ಆಕಸ್ಮಿಕಾಗಿ ಭೇಟಿಯಾದ ಮಹತಿ- ಸುಮುಖ ಗಾಢವಾದ ಸ್ನೇಹ ಹೊಂದಿ ಮುಂದೆ ಪ್ರೇಮಿಗಳಾದರು. ಇನ್ನೂ ಬಿ.ಇ ಕಲಿಯುತ್ತಿದ್ದ ಮಹತಿ ತನ್ನ ವ್ಯಾಸಂಗ ಪೂರ್ಣಗೊಳಿಸದೆ, ಪ್ರೇಮದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗಿ ಸುಮುಖನನ್ನು ಕೂಡಲೇ ಮದುವೆಯಾಗಲು ನಿರ್ಧರಿಸಿದಳು. ಇಬ್ಬರ ಮನೆಯಲ್ಲೂ ಎಷ್ಟೇ ಬೇಡವೆಂದರೂ ಕೇಳದೆ, ಆತುರವಾಗಿ ಮದುವೆ ಮುಗಿಸಿಕೊಂಡರು. ಎಲ್ಲ ಅನುಕೂಲಕರವಾಗಿದ್ದ ಅವರ ಸಂಸಾರದಲ್ಲಿ ನಿಧಾನವಾಗಿ ಅಪಸ್ವರ ಮೊಳಗ ತೊಡಗಿತು. ಸಾಂಸಾರಿಕ ಕಲಹಗಳಿಗೆ ಹೆಚ್ಚಿನ ಮಹತ್ವ ನೀಡಬಾರದೆಂಬ ಪ್ರೌಢತೆ ಇಬ್ಬರಿಗೂ ಇರಲಿಲ್ಲ. ಚಿಕ್ಕ ಪುಟ್ಟ ವಿರಸವನ್ನೇ ದೊಡ್ಡದು ಮಾಡಿ ದೂರವಾಗುವ ಸಂದರ್ಭ ತಂದುಕೊಂಡರು........
ಮುಂದೆ ಓದಿ
ಆತುರದಲ್ಲಿ ಪ್ರೇಮ ವಿವಾಹವಾದ ಮಹತಿ-ಸುಮುಖ ಸಂಸಾರದಲ್ಲಿನ ಸಣ್ಣ ಪುಟ್ಟ ಜಗಳಗಳನ್ನೇ ದೊಡ್ಡದು ಮಾಡಿಕೊಂಡು ಇಬ್ಬರೂ ಬೇರೆಯಾಗುವ ಸಂದರ್ಭ ತಂದುಕೊಂಡರು. ಮುಂದೆ ಅವರಿಬ್ಬರ ಬದುಕು ಕವಲೊಡೆದದ್ದು ಹೇಗೆ? ಇಬ್ಬರಲ್ಲಿ ಸೋತವರಾರು.... ಗೆದ್ದವರಾರು......?
ಹೀಗೆ ದಿನೇ ದಿನೇ ಇಬ್ಬರ ನಡುವೆ ಸಣ್ಣಪುಟ್ಟ ವಿಷಯಕ್ಕೆ ಜಗಳ, ಕೋಪ, ವಿರಸ ಜಾಸ್ತಿಯಾಯಿತು. ಕಿಚ್ಚು ಹಚ್ಚಿದವಳು ಏನೂ ತಿಳಿಯದವಳಂತೆ ಇಬ್ಬರ ಜೊತೆಗೂ ಒಳ್ಳೆಯವಳ ತರಹ ನಟಿಸುತ್ತಾ, ಮನದಲ್ಲಿ ಖುಷಿಯಿಂದ ಇದ್ದಳು.
ಮಹತಿಗೆ ದಿನಾ ಒಂದಲ್ಲ ಒಂದು ಕಿರಿ ಕಿರಿ ಮನೆಯಲ್ಲಿ, ಸಣ್ಣಪುಟ್ಟದಕ್ಕೂ ನಮ್ಮ ಮನೆಯ ಪದ್ಧತಿ ಹೀಗೆ ಇರಬೇಕು, ಹಾಗೆ ಇರಬೇಕು ಎಂದು ಅತ್ತೆ ಹೇಳುತ್ತಿದ್ದರು. ನೈಟ್ ಡ್ರೆಸ್, ನೈಟಿ ಯಾವುದೂ ಹಾಕುವ ಹಾಗಿಲ್ಲ. ಮತ್ತೆ ಮತ್ತೆ ಅದೇ ಹೇಳುತ್ತಿದ್ದರು. ಚೂಡಿದಾರ್, ಸೀರೆ ಬಿಟ್ಟು ಇನ್ನೇನು ಧರಿಸುವ ಹಾಗಿರಲಿಲ್ಲ.
ಮಹತಿ ಹೆಚ್ಚಾಗಿ ಪ್ಯಾಂಟ್ ಹಾಕುತ್ತಿದ್ದಳು. ಆದರೆ ಅತ್ತೆ ಮನೆಯಲ್ಲಿ ಹಾಕುವ ಹಾಗಿರಲಿಲ್ಲ. ಅವಳಿಗೆ ಸೀರೆ ಉಡಲು ಬರುತ್ತಿರಲಿಲ್ಲ, ಅದು ಕಷ್ಟದ ಕೆಲಸವಾಗಿತ್ತು. ಆದರೆ ಕುಟುಂಬದಲ್ಲಿ ಸಂಬಂಧಿಕರ ಮಧ್ಯೆ ನಡೆಯುತ್ತಿದ್ದ ಸಣ್ಣಪುಟ್ಟ ಪೂಜೆ, ಕುಂಕುಮಕ್ಕೆ ಕರೆದಾಗ ಸೀರೆ ಉಟ್ಟು ಹೋಗಬೇಕಾಗಿತ್ತು.
ಚಂಚಲಾ ಎಷ್ಟೋ ಕಡೆ ಕೆಲಸದ ನೆಪವೊಡ್ಡಿ ಹೋಗುತ್ತಲೇ ಇರಲಿಲ್ಲ. ಮಹತಿಗಾದರೆ ಹೋಗಲೇಬೇಕೆಂಬ ಬಲವಂತ. ಏಕಾದರೂ ಮದುವೆ ಮಾಡಿಕೊಂಡೆ ಅನಿಸುತ್ತಿತ್ತು ಮಹತಿಗೆ. ಅಮ್ಮ ಹೇಳಿದ್ದು ನಿಜ. ಆತುರಪಟ್ಟೆ ಎಂದು ಮನದಲ್ಲೇ ಅಳುತ್ತಿದ್ದಳು.
ಸುಮುಖನಿಗಂತೂ ಮೂಗಿನ ತುದಿಯಲ್ಲಿ ಕೋಪ. ಯಾವ ಸಾಮಾನು ಎಲ್ಲಿರಬೇಕೋ ಅಲ್ಲೇ ಇರಬೇಕಿತ್ತು. ಸ್ವಲ್ಪ ವ್ಯತ್ಯಾಸವಾದರೂ ದೊಡ್ಡ ಜಗಳವಾಡುತ್ತಿದ್ದ. ಅದಕ್ಕೆ ಅತ್ತಿಗೆ ಬೇರೆ ಹೇಳಿ ಕೊಡುತ್ತಿದ್ದಳು.
``ಸುಮುಖ, ನೀನು ಈಗಲೇ ಮಹತಿಯನ್ನು ಕಂಟ್ರೋಲ್ ಗೆ ತೆಗೆದುಕೊಳ್ಳಬೇಕು. ನೋಡು, ನೀವು ಜಗಳವಾಡುವಾಗ ಅವಳ ಧ್ವನಿಯೇ ಜೋರಾಗಿ ಕೇಳುತ್ತದೆ. ನೀನೂ ಜೋರಾಗಬೇಕು. ನಿಮ್ಮ ಅಣ್ಣನಿಗೆ ನಾನು ಎಷ್ಟು ಹೆದರ್ತೀನಿ ಗೊತ್ತಾ.....?'' ಎಂದು ಸುಮುಖ ಹೆಂಡತಿಗೆ ಬೈಯುವಂತೆ ಅವನ ತಲೆ ತುಂಬಿಸುತ್ತಿದ್ದಳು.
ಎರಡು ದಿನ ಕೆಲಸದವರು ಬರದೇ ಇದ್ದಾಗ ಮಹತಿಗೆ ಮನೆ ಸ್ವಚ್ಛ ಮಾಡಲು ಹೇಳಿದರು. ಅವಳು ತನಗೆ ಬರುವುದಿಲ್ಲವೆಂದಳು. ಚಂಚಲಾ ಯಾರೂ ಇಲ್ಲದ ಸಮಯ ನೋಡಿ, ಸುಮುಖನ ಬಳಿ ಮಹತಿಯ ಅಮ್ಮನ ಹತ್ತಿರ ಮಾತನಾಡು ಎಂದು ಹೇಳಿಕೊಟ್ಟಳು.