ದೆಹಲಿಯಲ್ಲಿ ಬಹಳಷ್ಟು ಜಮೀನು ಕೇಂದ್ರ ಸರ್ಕಾರದ ವಶದಲ್ಲಿದೆ, ಇದನ್ನು ಕೆಲವು ವರ್ಷಗಳ ಹಿಂದೆ ಕೃಷಿ ನಡೆಸುವ ರೈತರಿಂದ ಕವಡೆಕಾಸಿಗೆ ಖರೀದಿಸಿತ್ತು. ಇದರಲ್ಲಿ ಬಹಳ ಜಾಗದಲ್ಲಿ ಕಮರ್ಷಿಯಲ್ ಪ್ಲಾಟ್‌ ಗಳಾಗಿವೆ, ಸಣ್ಣಪುಟ್ಟ ಉದ್ಯಮಗಳು ಶುರುವಾಗಿವೆ. ಬಹಳಷ್ಟು ಪ್ಲಾಟ್‌ ಗಳನ್ನು ಹೀಗೆ ನೀಡಲಾಗಿದೆ. ಯಾವ ಬೆಲೆಗೆ ಈ ಸೈಟ್‌ ಗಳು ಕಾರ್ಖಾನೆ, ಅಂಗಡಿ, ಮನೆಗಳಿಗೆ ನೀಡಲಾಗಿದೆಯೋ ಅದಕ್ಕಿಂತ ಎಷ್ಟೋ ಕಡಿಮೆ ಬೆಲೆಗೆ ಶಾಲೆ, ಆಸ್ಪತ್ರೆ, ಸಮಾಜಸೇವಾ ಸಂಸ್ಥೆಗಳಿಗೆ ನೀಡಲಾಗಿದೆ.

ಈ ಸೈಟ್‌ ಗಳನ್ನು ಹೀಗೆ ಅಲಾಟ್‌ ಮಾಡಿದ್ದೇನೋ ಆಯ್ತು, ಆದರೆ ಕೇಂದ್ರ ಸರ್ಕಾರದ ಡೆಲ್ಲಿ ಡೆವಲಪ್‌ ಮೆಂಟ್‌ ಅಥಾರಿಟಿ (DDA)ಅದರ ಮೇಲೆ ಈಗಲೂ 50-60 ವರ್ಷಗಳ ನಂತರ ತನ್ನದೇ ಜಾತಕ ಬಿಡಿಸಿ, ಹಿಡಿತ ಬಿಗಿ ಮಾಡಿ ಕುಳಿತಿದೆ. ಅಲ್ಲೆಲ್ಲ ಉದ್ಯಮಗಳು ನಡೆಯುತ್ತಿವೆ, ಅಂಗಡಿ ತೆರೆಯಲ್ಪಟ್ಟಿದೆ, ಜನ ವಾಸಿಸುತ್ತಿದ್ದಾರೆ, ಶಾಲೆ, ಆಸ್ಪತ್ರೆಗಳೂ ಕೆಲಸ ಮಾಡುತ್ತಿವೆ.

ಇದರ ವಿಧಾನ ಎಂದರೆ ಲೀಸ್‌ ಹೋಲ್ಡ್ ಸೈಸ್. DDA ಸಾಮಾನ್ಯ ಬಿಲ್ಡರ್ಸ್‌ ತರಹವೇ ಒಂದು ಕಾಂಟ್ರಾಕ್ಟ್ ನಲ್ಲಿ ಎಲ್ಲರಿಂದ ಸೈನ್‌ ಮಾಡಿಸಿಕೊಂಡು, ಈ ಕಾಂಟ್ರಾಕ್ಟ್ ನ್ನು ಸಬ್‌ ಲೀಸ್‌ ಹೆಸರಿನಲ್ಲಿ, ಯಾವುದೇ ಕಾಲಂ ವಿರುದ್ಧ ಕೆಲಸ ನಡೆದರೂ, ಅಾಟ್ಮೆಂಟ್‌ ಕ್ಯಾನ್ಸಲ್ ಆಗುವಂತೆ ಮಾಡಿಟ್ಟಿದೆ, ಅದು ಎಷ್ಟು ವರ್ಷಗಳ ಹಿಂದೆ ಅಲಾಟ್‌ ಆಗಿದ್ದರೂ ಈಗ ಅದು ವೆಕ್ಕಕ್ಕಿಲ್ಲ!

ದೇಶದ ಬಹುತೇಕ ಭಾಗಗಳಲ್ಲಿ ಹೀಗೇ ನಡೆದಿದೆ. ಲೀಸ್‌ ಹೋಲ್ಡರ್‌ ಸೈಟ್‌ ನಲ್ಲಿ ಜನ ಅಥವಾ ಕಂಪನಿ ಯಾ ಸಂಸ್ಥೆ ತಾವೇ ಮಾಲೀಕರಾಗಲು ಸಾಧ್ಯವಿಲ್ಲ. ನಿಯಮಗಳನ್ನು ಮೀರಿದಾಗ, ಪರೋಕ್ಷವಾಗಿ ಸರ್ಕಾರದ ವಿರುದ್ಧ ಮಾತನಾಡಿದಾಗ ಆಗುವಂತೆ, ಈ ಕಾಲಂ ಬಳಸಲಾಗಿದೆ. ಬಹಳಷ್ಟು ಜನ ಈ ಆತಂಕದಿಂದ ಚಿಂತೆಗೊಳಗಾಗುತ್ತಾರೆ.

ಎಲ್ಲಿಯವರೆಗೆ ಲೀಸ್‌ ಹೋಲ್ಡರ್‌ ತನ್ನ ಸೈಟ್‌ಅಲಾಟೀ ಸಬ್‌ ಲೀಸ್‌ ನಿಂದ ಬಂಧಿಸಲ್ಪಟ್ಟಿರುತ್ತಾನೋ, ಅಲ್ಲಿ ಕೊಳ್ಳುವವರು, ತನಗೆ ಪಿತ್ರಾರ್ಜಿತದಿಂದ ಬಂದಂತೆ, ಅಣ್ಣತಮ್ಮಂದಿರ ವ್ಯಾಜ್ಯದ ವಿವಾದದಲ್ಲಿ ಅಲಾಟ್‌ ಮಾಡುವಂತೆ ಸರ್ಕಾರಿ ವಿಭಾಗ, ತನ್ನ ಬಾಲ ಆಡಿಸುತ್ತಿರುತ್ತದೆ. 40-50 ವರ್ಷಗಳ ಹಳೆಯ ಷರತ್ತುಗಳು, ಇಂದು ಎಳ್ಳಷ್ಟೂ ಪ್ರಾಕ್ಟಿಕಲ್ ಅನ್ವಯಕ್ಕೆ ಬಾರವು! ನಗರದ ಸ್ಥಿತಿಗತಿ ಬದಲಾಗಿದೆ, ಕೆಲಸ ಮಾಡುವ ವಿಧಾನ ಬದಲಾಗಿದೆ, ಲೀಸ್‌ ನೀಡುವವರು ಇಂದೂ ಹಳೆಯ ಷರತ್ತುಗಳನ್ನೇ ಮುಂದೊಡ್ಡುತ್ತಾರೆ.

ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ಇದೇ ಲೀಸ್‌ ನ ಷರತ್ತುಗಳ ಆಧಾರದಿಂದ ದೆಹಲಿಯ ಸಾಕಷ್ಟು ವ್ಯಾಪಾರ ವಹಿವಾಟು ನೆಲ ಕಚ್ಚಿತು, ಸರ್ಕಾರಿ ಹೆಸರಿನಡಿ ಅಲಾಟ್‌ ಆದ ಸೈಟ್‌ ನಲ್ಲಿ, ಕಮರ್ಷಿಯಲ್ ಕೆಲಸ ಆಗದು ಅಂತ. ಬಹುಶಃ ಈ ಸಿದ್ಧಾಂತ 40-50 ವರ್ಷಗಳ ಹಿಂದೆ ಸರಿ ಇತ್ತೇನೋ….. ಇಂದು ಎಲ್ಲಾ ಕಡೆ ಅಂಗಡಿ ಮುಂಗಟ್ಟುಗಳ ತುರ್ತು ಅಗತ್ಯ ಇರುವಾಗ, ಚಾಂದನೀ ಚೌಕ್‌ ನ ಸರ್ಕಾರಿ ಜಾಗಗಳೂ ಅಂಗಡಿಗಳಾಗಿ ಮಾರ್ಪಟ್ಟಿರುವಾಗ, ಅದರಲ್ಲೂ ಖಾನ್‌ ಮಾರ್ಕೆಟ್‌ ನಂಥ ಪ್ರಮುಖ ಸ್ಥಳಗಳಲ್ಲಿ…… ಅನೇಕ ನಗರಗಳಲ್ಲಿ ಹೀಗೇ ಆಗುತ್ತಿದೆ. ಲಖ್ನೌನ ಹಜರತ್‌ ಗಂಜ್‌ ಮೇಲ್ಭಾಗದ ಮಹಡಿಗಳಲ್ಲಿ ಮನೆಗಳೆಲ್ಲ ಮಂಗಮಾಯ! ಜಯಪುರದ `ಸೀ’ ಸ್ಕೀಂನಲ್ಲಿ ದೊಡ್ಡ ಸರ್ಕಾರಿ ಕಟ್ಟಡಗಳ ಜಾಗಗಳಲ್ಲೆಲ್ಲ ಈಗ ಮಾಲ್ ‌ಗಳು ರಾರಾಜಿಸುತ್ತಿವೆ!

ಸರ್ಕಾರಿ ಕಛೇರಿಗಳಂತೂ ಈಗಲೂ ಹಳೆಯ ಹಕ್ಕನ್ನು ಬಿಟ್ಟುಕೊಡಲು ತಯಾರಿಲ್ಲ. ಏಕೆಂದರೆ ಇದು ಅವರಿಗೆ ಮೇಲು ಸಂಪಾದನೆಗೆ ಕರೆಯುವ ಹಸು! ದೆಹಲಿಯ ಒಂದು ಆಸ್ಪತ್ರೆಯಲ್ಲಿ 1995ರಲ್ಲಿ ಅಲಾಟ್ಮೆಂಟ್‌ ಕ್ಯಾನ್ಸಲ್ ಆಯಿತು, ಅಲ್ಲಿ ಆಸ್ಪತ್ರೆ ಶುರು ಮಾಡಬೇಕಿದ್ದವರು ಅದನ್ನು ಇತರರಿಗೆ ಮಾರಿದ್ದರು. ಆದರೆ ಆಸ್ಪತ್ರೆಯ ಸಂಸ್ಥೆ ಆಡಳಿತವರ್ಗ ಅದೇ ಆಗಿತ್ತು, ಕೇವಲ ಸದಸ್ಯರು ಬದಲಾಗಿದ್ದರು. ಟ್ರೈಯಲ್ ಕೋರ್ಟ್‌ DDA ಪರ ವಹಿಸಿತು, ಆದರೆ ಹೈ ಕೋರ್ಟ್‌ ಈ ಪ್ರಕರಣವನ್ನು ರದ್ದುಪಡಿಸಿ, ಮೆಂಬರ್‌ ಬದಲಾವಣೆ, ಮಾರಾಟ ಮಾಡುವಂತಿಲ್ಲ ಎಂದಿತು.

ಅಸಲಿಗೆ ಸರ್ಕಾರ ಮಾಮೂಲಿ ಜನತೆಯ ಆಗುಹೋಗುಗಳಲ್ಲಿ ಹೀಗೆಲ್ಲ ಅಡ್ಡಿ ಆತಂಕ ತರಬಾರದು. ಇದರಿಂದ ಜನತೆಗೆ ಲಾಸ್ ತಪ್ಪಿದ್ದಲ್ಲ. ಸರ್ಕಾರ ಯಾವುದೋ ನಿಯಮಗಳ ಬಗ್ಗೆ ಹೇಳಿ, ತನಗೆ ಬೇಕಾದಂತೆ ಹಣ ವಸೂಲಿ ಮಾಡಲಾಗದು.

ದೇಶದ ಎಲ್ಲಾ ಕೃಷಿ ಭೂಮಿಯನ್ನು ಸರ್ಕಾರ ಪರೋಕ್ಷ ರೂಪದಲ್ಲಿ ತನ್ನ ಕಪಿಮುಷ್ಟಿಗೆ ತೆಗೆದುಕೊಂಡಿದೆ. ಕೇವಲ ಅದನ್ನು ಕೃಷಿ ಭೂಮಿ ಎಂದು ಘೋಷಿಸಿದೆ ಅಷ್ಟೆ. ಅದರ ಮೇಲೆ ಮನೆ ಕಟ್ಟುವಂತಿಲ್ಲ, ಉದ್ಯಮ ನಡೆಸುವಂತಿಲ್ಲ. ಸರ್ಕಾರಕ್ಕೆ ದೊಡ್ಡ ಮೊತ್ತ ಕಕ್ಕುವವರೆಗೂ ಜನತೆ ಏನೂ ಮಾಡುವಂತಿಲ್ಲ. ಹಾಗೆಂದು ಸರ್ಕಾರಕ್ಕೆ ಕೃಷಿ ಪ್ರಧಾನ ಜಮೀನನ್ನು ಉಳಿಸಿಕೊಳ್ಳುವ ಉಮೇದೂ ಇಲ್ಲ, ಅದಕ್ಕೆ ಮೇಲು ಸಂಪಾದನೆ ಬೇಕಷ್ಟೆ. ಚೇಂಜ್‌ ಇನ್‌ ಲ್ಯಾಂಡ್‌ ಯೂಸ್‌ ನ ಹೆಸರಲ್ಲಿ ಲಕ್ಷಕೋಟಿ ವಸೂಲಿ ಮಾಡಬೇಕೆಂಬುದೇ ಅದರ ಯೋಜನೆ. ಹಣ ಮಾಡುವುದೇ ಪ್ರಧಾನವಾಗಿದ್ದರೆ, 10-20 ವರ್ಷಗಳ ಹಳೆಯ ನಿಯಮಗಳ ಗೊಡವೆ ಏಕೆ?

ಇದೀಗ ಹೆಣ್ಣುಮಕ್ಕಳಿಗೂ ಪಿತ್ರಾರ್ಜಿತ ಜಮೀನು ಸಿಗತೊಡಗಿದೆ. ಅವರುಗಳೂ ಈ ಸರ್ಕಾರಿ ಕಛೇರಿಗಳ ಜೊತೆ ಹೋರಾಡಬೇಕಿದೆ. ಈ ಹೆಂಗಸರನ್ನು ಅನಗತ್ಯವಾಗಿ ಶೋಷಿಸಲಾಗುತ್ತಿದೆ. ಬಗೆಬಗೆಯ ದಲ್ಲಾಳಿಗಳು ಹುಟ್ಟಿಕೊಂಡಿದ್ದಾರೆ. ಪ್ರತಿಯೊಂದು ಬಗೆಯ ಟ್ರಾಸ್ ಫರ್‌ ಗೂ ಅಡ್ಡಿಪಡಿಸಲಾಗುತ್ತಿದೆ. ಹೆಣ್ಣುಮಕ್ಕಳಿಗೆ ತಂದೆಯಿಂದ ಆಸ್ತಿ ಪಡೆದುಕೊಳ್ಳುವಷ್ಟರಲ್ಲಿ ಸಾಕಪ್ಪ ಎಂದು ಹೈರಾಣಾಗುತ್ತಿದ್ದಾರೆ. ಇದು ನಿಜಕ್ಕೂ ಅವರ ಪಾಲಿನ ಬಿಸಿ ತುಪ್ಪವಾಗಿದೆ. ಸರ್ಕಾರದ ನಿಯಮ ಹಾವಾಗಿ ಕೊರಳಿಗೆ ಸುತ್ತಿಕೊಂಡಿದೆ.

ಶಿಕ್ಷಣ ಮುಖ್ಯವೇ ಹೊರತು ಪೂಜೆ ಪುನಸ್ಕಾರ ಅಲ್ಲ

ಮದುವೆ ನಂತರ ಸೊಸೆಗೆ ಅತ್ತೆಮನೆಯಲ್ಲಿ ಉಸಿರುಗಟ್ಟಿದ ವಾತಾವರಣ ಎದುರಾದರೆ, ಆ ಮಗರಾಯ ಏನೂ ಮಾಡಲಾಗದೆ ದಾರಿ ಕಾಣದಿದ್ದರೆ, ಆ ಹೊಸ ಸೊಸೆ ಅಲ್ಲಿ ರೋಗ ಪೀಡಿತಳಾಗದೆ ಬೇರೆ ದಾರಿ ಇಲ್ಲ. ಯಾವ ಮನೆಗಳಲ್ಲಿ ಪತಿ ಪತ್ನಿಯತ್ತ ಹೀಗೆ ಒರಟಾಗಿ ನಡೆದುಕೊಳ್ಳುತ್ತಾನೋ, ಅಲ್ಲಿ ಪತ್ನಿ ಬರೀ ಟೆನ್ಶನ್‌ ನಲ್ಲೇ ಉಳಿಯುತ್ತಾಳೆ, ಅವಳು ಮತ್ತೆ ಮತ್ತೆ ವೈದ್ಯರ ಬಳಿ ತಪಾಸಣೆಗೆ ಹೋಗಬೇಕಾಗುತ್ತದೆ, ಗಂಡ ಹೆಂಡಿರ ಜಗಳ ತಪ್ಪಿದ್ದಲ್ಲ, ಬೇರಾವ ದಾರಿಯೂ ಕಾಣದೇ ಪತ್ನಿಗೆ ಮನೆಯೇ ಜೈಲಾಗುತ್ತದೆ.ಈ ಸ್ಥಿತಿ ನಿಜಕ್ಕೂ ಅಪಾಯಕಾರಿ. ಕಡಿಮೆ ಸಂಖ್ಯೆಯ ಹೆಂಗಸರು ಈ ತರಹದ ಉಸಿರುಗಟ್ಟುವಿಕೆ ತೋರುತ್ತಾರೆ, ಆದರೆ ಈ ಸಮಸ್ಯೆ ಇಡೀ ದೇಶದಲ್ಲಿ ಎಷ್ಟು ಮಂದಿಗಿರಬಹುದೋ…. ಹೇಳಲಾಗದು. ಇದಕ್ಕೆ ದೊಡ್ಡ ಕಾರಣ ಎಂದರೆ, ಕುಟುಂಬ ಚಿಕ್ಕದಾದಾಗಿನಿಂದ, ಮಗುವಿಗೆ ಸಂಬಂಧದ ಹೆಸರೂ ಗೊತ್ತಾಗುವುದಿಲ್ಲ. ಚಿಕ್ಕಪ್ಪ, ಮಾಮ, ಸೋದರತ್ತೆ, ಚಿಕ್ಕಮ್ಮ, ದೊಡ್ಡಮ್ಮ….. ಯಾರಿಗೇ ಯಾರೂ ಇಲ್ಲದೆ ಅನಾಥರಾಗಿದ್ದಾರೆ. ಇಂದಿನ ಆಧುನಿಕ ಸೊಸೆಗಂತೂ ಕಿಟಿ ಪಾರ್ಟಿ ಫ್ರೆಂಡ್ಸ್ ಬಿಟ್ಟರೆ ಬೇರೆ ಸಂಪರ್ಕವೇ ಇಲ್ಲ. ಸೋಶಿಯಲ್ ಮೀಡಿಯಾ ಇದ್ದರೂ, ಅದರಲ್ಲಿ ಮನಸ್ಸಿನ ಸಂಕಟ ತೋಡಿಕೊಳ್ಳಲಾಗದು. ಯಾವ ಸಮಸ್ಯೆಗೆ ಎಂಥ ಪರಿಹಾರ ಹುಡುಕುವುದೋ ತಿಳಿಯದೆ ತಿಣುಕಾಡುತ್ತಾರೆ.

ಈಗ ಬಾಡಿ ಶೇಪಿಂಗ್‌ ಗಾಗಿ ಜಿಮ್ ಇದೆ, ಮುಖದ ಕಾಂತಿಗಾಗಿ ಪಾರ್ಲರ್‌ ಇದೆ, ಪ್ರೌಢ ವ್ಯಕ್ತಿತ್ವಕ್ಕೆ ಚಿರಯೌವನ ದೊರಕಿಸಿಕೊಡಲು ಕಾಸ್ಮೆಟಿಕ್‌ ಸರ್ಜನ್ಸ್ ಇದ್ದಾರೆ. ಆದರೆ ಮಾನಸಿಕ ಗಾಯ ವಾಸಿ ಮಾಡಲಿರುವ ಕೆಲವೇ ತಜ್ಞರನ್ನು ಬಿಟ್ಟರೆ, ಆಪ್ತರು ಅಂತ ಯಾರೂ ಇಲ್ಲ. ಅವರೂ ಸಹ ನಿಮ್ಮ ಮಾತು ಕೇಳಿಸಿಕೊಳ್ಳಬಹುದು, ಆದರೆ ಸೂಕ್ತ ಪರಿಹಾರ, ಸಲಹೆ, ಸಿದ್ಧ ಸೂತ್ರ….. ಉಹ್ಞೂಂ, ಇದು ಅನುಭವೀ ವ್ಯಕ್ತಿಗಳಿಂದಲೇ ಬರಬೇಕು.

ಜೀವನದ ಪಾಠವನ್ನು ನಾವು ಬಾಲ್ಯದಿಂದಲೇ ಕಲಿಯುತ್ತೇವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇರೆಯವರಿಗಿಂತ ಬೆಟರ್‌ ಆಗುವ ದಿಸೆಯಲ್ಲಿ ಬೇರೆಯವರಿಂದ ಕಲಿಯುವ ಪರಿಪಾಠವೇ ಮರೆಯಾಗುತ್ತಿದೆ. ತಾಯಿ ತಂದೆ ಅಂದ್ರೆ ಕೇವಲ ಹಣ, ಸೌಲಭ್ಯ ಒದಗಿಸುವ ವರ್ಲ್ಡ್ ಮಾತ್ರ! ಗೆಳೆಯರ ಸಹವಾಸ ಕೇಳುವುದೇ ಬೇಡ. ಅವರಿಗೂ ಸಹ ಏನು ಮಾಡಬೇಕು ಅಂತ ಗೊತ್ತಿದ್ದರೆ ತಾನೇ? ಏಕೆಂದರೆ ಕಳೆದ  60-70 ವರ್ಷಗಳಲ್ಲಿ ಜೀವನ ಶಿಕ್ಷಣ ಎಂಬ ಹೆಸರಲ್ಲಿ ಕೇವಲ ಪೂಜೆ ಪುನಸ್ಕಾರ ಮಾತ್ರ ಕಲಿಸಲಾಗುತ್ತಿದೆ. ಜನ ಪ್ರವಾಸದ ಹೆಸರಲ್ಲಿ ಕೇವಲ ಪುಣ್ಯಕ್ಷೇತ್ರಗಳಿಗೆ ಹೋಗುವುದೇ ಆಯ್ತು.

ಜೀವನ ಎಂಬುದು ಲೀಗೋ ಸೆಟ್‌ ತರಹ ಇರುತ್ತದೆ. ಇದರಲ್ಲಿ ಸಾವಿರಾರು ಚೂರುಗಳನ್ನು ಅಂಟಿಸಲಾಗಿರುತ್ತದೆ. ಇದರ ಸ್ಟೆಬಿಲಿಟಿಯನ್ನು ಯಾವ ಕೆಟ್ಟ ತುಂಡಾದರೂ ಹಾಳು ಮಾಡಬಹುದು. ಇದರ ಬಗ್ಗೆ ಮೊದಲೇ ಮಾಹಿತಿ ಗೊತ್ತಿರಬೇಕು. ಆದರೆ ಈ ಕುರಿತ ಶಿಕ್ಷಣ ಪುಸ್ತಕಗಳಲ್ಲೂ ಇಲ್ಲ, ಸಿನಿಮಾಗಳಲ್ಲೂ ಇಲ್ಲ, ಅಕ್ಕಪಕ್ಕ ಅಥವಾ ನೆಂಟರ ಬಳಿಯೂ ಇಲ್ಲ, ಫ್ರೆಂಡ್ಸ್ ಸಹ ಮತ್ಸರ ಪಡುವವರೇ ಆಗಿರುತ್ತಾರೆ. ಏನು ಮಾಡೋದು? ಸುಮ್ಮನೆ ಸಹಿಸುತ್ತಾ ಈಗಿನ ಪರಿಣಾಮ ಎದುರಿಸುದೊಂದೇ ದಾರಿ!

ದೇಶದ ಉತ್ಪಾದನೆ ತಗ್ಗುತ್ತಿದೆ. ನಾವು ವಿಭಜಿತರಾಗುತ್ತಲೇ ಇದ್ದೇವೆ. ಕೋರ್ಟುಗಳಲ್ಲಿ ಕೇಸುಗಳು ಹೆಚ್ಚುತ್ತಿವೆ. ಪೊಲೀಸರ ತಲೆಬಾಲವಿಲ್ಲದ ಪ್ರಕರಣಗಳಿಂದಾಗಿ ಪೂನಾ ವಾಲಾ ಮತ್ತು ಶ್ರದ್ಧಾರಂಥ ಕೇಸುಗಳು ಎದುರಾಗುತ್ತವೆ. ಶ್ರದ್ಧಾಳ ಜೊತೆಗೆ ನಡೆದಂತೆ ಯಾವ ಪತ್ನಿಗಾದರೂ ಆಗಬಹುದು. ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಹೆಚ್ಚಿನ ಮಂದಿ ಗಾಯ ಮರೆಸಿ ಓಡಾಡುತ್ತಾರೆ. ಏಕೆಂದರೆ ಜನ, ಸಮಾಜ, ಸರ್ಕಾರ ಎಲ್ಲವೂ ಈ ಗಾಯವನ್ನು ಲೇವಡಿ ಮಾಡುತ್ತಾರೆಯೇ ವಿನಾ ಮುಲಾಮು ಹಚ್ಚಲ್ಲ. ಗಾಯ ವಾಸಿಯಾಗುವಂಥ ಕ್ರಮದ ಬಗ್ಗೆ ಗೊತ್ತೇ ಇಲ್ಲ.

lease-land-2

ಇದೇ ಏನು ಅಚೇ ದಿನ್‌?

ಭಾರತದಲ್ಲಿ ಆರ್ಗ್ಯಾನಿಕ್‌ ಆಯುರ್ವೇದಿಕ್‌ ಸಾಂಸ್ಕಾರಿಕ ಆಹಾರದ ವಕಾಲತ್ತು ಮಾಡುವ ಸರ್ಕಾರ, ವಿದೇಶಗಳಲ್ಲಿ ಮಾತನಾಡಬೇಕಾದಾಗ ಈ ಎಲ್ಲಾ ವಿಷಯ ಮರೆತುಬಿಡುತ್ತದೆ. ಆಗ ರಾಸಾಯನಿಕ ಗೊಬ್ಬರ, ಪೆಸ್ಟಿಸೈಡ್‌ ಗಳ ವಿಷಯ ಹೊರಬರುತ್ತದೆ. ನರೇಂದ್ರ ಮೋದಿ ಇತ್ತೀಚೆಗೆ ಬಾಲಿಯಲ್ಲಿ ನಡೆದ 20 ಸಮ್ಮೇಳನದಲ್ಲಿ ಮುಕ್ತವಾಗಿ ಹೇಳಿದ್ದೆಂದರೆ, ರಷ್ಯಾ ಯೂಕ್ರೇನಿನ ಯುದ್ಧ ಮುಗಿಯದಿದ್ದರೆ, ಕೆಮಿಕಲ್ ಫರ್ಟಿಲೈಸರ್‌, ಪೆಸ್ಟಿಸೈಡ್‌, ಇನ್‌ ಸೆಕ್ಟಿಸೈಡ್‌ ಗಳ ಕೊರತೆ ಕಾಡುತ್ತದೆ, ಆಗ ವಿಶ್ವದೆಲ್ಲೆಡೆ ಆಹಾರದ ಕೊರತೆ ತಪ್ಪದು ಅಂತ.

ಆದರೆ ಅವರೇಕೆ ಭಾರತೀಯ ಋಷಿಮುನಿಗಳ ಮಂತ್ರ ಪಠಣೆಯಿಂದ, ಹವನ ಹೋಮಗಳಿಂದ ಯೂಕ್ರೇನ್‌ ರಷ್ಯಾ ನೀಡುತ್ತಿರುವ ಗೋಧಿ ಹಾಗೂ ಈ ರಾಸಾಯನಿಕಗಳ ಕೊರತೆ ನೀಗುತ್ತದೆ ಎಂದು ಹೇಳಲಿಲ್ಲವೇ ತಿಳಿಯದು. ಇವರ ಮಂತ್ರಿ ಮಂಡಲದವರು ವೇದಿಕೆಗಳಲ್ಲಿ ಗೋಮಾತೆ ಕಾರ್ಬನ್‌ ಡೈ ಆಕ್ಸೈಡ್‌ ನ್ನು ಆಮ್ಲಜನಕವಾಗಿ ಬದಲಿಸುತ್ತದೆ ಅನ್ನುತ್ತಾರೆ. ಹಾಗಿರುವಾಗ ಗೋ ಮೂತ್ರ ಸಗಣಿ ಬಳಸಿ ಈ ಸಮಸ್ಯೆ ಬಗೆಹರಿಸಬಾರದೇಕೆ? ವಿಶ್ವವಿಡೀ 20 ದೊಡ್ಡ ದೇಶಗಳು ಒಂದೆಡೆ ಕೂಡಿರುವಾಗ ಅಲ್ಲಿ ಗೋಮಾತೆಯ ಮಹಿಮೆ ಹಾಡದಿರಾದೀತೇ?

ರಷ್ಯಾ ಯೂಕ್ರೇನ್‌ ಯುದ್ಧ, ರಷ್ಯಾದ ಎಕ್ಸ್ ಪೆನ್ಶನಿಸ್ಟ್ ಹಂತದ ಭಾಗ. ಅದು ಸೋವಿಯೆಟ್‌ ಸಂಘದ ಕನಸನ್ನು ನನಸಾಗಿಸಲು ನೋಡುತ್ತಿದೆ. ಈ ನಿಟ್ಟಿನಲ್ಲಿ ಒಂದು ಸುಂದರ, ಸುಖವೇ, ಸಮೃದ್ಧ ಯೂಕ್ರೇನ್‌ ದೇಶವನ್ನು ತನ್ನ ತೋಪುಗಳಿಂದ ಉಡಾಯಿಸಿ ಸುಡುಗಾಡು ಮಾಡಿದೆ. ಇವತ್ತಿಗೂ ಭಾರತ ಸರ್ಕಾರ ರಷ್ಯಾದ ಈ ಕ್ರಮವನ್ನು ಖುಲ್ಲಂಖುಲ್ಲ ಖಂಡಿಸುತ್ತಿಲ್ಲ. ಮತ್ತೊಂದೆಡೆ ಚೀನಾ ಸೈನಿಕರು ಭಾರತಕ್ಕೆ ನುಗ್ಗಿದರೆ, ವಿಶ್ವದ ಇತರ ದೇಶ ತನ್ನ ನೆರವಿಗೆ ಬರಬೇಕು ಎನ್ನುತ್ತದೆ.

ಇಲ್ಲಿ ಪ್ರಕರಣ ಗೋಧಿ ರಾಸಾಯನಿಕಗಳದ್ದಲ್ಲ, ಒಂದು ದೇಶ ಒಂದೇ ಪಾಲಿಸಿ ಇಟ್ಟುಕೊಳ್ಳದಿದ್ದರೆ, ಚುನಾವಣೆಯ ಭರವಸೆಯ ಭಾಷಣದಂತೆ ಬೀಗುತ್ತಾ, ಹೌದಪ್ಪನ ಚಾವಡೀಲಿ ಹೌದು, ಇಲ್ಲಪ್ಪನ ಚಾವಡೀಲಿ ಇಲ್ಲ ಅಂದರೆ, ನಮ್ಮದು ಅತಿ ಜನಸಂಖ್ಯೆಯ ರಾಷ್ಟ್ರ ಎಂಬ ಕಾರಣಕ್ಕೆ ಬೇರೆಯವರು ನಮ್ಮ ಮಾತು ಕೇಳುವುದಿಲ್ಲ.

ಪ್ರಧಾನಿಯವರ ಈ ಮಾತು, ಅಂದ್ರೆ ರಾಸಾಯನಿಕಗಳ ಕೊರತೆಯಿಂದ ಇಡೀ ವಿಶ್ವದಲ್ಲಿ ಆಹಾರದ ಕೊರತೆ ಕಾಡುತ್ತದೆ ಅಂದರೆ, ಅದು ಎಲ್ಲರನ್ನೂ ಭಯಪಡಿಸುವಂತಿದೆ. ದೇಶದ ಪ್ರತಿ ಗೃಹಿಣಿಯೂ ಇಂದಿನ ಗಗನಕ್ಕೇರುತ್ತಿರುವ ಅಕ್ಕಿಗೋಧಿ ಬೆಲೆಯಿಂದ ಹೈರಾಣಾಗಿದ್ದಾಳೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಬೆಲೆ ತುಸು ಹೆಚ್ಚಿದರೂ, ಭಾರತದ ಲಾಭಬಡುಕರು ಬೇಕೆಂದೇ ಇದರ ಬೆಲೆ 10 ಪಟ್ಟು ಹೆಚ್ಚಿಸುತ್ತಾರೆ. ಇದು ಕೇವಲ ಶ್ರೀಮಂತರ ಪಾಲಾಗುತ್ತದೆಯೇ ಹೊರತು ಶ್ರಮಿಸುವ ರೈತನಿಗೆ ಏನೂ ಸಿಕ್ಕದು. ಮಧ್ಯಮ ವರ್ಗದ ಜನತೆ ಇನ್ನಷ್ಟು ನರಳುತ್ತಾರೆ, ಅಚೇ ದಿನ್‌ ಬರುವ ವಿಚಾರವೇ ಇಲ್ಲ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ