ಮೆಟ್ರೊ ಕಲಾ ಕೇಂದ್ರ ಮಹಾತ್ಮ ಗಾಂಧಿ ರಸ್ತೆ….. ಬೆಂಗಳೂರಿನ ಪ್ರತಿಷ್ಠಿತ ರಸ್ತೆ. ವಿದೇಶಿಗರೇ ಹೆಚ್ಚಾಗಿ ಸುತ್ತಾಡುವ ರಸ್ತೆ. ಹೀಗಾಗಿ ಈ ರಸ್ತೆಗೆ ಅಂತಾರಾಷ್ಟ್ರೀಯ ಮಹತ್ವ ಬಂದುಬಿಟ್ಟಿದೆ. ಬೆಂಗಳೂರಿಗೆ ಬಂದ ಯಾರೇ ಆಗಲಿ ಎಂ.ಜಿ. ರಸ್ತೆಗೆ ಭೇಟಿ ಕೊಡದೇ ಇರಲಾರರು.
ಅದು ದುಬಾರಿ ರಸ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಅಲ್ಲಿ ಏನೂ ಕೊಳ್ಳದಿದ್ದರೂ ಪರ್ವಾಗಿಲ್ಲ, ಕಣ್ಣಿಂದ ನೋಡಿಯಾದರೂ ತೃಪ್ತಿ ಪಟ್ಟುಕೊಳ್ಳೋಣ ಎನ್ನುವುದು ಹಲವರ ಅಭಿಪ್ರಾಯ.
ಮೆಟ್ರೊ ರೈಲು ಎಂ.ಜಿ. ರಸ್ತೆಗೆ ಕಾಲಿಟ್ಟ ಬಳಿಕ ಅದರ ಅಂದಚೆಂದ, ಮಾದಕತೆ ಕಣ್ಮರೆಯಾಗಿ ಹೋಯಿತು ಎಂದು ಬಹಳ ಜನ ವಿಷಾದದಿಂದಲೇ ಹೇಳುತ್ತಿದ್ದರು. ಅವರು ಹೀಗೆ ಹೇಳಲು ಒಂದು ಕಾರಣ ಇತ್ತು. ಅನಿಲ್ ಕುಂಬ್ಳೆ ವೃತ್ತದಿಂದ ಮಾಣಿಕ್ ಷಾ ಪರೇಡ್ ಮೈದಾನದ ಅಂಚಿನ ತನಕ ಆರಿಸಿಕೊಂಡಿದ್ದ ಕಾಲುದಾರಿ ಹಸಿರಿನಿಂದ ಕಣ್ಮನ ಸೆಳೆಯುತ್ತಿತ್ತು. ಮನಸ್ಸಿಗೆ ಏನೋ ಹಿತಕರ ಅನುಭವ ನೀಡುತ್ತಿತ್ತು. ಮೆಟ್ರೊ ರೈಲು ಆ ಸೊಗಸನ್ನು ಕಿತ್ತುಕೊಂಡುಬಿಟ್ಟಿತ್ತು.
ಮರುಕಳಿಸಿದ ಅಂದ
ಮೆಟ್ರೋ ರೈಲು ನಿಲ್ದಾಣ ಎರಡು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ರಸ್ತೆಯ ಎತ್ತರಿಸಿದ ಮಾರ್ಗದಲ್ಲಿ ಸ್ಥಾಪನೆಗೊಂಡಿತು. ಹೀಗಾಗಿ ಅನಿಲ್ ಕುಂಬ್ಳೆ ವೃತ್ತದ ತನಕ ಕೆಳಭಾಗದಲ್ಲಿ 550 ಮೀಟರ್ನಷ್ಟು ಜಾಗ ಖಾಲಿ ಉಳಿದಿತ್ತು. ಅದನ್ನು ಸರಿಯಾಗಿ ಬಳಸಿಕೊಳ್ಳಲು, ಮಹಾತ್ಮ ಗಾಂಧಿ ರಸ್ತೆಯ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಲು ಆಗಿನ ಬಿಎಂಆರ್ಸಿಎಲ್ ನಿರ್ದೇಶಕ ಶಿವಶೈಲಂ ನಿರ್ಧರಿಸಿದರು. ಅದರ ಪ್ರತಿಫಲ ಎಂಬಂತೆ 2013ರ ಮೇ 6 ರಂದು `ರಂಗೋಲಿ ಮೆಟ್ರೊ ಕಲಾ ಕೇಂದ್ರ’ ಜನ್ಮ ತಳೆಯಿತು.
ಬೆಂಗಳೂರಿಗೆ ಮೆಟ್ರೊ ರೈಲು ಬಂದಿದ್ದೇ ಎಂ.ಜಿ. ರಸ್ತೆ ವತಿಯಿಂದ ಬೈಯಪ್ಪನಹಳ್ಳಿ ತನಕ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಕಳೆದೆರಡು ವರ್ಷಗಳಿಂದ ಶನಿವಾರ-ಭಾನುವಾರ ಹಾಗೂ ರಜೆ ದಿನಗಳಂದು ಪ್ರವಾಸಿ ರೈಲಿನಂತಾಗಿಬಿಟ್ಟಿವೆ.
ಮೆಟ್ರೊ ರೈಲಿನಲ್ಲಿ ಸಂಚರಿಸಲೆಂದು ಬರುವವರನ್ನು `ರಂಗೋಲಿ’ ಕಲಾ ಕೇಂದ್ರ ಆಕರ್ಷಿಸುತ್ತಿದೆ. ಅವರನ್ನು ಒಂದೆರಡು ಗಂಟೆ ಇಲ್ಲಿಯೇ ತಡೆಹಿಡಿದು ನಿಲ್ಲಿಸುತ್ತದೆ. ಮಕ್ಕಳ ಜೊತೆಗೆ ಬಂದರಂತೂ ಇನ್ನೂ ಹೆಚ್ಚು ಹೊತ್ತು ಕಳೆಯಬೇಕಾಗುತ್ತದೆ. ಅಷ್ಟೊಂದು ವಿಶೇಷತೆ ಇಲ್ಲಿನ ರಂಗೋಲಿ ಕಲಾ ಕೇಂದ್ರದ ಅಂತರಂಗದಲ್ಲಿ ಅಡಗಿದೆ.
ನವ್ಯ ಕಲಾ ಲೋಕ
ಅನಿಲ್ ಕುಂಬ್ಳೆ ವೃತ್ತದಿಂದ ಮಾಣಿಕ್ ಷಾ ಪರೇಡ್ ಮೈದಾನದ ತನಕ 550 ಮೀಟರ್ ಉದ್ದನೆಯ ಜಾಗದಲ್ಲಿ ಆವರಿಸಿಕೊಂಡಿರುವ `ರಂಗೋಲಿ’ ಕಲಾ ಕೇಂದ್ರದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರನ್ನೂ ರಂಜಿಸುವ ಬಹಳಷ್ಟು ವಿಶೇಷತೆಗಳಿವೆ. ಅನಿಲ್ ಕುಂಬ್ಳೆ ವೃತ್ತದಿಂದ ನೀವು `ರಂಗೋಲಿ’ ಕಲಾ ಕೇಂದ್ರದಲ್ಲಿ ಕಾಲಿಡುತ್ತಿದ್ದಂತೆಯೇ `ನಗರ ಪೇಟೆ’ ನಿಮ್ಮನ್ನು ಸ್ವಾಗತಿಸುತ್ತದೆ. ವಿವಿಧ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ 14 ಮಳಿಗೆಗಳು ಇಲ್ಲಿವೆ. ಅದನ್ನು ದಾಟಿ ಮುಂದೆ ಹೋದರೆ ರಂಗಸ್ಥಳವಿದೆ. ಅಲ್ಲಿ 120 ಜನರು ಒಂದೇ ಕಡೆ ಕುಳಿತು ವಿವಿಧ ರಂಗ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ. ಶನಿವಾರ-ಭಾನುವಾರಗಳಂದು ಇಲ್ಲಿನ ಚಟುವಟಿಕೆಗಳು ಹೆಚ್ಚು ರಂಗು ಪಡೆದುಕೊಳ್ಳುತ್ತವೆ.
ಅಲ್ಲಿಂದ ಹೆಜ್ಜೆ ಹಾಕುತ್ತ ಸಾಗಿದರೆ `ಬಯಲು’ ನಿಮ್ಮನ್ನು ತಡೆಹಿಡಿದು ನಿಲ್ಲಿಸುತ್ತದೆ. ಕಲಾವಿದರ ಕಲಾ ಕೈ ಚಳಕವನ್ನು ಈ ವಿಭಾಗ ಅನಾವರಣಗೊಳಿಸುತ್ತದೆ. ನಿರುಪಯುಕ್ತ ವಸ್ತುಗಳಿಂದ ತಯಾರಾದ ವಿವಿಧ ಕಲಾಕೃತಿಗಳು ಹುಬ್ಬೇರಿಸುವಂತೆ ಮಾಡುತ್ತವೆ.
ಟಯರ್ ತುಂಡುಗಳಿಂದ ಮಾಡಿದ `ಗರುಡ,’ ಕಬ್ಬಿಣದ ತುಂಡುಗಳಿಂದ ಮಾಡಿದ ಪಕ್ಷಿಗಳು ಗಮನಸೆಳೆಯುತ್ತವೆ. ಮತ್ತೊಂದು ಬದಿ ಹುಲ್ಲು ಹಾಸಿನ ಮೇಲೆ ಕುಳಿತ ಕೆಲವು ಶಿಲಾ ಮಾನವರು ನಿಮ್ಮ ಹೆಜ್ಜೆಗೆ ಬ್ರೇಕ್ ಹಾಕುತ್ತಾರೆ.
ಯುವಕ ಯುವತಿಯರು ಸ್ನೇಹದ ವ್ಯಾಪ್ತಿ ಹೆಚ್ಚಿಸಿಕೊಳ್ಳಲು `ಸ್ನೇಹ ಹಂದರ’ ಸ್ಥಾಪಿಸಲಾಗಿದೆ.
ವಿಶಾಲ `ಬಯಲು’ ಅಂಕಣದಲ್ಲಿ ನಿಮಗೆ ಮಣ್ಣಿನ ಕಲಾಕೃತಿಗಳನ್ನು, ಬಿದಿರು ಕಲಾಕೃತಿಗಳನ್ನು ನುರಿತ ಕಲಾವಿದರಿಂದ ಸ್ಥಳದಲ್ಲಿಯೇ ಉಚಿತವಾಗಿಯೇ ಕಲಿತುಕೊಳ್ಳುವ ಅವಕಾಶವಿದೆ.
ನಗರದಲ್ಲಿಯೇ ಬೆಳೆದ ಮಕ್ಕಳಿಗೆ ಹಳ್ಳಿಯ ವಾತಾವರಣ, ಅಲ್ಲಿನ ಕಲಾವಿದರ ಕೈಚಳಕ ಹೇಗಿರುತ್ತದೆಂಬ ಸ್ಪಷ್ಟ ಕಲ್ಪನೆ ಮೂಡಿಸಲು `ರಂಗೋಲಿ’ ಕಲಾಕೇಂದ್ರ ನೆರವಾಗುತ್ತಿದೆ ಎಂದು ಅಲ್ಲಿಗೆ ತಮ್ಮ ಮಕ್ಕಳೊಂದಿಗೆ ಬಂದಿದ್ದ ರಾಜಾಜಿನಗರದ ಶೃತಿ ಹೇಳಿದರು.
`ಬಯಲು’ ವಿಭಾಗದಿಂದ ಹಾಗೆಯೇ ಮುಂದೆ ಹೊರಟರೆ `ಬೆಳಕು,’ `ವಿಸ್ಮಯ’ ಹಾಗೂ `ಛಾಯಾ’ ಎಂಬ ಮೂರು ವಿಭಾಗಗಳು ಕಣ್ಣಿಗೆ ಬೀಳುತ್ತವೆ. `ಬೆಳಕು’ ಹಾಗೂ `ಛಾಯಾ’ ವಿಭಾಗದಲ್ಲಿ ಪ್ರದರ್ಶಿಸಲ್ಪಡುವ ಚಿತ್ರಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಈ ಹಿಂದೆ ಇಲ್ಲಿ ಬೆಂಗಳೂರಿಗೆ ಸಂಬಂಧಪಟ್ಟ 2000ಕ್ಕೂ ಹೆಚ್ಚು ಹಳೆಯ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಮಿಲಿಟರಿಯವರ ಸಾಹಸಗಾಥೆಯನ್ನು ಬಿಂಬಿಸುವ ಚಿತ್ರಗಳು ಸಹ ಜನರ ಗಮನ ಸೆಳೆದಿದ್ದವು.
ವಿಸ್ಮಯ ಆರ್ಟ್ ಗ್ಯಾಲರಿ ಹೆಸರಿಗೆ ತಕ್ಕಂತೆಯೇ ಅಪರೂಪದ ಚಿತ್ರಗಳಿಂದ ಗಮನ ಸೆಳೆಯುತ್ತದೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ಅಪರೂಪದ ಚಿತ್ರಗಳು ಹಾಗೂ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಗಿತ್ತು. ಅದೇ ಸಮಯದಲ್ಲಿ `ಎ ಲೆಟರ್ ಟು ಗಾಂಧೀಜಿ’ ಹೆಸರಿನಲ್ಲಿ ಸಾರ್ವನಿಕರಿಂದ ಪತ್ರಗಳನ್ನು ಆಹ್ವಾನಿಸಲಾಗಿತ್ತು. ಬಂದ 1650 ಪತ್ರಗಳಲ್ಲಿ ಆಯ್ದ 600 ಉತ್ತಮ ಪತ್ರಗಳನ್ನು ಪ್ರದರ್ಶಿಸಲಾಗಿತ್ತು.
ಇದಾದ ಬಳಿಕ ಮಕ್ಕಳು ಖುಷಿಯಿಂದ ಕುಣಿದು ಕುಪ್ಪಳಿಸುವ `ಚಿಲಿಪಿಲಿ’ ವಿಭಾಗ ಕಣ್ಣಿಗೆ ಬೀಳುತ್ತದೆ. ಪ್ರತಿದಿನ ಸಂಜೆ ಹೊತ್ತು ಹಾಗೂ ಶನಿವಾರ-ಭಾನುವಾರಗಳಂದು ಪೂರ್ತಿ ದಿನ ಮಕ್ಕಳ ನಲಿವನ್ನು ಕಣ್ತುಂಬಿಸಿಕೊಳ್ಳಬಹುದು. ಮಕ್ಕಳಿಗಾಗಿಯೇ `ಹಾವು ಏಣಿಯಾಟ’ ದ ಬಹುದೊಡ್ಡ ಅಂಕಣವನ್ನು ರೂಪಿಸಲಾಗಿದೆ. ಈ ವಿಭಾಗದಲ್ಲಿ ಮಕ್ಕಳ ಉತ್ಸಾಹ ಮೇರೆ ಮೀರಿರುತ್ತದೆ.
ಹೂವಿನ ಹಾದಿ
ರಂಗೋಲಿ ಕಲಾ ಕೇಂದ್ರದ ಮೇಲ್ಭಾಗದ ಕಾಲುದಾರಿಯನ್ನು `ಹೂವಿನ ಹಾದಿ’ ಎಂದು ಹೆಸರಿಸಲಾಗಿದೆ. ಅದರ ಅಂದಚೆಂದ, ಹಿತಕರ ವಾತಾವರಣ ಅಲ್ಲಿ ಸುತ್ತಾಡಿ ಬಂದಾಗಲೇ ಗೊತ್ತಾಗುತ್ತದೆ. ಗುಲ್ ಮೊಹರ್, ಜ್ಯಾಕ್ರ್ಯಾಂಡ್, ಬೋಗನ್ ವಿಲ್ಲಾ, ಸ್ಟಾರ್ ವೈಟ್ ಸೇರಿದಂತೆ 15ಕ್ಕೂ ಹೆಚ್ಚು ಬಗೆಯ ಗಿಡಗಳು ಹಾದಿಗುಂಟ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿರುವ ಬಿದಿರು, ಗುಲ್ ಮೊಹರ್ ಮರದ ನೆರಳು ಹಾಗೂ ತಣ್ಣನೆಯ ಗಾಳಿ ಮನಸ್ಸಿಗೆ ಉತ್ಸಾಹ ತುಂಬುತ್ತವೆ. ದಣಿದು ಸುಸ್ತಾದರೆ ವಿಶ್ರಮಿಸಿಕೊಳ್ಳಲು ಹೋಟೆಲ್ ಕೂಡ ಇದೆ.
ಅಂದು ಬಿಎಂಆರ್ಸಿಎಲ್ ನಿರ್ದೇಶಕ ಶಿವಶೈಲಂರಿಂದ ಆರಂಭವಾದ ರಂಗೋಲಿ ಮೆಟ್ರೊ ಆರ್ಟ್ಸೆಂಟರ್ ಈಗಿನ ನಿರ್ದೇಶಕ ವಸಂತರಾವ್ ಅವರ ಉಸ್ತುವಾರಿಯಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಕ್ಯುರೇಟರ್ ಸುರೇಖಾ ಅವರ ಸಮರ್ಥ ಮೇಲ್ವಿಚಾರಣೆಯಲ್ಲಿ ಬಗೆಬಗೆಯ ಚಟುವಟಿಕೆಗಳು ಎಡೆಬಿಡದೆ ನಡೆಯುತ್ತಿರುತ್ತಿ.
– ಅಶೋಕ ಚಿಕ್ಕಪರಪ್ಪಾ