ಹಳೆಯ ಕಂದಾಚಾರದ ವಿಚಾರಗಳ ಮಾವನನ್ನು ಜಾಗೃತಗೊಳಿಸಲು ಅಳಿಯ ಸುರೇಶ್ ಅಂತಹ ಯುವ ಉಪಾಯವನ್ನು ಹುಡುಕಿದ…..? ಅದರಿಂದ ಹಾವು ಸತ್ತಿತು, ಆದರೆ ಕೋಲು ಮುರಿಯಲಿಲ್ಲ, ಇದಾದುದು ಹೇಗೆ……..?
ಬಾಗಿಲು ಕರೆಗಂಟೆ ಬಾರಿಸುವ ಬದಲು ಬಾಗಿಲು ಮೇಲೆ ಟಕ್.... ಟಕ್... ಎಂದು ಶಬ್ದ ಕೇಳಿ ಬಂತು. ಬಂದವರ ಧ್ವನಿ ಕೇಳಿ ಯಾರು ಬಂದಿದ್ದಾರೆಂದು ನನಗೆ ಗೊತ್ತಾಗಿಹೋಯಿತು.
``ನಿಲ್ಲು...... ನಿಲ್ಲು.... ನಾನು ಬರುತ್ತಿದ್ದೇನೆ,'' ಎಂದು ಕುಳಿತಲ್ಲಿಂದಲೇ ಹೇಳಿದೆ.
ಧ್ವನಿ ಕೇಳಿಸಿಕೊಂಡ ನನ್ನ ಹೆಂಡತಿ, ``ಬಹುಶಃ ಅಣ್ಣ ಬಂದಿದ್ದಾರೆಂದು ಅನಿಸುತ್ತದೆ,'' ಎಂದು ಹೇಳುತ್ತಲೇ ಅವಳು ಬಾಗಿಲು ತೆಗೆದಳು.
``ಬನ್ನಿ.... ಬನ್ನಿ...... ಬಹಳ ದಿನಗಳ ಬಳಿಕ ತಮ್ಮ ಆಗಮನವಾಯ್ತು.''
``ಅತ್ತಿಗೆ ನಾನು ಒಂದು ವಿಶೇಷ ಕೆಲಸದ ಪ್ರಯುಕ್ತ ನಿಮ್ಮ ಬಳಿ ಬಂದಿದ್ದೀನೆ. ಎಲ್ಲಕ್ಕೂ ಮೊದಲು ನೀವು ಚಹಾ ಮಾಡಿ.''
ನಂದಿತಾಳಿಗೆ ಚಹಾದ ಬೇಡಿಕೆ ಕೊಡುತ್ತಿದ್ದಾರೆಂದು, ಇಂದು ಅವರಿಗೆ ಅವರದ್ದೇ ಆದ ವಿಶೇಷ ಕೆಲಸ ಇದೆ ಅನಿಸುತ್ತೆ. ನಾನು ನನ್ನ ಮುಂದಿದ್ದ ಕಾಗದ ಪತ್ರಗಳನ್ನೆಲ್ಲ ಬದಿಗೆ ತೆಗೆದಿಟ್ಟೆ. ಏಕೆಂದರೆ ಅವರ ಆಗಮನದಿಂದ ನನಗೂ ಬಹಳ ಖುಷಿಯಾಗಿತ್ತು.
``ಹ್ಞಾಂ ಹೇಳಿ.... ಅಂಥದ್ದೇನು ಕೆಲಸ?'' ನಾನು ಪ್ರಶ್ನಿಸಿದೆ.
``ನೋಡಿ ಸುರೇಶ್, ನಾನು ನನ್ನ ಮಗಳು ಚಿತ್ರಾಳ ಮದುವೆ ನಿಗದಿ ಮಾಡಲು ನಿರ್ಧರಿಸಿದ್ದೇನೆ. ಹುಡುಗ ಕೂಡ ಒಳ್ಳೆಯವನು. ಅವನ ಮನೆತನ ಕೂಡ ಚೆನ್ನಾಗಿದೆ. ನನಗೆ ಹಣದ ಯಾವುದೇ ಕೊರತೆ ಇಲ್ಲ. ನನಗಿರುವವರು ಇಬ್ಬರೇ ಹೆಣ್ಣುಮಕ್ಕಳು. ನನ್ನದೆಲ್ಲ ಅವರದ್ದೇ. ನಾನು ಅವರಿಗೆ ಬಹಳಷ್ಟು ಕೊಡ್ತೀನಿ ಸರಿ ಅಲ್ವಾ? ಆದಾಗ್ಯೂ ಹುಡುಗನ ಬಗ್ಗೆ ತಿಳಿದಿರುವುದು ಒಳ್ಳೆಯದು ಅಲ್ವೇ? ಅದೇ ಕೆಲಸವಿಟ್ಟುಕೊಂಡು ನಾನು ನಿಮ್ಮ ಬಳಿ ಬಂದಿದ್ದೇನೆ.''
ಅವರ ಮಗಳು ಚಿತ್ರಾ ಸುಂದರ ಹುಡುಗಿ ಅಲ್ಲದೇ, ಒಳ್ಳೆಯ ಸ್ವಭಾವದವಳು ಕೂಡ ಆಗಿದ್ದಳು. ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳದ ಹೊರತಾಗಿಯೂ ಬಹಳ ಸಾದಾಸೀದಾ ಆಗಿದ್ದಳು. ನಮ್ಮಿಬ್ಬರಿಗೂ ಯಾವಾಗಲೂ ಒಂದು ಪ್ರಶ್ನೆ ಕಾಡುತ್ತಿರುತ್ತದೆ. ಅದೇನೆಂದರೆ, ಚಿತ್ರಾಳ ಅಮ್ಮ ದೊಡ್ಡ ಮನೆತನದವಳು. ತನ್ನೊಂದಿಗೆ ಅಪಾರ ಸಂಪತ್ತನ್ನು ತೆಗೆದುಕೊಂಡು ಬಂದಿದ್ದಳು. ಅವಳು ತನ್ನ ದೊಡ್ಡಸ್ತಿಕೆಯ ಬೊಗಳೆ ಹೊಡೆಯುತ್ತಿರುತ್ತಾಳೆ. ಅವಳು ಹೆಚ್ಚು ಓದಿದವಳಲ್ಲ, ಅವಳಿಗೆ ಯಾವುದೇ ಹವ್ಯಾಸಗಳಾಗಲಿ, ಕಲೆಯ ಬಗೆಗಿನ ಜ್ಞಾನವಾಗಲಿ ಇರಲಿಲ್ಲ. ಅವಳು ಯಾವಾಗಲೂ ತನ್ನ ಶ್ರೀಮಂತಿಕೆಯ ಕನಸಿನಲ್ಲಿಯೇ ಮುಳುಗಿರುತ್ತಿದ್ದಳು. ಅದೇ ಕಾರಣದಿಂದ ಅವಳಿಗೂ ನನ್ನ ಪತ್ನಿಗೂ ಅಷ್ಟಾಗಿ ಹೊಂದಾಣಿಕೆ ಆಗುತ್ತಿರಲಿಲ್ಲ.
``ನೋಡಿ, ನನ್ನ ಬಳಿ ಹಣ ಆಸ್ತಿ ಯಾವುದಕ್ಕೂ ಕೊರತೆ ಇಲ್ಲ. ನನ್ನ ಮಗಳು ಕೂಡ ಒಳ್ಳೆಯವಳು. ಹಾಗಿದ್ದಾಗ ನಮಗೆ ಒಳ್ಳೆಯ ಅಳಿಯನೇ ಸಿಗಬೇಕು ಅಲ್ವೇ?''
``ಹೌದೌದು. ನೀವು ಸರಿಯಾಗಿಯೇ ಹೇಳಿರುವಿರಿ. ನೀವು ನೋಡಿದ ಹುಡುಗ ಅವಶ್ಯವಾಗಿ ಒಳ್ಳೆಯವನೇ ಆಗಿರಬೇಕು.''
ಅವರು ಹೇಳಿದ್ದನ್ನು ಕೇಳಿ ನಾನು ಚಕಿತನಾದೆ. ಅವರು ಬಿಸಿದ ಬಲೆಯಲ್ಲಿ ನಾನು ಮತ್ತೆ ಸಿಕ್ಕಿ ಬೀಳುತ್ತೇನಾ? ನನ್ನ ಮನಸ್ಸಿನಲ್ಲಿ ವಿಚಾರ ಬಂದುಬಿಟ್ಟಿತು.
``ಸುರೇಶ್. ಹುಡುಗ ನಿಮಗೆ ಗೊತ್ತಿರುವವನೇ ನಿಮ್ಮ ಚಿಕ್ಕಪ್ಪನ ಮಗ. ಅವನು ಅನ್ನಪೂಣೇಶ್ವರಿ ನಗರದಲ್ಲಿ ಇದ್ದಾನೆ.''