ಸಂಸ್ಕೃತಿ ಎಂಬುದು ಅತಿ ತೂಕದ ಪದ. ಇದರ ವ್ಯಾಖ್ಯಾನ ಸುಲಭವಲ್ಲ. ನಮ್ಮ ಜೀವನದ ಹಾಸುಹೊಕ್ಕಾಗಿರುವ ಸಂಸ್ಕೃತಿ, ಹಿರಿಯ ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಹರಿದು ಬರುತ್ತದೆ. ಇಂದಿನ ಆಧುನಿಕ ನಿಟ್ಟಿನಲ್ಲಿ ಇದರಲ್ಲಿಯ ಬದಲಾವಣೆ ಎಷ್ಟು ಅನಿವಾರ್ಯ ಎಂಬುದನ್ನು ವಿವರವಾಗಿ ಗಮನಿಸೋಣವೇ…….?
ಸಂಸ್ಕೃತಿ ಎಂದರೇನು?
ಇದನ್ನು ವ್ಯಾಖ್ಯಾನಿಸುತ್ತಾ ಹೋದರೆ ಅರ್ಥ ಮಾಡಿಕೊಳ್ಳುವುದೇ ಬಹಳ ಕ್ಲಿಷ್ಟ ಎನಿಸಬಹುದು. ಹಾಗಾದರೆ ಸರಳವಾಗಿ ಹೇಳಬೇಕೆಂದರೆ ಯಾವುದೇ ಪ್ರದೇಶದ ನಡೆನುಡಿ, ಜೀವನ ಶೈಲಿಯನ್ನೂ ಸಂಸ್ಕೃತಿ ಎಂದು ಅರ್ಥೈಸಬಹುದು. ಪ್ರಸಿದ್ಧ ಮಾನವ ಶಾಸ್ತ್ರಜ್ಞ ಎಡ್ವರ್ಡ್ ಟೇಲರ್ ಪ್ರಕಾರ ಸಂಸ್ಕೃತಿ ಎನ್ನುವುದರಲ್ಲಿ ಜ್ಞಾನ, ನಂಬಿಕೆ, ಕಲೆ, ನೀತಿ, ನ್ಯಾಯ, ಸಂಪ್ರದಾಯ ಈ ಎಲ್ಲವೂಉ ಒಳಗೊಂಡಿರಬೇಕು ಎಂದು ಅರ್ಥೈಸಬಹುದು.
ಭಾರತೀಯ ಸಂಸ್ಕೃತಿ ಎಂದಾಗ ಇಲ್ಲಿನ ವಸ್ತ್ರ ವಿನ್ಯಾಸ, ಹಬ್ಬಗಳು, ಭಾಷೆಗಳು, ಧರ್ಮ, ಸಂಗೀತ, ನೃತ್ಯ, ಕಲೆ, ಶಿಲ್ಪಕಲೆ, ಆಹಾರ ಎಲ್ಲ ಒಳಗೊಂಡಿರುತ್ತದೆ. ಅಂತೆಯೇ ಕೆಲವು ಕಟ್ಟುಪಾಡುಗಳೂ ಇವೆ. ಆದರೆ ಇಲ್ಲಿ ನಮ್ಮ ಪ್ರಶ್ನೆ ಭಾರತೀಯ ಸಂಸ್ಕೃತಿಯಲ್ಲಿ ಏನು ಬದಲಾವಣೆಯಾಗಿದೆ, ಅದು ಬರಿಯ ಬದಲಾವಣೆಯೋ, ಪತನವೋ ಅಥವಾ ನಿರ್ಲಕ್ಷ್ಯತನವೋ ಎನ್ನುವುದು ನಿಜಕ್ಕೂ ಚರ್ಚಾಸ್ಪದ ವಿಷಯ.
ಈ ಬಗ್ಗೆ ವಿಭಿನ್ನ ವ್ಯಕ್ತಿಗಳನ್ನು ಮಾತನಾಡಿಸಿದಾಗ ಬೇರೆ ಬೇರೆ ಅಭಿಪ್ರಾಯಗಳು ಮೂಡಿಬಂದವು.
ಯುವ ಜನತೆ ಏನಂತಾರೆ….?
24 ವರ್ಷದ ಯುವ ವಕೀಲೆ ಪ್ರಖ್ಯಾತಿ, “ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೆಣ್ಣುಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಉದ್ಯೋಗವನ್ನು ಮಾಡುತ್ತಿದ್ದಾರೆ. ಎಲ್ಲಾ ರಂಗಗಳ್ಲೂ ಅವಳ ಪ್ರವೇಶವಾಗಿದೆ. ಅಂತೆಯೇ ಹಿಂದಿನಂತೆ ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಶೋಷಣೆಯನ್ನು ಸಹಿಸಲಾರಳು. ಅಗತ್ಯವಿದ್ದರೆ ಮದುವೆ ಎನ್ನುವ ಸಂಕೋಲೆಯಿಂದ ಹೊರಬರಲು ಅವಳು ಸಿದ್ಧಳಾಗಿದ್ದಾಳೆ. ಉದಾ. ಹಿಂದೆ ಮದುವೆಯಾಗಿಬಿಟ್ಟರೆ ಆಯಿತು. ಕಷ್ಟವೋ, ಸುಖವೋ ಅವಳು ಅಲ್ಲಿ ಇರಲೇ ಬೇಕು. ಅವಳು ಎಷ್ಟೇ ಹಿಂಸೆಯನ್ನು ಅನುಭವಿಸುತ್ತಿದ್ದರೂ, ಅವಳಿಗೆ ಅಲ್ಲಿಂದ ಬಿಡುಗಡೆಯೇ ಇರಲಿಲ್ಲ. ಆದರೆ ಈಗ ಅವಳು ಇಷ್ಟವಿಲ್ಲದ ಮದುವೆಯಿಂದ ಬಿಡುಗಡೆ ಹೊಂದಲು ಪೋಷಕರು ಮತ್ತು ಸರ್ಕಾರ ಸಹಾಯ ಮಾಡುತ್ತದೆ. ಯಾವ ವಿಷಯಕ್ಕಾದರೂ ಬದಲಾವಣೆ ಅನಿವಾರ್ಯ. ಆಯಾ ಸಮಯಕ್ಕೆ ಅನುಗುಣವಾಗಿ ಸಂಪ್ರದಾಯಗಳನ್ನು ಸೃಷ್ಟಿಸಲಾಗಿದೆ. ಅಂದ ಮಾತ್ರಕ್ಕೆ ಕಣ್ಣು ಮುಚ್ಚಿಕೊಂಡು ಅವಕ್ಕೆ ಜೋತು ಬೀಳುವ ಅಗತ್ಯವಿಲ್ಲ. ಬದಲಾವಣೆ ಅಭಿವೃದ್ಧಿಯ ಸಂಕೇತ, ಅದರ ಬಗ್ಗೆ ವಿರೋಧವಾದರೂ ಏಕೆ? ಅಲ್ಲವೇ?” ಎನ್ನುತ್ತಾರೆ.
ಹಿರಿಯರ ಮನದಲ್ಲಿ……
ಅದೇ ಕೆಲವು ಹಿರಿಯ ಮಹಿಳೆಯರನ್ನು ಮಾತನಾಡಿಸಿದಾಗ ಬಂದ ಅಭಿಪ್ರಾಯ. ಹಿಂದೆ ಬೆಳಿಗ್ಗೆ ಎದ್ದು ಮನೆಯ ಮುಂದೆ ನೀರು ಹಾಕಿ, ರಂಗೋಲಿ ಇಡುತ್ತಿದ್ದರು. ಅದಕ್ಕೊಂದು ಅರ್ಥವಿತ್ತು. ಸ್ನಾನ ಮಾಡಿಯೇ ನಂತರ ಎಲ್ಲಾ ಕೆಲಸಗಳು. ಆದರೆ ಈಗ ಯಾರು ಅದನ್ನು ಪಾಲಿಸುತ್ತಾರೆ? ಹೆಣ್ಣು ಸ್ವತಂತ್ರಳು ಖಂಡಿತ. ಅಂದಮಾತ್ರಕ್ಕೆ ಅವರ ನಡೆ ನುಡಿಯಲ್ಲಿ ಗಾಂಭೀರ್ಯ ಅಗತ್ಯ ಎನ್ನುತ್ತಾರೆ. ಯುವ ಜನತೆ ಧರಿಸುವ ವಸ್ತ್ರಗಳ ಬಗ್ಗೆಯೂ ಅವರ ಮಾತಿನಲ್ಲಿ ಆಕ್ಷೇಪಣೆ ಎದ್ದು ಕಾಣುತ್ತದೆ.
ಕೂಪ ಮಂಡೂಕದಿಂದ ಹೊರಗೆ…..
“ಹಿಂದೆ ನಮ್ಮ ಜೀವನ ಒಂದು ರೀತಿಯಲ್ಲಿ ಕೂಪ ಮಂಡೂಕದಂತೆ ಇತ್ತು. ಪ್ರಪಂಚದ ಬೇರೆ ಭಾಗದಲ್ಲಿ ಏನಾಗುತ್ತಿದೆ? ಏನು ನಡೆಯುತ್ತಿದೆ? ಅವರ ಜೀವನ ಹೇಗಿದೆ ಎನ್ನುವ ಬಗ್ಗೆ ಗೊತ್ತಿರಲಿಲ್ಲ. ನಮ್ಮ ದೊಡ್ಡವರು ಹೇಳಿದ್ದನ್ನು ಚಾಚೂ ತಪ್ಪದೆ ಮಾಡುತ್ತಿದ್ದೆ. ಈಗ ಸಾಮಾಜಿಕ ಜಾಲತಾಣ, ಜಾಗತೀಕರಣದ ಮೂಲಕ ಇಡೀ ವಿಶ್ವದಲ್ಲಿ ಏನಾಗುತ್ತಿದೆ ಎಂದು ಕ್ಷಣ ಮಾತ್ರದಲ್ಲಿ ತಿಳಿಯಬಹುದು. ಇನ್ನೂರು ವರ್ಷ ನಮ್ಮನ್ನಾಳಿದ ಬ್ರಿಟಿಷರ ಪ್ರಭಾವ ನಮ್ಮ ಮೇಲೆ ಬಹಳಷ್ಟಾಗಿದೆ. ಜೊತೆಗೆ ಅವರ ಸಂಸ್ಕೃತಿಯ ಬಗ್ಗೆ ಭಾರತೀಯರಿಗೆ ಅದೇನೋ ವ್ಯಾಮೋಹ. ಅವರನ್ನು ಅನುಕರಿಸುವುದರಲ್ಲಿ ಏನೋ ಸಂತೋಷ ಪಡೆಯುತ್ತೇವೆ. ಸಂಸ್ಕೃತಿಗೂ ಭಾಷೆಗೂ ಹತ್ತಿರದ ನಂಟಿದೆ. ನಮ್ಮ ಮಕ್ಕಳಿಗೆ ನಾವು ನೀಡುತ್ತಿರುವುದು ಇಂಗ್ಲಿಷ್ ಭಾಷೆಯ ವಿದ್ಯಾಭ್ಯಾಸ.
“ಆದರೆ ಇಂದಿನ ಆಧುನಿಕ ಕಾಲದ ನಮ್ಮ ಮಕ್ಕಳಿಗೆ ನಮ್ಮ ಭಾಷೆಯ ಸಾಹಿತ್ಯದ ಪರಿಚಯವೇ ಇಲ್ಲವಾಗಿದೆ. ಬರಿಯ ಸಾಹಿತ್ಯಷ್ಟೇ ಅಲ್ಲ, ಎಲ್ಲಾ ವಿಷಯಗಳಲ್ಲೂ ಪರಿಣಾಮ ಬೀರಿದೆ. ಒಟ್ಟು ಕುಟುಂಬಗಳು ಕಾಣೆಯಾಗಿವೆ. ವೃದ್ಧಾಶ್ರಮಗಳು ಹೆಚ್ಚಾಗಿವೆ. ಹಬ್ಬ ಸಂಪ್ರದಾಯಗಳ ವಿಷಯದಲ್ಲೂ ಬದಲಾವಣೆ ಕಾಣುತ್ತಿದೆ. ಆದರೆ ಬದಲಾವಣೆ ಅನೇಕ ಒಳ್ಳೆಯ ವಿಷಯಗಳಿಗೆ ಅನುವು ಮಾಡಿಕೊಟ್ಟಿದೆ ಎನ್ನುವುದನ್ನು ಅಲ್ಲಗಳೆಯಲಾಗದು ಎನ್ನುತ್ತಾರೆ,” ಬಡ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಇಂಗ್ಲಿಷ್ ಮತ್ತು ಕನ್ನಡೇತರರಿಗೆ ಕನ್ನಡ ಕಲಿಸುವುದನ್ನೇ ಗುರಿಯಾಗಿ ಇಟ್ಟುಕೊಂಡಿರುವ ಆಶಾ ಇನ್ಛಿನೈಟ್ ಸಂಸ್ಥೆಯ ಮುಖ್ಯಸ್ಥೆ ಮೀರಾ ರಮಣ್.
ಎಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ?
ನಮ್ಮ ಭಾರತೀಯ ಸಂಸ್ಕೃತಿ ನಿರ್ಲಕ್ಷ್ಯಕ್ಕೆ ಒಳಗಾಗಿದೆಯೇ ಎನ್ನುವ ಪ್ರಶ್ನೆಗೆ ಡಾ. ಹರಿಕಿರಣ್ ರ ಉತ್ತರ ಹೀಗಿದೆ,
“ಎಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ? ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲಾ ಖಂಡಿತ ಗೌರವ ನೀಡಲಾಗುತ್ತಿದೆ. ಒಟ್ಟು ಕುಟುಂಬ ಅನುಕೂಲ ಎನ್ನುವವರು ಹಾಗೆಯೇ ಇದ್ದಾರೆ. ಅದನ್ನು ಬೇಡ ಎನ್ನುವವರು ಅಲ್ಲಿಂದ ಹೊರ ಬಂದಿದ್ದಾರೆ. ಮಹಿಳೆಯರು ವಿದ್ಯಾವಂತರಾಗಿ ಉದ್ಯೋಗಸ್ಥರಾಗಿ ಇರುವುದರಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಅರ್ಹರಾಗಿದ್ದಾರೆ. ಬದಲಾವಣೆಗಳು ಒಳ್ಳೆಯದಕ್ಕೆ ಅಲ್ಲವೇ? ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನು ಅನುಸರಿಸಲಾಗುತ್ತಿದೆ. ಕಾಲಾಯ ತಸ್ಮೈ ನಮಃ ಎನ್ನುವಂತೆ ಕಾಲಕ್ಕೆ ತಕ್ಕನಾಗಿ ಋತುಗಳು, ಪ್ರಕೃತಿ ಎಲ್ಲ ಬದಲಾಗುವಾಗ, ಎಂದೋ ಅಂದಿನ ಕಾಲಕ್ಕೆ ತಕ್ಕವನಾಗಿ ಅನುಸರಿಸುತ್ತಿದ್ದ ಪದ್ಧತಿಗಳನ್ನು ಈಗಲೂ ಅನುಸರಿಸಬೇಕೇ ಎನ್ನುವುದು ನಮ್ಮ ಮುಂದಿನ ಪ್ರಶ್ನೆ.”
ಬದಲಾವಣೆಯ ಹಾದಿಯಲ್ಲಿ…..
ನಮ್ಮ ಭಾರತೀಯ ಸಂಸ್ಕೃತಿಯ ಕೆಲವು ಹೆಚ್ಚುಗಾರಿಕೆಗಳಲ್ಲಿ ಅವಿಭಕ್ತ ಕುಟುಂಬ ಒಂದು. ಹೆಚ್ಚು ಜನರು ಒಂದೇ ಮನೆಯಲ್ಲಿ ಇರುವಾಗ ಬಹಳ ಅನುಸರಣೆ ಬೇಕಾಗುತ್ತದೆ. ಆದರೆ ಈಗ ಅವಿಭಕ್ತ ಕುಟುಂಬಗಳು ಬಹಳ ವಿರಳವಾಗಿವೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಅಲ್ಲದೆ, ಒಂದೇ ಸೂರಿನ ಅಡಿಯಲ್ಲಿ ಬಹಳಷ್ಟು ಜನರು ಇರುವಾಗ ವೈಯಕ್ತಿಕ ಆಶಯಗಳಿಗೆ ಆದ್ಯತೆ ನೀಡಲಾಗದು. ಅವಿಭಕ್ತ ಕುಟುಂಬಗಳಲ್ಲಿ ಅನೇಕ ಬಾರಿ ಪರಸ್ಪರ ಸಹಾಯ ಆಗುತ್ತದೆ. ಆದರೂ ಈಗಿನ ಯುವ ಜನಾಂಗ ಸದಾ ಏಕಾಂತವನ್ನು ಬಯಸುವಾಗ ಅವರ ಆದ್ಯತೆ ವಿಭಕ್ತ ಕುಟುಂಬವಾಗುತ್ತದೆ. ನಮ್ಮ ಯುವ ಜನತೆಯ ಮೇಲೆ ಪಾಶ್ಚಾತ್ಯ ಸಂಸ್ಕತಿ ಸಾಕಷ್ಟು ಪರಿಣಾಮ ಬೀರಿದೆ. ಕೆಲವು ಅಭ್ಯಾಸಗಳು ಅವರನ್ನು ಅಂಟಿಕೊಂಡುಬಿಟ್ಟಿವೆ. ಧರಿಸುವ ಬಟ್ಟೆ ಇರಬಹುದು, ಮದ್ಯಪಾನ, ಧೂಮಪಾನ ಎಲ್ಲ ಅವರಿಗೆ ಜೀವನದ ಒಂದು ಭಾಗಲೇ ಆಗಿಬಿಟ್ಟಿದೆ. ವೀಕೆಂಡ್ ಪಾರ್ಟಿ ಕಲ್ಚರ್ ಇದಕ್ಕೆ ಮತ್ತಷ್ಟು ಇಂಬು ಕೊಡುತ್ತದೆ.
ವಿದೇಶದಲ್ಲಿನ ಭಾರತೀಯ
ಆದರೆ ಒಂದು ವಿಷಯ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ವಿದೇಶದಲ್ಲಿರುವ ಭಾರತೀಯರು ಇಲ್ಲಿಯವರಿಗಿಂತಲೂ ಚೆನ್ನಾಗಿ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಅತಿಥಿ ಸತ್ಕಾರ ಮಾಡುತ್ತಾರೆ. ಮಕ್ಕಳಿಗೆ ನಮ್ಮ ಭಾರತೀಯ ಅದರಲ್ಲೂ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳನ್ನು ಕಲಿಸುತ್ತಾರೆ. ಇತ್ತೀಚೆಗೆ ವಿದೇಶದಲ್ಲಿರುವ ಎಂಟು ವರ್ಷದ ನಮ್ಮ ನೆಂಟರ ಹುಡುಗಿ ಪುರಂದರ ದಾಸರ ದೇವರ ನಾಮ ಹಾಡಿದ್ದನ್ನು ಕೇಳಿದಾಗ ಸಂತೋಷವಾಯಿತು. ಅಂತೆಯೇ ಅಲ್ಲಿನ ಮಕ್ಕಳಿಗೆ ಭಗವದ್ಗೀತೆಯನ್ನೂ ಕಲಿಸುತ್ತಾರೆ.
ನಿರಾಶರಾಗಬೇಕೇಕೇ…..
ಅಂದ ಮಾತ್ರಕ್ಕೆ ನಮ್ಮ ದೇಶದ ಬಗ್ಗೆಯೂ ಸಹ ನಾವು ನಿರಾಶರಾಗಬೇಕಿಲ್ಲ. ಇಲ್ಲಿಯೂ ಅನೇಕರು ತಮ್ಮ ಹುಟ್ಟುಹಬ್ಬಗಳನ್ನು ಯಾವುದಾದರೂ ಅನಾಥಾಲಯಕ್ಕೆ, ವೃದ್ಧಾಶ್ರಮಗಳಿಗೆ ಹೋಗಿ ಆಚರಿಸಿಕೊಳ್ಳುತ್ತಾರೆ. ದೇವಸ್ಥಾನಗಳಲ್ಲಿ ಯಾತ್ರಾ ಸ್ಥಳಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನ ಸೇರುತ್ತಾರೆ. ಹಬ್ಬದ ದಿನಗಳಲ್ಲಿ ದೊಡ್ಡವರು ಶ್ಲೋಕಗಳನ್ನು ಹೇಳಿದರೆ ಮಕ್ಕಳಿಗೆ ಅರ್ಥ ತಿಳಿಸಿ ಎನ್ನುತ್ತಾರೆ. ಮಕ್ಕಳಿಗೆ ಶ್ಲೋಕ ಕಲಿಸುತ್ತಿದ್ದಾರೆ. ಸಾರಾ ಸಗಟಾಗಿ ನಾವು ನಮ್ಮ ಸಂಸ್ಕೃತಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಆತಂಕಪಡುವ ಅಗತ್ಯವಿಲ್ಲ. ಬದಲಾವಣೆಯ ಹಂತದಲ್ಲಿ ಕೆವಲ ಅನಗತ್ಯ ಇರುಸು ಮುರುಸು ಆಗುವುದುಂಟು. ಏನೇ ಆಗಲಿ ಬದಲಾವಣೆ ಅನಿವಾರ್ಯ. ಬದಲಾಗದ ಜೀವನ ಕೊಳೆತು ನಾರುತ್ತದೆ. ಆದರೆ ಬದಲಾವಣೆಯಿಂದ ಒಳ್ಳೆಯದಾಗಬೇಕು. ಜೀವನದ ಮೌಲ್ಯಗಳು ಉತ್ತಮವಾಗಬೇಕು. ಅಂತಹ ಬದಲಾಣೆಯನ್ನು ಸ್ವಾಗತಿಸಬೇಕಲ್ಲವೇ?
– ಮಂಜುಳಾ ರಾಜ್