18 ವರ್ಷಗಳ ಬಳಿಕ ಆರ್ಸಿಬಿ ತಂಡ ಐಪಿಎಲ್ನಲ್ಲಿ ವಿಜಯ ಸಾಧಿಸಿದೆ. ಪ್ರತಿ ವರ್ಷ ಅಭಿಮಾನಿಗಳು ಈ ಸಲ ಕಪ್ ನಮ್ದೇ ಅಂತ ಪದೇ ಪದೇ ಹೇಳುತ್ತಿದ್ದರು. ಆದರೆ ಈ ಬಾರಿ ಕೋಟ್ಯಾಂತರ ಅಭಿಮಾನಿಗಳು ಹೆಮ್ಮೆಯಿಂದ ಹೇಳುತ್ತಿದ್ದಾರೆ ಈ ಸಲ ಕಪ್ ನಮ್ದು ಅಂತ. ಹೌದು, ಕೊನೆಗೂ ಆರ್ಸಿಬಿ ಕಪ್ ತನ್ನದಾಗಿಸಿಕೊಂಡಿದ್ದು, ಮ್ಯಾಚ್ ಗೆಲ್ಲುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಇದೀಗ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಲು ಇಡೀ ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸುತ್ತಿದೆ. ಹೀಗಾಗಿ ವಿಧಾನಸೌಧದ ಗ್ರಾಂಡ್ ಸ್ಟೆಪ್ ಮೇಲೆ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಸಿಬ್ಬಂದಿಗಳು ಓಪನ್ ಸ್ಟೇಜ್ ಮೂಲಕ ವೇದಿಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಸರ್ಕಾರದಿಂದ ಸನ್ಮಾನ ಮಾಡಲು ಸಿದ್ಧವಾಗುತ್ತಿದೆ.
ಇಂದು ಮಧ್ಯಾಹ್ನ 1.30ಕ್ಕೆ ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸಲಿದೆ. ಅಹಮದಾಬಾದ್ನಿಂದ ವಿಶೇಷ ವಿಮಾನದಲ್ಲಿ ಬರುತ್ತಿರುವ ತಂಡ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಸಂಜೆ 4 ಗಂಟೆ ಸುಮಾರಿಗೆ ವಿಧಾನಸೌಧಕ್ಕೆ ಆರ್ಸಿಬಿ ತಂಡ ಭೇಟಿ ನೀಡಲಿದೆ. ಇನ್ನೂ, ಸಿಎಂ ಸಿದ್ದರಾಮಯ್ಯನವರು ಇಂದು ಆರ್ಸಿಬಿ ಆಟಗಾರರಿಗೆ ಸನ್ಮಾನಿಸಲಿದ್ದಾರೆ.ಪೊಲೀಸ್ ಇಲಾಖೆ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು. ಆರ್ಸಿಬಿ ತಂಡದಿಂದ 5 ರಿಂದ 6ಗಂಟೆವರೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ. ಪಾಸ್ ಅಥವಾ ಟಿಕೆಟ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಆದಷ್ಟೂ ಅಭಿಮಾನಿಗಳು ನಮ್ಮ ಮೆಟ್ರೋಗೆ ಬನ್ನಿ. ಪಾರ್ಕಿಂಗ್ ಸಮಸ್ಯೆಯಾಗುವ ಸಾಧ್ಯತಯೆ ಇದ್ದು, ಹೀಗಾಗಿ ಮೆಟ್ರೋ ಬಳಸುವಂತೆ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ DPR ಕಾರ್ಯದರ್ಶಿ ಸತ್ಯವತಿ ಮಾತನಾಡಿ, ವಿಧಾನಸೌಧದಲ್ಲಿ ಕೇವಲ ಸನ್ಮಾನ ಅಷ್ಟೇ ನಡೆಯುತ್ತದೆ. ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಬೇಕು. ಎದುರುಗಡೆ ಹೈಕೋರ್ಟ್ ಇದ್ದು, ಇದು ಸೂಕ್ಷ್ಮ ಪ್ರದೇಶ. ಹಾಗಾಗಿ ಅಭಿಮಾನಿಗಳಿಗೆ ವಿಧಾನಸೌಧದಲ್ಲಿ ಪ್ರವೇಶ ಇಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.