ಗೀತಾ ಕುಂದಾಪುರ ಲೇಖಕಿ
ಸತ್ವಯುತ ಸಾಹಿತ್ಯ ರಚಿಸಿರುವ ಕರಾವಳಿಯ ಅಪ್ಪಟ ಕನ್ನಡ ಪ್ರತಿಭೆ ಗೀತಾ ಕುಂದಾಪುರ ಅವರ ಸಾಹಿತ್ಯ ಕೃಷಿ ಅನನ್ಯವಾದುದು. ಈ ಕುರಿತು ಅವರೇನು ಹೇಳಬಯಸುತ್ತಾರೆ…….?
ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಇಂದು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆಧುನಿಕ ಯುಗದಲ್ಲಿ ಮಹಿಳೆ ಪುರುಷರ ಸರಿಸಮಾನವಾಗಿ ಎಲ್ಲಾ ರಂಗಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ನಿಮ್ಮೆಲ್ಲರಿಗೆ ತಿಳಿದಿರುವ ಸಂಗತಿ. ಅದರಂತೆಯೇ ಸಾಹಿತ್ಯ ರಚನೆಯಲ್ಲಿ ಕೂಡ ಇವರು ಹಿಂದೆ ಬಿದ್ದಿಲ್ಲ. ಕುಟುಂಬದ ಜವಾಬ್ದಾರಿ, ಉದ್ಯೋಗ ಎಲ್ಲದರ ನಡುವೆಯೇ ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಉತ್ತಮ ಕೃತಿಗಳ ರಚನೆಯಲ್ಲಿ ತೊಡಗಿಸಿಕೊಳ್ಳುವವರು ನಮ್ಮ ನಿಮ್ಮೆಲ್ಲರ ನಡುವೆ ಇರುತ್ತಾರೆ. ಅಂತಹವರಲ್ಲಿ ಗೀತಾ ಕುಂದಾಪುರ ಸಹ ಒಬ್ಬರು.
`ದೇಶ ಸುತ್ತು ಕೋಶ ಓದು’ ಎನ್ನುವ ನುಡಿಗಟ್ಟಿಗೆ ಅನ್ವರ್ಥ ಎನ್ನುವಂತಿರುವ ಗೀತಾ ಕುಂದಾಪುರ ಉದ್ಯೋಗ ನಿಮಿತ್ತ ನಾನಾ ದೇಶ ಸುತ್ತಿ ಬಂದಿದ್ದಾರೆ. ಜೊತೆಗೆ ಸಾಹಿತ್ಯದ ಓದಿನ ಅಭಿರುಚಿ ಕೂಡ ಅವರಿಗೆ ಬಾಲ್ಯದಿಂದಲೇ ಬಂದಿದೆ.
ಗೀತಾ ಕುಂದಾಪುರ ಜನಿಸಿದ್ದು, 1967 ಜೂನ್ 23, ಉಡುಪಿ ಜಿಲ್ಲೆ ಕುಂದಾಪುರದ ವಿಶ್ವೇಶ್ವರ ಉಡುಪ ಹಾಗೂ ಸುಲೋಚನಾ ದಂಪತಿಯ ಮಗಳಾದ ಗೀತಾ ಕುಂದಾಪುರದಲ್ಲೇ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣವನ್ನೂ ಮುಗಿಸಿದರು. ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ಮುಗಿಸಿದ ಗೀತಾ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿ.ಕಾಂ. ಪದವಿ ಗಳಿಸಿದರು.
ಕೇರಳದ ವೈನಾಡು ಮೂಲದ ಸುರೇಂದ್ರ ಉಪಾಧ್ಯಾಯರನ್ನು ವಿವಾಹವಾದ ಗೀತಾ ಮದುವೆ ನಂತರ ಕಾಸರಗೋಡಿಗೆ ತೆರಳಿ ಅಲ್ಲಿನ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರು. ಕೆಲವು ವರ್ಷಗಳ ನಂತರ ಪತಿಯೊಡನೆ ಕತಾರ್ ದೇಶಕ್ಕೆ ತೆರಳಿದ್ದ ಗೀತಾ ಅಲ್ಲಿ ಆಸ್ಟ್ರೇಲಿಯಾ ಮೂಲದ ಸಂಸ್ಥೆಯೊಂದರಲ್ಲಿ ಪ್ಲಾನರ್ ಮತ್ತು ಪ್ರಾಜೆಕ್ಟ್ ಕಂಟ್ರೋಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಹದಿನೆಂಟು ವರ್ಷಗಳ ನಂತರ ಭಾರತಕ್ಕೆ ಮರಳಿದ ಗೀತಾ ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ.
ಬಾಲ್ಯದಲ್ಲೇ ಸಾಹಿತ್ಯದ ನಂಟು
ಗೀತಾ ತಂದೆ ವಕೀಲರಾಗಿದ್ದು ಅವರು ಸಾಹಿತ್ಯ ಪ್ರೇಮಿಯೂ ಕೂಡ. ಮನೆಯಲ್ಲಿ ಉತ್ತಮ ಸಾಹಿತ್ಯ ಕೃತಿಗಳು, ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳು ಸದಾ ಇರುತ್ತಿದ್ದು, ಇವೆಲ್ಲ ಬಾಲ್ಯದಲ್ಲೇ ಗೀತಾರಿಗೆ ಸಾಹಿತ್ಯದ ಮೇಲೆ ಒಲವು ಮೂಡಲು ಕಾರಣವಾಗಿತ್ತು. ಆದರೆ ವೈವಿಧ್ಯಮಯ ಸಾಹಿತ್ಯವನ್ನು ಓದಿದರೂ ಗೀತಾಗೆ ತಾವು ಬರೆಯಬೇಕೆಂದು ಇತ್ತೀಚಿನವರೆಗೂ ಅನಿಸಿರಲಿಲ್ಲ. ಕತಾರ್ ವಾಸದ ದಿನಗಳಲ್ಲಿ ಉದ್ಯೋಗದ ಜಂಜಾಟದಲ್ಲಿ ಬೇರೆ ಯಾವ ಆಲೋಚನೆಗೂ ಅಕಾಶವೇ ಇರಲಿಲ್ಲ. ಆದರೆ ಬೆಂಗಳೂರಿನಲ್ಲಿ ನೆಲೆ ನಿಂತ ನಂತರ ಅವರಿಗೆ ಬಿಡುವಿನ ವೇಳೆ ಸಾಕಷ್ಟು ದೊರೆತು ಬರವಣಿಗೆಯತ್ತ ಆಸಕ್ತಿ ಕೆರಳುವಂತಾಯಿತು.
ಗೀತಾ ಇದುವರೆಗೆ 80ಕ್ಕೂ ಹೆಚ್ಚು ಕಥೆಗಳು, 200ಕ್ಕೂ ಹೆಚ್ಚು ಲೇಖನಗಳು, ಲಹರಿ, ಲಲಿತ ಪ್ರಬಂಧಗಳು, ಪ್ರವಾಸ ಕಥನಗಳನ್ನು ಬರೆದಿದ್ದು, ಅದರಲ್ಲಿ ಹೆಚ್ಚಿನ ನಾಡಿನ ಹೆಸರಾಂತ ಕನ್ನಡ, ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
`ಅಪ್ರಮೇಯ’ ಕಥಾಸಂಕಲನ (2018), `ದ್ವೀಪಗಳತ್ತ ಯಾನ,’ `ಜಪಾನ್ ಮತ್ತು ಆಸ್ಟ್ರೇಲಿಯಾ’ ಪ್ರವಾಸ ಕಥನ (2019), `ಚಿತ್ತದಲ್ಲಿ ಮೂಡಿದ ಚಿತ್ತಾರ’ ಕಥಾಸಂಕಲನ (2020), `ಕಡಲ್ಗಳ್ಳರ ಸರಹದ್ದಿನಲ್ಲಿ,’ `ರಷ್ಯಾ ಮತ್ತು ಆಸ್ಟ್ರೇಲಿಯಾ’ ಪ್ರವಾಸ ಕಥನ ಮತ್ತು `ಒಂಟಿ ಪಯಣಿಗರು’ ಕಥಾಸಂಕಲನ (2022) ಇವು ಗೀತಾ ಅವರ ಪ್ರಕಟಿತ ಪ್ರಮುಖ ಕೃತಿಗಳಾಗಿವೆ. ಇವರ ಕಥೆಗಳಲ್ಲಿ ಅಪ್ಪಟ ಗ್ರಾಮೀಣ ಬದುಕಿನ ಚಿತ್ರಣ ಜೊತೆಗೇ ಮಾಡರ್ನ್ ಲೈಫ್ ಸ್ಟೈಲ್, ಹೈ ಫೈ ಜೀವನ ಸಹ ಇದೆ. ಪ್ರಕೃತಿ ಹಾಗೂ ಮನುಷ್ಯ ಸಂಬಂಧಗಳ ಹುಡುಕಾಟ ಇದೆ. ಹಾಗಾಗಿ ಇವರ ಕಥೆಗಳು ಓದುಗರ ಮನಗೆಲ್ಲುವುದು ಖಚಿತ.
ಪ್ರವಾಸಪ್ರಿಯೆ ಗೀತಾ
ಗೀತಾ ತಮ್ಮ ವೃತ್ತಿ ಬದುಕಿನ ಬಹುಪಾಲನ್ನು ಕತಾರ್ ನಲ್ಲಿ ಕಳೆದಿದ್ದು ಅವರು ಇದುವರೆಗೂ ಮೂವತ್ತಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾರೆ. ಇದೆಲ್ಲದರ ಅನುಭವವನ್ನು ಅವರು ತಮ್ಮ ಪ್ರವಾಸ ಕಥನ ಪುಸ್ತಕ ರೂಪದಲ್ಲಿ ಬರೆದಿದ್ದಾರೆ.
ಹಣ್ಣಿನ ತೋಟ
ಗೀತಾಗೆ ತೋಟಗಾರಿಕೆ ಕುರಿತೂ ಆಸಕ್ತಿ ಇದ್ದು, ಹತ್ತಕ್ಕೂ ಹೆಚ್ಚು ಜಾತಿಯ ರಾಸಾಯನಿಕ ಮುಕ್ತ ಹಣ್ಣುಗಳ ತೋಟವನ್ನು ಸೃಷ್ಟಿಸಿದ್ದಾರೆ.
ಗೌರವ ಪುರಸ್ಕಾರಗಳು
ಗೀತಾ ಸಾಹಿತ್ಯ ರಚನೆಗೆ ಇಳಿದಿದ್ದು ಇತ್ತೀಚೆಗಾದರೂ ಅವರ ಸತ್ವಯುತವಾದ ಬರವಣಿಗೆ ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. ಪ್ರಜಾವಾಣಿ ಏರ್ಪಡಿಸಿದ್ದ ಸಂಕ್ರಾಂತಿ ಪ್ರಬಂಧ ಸ್ಪರ್ಧೆಯಲ್ಲಿ `ನನ್ನ ಬಾಲ್ಯ ಕದ್ದ ಕಾಗೆಗಳು’ ಪ್ರಬಂಧಕ್ಕೆ ಬಹುಮಾನ ಬಂದಿದ್ದು ಅದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಸಾಹಿತ್ಯ ಸಂಪುಟದಲ್ಲಿ ಪ್ರಕಟಿಸಲಾಗಿದೆ. `ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬೈ’ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ `ನೇತ್ರಾವತಿಯಲ್ಲಿ ತೇಲಿ ಬಂದ ಕೈಕಸೆ’ ಕಥೆಗೆ ಬಹುಮಾನ ಬಂದಿದೆ.
`ಲೇಖಿಕಾ ಸಾಹಿತ್ಯ ವೇದಿಕೆ’ ಏರ್ಪಡಿಸಿದ್ದ ತ್ರಿವೇಣಿ ಮನೋವೈಜ್ಞಾನಿಕ ಕಥಾಸ್ಪರ್ಧೆಯಲ್ಲಿ `ಕನ್ನಡಿಯಲ್ಲಿ ಮುಖ ಕಂಡಾಗ’ ಕಥೆಗೆ ಬಹುಮಾನ ಲಭಿಸಿದೆ.
ಇದಲ್ಲದೆ, `ದ್ವೀಪಗಳತ್ತ ಯಾನ’ ಹಂಪೆಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಥಮ ಡಿಗ್ರಿ ಕನ್ನಡ ಪಠ್ಯ ಪುಸ್ತಕಕ್ಕೆ ರೆಫರೆನ್ಸ್ ಪುಸ್ತಕವಾಗಿ ಪರಿಗಣಿಸಲ್ಪಟ್ಟಿದೆ. `ಕಡಲ್ಗಳ್ಳರ ಸರಹದ್ದಿನಲ್ಲಿ’ ಪುಸ್ತಕಕ್ಕೆ ಲೇಖಿಕಾ ಸಾಹಿತ್ಯ ವೇದಿಕೆಯಿಂದ ಪ್ರಶಸ್ತಿ ಲಭಿಸಿದೆ. ಇವನ್ನು ಹಲವಾರು ಕಥೆಗಳು ಮಂಗಳೂರು, ಬೆಂಗಳೂರು, ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾಗಿದ್ದು ಹಲವು ಕಥೆಗಳು ತೆಲುಗು ಮತ್ತು ಮಲೆಯಾಳಂ ಭಾಷೆಗೆ ಭಾಷಾಂತರಗೊಂಡಿವೆ.
ಉಡುಪಿಯ ಲಯನ್ಸ್ ಕ್ಲಬ್ ನವರು ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗೀತಾರನ್ನು ಸನ್ಮಾನಿಸಿದ್ದರೆ ಉಡುಪಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸದ ಸಂದರ್ಭದಲ್ಲಿ ಸಹ ಸನ್ಮಾನಿಸಲಾಗಿದೆ. ಉಪ್ಕಾರ್ ಲೇಔಟ್ ನ ಸವಿಗಾನ ಲಹರಿ ತಂಡ ತಮ್ಮ ವಾರ್ಷಿಕೋತ್ಸವದಂದು ಗೀತಾರನ್ನು ಸನ್ಮಾನಿಸಿದರು.
ಇಷ್ಟೆಲ್ಲಾ ಸಾಧನೆ ಮಾಡಿರುವ ಗೀತಾ `ನಾನಿನ್ನೂ ಚಿಕ್ಕವಳು, ಬರವಣಿಗೆಯಲ್ಲಿ ನನ್ನದಿನ್ನೂ ಪುಟ್ಟ ಹೆಜ್ಜೆಯನ್ನಷ್ಟೇ, ಇನ್ನಷ್ಟು ಬೆಳೆಯಬೇಕಾಗಿದೆ, ಬರೆಯಬೇಕಾಗಿರುವ ವಿಷಯ ವಸ್ತುಗಳು ಅಪಾರವಿದೆ. ಅದರ ಕುರಿತು ನನ್ನ ಜವಾಬ್ದಾರಿಯೂ ದೊಡ್ಡದಿದೆ,’ ಎಂದು ವಿನಮ್ರವಾಗಿ ಹೇಳುತ್ತಾರೆ. ಅಲ್ಲದೆ, `ನಾನು ಒಂದು ಕಾದಂಬರಿ ಬರೆಯ ಬೇಕಿದೆ, ಕಾದಂಬರಿ ಬರವಣಿಗೆ ಎನ್ನುವುದು ನನ್ನ ಪ್ರಕಾರ ಪ್ರತಿ ಲೇಖಕರ ಒಂದು ದೊಡ್ಡ ಕನಸು,’ ಎಂದು ಹೇಳುತ್ತಾರೆ.
ಗೀತಾ ಅವರ ಲೇಖನಿಯಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಉತ್ತಮ ಸಾಹಿತ್ಯ ಕೃತಿಗಳು ಮೂಡಿ ಬರಲಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ಕೃತಿಗಳು ಇವರಿಂದ ಸಿಕ್ಕಲಿ ಎನ್ನುವುದು ನಮ್ಮೆಲ್ಲರ ಆಶಯ.
– ರಾಘವೇಂದ್ರ ಅಡಿಗೆ ಎಚ್ಚೆನ್