ಭೀಮಪ್ಪಹಳ್ಳಿಯ ದಿಟ್ಟ ಹುಡುಗಿ ಮಾಲಾ ಮೊದಲಿನಿಂದ ಮಹಾ ಧೈರ್ಯಸ್ಥೆ. ಆದರೆ ಮದುವೆ ವಿಷಯದಲ್ಲಿ ಹಿರಿಯರ ಮಾತು ಮೀರಲಾಗದೆ ಎರಡನೆ ಮದುವೆಗೆ ಒಪ್ಪಿದಳು. ಮುಂದೆ ಅವಳ ಜೀವನದಲ್ಲಿ ನಡೆದದ್ದೇನು…….?
ಕೈಲಿದ್ದ ಅನಿ ಒಂದೇ ಸಮನೆ ಕೈ ಕೊಸರುತ್ತಾ ಕೆಳಗಿಳಿಯಲು ಸಾಹಸಪಡುತ್ತಿದ್ದಳು. ಸಹನಾಳಿಗೆ ಅವಳನ್ನು ಎತ್ತಿ ಎತ್ತೀ ರಟ್ಟೆಯೆಲ್ಲಾ ನೋಯುತ್ತಿತ್ತು.
“ಅಮ್ಮಾ , ನೋಡಮ್ಮಾ….. ಇನ್ನೂ ನಮ್ಮ ನಂಬರ್ ಬರೋದಕ್ಕೆ ಎಷ್ಟು ಹೊತ್ತಾಗುತ್ತೆ…. ಅವಳನ್ನು ಹಿಡಿಯೋಕೆ ಆಗ್ತಿಲ್ಲ….” ಎಂದು ಸಹನಾ ಹೇಳಿದಳು.
ಶಾರದಮ್ಮ ಎದ್ದು ಹೋಗಿ, ಡಾಕ್ಟರ್ ಕನ್ಸೆಲ್ಟಿಂಗ್ ರೂಮಿನ ಬಾಗಿಲಿಗೆ ನಿಂತಿದ್ದ ಹುಡುಗನ ಬಳಿ, “ಎಷ್ಟನೇ ನಂಬರಪ್ಪಾ… ನಡೀತಿರೋದು…? ಇನ್ನೂ ಎಷ್ಟೊತ್ತು ಕಾಯಬೇಕು…?” ಎಂದರು.
“ಇನ್ನೂ ಮೂರನೇ ನಂಬರ್. ಡಾಕ್ಟರ್ ಈಗತಾನೇ ಬಂದಿದ್ದಾರೆ. ನಿಮ್ಮ ನಂಬರ್ ಬರೋಕೆ ಇನ್ನೂ ಅರ್ಧಗಂಟೆ ಮೇಲಾಗಬಹುದು. ನೀವಿಲ್ಲೇ ಕೂತಿರಿ. ನಿಮ್ಮ ನಂಬರ್ ಬಂದಾಗ ನೀವಿಲ್ಲದಿದ್ದರೆ ಮತ್ತೆ ಎಲ್ಲ ಪೇಶೆಂಟ್ ಮುಗಿದು, ಕೊನೇಗೇ ನಿಮ್ಮನ್ನು ಕರಿಯೋದು. ಆಮೇಲೆ ಗಲಾಟೆ ಗಿಲಾಟೆ ಮಾಡಂಗಿಲ್ಲ ಗೊತ್ತಾ…..?” ಎಂದು ಗತ್ತಿನಿಂದಲೇ ಹೇಳಿ ಡಾಕ್ಟರ್ ಬೆಲ್ ಮಾಡಿದ ಶಬ್ದ ಕೇಳಿ ಒಳಗೆ ಹೋದ.
ಸಹನಾಳಿಗೆ ಕುಳಿತು ಕುಳಿತೂ ಸಾಕಾಗಿ ಹೋಗಿತ್ತು. ದೊಡ್ಡವಳು ಅನ್ವಿಕಾ, ಚಿಕ್ಕವಳು ಅನಿ ಇಬ್ಬರೂ ಇದೇ ನರ್ಸಿಂಗ್ ಹೋಮ್ ನಲ್ಲೇ ಹುಟ್ಟಿದ್ದರಿಂದ, ತವರಿಗೆ ಬಂದಾಗೆಲ್ಲಾ ಇಲ್ಲಿಯ ಮಕ್ಕಳ ಡಾಕ್ಟರ್ ಗೇ ಇಬ್ಬರನ್ನು ತೋರಿಸುತ್ತಿದ್ದರು. ಬೇರೆ ಡಾಕ್ಟರ್ ಅಷ್ಟು ಸರಿ ಹೋಗುತ್ತಿರಲಿಲ್ಲ. ನಿನ್ನೆಯಿಂದ ಅನಿಗೆ ಜ್ವರ ಜಾಸ್ತಿಯಾಗಿ ಮೈ ಬಿಸಿಯಾಗಿತ್ತು. ಹಾಗಾಗಿ ಬೆಳಗ್ಗೆಯೇ ಅಮ್ಮನೊಡನೆ ಆಸ್ಪತ್ರೆಗೆ ಬಂದಿದ್ದಳು. ಹಲ್ಲು ಬರುವ ಸಮಯ ಹಾಗೇ ಬಿಡು ಅಂತಾ ಅಮ್ಮ ಹೇಳಿದರೂ, ಆಕೆಗೆ ಸಮಾಧಾನ ಇಲ್ಲ. ಹಾಗಾಗಿ ಮನೆಯಲ್ಲಿ ಪುಟ್ಟ ಅನ್ವಿಕಾಳನ್ನು ತಂಗಿಯ ಸುಪರ್ದಿಗೆ ಬಿಟ್ಟು ಬಂದಾಗಿತ್ತು. ಲೇಟಾಗಿದ್ದಕ್ಕೆ ಅಲ್ಲಿ ಅವಳೇನು ಗಲಾಟೆ ಹಚ್ಚಿರುತ್ತಾಳೋ ಎಂದು ಮತ್ತೊಂದೆಡೆ ಆತಂಕದಲ್ಲೇ ಕಾಲ ಕಳೆಯೋದಾಯಿತು. ತಂಗಿಗೆ ಆಗಾಗ ಫೋನ್ ಮಾಡಿ ಅನ್ವಿಕಾಳಿಗೆ ಸಮಾಧಾನ ಮಾಡುತ್ತಾ, ಬರಬೇಕಾದರೆ ಮರೆಯದೆ ನಿನಗೆ ಐಸ್ ಕ್ರೀಂ ತರುತ್ತೇನೆ ಎಂದು ಪುಸಲಾಯಿಸುತ್ತಿದ್ದಳು.
ಅಷ್ಟರಲ್ಲಿ “ಅಲ್ಲಿ ನೋಡೆ, ಅಲ್ಲಿ ಫ್ಲಾಸ್ಕ್ ಹಿಡಿದು ಹೋಗ್ತಾ ಇರೋದು ನಿಮ್ಮ ಲಕ್ಷ್ಮಜ್ಜಿ ತರಹ ಕಾಣ್ತಾ ಇದ್ದಾರೆ ಅಲ್ವಾ,” ಎಂದು ಶಾರದಮ್ಮ ಹೇಳಿದಾಗ ಸಹನಾ ಅಮ್ಮ ತೋರಿಸಿದ ಕಡೆ ನೋಡಿದಳು. ಅವಳಿಗೂ ಹೌದೆನಿಸಿತ್ತು.
“ತಡೀ ನೋಡಿಕೊಂಡು ಬರ್ತೀನಿ. ಪಾಪ ಯಾರನ್ನು ಆಸ್ಪತ್ರೆಗೆ ತೋರಿಸಿಕೊಂಡು ಹೋಗಲು ಬಂದಿದ್ದಾರೋ ಏನೋ,” ಎಂದು ಶಾರದಮ್ಮ ದಡದಡ ಅಲ್ಲಿಗೆ ಹೋದರು.
ಸ್ವಲ್ಪ ಹೊತ್ತಿನಲ್ಲೇ ವಾಪಸ್ಸಾದ ಶಾರದಮ್ಮ, “ಸಹನಾ, ಮಾಲಾಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರಂತೆ. ಒಂಬತ್ತು ತಿಂಗಳಂತೆ, ಈ ವಾರ ಡೇಟ್ ಕೊಟ್ಟಿದ್ದಾರಂತೆ, ನಾಲ್ಕು ದಿನದಿಂದ ಈ ಆಸ್ಪತ್ರೆಯಲ್ಲೇ ಇದ್ದಾರಂತೆ. ಒಂದು ಮಾತೂ ಗೊತ್ತಿಲ್ಲ ನೋಡು, ಬಾ ನೋಡಿ ಮಾತನಾಡಿಸಿಕೊಂಡು ಬರೋಣ,” ಎಂದರು.
“ಅಮ್ಮಾ, ಅನಿಯನ್ನು ತೋರಿಸಿಕೊಂಡು ಒಂದೇ ಸಲ ಹೋಗೋಣ. ಅಷ್ಟರಲ್ಲಿ ನಮ್ಮ ನಂಬರ್ ಬಂದರೆ ಕಷ್ಟ,” ಎಂದಳು ಸಹನಾ.
“ಆಯ್ತು ಬಿಡು, ನಾನು ಅವರ ರೂಮಿಗೆ ಹೋಗಿ ಅವರನ್ನು ಮಾತಾಡಿಸ್ತಾ ಇರ್ತೀನಿ. ನೀನು ಮಗೂನಾ ತೋರಿಸ್ಕೊಂಡು ಬಾ. ಅವರು ಇರೋ ವಾರ್ಡ್ ನಂಬರ್ ನಾಲ್ಕು,” ಎಂದರು ಶಾರದಮ್ಮ.
“ಆಯ್ತಮ್ಮಾ…. ನೀನು ಹೋಗಿರು,” ಎಂದು ಕಳಿಸಿದಳು. ಅನಿ ಬಿಸ್ಕತ್ತು ತಿಂದು, ನೀರು ಕುಡಿದು ನಿದ್ದೆ ಹೋಗಿದ್ದಳು.
ಮಾಲಾ ಬಸುರಿ ಎಂದು ಗೊತ್ತಾಗಿ ಎಷ್ಟೋ ಸಮಾಧಾನವಾಯಿತು ಸಹನಾಳಿಗೆ. ಸದ್ಯ ಇಷ್ಟು ವರ್ಷದ ಮೇಲಾದರೂ ಆ ದೇವರಿಗೆ ಕರುಣೆ ಬಂತಲ್ಲ ಎಂದು ನೆಮ್ಮದಿಯ ಉಸಿರು ಬಿಟ್ಟಳು. ತನಗೆ ಸಂಬಂಧದಲ್ಲಿ ಚಿಕ್ಕಮ್ಮ ಆಗು, ತನ್ನದೇ ವಯಸ್ಸಿನ ಮಾಲಾಳ ಜೊತೆಗಿನ ಒಡನಾಟದ ನೆನಪು ಸಹನಾಳ ಮನಃಪಟಲದ ಮೇಲೆ ಮತ್ತೆ ಮತ್ತೆ ಆರಿಸತೊಡಗಿತು.
ಚಿಕ್ಕವಳಿದ್ದಾಗ ಅಮ್ಮನ ಜೊತೆಗೆ ತವರು ಮನೆಗೆ ಹೋದಾಗೆಲ್ಲಾ ಜೊತೆಯಾಗುತ್ತಿದ್ದುದೇ ಈ ಮಾಲಾ. ಅಮ್ಮನ ಚಿಕ್ಕಪ್ಪನ ಎಂಟು ಜನ ಹೆಣ್ಣು ಮಕ್ಕಳಲ್ಲಿ ಕೊನೆಯವಳು. ಗಂಡುಬೀರಿಯ ಹಾಗೆ ಯಾರಿಗೂ ಯಾವುದಕ್ಕೂ ಹೆದರುತ್ತಿರಲಿಲ್ಲ. ಆಕೆಯ ನೇರ ಮಾತು, ದಿಟ್ಟತನ, ಪುಕ್ಕಲು ಸ್ವಭಾವದ ಸಹನಾಳಿಗೆ ತುಂಬಾ ಇಷ್ಟವಾಗುತ್ತಿತ್ತು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಅಜ್ಜನಿಗೆ ಒಬ್ಬ ಗಂಡು ಮಗ ಇದ್ದ ಹಾಗಿದ್ದಳು. ಅಜ್ಜನಿಗೂ ಅವಳೆಂದರೆ ಪ್ರಾಣ. `ಮಾಲಾ, ಹುಟ್ಟಿದ ಮೇಲೆ ನನಗೆ ಗಂಡು ಮಕ್ಕಳಿಲ್ಲ ಎಂಬ ಕೊರತೆ ಕಾಡಿಯೇ ಇಲ್ಲ,’ ಎಂದು ಹೆಮ್ಮೆಯಿಂದ ಹೇಳುತ್ತಿದ್ದ. ಹೊಲದಲ್ಲಿ ಮರ ಹತ್ತಲೂ ಸೈ, ಬಾವಿಗೆ ಮೇಲಿನಿಂದ ದುಮುಕಿ ಈಜಾಡಲೂ ಸೈ. ಸಹನಾಳಿಗೆ ಏನೊಂದೂ ಬರುತ್ತಿಲ್ಲವಾದ್ದರಿಂದ ಸುಮ್ಮನೆ ಬಿಟ್ಟ ಬಾಯಿ ಬಿಟ್ಟುಕೊಂಡು ಅವಳನ್ನೇ ನೋಡುತ್ತಿದ್ದಳು. ಹೊಲದಲ್ಲಿದ್ದ ಕಾಡು ಮಾವಿನಹಣ್ಣಿನ ರುಚಿ ತೋರಿಸಿದಳು, ಹುಳುಗಳು ಬಿಟ್ಟುಹೋದ ಜೇನುಗೂಡಿನ ಗೂಡನ್ನು ಕಚ್ಚಿ ಅಗಿದು ಅಗಿದು ರಸ ಸವಿಯುವ ರುಚಿ ಹತ್ತಿಸಿದಳು, ಗುಲಗಂಜಿ ಗಿಡದಲ್ಲಿನ ಗುಲಗಂಜಿಗಳನ್ನು ಕಿತ್ತು ಊರಿಗೆ ತೆಗೆದುಕೊಂಡು ಹೋಗು ಎಂದು ಸಹನಾಳಿಗೆ ಕೊಟ್ಟಳು, ಶೇಂಗಾ, ನವಣೆ, ಜೋಳ, ಮೆಕ್ಕೆಜೋಳ ಎಲ್ಲ ತೆನೆಗಾಳುಗಳನ್ನು ಹಸಿಯಾಗಿ ತಿಂದು ಬಾಯಿ ತುಂಬಾ ಹಾಲು ಉಕ್ಕಿಸುತ್ತಾ ಸವಿಯುವುದನ್ನು ಹೇಳಿಕೊಟ್ಟಳು.
ಚಕ್ಕಡಿ, ಟ್ರ್ಯಾಕ್ಟರ್, ಸೈಕಲ್ ಎಲ್ಲವನ್ನೂ ಒಂದು ಕೈ ನೋಡೋದೇ ಎಂದು ಹತ್ತಿ ಚಲಾಯಿಸುವ ಹುರುಪಿನವಳು, ಅವಳೊಡನೆ ಸೇರಿ ಎಮ್ಮೆಯ ಹಾಲು ಕರೆದಿದ್ದು, ಮಣ್ಣಿನ ಉಂಡೆ ಕಟ್ಟಿ ಉರುಳಿಸಿಕೊಂಡು ಹೋಗುವ ಹುಳುವಿನ ಗೂಡಿನ ಜಾಡು ಕಂಡುಹಿಡಿದದ್ದು, ಜೀರುಂಡೆಯನ್ನು ಬೆಂಕಿಪೊಟ್ಟಣದಲ್ಲಿ ಹಿಡಿದು ಹಾಕಿ ಅದರ ಕಾಲಿಗೆ ಹಗ್ಗ ಕಟ್ಟಿ ಹಾರಿಸಿದ್ದು, ಸಹನಾಳಿಗೆ ಕಡಜೀರಿಗೆ ಹುಳುವೊಂದು ಕಡಿದಾಗ ಅದೆಂತಹುದೋ ಸೊಪ್ಪು ತಂದು ರಸ ತೆಗೆದು ಹಚ್ಚಿದ್ದು, ಒಂದೇ ಎರಡೇ……. ಅಂದಿನ ಸಹನಾಳ ವಿಕೀಪೀಡಿಯಾ ಆಗಿದ್ದಳು ಮಾಲಾ. ಹಳ್ಳಿಯ ಜನಜೀವನದ ಹೆಚ್ಚು ಪರಿಚಯ ಆಗಿದ್ದು ಮಾಲಾಳಿಂದಲೇ ಎನ್ನುವುದನ್ನು ಸಹನಾ ಮರೆತಿರಲಿಲ್ಲ.
ಇಬ್ಬರೂ ಹತ್ತನೆ ತರಗತಿ ಮುಗಿಸಿ ಹಳ್ಳಿಯಲ್ಲಿ ಸೇರಿ ಆಡಿದ್ದೇ ಕೊನೆ. ಮುಂದೆ ಸಹನಾ ಕಾಲೇಜಿಗೆ ಸೇರಿದಳು. ಆದರೆ ಮಾಲಾಳ ಓದು ಅಲ್ಲಿಗೇ ಮೊಟಕುಗೊಂಡಿತ್ತು. ಪಕ್ಕದ ತಾಲ್ಲೂಕಿನ ಕಾಲೇಜಿಗೆ ಸೇರಲು ಮಾಲಾ ಹಠ ಮಾಡಿದಳು. `ನಮ್ಮ ಹಳ್ಯಾಗೆ ಬರೋವಷ್ಟು ಓದಿದೆ ಬಿಡು ಮಗಾ, ಕಾಲ ಕೆಟ್ಟೋಗೈತೆ, ಅಂಗೆಲ್ಲ ಊರ್ ಬಿಟ್ಟು ಊರಿಗೆ ಎಣ್ಣುಮಕ್ಕಳನ್ನು ಕಳ್ಸಕ್ಕಾಗಲ್ಲ…..’ ಎಂದು ಅಜ್ಜ ಖಡಾಖಂಡಿತವಾಗಿ ನಿರಾಕರಿಸಿದ್ದ. ಅವರು ಹೇಳಿದ್ರಲ್ಲೂ ಸತ್ಯ ಇತ್ತು. ಬಸ್ಸಿನ ಅನಾನುಕೂಲತೆ ಒಂದೆಡೆಯಾದರೆ, ಇಡೀ ಊರಿನಲ್ಲಿ ಹತ್ತನೆಯ ತರಗತಿ ಓದಿದ ಹೆಣ್ಣುಮಕ್ಕಳು ಇಬ್ಬರೋ, ಮೂವರೋ ಅಷ್ಟೆ. ಅಷ್ಟು ಓದಿಸಿದ್ದೇ ಹೆಚ್ಚು ಎನ್ನಬೇಕು. ಹಾಗಾಗಿ ಅಜ್ಜ ಆಕೆಯ ಮದುವೆಗೆ ಗಂಡು ಹುಡುಕುತ್ತಿದ್ದ.
ಎಷ್ಟೋ ಸಂಬಂಧಗಳು ಕೇಳಿಕೊಂಡು ಬರಲು ಶುರು ಮಾಡಿದ್ದರು. ಊರಿಗೇ ಸಾಹುಕಾರರ ಮನೆತನವಾದ್ದರಿಂದ ಅಷ್ಟು ಸುಲಭವಾಗಿ ಅಜ್ಜ ಯಾರನ್ನೂ ಒಪ್ಪುತ್ತಿರಲಿಲ್ಲ. ಏಳು ಜನ ಹೆಣ್ಣುಮಕ್ಕಳನ್ನೂ ದೊಡ್ಡ ದೊಡ್ಡ ಜಮೀನ್ದಾರಿಕೆ ಇರುವ ಸುತ್ತಮುತ್ತ ಹಳ್ಳಿಗಳ ಸಂಬಂಧವನ್ನೇ ಹುಡುಕಿ ಕೊಟ್ಟಿದ್ದ. ಒಂದೆರಡು ಪಟ್ಟಣದ ಗಂಡುಗಳು, ಸರ್ಕಾರಿ ನೌಕರಿಯಲ್ಲಿ ಇರುವ ಹುಡುಗನ ಮನೆಯವರು ವರದಕ್ಷಿಣೆ ಕೇಳಿದಾಗ, ಅಜ್ಜ ಕೆರಳಿ ಕೆಂಡವಾಗಿದ್ದ. ಅಂತಹ ಸಂಬಂಧಗಳು ಕೇಳಿಕೊಂಡು ಬಂದಾಗ, `ಹೆಂಡ್ತೀನ ಸಾಕಲಾರದ ಪಾಪಿ ಮಕ್ಳು….’ ಅಂತ ಸಾರಾ ಸಗಟಾಗಿ ತಳ್ಳಿ ಹಾಕಿದ್ದ.
ಮತ್ತೆ ಎರಡೇ ತಿಂಗಳಲ್ಲಿ ಮಾಲಾಳ ಮದುವೆ ಎಂದು ಅಜ್ಜ ಕರೆಯಲು ಬಂದಾಗ ಅಚ್ಚರಿಯಾಗಿತ್ತು. `ಯಾರಿವನ ಸಂಬಂಧ ಕಕ್ಕಪ್ಪ,’ ಅಂತ ಅಮ್ಮ ಕೇಳಿದಾಗ, `ನಮ್ಮ ಕಮ್ಲೂ ಗಂಡ ಸೂರಿಗೇ ಕೊಡ್ತಿದ್ದೀನಿ ಕಣ್ವಾ…. ದೇವ್ರು ಅವ್ರಿಗೆ ಬೇಕಾದಷ್ಟು ಆಸ್ತಿ ಪಾಸ್ತಿ ಎಲ್ಲಾ ಕೊಟ್ಟು, ಮಕ್ಳ ಭಾಗ್ಯ ಕಿತ್ಕೊಂಡವನೆ ನೋಡು. ನಮ್ಮೆಲ್ಲ ಎಣ್ಣು ಮಕ್ಳಿಗೂ ಮೂರ್ಮೂರು, ನಾಕ್ನಾಕು ಮಕ್ಳಿದಾವೆ. ನಿಂಗೇ ಗೊತ್ತಲ್ಲ ನಮ್ ಕಮ್ಲೂ ಮದ್ವೆ ಆಗಿ ಆಗ್ಲೇ ಹನ್ನೆಲ್ಡು ವರ್ಷ ಆತು. ಒಂದು ಪಟ್ಟ ಮುಗವಾದ್ರೂ ಮಕ್ಳಾಗ್ಲಿಲ್ಲ ಅಂದ್ರೆ ಹಳ್ಳೀ ಜನ ಸುಮ್ಕೇ ಬಿಡ್ತಾರಾ…..? ಸೂರಿ ತಲೀಗೆ ಎರಡ್ನೇ ಮದ್ವೆ ಭೂತ ಇಡ್ಸಿಬಿಟ್ರು. ಅಲ್ಲಿ, ಇಲ್ಲಿ ಎಣ್ಣು ನೋಡ್ತಿದಾನೆ ಅಂತಾ ಸುದ್ದಿ ಬಂತು. ಅದ್ನ ಕೇಳಾಕೋದ್ರೆ, ಹಂಗಾರೆ ನಿಮ್ಮ ಕೊನೇ ಮಗ್ಳನ್ನೇ ನಮ್ ಹುಡುಗಂಗೆ ಕೊಟ್ಟು ಮದ್ವೆ ಮಾಡ್ಬುಡಿ. ಬ್ಯಾರೆ ಕಡೆ ಹೋಗಲ್ಲ ಅಂತಾ ಅವರಪ್ಪ, ಅಲ್ವಾ ಕಡ್ಡೀ ತುಂಡು ಮಾಡ್ದಂಗೆ ಯೋಳಿಬಿಟ್ಟರು ಕಣಪ್ಪ. `ಕಮ್ಲೂ ಬಂದು ಕಾಲು ಇಡ್ಕಂಡ್ ಕಣ್ಣೀರು ಹಾಕಿದ್ಲು. ಅಪ್ಪಯ್ಯಾ, ಅವ್ರ ಕಡೇಲೇ ಯಣ್ಣು ಮಾಡ್ಕಂಡ್ ಬಂದ್ರೆ, ನಾನ್ ಕಡೆಯಾಗಿ ಹೋಗ್ತೀನಿ, ದೊಡ್ಡ ಮನ್ಸು ಮಾಡೀ ಮಾಲಾನ್ನ ನನ್ ಗಂಡಂಗೆ ಕೊಟ್ಟು ಮದ್ವಿ ಮಾಡು, ನಾನ ಅವಳ್ನ ಸವ್ತಿ ಅಂಗೆ ಎಂದೂ ಕಾಣಕಿಲ್ಲ, ಸಂದಾಗಿ ನೋಡ್ಕೊತೀನಿ. ಅಲ್ವಾ…. ನೀನಾರಾ ಯೋಳು ಅಪ್ಪಯ್ಯಂಗೆ ಅಂತಾ ಒಂದೇ ಸಮ ಗೋಗರದ್ಲು ಕಣ್ವಾ.
`ನೋಡ್ವಾ…. ನಮ್ದೇನಿಲ್ಲಾ…. ಮಾಲಾ ಒಪ್ಪಕೊಂಡ್ರೆ ಆತು ಅಂದ್ವಿ. ನಿಂಗೇ ಗೊತ್ತಲ್ಲ. ಕಮ್ಲೂ ಅಂದ್ರೆ, ಮಾಲಾಗೆ ವಸಿ ಎಚ್ಚೇ ಪಿರೂತಿ. ಒಟ್ನಾಗೆ ಕಮ್ಲೂ ಅದೇನು ಯೋಳಿ ಒಪ್ಪಿಸಿದ್ಲೋ ಗೊತ್ತಿಲ್ಲ. ಅರೆಮನಸ್ನಾಗೆ ಒಪ್ಕಂಡವಳೆ. ವಸಿ ನಮ್ಗೂ ಬೇಜಾರೈತೆ, ಆದ್ರೆ ಏನ್ ಮಾಡಾಕಾಗ್ತದೆ ಯೋಳು. ನಿಮ್ಮಪ್ಪನ್ನೂ, ಇನ್ನೊಬ್ಬ ಕಕ್ಕಪ್ಪನ್ನೂ ಕೇಳ್ದೆ ಕಣ್ವಾ, ಅವ್ರ ಸೈತ ಇದೇ ಸರಿ ಅಂದ್ರು. ಎಲ್ರೂ ಸೇರ್ಕಂಡು ಸೂರಿಗೇ ಕೊಡೋಣಾ ಅಂತ ನಿರ್ಧಾರ ಮಾಡುದ್ವಿ….’ ಎಂದ.
`ಸ್ವಲ್ಪ ವಯಸ್ಸಿನ ಅಂತ್ರ ಜಾಸ್ತಿ ಆಯ್ತಲ್ಲ ಕಕ್ಕಪ್ಪಾ…. ಮಾಲಾಗೆ ಇನ್ನೂ ಹದಿನಾರು ವರ್ಷ. ಅವನಿಗೆ ಆಗಲೇ ನಲ್ವತ್ರ ಮೇಲಿರ್ಬೇಕು,’ ಎಂದಳು ಅಮ್ಮ.
`ಐ….. ಅಸ್ಟು ವರ್ಷ ಯೋನು ಜಾಸ್ತಿ ಬುಡು, ನಲ್ವತ್ತು ವರ್ಷ ಅಂದ್ರೆ ಗಂಡ್ಮಕ್ಳಿಗೆ ನಟ್ಟ ನಡ್ವಿನ ಹಗ್ಲಿದ್ದಂತೆ, ನಾನ್ ಸೈತ ನಿಮ್ ಕಕ್ಕಗಿಂತ ಆಟೇ ದೊಡ್ಡೋನು. ಇಬ್ರೂ ಸಂದಾಕ ಸಂಸಾರ ಮಾಡ್ತಿಲ್ಲೇನೂ, ಮತ್ ನಿನ್ ಗಂಡ್ನೂ ನಿಂಗಿಂತ್ ಅತ್ತು ವರ್ಷ ದೊಡ್ಡನೇ ಅಲ್ಲೇನೂ, ಹಂಗೇ ಇದೂ ಅಂದಕಂಡ್ರಾತು, ಗಂಡಸ್ರ ವಯಸ್ಸ್ಯಾರು ಕೇಳ್ತಾರೆ ಬುಡು,’ ಅಂದ ಅಜ್ಜ.
ಅಜ್ಜನ ಸಾಹುಕಾರಿಕೆಯ ಠೀವಿ, ಗತ್ತಿನ ಮಾತು ಅಮ್ಮನ ಬಾಯಿ ಮುಚ್ಚಿಸಿತ್ತು. ಚಿಕ್ಕವರಿದ್ದಾಗಿನಿಂದಲೂ ಅಷ್ಟೇ, ಅಣ್ಣ ತಮ್ಮಂದಿರ ಮಕ್ಕಳೆಲ್ಲಾ ಈ ಅಜ್ಜನಿಗೆ ತುಂಬಾ ಹೆದರುತ್ತಿದ್ದರು. ಅವರ ಎದುರಿಗೆ ದನಿ ಏರಿಸಿ ಮಾತನಾಡಲು ಯಾರಿಗೂ ಧೈರ್ಯ ಇರಲಿಲ್ಲ. ಅವರ ನಿರ್ಧಾರ ಕೇಳಬೇಕು ಅಷ್ಟೇ. ಸಲಹೆ ಅಂಥೆಲ್ಲಾ ಹೆಣ್ಣುಮಕ್ಕಳು ಕೊಡು ಹಾಗೇ ಇರಲಿಲ್ಲ. ಇದ್ದಿದ್ದರಲ್ಲಿ ಮಾಲಾ ಒಬ್ಬಳೇ ಅವರಪ್ಪನ ಎದುರಿಗೆ ಗಟ್ಟಿಯಾಗಿ ಮಾತನಾಡುವ ಧೈರ್ಯ ಇದ್ದಳು. ಅಂಥವಳು ಈ ಮದುವೆಯನ್ನು ಹೇಗೆ ಒಪ್ಪಿದಳೋ ಎಂದು ಸಹನಾಳಿಗೆ ಅಚ್ಚರಿಯಾಗಿತ್ತು. ಅಮ್ಮನಿಗೂ ಅದನ್ನೇ ಕೇಳಿದಾಗ, `ಹೆಣ್ಣುಮಕ್ಕಳ ಹಣೇಬರಹವೇ ಅಷ್ಟು ಬಿಡು, ಏನೋ ಒಂದು ಹೇಳಿ ಒಪ್ಪಿಸಿಬಿಡುತ್ತಾರೆ. ಬಾಯಿ ಸತ್ತ ಜೀವಗಳು ಅವು,’ ಎಂದಾಗ ಸುಮ್ಮನಾಗಿದ್ದಳು.
ಮದುವೆಗೆ ಹೋದಾಗ ಕಮಲೂ ಚಿಕ್ಕಮ್ಮನನ್ನು ನೋಡಿ ಕರುಳು ಕಿವುಚಿದಂತಾಗಿತ್ತು. ಪಟಪಟನೆ ಅರಳು ಹುರಿದಂತೆ ಮಾತನಾಡುತ್ತಿದ್ದ ಮಾಲಾ ಇವಳೇನಾ ಎನ್ನುವಷ್ಟು ಬದಲಾಗಿ ಹೋಗಿದ್ದಳು. ಸೂರಿ ಖುಷಿಯಿಂದಲೇ ತನ್ನ ಚಂದದ ಪುಟ್ಟ ಹೆಂಡ್ತಿಗೆ ತಾಳಿ ಬಿಗಿದು ಲೋಕವನ್ನೇ ಗೆದ್ದಂತೆ ಸಂಭ್ರಮಿಸುತ್ತಿದ್ದುದನ್ನು ನೋಡಿ ಸಹನಾ ಮುಖ ಕಿವುಚಿದ್ದಳು. ಒಬ್ಬಳೇ ಸಿಕ್ಕಾಗ ಮಾಲಾಳನ್ನು, `ಎಷ್ಟು ಧೈರ್ಯದ ಹುಡುಗಿ ನೀನು. ಹೇಗೆ ಒಪ್ಪಿಕೊಂಡೆ ಈ ಮದುವೆಗೆ?’ ಎಂದು ಸಹನಾ ಧೈರ್ಯ ಮಾಡಿ ಕೇಳಿಯೇಬಿಟ್ಟಿದ್ದಳು.
`ನಿಮ್ ಪ್ಯಾಟ್ಯಾಗೆ ನಡ್ದಂಗೆ ಇಲ್ಲಿ ನಡೆಯಾಕಿಲ್ವಾ, ಕಮ್ಲಕ್ಕ ನೀವು ಮದ್ವಿಗೆ ಒಪ್ಪಂಗಿಲ್ಲಾ ಅಂದ್ರೆ, ನಾವು ಉರ್ಲು ಹಾಕ್ಕೊಂಡು ಸಾಯ್ತೀನಿ ಅಂತಾ ಸಾಯೋಕ್ ಹೋಗಿದ್ಲು. ಎಲ್ರೂ ಸೇರಿ ಕ್ವಾಣೆ ಬಾಗ್ಲು ಮುರ್ದು ಅವ್ಳ ಜೀವ ಉಳಿಸಿದ್ದಾತು. ಎಲ್ರೂ ನನ್ಮ್ಯಾಗೇ ಗೂಬೇ ಕುಂದುರ್ಸಿದ್ರು. ನಂಗೇನ್ ದಾರಿ ಐತೆ ಯೋಳು,’ ಎಂದು ಮಾಲಾ ಹೇಳಿದಳು.
ಸಹನಾಳಿಗೂ ತಿಳಿವಳಿಕೆ ಇಲ್ಲದ ವಯಸ್ಸಿನಲ್ಲಿ ಹೇಗೆ ಸಮಾಧಾನ ಮಾಡಬೇಕೆಂದು ಗೊತ್ತಾಗದೆ, ಅವಳ ಪರಿಸ್ಥಿತಿಗೆ ತಾನೂ ಅವಳ ಜೊತೆ ಅತ್ತಿದ್ದಳು.
ನಂತರದ ದಿನಗಳಲ್ಲಿ ಸಹನಾ, ಅಜ್ಜನ ಊರಿಗೆ ಹೋಗುವುದೇ ಕಡಿಮೆಯಾಗಿತ್ತು. ಹಾಗೊಮ್ಮೆ ಸಹನಾ ಹೋದಾಗ, ಮಾಲಾ ತವರು ಮನೆಗೆ ಬಂದಿರುತ್ತಿರಲಿಲ್ಲ. ಹಾಗಾಗಿ ಶಾರದಮ್ಮ ಆಗಾಗ ತವರಿಗೆ ಹೋಗಿ ಬಂದಾಗ, ಒಂದಿಷ್ಟು ವಿಷಯ ತಿಳಿಯುತ್ತಿತ್ತು. ಫೋನ್ ಮಾಡಿ ಸಹನಾಳಿಗೆ ಹೇಳುವುದನ್ನು ಮರೆಯುತ್ತಿರಲಿಲ್ಲ.
ಮದುವೆಯಾದ ಹೊಸದರಲ್ಲಿ ಕಮಲಾ ತನ್ನ ತಂಗಿಯನ್ನು ಆತ್ಮೀಯವಾಗೇ ಸ್ವಾಗತಿಸಿದ್ದಳು. ತಮಾಷೆ, ಕೀಟಲೆ ಮಾಡುತ್ತಿದ್ದ ಸೂರಿ ಮಾವನ ಕೈಯಿಂದ ಅಸಹನೆಯಿಂದಲೇ ತಾಳಿ ಕಟ್ಟಿಸಿಕೊಂಡಿದ್ದ ಮಾಲಾಳಲ್ಲಿ ಒಂದು ರೀತಿಯ ನಿರ್ಲಿಪ್ತತೆ ಹೆಚ್ಚಾಗತೊಡಗಿತ್ತು. ಅದು ಮದುವೆಯಾದ ದಿನದಿಂದಲೇ ಜಾರಿಗೆ ಬಂದಿತ್ತು. ಮಾವನ ಜೊತೆ ದೇಹವನ್ನು ಹಂಚಿಕೊಳ್ಳುವ ಕಲ್ಪನೆಯೇ ಹಿಂಸೆ ಎನಿಸಿತ್ತು. ಅವನ ಯಾವ ಪ್ರೀತಿಯ ಮಾತುಗಳೂ ಅವಳಿಗೆ ಸಹ್ಯವಾಗುತ್ತಿರಲಿಲ್ಲ. ಅವನ ಬಯಕೆಗೆ ಸುಮ್ಮನೆ ದೇಹ ಒಪ್ಪಿಸಿ, ಕೊರಡು ಬಿದ್ದ ಹಾಗೆ ಬಿದ್ದುಕೊಂಡಿರುತ್ತಿದ್ದಳು ಅಷ್ಟೇ. ತನ್ನನ್ನು ಒಂದು ಹೆರುವ ಯಂತ್ರವನ್ನಾಗಿ ಎಲ್ಲರೂ ನೋಡುತ್ತಿರುವರೇನೋ ಎಂಬಂತೆ ಭಾಸವಾಗುತ್ತಿತ್ತು.
ಮದುವೆಯಾಗಿ ಎರಡು ತಿಂಗಳಿಗೆ ಮುಟ್ಟು ನಿಂತಾಗ ಎಲ್ಲರೂ ಸಂಭ್ರಮಿಸಿದ್ದರು. ಆಗ ಮಾಲಾಳಿಗೆ ರಾಜೋಪಚಾರವೇ ನಡೆದಿತ್ತು. ಕಮಲಾಳಂತೂ ತಾನೇ ಬಸಿರಾಗಿದ್ದೀನೇನೋ ಎನ್ನುವಷ್ಟು ಸಂತಸ ಪಟ್ಟಿದ್ದಳು. ತಂಗಿಯನ್ನು ಹೂವಿನಂತೆ ನೋಡಿಕೊಳ್ಳುತ್ತಿದ್ದಳು. ಎಂಟನೇ ತಿಂಗಳಿಗೆ ಸೀಮಂತ ಇಟ್ಟುಕೊಂಡಿದ್ದರು. ಎಳೇ ಜೀವವೊಂದು ಮಡಿಲಲ್ಲಿ ಅರಳುತ್ತಿರುವ ಅನುಭವಕ್ಕೆ ನಿಧಾನವಾಗಿ ಮಾಲಾ ಸ್ಪಂದಿಸತೊಡಗಿದ್ದಳು. ಎಲ್ಲರ ಮೇಲಿನ ಅಸಮಾಧಾನ ತುಸು ಕಡಿಮೆಯಾಗಿತ್ತು. ಇಲ್ಲಿ ಯಾರೂ ಕೆಟ್ಟವರಿರಲಿಲ್ಲ, ಪರಿಸ್ಥಿತಿಯ ಜೊತೆ ರಾಜಿಯಾಗುವುದು ಒಳ್ಳೆಯದು ಎಂದು ಮನಸ್ಸಿಗೆ ಸಮಾಧಾನ ತಂದುಕೊಂಡು ಖುಷಿಯಾಗಿ ಇರತೊಡಗಿದಳು.
ತುಂಬಾ ಅದ್ಧೂರಿಯಾಗಿ ಸೀಮಂತ ನಡೆಯಿತು. ಹೆರಿಗೆಯಾದ ಮೇಲೆ, ತಾಯಿ ಮಗುವನ್ನು ತವರಿಗೆ ಕಳಿಸುತ್ತೇವೆ ಎಂದು ಬೀಗರು ಹೇಳಿದ್ದರಿಂದ ಅಜ್ಜನಂತೂ ಖುಷಿಯಿಂದ, ಮಗಳನ್ನು ಹಳ್ಳಿಯಿಂದ ಪೇಟೆಯ ಆಸ್ಪತ್ರೆಗೆ ಪದೇ ಪದೇ ಓಡಾಡಲು ಅನುಕೂಲವಾಗಲಿ ಎಂದು ಅಳಿಯನಿಗೆ ಕಾರು ಕೊಡಿಸಿಬಿಟ್ಟ. ಎಂಟು ತಿಂಗಳು ಮುಗಿಯುತ್ತಿದ್ದ ಹಾಗೆ ಆಸ್ಪತ್ರೆಗೆ ಕರೆತನ್ನಿ ಎಂದು ಡಾಕ್ಟರ್ ಹೇಳಿದ್ದರಿಂದ ಆಸ್ಪತ್ರೆಗೆ ಕರೆತಂದಿದ್ದರು. ಸ್ಕ್ಯಾನಿಂಗ್ ಮಾಡಿದ ಡಾಕ್ಟರ್, ಯಾಕೋ ಮಗುವಿನಲ್ಲಿ ಮೂಮೆಂಟ್ಸ್ ಕಾಣ್ತಾ ಇಲ್ಲ ಎಂದು ತಕ್ಷಣಕ್ಕೆ ಆಪರೇಷನ್ನಿಗೆ ರೆಡಿ ಮಾಡಿಬಿಟ್ಟರು.
ಆ ದೇವರಿಗೆ ಕರುಣೆಯೆಂಬುದೇ ಇರಲಿಲ್ಲವೇನೋ, ಮಗು ಹೊಟ್ಟೆಯಲ್ಲಿಯೇ ಸತ್ತಿತ್ತು. ಎಲ್ಲರೂ ತುಂಬಾ ಗೋಳಾಡಿದರು. ಆದರೂ ಮತ್ತೆ ತಾಯಿಯಾಗುವ ಅವಕಾಶ ಇದ್ದೇ ಇದೆ ಎಂದು ನೋಡಲು ಬಂದವರೆಲ್ಲಾ ಮಾಲಾಳಿಗೆ ಸಮಾಧಾನ ಹೇಳುವಾಗ, ಕಮಲಾಳಿಗೆ ತನ್ನ ಬಂಜೆತನದ ಬಗ್ಗೆ ಚುಚ್ಚಿ ಆಡುತ್ತಿದ್ದಾರೇನೋ ಎನಿಸುತ್ತಿತ್ತು. ನಂತರ ತಾನೇ ಸಮಾಧಾನ ಮಾಡಿಕೊಳ್ಳುತ್ತಾ, ಮಾಲಾಳ ಮಗು ತನಗೂ ಮಗು ತಾನೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಳು. ತವರು ಮನೆಯಲ್ಲಿ ಕಮಲಾ ತಾನೇ ಹದಿನೈದು ದಿನ ಇದ್ದು ಮಾಲಾಳನ್ನು ಸಂತೈಸುತ್ತಾ ಸೇವೆ ಮಾಡಿ ಗಂಡನ ಮನೆಗೆ ವಾಪಸಾದಳು. ಮೂರು ತಿಂಗಳ ವಿಶ್ರಾಂತಿಯ ನಂತರ ಮಾಲಾ ಮತ್ತೆ ಗಂಡನ ಮನೆಗೆ ಹಿಂತಿರುಗಿದ್ದಳು.
ನಿಜವಾಗಿ ಮಾಲಾಳ ಮನಸ್ಸಿಗೆ ಆಘಾತವಾಗಿದ್ದು ಆಗ. ಗಂಡನ ಮನೆಯಲ್ಲಿ ಯಾಕೋ ಎಲ್ಲರೂ ಏನೋ ಕಣ್ತಪ್ಪಿಸಿ ಓಡಾಡುವಂತೆ ಅನಿಸುತ್ತಿತ್ತು. ಏನೋ ಹೇಳಲು ಒದ್ದಾಡುತ್ತಿರುವಂತೆ ಭಾಸವಾಗಿತ್ತು. ಕಮಲಾ ಯಾಕೋ ತುಂಬಾ ಸೊರಗಿದವಳಂತೆ ಕಾಣುತ್ತಿದ್ದಳು. ಎರಡೇ ದಿನಕ್ಕೆ ವಿಷಯ ಮನದಟ್ಟಾಗಿತ್ತು. ಕಮಲಾ ಉಂಡಿದ್ದೆಲ್ಲಾ ವಾಂತಿ ಮಾಡಿ, ನೀರೂ ಕೂಡ ದಕ್ಕದೆ ಹಾಗಾಗಿರುವುದಕ್ಕೆ ಅವಳು ತಾಯಿಯಾಗುತ್ತಿರುವುದೇ ಕಾರಣ ಎಂದು ಗೊತ್ತಾದಾಗ, ಮಾಲಾ ಕುಸಿದು ಹೋಗಿದ್ದಳು. ಈ ಮನೆಯಲ್ಲಿ ಈಗ ತನ್ನ ಅಸ್ತಿತ್ವ ಏನು ಎಂಬ ಪ್ರಶ್ನೆ ಕಾಡಲು ಶುರು ಮಾಡಿತು. ಯಾಕೋ ಭವಿಷ್ಯವೆಲ್ಲಾ ಗೋಜಲು ಗೋಜಲು ಎನಿಸತೊಡಗಿತು.
ಈಗ ಕಮಲಾಳನ್ನು ತುಂಬಾ ಆಸ್ಥೆಯಿಂದ ನೋಡಿಕೊಳ್ಳುತ್ತಿದ್ದ ಗಂಡ, ಅತ್ತೆ, ಮಾವ ಎಲ್ಲರ ಮೇಲೂ ಸಿಟ್ಟು ಬರತೊಡಗಿತು. ಸ್ವಲ್ಪ ದಿನ ತಡೆದಿದ್ದರೆ ಇವರಿಗೆಲ್ಲಾ ಏನಾಗುತ್ತಿತ್ತು. ಕಮಲಕ್ಕನೇ ಹಡೆದು ಕೊಡುತ್ತಿದ್ದಳು. ಈಗ ನನ್ನ ಬಾಳು ಮೂರಾಬಟ್ಟೆಯಾಗಿ ಹೋಯಿತು ಎಂಬ ಭಾವನೆಯಿಂದ ಕುದಿಯತೊಡಗಿದಳು. ತನ್ನ ಓರಗೆಯವರನ್ನು ಅವರ ಸಣ್ಣ ವಯಸ್ಸಿನ ಚಿಗುರು ಮೀಸೆ ಗಂಡಂದಿರೊಂದಿಗೆ ನೋಡಿದಾಗ, ಅರ್ಧ ತಲೆ ನೆರೆತ, ಕಣ್ಣಿನ ಕೆಳಗೆ ಸುಕ್ಕು ಶುರುವಾದ ಮಾನವನ್ನು ನೋಡುವಾಗ ಕಳೆದುಕೊಂಡಿದ್ದೇನು ಎಂದು ಅರಿವಾಗಿತ್ತು.
ಸೂರಿಯಂತೂ ಹದಿಮೂರು ವರ್ಷಗಳ ನಂತರ ಮೊದಲ ಬಾರಿಗೆ ತಾಯಿಯಾಗುತ್ತಿರುವ ಕಮಲೂವಿನ ಬಯಕೆಗಳನ್ನು ಪೂರೈಸಲಾಗುತ್ತಿಲ್ಲವಲ್ಲ ಎಂಬ ಸಂಕಟದಿಂದ ತೊಳಲಾಡುತ್ತಿದ್ದ. ಮಾಲಾಳನ್ನು ರೊಚ್ಚಿಗೆಬ್ಬಿಸುವುದು ಬೇಡ ಎಂದು ಹತ್ತಿಕ್ಕಿಕೊಳ್ಳುತ್ತಿದ್ದ.
`ಆಕಿ ಇನ್ನೂ ಸಣ್ಣ ಹುಡುಗಿ. ಮೊದಲೇ ಹಠ, ಸಿಟ್ಟು ಜಾಸ್ತಿ. ಎಂದೋ ಆ ದ್ಯಾವ್ರು ನನ್ ಮ್ಯಾಗೆ ಕಣ್ಣುಬಿಟ್ಟಾನೆ, ಓಟೇ ಸಾಕು ನಂಗೆ, ನೀವು ಮಾಲಾನ್ ಜತೀಗೇ ಇರು, ನನ್ ಮಾತಾಡ್ಸಾಕೂ ಬರ್ಬೇಡಾ… ಕಾಳ್ಜೀ ಮಾಡಾಕ್ ಸೈತ್ ಬರ್ಬೇಡಾ…..’ ಎಂದು ಕಮಲಾ ಮೊದಲೇ ತಾಕೀತು ಮಾಡಿದ್ದಳು.
ಅವಳ ಪ್ರೀತಿ, ಮುಂದಾಲೋಚನೆ, ಕಾಳಜಿಗೆ ಮೂಕವಿಸ್ಮಿತನಾಗಿ ಗೋಣಾಡಿಸಿದ್ದ ಸೂರಿ. ಮೊದಲೇ ಒಂದು ಮಗುವನ್ನು ಕಳೆದುಕೊಂಡಿದ್ದರಿಂದ ಈ ಸಲ ಅದ್ಧೂರಿಯಾಗಿ ಅಲ್ಲದ್ದಿದರೂ ಕಮಲಾಳಿಗೆ ಎರಡೂ ಮನೆಯವರು ಸೇರಿ ಸರಳವಾಗಿ ಸೀಮಂತದ ಶಾಸ್ತ್ರ ಮಾಡಿ ಮುಗಿಸಿದ್ದರು. ಮಾಲಾ ಈಗ ಕಮಲಾಳನ್ನು ಮಾತನಾಡಿಸುತ್ತಲೇ ಇರಲಿಲ್ಲ. ಇಬ್ಬರೂ ಒಂದೇ ಕಡೆ ಇದ್ದರೆ ಸರಿ ಹೋಗುವುದಿಲ್ಲ, ಜೊತೆಗೆ ಮಗುವಿನ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ಅರಿತಿದ್ದ ಕಮಲಾ ಕೂಡ ಮೊದಲೇ ಗಂಡನಿಗೆ, ಅತ್ತೆಗೆ ಒಪ್ಪಿಸಿ ಐದು ತಿಂಗಳು ಮುಗಿಯುತ್ತಿದ್ದಂತೆ ಬಾಣಂತಕ್ಕೆ ಹೊರಟಳು.
ಅವಳು ಹೋದ ಮೇಲೆಯೇ ಮಾಲಾ ಗಂಡನ ಜೊತೆಗೆ ಸ್ವಲ್ಪ ಗೆಲುವಾಗಿ ಇರತೊಡಗಿದಳು. ಸೂರಿ ಸಹ ಮಾಲಾಳ ಮುಂದೆ ಕಮಲೂಗೆ ಅಪ್ಪಿತಪ್ಪಿಯೂ ಫೋನ್ ಮಾಡಿ ಮಾತನಾಡಿಸುತ್ತಿರಲಿಲ್ಲ. ಹೊರಗೆ ಹೋದಾಗ ವಿಚಾರಿಸಿಕೊಳ್ಳುತ್ತಿದ್ದ. ಒಂಬತ್ತನೇ ತಿಂಗಳಲ್ಲಿ ಕಮಲಾಳಿಗೆ ಹೆರಿಗೆ ನೋವು ಕಾಣಿಸಿಕೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು. ಎರಡು ದಿನ ನೋವು ತಿಂದು ಹಡೆದ ಗಂಡು ಮಗು, ಹುಟ್ಟಿದ ಒಂದು ಗಂಟೆಯಲ್ಲೇ ಕಣ್ಣುಮುಚ್ಚಿತ್ತು. ಅಯ್ಯೋ! ವಿಧಿಯೇ ಎಂದು ಎಲ್ಲರೂ ಸಂಕಟಪಟ್ಟರು. ಮಾಲಾಳಿಗೆ ಒಂದು ಕಡೆ ವಿಚಿತ್ರ ಸಂತಸವಾದರೂ, ಮತ್ತೊಂದು ಕಡೆ ಮಗುವನ್ನು ಕಳೆದುಕೊಂಡ ದುಃಖದ ಅರಿವಿದ್ದುದರಿಂದ ಅಕ್ಕನನ್ನು ಮಾತನಾಡಿಸಿ ಬಂದಳು.
ಕಾಲ ಉರುಳುತ್ತಲೇ ಇತ್ತು. ಈಗ ಅಕ್ಕ ತಂಗಿಯರಿಬ್ಬರೂ ಸಮಾನ ನೋವುಂಡವರಾದ್ದರಿಂದ, ಸದ್ಯ ಮಕ್ಕಳಾದರೆ ಸಾಕು, ಇಬ್ಬರಲ್ಲಿ ಯಾರಿಗಾದರೂ ಪರವಾಗಿಲ್ಲ, ನಮ್ಮದೇ ಎಂದುಕೊಂಡರಾಯಿತು ಎನ್ನುವ ಮನಸ್ಥಿತಿಗೆ ಬಂದಿದ್ದರು. ಆದರೆ ಮತ್ತೆ ಇಬ್ಬರಲ್ಲೂ ತಾಯಿಯಾಗುವ ಲಕ್ಷಣಗಳು ಕಂಡುಬರಲೇ ಇಲ್ಲ. ಬದುಕು ನಿಂತ ನೀರಾಗಿತ್ತು.
ಸಹನಾ ಅಷ್ಟು ಹೊತ್ತಿಗಾಗಲೇ ಸ್ನಾತಕೋತ್ತರ ಪದವಿ ಮುಗಿಸಿ, ಕಾಲೇಜಿನಲ್ಲಿ ಲೆಕ್ಚರರ್ ಆಗಿ ಸೇರಿಕೊಂಡಿದ್ದಳು. ಎರಡೇ ವರ್ಷದಲ್ಲಿ ಸುಹಾಸ್ ನೊಂದಿಗೆ ಮದುವೆಯಾಗಿತ್ತು. ವರ್ಷದಲ್ಲೇ ಅನ್ವಿಕಾಗೆ ತಾಯಿಯಾಗಿದ್ದಳು. ಮತ್ತೈದು ವರ್ಷಕ್ಕೆ ಅನಿಯ ಆಗಮನವಾಗಿತ್ತು. ತನ್ನ ಕಾಲೇಜು, ಸಂಸಾರ, ಮಕ್ಕಳ ನಡುವೆ ಮಾಲಾಳ ನೆನಪು ನಿಧಾನವಾಗಿ ಮರೆಯಾಗುತ್ತಾ ಬಂದಿತ್ತು. ಈಗ ಇದ್ದಕ್ಕಿದ್ದಂತೆ ಭರ್ತಿ ಹದಿನೈದು ವರ್ಷಗಳ ನಂತರ ಧುತ್ತೆಂದು ಮಾಲಾಳ ಭೇಟಿಯಾಗುತ್ತದೆ ಅಂದುಕೊಂಡಿರಲಿಲ್ಲ.
ಯೋಚಿಸುತ್ತಾ ಕುಳಿತವಳಿಗೆ ತನ್ನ ನಂಬರ್ ಕೂಗಿದಾಗ, “ಹಾ…. ಬಂದೆ,” ಎಂದು ದಡಬಡಿಸಿ, ಮಲಗಿದ್ದ ಅನಿಯನ್ನು ಎತ್ತಿಕೊಂಡು ಡಾಕ್ಟರ್ ಬಳಿ ಹೋದಳು. ಅರ್ಧ ನಿದ್ದೆಯಾಗಿದ್ದಕ್ಕೆ ಅನಿಯ ಅಳು ಜೋರಾಗಿತ್ತು. ಮಗುವನ್ನು ಪರೀಕ್ಷಿಸಿ, ಒಂದು ಇಂಜೆಕ್ಷನ್ ಕೊಟ್ಟು, ಔಷಧಿ, ಗುಳಿಗೆ ಬರೆದುಕೊಟ್ಟರು. ವ್ಯಾನಿಟಿ ಬ್ಯಾಗಿನಲ್ಲಿದ್ದ ಗೊಂಬೆಯನ್ನು ಕೊಟ್ಟು ಸಮಾಧಾನಪಡಿಸುತ್ತಾ, ಮಾಲಾಳ ರೂಮನ್ನು ಹುಡುಕಿಕೊಂಡು ಹೊರಟಳು.
ಲಕ್ಷ್ಮಜ್ಜಿ ಮಾಲಾಳಿಗೆ ಫ್ಲಾಸ್ಕಿನಲ್ಲಿದ್ದ ಕಾಫಿ ಬಗ್ಗಿಸಿ ಕೊಡುತ್ತಿದ್ದರು. ಸಹನಾಳನ್ನು ನೋಡಿದೊಡನೆಯೇ, “ಸಂದಾಗಿದಿಯೇನ್ವಾ…..? ಏಸು ವರ್ಷ ಆತು ನಿನ್ನ ನೋಡಿ, ಮದ್ವಿನಾಗೆ ನೋಡಿದ್ದು, ಕಾಪಿ ಕುಡಿ ತಗಾ….” ಎಂದು ಶಾರದಮ್ಮನಿಗೂ, ಸಹನಾಳಿಗೂ ಇರುವುದರಲ್ಲಿಯೇ ಅರ್ಧರ್ಧ ಕಪ್ ಹಾಕಿಕೊಟ್ಟಿತು.
“ಹ್ಞೂಂ ಅಜ್ಜಿ ಚೆನ್ನಾಗಿದ್ದೀನಿ. ಮಾಲಾ ಹೇಗಿದ್ದೀಯಾ….?” ಎನ್ನುತ್ತಾ ಕಪ್ ನ್ನು ಕೈಗೆತ್ತಿಕೊಂಡಳು.
“ಹ್ಞೂಂ, ಕಣೆ ಚೆನ್ನಾಗಿದ್ದೀನಿ. ನಿನ್ನ ಮಗ್ಳು ದಂತದ್ ಗೊಂಬೆ ಇದ್ದಂಗೋಳೆ,” ಎನ್ನುತ್ತಾ ಅನಿಯನ್ನು ಬಾ ಎಂದು ಕರೆದಳು.
ಮಗು ಹೊಸಬರನ್ನು ನೋಡಿ ಗಾಬರಿಯಿಂದ ಸಹನಾಳನ್ನು ಮತ್ತಷ್ಟು ಗಟ್ಟಿಯಾಗಿ ಅಚಿಕೊಂಡಳು.
“ಹೇಗಿದ್ದೀಯಾ ಮಾಲಾ…?” ಎಂದು ಸಹನಾ ಕೇಳಿದ್ದಕ್ಕೆ
“ಇಂಗೇ ನೋಡು,” ಎಂದು ನಕ್ಕಳು. ಜೀವನದ ಬಹಳಷ್ಟು ಏಳುಬೀಳು, ತಿರುಗಳನ್ನು ದಾಟಿ ಬಂದಿದ್ದ ಮಾಲಾಳಲ್ಲಿ ತುಂಬಾ ಪ್ರೌಢತೆ ಬಂದಿದೆ ಎನಿಸಿತು.
“ಈಗೆ ಬಸುರಾಗಿದ್ದು ಈ ಸಲ ಹೊರಗಿನವ್ರಿಗೆ ಯಾರ್ಗೂ ಯೋಳಾಕೆ ಹೋಗಿಲ್ಲ್ವ. ಮೊದ್ಲಿನ ಎಲ್ಡು ಮಕ್ಳು ದಕ್ಲಿಲ್ಲ. ಇದಾರಾ ಕೈಗೆ ಹತ್ತಿದ್ ಮ್ಯಾಗೆ ಯೋಳಿದ್ರಾತು ಅಂತಾ ಸುಮ್ಕಾದ್ವಿ,” ಎಂದು ಲಕ್ಷ್ಮಜ್ಜಿ ಹೇಳಿತು.
ಅದು ಹೌದು ಎನಿಸಿತು. ಅಷ್ಟರೊಳಗೆ ಸೂರಿ ಒಳಗೆ ಬಂದ. ವಯಸ್ಸಿನ ಪ್ರಭಾವ, ಮಕ್ಕಳಾಗದ ಕೊರಗು ಎರಡೂ ಸೇರಿ ಇರುವುದಕ್ಕಿಂತ ಇನ್ನೂ ಹತ್ತು ವರ್ಷ ಹೆಚ್ಚು ವಯಸ್ಸಾದವನಂತೆ ಕಂಡ. ಗಡ್ಡ, ಮೀಸೆ, ತಲೆ ಎಲ್ಲಾ ನೆರೆತಿತ್ತು. ಇಬ್ಬರನ್ನೂ ಮಾತನಾಡಿಸಿ, ಡಾಕ್ಟರ್ ಹೇಳಿದ ಇಂಜೆಕ್ಷನ್, ಗುಳಿಗೆ ತರಬೇಕು ಅಂತ ಹೊರಗೆಹೋದ.
ಇಬ್ಬರಿಗೂ ಭರವಸೆ ಧೈರ್ಯ ಹೇಳಿ, ಸ್ನಾನಕ್ಕೆ, ಊಟಕ್ಕೆ ಮನೆಗೇ ಬಂದುಬಿಡಿ ಎಂದು ಶಾರದಮ್ಮ ಒತ್ತಿ ಒತ್ತಿ ಹೇಳಿದರು. ಲಕ್ಷ್ಮಜ್ಜಿ, “ನೀ ಏನೂ ಬೇಜಾರ್ ಮಾಡ್ಕಾಬ್ಯಾಡ ಕಣೇ. ನಮ್ಗಿಲ್ಲಿ ಯೋನೂ ಕಷ್ಟ ಇಲ್ಲ, ಎರ್ಗೆ ಒಂದು ಸುಸೂತ್ರಾಗಿ, ಸಂದಾಕಿರೋ ಕೂಸು ಹುಟ್ಟುದ್ರೆ ಸಾಕು. ಹಂಗೇನಾರಾ ಇದ್ರೆ ನಿಂಗೆ ಫೋನ್ ಮಾಡಾಕೆ ಸೂರಿಗೆ ಯೋಳ್ತೀನಿ. ಹೆರಿಗೆ ಆದ್ ಮ್ಯಾಗೆ ನೀನೇ ಒಮ್ಮೆ ಬಂದೋಗು,” ಎಂದು ಹೇಳಿತು ಲಕ್ಷ್ಮಜ್ಜಿ.
“ತುಂಬಾ ಟೆನ್ಶನ್ ಮಾಡ್ಕೋಬೇಡ ಮಾಲಾ. ಈ ಸಲ ನೀನು ಮಗೂನ ಊರಿಗೆ ಎತ್ಕೊಂಡು ಹೋಗೇ ಹೋಗ್ತೀಯಾ, ನಾಮಕರಣಕ್ಕೆ ನನ್ನ ಕರೆಯೋದು ಮರೀಬೇಡಾ,” ಎಂದು ಸಹನಾ ತಮಾಷೆ ಮಾಡಿದಾಗ, “ಆತು ಬುಡು,” ಎಂದು ಮಾಲಾ ಕಣ್ಣೊರೆಸಿಕೊಂಡಳು.
ಮಗಳ ಕೈಯಲ್ಲಿ ಎರಡು ದಿನ ಆಸ್ಪತ್ರೆಗೆ ಊಟ ಕೊಟ್ಟು ಕಳಿಸಿದರು ಶಾರದಮ್ಮ. ಮೂರನೇ ದಿನ ಬೆಳಿಗ್ಗೆಯೇ ಲಕ್ಷ್ಮಜ್ಜಿ ಸೂರಿಯ ಫೋನ್ ನಿಂದ, “ನವ್ ಮಾಲಿಗೆ ಗಂಡುಡ್ಗ ಆತು ಕಣೇ. ಮುಂಜಾಲೇ ಎರ್ಗೆ ಆತು. ಬಾಂಣ್ತೀ, ಕೂಸು ಇಬ್ರೂ ಸಂದಾಗೌರೆ,” ಎಂದು ಖುಷಿಯಿಂದ ಹೇಳಿತು ಲಕ್ಷ್ಮಜ್ಜಿ.
ಅದನ್ನು ಕೇಳಿ ಎಲ್ಲರಿಗೂ ಸಂತೋಷವಾಯಿತು. ಅಂದು ಮಧ್ಯಾಹ್ನಕ್ಕೆ ಊಟ ತೆಗೆದುಕೊಂಡು ಸಹನಾ, ಶಾರದಮ್ಮ ಇಬ್ಬರೂ ಹೋಗಿ ಮಾತನಾಡಿಸಿದರು. ಸಹನಾ ತಾನು ಊರಿಗೆ ಹೋದರೆ, ಮತ್ತೆ ಕಾಲೇಜಿಗೆ ರಜೆ ಸಿಕ್ಕಿ ಬರುವುದು ಯಾವಾಗಲೋ ಎಂದುಕೊಂಡು ಮಾಲಾಳ ಮಗುವಿನ ಕೈಯಲ್ಲಿ ಐನೂರರ ನೋಟನ್ನು ಇಟ್ಟಳು. ಮೂರು ದಿನಕ್ಕೇ ಡಿಸ್ಕಾರ್ಜ್ ಆಗಿ, ಊರಿಗೆ ಹೋಗಿಬರುತ್ತೇವೆಂದು ತಿಳಿಸಿ ಹೊರಟರು.
ಸಹನಾ ಹಾಕಿದ್ದ ರಜೆಗಳು ಮುಗಿಯಲು ಬಂದಿದ್ದವು. ಜೊತೆಗೆ ಅನ್ವಿಕಾಳನ್ನು ಶಾಲೆಗೆ ಸೇರಿಸಬೇಕಾಗಿದ್ದರಿಂದ ಬೇಗನೆ ಹೊರಟಿದ್ದಳು. ಸುಹಾಸ್ ಅವಳನ್ನು ಕರೆದುಕೊಂಡು ಹೋಗಲು ಕಾರು ತಂದಿದ್ದ. ಶಾರದಮ್ಮ ಅಂದು ಅಳಿಯನಿಗಾಗಿ ಹೋಳಿಗೆ ಮಾಡಿದ್ದರು. ಮಧ್ಯಾಹ್ನ ಊಟ ಮಾಡಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಜ್ಜನಿಂದ ಫೋನ್ ಬಂದಿತ್ತು. ಅಜ್ಜನ ಜೊತೆ ಮಾತನಾಡಿದ ಶಾರದಮ್ಮ ಸೋತ ದನಿಯಲ್ಲಿ, “ಸೂರಿಗೆ ಹಾರ್ಟ್ ಆಟ್ಯಾಕ್ ಆಗಿ ಹೋಗಿಬಿಟ್ಟನಂತೆ,” ಎಂದು ಹೇಳುತ್ತಿದ್ದಂತೆ ಎಲ್ಲರ ಕಣ್ತುಂಬಿ ಬಂದಿತು.