ಅವಿವಾಹಿತ ಗಿರೀಶ್‌ ವಿವಾಹಿತ ಗೆಳೆಯ ಸತೀಶ್‌ ನನ್ನು ಹುಡುಕಿಕೊಂಡು ಬಂದ.

ಗಿರೀಶ್‌ : ಅಲ್ಲ, ಜನ ಮದುವೆ ಆದ್ಮೇಲೆ ಹೆಂಡತಿಗೆ ಅಷ್ಟೊಂದು ಹೆದರಿಕೊಳ್ಳೋದು ಯಾಕೆ ಅಂತ?

ಸತೀಶ್‌ : ಬೇರೆಯವರು ಹೇಗೋ ಏನೋ…. ನಾನಂತೂ ಹಾಗಲ್ಲಪ್ಪ. ಇರು, ನೀನು ಮ್ಯಾಚ್‌ ನೋಡ್ತಿರು. ನನ್ನ ಹೆಂಡತಿ ಹೊರಗೆ ಹೋಗಿದ್ದಾಳೆ. ಅವಳು ಬರುಷ್ಟರಲ್ಲಿ ಪಾತ್ರೆ ಉಜ್ಜಿ ಬಂದುಬಿಡ್ತೀನಿ.

ಸೀನ : ಪಾಪದ ಕೊಡ ತುಂಬಿದರೆ ಸಾವು ತಾನಾಗಿ ಹುಡುಕಿಕೊಂಡು ಬರುತ್ತೆ ಅಂತಾರೆ. ಅದೇ ರೀತಿ ಸಂತೋಷ ತುಂಬಿ ತುಳುಕಿದರೆ ಮನುಷ್ಯ ಏನಾಗುತ್ತಾನೆ?

ನಾಣಿ : ಗಂಡಸಾದ ಪ್ರಾಣಿ ಬ್ಯಾಚುಲರ್‌ ಆಗಿ ನೆಮ್ಮದಿಯಾಗಿ ಸಂತೋಷವಾಗಿ ಹಾರಾಡಿಕೊಂಡಿರ್ತಾನೆ. ಅದು ಅತಿಯಾದಾಗ ತಾನಾಗಿ ಮದುವೆಗೆ ಒಪ್ಪಿಕೊಳ್ತಾನೆ. ಇದಕ್ಕಿಂತ ಬೇರೆ ಉದಾಹರಣೆ ಬೇಕಾ?

ಪತಿಪತ್ನಿ ಮಧ್ಯೆ ಘನಘೋರ ಜಗಳ ನಡೆದಿತ್ತು. 1 ವಾರ ಆದರೂ ಮಾತುಕಥೆಯೇ ಇಲ್ಲದ ಪರಿಸ್ಥಿತಿ ಎದುರಾಗಿತ್ತು. ಇಬ್ಬರೂ ಇದರಿಂದ ರೋಸಿಹೋಗಿದ್ದರು.

ಪತ್ನಿ : ನೋಡ್ರಿ, ಎರಡು ದೇಹ ಒಂದು ಜೀವ ಅಂತ ನಾವಿರಬೇಕು. ಇಂಥ ಗಲಾಟೆ ಬೇಡ.

ಪತಿ : ಸರಿ, ಅದಕ್ಕೆ ಏನು ಮಾಡಬೇಕು ಅಂತೀಯಾ?

ಪತ್ನಿ : ತಪ್ಪೆಲ್ಲ ನನ್ನದೇ, ನನ್ನನ್ನು ಕ್ಷಮಿಸಿ ಬಿಡು ಅಂತ ಮೊದಲು ನೀವು ನನ್ನನ್ನು ಕೇಳಿಕೊಳ್ಳಿ. ನಾನು ಎಲ್ಲವನ್ನೂ ಕ್ಷಮಿಸಿ ಬಿಡ್ತೀನಿ. ಮತ್ತೆ ಮೊದಲಿನಂತೆ ಒಂದಾಗಿರೋಣ.

ಪತ್ನಿ : ನೋಡ್ರಿ… ನನಗೆ ಸಾಕಾಗಿ ಹೋಗಿದೆ. ಮನೆ ನೋಡಿಕೊಳ್ಳಬೇಕು, ಮಕ್ಕಳನ್ನು ಗಮನಿಸಬೇಕು, ನಿಮ್ಮಮ್ಮನಿಗೆ ಟೈಂ ಟೈಮಿಗೆ ಮಾಡಿ ಹಾಕಿ ಔಷಧಿ ಕೊಡುತ್ತಿರಬೇಕು… ಆದರೆ ನೀವು ಇದ್ದೀರಿ…. ಏನು ಮಾಡ್ತೀರಿ ಅಂತ?

ಪತಿ : ಡಾರ್ಲಿಂಗ್‌, ಈ ನಿನ್ನ ಪ್ರೇಮ ಸರೋವರದಂಥ ಕಂಗಳಲ್ಲಿ ನಾನು ಸದಾ ಕರಗಿ ಹೋಗ್ತೀನಿ, ನಿನ್ನ ನೋಡುವುದಕ್ಕಿಂತಲೂ ಬೇರೇನು ಭಾಗ್ಯ?

ಪತ್ನಿ : ಥೂ ಹೋಗೀಪ್ಪ… ಮದುವೆ ಆಗಿ 2 ಮಕ್ಕಳಾದರೂ ಇನ್ನೂ ಹುಡುಗಾಟ ಬಿಟ್ಟಿಲ್ಲ ನೀವು. ರಾತ್ರಿಗೆ ನಿಮಗೆ ಪಾಯಸ ಮಾಡಲೋ ಕೇಸರಿಭಾತ್‌ ಮಾಡಲೋ?

ಗುಂಡ : ಮಾಮೂಲಿ ಅದೇ ಕ್ಯಾಲೆಂಡರ್‌ ಬೇಡ, ಹೊಸ ತರಹದ್ದು ಕೊಡಿ.

ಅಂಗಡಿಯನು : ಯಾವ ಕಂಪನಿಯದು ಬೇಕು ಅಂತೀರಾ?

ಗುಂಡ : ಯಾವುದರಲ್ಲಿ ಹೆಚ್ಚು ಹೆಚ್ಚು ರಜೆಗಳಿವೆಯೋ ಅದು!

ಪತ್ನಿ : ನೋಡ್ರಿ…. ಮದುವೆ ಆಗಿ 5 ವರ್ಷ ಆಯ್ತು. ಈಗ್ಲೂ ಇದನ್ನು ಹೇಳೋಕ್ಕೆ ನನಗೆ ಬಹಳ ನಾಚಿಕೆ ಆಗುತ್ತೆ. ಐ ಲವ್ ಯೂ!

ಪತಿ : ಏನೇ ಇದು ಇವತ್ತು ಇಷ್ಟೊಂದು ಲವ್? ಮೊದಲು ನನಗೆ ದೃಷ್ಟಿ ತೆಗಿ.

ಪತ್ನಿ : ಇವತ್ತು ನಿಮ್ಮ ಬರ್ತ್‌ ಡೇ  ಅಲ್ವಾ…..? ಅದಕ್ಕೆ ಸ್ವಲ್ಪ ಜಾಸ್ತಿ ಲವ್……

ಪತಿ : ಸರಿ, ಅದಕ್ಕೇನೀಗ…..?

ಪತ್ನಿ : ರೀ…. ನಿಮ್ಮ ಬರ್ತ್‌ ಡೇ ಅಂತ ಹೊಸ ಡ್ರೆಸ್‌ ತಂದಿದ್ದೀನಿ. ಅದನ್ನು ನೋಡಿದ್ರೆ ನೀವು ಬಹಳ ಖುಷಿ ಪಡ್ತೀರಿ.

ಪತಿ : ಹೌದಾ ಡಾರ್ಲಿಂಗ್‌, ಸೋ ನೈಸ್‌ ಆಫ್‌ ಯು! ಎಲ್ಲಿ ಕೊಡು ನೋಡೋಣ…..

ಪತ್ನಿ : ಇರಿ, ಈಗಲೇ ಹೋಗಿ ಹಾಕಿಕೊಂಡು ಬಂದು ತೋರಿಸ್ತೀನಿ!

ಅಂಗಡಿಯವನು : ಮೇಡಂ, ನೀವು ಕೇಳಿದಿರಿ ಅಂತ ನಮ್ಮ ಅಂಗಡಿಯ ಪ್ರತಿ ಮೂಲೆ ಮೂಲೆಯಲ್ಲಿನ ಪ್ರತಿಯೊಂದು ಬಗೆಯ ಸ್ಯಾಂಡಲ್ಸ್ ತೋರಿಸಿದ್ದಾಯ್ತು. ಈಗಲೂ ನಿಮಗೆ ಯಾವುದೂ ಇಷ್ಟವಾಗುತ್ತಿಲ್ಲವೋ? ಹೋಗಲಿ ಬಿಡಿ…..

ರೇಖಾ : ಅಲ್ಲ…. ಅಲ್ಲಿ ಮೇಲೆ ಇಟ್ಟಿದ್ದೀರಲ್ಲ, ಆ ಬಾಕ್ಸ್ ನಲ್ಲಿ ಏನಿದೆ ಅಂತ ತೋರಿಸಿಬಿಡಿ. ನೋಡಿಯೇ ಬಿಡ್ತೀನಿ. ಬಹುಶಃ ಅದು ನನಗೆ ಇಷ್ಟ ಆಗಬಹುದೇನೋ…..

ಅಂಗಡಿಯನು : ದಯವಿಟ್ಟು ಅದರ ತಂಟೆಗೆ ಬರಬೇಡಿ. ಅದರಲ್ಲಿ ನನ್ನ ಟಿಫನ್‌ ಬಾಕ್ಸ್ ಇಟ್ಟಿದ್ದೇನೆ.

ಪತ್ನಿ ಎದ್ದ ತಕ್ಷಣ ಏನೋ ಕಷ್ಟಪಡುತ್ತಿದ್ದಳು. “ಯಾಕೋ ನನಗೆ ಅರ್ಧ ತಲೆ ನೋವು ಬಂದು ಬಹಳ ಕಾಟ ಕೊಡ್ತಿದೆ,” ಎಂದು ತಲೆ ಒತ್ತಿಕೊಂಡಳು.

ಪತಿರಾಯ ಸುಮ್ಮನಿರಬೇಕು ತಾನೇ?

“ಯಾರಿಗೆ ಎಷ್ಟು ತಲೆ ಇದೆಯೋ ಅಷ್ಟೇ ನೋವು ಬರುತ್ತಪ್ಪ,” ಎಂದುಬಿಡುವುದೇ?

ಅವನು ಅಂದು ಆಫೀಸು ತಲುಪುವಷ್ಟರಲ್ಲಿ ಮೈಯೆಲ್ಲ ಹಿಂಡಿ ಹಿಪ್ಪೆ ಮಾಡುವಷ್ಟು ಮೈಕೈ ನೋವು ಕಾಡತೊಡಗಿತ್ತು.

ವಿವಾಹಿತ ಗೆಳೆಯರೆಲ್ಲ ಗುಂಡು ಹಾಕಿಕೊಂಡು ತಾವು ಪಡುತ್ತಿದ್ದ ಬವಣೆಗಳನ್ನು ತೋಡಿಕೊಳ್ಳುತ್ತಿದ್ದರು. ಅದಕ್ಕೆ ಇತರರು `ಅಯ್ಯೋ ಪಾಪ’ ಎಂದು ಸಹಾನುಭೂತಿ ಸೂಚಿಸುತ್ತಿದ್ದದು.

ಗುಂಡ : ಮೊನ್ನೆ ನಮ್ಮ ವೆಡ್ಡಿಂಗ್‌ ಆ್ಯನಿವರ್ಸರಿ ಇತ್ತು. ಹೆಂಡತಿಗೆ ನಾನೊಂದು ಡೈಮಂಡ್‌ ನೆಕ್ಲೇಸ್‌ ಕೊಡಿಸಿದೆ. ಅಂದಿನಿಂದ 1 ವಾರ ಅವಳು ನನ್ನ ಜೊತೆ ಮಾತೇ ಆಡುತ್ತಿಲ್ಲ, ಗೊತ್ತಾ?

ನಾಣಿ : ಛೇ….ಛೇ! ಎಂಥ ಕಲ್ಲು ಹೃದಯ ಅವಳದು, ಅಂಥ ಒಡವೆ ಕೊಡಿಸಿದ ಗಂಡನ ಜೊತೆ ಮಾತು ಬಿಡುವುದು ಅಂದರೇನು?

ವೆಂಕ : ಬಹುಶಃ ನೀನು ಕೊಡಿಸಿದ್ದು ರೋಲ್ಡ್ ಗೋಲ್ಡ್ ಅಂತ ಅವಳಿಗೆ ಗೊತ್ತಾಗಿರಬೇಕು.

ಸೀನ : ಅವಳಿಗೆ ಗೊತ್ತಿಲ್ಲದಂತೆ ಅವಳ ಗೋಲಕದ ಹಣ ಎಗರಿಸಬಿಟ್ಟಿದ್ದೆ ಅನ್ನು!

ಗುಂಡ : ಅದೆಲ್ಲ ಅಲ್ಲ ಕಣ್ರೋ…. ನಮ್ಮ ಡೀಲ್ ಇದ್ದದ್ದೇ ಹಾಗೇ!

ಗೆಳೆಯರು : ಅಂ….ದ…ರೆ..?

ಗುಂಡ : ನಾನು ನೆಕ್ಲೇಸ್‌ ಕೊಡಿಸಿದ ಮೇಲೆ 1 ವಾರವಾದರೂ ನನ್ನನ್ನು ಮಾತನಾಡಿಸದೆ ನೆಮ್ಮದಿಯಾಗಿ ಇರಲು ಬಿಡಬೇಕು ಅಂತ!

ಅಪರೂಪಕ್ಕೆ ಗೆಳೆಯ ಕಿಟ್ಟಿಯನ್ನು ಭೇಟಿಯಾದ ನಾಣಿ ಕೇಳಿದ, “ಕಳೆದ ತಿಂಗಳು ಮೀಟ್‌ ಮಾಡಿದಾಗಲೂ ನಿನ್ನ ವೈಫ್‌ ಪಾಪ ಚೆನ್ನಾಗೇ ಇದ್ದರು. ದಿಢೀರ್‌ ಅಂತ ಹೋಗಿಬಿಟ್ಟರಂತೆ. ಏನಾಗಿತ್ತು ಅವರಿಗೆ? ಹೇಗೋ…. ಸಮಾಧಾನ ಮಾಡಿಕೊಳ್ಳಪ್ಪ.”

ಕಿಟ್ಟಿ : ಏನು ಹೇಳಲಿ ನಾಣಿ? ಹೋದ ವಾರ ದಿಢೀರ್‌ ಅಂತ ಹೀಗೆ ಆಗೋಯ್ತು. ಭಾನುವಾರ 8 ಗಂಟೆ ಆದರೂ ಇಬ್ಬರೂ ಎದ್ದಿರಲಿಲ್ಲ. ಎಚ್ಚರ ಆದಮೇಲೆ ಟೀ ಮಾಡು ಅಂದೆ. ಟೀ ಪುಡಿ ಖಾಲಿ ಆಗಿದೆ, ನೀವೇ ಅಂಗಡಿಯಿಂದ ತಂದು ಮಾಡಿ ಅಂತ ಗೊರಕೆ ಮುಂದುವರಿಸಿದಳು. ವಿಧಿಯಿಲ್ಲದೆ ನಾನೇ ಹೋಗಿ ಟೀ ಪುಡಿ ತಂದು, ಬಿಸಿ ಬಿಸಿ ಟೀ ಮಾಡಿ ಎಬ್ಬಿಸಿದೆ.

ನಾಣಿ : ಆಮೇಲೆ…. ಏನಾಯ್ತು? ಸಮಾಧಾನ ಮಾಡಿಕೊಳ್ಳಪ್ಪ.

ಕಿಟ್ಟಿ : ಟೀ ಕುಡಿದು ಅರ್ಧ ಗಂಟೆ ಕಾಲ ಚೆನ್ನಾಗೇ ಇದ್ದಳು. ಆಮೇಲೆ ಇದ್ದಕ್ಕಿದ್ದಂತೆ ಎದೆ ನೋವು ಅಂತ ಕುಸಿದುಬಿದ್ದಳು. ಕೆಲವು ನಿಮಿಷಗಳಲ್ಲೇ ಎಲ್ಲಾ ಆಗಿಹೋಯ್ತು….

ನಾಣಿ : ಅಯ್ಯೋ ಪಾಪ, ಸಮಾಧಾನ ಮಾಡಿಕೊಳ್ಳಪ್ಪ. ಅಂದಹಾಗೆ…. ಆ ಟೀ ಪುಡಿ ಇನ್ನೂ ಮಿಕ್ಕಿದ್ದರೆ ನನಗೆ ಕೊಟ್ಟಿರ್ತೀಯಾ? ನಿನ್ನ ಉಪಕಾರ ಎಂದೂ ಮರೆಯಲಾರೆ.

ಒಬ್ಬ ವಿವಾಹಿತ ವ್ಯಕ್ತಿಯ ಟೀ ಶರ್ಟ್‌ ಮೇಲೆ ಹೀಗೊಂದು ವಾಕ್ಯ ಬರೆದಿತ್ತು :`ದಯವಿಟ್ಟು ಯಾರೂ ನನ್ನನ್ನು ತೊಂದರೆ ಮಾಡಬೇಡಿ. ಈಗಾಗಲೇ ನನಗೆ ಮದುವೆ ಆಗಿದೆ. ಸಾಕಷ್ಟು ತೊಂದರೆಗಳಲ್ಲಿ ಮುಳುಗಿ ಹೋಗಿದ್ದೇನೆ!’

ವಾಣಿ : ನಿನ್ನೆ 1 ಕಪ್‌ ಸಕ್ಕರೆ ಕೊಟ್ಟಿದ್ರಲ್ಲ, ತಗೊಳ್ಳಿ ವಾಪಸ್‌ ಕೊಡೋಣ ಅಂತ ಬಂದೆ.

ರಾಣಿ : ಪರವಾಗಿಲ್ಲ… ಇಷ್ಟೇನು ಅರ್ಜೆಂಟು!

ವಾಣಿ : ಇಲ್ಲ, ಆಚೆ ಮನೆ ರೇಖಾ ಬಳಿ ತಗೊಂಡು ನಿಮಗೆ ಇದನ್ನು ಕೊಟ್ಟೆ. ಈಗ ಮೂಲೆ ಮನೆ ಸರೋಜಾ ಹತ್ತಿರ ತಗೊಂಡು ರೇಖಾಗೆ ನಾಳೆ ವಾಪಸ್ಸು ಕೊಡಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ