ಡಾ. ನಿವೇದಿತಾ ಡೆಂಟಲ್ ಪ್ರೊಫೆಸರ್
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿರುವ ಡಾ. ನಿವೇದಿತಾ, ಆದರ್ಶ ಸೇವಾ ಮನೋಭಾವದಿಂದ ರೋಗಿಗಳ ಶುಶ್ರೂಷೆಗೆ ಸದಾ ಮುಂದಿದ್ದು, `ವೈದ್ಯೋ ನಾರಾಯಣೋ ಹರೀ‘ ಎಂಬುದಕ್ಕೆ ಮಾದರಿಯಾಗಿದ್ದಾರೆ…….!
ವೈದ್ಯರು ಜೀವ ಉಳಿಸುವ ಸಾಕ್ಷಾತ್ ಭಗವಂತನ ಸ್ವರೂಪ. ಇಂತಹ ಪವಿತ್ರ ವೃತ್ತಿಯಲ್ಲಿ ತೊಡಗಿರುವ ಡಾ. ನಿವೇದಿತಾ ಚಂದ್ರಮೋಹನ್, ತಮ್ಮ ವೃತ್ತಿಯನ್ನು ತಪಸ್ಸಿನಂತೆ ನಡೆಸಿಕೊಂಡು ಬರುತ್ತಿದ್ದಾರೆ. ಬೆಂಗಳೂರಿನ ಸರ್ಕಾರಿ ಡೆಂಟಲ್ ಕಾಲೇಜಿನಲ್ಲಿ ಓವರ್ ಮೆಡಿಸಿನ್ ಅಂಡ್ ರೇಡಿಯಾಲಜಿಯಲ್ಲಿ ಎಂಡಿಎಸ್ ಪದವಿ ಪಡೆದಿರುವ ಡಾ. ನಿವೇದಿತಾ ಬಿಜಾಪುರ ಡೆಂಟಲ್ ಕಾಲೇಜಿನಲ್ಲಿ ರೀಡರ್ ಆಗಿ, ಬೆಂಗಳೂರಿನ ದಯಾನಂದ ಸಾಗರ್ ಡೆಂಟಲ್ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್, ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಉತ್ತರ ಪ್ರದೇಶದ ಮೊರಾದಾಬಾದ್ ಡೆಂಟಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ವೃತ್ತಿ ಅನುಭವ ಪಡೆದಿದ್ದಾರೆ. ನಾನಾ ರಾಜ್ಯಗಳಲ್ಲಿ ಸತತ 15 ವರ್ಷಗಳ ಕಾಲ ತಮ್ಮ ಬೋಧಕ ವೃತ್ತಿಯನ್ನು ಮುನ್ನಡೆಸಿಕೊಂಡು ಬರುತ್ತಿರುವ ಡಾ. ನಿವೇದಿತಾ ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸುವ ಕಾಯಕದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಬಡವರ ಪಾಲಿನ ಸಂಜೀವಿನಿಯಾದರು.
ಕೊರೋನಾ ಕಾಲದಲ್ಲಿ……
ಕೋವಿಡ್ ನಲ್ಲಿ ಇಡೀ ಮನುಕುಲವೇ ತತ್ತರಿಸಿತ್ತು. ಜನರ ಆರೋಗ್ಯ ಸಮಸ್ಯೆ ಉಲ್ಬಣಿಸಿತ್ತು. ಬದುಕಿಗಾಗಿ, ಜೀವದ ಉಳಿವಿಗಾಗಿ ಜನ ಪರದಾಡುತ್ತಿದ್ದರು. ಇಂತಹ ವಿಪ್ಲವದ ಸಮಯದಲ್ಲಿ ವೈದ್ಯರು ಜನಸಾಮಾನ್ಯರ ಪಾಲಿನ ದೇವತೆಗಳಾಗಿ ಕಂಡುಬಂದರು. ಇದೇ ಸಮಯದಲ್ಲಿ ಡಾ. ನಿವೇದಿತಾ ಕೋಡಿಹಳ್ಳಿಯ ಜನರ ಸೇವೆಗೆ ನಿಂತರು. ತಮ್ಮ ಜೀವದ ಹಂಗನ್ನು ತೊರೆದು ರೋಗಿಗಳ ಆರೈಕೆ ಮಾಡಿದರು. ಅವರಿಗೆ ಬೇಕಾದ ಔಷಧ, ಚಿಕಿತ್ಸೆ, ಆಕ್ಸಿಜನ್, ವ್ಯಾಕ್ಸಿನ್ ಸೇರಿದಂತೆ ಸಕಲ ಸವಲತ್ತುಗಳನ್ನು ಕಲ್ಪಿಸಿ ಜನರ ಜೀವ ಉಳಿಸುವ ಕೆಲಸ ಮಾಡಿದರು. ಕೊರೋನಾ ಕುರಿತು ಜಾಗೃತಿ ಮೂಡಿಸಿ, ಅವರಿಗೆ ಧೈರ್ಯ ಹೇಳುವ ಮೂಲಕ ಮಾತೃ ಸ್ಥಾನ ತುಂಬಿದರು. ಹಗಲಿರುಳೆನ್ನೆದೇ, ತಮ್ಮ ಖಾಸಗಿ ಬದುಕನ್ನು ಬದಿಗೊತ್ತಿ, ವೈದ್ಯ ವೃತ್ತಿಯ ನೈತಿಕತೆಯನ್ನು ಮೆರೆಯುವ ಮೂಲಕ ಇತರ ವೈದ್ಯರಿಗೆ ಮಾದರಿಯಾದರು. ಕೊರೋನಾ 1, 2, 3ನೇ ಅಲೆಯ ಸಂದರ್ಭದಲ್ಲೂ ಡಾ. ನಿವೇದಿತಾ ನಿರ್ವಹಿಸಿದ ಕಾರ್ಯ ನಿಜಕ್ಕೂ ಸ್ಮರಣೀಯ. ಸೇವೆಯೇ ಪರಮ ಧರ್ಮ.
ಪ್ರಸ್ತುತ ಬೆಂಗಳೂರಿನ ಜೀವನ್ ಬೀಮಾ ನಗರದಲ್ಲಿ ಡೆಂಟಲ್ ಕೇರ್ ನಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಂತ ಆರೋಗ್ಯದ ಕುರಿತು ಸಾಕಷ್ಟು ಅಧ್ಯಯನ ನಡೆಸಿರುವ ಡಾ. ನಿವೇದಿತಾ, ಜನರ ಆರೋಗ್ಯ ಕ್ಷೇತ್ರದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಮ್ಯಾಕ್ಸ್ ಲೈಫ್ ಮತ್ತು ಸ್ಟಾರ್ ಹೆಲ್ತ್ ಜೊತೆಗೆ ಕೈ ಜೋಡಿಸಿ ಜನಸಾಮಾನ್ಯರಿಗೆ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಗತ್ಯ ಸಲಹೆ, ನೆರವು ನೀಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ, ಲೈಫ್ ಅಂಡ್ ಹೆಲ್ತ್ ಇನ್ಶೂರೆನ್ಸ್ ಬಗ್ಗೆಯೂ ಜನರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.
ಹಣವೊಂದೇ ಗುರಿಯಲ್ಲ
ವೈದ್ಯರೆಂದರೆ ಕೇವಲ ಕಾಯಿಲೆ ಬಂದಾಗ ಚಿಕಿತ್ಸೆ ನೀಡುವುದಲ್ಲ. ಬದಲಿಗೆ ಕಾಯಿಲೆಯನ್ನು ಬರದಂತೆ ತಡೆಗಟ್ಟುವುದು, ಆರೋಗ್ಯ ಕಾಳಜಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಅಗತ್ಯ ಸಲಹೆ, ನೆರವು ನೀಡುವುದು ಇತ್ಯಾದಿಗಳನ್ನು ಬಲು ಸೇವಾ ತತ್ಪರತೆಯಿಂದ ನಿಭಾಯಿಸುತ್ತಿದ್ದಾರೆ. ಇದನ್ನು ಚೆನ್ನಾಗಿ ಅರಿತಿರುವ ಡಾ. ನಿವೇದಿತಾ ಜನರೊಂದಿಗೆ ಬೆರೆತು ಅವರಲ್ಲಿ ಆರೋಗ್ಯ ಪ್ರಜ್ಞೆ ಮೂಡಿಸುತ್ತಾ ಆರೋಗ್ಯವಂತ ಸಮಾಜ ನಿರ್ಮಾಣದತ್ತ ದೃಢ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಒಬ್ಬ ಹೆಣ್ಣು ಮಗಳಾಗಿ ಕುಟುಂಬದ ಜವಾಬ್ದಾರಿಯ ಜೊತೆ ಜೊತೆಗೆ ವೃತ್ತಿ ನಿಷ್ಠೆ, ಸಾಮಾಜಿಕ ಪ್ರಜ್ಞೆಯನ್ನು ತಮ್ಮಲ್ಲಿ ಜಾಗೃತಗೊಳಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಸದಾ ಮುಂಚೂಣಿಯಲ್ಲಿ ನಿಲ್ಲುವ ಡಾ. ನಿವೇದಿತಾ, ಸುಶಿಕ್ಷಿತರ ನಡೆ ಹೇಗಿರಬೇಕೆಂಬುದಕ್ಕೆ ಮೇಲ್ಪಂಕ್ತಿಯಾಗಿದ್ದಾರೆ. ಇವತ್ತು ಕೆಲವರು ವೈದ್ಯ ವೃತ್ತಿಯನ್ನು ವ್ಯಾಪಾರವಾಗಿಸಿಕೊಂಡಿದ್ದಾರೆ.
ಬಡವರ ಆರಾಧ್ಯ ದೇವತೆ!
ಜನರಿಗೆ ಆಸ್ಪತ್ರೆಗಳೆಂದರೇ ಎದೆ ಬಡಿತ ಹೆಚ್ಚಾಗುತ್ತದೆ. ಸಣ್ಣ ರೋಗಕ್ಕೂ ನೂರಾರು ಟೆಸ್ಟ್ಗಳು, ಸಾವಿರ ಬಗೆಯ ಚಿಕಿತ್ಸೆ, ಲಕ್ಷಗಟ್ಟಲೆ ಬಿಲ್….. ಎಲ್ಲೆಲ್ಲೋ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ವೈದ್ಯ ವೃತ್ತಿಯ ನೈತಿಕತೆ ಅರಿತು ಜನಸೇವೆಯಲ್ಲಿ ನಿರತರಾಗುತ್ತಾರೆ. ಇಂತಹ ಅಪರೂಪದಲ್ಲಿ ಅಪರೂಪ ವೈದ್ಯೆ ಎನಿಸಿರುವ ಡಾ. ನಿವೇದಿತಾ, ವೈದ್ಯ ವೃತ್ತಿಯ ಘನತೆಗೆ ಅನುರೂಪವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ತಮ್ಮ ವೈದ್ಯ ವೃತ್ತಿಯನ್ನು ಜನಪರವಾಗಿಸಿ, ಜೀವಪರವಾಗಿಸಿ `ಸೇವೆ’ಯ ಸ್ಪರ್ಶದೊಂದಿಗೆ ಮುನ್ನಡೆಯುತ್ತಿದ್ದಾರೆ. ಯಾವುದೇ ಪ್ರಚಾರದ ಗೀಳಿಲ್ಲದೇ, ಎಲೆಮರೆಯ ಕಾಯಿಯಂತೆ ತಮ್ಮ ಕಾಯಕದಲ್ಲಿ ಮಗ್ನರಾಗಿರುವ ಡಾ. ನಿವೇದಿತಾ ಆದರ್ಶಪ್ರಾಯ ಮಹಿಳೆಯರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.
– ಎಚ್.ಎಂ. ಶಂಕರ್