ಕಥೆ – ಲತಾ ಶೇಖರ್
ಮಿಥುನ್ ದುಷ್ಟ ವ್ಯಕ್ತಿಯಾಗಿದ್ದ. ಹೆಂಡತಿಯನ್ನು ಕಾಲಕಸ ಎಂಬಂತೆ ಭಾವಿಸುತ್ತಿದ್ದ. ಅವನ ಇದೇ ಯೋಚನೆ ಒಂದು ದಿನ ದುಬಾರಿಯಾಗಿ ಪರಿಣಮಿಸಿತ್ತು……!
ಬಂಗ್ಲೆಗೆ ಕಾಲಿಡುತ್ತಿದ್ದಂತೆ ಗೀತಾಳಿಗೆ ಒಂದು ನಿಶ್ಚಿಂತೆಯಂತೂ ಇತ್ತು. ಅದೆಂದರೆ ಈಗ ಕೇವಲ ಮಿಥುನ್ ಮಾತ್ರ ತನ್ನನ್ನು ಭೇಟಿಯಾಗುತ್ತಾನೆಂದು. ಮಿಥುನ್ ಬೆಡ್ ರೂಮಿನಲ್ಲಿ ಕಾಲು ಚಾಚಿಕೊಂಡು ಲ್ಯಾಪ್ ಟಾಪ್ ನಲ್ಲಿ ಆಫೀಸ್ ಕೆಲಸದಲ್ಲಿ ಮಗ್ನನಾಗಿದ್ದ. ಅವನ ಬೆನ್ನು ಬಾಗಿಲ ಕಡೆ ಇತ್ತು. ಗೀತಾ ಮಿಥುನ್ ನ ಬೆನ್ನ ಮೇಲೆ ನಿಧಾನವಾಗಿ ಕೈಯಿಂದ ತಟ್ಟಿದಳು.
ಮಿಥುನ್ ಒಮ್ಮೆಲೆ ಅಚ್ಚರಿಗೊಳಗಾದ. ಅವನು ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ, “ಓಹ್… ನೀನು ನಾದಿನಿ ಗೀತಾ….” ಎಂದ.
“ಹೌದು ಭಾವ ನಾನೇ….. ಅಂದಹಾಗೆ ನೀವು ಅಕ್ಕನಿಗಾಗಿ ಕಾಯುತ್ತಿದ್ದೀರಾ? ಅವಳು ಆಸ್ಪತ್ರೆಗೆ ಹೋಗಿರಬೇಕಲ್ವಾ…..?”
“ಇಲ್ಲ…. ಇಲ್ಲ…. ನಾನು ನಿನ್ನನ್ನೇ ನೆನಪಿಸಿಕೊಳ್ತಿದ್ದೆ.”
“ಹಾಗಿದ್ದರೆ, ನಾವು ಈಗಲೇ ಒಂದು ಸೆಲ್ಛೀ ತೆಗೆದುಕೊಳ್ಳೋಣ. ನಿಮ್ಮ ಮದುವೆಯಾಗಿ 5 ವರ್ಷ ಆಯಿತು. ಈ ನಿಮ್ಮ ಏಕೈಕ ನಾದಿನಿಯ ಜೊತೆಗೆ ಒಂದೇ ಒಂದು ಸೆಲ್ಛೀ ಕೂಡ ಇಲ್ಲ,” ಎಂದು ನಾದಿನಿ ಗೀತಾ ತನ್ನ ದೂರು ಹೇಳಿಕೊಂಡಳು.
“ಹೇಗಿರಬೇಕು ಸೆಲ್ಛೀ? ಈ 5 ವರ್ಷಗಳಲ್ಲಿ ನೀನು ಹಾಲುಗಲ್ಲದ ಹಸುಳೆ ಥರ ಇದ್ದೆ. ನನ್ನ ಹತ್ತಿರ ಎಲ್ಲಿ ಸುಳಿಯುತ್ತಿದ್ದೆ?” ಎಂದು ಹೇಳುತ್ತಾ ಅವಳ ನಿಕಟ ಹೋಗಿ, ಕಣ್ಣಲ್ಲಿ ಇಣುಕಿದ.
ಗೀತಾಳ ಮೈಮನದಲ್ಲಿ ಅದೇನೋ ಪುಳಕ. ಅವಳು ಭಾವನ ಮೈಗೆ ಅಂಟಿಕೊಂಡು ಸೆಲ್ಛೀ ತೆಗೆದುಕೊಳ್ಳತೊಡಗಿದಳು. ಅವಳು ಅಷ್ಟು ಹತ್ತಿರ ಬಂದಿರುವುದನ್ನು ನೋಡಿ ಅವನಿಗೆ ಉಸಿರೇ ನಿಂತಂತಾಯಿತು. ಸೆಲ್ಛೀ ಕ್ಲಿಕ್ಕಿಸಿಕೊಂಡ ಬಳಿಕ ನಾದಿನಿ, “ನೋಡಿ ಭಾವ, ಸೆಲ್ಛಿಯಲ್ಲೂ ನಾವು ಅದೆಷ್ಟು ಚೆನ್ನಾಗಿ ಕಾಣ್ತಿದ್ದೇವೆ,” ಎಂದು ಹೇಳಿದಳು.
ಮಿಥುನ್ ಲ್ಯಾಪ್ ಟಾಪ್ ಬಿಟ್ಟು ಬೆಡ್ ಮೇಲೆ ಬರುತ್ತಾ ಗೀತಾಳನ್ನು ಒಮ್ಮೆಲೆ ಬಾಹುಗಳಲ್ಲಿ ಬಂಧಿಸಿದ.
“ಭಾವ, ಅಕ್ಕನಿಗೆ ಇದು ಗೊತ್ತಾಗಿಬಿಟ್ಟರೆ…..?”
“ಕಳೆದ ಅನೇಕ ದಿನಗಳಿಂದ ನಾನು ನಿನ್ನ ಹೃದಯದಲ್ಲಿ ಆಗುತ್ತಿದ್ದ ಭಾವನೆಗಳನ್ನು ಗಮನಿಸುತ್ತಿದ್ದೆ. ಈಗ ನಿನ್ನ ಅಕ್ಕನನ್ನು ಮರೆತುಬಿಡು. ಮನೆಯವಳನ್ನು ಹೇಗೆ ಹದ್ದುಬಸ್ತಿನಲ್ಲಿಡಬೇಕೆಂದು ನನಗೆ ಚೆನ್ನಾಗಿ ಗೊತ್ತು.”
ಗೀತಾ ಆವರೆಗೆ ಮಿಥುನ್ ನ ಬಾಹುಗಳಲ್ಲಿ ಬಂಧಿಯಾಗಿಬಿಟ್ಟಿದ್ದಳು. 23 ವರ್ಷದ ನವ ಯುವತಿ 35 ವರ್ಷದ ಮಿಥುನ್ ನ ಪೌರುಷವನ್ನು ತನ್ನ ವಶಕ್ಕೆ ಪಡೆದಿದ್ದಳು.
ಪ್ರಥಮ ಅನುಭವದ ಲೀಲೆ ಮುಗಿದ ಬಳಿಕ ಗೀತಾಳ ಮನಸ್ಸು ತಳಮಳಗೊಂಡಿತು.
“ಭಾವ, ನನ್ನಿಂದ ತಪ್ಪಾಗಿ ಹೋಯ್ತಾ?”
ಮಿಥುನ್ ಅವಳ ತುಟಿಗೆ ತನ್ನ ತುಟಿ ಸೇರಿಸುತ್ತಾ ಅವಳಿಗೆ ಭರವಸೆ ಕೊಡುತ್ತಾ, “ಹೆಂಡತಿ ತನ್ನ ಗಂಡನನ್ನು ಸದಾ ಖುಷಿಯಾಗಿಡಬೇಕು ಎನ್ನುವುದು ನಮ್ಮ ಪರಂಪರೆ. ಈಗ ನಾನು ಹೇಗೆ ಖುಷಿಯಾಗುತ್ತೇನೆ ಎಂದು ತಿಳಿದುಕೊಳ್ಳುವ ಅಗತ್ಯವೇ ಇಲ್ಲ. ನೀನು ಇದರ ಬಗ್ಗೆ ಹೆಚ್ಚು ಯೋಚಿಸಬೇಡ. ನೀನು ಕಾಲೇಜಿನ ವಿದ್ಯಾಭ್ಯಾಸ ಆದಷ್ಟು ಬೇಗ ಮುಗಿಸು. ಬಳಿಕ ನಿನ್ನನ್ನು ನನ್ನದೇ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸಕ್ಕೆ ಸೇರಿಸಿಕೊಳ್ತೀನಿ. 11 ಗಂಟೆ ಆಗ್ತಾ ಬಂತು. ನಾನೂ ಕೂಡ ಆಫೀಸಿಗೆ ಹೋಗಬೇಕಿದೆ,” ಎಂದು ಹೇಳಿದ.
ಗೀತಾಳಿಗೆ ನೌಕರಿಯಂತೂ ಬಹು ದೊಡ್ಡ ಆಮಿಷವಾಗಿತ್ತು. ಅದನ್ನು ಅವಳು ನಿರ್ಲಕ್ಷಿಸುವಂತಿರಲಿಲ್ಲ. ಹಾಗಾಗಿ ಗೀತಾ ಹಾಗೂ ಮಿಥುನ್ ತಮ್ಮ ತಮ್ಮ ಅನುಕೂಲಕ್ಕನುಸಾರ ಆಗಾಗ ಸೇರುವುದರ ಮೂಲಕ ಸಂಬಂಧದ ನಂಬಿಕೆಯನ್ನು ಬದಿಗೊತ್ತಿದ್ದರು. ಅವರ ರಂಗಿನಾಟ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿತ್ತು.
ಇಂದಿಗೆ 5 ವರ್ಷದ ಮೊದಲೇ, ಆ ದಿನ ಮಧ್ಯಾಹ್ನ 3 ಗಂಟೆಗೆ 24 ವರ್ಷದ ಅನಿತಾ ಬಸ್ ಗಾಗಿ ಯೂನಿರ್ಸಿಟಿಯ ಹೊರಗೆ ಕಾಯುತ್ತಿದ್ದಳು. ಆಕಸ್ಮಿಕವಾಗಿ ಅವಳ ಎದುರಿಗೆ ಬೈಕ್ ಮೇಲೆ ಚಿನ್ಮಯ್ ಬರುತ್ತಿರುವುದು ಕಾಣಿಸಿತು. ಅನಿತಾಳನ್ನು ನೋಡಿ ಅವನು ನಿಂತ.
“ಏ ಚಿನ್ಮಯ್….. ನೀನು 2 ವರ್ಷಗಳಿಂದ ಎಲ್ಲಿದ್ದೆ?” ಅನಿತಾ ಕೇಳಿದಳು.
“ಎಂ.ಕಾಂ. ಮತ್ತು ಬ್ಯಾಂಕ್ ಪರೀಕ್ಷೆಯ ಸಿದ್ಧತೆ ಮಾಡುತ್ತಿದ್ದೆ. ನಿನ್ನ ಬಗ್ಗೆ ಹೇಳು,” ಎಂದು ಚಿನ್ಮಯ್ ಕೇಳಿದ.
“ಬೇಗ ಬೇಗ ಹೊರಡು. ಗಾಂಧಿ ಮೈದಾನಕ್ಕೆ ಹೋಗೋಣ.”
“ಬಾ….. ಬೈಕ್ ನಲ್ಲಿ ಕುಳಿತುಕೊ,” ಚಿನ್ಮಯ್ ಹೇಳಿದ.
ಯಾವುದೇ ಔಪಚಾರಿಕತೆಯಿಲ್ಲದೆ ಅವಳು ಅವನ ಹಿಂದಿನ ಸೀಟಿನಲ್ಲಿ ಕುಳಿತಳು. ಆದರೆ ಇದೇ ವಿಷಯ ಜನರಿಗೇನಾದರೂ ಗೊತ್ತಾಗಿಬಿಟ್ಟರೆ ಅದು ಬೇರೆಯೇ ರೂಪ ಪಡೆದುಕೊಳ್ಳುತ್ತಿತ್ತು. ಗಾಂಧಿ ಮೈದಾನದಲ್ಲಿ ಅಷ್ಟೊಂದು ಜನರಿರಲಿಲ್ಲ. ಅವರಿಬ್ಬರೂ ಅಲ್ಲಿನ ಬೆಂಚ್ ಮೇಲೆ ಕುಳಿತುಕೊಂಡರು.
“ಮತ್ತೇನು ವಿಷಯ?” ಮೊದಲಿನ ಹಾಗೆ ನಾಚಿಕೊಳ್ಳುತ್ತಲೇ ಚಿನ್ಮಯ್ ಅವಳ ಮುಂದೆ ತನ್ನ ಪ್ರಶ್ನೆ ಇಟ್ಟ.
“ಸೈಕಾಲಜಿಯಲ್ಲಿ ಮಾಸ್ಟರ್ ಮುಗಿಸಿದೆ. 80% ಆಯ್ತು. ಮತ್ತೆ ನಿನ್ನದು?” ಅನಿತಾ ಅವನ ಬಗ್ಗೆ ಕೇಳಲು ಉತ್ಸುಕಳಾಗಿದ್ದಳು.
“ಬ್ಯಾಂಕ್ ನೌಕರಿ ಮಾಡೋದೇ ನನ್ನ ಗುರಿ. ಮತ್ತೆ ನೀನೀಗ ಏನು ಮಾಡಬೇಕೆಂದಿರುವಿ?”
“ನಿನಗೊಂದು ಏಟು ಕೊಡ್ತೀನಿ. ನನ್ನನ್ನು ಆ ರೀತಿ ಏಕೆ ನೋಡ್ತಿರುವೆ? ಮನಸ್ಸಿನಲ್ಲಿ ಯಾವುದಾದರೂ ಕಳ್ಳ ಹೊಕ್ಕಿದ್ದಾನೆಯೇ?” ಅನಿತಾ ಸ್ವಲ್ಪ ಬಿಂದಾಸ್ ಧ್ವನಿಯಲ್ಲಿ ಕೇಳಿದಳು.
“ಕಳ್ಳನೇನೂ ಇಲ್ಲ. ಆದರೆ ಮನಸ್ಸಿನಲ್ಲಿ ಏನಿದೆಯೋ ಅದನ್ನು ಹೇಳಬೇಕು ಅಂತೀನಿ. ಆದರೆ ಹೇಳಲು ಏನೊ ಸಂಕೋಚ.”
“ಹೇಳಿಬಿಡು. ನಮ್ಮ ಸ್ನೇಹ ನಾವು 10ನೇ ತರಗತಿಯಲ್ಲಿ ಇದ್ದಾಗಿನಿಂದ ಇದೆ. ನೀನು ನವ ವಧುವಿನಂತೆ ನಾಚಿಕೊಳ್ಳುವುದನ್ನು ಈಗಲಾದರೂ ಬಿಡು,” ಅನಿತಾ ಹಕ್ಕಿನ ಧ್ವನಿಯಲ್ಲಿಯೇ ಹೇಳಿದಳು.
ಅವಳ ಮಾತು ಕೇಳಿಸಿಕೊಂಡ ಚಿನ್ಮಯ್, “ನನ್ನನ್ನು ಮದುವೆಯಾಗಿ ಬಿಡು. ಪರೀಕ್ಷೆಯಂತೂ ಚೆನ್ನಾಗಿ ಮಾಡಿದ್ದೇನೆ. ನೌಕರಿಯ ಗ್ಯಾರಂಟಿಯಂತೂ ಸಿಕ್ಕೇ ಸಿಗುತ್ತೆ,” ಎಂದ.
ಅನಿತಾಳ ತಮಾಷೆಯ ಸ್ವಭಾವ ಒಮ್ಮೆಲೆ ಕಣ್ಮರೆಯಾಯಿತು. “ಏನ್ ಹೇಳ್ತಿದ್ದೀಯಾ ಚಿನ್ಮಯ್? ನಿನ್ನ ಧರ್ಮ ಬೇರೆ, ನನ್ನ ಧರ್ಮ ಬೇರೆ. ನನ್ನ ಮನೆಯವರು ಇಬ್ಬರನ್ನೂ ಕತ್ತರಿಸಿ ಹಾಕಿಬಿಡುತ್ತಾರೆ. ನನ್ನ ತಂದೆ ಇನ್ ಕಂ ಟ್ಯಾಕ್ಸ್ ನಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಹೀಗಾಗಿ ಇಷ್ಟು ವಯಸ್ಸಿನ ತನಕ ಇನ್ನೂ ಓದ್ತಾನೇ ಇದ್ದೇನೆ. ಅದೇ ನಮ್ಮೂರಿನಲ್ಲಿ 16-18 ವರ್ಷವಾದರೆ ಸಾಕು, ಹುಡುಗಿಯರಿಗೆ ಮದುವೆ ಮಾಡಿ ಮುಗಿಸುತ್ತಾರೆ. ನನ್ನ ಮುಂದಿನ ಯೋಜನೆ ಕ್ಲಿನಿಕ್ ತೆರೆಯಬೇಕು ಎನ್ನುವುದಾಗಿದೆ. ಈಗಲೇ ನಾನು ಅಪ್ಪನ ಮುಂದೆ ಮದುವೆ ಬಗ್ಗೆ ಹೇಳಿ ಅವರ ಕೋಪಕ್ಕೆ ತುತ್ತಾಗಲು ಇಷ್ಟಪಡುವುದಿಲ್ಲ,” ಎಂದಳು ಅನಿತಾ.
ಚಿನ್ಮಯ್ ಖಿನ್ನನಾದ. ಅವಳನ್ನು ಮನವೊಲಿಸುವ ಧ್ವನಿಯಲ್ಲಿ, “ನಿಜ ಹೇಳು ಅನಿತಾ, ನಾನು ನಿನಗೆ ಎಂದೂ ಇಷ್ಟವಾಗಲಿಲ್ಲವೇ…..?” ಎಂದು ಕೇಳಿದ.
ಅನಿತಾ ತನ್ನ ಹೃದಯದಲ್ಲಿ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾದ ಚಿಕ್ಕಪುಟ್ಟ ಭಾವನೆಗಳನ್ನು ನಿರ್ಲಕ್ಷಿಸಲು ಆಗಲಿಲ್ಲ. ಅವಳು ಅವನ ಹತ್ತಿರ ಬಂದು, ಅವನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಳ್ಳುತ್ತಾ, “ನೀನು ನನಗೆ ಏನು ಅಂತಾ ನಾನು ಇಷ್ಟು ತರಾತುರಿಯಲ್ಲಿ ಹೇಳಲು ಆಗದು. ಆದರೆ ಇಷ್ಟಪಡುವುದರಿಂದ ಮದುವೆಯಾಗಲೂ ಆಗದು. ನಿಜ ಹೇಳಬೇಕೆಂದರೆ, ಸ್ನೇಹಿತ ಪತಿಯಾಗಲು ಸಾಧ್ಯವಿಲ್ಲ. ಕೆಲವು ಸಂಗತಿಗಳು ವ್ಯಾವಹಾರಿಕವಾಗಿರುತ್ತಿ,” ಎಂದಳು.
“ನನಗೆ ನಿನ್ನನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲವಲ್ಲ,” ನಿರಾಶೆಯಿಂದ ಚಿನ್ಮಯ್ ನ ಕಣ್ಣುಗಳಲ್ಲಿ ನೀರು ತುಂಬಿದವು.
“ಚಿನ್ಮಯ್, ನಿನಗೆ ನನ್ನ ಮನೆಯವರು ಹಾಗೂ ಊರಿನವರ ಜಾತೀಯತೆಯ ಕಠೋರತೆ ಗೊತ್ತಿಲ್ಲ. ನಾನು ನಿನ್ನನ್ನು ಅವರಿಂದ ದೂರ ಇರಿಸಲು ಇಷ್ಟಪಡುತ್ತೇನೆ.”
ಅಂದು ಚಿನ್ಮಯ್ ಅವಳ ಫೋನ್ ನಂಬರ್ ನ್ನು ತನ್ನ ಫೋನ್ ನಲ್ಲಿ ಸೇವ್ ಮಾಡಿಕೊಂಡ.
ಮಿಥುನ್ ಇನ್ ಕಂ ಟ್ಯಾಕ್ಸ್ ಆಫೀಸ್ ನಲ್ಲಿ ಅನಿತಾಳ ಅಪ್ಪನಿಗಿಂತ ಉನ್ನತ ಹುದ್ದೆಯಲ್ಲಿದ್ದ. ಅನಿತಾಳ ಅಪ್ಪನಿಗೆ ಇಂತಹ ವರ ವಜ್ರದಲ್ಲಿಯೇ ಕೊಹಿನೂರ್ ನಂತೆ ಕಂಡಿದ್ದ.
ರೂಪವಂತ, ಶ್ರೀಮಂತ, ಹಸನ್ಮುಖಿ, ಉನ್ನತ ಶಿಕ್ಷಣ ಪಡೆದು ಉನ್ನತ ಅಧಿಕಾರಿಯಾದ ಮಿಥುನ್ ಮನೆಗೆ ರಾಜಲಕ್ಷ್ಮಿಯ ಹಾಗೆ ಬಂದಳು ಅನಿತಾ.
ವರ್ಷದುದ್ದಕ್ಕೂ ಅವರಿಬ್ಬರ ಆಕರ್ಷಣೆಯ ಚಮತ್ಕಾರ ಹಾಗೆಯೇ ನಡೆಯುತ್ತಿತ್ತು. ಆದರೆ ಅನಿತಾಳಿಗೆ ತನ್ನ ಪತಿಯ ಆಕರ್ಷಣೆಯ ನೈಜತೆ ಕ್ರಮೇಣ ಗೊತ್ತಾಗುತ್ತಾ ಹೋಯಿತು.
ಅನಿತಾ ಕೌನ್ಸೆಲಿಂಗ್ ಗಾಗಿ ತನ್ನದೇ ಆದ ಕ್ಲಿನಿಕ್ ವೊಂದನ್ನು ತೆರೆಯಲು ಇಚ್ಛಿಸಿದ್ದಳು. ಅವಳ ಅಪ್ಪ ಪತಿಯ ಖಾತೆಗೆ ಹಾಕಿದ್ದ 15 ಲಕ್ಷ ರೂ. ಗಳಲ್ಲಿ 2 ಲಕ್ಷ ರೂ.ಗಳನ್ನು ಕೇಳಿದಳು. ಆದರೆ ಮಿಥುನ್ ಆ ಬಗ್ಗೆ ಕೇಳಿಯೂ ಕೇಳಿಸಿದನಂತೆ ಉಳಿದುಬಿಟ್ಟ.
ರಾತ್ರಿ ಕೂಡ ಅವಳು ಮಲಗುವಾಗ ತನ್ನ ಬೇಡಿಕೆಯ ಬಗ್ಗೆ ಪುನರುಚ್ಛರಿಸಿದಾಗ, ಅವನು, “ಎಲ್ಲಿಯವರೆಗೆ ಮಗು ಆಗುವುದಿಲ್ಲವೋ ಅಲ್ಲಿಯವರೆಗೆ ನೀನು ಏನೂ ಮಾಡುವ ಹಾಗಿಲ್ಲ,” ಎಂದ.
“ಆದರೆ ಕ್ಲಿನಿಕ್ ನನಗೆ ಅತ್ಯಂತ ಅವಶ್ಯ.”
“ಈಗ ನನಗೆ ಅವಶ್ಯವಿರುವುದು ನೀನು ನನ್ನನ್ನು ಖುಷಿಪಡಿಸಬೇಕು. ಅದರ ಹೊರತು ಬೇರೇನನ್ನೂ ಪ್ರಸ್ತಾಪಿಸಕೂಡದು,” ಎಂದ ನಿಷ್ಠೂರನಾಗಿ.
“ಇದೇನು ನಿಮ್ಮದು ಮಗು ಆಗುವ ತನಕ ಅಂದರೆ…..” ಎಂದು ವ್ಯಾಕುಲತೆಯಿಂದ ಕೇಳಿದಳು ಅನಿತಾ.
ಅವಳು ಮುಂದೆ ಏನಾದರೂ ಹೇಳುವ ಮೊದಲೇ ಅವಳ ಕೆನ್ನೆಗೊಂದು ಜೋರಾದ ಏಟು ಬಿತ್ತು.
“ನಿನಗೆ ನಾನು ಹೇಳಿದ್ದು ಅರ್ಥ ಆಗಲಿಲ್ಲ ಅನಿಸುತ್ತೆ. ಹಾಸಿಗೆಗೆ ಬರುತ್ತಿದ್ದಂತೆ ನೀನು ನನ್ನ ಸೇವೆಯಲ್ಲಿ ತೊಡಗಬೇಕು,” ಎಂದು ಹೇಳುತ್ತಾ ಅವಳ ಮೇಲೆ ಮೃಗದಂತೆ ಮುಗಿಬಿದ್ದ.
ತನ್ನ ಕುಟುಂಬದಲ್ಲಿ ಸ್ತ್ರೀಯರನ್ನು ಹೀಗೆ ಅವಹೇಳನ ಮಾಡುವುದು, ಅವರ ಬೇಡಿಕೆಗಳನ್ನು ಈಡೇರಿಸದೆ ಇರುವಂತಹ ಪರಂಪರೆಯನ್ನು ನೋಡಿಕೊಂಡು ಬೆಳೆದಿದ್ದ ಮಿಥುನ್. ಆದ್ದರಿಂದ ಅವನು ಈ ರೀತಿಯೇ ವರ್ತಿಸುತ್ತಿದ್ದ.
ಮಣ್ಣು ಒಂದೇ ಆಗಿರಬಹುದು. ಅದರಿಂದ ರೂಪುಗೊಳ್ಳುವ ಮೂರ್ತಿಗಳು ಬೇರೆ ಬೇರೆ ಆಗಿರುತ್ತವೆ. ಅನಿತಾ ಕೂಡ ಅವನ ಅವಕೃಪೆಗೆ ತುತ್ತಾಗಿದ್ದಳು. ಬೆಳಗ್ಗೆ ಅವಳು ಎದ್ದೇಳಲೂ ಇಲ್ಲ, ಚಹಾ ಮಾಡಲೂ ಇಲ್ಲ. ಅವನು ಅಡುಗೆಮನೆಯಿಂದ ಖಾಲಿ ಕಪ್ ತೆಗೆದುಕೊಂಡು ಬಂದು ಬೆಡ್ ರೂಮಿನ ನೆಲದ ಮೇಲೆ ಜೋರಾಗಿ ಎಸೆದ. ಬಳಿಕ ಅವಳ ಕೂದಲು ಹಿಡಿದು ಜೋರಾಗಿ ಎಳೆಯುತ್ತಾ, “ಇದು ನಿನ್ನಪ್ಪನ ರಾಜ್ಯ ಎಂದು ತಿಳಿದಿರುವೆಯಾ? ಮಹಿಳೆಯಾಗಿ ನಿನ್ನ ಕೋಪವನ್ನು ನನ್ನ ಮುಂದೆ ತೋರಿಸ್ತೀಯಾ? ನಿನ್ನ ಅಪ್ಪ ಅಮ್ಮ ನಿನಗೆ ಗಂಡನಿಗೆ ಹೇಗೆ ಮರ್ಯಾದೆ ತೋರಿಸಬೇಕು ಅಂತ ಕಲಿಸಿಲ್ಲವೇ?” ಎಂದು ಜೋರಾಗಿ ಕೂಗಿದ.
ಅಂದಿನಿಂದ ಅವಳು ಅವನ ದುರ್ವರ್ತನೆಯನ್ನು ಸಹಿಸಿಕೊಳ್ಳಬೇಕಾಗಿ ಬಂತು. ಅವನೆಂದೂ ಅವಳನ್ನು ಸಮೀಪ ಕೂರಿಸಿಕೊಂಡು ಪ್ರೀತಿಯ ಮಾತು ಆಡುತ್ತಿರಲಿಲ್ಲ. ಅವಳನ್ನು ಅಪಾರಾಧಿಯ ಹಾಗೆ ಬಿಂಬಿಸಿ ಅವಳೊಂದಿಗೆ ಇನ್ನಷ್ಟು ಕಠೋರವಾಗಿ ವರ್ತಿಸುತ್ತಿದ್ದ.
ಹೀಗೆಯೇ ಅವನ ದುರ್ವರ್ತನೆ ಸಹಿಸಿಕೊಳ್ಳುತ್ತಾ 5 ವರ್ಷಗಳು ಕಳೆದುಹೋದವು. ಆದಾಗ್ಯೂ ತನ್ನ ಜೀವನದಲ್ಲಿ ಒಳ್ಳೆಯ ದಿನಗಳು ಬರಬಹುದು ಎಂದು ಅವಳು ಕಾಯುತ್ತಲೇ ಇದ್ದಳು. ಅವಳಿಗಿನ್ನೂ ಮಗು ಆಗಿರಲಿಲ್ಲ ಹಾಗೂ ಕೆರಿಯರ್ ನಲ್ಲಿ ಸೆಟ್ ಕೂಡ ಆಗಿರಲಿಲ್ಲ.
ಈಗ ಅವಳ ನಿರಾಶೆ ಬಂಡಾಯದ ರೂಪ ಪಡೆದುಕೊಳ್ಳುತ್ತಿತ್ತು. ಹೆದರಿಕೆಯ ಗೋಡೆಗಳು ಕುಸಿಯುವುದು ಅನಿವಾರ್ಯವೇ ಆಗಿತ್ತು.
ಅದೊಂದು ದಿನ ಆಕಸ್ಮಿಕವಾಗಿ ತಂದೆಯ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ಸುದ್ದಿ ತಿಳಿಯುತ್ತಲೇ ಅವಳು ತಾಯಿಯ ಬಳಿ ಧಾವಿಸಿದಳು. ಪತಿ ಮಿಥುನ್ ಮಾತ್ರ ಶ್ರಾದ್ಧದ ದಿನ ಬಂದಿದ್ದ.
ಚಿನ್ಮಯ್ ಈಗ ಬ್ಯಾಂಕ್ ಮ್ಯಾನೇಜರ್ ಆಗಿದ್ದ. ಅವನ ವೇಷಭೂಷಣ ಎಂಥವರನ್ನು ಮೋಹಿತರನ್ನಾಗಿಸುತ್ತಿತ್ತು. ಅನಿತಾಳ ತಂದೆಯ ನಿಧನದಿಂದ ಮನೆಯಲ್ಲಿ ಉಂಟಾದ ಶೂನ್ಯತೆಯನ್ನು ನಿವಾರಿಸಲು ಚಿನ್ಮಯ್ ಸಾಧ್ಯವಿದ್ದಷ್ಟು ಪ್ರಯತ್ನಿಸುತ್ತಿದ್ದ. ಅನಿತಾಳ ಜೊತೆಗೆ ಖುಷಿ ಖುಷಿಯಿಂದ ಮಾತನಾಡುತ್ತಿದ್ದ. ಅವಳನ್ನು ದುಃಖದಿಂದ ಹೊರಬರಲು ಸಾಧ್ಯವಿದ್ದಷ್ಟು ಪ್ರಯತ್ನಿಸುತ್ತಿದ್ದ. ಅನಿತಾಳಿಗೆ ಯಾವ ಮಾತುಗಳು ಬಾಲ್ಯಾವಸ್ಥೆಗೆ ಸಂಬಂಧಿಸಿದ್ದ ಎನಿಸುತ್ತಿದ್ದಿ, ಗಂಡನ ದುಷ್ಟತನದ ಬುದ್ಧಿಯನ್ನು ಕಂಡುಕೊಂಡ ಬಳಿಕ ಪುರುಷ ಸಂಗಾತಿಯಲ್ಲಿ ಯಾವ ಗುಣಗಳು ಅವಶ್ಯವಾಗಿ ಇರಬೇಕು ಎನ್ನುವುದು ಗೊತ್ತಾಗುತ್ತಿತ್ತು. ಒಬ್ಬರಿಗೆ ಗೌರವ ಕೊಡಬೇಕೆಂದರೆ, ಪ್ರೀತಿ ಇರುವುದು ಅತ್ಯವಶ್ಯ ಮತ್ತು ಗಂಡಹೆಂಡತಿ ನಡುವೆ ಪ್ರೀತಿ, ಸಮಾನತೆಯ ಹೊರತು ಎಲ್ಲಿ ಸಾಧ್ಯವಿದೆ?
ಚಿನ್ಮಯ್ ನೆರವಿನಿಂದ ಖಾಸಗಿ ನರ್ಸಿಂಗ್ ಹೋಮೊಂದರಲ್ಲಿ ಸೈಕಾಲಾಜಿಲ್ ನೌಕರಿ ಗಿಟ್ಟಿಸಿದ್ದಳು. ಸಂಬಳ ಕೂಡ ಚೆನ್ನಾಗಿತ್ತು. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಲ್ಲಿ ಕುಳಿತುಕೊಳ್ಳಬೇಕಿತ್ತು. ಅದು ಅನಿತಾಳಿಗೆ ಸಹಜವಾಗಿಯೇ ಒಪ್ಪಿಗೆಯಾಗಿತ್ತು.
ಕಳೆದುಕೊಂಡ ಆತ್ಮವಿಶ್ವಾಸ ಅವಳಲ್ಲಿ ಮರಳಿ ಬರಲಾರಂಭಿಸಿತು. ಚಿನ್ಮಯ್ ಕೊಟ್ಟ ಧೈರ್ಯದಿಂದ ಮಿಥುನ್ ನ ಚೀರಾಟ ಕೂಗಾಟಗಳಿಗೆ ಎದಿರೇಟು ಕೊಡಲು ಅವಳಿಗೆ ಪುನಃ ಧೈರ್ಯ ಬಂದಿತ್ತು. ಕ್ರಮೇಣ ಮಿಥುನ್ ಅವಳ ಬಗ್ಗೆ ನಿರ್ಲಕ್ಷ್ಯ ತೋರಿಸತೊಡಗಿದ. ಅವಳ ಯಾವುದೇ ನೋವು ಕೇಳಿಸಿಕೊಳ್ಳದ ತಟಸ್ಥ ಭಾವನೆ. ಇಷ್ಟಾಗ್ಯೂ ಅವಳಿಗೆ ಅವನ ದೈಹಿಕ ಅವಶ್ಯಕತೆ ಈಡೇರಿಸುವುದೇನೂ ತಪ್ಪಿರಲಿಲ್ಲ.
ಚಿನ್ಮಯ್ ನ ಜೀವನವೇ ಬೇರೆಯಾಗಿತ್ತು. ಅವನಿಗಿಂತ ದೊಡ್ಡವನಾದ ಅಣ್ಣ ಅತ್ತಿಗೆ ಅವನ ಜೊತೆ ವಾಸಿಸುತ್ತಿದ್ದರು. ಅತ್ತಿಗೆಯ ವರ್ತನೆ ಅವನಿಗೆ ಮನೆಯ ಮಧ್ಯೆ ಗೋಡೆ ಹಾಕುವಂತೆ ಮಾಡಿತ್ತು. ಒಂದೆಡೆ ಅತ್ತಿಗೆಯ ವರ್ತನೆ, ಇನ್ನೊಂದೆಡೆ ಅನಿತಾಳ ಬಗೆಗಿನ ಒಲವು ಅವನನ್ನು ಮದುವೆಯಿಂದ ದೂರವೇ ಉಳಿಯುವಂತೆ ಮಾಡಿತ್ತು.
ಎರಡು ಮಹಡಿಯ ಮನೆಯಲ್ಲಿ ಕೆಳಗೆ ಅಮ್ಮ ಅಪ್ಪ ವಾಸಿಸುತ್ತಿದ್ದರೆ, ಮೇಲೆ ಅವನು ವಾಸಿಸುತ್ತಿದ್ದ. ಅಮ್ಮ ಅಪ್ಪನಿಗೆ ವಯಸ್ಸಾಗಿತ್ತು. ಅವರು ಹೆಚ್ಚಾಗಿ ಕೆಲಸದವರ ಮೇಲೆಯೇ ನಂಬಿಕೊಂಡಿದ್ದರು. ಚಿನ್ಮಯ್ ಅವರ ಬಗ್ಗೆ ಗಮನಕೊಡುತ್ತಿದ್ದ. ಬಿಡುವಾದಾಗೆಲ್ಲ ಅವರನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗುತ್ತಿದ್ದ.
ತನ್ನ ಮನಸ್ಸಿಗೆ ಹಿತ ಎನಿಸುತ್ತದೆ ಎಂದು ಅನಿತಾ ತಂಗಿ ಗೀತಾಳನ್ನು ತನ್ನೊಂದಿಗೆ ಕರೆದುಕೊಂಡು ಬಂದಿದ್ದಳು. ಅವಳು ಅದೇ ಮನೆಯಲ್ಲಿದ್ದುಕೊಂಡೇ ಕಾಲೇಜಿಗೆ ಹೋಗುತ್ತಿದ್ದಳು. ಹೀಗೆಯೇ ಅನೇಕ ವರ್ಷಗಳು ಕಳೆದವು.
ಅಂದು ಅನಿತಾಳ ಆರೋಗ್ಯ ಅಷ್ಟೊಂದು ಸರಿಯಿರಲಿಲ್ಲ. ನರ್ಸಿಂಗ್ ಹೋಮ್ ನಲ್ಲಿ ಕೆಲವೇ ಕೆಲವು ರೋಗಿಗಳನ್ನು ನೋಡಿಕೊಂಡು ಅವಳು ಮನೆಯತ್ತ ಹೊರಟಳು. ಆಗ ಸಮಯ 11 ಗಂಟೆಯಾಗುತ್ತಾ ಬಂದಿತ್ತು. ಸ್ವಲ್ಪ ವಿಶ್ರಾಂತಿ ಪಡೆದರೆ ಮನಸ್ಸಿಗೆ ಹಗುರವಾಗುತ್ತದೆಂದು ಅವಳು ಭಾವಿಸಿದ್ದಳು.
ಅನಿತಾ ಮಹಡಿಯ ಮೆಟ್ಟಿಲು ಎರುತ್ತಾ ಎಂತಹ ಧ್ವನಿಯನ್ನು ಕೇಳಿದಳೆಂದರೆ, ಅದನ್ನು ಕೇಳಿ ಅವಳ ನಂಬಿಕೆಯ ಹೃದಯಕ್ಕೆ ಘಾಸಿಯಾಯಿತು. ಬೆಡ್ ರೂಮಿನಿಂದ ಕೇಳಿಬರುತ್ತಿದ್ದ ಮಾತುಗಳು ಅವಳ ತಲೆಗೆ ಸುತ್ತಿಗೆಯಿಂದ 100 ಸಲ ಹೊಡೆದಂತೆ ಭಾಸವಾಯಿತು.
ಗೀತಾಳ ಮಾತುಗಳು ಕಿವಿಗೆ ಅಪ್ಪಳಿಸುತ್ತಿದ್ದವು. “ಸಾಕು ಭಾವ ಸಾಕು…..” ಎಂದು ಅವಳು ಭಾವನನ್ನು ಆಕ್ರಮಿಸಿಕೊಂಡಿರುವುದು ಸ್ಪಷ್ಟವಾಗುತ್ತಿತ್ತು.
ಅನಿತಾಳ ಅನುಭವಿ ಕಣ್ಣುಗಳು ಒಳಗಿನ ದೃಶ್ಯವನ್ನು ನೋಡುತ್ತಿದ್ದವು. “ಭಾವ….. ಅಕ್ಕ ಬಂದು ಬಿಡಬಹುದು. ಈಗ ಸಾಕು ಬಿಟ್ಟು ಬಿಡಿ….”
“ಅವಳು ಬರುವುದು ತಡವಾಗುತ್ತೆ. ಹಾಗೊಮ್ಮೆ ಬಂದರೂ ಏನಾಯ್ತು? ನಾನು ಅವಳಿಗೆ ಕೇರ್ ಮಾಡೋಲ್ಲ.”
ಅನಿತಾ ಬೇರೊಂದು ಕೋಣೆಗೆ ಹೇಗೊ ಕಾಲೆಳೆದುಕೊಂಡು ಹೋಗಿ ಹಾಸಿಗೆಯ ಮೇಲೆ ಹಾಗೆ ಒರಗಿದಳು. ಅವಳಿಗೆ ತನ್ನ ಜೀವನದ ಬಗ್ಗೆಯೇ ಹೇಸಿಗೆಯಾಯಿತು. ಒಬ್ಬ ಪತ್ನಿಯಾಗಿ ತನಗೆ ಇಷ್ಟೊಂದು ಶಿಕ್ಷೆ ಏಕೆ ದೊರಕುತ್ತಿದೆ?
ಮಿಥುನ್ ದುಷ್ಟ ಪ್ರವೃತ್ತಿಯ ವ್ಯಕ್ತಿಯಾಗಿದ್ದ. ಹೆಂಡತಿಯನ್ನು ಅವನು ಕಾಲ ಕಸ ಎಂಬಂತೆ ಕಾಣುತ್ತಿದ್ದ. ಪಾರಂಪರಿಕ ಯೋಚನೆಯನ್ನು ಶಾಸ್ತ್ರ ವಾಕ್ಯ ಎಂದು ಭಾವಿಸಿ ಹೆಂಡತಿಯನ್ನು ತನಗಿಂತ ಕೀಳು ಎಂದು ಭಾವಿಸಿದ್ದ. ಸಹನೆಗೂ ಒಂದು ಮಿತಿಯಿದೆ. ಆ ಒಂದು ಇತಿಮಿತಿಯ ರೇಖೆಯನ್ನು ಅನಿತಾಳೇ ಎಳೆಯಬೇಕಿತ್ತು.
ರಾತ್ರಿ ಮಲಗುವ ಸಮಯದಲ್ಲಿ ಅವಳ ಕನಸಿನ ಕಂಗಳು ಈಗ ಪಶ್ಚಾತ್ತಾಪದಿಂದ ತಪ್ತಗೊಂಡಿದ್ದವು. ಅವಳನ್ನು ನೋಡುತ್ತಿದ್ದಂತೆಯೇ ಮಿಥುನ್ ಅವಳನ್ನು ಯಾಂತ್ರಿಕವಾಗಿ ತನ್ನ ಬಾಹುಗಳಲ್ಲಿ ಬಂಧಿಸಲು ಸನಿಹ ಬಂದ. ಆದರೆ ಅವಳು ಅವನಿಂದ ದೂರ ಸರಿದು ಜೋರಾಗಿ, “ನೀವು ನನಗೆ ಇಷ್ಟು ದೊಡ್ಡ ಮೋಸ ಮಾಡಿದ್ದು ಸರೀನಾ?” ಎಂದು ಕೂಗಿದಳು.
“ನಿನಗೆ ನನ್ನ ವಿರುದ್ಧ ಬೆರಳು ತೋರಿಸಲು ಯಾವುದೇ ಹಕ್ಕು ಇಲ್ಲ. ಮೊದಲು ನನ್ನ ವಂಶ ಬೆಳಿಸು. ಆಮೇಲೆ ಪ್ರಶ್ನೆ ಮಾಡು. ತಿಳಿಯಿತಾ” ಮಿಥುನ್ ಕೂಡ ಅಷ್ಟೇ ಕಠೋರವಾಗಿ ಹೇಳಿದ.
ಗಂಡನ ಈ ಪ್ರಶ್ನೆಯೇ ಅವಳನ್ನು ಯಾವಾಗಲೂ ಅವಳ ಹೃದಯವನ್ನು ಈಟಿಯಂತೆ ತಿವಿಯುತ್ತಿತ್ತು. ತಾನು ನಿಜವಾಗಿಯೂ ಅಮ್ಮನಾಗಲು ಅರ್ಹಳಾಗಿರಲಿಲ್ಲವೇ? ಇಷ್ಟೊಂದು ವರ್ಷ ಅವಳು ಪರೀಕ್ಷೆ ಮಾಡಿಸಿಕೊಳ್ಳದೇ ಸುಮ್ಮನೇ ಇದ್ದಳೇ? ಅವಳಲ್ಲ, ಮಿಥುನ್ ಅಪ್ಪನಾಗಲು ಅರ್ಹನಾಗಿರಲಿಲ್ಲ. ಮಿಥುನ್ ನ ಮನಸ್ಸಿಗೆ ನೋಲಗಬಾರದೆಂದು ಅಲಳು ಸುಮ್ಮನೇ ಇದ್ದಳು.
ಆದರೆ ಮಿಥುನ್ ಅಲಳು ಹೆಣ್ಣೆಂಬ ಕಾರಣಕ್ಕೆ ಅಲಳನ್ನೇ ಧಿಕ್ಕರಿಸುತ್ತಿದ್ದ. ಅಲಳನ್ನು ಆಗಾಗ ಅವಮಾನಿಸುತ್ತಿದ್ದ. ದೇಹದ ಯಾವುದಾದರೂ ಒಂದು ಅಂಗದ ದೌರ್ಬಲ್ಯ ಬಹಿರಂಗಗೊಂಡಾಗ ಪುರುಷನ ಮರ್ಯಾದೆ ಹೊರಟುಹೋಗುತ್ತದಾ? ಪುರುಷನ ಮರ್ಯಾದೆ ಅಹಂಕಾರವೆಂಬ ಧನುಸ್ಸಿಗೆ ಹೂಡಿದ ಬಾಣವಾಗಿರುತ್ತದೆಯೇ? ಮಿಥುನ್ ನಂತಹ ಗಂಡ ಸ್ನೇಹಿತನಲ್ಲ, ಹೆಂಡತಿಯ ಮಾಲೀಕನಾಗಿರುತ್ತಾನೆಯೇ? ನೂರಾರು ಬಿಡಿಸಲಾಗದ ಪ್ರಶ್ನೆಗಳು ಅವಳನ್ನು ಹಿಂಸಿಸಲಾರಂಭಿಸಿದ್ದ.
ಮಿಥನ್ ನ ಹೃದಯದಲ್ಲಿ ಇಷ್ಟೊಂದು ಕ್ರೂರತನವೇಕೆ? ಅನಿತಾ ಸಾಕ್ಷರಳಾಗಿರುವುದು ತಿಳಿವಳಿಕೆ ಉಳ್ಳವಳಾಗಿರುವುದು ಅವನ ಅಹಂಗೆ ಪೆಟ್ಟು ಕೊಡುತ್ತದೆಯೇ? ಅದೇ ಗೌರಾನ್ವಿತ ಆಗಿರುವುದರ ಗುರುತೇ? ಮರುದಿನ ಅವಳು ಆ ಕಡೆ ಸುಳಿಯಲೇ ಇಲ್ಲ. ಅವಳು ಊಟ ತಿಂಡಿಯನ್ನು ವ್ಯವಸ್ಥೆ ಮಾಡಿಯೇ ಅಲ್ಲಿಂದ ಹೊರಟಿದ್ದಳು. ಸಂಜೆಯ ಹೊತ್ತಿಗೆ ಮಿಥುನ್ ಕೈಯಲ್ಲಿ ಅವಳ ಡಾಕ್ಟರ್ ರಿಪೋರ್ಟ್ ಇತ್ತು. ರಿಪೋರ್ಟ್ ನ್ನು ಟೇಬಲ್ ಮೇಲೆ ಬಿಸಾಡುತ್ತಾ, “ನೀನು ಇದನ್ನು ಯಾರೊ ಪರಿಚಿತರಿಂದ ಮಾಡಿಸಿರಬೇಕು. ಇದರಲ್ಲಿ ನಿನ್ನದೇನೊ ಸಂಚು ಇರಬೇಕು,” ಕೋಪದಿಂದ ಹೇಳಿದ.
“ನೀವು ನಿಮ್ಮ ಪರೀಕ್ಷೆ ಮಾಡಿಸಿಕೊಂಡರೊ ಇಲ್ಲವೋ….. ಏನೂ ಇಲ್ಲ ಅಂದಿದ್ದರೆ ನೀವು ನನ್ನ ಬೆನ್ನ ಹಿಂದೆ ನನ್ನ ತಂಗಿಯ ಜೊತೆ ಅಕ್ರಮ ಸಂಬಂಧ ಹೊಂದುತ್ತಿರಲಿಲ್ಲ,” ಅನಿತಾ ಸ್ವಲ್ಪ ಕಠೋರವಾಗಿಯೇ ಹೇಳಿದಳು.
ಅನಿತಾ ಅದೇ ಕ್ಷಣದಲ್ಲಿ ತನ್ನ ಮನಸ್ಸಿನ ಎಲ್ಲ ಬಾಗಿಲುಗಳನ್ನು ಮಿಥುನ್ ಗಾಗಿ ಮುಚ್ಚಿಬಿಟ್ಟಿದ್ದಳು. ಅವಳ ಮನಸ್ಸಿನ ಮೂಲೆಯೊಂದರಲ್ಲಿ ನೆಮ್ಮದಿಯ ಆಶಾಕಿರಣವೊಂದಿತ್ತು. ಅದೇ ಚಿನ್ಮಯ್!
ಇಂದು ಅವಳು ಎಲ್ಲ ಬಂಧನಗಳನ್ನು ಹೊಸ್ತಿಲಲ್ಲಿಯೇ ಬಿಟ್ಟು ಕೆಲವು ಅಗತ್ಯ ವಸ್ತುಗಳೊಂದಿಗೆ ಹೊರಗೆ ಬಂದಳು. ಟ್ಯಾಕ್ಸಿಯಲ್ಲಿ ಕುಳಿತು ಯೂನಿವರ್ಸಿಟಿ ಗೇಟ್ ಬಳಿ ತಲುಪಿದಳು. ಚಿನ್ಮಯ್ ಗೆ ಅವಳು ಮೊದಲೇ ಫೋನ್ ಮಾಡಿ ಹೇಳಿಟ್ಟಿದ್ದಳು. ಚಿನ್ಮಯ್ ನ ಮನೆ ಅಲ್ಲಿಂದ ಹತ್ತಿರದಲ್ಲಿಯೇ ಇತ್ತು. ಅಂದು ಭಾನುವಾರವಾದ್ದರಿಂದ ಅವನು ಮನೆಯಲ್ಲಿಯೇ ಇದ್ದ. ಫೋನ್ ಮಾಡುತ್ತಿದ್ದಂತೆ ಅವನು ಗೇಟ್ ಹತ್ತಿರ ಬಂದು ಅವಳನ್ನು ಮನೆಗೆ ಕರೆದುಕೊಂಡು ಹೋದ.
ಅವರಿಬ್ಬರ ನಡುವಿನ ಮೌನ ಸಂಭಾಷಣೆ ಅನಿತಾಳ ನೋವನ್ನು ಸಂಪೂರ್ಣ ಬಿಚ್ಚಿಟ್ಟಿತ್ತು. ಚಿನ್ಮಯ್ ನ ಮನೆಗೆ ಹೋಗಿ ಫ್ರೆಶ್ ಆಗಿ ಬಟ್ಟೆ ಬದಲಿಸಿದಳು. ಬಳಿಕ ತನ್ನ ಸಿಮ್ ನ್ನು ನಾಶ ಮಾಡಿ, ಚಿನ್ಮಯ್ ನ ತಾಯಿ ತಂದೆಯನ್ನು ಭೇಟಿಯಾಗಲು ಹೋದಳು. ಅತ್ಯವಶ್ಯ ಫೋನ್ ನಂಬರ್ ಗಳನ್ನು ನೋಟ್ ಮಾಡಿಕೊಳ್ಳಲು ಚಿನ್ಮಯ್ ಸೂಚಿಸಿದ.
“ನೋಡಮ್ಮಾ, ನನ್ನ ಹಳೆಯ ಪರಿಚಿತ ಹುಡುಗಿ ಬಂದಿದ್ದಾಳೆ. ಅವಳು ಇಲ್ಲಿ ಕೆಲವು ದಿನ ಉಳಿಯಬೇಕಾಗಿದೆ,” ಎಂದು ಅಮ್ಮನಿಗೆ ಚಿನ್ಮಯ್ ಹೇಳಿದ.
ಚಿನ್ಮಯ್ ನ ತಾಯಿ, ಅನಿತಾಳನ್ನು ನೆನಪು ಮಾಡಿಕೊಳ್ಳುತ್ತಾ, “ಓಹ್….. ನೀನು ಅನಿತಾ ಅಲ್ವಾ?” ಎಂದು ಕೇಳಿದರು.
ಅನಿತಾ ಅವರ ಪಾದ ಮುಟ್ಟಿ ನಮಸ್ಕರಿಸಿದಾಗ, “ಅನಿತಾ, ನೀನು ಮೇಲ್ಜಾತಿಯವಳಾಗಿ ನಮ್ಮ ಕಾಲು ಮುಟ್ಟಬೇಡ,” ಎಂದು ತಡೆದರು.
“ಹೀಗೆ ಮಾತನಾಡಬೇಡಿ ಆಂಟಿ. ನಾನು ಜಾತಿಯ ಅಹಂಕಾರವನ್ನು ಇಂಚಿಂಚು ಸಹಿಸಿಕೊಂಡಿದ್ದೇನೆ. ಜೀವನ ಹಾಗೂ ಸಂಬಂಧಗಳು ಗರ್ವದಿಂದಲ್ಲ, ಸರಳತೆ ಹಾಗೂ ಪ್ರೀತಿಯಿಂದ ನಡೆಯುತ್ತವೆ.”
ಅಮ್ಮ ಅವಳನ್ನು ತಬ್ಬಿಕೊಳ್ಳುತ್ತಾ, “ಈ ಹುಡುಗಿ ಬಹಳ ವಾಸ್ತವದಿಂದ ಮಾತನಾಡುತ್ತಾಳೆ. ಇವಳನ್ನು ನಮ್ಮ ಪಕ್ಕದ ರೂಮಿಗೆ ಕರೆದುಕೊಂಡು ಹೋಗು. ಅನಿತಾ, ನಿನಗೆ ಎಲ್ಲಿಯವರೆಗೆ ಇರಬೇಕು ಅನಿಸುತ್ತೋ ಅಲ್ಲಿಯವರೆಗೆ ಇರಬಹುದು,” ಎಂದು ಹೇಳಿದರು.
ಅನಿತಾ, ಕಳೆದ ಅನೇಕ ವರ್ಷದಿಂದ ಅನಾದರ, ಅಪಮಾನ, ನಿರಾಶೆಯ ಬಿರುಗಾಳಿಯಲ್ಲಿ ಸಿಲುಕಿ ನಲುಗಿ ಹೋಗಿದ್ದಳು. ಈಗ ಸರಿಯಾದ ದಿಸೆಗೆ ತಲುಪುವ ಆಶಾಕಿರಣ ಅವಳಲ್ಲಿ ಧೈರ್ಯ ತುಂಬಿತ್ತು.
ರಾತ್ರಿ ಮಲಗುವ ಹೊತ್ತಿನಲ್ಲಿ ಚಿನ್ಮಯ್ ಅವಳಿಗೆ ಹಾಸಿಗೆ ಮತ್ತಿತರ ವಸ್ತುಗಳನ್ನು ಕೊಡಲೆಂದು ಅವಳ ಕೋಣೆಗೆ ಬಂದ. ಅವಳು ಆಗಲೇ ಮಲಗಿಕೊಂಡಿದ್ದಳು. ಚಿನ್ಮಯ್ ಅವಳ ಹಣೆಯ ಮೇಲೆ ಕೈಯಿಟ್ಟು ನೋಡಿದಾಗ ಅವನಿಗೆ ಆಘಾತವಾಯಿತು.
“ಅನಿತಾ, ನಿನಗೆ ತೀವ್ರ ಜ್ವರ ಬಂದಿದೆ.”
“ನೀನು ಸ್ವಲ್ಪ ಹೊತ್ತು ನನ್ನ ಬಳಿಯೇ ಇರು,” ಅನಿತಾಳ ಧ್ವನಿಯಲ್ಲಿ ಮನವಿ ಇತ್ತು.
ಅನು ಕುಳಿತುಕೊಳ್ಳುತ್ತಾ, “ಏನಾಯ್ತು? ನನಗೆ ಹೆದರಿಕೆ ಆಗುತ್ತಿದೆ,” ಎಂದು ಅಳುಕುತ್ತಾ ಕೇಳಿದ.
“ನಾನು ನಿನ್ನನ್ನು ಹೆದರಿಸುತ್ತಿಲ್ಲ,” ಅನಿತಾ ನಿರಾಶೆಯ ನಡುವೆಯೂ ನಕ್ಕಳು.
“ನನಗೆ ನಾನೇ ಹೆದರುತ್ತಿರುವೆ. ಹಳೆಯ ಮನಸ್ಥಿತಿಯ ಬಿರುಗಾಳಿಗೆ ಎಲ್ಲಿಯಾದರೂ ಸಿಕ್ಕಿಬಿಡುವೆನೋ ಎಂದು ಭೀತಿ ಆಗುತ್ತೆ.”
“ನಾನ್ಯಾವಾಗ ನಿರಾಕರಿಸಿದೆ?”
“ಇಲ್ಲ. ನಾನು ಈಗ ನಿನ್ನ ಮೇಲೆ ಯಾವುದೇ ಹಕ್ಕು ಸಾಧಿಸಲು ಆಗದು. ಏಕೆಂದರೆ ನೀನು ಬೇರೆಯವಳಾಗಿರುವೆ.” ಅನಿತಾ ಅವನನ್ನು ಬಲವಂತಾಗಿ ತನ್ನ ಕಡೆ ಎಳೆದುಕೊಳ್ಳುತ್ತಾ, “ಜಾತಿ, ಪರಂಪರೆ ಹಾಗೂ ಶಾಸ್ತ್ರಕ್ಕಿಂತಲೂ ಮನುಷ್ಯ ಚಾರಿತ್ರ್ಯ ಹಾಗೂ ಅವನ ಮನಸ್ಸು ಎಲ್ಲಕ್ಕೂ ಉತ್ತುಂಗದಲ್ಲಿರುತ್ತದೆ. ನಾನು ಮೇಲು ಕೀಳು, ಪರಂಪರೆ, ವಯಸ್ಸು ಮುಂತಾದ ಆಧಾರರಹಿತ ಯೋಚನೆಗಳಿಗೆ ಸಿಲುಕಿ ನಿನ್ನಂಥ ಹೃದಯ ವಿಶಾಲ, ಹಸನ್ಮುಖಿ, ಸರಳ ಹಾಗೂ ಹೊಣೆಗಾರ ವ್ಯಕ್ತಿಯನ್ನು ಕಳೆದುಕೊಂಡಿದ್ದೆ. “ಆದರೆ ಈಗ ಆಡಂಬರಗಳ ಹೊರೆಯಿಂದ ನನ್ನನ್ನು ನಾನು ಮುಕ್ತಗೊಳಿಸಿಕೊಂಡಿದ್ದೇನೆ. ಜಾತಿಯ ತೋರಿಕೆಯಲ್ಲಿ ನಾನು ನನ್ನ ಮನಸ್ಸಿಂದ ಇನ್ನಷ್ಟು ಕಪಟತನ ತೋರಿಸಲು ಆಗದು. ಇನ್ನು ಸಮಾಜದ ಬಗ್ಗೆ ಹೇಳಬೇಕೆಂದರೆ, ಕಾಗದದ ಮೇಲೆ ಒಂದು ಸಹಿ ಹಾಗೂ ಎಲ್ಲ ಮುಕ್ತಾಯ.”
ಚಿನ್ಮಯ್ ಅಲ್ಲಿಂದ ಮೇಲೆಳುತ್ತಾ, “ನಾಳೆ ಮಾತಾಡೋಣ ಈಗ ನೀನು ಆವೇಶದಲ್ಲಿರುವೆ. ತಪ್ಪಾಗುವ ಸಾಧ್ಯತೆಗಳು ಹೆಚ್ಚಾಗಿವೆ,” ಎಂದು ಹೇಳಿದ.
ಚಿನ್ಮಯ್ ನ ಕೈಯನ್ನು ಅವಳು ಗಟ್ಟಿಯಾಗಿ ಹಿಡಿದುಕೊಂಡು, “ಚಿನ್ಮಯ್, ಆ ಜನ ನನ್ನನ್ನು ಬಂಜೆ ಎಂದು ಹೇಳಿ ಮನೆಯಿಂದ ಹೊರ ಹಾಕಿದರು. ಆದರೆ ಅದು ಸತ್ಯ ಆಗಿರಲಿಲ್ಲ. ಮಿಥುನ್ ನನ್ನ ತಂಗಿಯ ಜೊತೆಗೆ ಸಂಬಂಧ ಬೆಳೆಸಿ ನನ್ನನ್ನು ಬೀದಿಗೆ ತಳ್ಳುವ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದ. ಈಗ ಸಮಾಜ ನನ್ನ ಬಗ್ಗೆ ಏನೇ ಅಭಿಪ್ರಾಯ ತಾಳಲಿ, ನಾನಂತೂ ಬಂಜೆ ಆಗಿರಲಿಲ್ಲ ಎಂದು ಸಾಬೀತು ಮಾಡಿ ತೋರಿಸುತ್ತೇನೆ.”
ಚಿನ್ಮಯ್ ದೂರ ಸರಿಯುತ್ತಾ ಹೇಳಿದ, “ನೀನು ವಿಕ್ಷಿಪ್ತಳಾಗುತ್ತಿರುವೆ. ನಾನು ಬಹುಶಃ ನನ್ನನ್ನು ನಾನು ತಡೆದುಕೊಳ್ಳಲು ಆಗುವುದಿಲ್ಲವೇನೋ, ಆದರೆ ನೀನು ಮಾತ್ರ ಅದಕ್ಕೆ ಅವಕಾಶ ಕೊಡಬೇಡ. ನನ್ನ ಪರೀಕ್ಷೆ ಮಾಡಬೇಡ. ನೀನು ನನಗೆ ಏನು ಅಂತ ಬಹುಶಃ ಗೊತ್ತಿಲ್ಲವೇನೊ?”
“ಚಿನ್ಮಯ್, ನೀನು ನನ್ನಿಂದ ಏನನ್ನು ಪಡೆದುಕೊಳ್ಳುತ್ತಿ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನಾನು ನಿನ್ನಲ್ಲಿ ಮನವಿ ಮಾಡಿಕೊಳ್ಳುವುದಿಷ್ಟೆ, ನನಗೆ ಸಾಬೀತು ಮಾಡಲು ಅವಕಾಶ ಕೊಡು, ನನ್ನನ್ನು ಕೀಳರಿಮೆಯ ಸಂಕೋಲೆಯಿಂದ ಮುಕ್ತಗೊಳಿಸು. ಆ ಜವಾಬ್ದಾರಿ ಸಂಪೂರ್ಣ ನನ್ನದೇ…..”
ಪ್ರೀತಿ ಹಾಗೂ ಆಕಾಂಕ್ಷೆ ಈ ಎರಡೂ ಒಂದೇ ಸೂತ್ರದಲ್ಲಿ ಅಡಕವಾದವು. ಚಂದ್ರ ಕಿಟಕಿಯಿಂದ ಇಣುಕುತ್ತಾ ಅವರ ಮಧುರ ಕ್ಷಣಗಳಿಗೆ ಸಾಕ್ಷಿಯಾಗಿದ್ದ.
ಕೆಲವು ದಿನಗಳ ಬಳಿಕ ಅವಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಳು. ಮಿಥುನ್ ಕೂಡ ಒಪ್ಪಿಗೆ ಸೂಚಿಸಿದ. 8 ತಿಂಗಳು ಕಳೆದಿತ್ತು. ಮಿಥುನ್ ನಿಂದ ಬಹುಬೇಗ ಡೈವೋರ್ಸ್ ಸಿಕ್ಕಿಬಿಟ್ಟಿತು. ಕೆಲವು ಚಿರಪರಿತ ವಕೀಲರು ಅವರಿಬ್ಬರನ್ನು ಬೇರೆ ಬೇರೆ ಆಗಿಸಿಬಿಟ್ಟರು.
ಅನಿತಾ ತಾಯಿಯಾಗುವವಳಿದ್ದಳು. ಕೆಲವು ದಿನಗಳ ಬಳಿಕ ಅವಳು ಚಿನ್ಮಯ್ ನ ಅರ್ಧಾಂಗಿನಿ ಆಗಲಿದ್ದಳು. ಅನಿತಾ ತನ್ನ ಅಮ್ಮನ ಆಶೀರ್ವಾದ ಪಡೆದುಕೊಂಡಿದ್ದಳು.
ಅತ್ತ ಗೀತಾ ಕೂಡ ಮಿಥುನ್ ಗೆ ಅಹಂಕಾರ, ದುಷ್ಟಬುದ್ಧಿಗೆ ಗುಡ್ ಬೈ ಹೇಳಿ ಅವನಿಂದ ದೂರವಾಗಿ ಖಾಯಂ ಆಗಿ ಗೋವಾಕ್ಕೆ ಹೊರಟುಹೋದಳು.
ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಅನಿತಾ ಮನಸ್ಸಿನಲ್ಲಿ ಏನೋ ನಿರ್ಧರಿಸಿ, ಚಿನ್ಮಯ್ ಹಾಗೂ ಮಗ ಅರ್ಜುನ್ ಜೊತೆ ಮಿಥುನ್ ನ ಮನೆಗೆ ಬಂದಳು. ಆ ದಿನ ಮಿಥುನ್ ಗೆ ಹೆಣ್ಣು ಕೊಡಲೆಂದು ಹೆಣ್ಣಿನ ಮನೆಯವರು ಬರುವ ಸುದ್ದಿ ಅವಳಿಗೆ ಹೇಗೋ ಗೊತ್ತಾಗಿತ್ತು. ಅವಳು ಅವನ ಮನೆಗೆ ಹೋಗಲು ಅದೇ ಸಮಯ ಆಯ್ಕೆ ಮಾಡಿಕೊಂಡಿದ್ದಳು.
ತನ್ನ ಮನೆಗೆ ಆಕಸ್ಮಿಕವಾಗಿ ಈ ಮೂವರ ಆಗಮನ ಮಿಥುನ್ ಗೆ ಅಚ್ಚರಿ ಆಘಾತ ಎರಡೂ ಒಟ್ಟಿಗೆ ಉಂಟು ಮಾಡಿತ್ತು.
“ನೀನೇಕೆ ಇಲ್ಲಿಗೆ ಬಂದಿರುವೆ?” ಮಿಥುನ್ ಕೋಪದಿಂದ ಕೇಳಿದ.
“ಕೆಲವು ವಿಷಯಗಳು ಹೇಳದೆಯೇ ಹಾಗೆಯೇ ಬಾಕಿ ಉಳಿದಿದ್ದವು. ಅವನ್ನು ಹೇಳದೆಯೇ ಗಣಿತದ ಲೆಕ್ಕಾಚಾರ ಮುಗಿಯುವುದಿಲ್ಲ ಮಿಥುನ್,” ಎಂದು ಅನಿತಾ ಶಾಂತ ಹಾಗೂ ದೃಢ ನಿರ್ಧಾರದಿಂದ ಹೇಳಿದಳು.
ಅವಳ ಬಾಯಿಂದ ತನ್ನ ಹೆಸರು ಕೇಳಿ ಮಿಥುನ್ ಚಕಿತನಾದ.
“ನೀನ್ಯಾರು ಮಿಥುನ್? ನೀನೊಬ್ಬ ಅಹಂಕಾರಿ, ಮೋಸಗಾರ ವ್ಯಕ್ತಿ. ನಿನ್ನ ಉನ್ನತ ಹುದ್ದೆ ಕ್ಷಣಾರ್ಧದಲ್ಲಿ ಕೈಬಿಟ್ಟುಹೋದರೆ ಆಗ ನೀನು ಏನಾಗಿರ್ತಿಯಾ? ಕೆಟ್ಟ ಚಾರಿತ್ರ್ಯದ ದುಷ್ಟ ವ್ಯಕ್ತಿ!
“ನಿನಗೆ ಗೌರವಾದರೂ ಯಾಕೆ ಕೊಡಬೇಕು ಹೇಳು. ಹೆಂಡತಿಯ ಸುಖ ದುಃಖದಲ್ಲಿ ಪಾಲುದಾರಳಾಗಿರುತ್ತಾಳೆ ಎನ್ನುವ ಸಣ್ಣ ವಿಷಯ ಕೂಡ ನಿನಗೆ ಗೊತ್ತಿಲ್ಲ. ಪ್ರೀತಿಯ ಕಾಮನೆಯಿಂದ ಸಂಸಾರ ನಡೆಸಬೇಕು ಎಂಬುದು ನಿನಗೆ ಹೇಗೆ ಗೊತ್ತಾಗಬೇಕು?”
ಮಿಥುನ್ ನ ಅಹಂಕಾರ ಹಾಗೂ ಆಡಂಬರ ಅವಳನ್ನು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ. ಅವಳ ಮಾತುಗಳಿಂದ ಅವನು ಗಾಬರಿಗೊಂಡಿದ್ದ.
ಅನಿತಾ ಆಗ ಹುಡುಗಿಯ ಮನೆಯವರ ಕಡೆ ನೋಡುತ್ತಾ ಹೇಳಿದಳು, “ನೀವು ನಿಮ್ಮ ಮಗಳನ್ನು ಇವನಿಗೆ ಕೊಡುವ ಮುಂಚೆ ಒಂದು ಸಲ ಚೆನ್ನಾಗಿ ಯೋಚಿಸಿ. ಈಗ ನನ್ನ ಮಡಿಲಲ್ಲಿ ನನ್ನದೇ ಆದ ಮಗುವಿದೆ. ಆದರೆ ಮನೆಯಲ್ಲಿದ್ದಾಗ, ಬಂಜೆ ಎಂಬ ಹಣೆಪಟ್ಟಿ ತೊಟ್ಟು ಕಳಂಕಿತಳಾಗಿದ್ದೆ. ಅದೇ ಅವಮಾನದಿಂದಲೇ ಇಲ್ಲಿಂದ ಹೊರಟುಹೋಗಿದ್ದೆ. ಈಗ ನಿಮ್ಮ ಮಗಳ ಸರದಿ. ಈ ವ್ಯಕ್ತಿ ತಾನು ಪುರುಷನಾಗಿದ್ದೇನೆ ಎಂಬ ಅಹಂಕಾರದಲ್ಲಿ ಎಷ್ಟು ಮುಳುಗಿ ಹೋಗಿದ್ದಾನೆಂದರೆ, ತನ್ನ ದೌರ್ಬಲ್ಯವನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ಹೆಂಡತಿಯ ಮೇಲೆ ಆ ತಪ್ಪು ಹೊರಿಸುತ್ತ ತನ್ನನ್ನು ತಾನು ತೃಪ್ತನಾಗಿಸಿಕೊಳ್ಳುತ್ತಾನೆ.”
ಮಿಥುನ್ ಕ್ರೋಧಗೊಂಡು ಅನಿತಾಳ ಮೇಲೆ ಕೈ ಎತ್ತಲು ಹೋದ. ಆಗ ಚಿನ್ಮಯ್ ಅವನನ್ನು ತಡೆದ.
“ನೀನೆಷ್ಟು ಚಾರಿತ್ರ್ಯವಂತಳು ಅಂತ ಈಗ ಗೊತ್ತಾಗ್ತಿದೆಯಲ್ಲ…..” ಮಿಥನ್ ಆವೇಶದಿಂದ ಹೇಳಿದ.
ಚಿನ್ಮಯ್ ಅವನ ಮಾತನ್ನು ತಡೆಯುತ್ತಾ, “ಅವಳು ನನ್ನ ಮನೆಯ ಲಕ್ಷ್ಮಿ. ಮನದೊಡತಿ. ನಾವು ರಿಜಿಸ್ಟರ್ಡ್ ಮದುವೆಯಾಗಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಕೆಲವೇ ದಿನಗಳಲ್ಲಿ ಅವಳು ನನ್ನ ತಲೆಗೆ ಕಿರೀಟ ಆಗುತ್ತಾಳೆ. ಅವಳ ಬಗ್ಗೆ ಅಪ್ಪಿತಪ್ಪಿಯೂ ಕೂಡ ಕೆಟ್ಟ ಮಾತುಗಳನ್ನು ಹೇಳಬೇಡ,” ಎಂದು ಹೇಳಿದ.
ಹೊಸ ಸಂಬಂಧ ಬೆಳಸಲು ಬಂದಿದ್ದ ಹೆಣ್ಣಿನ ಕಡೆಯವರು ಸಮಯ ಸಾಧಿಸಿ ಮಿಥುನ್ ನ ಮನೆಯಿಂದ ಹೊರನಡೆದರು.
ಅನಿತಾಗೆ ಈಗ ಸಂತೃಪ್ತಿಯಾಗಿತ್ತು. ಸ್ನೇಹ, ವಿಶ್ವಾಸ ಹಾಗೂ ಪ್ರೀತಿಯ ಸಮರ್ಪಣೆ ಅವಳ ಬಳಿ ಇತ್ತು. ಅವುಗಳ ಸ್ಪರ್ಶದಿಂದ ಅವಳು ಸಂಪೂರ್ಣಳಾಗಿದ್ದಳು. ಅನಿತಾ ಸಂಪೂರ್ಣೆ!