ್ಯಾಂಡ್‌ ಲೈನ್‌ ಸಹ ಕೆಟ್ಟಿತ್ತು. ಹೀಗಾಗಿ ಯಾವ ವಿಧದಲ್ಲೂ ಸಹಾಯ ಸಿಗುವಂತಿರಲಿಲ್ಲ.

ತಮ್ಮಿಬ್ಬರ ಫೋನ್‌ ಒಂದೇ ಕಂಪನಿಯದಾಗಿದ್ದು, ಒಂದೇ ಮಾಡೆಲ್ ‌ಎಂಬುದೂ ಅವಳಿಗೆ ತಿಳಿದಿತ್ತು. ಅದರ ಮೇಲಿನ ಕವರ್ ವ್ಯತ್ಯಾಸದಿಂದಷ್ಟೇ ಅವಳು ಅದನ್ನು ಗೌತಮನ ಫೋನೆಂದು ಗುರುತಿಸಿದ್ದಳು. ಬಹುಶಃ ಇದೇ ಕನ್‌ಫ್ಯೂಷನ್‌ನಿಂದಾಗಿ ಅವನು ಬೆಳಗ್ಗೆ ಅವಸರದಲ್ಲಿ ಹೊರಡುವಾಗ ತನ್ನ ಫೋನ್‌ ತೆಗೆದುಕೊಂಡು ಹೋಗಿದ್ದಾನೆಂದು ಅವಳಿಗೆ ಅರ್ಥವಾಯಿತು. ಇವನ ಫೋನಿನಿಂದ ಇನ್ನೇನಾದರೂ ಸುಳಿವು ಸಿಗಬಹುದೇನೋ ಎಂದು ಅದನ್ನು ಒತ್ತಿ ಸಂದೇಶಗಳನ್ನು ಗಮನಿಸತೊಡಗಿದಳು.

ಅದರಲ್ಲಿ ಯಾವುದೇ ಸೆಕ್ಯೂರಿಟಿ ಲಾಕ್‌ ಇಲ್ಲದ ಕಾರಣ ಅವಳು ಮೆಸೇಜ್‌ ಇನ್‌ ಬಾಕ್ಸಿಗೆ ಹೋಗಲು ಸಾಧ್ಯವಾಯಿತು. ಅದರ ತುಂಬಾ ಅವನ ಗರ್ಲ್ ಫ್ರೆಂಡ್ಸ್ ಗಳ ಸೆಕ್ಸೀ ಮೆಸೇಜ್‌ ತುಂಬಿದ್ದವು. ಅದೇ ತರಹ ಅವನ ಸೆಂಟ್‌ ಬಾಕ್ಸ್ ನಲ್ಲೂ ಅವರಿಗೆ ಅವನು ಉತ್ತರಿಸಿದ್ದ ವಲ್ಗರ್‌ ಮೆಸೇಜ್‌ಗಳಿದ್ದವು. ಒಟ್ಟಾರೆ ಅವನು ಹುಡುಗಿಯರೊಂದಿಗೆ ಸದಾ ಫ್ಲರ್ಟ್‌ ಮಾಡುವ ಮನೈಸರ್‌ ಎಂಬುದು ಅವಳಿಗೆ ಅರ್ಥವಾಗಿತ್ತು.

ಇಂಥ ಕೀಳು ಕಾಮನೆಯ ವ್ಯಕ್ತಿಗಾಗಿ ತನ್ನನ್ನೇ ತಾನು ಸಮರ್ಪಿಸಿಕೊಂಡೆನಲ್ಲ, ನನ್ನ ತನುಮನಗಳೆಲ್ಲ ಸೂರೆಗೊಂಡ ಎಂದು ಪಶ್ಚಾತ್ತಾಪದಿಂದ ಬಿಕ್ಕಿ ಬಿಕ್ಕಿ ಅತ್ತಳು. ಅವನ ಸ್ವಭಾವ ತಿಳಿಯಿತಾದ್ದರಿಂದ, ಇನ್ನು ಅವನಿಗೆ ಫೋನ್‌ ಮಾಡುವುದರಲ್ಲಿ ಅರ್ಥವಿಲ್ಲವೆಂದು ಮನಗಂಡಳು. ಇನ್ನೆಂದೂ ಅವನನ್ನು ಮಾತನಾಡಿಸುವ, ಭೇಟಿ ಆಗುವ ತಪ್ಪನ್ನು ಮಾಡಲೇಬಾರದು ಎಂದು ನಿರ್ಧರಿಸಿದಳು. ನಡೆದುದನ್ನೆಲ್ಲ ಸ್ಮರಿಸಿ ಮತ್ತೆ ಮತ್ತೆ ನೊಂದುಕೊಂಡಳು. ಇದನ್ನೊಂದು ಕೆಟ್ಟ ಕನಸೆಂದು ಮರೆತುಬಿಡಬೇಕೆಂದು ದೃಢವಾಗಿ ನಿರ್ಧರಿಸಿ ಸ್ನಾನಕ್ಕೆ ಹೊರಟಳು.

ಅಳು ಬಿಸಿ ಚಹಾ ತಯಾರಿಸಿ ಕುಡಿಯುತ್ತಿದ್ದಾಗ, ಕೆಲಸದ ನಿಂಗಮ್ಮ ಮಗುವಿನೊಡನೆ ಬಂದಳು. ಮಗುವಿಗೆ ಬಹಳ ಹುಷಾರಿಲ್ಲವೆಂದು ಮನೆಯಲ್ಲಿ ಯಾರೂ ಇಲ್ಲದ ಕಾರಣ ಬಿಟ್ಟು ಬರಲಾಗದೆ ಕರೆತಂದೆ, ತಪ್ಪು ತಿಳಿಯಬಾರದೆಂದು ಮತ್ತೆ ಮತ್ತೆ ವಿನಂತಿಸಿಕೊಂಡಳು. ಮಗುವನ್ನು ಉಗ್ರಾಣದ ಮೂಲೆಯಲ್ಲಿ ಮಲಗಿಸಿ ಎಂದಿನ ತನ್ನ ಮನೆಗೆಲಸ ಶುರುಮಾಡಿದಳು.

ಹಿಂದಿನ ಸಂದರ್ಭದಲ್ಲಾಗಿದ್ದರೆ ಸುನೀತಾ ಹೇಗೆ ಪ್ರತಿಕ್ರಿಯಿಸುತ್ತಿದ್ದಳೋ….. ಏನೋ…. ಆದರೆ ಈಗ ಅವಳ ಮನಸ್ಸು ಗೊಂದಲದ ಗೂಡಾಗಿತ್ತು. ಅವಳು ನಿಂಗಮ್ಮನನ್ನು ಆಕ್ಷೇಪಿಸದೆ ಕೆಲಸ ಮುಗಿಸುವಂತೆ ಹೇಳಿದಳು. ಏನನ್ನಿಸಿತೋ, ಸುನೀತಾ ಮತ್ತೆ ಮತ್ತೆ ನಿಂಗಮ್ಮನನ್ನೇ ನೋಡಿದಳು. 4-6 ಮನೆಯ ಸತತ ದುಡಿತದಿಂದ ಅವಳು ಬಸವಳಿದಿದ್ದಳು. ಪುಷ್ಟಿಕರ ಆಹಾರವಿಲ್ಲದೆ ಸೊರಗಿದ್ದಳು. ಕುಡುಕ ಗಂಡ ಹೊಡೆದುಬಡಿದು ಅವಳ ನೆಮ್ಮದಿಯನ್ನು ಹಾಳು ಮಾಡಿದ್ದನೆಂದು, ಅವಳ ಮೈಮೇಲಿನ ಗಾಯದ ಕಲೆಗಳು ಹೇಳುತ್ತಿದ್ದವು.

ಇದ್ದಕ್ಕಿದ್ದಂತೆ ಅವಳಿಗೆ ತಾನು ಇಷ್ಟು ದಿನ ಯಾವುದೋ ಹುಚ್ಚಾಟದಲ್ಲಿ ಕಾಣದ ಪ್ರೇಮಕಾಮದ ಬೆನ್ನು ಹತ್ತಿ, ನಿರ್ಮಲ ಪ್ರೀತಿ ವಾತ್ಯಲ್ಯಗಳನ್ನು ಕಡೆಗಣಿಸಿದ್ದೆ ಎನಿಸಿತು. ಮರೀಚಿಕೆಯಾಗಿ ಕಾಡುವ ಕಾಮನೆಗಳ ಹುಡುಕುವ ಬದಲು, ಯಾರಿಗೆ ತುಂಬು ಹೃದಯದ ಪ್ರೀತಿ ವಾತ್ಸಲ್ಯ, ಅಕ್ಕರೆ, ಆಸರೆ ಬೇಕೋ ಅವರನ್ನು ಆದರಿಸಿ ಅವರ ಕಷ್ಟಸುಖ ಹಂಚಿಕೊಂಡು, ನೆರವು ನೀಡಿದರೆ ಅದೆಷ್ಟು ಸಂತೋಷಪಡುತ್ತಾರಲ್ಲವೇ ಎನಿಸಿತು.

ನಂತರ ಅವಳು ನಿಂಗಮ್ಮನ ಕಷ್ಟಕಾರ್ಪಣ್ಯಗಳ ಕುರಿತು ವಿಚಾರಿಸಿದಳು. 6 ಮನೆಗಳಲ್ಲಿ ದುಡಿದು ಅವಳು 5 ಸಾವಿರ ಗಳಿಸುತ್ತಿದ್ದುದಾಗಿ ಹೇಳಿದಾಗ, ಅದೇ 5 ಸಾವಿರ ತಾನು ಕೊಡುವೆ, ಇನ್ನು ಮುಂದೆ ಬೇರೆಲ್ಲೂ ಕೆಲಸಕ್ಕೆ ಹೋಗುವುದು ಬೇಡ ಎಂದು ತಿಳಿಸಿದಳು.

ನಿಂಗಮ್ಮನಿಗಂತೂ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ! ಅವಳು ಕಣ್ಣೀರು ತುಂಬಿಕೊಂಡು ಸಂತೋಷದಿಂದ ಒಪ್ಪಿದಳು. ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ಬಂದು ಸಂಜೆ 7ಕ್ಕೆ ಮನೆಗೆ ಹೋಗುವಂತೆ ತಿಳಿಸಿದಳು. ತನ್ನ ಬಳಿಯಿದ್ದ ಹಲವಾರು ಹಳೆಸೀರೆ, ಮಗುವಿಗೆ ಬೇಕಾದ ಬಟ್ಟೆಬರೆ ಎಲ್ಲಾ ತೆಗೆದುಕೊಟ್ಟಳು.

ನಿಂಗಮ್ಮ ಎಲ್ಲಾ ಕೆಲಸ ಮುಗಿಸಿದ ಮೇಲೆ ಸುನೀತಾ ಅವಳಿಗೆ ತಿಂಡಿ ನೀಡಿ, ತಕ್ಷಣ ಮಗುವನ್ನು ವೈದ್ಯರ ಬಳಿ ತೋರಿಸಿ, ಔಷಧಿ ಹಣ್ಣುಹಂಪಲು ಕೊಳ್ಳಲೆಂದು 500 ರೂ. ನೀಡಿದಳು. ಈ ದಿನ ತನ್ನ ಬದುಕಿನಲ್ಲಿ ಭಾಗ್ಯಲಕ್ಷ್ಮಿ ಕಣ್ಣುಬಿಟ್ಟಳೆಂದು ನಿಂಗಮ್ಮ ಮನದುಂಬಿ ಹಾರೈಸಿದಳು. ಅವಳನ್ನು ಕಳುಹಿಸಿಕೊಟ್ಟ ನಂತರ ಸುನೀತಾಳಿಗೆ ನಿರುಮ್ಮಳವೆನಿಸಿತು.

ಇನ್ನು ಮುಂದೆ ತಾನು ಆದಷ್ಟೂ ಸಮಾಜಸೇವೆ ಮಾಡಬೇಕು, ಇಂಥ ಬಡವರ, ದೀನದಲಿತರ ಕಷ್ಟಗಳಿಗೆ ನೆರವಾಗಬೇಕು, ಅವರ ಸಂತೋಷದಲ್ಲಿ ತನ್ನ ಒಂಟಿತನ ಮರೆಯಬೇಕು ಎಂಬ ಹೊಸ ಸಂಕಲ್ಪ ಕೈಗೊಂಡಳು. ನಂತರ ಅವಳು ಊಟ ಮಾಡಿ ಮಲಗಿದಾಗ ಈ ಬಾರಿ ಹಾಯಾಗಿ ನಿಶ್ಚಿಂತೆಯಿಂದ ನಿದ್ರಿಸಿದಳು.

ಸಂಜೆ ಅವಳು ಹತ್ತಿರದ ಅನಾಥಾಶ್ರಮಕ್ಕೆ ಹೋಗಿ ಇಲ್ಲಿನ ಅನಾಥ ಹುಡುಗರ ಯೋಗಕ್ಷೇಮ ವಿಚಾರಿಸಿದಳು. ಅವರ ಏಳಿಗೆಗಾಗಿ ತಾನು ಪ್ರತಿ ತಿಂಗಳೂ 10 ಸಾವಿರ ರೂ. ನೀಡುವುದಾಗಿ ಹೇಳಿದಳು. ಜೊತೆಗೆ ಪ್ರತಿ ಸಂಜೆ, ತಾನು ಆಶ್ರಮಕ್ಕೆ ಬಂದು ಸಂಜೆ 6-9 ಗಂಟೆಯವರೆಗೆ ಮಕ್ಕಳಿಗೆ ಉಚಿತ ಪಾಠ ಹೇಳಿಕೊಡುವುದಾಗಿ ತಿಳಿಸಿದಳು. ಆಶ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಾವಿತ್ರಮ್ಮ ಇವಳ ಮಾತುಗಳಿಂದ ತುಂಬಾ ಪ್ರಭಾವಿತರಾದರು. ಇಂಥ ಸುಶಿಕ್ಷಿತ ಜನ ಹೀಗೆ ಮುಂದೆ ಬಂದು ಸಹಕರಿಸಿದರೆ ಯಾರೂ ಅನಾಥರೆಂಬ ಭಾವನೆಯೇ ಬರುವುದಿಲ್ಲ ಎಂದರು. ಸುನೀತಾ ಅಂದಿನಿಂದಲೇ ಪಾಠ ಪ್ರಾರಂಭಿಸುವುದಾಗಿ ಹೇಳಿ ಮಕ್ಕಳಿಗಾಗಿ ತಾನು ತಂದಿದ್ದ ಸಿಹಿತಿನಿಸು, ಹಣ್ಣು ಹಂಪಲು, ಹಾರ್ಲಿಕ್ಸ್, ಬೋರ್ನ್‌ವೀಟಾಗಳಂಥ ಪೌಷ್ಟಿಕ ಪೇಯಗಳು, ಬೆಡ್‌ಶೀಟ್‌, ಸ್ವೆಟರ್ಸ್ ಇತ್ಯಾದಿ ನೀಡಿದಳು.

ಅವಳು ತಕ್ಷಣ ತನ್ನ ಹ್ಯಾಂಡ್‌ ಬ್ಯಾಗ್‌ನಿಂದ ಒಂದು ಚೆಕ್‌ ಬುಕ್‌ ತೆಗೆದು 10 ಸಾವಿರ ರೂ.ಗಳಿಗೆ ಚೆಕ್‌ ಬರೆದು ಸಾವಿತ್ರಮ್ಮನವರಿಗೆ ನೀಡಿದಳು. ಆಕೆಯ ಕಣ್ಣಲ್ಲಿ ಆನಂದಾಶ್ರು ತುಂಬಿತ್ತು.

ಈಗ ಸುನೀತಾಳ ಬದುಕು ಹೊಸತೊಂದು ಹಾದಿಯಲ್ಲಿ ಸುಗಮವಾಗಿ ಸಾಗಿತ್ತು. ಆರ್ಥಿಕವಾಗಿ ಎಲ್ಲಾ ಅನುಕೂಲಗಳಿದ್ದ ಅವಳಿಗೆ, ಮನಶ್ಶಾಂತಿ ಇಲ್ಲದಿರುವುದೇ ದೊಡ್ಡ ಕೊರಗಾಗಿತ್ತು. ಅದನ್ನು ಸಮಾಜ ಸೇವೆ ಮಾಡುವುದರ ಮೂಲಕ ಸ್ವತಃ ತಾನೇ ಕಂಡುಕೊಂಡಳು. ಈಗ ಅವಳಿಗೆ ಗಂಡನ ಸೀರಿಯಸ್‌ ಸ್ವಭಾವದ ಬಗ್ಗೆ ಯಾವುದೇ ಆಕ್ಷೇಪಣೆ ಇರಲಿಲ್ಲ. ಒಬ್ಬಳೇ ಮಗಳಿಗೆ ವಾತ್ಸಲ್ಯಮಯಿ ತಾಯಿಯಾಗಿ, ಅವಳ ಶ್ರೇಯಸ್ಸಿಗಾಗಿ ತನ್ನ ಬದುಕನ್ನು ಮುಡಿಪಾಗಿರಿಸಿ, ಜೊತೆಗೆ ತನ್ನ ಕೈಲಾದಷ್ಟು ಅನಾಥ ಮಕ್ಕಳಿಗೆ ಸಹಾಯ ಮಾಡಲು ಮುಂದಾದಳು. ಹೊಸ ವರ್ಷದ ಅವಳ ಸಂಕಲ್ಪ, ಸುನೀತಾಳ ಬಾಳಪಥವನ್ನೇ ಬದಲಿಸಿ ಅವಳಿಗೆ ಸಂಪೂರ್ಣ ನೆಮ್ಮದಿ, ಸಂತೋಷವನ್ನು ತಂದುಕೊಟ್ಟಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ