ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ರಾಜಧಾನಿ ಬೆಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್​ಪ್ರೆಸ್ ಸೇವೆ ಆರಂಭವಾಗುವ ಕನಸು ಸಾಕಾರಗೊಳ್ಳುವತ್ತ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ.

ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಲೋಮೀಟರ್ ಉದ್ದದ ಘಾಟಿ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ಜೂನ್ ಕೊನೆಯ ವಾರದಲ್ಲಿ ನಡೆಸಲು ಸಿದ್ಧತೆಗಳು ಸಾಗುತ್ತಿವೆ.

ರೈಲ್ವೆ ಸಚಿವಾಲಯದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ ಈ ಮಹತ್ವದ ಪರೀಕ್ಷೆ ಕೈಗೊಳ್ಳಲಿದ್ದು, ಅದರ ಫಲಿತಾಂಶವೇ ಬೆಂಗಳೂರು-ಮಂಗಳೂರು ವಂದೇ ಭಾರತ್ ಸೇವೆಯ ಭವಿಷ್ಯವನ್ನು ನಿರ್ಧರಿಸಲಿದೆ.

ಹಾಸನ-ಮಂಗಳೂರು ರೈಲು ಮಾರ್ಗದ ಘಾಟಿ ಪ್ರದೇಶವು ಭೌಗೋಳಿಕವಾಗಿ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ನಿರ್ದೇಶನದಂತೆ ಈ ವಿಭಾಗದಲ್ಲಿ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 30 ಕಿಲೋಮೀಟರ್‌ಗೆ ಮಿತಿಗೊಳಿಸಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಂದೇ ಭಾರತ್ ರೈಲಿಗೆ ವಿಶೇಷವಾದ ಸ್ವಯಂಚಾಲಿತ ತುರ್ತು ಬ್ರೇಕಿಂಗ್ ಅಳವಡಿಸಲಾಗುತ್ತಿದೆ. ರೈಲು ನಿಗದಿತ ವೇಗಕ್ಕಿಂತ ಹೆಚ್ಚು ಚಲಿಸಿದ ಸಂದರ್ಭದಲ್ಲಿ ಈ ತಂತ್ರಜ್ಞಾನ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಿ ವೇಗವನ್ನು ನಿಯಂತ್ರಿಸುತ್ತದೆ.ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ರೈಲಿನ ಬೋಗಿಗಳಿಗೆ ಈ ಸುಧಾರಿತ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ ವಾರದೊಳಗೆ ವಿಶೇಷ ರೇಕ್ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ಇದೇ ಘಾಟಿ ವಿಭಾಗದಲ್ಲಿ ಐಸಿಎಫ್ ಹಾಗೂ ಎಲ್ಎಚ್‌ಬಿ ಬೋಗಿಗಳ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ಈ ಕುರಿತು ಮಾಹಿತಿ ನೀಡಿದ್ದು, ವಂದೇ ಭಾರತ್ ರೈಲಿನ ಪರೀಕ್ಷೆ ಮಾತ್ರ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.

ಜೂನ್ ಎರಡನೇ ವಾರದಿಂದ ಆರಂಭವಾದ ವಿವಿಧ ತಾಂತ್ರಿಕ ಪರೀಕ್ಷೆಗಳ ಭಾಗವಾಗಿ ಐದು ದಿನಗಳ ಕಾಲ ಐದು ಟ್ರಿಪ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ವೇಳೆ ಎಲ್ಲಾ ತಾಂತ್ರಿಕ ಮಾನದಂಡಗಳು ಹಾಗೂ ಸುರಕ್ಷತಾ ನಿಯಮಗಳು ಸಮರ್ಪಕವಾಗಿ ಪಾಲನೆಯಾಗಿರುವುದು ದೃಢಪಟ್ಟಿದೆ. ಇದೀಗ ಎಇಬಿ ವ್ಯವಸ್ಥೆ ಹೊಂದಿರುವ ವಿಶೇಷ ವಂದೇ ಭಾರತ್ ರೇಕ್ ಮೂಲಕ ಅಂತಿಮ ಹಂತದ ಪರೀಕ್ಷೆ ನಡೆಸಲಾಗುತ್ತದೆ.

ಈ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡು ಆರ್‌ಡಿಎಸ್‌ಒ ರೈಲ್ವೆ ಸಚಿವಾಲಯಕ್ಕೆ ಅನುಮೋದನೆ ನೀಡಿದರೆ, ಬೆಂಗಳೂರು ಮತ್ತು ಮಂಗಳೂರು ನಡುವಿನ ವಂದೇ ಭಾರತ್ ರೈಲು ಸೇವೆಗೆ ಇದ್ದ ಪ್ರಮುಖ ತಾಂತ್ರಿಕ ಅಡಚಣೆ ನಿವಾರಣೆಯಾಗಲಿದೆ. ಇದರಿಂದ ಕರಾವಳಿ ಕರ್ನಾಟಕದ ಜನರಿಗೆ ರಾಜಧಾನಿ ಬೆಂಗಳೂರಿನೊಂದಿಗೆ ವೇಗದ, ಸುರಕ್ಷಿತ ಮತ್ತು ಆರಾಮದಾಯಕ ಸಂಪರ್ಕ ದೊರೆಯಲಿದ್ದು, ಪ್ರವಾಸೋದ್ಯಮ ಹಾಗೂ ವ್ಯಾಪಾರ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ.

ಇದರ ಜೊತೆಗೆ, ಈ ಮಾರ್ಗದ ವಿದ್ಯುದೀಕರಣ ಕಾರ್ಯವನ್ನು ಡಿಸೆಂಬರ್ 2025ರಲ್ಲಿಯೇ ಪೂರ್ಣಗೊಳಿಸಲಾಗಿದೆ. ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆಯವರೆಗಿನ ಸುಮಾರು 400 ಕಿಲೋಮೀಟರ್ ರೈಲು ಮಾರ್ಗದ ವಿದ್ಯುದೀಕರಣವನ್ನು ರೈಟ್ಸ್ ಸಂಸ್ಥೆ ನಿರ್ವಹಿಸಿದೆ. ಇದೀಗ ಅಂತಿಮ ಹಂತದ ಪ್ರಾಯೋಗಿಕ ಪರೀಕ್ಷೆಗಳತ್ತ ಎಲ್ಲರ ಗಮನ ನೆಟ್ಟಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಕರಾವಳಿ ಭಾಗದ ಜನರಿಗೆ ಶೀಘ್ರದಲ್ಲೇ ವಂದೇ ಭಾರತ್ ರೈಲಿನ ಸೌಲಭ್ಯ ದೊರೆಯಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ