ಯೌವನದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹತಿ – ಸುಮುಖ ಹಿರಿಯರು ಎಷ್ಟೇ ಬೇಡವೆಂದರೂ ಆತುರಾತುರದಲ್ಲಿ ಪ್ರೇಮಕ್ಕೆ ಸಿಲುಕಿದವರು ಮದುವೆಗೆ ದುಮುಕಿದರು. ಇದರಿಂದ ಮಹತಿಯ ವ್ಯಾಸಂಗ ಅಪೂರ್ಣವಾಯಿತು. ಅವರ ಈ ಪ್ರೇಮ ಪರ್ವ ಮುಂದೇನಾಯಿತು……?

“ಮಹತಿ…. ಮಹತಿ…” ಎಂದು ಸುಜಯಾ ಮಗಳನ್ನು ಕೂಗಿದರು.

“ಈ ದಿನ ಶನಿವಾರ ಅಲ್ವಾ….? ಹೇಗಿದ್ದರೂ ಕಾಲೇಜಿಗೆ ರಜೆ, ಎಲೆಕ್ಟ್ರಿಸಿಟಿ ಬಿಲ್ ‌ಕಟ್ಟಿ ಅಲ್ಲೇ ಇರುವ ಅತ್ತೆ ಮನೆಗೆ ಹೋಗಿ ಈ ಪುಸ್ತಕಗಳನ್ನು ಕೊಟ್ಟು ಬರ್ತೀಯಾ?” ಎಂದರು.

“ಸರಿ ಕೊಡಮ್ಮಾ…..” ಎಂದಳು ಮಹತಿ.

ಮಹತಿ ಎಂಜಿನಿಯರಿಂಗ್‌ ಐದನೇ ಸೆಮಿಸ್ಟರ್‌ ಓದುತ್ತಿರುವ ಹುಡುಗಿ. ಅನಂತ್‌ ಹಾಗೂ ಸುಜಯಾರ ಮುದ್ದಿನ ಮಗಳು. ಮಹತಿಯ ಅಣ್ಣ ಮಧು ಎಂಜಿನಿಯರಿಂಗ್‌ ಮುಗಿಸಿ, ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದ. ಅದರಿಂದ ಮನೆಯ ಸಣ್ಣಪುಟ್ಟ ಕೆಲಸಗಳನ್ನು ಮಹತಿಯೇ ಮಾಡುತ್ತಿದ್ದಳು.

ಸುಜಯಾರಿಗೆ ಪುಸ್ತಕಗಳನ್ನು ಓದುವ ಹವ್ಯಾಸ. ತಾನು ಓದಿದ ನಂತರ ಎಲ್ಲವನ್ನೂ ನಾದಿನಿಗೂ ಸಹ ಕಳುಹಿಸುತ್ತಿದ್ದರು. ಮಹತಿ ರೆಡಿಯಾಗಲು ಜೀನ್ಸ್ ಪ್ಯಾಂಟ್‌, ಟೀ ಶರ್ಟ್‌ ತೆಗೆದುಕೊಂಡಳು.

ಅಷ್ಟರಲ್ಲಿ ಸುಜಯಾ, “ಮಹತಿ, ಅತ್ತೆ ಮನೆಗೆ ಹೋಗ್ತೀಯಲ್ಲ….. ಅವರು ಕೊಟ್ಟ ಚೂಡಿಧಾರ್‌ ಹಾಕಿಕೊಂಡು ಹೋಗು. ಅವರಿಗೆ ಖುಷಿಯಾಗುವುದು,” ಎಂದರು.

“ಸರಿ….” ಎಂದು ಚೂಡಿಧಾರ್‌ ಧರಿಸಿ ಹೊರಬಂದ ಮಹತಿ, “ಅಮ್ಮಾ, ಬೇಗ ಬೇಗ ಕೊಡು. ಅಲ್ಲಿ ಕೆ.ಇ.ಬಿ. ಆಫೀಸ್‌ ನಲ್ಲಿ ತುಂಬಾ ಕ್ಯೂ ಇರುತ್ತೇ,” ಎಂದು ಗಡಿಬಿಡಿ ಮಾಡುತ್ತಾ ಗಾಡಿ ಕೀ ತೆಗೆದುಕೊಂಡು ಹೊರಟಳು.

ಮಗಳನ್ನು ಕಳುಹಿಸಲು ಹೊರಗೆ ಬಂದ ಸುಜಯಾ, `ತನ್ನ ಮಗಳು ಎಷ್ಟು ಚಂದ ಕಾಣುತ್ತಾಳೆ. ಅಷ್ಟೇ ಒಳ್ಳೆಯ ಹುಡುಗಿ. ಯಾವಾಗಲೂ ಗಲಗಲ ಅಂತ ಮಾತನಾಡುತ್ತಾ ನಗಿಸುತ್ತಾ ಇರುತ್ತಾಳೆ. ಮಹತಿ ಇರುವ ಕಡೆ ಏನೋ ಉಲ್ಲಾಸ ತುಂಬಿರುತ್ತದೆ. ಸದ್ಯ ದೇವರು ಅವಳನ್ನು ಯಾವಾಗಲೂ ಹೀಗೆಯೇ ಸಂತೋಷದಿಂದ ಇಡಲಿ,’ ಎಂದು ಯೋಚಿಸುತ್ತಾ ಒಳ ಬಂದರು.

ಮಹತಿ ಬಂದು ಉದ್ದದ ಸಾಲಿನಲ್ಲಿ ನಿಂತಳು. ಅವಳ ಹಾರಾಡುವ ಕೂದಲು, ನಡೆಯುವ ನಡಿಗೆ ಎಲ್ಲದರಲ್ಲೂ ಸೊಬಗು, ಎಲ್ಲರೂ ಅವಳನ್ನು ನೋಡುತ್ತಿದ್ದರು.

ಅಷ್ಟರಲ್ಲಿ ಮಹತಿಗೆ ಅತ್ತೆಯಿಂದ ಫೋನ್‌ ಕಾಲ್ ಬಂದಿತು, “ಅತ್ತೆ, ಇನ್ನೊಂದು ಗಂಟೆಯಲ್ಲಿ ಬರ್ತೀನಿ,” ಎಂದು ಹೇಳಿ ಫೋನ್ ಇಟ್ಟಳು.

ಮಹತಿಯ ಮುಂದೆ ಒಬ್ಬ ಹುಡುಗ ನಿಂತಿದ್ದ. ಅವರ ಹಿಂದೆ ಸಾಲು ದೊಡ್ಡದಾಯಿತು. ಅಷ್ಟರಲ್ಲಿ ಒಬ್ಬರು ತುಂಬಾ ವಯಸ್ಸಾದವರು ಬಂದರು. ಅವರು ನಿಂತುಕೊಂಡಿರುವುದನ್ನು ನೋಡಿದ ಮಹತಿ, “ಅಂಕಲ್ ನೀವು ಅಲ್ಲಿ ಕುಳಿತುಕೊಳ್ಳಿ. ಆ ಬಿಲ್ ‌ನನಗೆ ಕೊಡಿ ನಾನು ಕಟ್ಟಿ ತಂದು ಕೊಡ್ತೀನಿ,” ಎಂದವಳೇ ಅವರ ಕೈಯಿಂದ ಬಿಲ್ ‌ತೆಗೆದುಕೊಂಡಳು.

ಮುಂದೆ ನಿಂತಿದ್ದ ಹುಡುಗ ಇವಳನ್ನು ನೋಡಿ, “ಹಾಯ್‌…” ಎಂದ.

ಬದಲಿಗೆ ಇವಳೂ, “ಹಾಯ್‌,” ಎಂದಳು. ಕಟ್ಟಿದ ಬಿಲ್ ರಸೀದಿಯನ್ನು ಆ ವಯಸ್ಸಾದ ವ್ಯಕ್ತಿಗೆ ಕೊಟ್ಟು ಗಾಡಿ ಪಾರ್ಕ್‌ ಮಾಡಿದ್ದ ಕಡೆ ಬಂದಳು.

ಅಲ್ಲಿ ಇವಳ ಮುಂದೆ ನಿಂತಿದ್ದ ಅದೇ ಹುಡುಗ ಬೈಕ್‌ ಮೇಲೆ ಕುಳಿತು ಯಾರೊಂದಿಗೊ ಫೋನ್‌ ನಲ್ಲಿ ಮಾತನಾಡುತ್ತಿದ್ದ. ಇವಳನ್ನು ನೋಡಿ ಕೈ ಆಡಿಸಿದ. ಅವಳೂ ಸಹ ಕೈ ಆಡಿಸಿ ಗಾಡಿ ತೆಗೆದುಕೊಂಡು ಹೊರಟಳು.

ಗಾಡಿಯಲ್ಲಿ ಹೋಗುತ್ತಿದ್ದ ಮಹತಿ ಸೈಡ್‌ ಮಿರರ್‌ ನಲ್ಲಿ ನೋಡಿದಾಗ ಅದೇ ಹುಡುಗ ತನ್ನ ಹಿಂದೆಯೇ ಬರುವ ಹಾಗೆ ಅನಿಸಿತು. ಅವಳು ಮೊದಲೇ ತುಂಬಾ ವೇಗವಾಗಿ ಗಾಡಿ ಓಡಿಸುತ್ತಿದ್ದಳು. ಇನ್ನೂ ವೇಗವಾಗಿ ಹೋಗಲಾರಂಭಿಸಿದಳು. ಆದರೆ ಆ ಹುಡುಗ, “ರೀ… ಮಿಸ್‌!” ಎಂದು ಕೂಗಿದ್ದು ಕೇಳಿಸಿತು.

`ಥೂ…. ಈ ಹುಡುಗರೇ ಇಷ್ಟು. ಸ್ವಲ್ಪ ಮಾತನಾಡಿದರೆ ಸಾಕು,’ ಎಂದುಕೊಳ್ಳುತ್ತಾ ಗಾಡಿ ನಿಲ್ಲಿಸಿ ಅವನ ಕಡೆ ಕೆಕ್ಕರಿಸಿಕೊಂಡು ನೋಡಿದಳು.

“ನನ್ನನ್ನು ಕೆಕ್ಕರಿಸಿ ನೋಡಿದ್ದು ಸಾಕು, ಮೊದಲು ನಿಮ್ಮ ಗಾಡಿ ಕಡೆ ನೋಡಿ ನಿಮ್ಮ ಕಡೆ ನೋಡಿ, ನಿಮ್ಮ ದುಪಟ್ಟಾ ಚಕ್ರಕ್ಕೆ ಸಿಕ್ಕಿಕೊಂಡಿದೆ,” ಎಂದ.

“ಓ….. ಕ್ಷಮಿಸಿ,” ನನಗೆ ತಿಳಿಯಲಿಲ್ಲ ಎನ್ನುತ್ತಾ ಗಾಡಿ ಪಾರ್ಕ್‌ ಮಾಡಿದ ಮಹತಿ ದುಪಟ್ಟಾ ಬಿಡಿಸಿಕೊಳ್ಳಲು ಯತ್ನಿಸಿದಳು. ಅದು ತುಂಬಾ ಸುತ್ತಿಕೊಂಡಿದ್ದ ಕಾರಣ ಬಿಡಿಸಲು ಆಗಲಿಲ್ಲ. ಆಗ ಆ ಹುಡುಗ ಸಹ ಇಳಿದು ಬಂದು ಸಹಾಯ ಮಾಡಿದ. ಇಬ್ಬರೂ ಹರಸಾಹಸ ಮಾಡಿ ಕಡೆಗೂ ಬಿಡಿಸಿದರು.

“ತುಂಬಾ ಧನ್ಯವಾದಗಳು. ನೀವು ಹಿಂದಿನಿಂದ ಬಂದು ಕೂಗಿ ಗಾಡಿ ನಿಲ್ಲಿಸದಿದ್ದರೆ, ಇಷ್ಟು ಹೊತ್ತಿಗೆ ಅಬ್ಬಾ…..!! ನೆನೆಸಿಕೊಂಡರೇ ಭಯವಾಗುತ್ತೆ,” ಎಂದಳು ಮಹತಿ.

“ಆಸ್ಪತ್ರೆಯಲ್ಲಿ ಮಲಗಿರುತ್ತಿದ್ದಿರಿ ಅಷ್ಟೇ…..” ಅವನು ತಮಾಷೆ ಮಾಡಿದ.

“ನಿಮ್ಮ ಹೆಸರು?”

“ಸುಮುಖ. ನಾನು ಸಾಫ್ಟ್ ವೇರ್‌ ಎಂಜಿನಿಯರ್‌.”

“ನಾನು ಮಹತಿ, ಎಂಜಿನಿಯರಿಂಗ್‌ ಓದುತ್ತಿರುವೆ.”

“ಸ್ವಲ್ಪ ನಿಧಾನವಾಗಿ ಹೋಗಿ. ಅಬ್ಬಾ….. ಎಷ್ಟು ವೇಗ ನಿಮ್ಮದು? ನಿಮ್ಮನ್ನು ಟ್ರೇಸ್‌ ಮಾಡಲು ಹರಸಾಹಸ ಪಟ್ಟೆ,” ಎಂದು ಹೇಳುತ್ತಾ ಇಬ್ಬರೂ ಪರಸ್ಪರ ಮೊಬೈಲ್ ‌ನಂಬರ್‌ ತೆಗೆದುಕೊಂಡರು.

ಅತ್ತೆ ಮನೆಗೆ ಬಂದರೂ ಮಹತಿಗೆ ಅವನ ನಗು ಮುಖವೇ ನೆನಪಾಗುತ್ತಿತ್ತು. `ಇಂದು ನನಗೆ ಆಗಬೇಕಿದ್ದ ಗಂಡಾಂತರದಿಂದ ತಪ್ಪಿಸಿದ. ನೀನು ತುಂಬಾ ವೇಗವಾಗಿ ಗಾಡಿ ಓಡಿಸುವೆ ಎಂದು ಮೊದಲೇ ಎಲ್ಲರಿಂದ ಕಂಪ್ಲೇಂಟ್‌. ಇನ್ನೂ ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ ಅಮ್ಮ ಮತ್ತೆ ನನ್ನ ಕೈಗೆ ಗಾಡಿ ಕೊಡುತ್ತಿರಲಿಲ್ಲ,’ ಎಂದು ಯೋಚಿಸುತ್ತಿದ್ದ ಮಹತಿಗೆ ಅತ್ತೆ ಹತ್ತಿರ ಮೊದಲಿನಷ್ಟು ಸರಾಗವಾಗಿ ಮಾತನಾಡಲಾಗಲಿಲ್ಲ. ಅತ್ತೆಯೂ ಎಗ್ಸಾಂ ಟೆನ್ಶನ್‌ ಎಂದುಕೊಂಡರು.

ಆ ಕಡೆ ಸುಮುಖನಿಗೂ ಸಹ ಮಹತಿಯ ನೆನಪು ಪದೇ ಪದೇ ಬರುತ್ತಿತ್ತು. `ಎಷ್ಟು ಚೆಂದದ ಹುಡುಗಿ, ಅಷ್ಟೇ ಒಳ್ಳೆಯವಳು. ವಯಸ್ಸಾದರು ಸಾಲಿನಲ್ಲಿ ನಿಲ್ಲುವುದು ಕಷ್ಟವೆಂದು ಪರಿಚಯವಿರದ ವ್ಯಕ್ತಿಗೂ ಸಹಾಯ ಮಾಡಿದಳು. ಒಂದು ವೇಳೆ ನಾನೇ ಮೊದಲು ನಿಂತಿದ್ದರೂ ನನಗದು ಹೊಳೆಯುತ್ತಿರಲಿಲ್ಲ,’ ಎಂದು ಅವಳ ಬಗ್ಗೆಯೇ ಯೋಚಿಸುತ್ತಿದ್ದ.

ನಿಧಾನವಾಗಿ ಇಬ್ಬರೂ ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌ ಅಂತ ಮೆಸೇಜ್‌ ಮಾಡುತ್ತಾ ಚಾಟ್‌ ಮಾಡಲು ಶುರು ಮಾಡಿದರು. ಹಾಗೆ ಎರಡು ಮೂರು ಬಾರಿ ವೀಕೆಂಡ್‌ ನಲ್ಲಿ ಭೇಟಿಯಾದರೂ ಇಬ್ಬರ ಮಧ್ಯೆ ಗಾಢವಾದ ಸ್ನೇಹ, ದಿನಾಲು ಪರಸ್ಪರರ ಫೋನ್‌ಗಾಗಿ ಕಾಯುವಷ್ಟು ಬೆಳೆಯಿತು.

ಮಹತಿಗಂತೂ ಓದು ಬೇಡ, ಊಟ, ನಿದ್ರೆ ಏನೂ ಬೇಡ…. ಅವನ ಜೊತೆಗೆ ಮಾತೊಂದೇ ಸಾಕು ಎನ್ನುವಷ್ಟು ಹಚ್ಚಿಕೊಂಡಳು. ಸುಮುಖ ಸಹ ಅನಳ ಪ್ರೀತಿಯೆಂಬ ಮೋಡಿಯಲ್ಲಿ ಬಿದ್ದಾಗಿತ್ತು. ಇಬ್ಬರಿಗೂ ತಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದರ ಅರಿವಾಯಿತು. ಮುಂದೆ ಇವರ ಪ್ರೀತಿಗೆ ಮನೆಯವರ ಒಪ್ಪಿಗೆಯ ಮುದ್ರೆ ಸಿಗುವುದೊಂದೇ ಬಾಕಿ…..!

ಮಹತಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಯಿತು. ವೀಕೆಂಡ್‌ ಬಂದ ತಕ್ಷಣ ಮನೆಯಲ್ಲಿ ಗೆಳತಿಯರ ಜೊತೆಗೆ ಎಂದು ಹೇಳಿ ಸುಮುಖನ ಜೊತೆಗೆ ಓಡುತ್ತಿದ್ದಳು. ಯಾವಾಗಲೂ ಮೊಬೈಲ್ ‌ನಲ್ಲಿ ಮಾತು, ಮಾತು. ಮಹತಿಯ ಅಮ್ಮನಿಗೆ ಯಾಕೋ ಅವಳ ಮೇಲೆ ಸಂಶಯ, ಮಗಳು ಬದಲಾದ ಸೂಚನೆ ಕಾಣಿಸಿತು.

“ಮಹತಿ, ಯಾರ ಜೊತೆ ಅಷ್ಟು ಮಾತು…?” ಎಂದು ಕೇಳಿದರು.

“ಸಾನ್ವಿ, ಪೂರ್ವಿ…. ಹೀಗೆ ಒಬ್ಬರಾದ ಮೇಲೆ ಒಬ್ಬರು ಮಾತಾಡುತ್ತಲೇ ಇರುತ್ತಾರೆ. ಓದಿನ ಬಗ್ಗೆ ಚರ್ಚೆ, ಅದೂ ಇದೂ,” ಎಂದು ಬದಲಾಯಿಸಿ ಹೇಳಿದಳು.

ಮಗಳಿಗೆ ಸ್ನೇಹಿತರು ಜಾಸ್ತಿ ಇರಬಹುದು ಎಂದುಕೊಂಡ ಅವಳ ತಾಯಿ, “ಎಗ್ಸಾಮ್ ಹತ್ತಿರ ಬಂತು…. ವೀಕೆಂಡ್‌ ಓಡಾಟ ಬಂದ್‌ ಮಾಡು,” ಎಂದರು.

ಅವಳ ಅಪ್ಪ, “ನೀನು ಸುಮ್ಮನಿರು…. ಅವಳೇನು ಎಲ್.ಕೆಜಿ ಮಗೂನಾ…. ನನ್ನ ಮಗಳು ಬಿ.ಇ. ಓದುತ್ತಿದ್ದಾಳೆ…. ಅವಳು ತುಂಬಾ ಜಾಣೆ! ಅವಳಿಗೆ ಜವಾಬ್ದಾರಿಯ ಅರಿವಿದೆ,” ಎಂದು ಸುಜಯಾಳ ಬಾಯಿ ಮುಚ್ಚಿಸಿದರು.

ಸ್ವಲ್ಪ ದಿನ ಹೀಗೆ ಕದ್ದು ಮುಚ್ಚಿ ಓಡಾಟ, ಫೋನ್‌, ಮೆಸೇಜ್‌ ಹೀಗೆ ನಡೆಯುತ್ತಲೇ ಇತ್ತು. ಹೀಗಿರುವಲ್ಲಿ ಒಂದು ದಿನ ಸುಮುಖ, “ಮಹತಿ, ನನಗೆ ನಿನ್ನ ಬಿಟ್ಟು ಇರುವುದು ತುಂಬಾ ಕಷ್ಟವಾಗುತ್ತಿದೆ,” ಎಂದ.

“ನನಗೂ ಅಷ್ಟೇ ಕಣೋ….! ಈಗ ಅಮ್ಮನ ಕಣ್ಣು ನನ್ನ ಮೇಲೇನೆ…. ಯಾರದು ಫೋನ್‌…. ಏನು ಅಂತ ಹತ್ತು ಸಲ ಕೇಳುತ್ತಾಳೆ,” ಎಂದಳು.

“ಮಹತಿ ನಮ್ಮಿಬ್ಬರಿಗೂ ಪರಸ್ಪರ ಬಿಟ್ಟು ಇರುವುದು ಕಷ್ಟ. ನಾವು ಮದುವೆಯಾಗೋಣ್ವಾ….? ಮನೆಯಲ್ಲಿ ಮಾತನಾಡೋಣ್ವಾ……” ಎಂದ.

“ಹೇಗೆ ಹೇಳುವುದು ನನಗಂತೂ ಭಯ,” ಎಂದಳು ಮಹತಿ.

“ನಾನೇ ನಿಮ್ಮ ಮನೆಗೆ ಬರ್ತೀನಿ…..” ಎಂದ ಸುಮುಖ.

ಮುಂದಿನ ರವಿವಾರ ಮಹತಿಯ ಮನೆಗೆ ಬಂದ. ಮಹತಿ ತಾಯಿ ತಂದೆಗೆ,  “ಇವರು ಸುಮುಖ ಅಂತ. ಆ ದಿನ ದುಪ್ಪಟಾ ಗಾಡಿಯ ಚಕ್ರಕ್ಕೆ ಸಿಕ್ಕಾಗ ಒಬ್ಬರು ಸಹಾಯ ಮಾಡಿದ್ರೂ ಅಂತ ಹೇಳಿದ್ದೆ ಅಲ್ವಾ….? ಅವರೇ ಇವರು,” ಪರಿಚಯಿಸಿದಳು.

“ನಿನ್ನಿಂದ ತುಂಬಾ ಉಪಕಾರವಾಯಿತಪ್ಪಾ…..” ಎಂದವರು ಸುಮುಖನ ಕೆಲಸ, ಮನೆಯ ಬಗ್ಗೆ  ಲೋಕಾರೂಢಿಯಾಗಿ ವಿಚಾರಿಸಿದರು. ಸುಜಯಾ ಕಾಫಿ ಮಾಡಲು ಒಳಗೆ ಹೋದಾಗ, ಸುಮುಖ, `ಕೇಳಲಾ…’ ಎನ್ನುವಂತೆ ಮಹತಿ ಬಳಿ ಸಂಜ್ಞೆ ಮಾಡಿ ಕೇಳಿದ. ಮಹತಿ… `ಬೇಡ….ಬೇಡ…’ ಎನ್ನುವಂತೆ ಸನ್ನೆ ಮಾಡಿದಳು.

ಕಾಫಿ ಟ್ರೇ ಕೈಯಲ್ಲಿ ಹಿಡಿದು ಬಂದ ಸುಜಯಾ ಇದನ್ನು ಗಮನಿಸಿದರು. ಆದರೂ ಏನೂ ಗೊತ್ತಿಲ್ಲದ ಹಾಗೇ ನಟಿಸಿ ಲೋಕಾಭಿರಾಮವಾಗಿ ಮಾತನಾಡಿ ಕಳುಹಿಸಿದರು.

ಸುಮುಖ ಹೋದ ಮೇಲೆ ಸುಜಯಾ ಮಗಳ ಬಳಿ ಬಂದು, “ಏನು ಸಮಾಚಾರ…. ನನ್ನನ್ನು ಗೆಳತಿ ಎನ್ನುವೆ…. ನನ್ನಲ್ಲಿ ಮುಚ್ಚುಮರೆ ಏಕೆ….” ಎಂದು ಕೇಳಿದರು.

“ಹೇಳ್ತೀನಿ ಅಮ್ಮಾ, ನಾನು ಸಮುಖ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ಮದುವೆ ಮಾಡಿಕೊಳ್ಳೋಣ ಎಂದು ಯೋಚಿಸಿರುವೆ,’ ಎಂದು ನಿಧಾನವಾಗಿ ಹೇಳಿದಳು.

kya-aap-meri-dost-banogi-story2

ಅದಕ್ಕೆ ಸುಜಯಾ, “ಮಹತಿ, ನೀನು ಇನ್ನೂ ಚಿಕ್ಕವಳು. ಇಷ್ಟು ಬೇಗ ಮದುವೆನಾ…. ಬೇಡವೇ ಬೇಡ. ಮೊದಲು ಎಜುಕೇಶನ್ ಮುಗಿಸು,” ಎಂದರು.

“ಅಮ್ಮಾ, ಮದುವೆಯಾದ ಮೇಲೆ ಓದು ಮುಂದುವರಿಸುವೆ. ಸುಮುಖ ಸಹ ಹಾಗೆ ಹೇಳಿದ್ದಾನೆ. ಅವರು ಸಹ ನಮ್ಮದೇ ಜಾತಿ. ಈಗಾಗಲೇ ಅವರ ಮನೆಯಲ್ಲಿ ಮಾತನಾಡಿದ್ದಾನೆ,” ಎಂದಳು.

“ನನಗಂತೂ ಸ್ವಲ್ಪವೂ ಇಷ್ಟವಿಲ್ಲ. ನೀನು ಇದೇ ಹುಡುಗನನ್ನು ಮದುವೆ ಮಾಡಿಕೋ. ಆದರೆ ಮೊದಲು ನಿನ್ನದು ಡಿಗ್ರಿ ಮುಗಿಯಬೇಕು,” ಎಂದು ಹೇಳಿದರು. ಮಹತಿಯ ಅಣ್ಣ ಮಹೇಂದ್ರ ಸಹ ಇದನ್ನೇ ತಿಳಿ ಹೇಳಿದ.

ಆದರೆ ಮಹತಿ ಅಪ್ಪನ ಮುದ್ದಿನ ಮಗಳಾದ್ದರಿಂದ ಅವರು ಮದುವೆ ಮಾಡಲು ಒಪ್ಪಿಕೊಂಡರು. ಸುಜಯಾ ಮಗಳಿಗೆ ಬಗೆ ಬಗೆಯಾಗಿ ತಿಳಿ ಹೇಳಿದರು.

“ಬೇಡ ಮಹತಿ ಆತುರ ಪಡಬೇಡ…. ಅವರು ನಮ್ಮದೇ ಜಾತಿಯಾದರೂ ಪಂಗಡ ಬೇರೆ, ಈಗ ಇರುವ ಹಾಗೆ ಅಲ್ಲಿ ಮದುವೆಯಾದ ಮೇಲೆ ಇರಲು ಸಾಧ್ಯವಿಲ್ಲ,” ಎಂದರು. ಇನ್ನೂ ಎರಡು ವರ್ಷ ಬಿಟ್ಟು ಮದುವೆಯಾದರೆ, ಇಬ್ಬರಿಗೂ ಬುದ್ಧಿ ಬೆಳೆದಿರುತ್ತೆ. ಈಗ ಇಬ್ಬರಿಗೂ ಚಿಕ್ಕ ವಯಸ್ಸು ಎಂದು ಎಷ್ಟು ಹೇಳಿದರೂ ಇಬ್ಬರೂ ಕೇಳಲಿಲ್ಲ, ನಂತರ ಬೇರೆ ದಾರಿ ಕಾಣದೆ ಎರಡೂ ಮನೆಯವರು ಒಂದು ಒಳ್ಳೆಯ ದಿನ ನೋಡಿ ಮದುವೆ ಮಾಡಲು ನಿಶ್ಚಯ ಮಾಡಿದರು.

ಮದುವೆ ನಿಶ್ಚಯವಾದ ಮೇಲೆ ಮದುವೆಯ ಓಡಾಟ ತಿರುಗಾಟದಲ್ಲಿ ಓದುವುದು ಕಡಿಮೆಯಾಯಿತು. ಅವಳ ಮನದಲ್ಲಿ ಸುಮುಖನನ್ನು ಬಿಟ್ಟು ಇನ್ನೇನೂ ಇರಲಿಲ್ಲ. ಮಹತಿಯ ಅಣ್ಣ ಸಹ ಮದುವೆಗಾಗಿ ಒಂದು ವಾರಕ್ಕೋಸ್ಕರ ಬಂದಿದ್ದ.

ಮಹತಿಯ ಅಪ್ಪನಿಗೆ ಈಗ ಮದುವೆ ಮಾಡುವುದು ಸ್ವಲ್ಪ ಕಷ್ಟವೇ ಆಗಿತ್ತು. ಹೇಗಿದ್ದರೂ ಮಹತಿಯ ಮದುವೆ ಇನ್ನೂ ನಾಲ್ಕು ವರ್ಷ ಬಿಟ್ಟು ಅಂತ ನಿರಾಳವಾಗಿದ್ದರು. ಈಗ ತಾನೇ ಮಗನನ್ನು ವಿದೇಶಕ್ಕೆ ಓದಲು ಕಳುಹಿಸಿದ್ದ ಕಾರಣ ಹಣದ ಅಡಚಣೆಯಾಗಿತ್ತು.

ಆದರೂ ಮಗಳ ಮದುವೆ ಹೇಗೆ ಮಾಡಬೇಕು ಅಂದುಕೊಂಡಿದ್ದರೋ, ಅಷ್ಟೇ ಅದ್ಧೂರಿಯಾಗಿ ಮಾಡಿದರು. ಸ್ವಲ್ಪ ಸಾಲ ಮಾಡಿದರೂ ಯಾವುದಕ್ಕೂ ಕೊರತೆಯಾಗದಂತೆ ಮಾಡಿದರು.

ಮದುವೆಯಾಗಿ ಗಂಡನ ಮನೆಗೆ ಬಂದ ಮಹತಿಗೆ ಸುಮುಖನ ಮನೆಯಲ್ಲಿ ಅವನ ಅಪ್ಪ, ಅಮ್ಮ, ಅಣ್ಣ, ಅತ್ತಿಗೆಯ ಜೊತೆ ಮಾತನಾಡುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ. ಇಬ್ಬರೂ ಹದಿನೈದು ದಿನ ಹನಿಮೂನ್‌ ಗೆ ಹೋಗುವುದೆಂದು ನಿಶ್ಚಯ ಮಾಡಿದ್ದರಿಂದ ಮೊದಲೇ ಟಿಕೆಟ್‌ ಹಾಗೂ ರೂಮು ಎಲ್ಲಾ ಬುಕ್‌ ಆಗಿತ್ತು. ಮದುವೆಗೆ ಬಂದ ಮಹತಿಯ ಅಣ್ಣ ವಾಪಸ್‌ ಯು.ಎಸ್.ಎಗೆ ಹೋಗುವುದೆಂದು ಮಹತಿ ಅಣ್ಣನ ಜೊತೆಗೆ ಇರಲೆಂದು ಒಂದು ದಿನ ಮನೆಗೆ ಬಂದಳು. ಆಗಲೂ ಸಹ ಮಹತಿಗೆ ಗಂಡನ ಮನೆಯ ಸುದ್ದಿಯೇ. ಸಧ್ಯ ಮಹತಿ ಸುಖವಾಗಿದ್ದಾಳೆ ಎಂದು ಅವಳ ಮನೆಯವರೆಲ್ಲರೂ ಖುಷಿ ಪಟ್ಟರು.

“ಮಹತಿ, ನೀನು ಈ ಖುಷಿಯಲ್ಲಿ ಓದುವುದನ್ನು ಮರೆಯಬೇಡ. ಹಠ ಮಾಡಿ ಮದುವೆಯಂತೂ ಆದೆ. ಇನ್ನೂ ಮಕ್ಕಳು ಮರಿ ಅಂತ ಓದು ನಿಲ್ಲಿಸಬೇಡ. ಎಂಜಿನಿಯರಿಂಗ್‌ ಕಂಪ್ಲೀಟ್‌ ಮಾಡಬೇಕು. ನಿಮ್ಮ ಅಪ್ಪ ಎಷ್ಟು ಆಸೆಪಟ್ಟು ನಿನ್ನನ್ನು ಸೇರಿಸಿದ್ದಾರೆ, ಎಜುಕೇಶನ್‌ ತುಂಬಾ ಮುಖ್ಯ. ಬೇಕಿದ್ದರೆ ಕೆಲಸಕ್ಕೆ ಹೋಗು ಅಥವಾ ಬಿಡು. ಆದರೆ ಎಜುಕೇಶನ್‌ ಕಂಪ್ಲೀಟ್‌ ಮಾಡಿರಬೇಕು,” ಎಂದ ಅಣ್ಣ.

“ಇಲ್ಲಣ್ಣಾ, ಓದು ನಿಲ್ಲಿಸೋಲ್ಲ. ಖಂಡಿತಾ ಮುಂದುವರಿಸುವೆ. ಮುಂದೆ ಓದು…. ಅಮ್ಮನ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದೆ. ಈಗ ನಮ್ಮ ಮನೆಯಿಂದ ಹೋಗುತ್ತಲೇ…. ಅಷ್ಟೇ ಬದಲಾವಣೆ ಎಂದು ಸಮುಖ ಮೊದಲೇ ಹೇಳಿದ್ದಾನೆ,” ಎಂದಳು ಮಹತಿ.

ಅಣ್ಣನನ್ನು ಕಳುಹಿಸಿದ ಮಹತಿ, “ಅಮ್ಮಾ….. ನಾವು ನಾಳೆ ರಾತ್ರಿ ಹನಿಮೂನ್‌ ಗೆ ಹೋಗಲು ಬಟ್ಟೆ ಪ್ಯಾಕ್‌ ಮಾಡಬೇಕು. ನನ್ನ ಪುಸ್ತಕಗಳನ್ನು ಎತ್ತಿಟ್ಟುಕೊಳ್ಳಬೇಕು. ಹನಿಮೂನ್‌ ಮುಗಿಸಿ ಬಂದ ಮೇಲೆ ಸುಮುಖನ ರಜೆ ಮುಗಿಯುತ್ತದೆ. ಅವನು ಆಫೀಸ್‌ ಗೆ ಹೋಗಬೇಕು. ನಾನೂ ಸಹ ಕಾಲೇಜಿಗೆ ಹೋಗಬೇಕು. ಅಲ್ಲಿಂದ ಬಂದ ನಂತರ ನನ್ನ ಗಾಡಿಯನ್ನು ತೆಗೆದುಕೊಂಡು ಹೋಗುವೆ,” ಎಂದಳು.

`ಇಷ್ಟು ದಿನ ಎಲ್ಲದಕ್ಕೂ ಅಮ್ಮ…. ಅಮ್ಮ…. ಎನ್ನುತ್ತಿದ್ದ ಮಗಳು ಇನ್ನೂ ಮುಂದೆ ಎಲ್ಲವನ್ನು ಅವಳೇ ಹೇಗೆ ನಿಭಾಯಿಸುತ್ತಾಳೋ,’ ಎಂದು ಸುಜಯಾಗೆ ಭಯವಾಯಿತು. ಜೊತೆಗೆ ಮಗಳು ಸುಖವಾಗಿ, ಸಂತೋಷವಾಗಿ ಇದ್ದಾಳಲ್ಲ ಎಂದು ಆಕೆಗೆ ಖುಷಿಯಾಯಿತು. ಸುಮುಖ ಮಹತಿಯನ್ನು ಕರೆದುಕೊಂಡು ಹೋಗಲು ಬಂದ.

“ಬೇಕಿರುವುದನ್ನೆಲ್ಲಾ ಸರಿಯಾಗಿ ಪ್ಯಾಕ್‌ ಮಾಡಿಕೋ. ಅಲ್ಲಿ ಎಲ್ಲಾ ನೀನೇ ತೆಗೆದುಕೊಳ್ಳಬೇಕು,” ಎಂದು ಮಗಳಿಗೆ ತಿಳಿ ಹೇಳಿದರು.

ಸುಮುಖ ಸ್ವಲ್ಪ ಹೊತ್ತು ಅನಂತ ಸುಜಯರ ಬಳಿ ಮಾತನಾಡಿ ನಂತರ ಮಹತಿಯನ್ನು ಕರೆದುಕೊಂಡು ಹೊರಟ. ಮಗಳು ಅಳಿಯ ಜೊತೆಯಾಗಿ ನಗುತ್ತಾ ಹೋಗುವುದನ್ನು ನೋಡುತ್ತಾ ಗೇಟಿನ ಬಳಿ ನಿಂತರು ಸುಜಯಾ ಹಾಗೂ ಅನಂತ್‌.

ಹನಿಮೂನ್‌ ಮುಗಿಸಿ ಬಂದ ಮಹತಿ ಸುಮುಖರು ಇನ್ನಷ್ಟು ಹತ್ತಿರವಾದರು. ಯಾವಾಗಲೂ ಖುಷಿಯಿಂದ ನಗುನಗುತ್ತಾ ಇದ್ದರು.  ಸುಮುಖ ರಜೆ ಕಳೆದು ಕೆಲಸಕ್ಕೆ ಹೋಗಲು ಶುರು ಮಾಡಿದ. ಮಹತಿ ಕಾಲೇಜಿಗೆ ಹೋಗಲು ಆರಂಭಿಸಿದಳು.

ಅಮ್ಮನ ಮನೆಯಿಂದ ನಾಲ್ಕು ಐದು ಕಿ.ಮೀ. ದೂರದಲ್ಲಿ ಗಂಡನ ಮನೆಯಿದ್ದ ಕಾರಣ, ಅವಳಿಗೆ ಕಾಲೇಜಿಗೆ ಹೋಗಲು ತುಂಬಾ ದೂರ ಎನಿಸಲಿಲ್ಲ. ಜೊತೆಗೆ ಟೂ ವೀಲರ್‌ ಇದ್ದ ಕಾರಣ ಇನ್ನೂ ಸುಲಭವಾಗಿತ್ತು. ಕಾಲೇಜು ಹಾಗೂ ಗಂಡನ ಮನೆ ಮಧ್ಯೆ ಅಮ್ಮನ ಮನೆ ಇತ್ತು. ಎರಡು ದಿನಕ್ಕೊಮ್ಮೆಯಾದರೂ ಅಮ್ಮನನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದಳು ಮಹತಿ.

ಬೆಳಗ್ಗೆ ಕಾಲೇಜಿಗೆ ಹೋಗುತ್ತಾಳೆ ಎಂದು ಅತ್ತೆಯ ಮನೆಯಲ್ಲಿ ಅವಳಿಗೆ ಏನೂ ಕೆಲಸ ಹೇಳುತ್ತಿರಲಿಲ್ಲ. ಸಂಜೆ ಕಾಲೇಜಿನಿಂದ ಬಂದು ಕಾಫಿ ಕುಡಿದು, ಸುಮುಖ ಬರುವವರೆಗೂ ಏನಾದರೂ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಅತ್ತೆ, ಮಾವ, ಓರಗಿತ್ತಿಯ ಜೊತೆ ಮಾತನಾಡುತ್ತಿದ್ದಳು. ಸುಮುಖ ಬಂದ ನಂತರ ಇಬ್ಬರೂ ಒಂದು ರೌಂಡ್‌ ಆಚೆ ಸುತ್ತಾಡಿ ಬರುತ್ತಿದ್ದರು. ನಂತರ ಊಟ ಮಾಡಿ, ಒಂದೆರಡು ಗಂಟೆ ಓದುವುದು, ಬರೆಯುವುದು ಮಾಡುತ್ತಿದ್ದಳು. ಆ ಸಮಯದಲ್ಲಿ ಸುಮುಖ ಅಪ್ಪ, ಅಮ್ಮ, ಅಣ್ಣ ಅತ್ತಿಗೆ ಜೊತೆ ಟಿವಿ ನೋಡುತ್ತಾ ಮಾತನಾಡುತ್ತಾ ಸಮಯ ಕಳೆಯುತ್ತಿದ್ದ.

ಪ್ರತಿ ವೀಕೆಂಡ್‌ ನಂದು ಸುಮುಖ ಮಹತಿಯನ್ನು ಕರೆದುಕೊಂಡು ಅವಳ ತಾಯಿ ಮನೆಗೆ ಹೋಗುತ್ತಿದ್ದ. ಅಮ್ಮ, ಅಪ್ಪ ಇಬ್ಬರೂ ಮದುವೆ ಮಾಡಿದ್ದು ಒಳ್ಳೆಯದಾಯಿತು ಎಂದುಕೊಂಡರು. ಮಹತಿ ಕಾಲೇಜು, ನೃತ್ಯಾಭ್ಯಾಸ ಎಲ್ಲವನ್ನೂ ಮಿಸ್‌ ಮಾಡದೆ ಹೋಗುತ್ತಿರುವುದು ಕಂಡು ಅವರಿಗೆ ನಿರಾಳವಾಯಿತು. ಮಕ್ಕಳು ಖುಷಿಯಿಂದ ಇರುವುದನ್ನು ನೋಡಿ ತುಂಬಾ ಸಂತೋಷವಾಗಿದ್ದರು. ಹಾಗೆ ಇಬ್ಬರೂ ತುಂಬಾ ಸರಸಮಯವಾಗಿ ಕಾಲ ಕಳೆಯುತ್ತಿರುವಾಗ, ಈ ಜೀವನ ಎಷ್ಟು ಸುಂದರ ಎಂದು ಅನಿಸತೊಡಗಿತು.

ಅತ್ತೆ ಮನೆಯಲ್ಲಿ ಸ್ವಲ್ಪ ಮಡಿ ಜಾಸ್ತಿ, ಸಂಪ್ರದಾಯ ಬೇರೆಯೇ ತರಹವೇ ಇತ್ತು. ಸೊಸೆ ಹೊಸಬಳೆಂದು ಮಹತಿಗೆ ಏನೂ ಕೆಲಸ ಹೇಳದೇ, ಅವಳು ಮಾಡುವೆನೆಂದರೂ ಬೇಡ ಮುಂದೆ ಇದ್ದೇ ಇದೆ ಎಂದು ಉಪಚಾರ ಮಾಡುತ್ತಿದ್ದರು. ಹೀಗೆ ಎರಡು ತಿಂಗಳು ಕಳೆಯಿತು. ಒಟ್ಟಿನಲ್ಲಿ ಮಹತಿ ಹಾಗೂ ಸುಮುಖ, ಪ್ರಪಂಚದಲ್ಲಿ ಇರುವ ಎಲ್ಲಾ ಸುಖ ಸಂತೋಷ ತಮ್ಮ ಬಳಿಯೇ ಇದೇ ಎನ್ನುವ ಹಾಗೆ ಸರಸವಾಗಿ ಕಾಲ ಕಳೆಯುತ್ತಾ ಸುಖವಾಗಿ ಇದ್ದರು.

ಮದುವೆಯಾದ ಮೇಲೆ ಗಂಡು ಮಕ್ಕಳ ತರಹ ಪ್ಯಾಂಟ್‌ ಶರ್ಟ್‌ ಹಾಕಬಾರದು. ನಮ್ಮ ಕಾಲದಲ್ಲಿ  ಸೀರೆ ಮಾತ್ರ ಉಡುತ್ತಿದ್ದೆ. ಈಗ ಎಲ್ಲರೂ ಚೂಡಿದಾರ್‌ಹಾಕುತ್ತಾರೆ. ಅದನ್ನು ಮಾತ್ರ ಹಾಕು ಎಂದು ನಿಧಾನಕ್ಕೆ ಮಹತಿಗೆ ಅವರ ಅತ್ತೆ ಹೇಳಿದರು.

ಹೆಚ್ಚಾಗಿ ಜೀನ್ಸ್ ಮಿಡೀ ಹಾಕುತ್ತಿದ್ದರಿಂದ ಮಹತಿಗೆ ಇದು ಕಷ್ಟವಾಯಿತು.

ಸುಮುಖನ ಬಳಿ ಹೇಳಿದ್ದಕ್ಕೆ, “ಅಮ್ಮಾ….. ಹೇಳುವ ಹಾಗೆ ಕೇಳು,” ಎಂದ. ಸರಿ ಎಂದು ಹೇಳಿ ಚೂಡಿದಾರ್‌ ಮಾತ್ರ ಹಾಕಿಕೊಂಡು ಹೋಗಲು ಆರಂಭಿಸಿದಳು.

ನಿಧಾನಕ್ಕೆ ಸಮುಖನ ಅವಗುಣಗಳು ತಿಳಿಯಲು ಶುರುವಾಯಿತು. ಸುಮುಖನಿಗೆ ಕೋಪ ಜಾಸ್ತಿ, ಯಾವ ಸಾಮಾನು ಎಲ್ಲಿ ಇಡಬೇಕೋ ಅಲ್ಲೇ ಇಡಬೇಕಿತ್ತು. ಸ್ವಲ್ಪ ಆಚೀಚೆ ಆದರೂ ಕೂಗಾಡಿಬಿಡುತ್ತಿದ್ದ. ಮಹತಿ ಮನೆಯಲ್ಲಿ ಕೋಪ ಎನ್ನುವುದನ್ನೇ ನೋಡಿರಲಿಲ್ಲ. ಅವಳ ಅಪ್ಪ ಸ್ವಲ್ಪವೂ ಕೂಗಾಡುತ್ತಿರಲಿಲ್ಲ. ಅಮ್ಮನೂ ಅಷ್ಟೇ ಮಕ್ಕಳಿಗೆ ನಿಧಾನಕ್ಕೆ ತಿಳಿಸಿ ಹೇಳುತ್ತಿದ್ದರು. ಸುಮುಖನಿಗೆ ತಾನು, ತನ್ನ ಮನೆ ಎಂದರೆ ಕೆಟ್ಟ ಅಭಿಮಾನ. ಹಾಗೆ ಅಮ್ಮ, ಅಪ್ಪ ಹಿರಿಯರೆಂದರೆ ಗೌರವ ಜಾಸ್ತಿ. ಅಣ್ಣ ಅತ್ತಿಗೆ ಅಂದರೂ ಅಷ್ಟೇ ಗೌರವ ಅವನಿಗೆ. ಇದನ್ನು ಚೆನ್ನಾಗಿ ತಿಳಿದಿದ್ದ ಅವನ ಅತ್ತಿಗೆ ಚಂಚಲಾ, ತನಗೆ ಅಣ್ಣ, ತಮ್ಮ ಯಾರೂ ಇಲ್ಲ ಅದಕ್ಕೆ ಸುಮುಖನೆಂದರೆ ತನಗವನು ತಮ್ಮನ ಹಾಗೆ ಎಂದು ಅವನು ತನಗೆ ತುಂಬಾ ಅಚ್ಚುಮೆಚ್ಚು ಎನ್ನುವ ಹಾಗೆ ನಟಿಸುತ್ತಿದ್ದಳು.

ಸುಮುಖ ಹೆಂಡತಿಯ ಜೊತೆಗೆ ಸಂತೋಷದಿಂದ ಇರುವುದು ಅವಳಿಗೆ ಸಹಿಸಲಾಗುತ್ತಿರಲಿಲ್ಲ. ಮದುವೆಯಾಗಿ ನಾಲ್ಕು ವರ್ಷಗಳಾದರೂ ತನಗೆ ಮಕ್ಕಳಾಗಿಲ್ಲ. ಮಹತಿಗೆ ಮಗುವಾದರೆ, ಮನೆಯಲ್ಲಿ ಮೊದಲೇ ಅವಳು ಎಲ್ಲರಿಗೂ ಇಷ್ಟ. ಇನ್ನು ತನ್ನನ್ನು ಯಾರೂ ಕೇಳುವವರು ಇರುವುದಿಲ್ಲ ಎಂದು ಯೋಚಿಸಿದಳು ಚಂಚಲಾ.

ನಿಧಾನಕ್ಕೆ ಮನೆಯಲ್ಲಿ ಇವರೆಲ್ಲರೂ ಮಾತಾಡುತ್ತಿರುವಾಗ, ಮಹತಿ ರೂಮಿನಲ್ಲಿ ಓದುತ್ತಿರುವ ಸಮಯ ನೋಡಿಕೊಂಡು, “ಸುಮುಖ ಪಾಪ ಕಣೋ ನೀನು, ಮದುವೆಯಾಗಿ ಎರಡು ತಿಂಗಳಾದರೂ ನೀನಿನ್ನು ಮಧ್ಯಾಹ್ನ ಕ್ಯಾಂಟೀನ್‌ ನಲ್ಲೇ ತಿನ್ನುತ್ತಿ…..” ಎಂದಳು ಚಂಚಲಾ.

“ಏನು ಮಾಡುವುದು? ಅಡುಗೆ ಆಂಟಿ ಬೇಗ ಬರುವುದಿಲ್ಲ. ಬೆಳಗ್ಗೆ ಬೇಗ ಕ್ಯಾಬ್‌ ಬರುತ್ತದೆ,” ಎಂದ ಸುಮುಖ.

“ನನಗೂ ಹೇಳಿ ಹೇಳಿ ಸಾಕಾಯಿತು…. ಅವರು ಬೇಗ ಬರೋಲ್ಲ. ಬೇರೆ ಯಾರಿಗಾದರೂ ಹೇಳೋಣವೆಂದರೆ ಈ ಅಡುಗೆಯವರು ನಮ್ಮ ಮಡಿಗೆ ಒಗ್ಗಿದ್ದಾರೆ,” ಎಂದರು  ಸಮುಖನ ತಾಯಿ.

ಅದಕ್ಕೆ ಚಂಚಲಾ, “ಅಲ್ಲಾ ಅಮ್ಮ….. ನಮ್ಮ ಮನೆಯಲ್ಲಿ ಏನು ಅಂತ ಕೆಲಸವಿರುತ್ತೆ. ಮಹತಿ ಸ್ವಲ್ಪ ಬೇಗ ಎದ್ದು ಸುಮುಖನಿಗೆ ಡಬ್ಬಿ ಕಟ್ಟಿಕೊಡಲು ಹೇಳಿ. ನಿಮ್ಮ ದೊಡ್ಡ ಮಗ ಬೇಗ ಹೋಗುವಾಗ ನಾನು ಬೇಗ ಎದ್ದು ಕೊಡುತ್ತಿರಲಿಲ್ವಾ…?” ಎಂದಳು.

ಅಲ್ಲೇ ಇದ್ದ ಸುಮಂತ, “ನೀನು ಯಾವಾಗ ನನಗೆ ಮಾಡಿಕೊಟ್ಟಿದ್ದೆಯೇ….?” ಎಂದ.

“ಆಹಾ…. ನಿಮಗೆಲ್ಲಿ ನೆನಪಿರುತ್ತದೆ. ಮದುವೆಯಾದ ಹೊಸದರಲ್ಲಿ ಮಾಡಿಕೊಡುತ್ತಿರಲಿಲ್ವಾ….? ನೋಡಿ ಅಮ್ಮಾ…. ನಿಮ್ಮ ಮಗ ಎಲ್ಲವನ್ನೂ ಹೇಗೆ ಮರೆತುಬಿಟ್ಟಿದ್ದಾರೆ,” ಎಂದಳು ಚಂಚಲಾ.

ಯಾರಿಗೂ ಅವಳು ಮಾಡಿದ್ದು ನೆನಪಿರಲಿಲ್ಲ. ನಾಲ್ಕು ವರ್ಷವಾಯಿತಲ್ಲಾ ಇರಬಹುದು ಎಂದುಕೊಂಡು ಸುಮ್ಮನಾದರು.

“ಸುಮುಖನ್ನ ನೋಡಿ, ಹೋಟೆಲ್ ನಲ್ಲಿ ತಿಂದು ತಿಂದು ಹೇಗಾಗಿದ್ದಾನೆ…..?” ಎಂದಳು ಚಂಚಲಾ.

“ಮಹತಿ ಕಾಲೇಜಿಗೆ ಹೋಗಬೇಕು. ಅದರಲ್ಲೂ ಅವಳಿನ್ನೂ ಚಿಕ್ಕವಳು. ಅವಳ ಬಳಿ ಹೇಗೆ ಮಾಡಿಸುವುದು….?” ಎಂದ ಸುಮುಖ.

“ನಮ್ಮ ಮನೆಯ ಪಕ್ಕದ ಮನೆಯ ಸೊಸೆ ಮಹತಿಗಿಂತ ಚಿಕ್ಕವಳು. ಮನೆಯ ಎಲ್ಲರಿಗೂ ಅವಳೇ ಅಡುಗೆ ಮಾಡುವಳು. ನೀನೂ ಪ್ರೀತಿಯಿಂದ ಹೇಳುವ ಮಹತಿ ಒಳ್ಳೆಯ ಹುಡುಗಿ ಮಾಡಿಕೊಡುತ್ತಾಳೆ. ನಿನಗೂ ಹೆಂಡತಿ ಮಾಡಿಕೊಟ್ಟರೆ ಚೆನ್ನಾಗಿರುತ್ತದೆ,” ಎಂದು ಅತ್ತಿಗೆ ಹೇಳಿದಾಗ ಅವನಿಗೂ ಸರಿ ಎನಿಸಿತು.

ಮರುದಿನ ಸುಮುಖ ಮಹತಿಗೆ, “ತನಗೆ ಮಧ್ಯಾಹ್ನಕ್ಕೆ ಊಟ, ಬೆಳಗ್ಗೆ ತಿಂಡಿ ಮಾಡಿಕೊಡು,” ಎಂದ.

“ಅಡುಗೆಯವರು ಬರುತ್ತಾರೆ ಅವರಿಗೆ ಸಂಬಳ ಕೊಡುತ್ತೀರಲ್ಲಾ……? ಅವರಿಗೆ ಬೇಗ ಬರಲು ಹೇಳಿ. ನನಗಾಗೊಲ್ಲ…. ನಾನು ರಾತ್ರಿ ಓದಿರುತ್ತೇನೆ. ಬೆಳಗ್ಗೆ ರೆಡಿಯಾಗಿ ಹೊರಡಬೇಕು,” ಎಂದು ಮಹತಿ ಕೋಪದಿಂದ ಹೇಳಿದಾಗ, ಸುಮುಖನಿಗೂ ಕೋಪ ಬಂದಿತು.

ಅವನು, “ನೀನು ನನ್ನ ಹೆಂಡತಿ… ನಿನ್ನನ್ನು ಕಟ್ಟಿಕೊಂಡ ತಪ್ಪಿಗೆ ನಾನು ಉಪವಾಸ ಇರಬೇಕಾ….” ಎಂದೆಲ್ಲಾ ಕೂಗಾಡಿದ.

ಮಹತಿ ಅಳುತ್ತಾ ಅಮ್ಮನಿಗೆ ಫೋನ್‌ ಮಾಡಿ ವಿಷಯ ಹೇಳಿದಳು. “ಮದುವೆಯಾದ ಮೇಲೆ ಇದು ಸಹಜವಮ್ಮ, ನೀನು ಬೇಗ ಎದ್ದು ಏನಾದರೂ ರೈಸ್‌ ಬಾತ್‌ ಮಾಡಿಕೊಡು. ನಿಮ್ಮತ್ತೆಯನ್ನು ಕೇಳಿ ಮಾಡು,” ಎಂದು ಹೇಳಿದರು ಸುಜಯಾ.

ಅದಕ್ಕೆ ಒಪ್ಪಿದ ಮಹತಿ, ಬೆಳಗ್ಗೆ ಬೇಗ ಎದ್ದು ಅತ್ತೆಯ ಜೊತೆ ಸೇರಿ ಡಬ್ಬಿಗೆ ಊಟ ಕಟ್ಟಿಕೊಡಲು ಶುರು ಮಾಡಿದಳು. ಇದನ್ನು ಕಂಡು ಚಂಚಲಾಳಿಗೆ ಸಹಿಸಲಾಗಲಿಲ್ಲ. ಅವಳು ಅತ್ತೆಗೆ ಚಾಡಿ ಹೇಳಿದಳು.

“ಅಮ್ಮಾ, ನೀವು ಮಹತಿಯ ಹತ್ತಿರ ಮನೆಯ ವಿಷಯ ಏನೂ ಮಾತನಾಡಬೇಡಿ. ಅವಳು ಎಲ್ಲವನ್ನೂ ಅವರ ಅಮ್ಮನಿಗೆ ಹೇಳುತ್ತಾಳೆ. ಮೊನ್ನೆ ಏನೋ ಹೇಳಿ ಅಳುತ್ತಿದ್ದಳು. ನಮ್ಮ ಮನೆಯ ವಿಷಯ ಎಲ್ಲರಿಗೂ ತಿಳಿಯುವುದು. ಅಲ್ಲದೇ, ದಿನಾ ಅಮ್ಮನ ಮನೆಗೆ ಹೋಗಿ ಬರುತ್ತಾಳೆ. ಅವಳು ದಿನಾ ಹಾಗೆಲ್ಲ ಹೋಗಬಾರದು ಎಂದು ಸುಮುಖನಿಂದ ಹೇಳಿಸಿ,” ಎಂದು ಅತ್ತೆಯ ಬಳಿ ಹೇಳಿದಳು.

`ನೀನೂ ಸಹ ಹೋಗುತ್ತಿರಲಿಲ್ವಾ ಚಂಚಲಾ….? ನಿನ್ನ ಹಾಗೆ ಅವಳು,’ ಎಂದು ಹೇಳಿದ್ದರೆ ಎಲ್ಲ ಸರಿಹೋಗುತ್ತಿತ್ತು. ಆದರೆ ಅವರು ಹಿಂದೆ ಮುಂದೆ ಯೋಚಿಸಿದೆ ಮಗನಿಗೆ ಹೇಳಿದರು.

ಸುಮುಖ ಮೊದಲೇ ಮಾತೃ ವಾಕ್ಯ ಪರಿಪಾಲಕ. ಇನ್ನೂ ಕೇಳಬೇಕಾ, “ಮಹತಿ, ಇನ್ನು ಮೇಲೆ ನೀನು ಕಾಲೇಜಿನಿಂದ ನೇರ ಮನೆಗೆ ಬಾ…. ದಿನಾ ಅಮ್ಮನ ಮನೆಗೆ ಹೋಬೇಡ. ಹೇಗಿದ್ದರೂ ನಾವು ವೀಕೆಂಡ್‌ ನಲ್ಲಿ ಹೋಗುತ್ತೀವಲ್ವಾ ಅಷ್ಟು ಸಾಕು…..” ಎಂದು ಹೇಳಿದ.

ಮಹತಿಗೆ ಕೋಪ ಬಂತು, “ಅಮ್ಮನ ಮನೆಗೆ ಹೋಗಬೇಡ ಎನ್ನಲು ನೀವು ಯಾರು? ನೀವು ಗಂಡನಾಗಿದ್ದು ಈಗ….. ಅವರು ನನ್ನನ್ನು ಸಾಕಿ ಸಲಹಿದ್ದಾರೆ. ಅಣ್ಣ ಬೇರೆ ದೂರದಲ್ಲಿದ್ದಾನೆ. ನಾನು ಹೋಗೇ ಹೋಗುವೆ….. ಇದನ್ನು ನಿನಗೆ ಮೊದಲೇ ಹೇಳಿರಲಿಲ್ವಾ….?” ಎಂದಳು.

ಸುಮುಖನಿಗೂ ಕೋಪ ಜಾಸ್ತಿಯಾಯಿತು, “ನಾನು ನಿನ್ನ ಗಂಡ. ನಾನು ಹೇಳಿದಂತೆ ನೀನು ಕೇಳಬೇಕು….”  ಎಂದ.

“ಅದೆಲ್ಲಾ ಹಿಂದಿನ ಕಾಲ. ಈಗ ಇಬ್ಬರೂ ಸರಿ ಸಮಾನ.  ನೀವು ಹೀಗೆಲ್ಲ ಹೇಳುವ ಹಾಗಿಲ್ಲ….” ಎಂದಳು ಅವಳೂ ಕೋಪದಿಂದ.

(ಮುಂದಿನ ಸಂಚಿಕೆಯಲ್ಲಿ ಮುಕ್ತಾಯ)

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ