ರಾಜ್ಯದಲ್ಲಿನ ಕನ್ನಡಿಗರು ಕನ್ನಡವನ್ನು ಉಳಿಸಿಕೊಳ್ಳುವ ಹಾಗೂ ಬೆಳೆಸುವ ಹೋರಾಟ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ತಪ್ಪು ನಿರ್ಧಾರ ಕೈಗೊಂಡಿದೆ ಅಥವಾ ಈ ರೀತಿಯ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಅಗತ್ಯವೇ ಇರಲಿಲ್ಲ ಎಂದು ನಟಿ ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಈ ಕುರಿತು ಮಾತನಾಡಿದ್ದಾರೆ. ಕಳೆದ ಬಾರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಮೂಲಕ ರಮ್ಯಾ ಟೀಕೆಗೆ ಒಳಗಾಗಿದ್ದರು.
ಇದೀಗ ಮೈಸೂರು ಸ್ಯಾಂಡಲ್ ಸೋಪ್ನ ವಿಚಾರದಲ್ಲಿ ಮತ್ತೊಮ್ಮೆ ಮಾತನಾಡಿರುವ ರಮ್ಯಾ, ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ನ ರಾಯಭಾರಿಯಾಗಿ ಆಯ್ಕೆ ಮಾಡುವ ಅವಶ್ಯಕತೆ ಇರಲಿಲ್ಲ. ಇದು ಕನ್ನಡಿಗರ ಹಣ ಪೋಲು ಮಾಡುವ ನಿರ್ಧಾರ ಎಂದು ಇದಕ್ಕೂ ಮೊದಲು ಅಭಿಪ್ರಾಯಪಟ್ಟಿದ್ದರು.
ಇದೀಗ ಮತ್ತೊಮ್ಮೆ ಪೋಸ್ಟ್ ಮಾಡಿರುವ ರಮ್ಯಾ, KSDL ಅನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಶ್ಲಾಘಿಸುತ್ತೇನೆ. ಆದರೆ ಇದನ್ನು ಕಾರ್ಯಗತಗೊಳಿಸಲು ಆಯ್ಕೆ ಮಾಡಿಕೊಂಡಿರುವ ವಿಧಾನ ಕೇವಲ ನಾಮಕಾವಸ್ತೆಯಂತೆ ಕಾಣುತ್ತದೆ ಎಂದಿದ್ದಾರೆ.ವ್ಯವಹಾರದ ದೃಷ್ಟಿಕೋನದಿಂದ ನೋಡಿದರೂ, ವಿಶೇಷವಾಗಿ ಕಂಪನಿಯು ಸಂಕಷ್ಟದಲ್ಲಿರುವಾಗ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಮೈಸೂರು ಸ್ಯಾಂಡಲ್ ಸೋಪ್ ಐಕಾನಿಕ್ ಬ್ರ್ಯಾಂಡ್. ದೊಡ್ಡ ಪರಂಪರೆಯನ್ನು ಹೊಂದಿದ್ದರೂ ಅದಕ್ಕೆ ಬ್ರಾಂಡ್ ಅಂಬಾಸಿಡರ್ ಅಗತ್ಯವಿಲ್ಲ ಅಮುಲ್, ಆಪಲ್, ಡವ್, ಅಮೆಜಾನ್ಗಳಂತೆಯೇ ನಮ್ಮ ಮೈಸೂರು ಸ್ಯಾಂಡಲ್ ಸೋಪ್ ಮನೆಮಾತಾಗಿದೆ. ಉತ್ತರ ಭಾರತೀಯ ಗ್ರಾಹಕರ ಮಾರುಕಟ್ಟೆಯನ್ನು ಗುರಿಯಾಗಿಸಲು ಕನ್ನಡೇತರರನ್ನು ಬ್ರಾಂಡ್ ರಾಯಭಾರಿಯಾಗಿ ತೆಗೆದುಕೊಳ್ಳುವ ಮೂಲಕ ಅವರು ತನ್ನದೇ ಆದ ಜನರನ್ನು, ಅದರ ಪ್ರಮುಖ ನಿಷ್ಠಾವಂತ ಗ್ರಾಹಕ ನೆಲೆಯನ್ನು – ಕನ್ನಡಿಗನನ್ನು ದೂರವಿಟ್ಟಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ರಮ್ಯಾ ಕಟುವಾಗಿ ಟೀಕಿಸಿದ್ದಾರೆ.
ನಾವು ನಮ್ಮ ಕನ್ನಡ ಹೆಮ್ಮೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಸಮಯದಲ್ಲಿ ಸರ್ಕಾರದ ಈ ನಿರ್ಧಾರವು ನಮ್ಮ ಹೋರಾಟಕ್ಕೆ ಎದುರಾದ ಹಿನ್ನಡೆ ಅಂತಲೇ ಭಾವಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಮಹಿಳೆಯರು ಶತಮಾನಗಳಿಂದ ಮತದಾನದ ಹಕ್ಕುಗಳಿಂದ ಹಿಡಿದು ಅವಾಸ್ತವಿಕ ಸೌಂದರ್ಯ ಮಾನದಂಡಗಳವರೆಗೆ, ಚರ್ಮದ ಆರೈಕೆಯವರೆಗೆ, ಸಮಾನ ವೇತನದವರೆಗೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಹೋರಾಡಿದ್ದಾರೆ. ಇಲ್ಲಿ ನಮಗೆ ಇನ್ನೂ ಚರ್ಮದ ಬಣ್ಣದ ಬಗ್ಗೆ ಹಾಗೂ ಬೆಳ್ಳಗಿದ್ದರೆ ಮಾತ್ರ ಸೌಂದರ್ಯ ಎಂಬರ್ಥದ ಸಂದೇಶ ಸಾರುತ್ತಿದ್ದಾರೆ ಎನ್ನುವುದನ್ನು ರಮ್ಯಾ ಮಾರ್ಮಿಕವಾಗಿ ಹೇಳಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ನ ಹಿರಿಮೆ ಅದರೊಂದಿಗೆ ಜನ ಕನೆಕ್ಟ್ ಆಗಿರುವುದರೊಂದಿಗೆ ಇದೆ. ಈಗ ಬ್ರ್ಯಾಂಡ್ ಅಂಬಾಸಿಡರ್ ಆಗಿರುವವರು ಇದರಿಂದ ದೂರವಿದ್ದಾರೆ. ಕನ್ನಡ ಅಥವಾ ಕರ್ನಾಟಕದ ಐತಿಹಾಸಿಕ ಹಿನ್ನೆಲೆಯ ಒಂದು ಬ್ರ್ಯಾಂಡ್ಗೆ ಅದರ ಸಂಪರ್ಕ ಅಥವಾ ಹಿರಿಮೆಯೇ ಗೊತ್ತಿಲ್ಲದವರು ಪ್ರಚಾರ ಮಾಡಲು ನೇಮಕ ಮಾಡಿಕೊಳ್ಳಲಾಗಿದೆ ಎಂಬರ್ಥದಲ್ಲಿ ಹೇಳಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ಬೇರೆ ಯಾವುದೇ ಸೋಪ್ ಅಲ್ಲ. ಈ ವಿಚಾರದಲ್ಲಿ ಕನ್ನಡಿಗರೊಂದಿಗೆ ಸೂಕ್ಷ್ಮತೆಯಿಂದ ವ್ಯವಹರಿಸಬೇಕು ಎಂದೂ ಅವರು ಎಚ್ಚರಿಸಿದ್ದಾರೆ.