ತಂದೆಯಂತೆಯೇ ಸಾಹಸಿ, ಧೀರಳಾದ ಮಗಳು ಮಧುರಾ, ಪೊಲೀಸ್ ಇಲಾಖೆಗೆ ಸೇರಿ ತಂದೆಯ ಶತ್ರುಗಳನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾದಳೇ......?
ರಾಧಾಳ ಕಾಲುಗಳು ನೆಲದಲ್ಲೇ ನಿಲ್ಲುತ್ತಿರಲಿಲ್ಲ. ಒಂದು ನಿಮಿಷ ಇಲ್ಲಿದ್ದರೆ ಏನೋ ನೆನಪಾದವಳ ಹಾಗೆ ಇನ್ನೊಂದು ನಿಮಿಷಕ್ಕೆ ಅಡುಗೆಮನೆಗೆ ಓಡುತ್ತಿದ್ದಳು. ಮತ್ತೆ ಬಾಗಿಲಿಗೆ ಬಂದು ಹೊರಗಡೆ ನೋಡುತ್ತಿದ್ದಳು. ಮುಖದ ಮೇಲೆ ನಗು, ಕಣ್ಣಲ್ಲಿ ಹೊಳಪು ತುಂಬಿ ತುಳುಕುತ್ತಿತ್ತು.
``ರಾಧಾ, ಮಗಳು ಮನೆಗೆ ಬಂದ ತಕ್ಷಣ ಮೊದಲು ಅವಳಿಗೆ ದೃಷ್ಟಿ ತೆಗೆದುಬಿಡು. ಹಾಗೇ ಮಾತನಾಡುತ್ತಾ ನಿಂತುಬಿಡಬೇಡ.....''
``ಆಯ್ತು ಅತ್ತೆ....''
``ರಾಧಾ.... ಒಂದು ನಿಮಿಷ ಕುಳಿತುಕೋ. ಬೆಳಗ್ಗೆಯಿಂದ ಓಡಾಡುತ್ತಿದ್ದೀಯಾ.... ಅವಳು ಬರುವುದು 11 ಗಂಟೆಗೆ, ಈಗಿನ್ನೂ 9 ಗಂಟೆ.''
ಆದರೆ ತಾಯಿಯ ಕರುಳು ಕೇಳಬೇಕಲ್ಲ,...., ``ಇಲ್ಲಾ ಅತ್ತೆ ಹೀಗೆ ಅಂದರೆ ಹಾಗೆ ತಾಸುಗಳು ಉರುಳುತ್ತವೆ. ನಾನು ಒಳಗಡೆ ಇದ್ದಾಗ ಅವಳು ಬಂದುಬಿಟ್ಟರೆ.....''
ಜಾನಕಮ್ಮನಿಗೆ ಸೊಸೆಯ ಖುಷಿ ನೋಡಿ ಮನತುಂಬಿ ಬಂದಿತು. `ಎಷ್ಟು ವರ್ಷಗಳ ತಪಸ್ಸಿನ ಮೇಲೆ ಈ ಖುಷಿ ರಾಧಾಳ ಬಾಳಲ್ಲಿ ಸಿಕ್ಕಿದೆ. ಅವಳಿಗೆ ಹೇಗೆ ಬೇಕೋ ಹಾಗೆ ಅನುಭವಿಸಲಿ,' ಎಂದು ಮಂದಹಾಸದಿಂದ ರೂಮಿನಲ್ಲಿದ್ದ ಮಗನ ಫೋಟೋ ಮುಂದೆ ಹೋಗಿ ನಿಂತರು.
ಅವರ ಮನ ಗತಕಾಲಕ್ಕೆ ಹೋಯಿತು. `ನಾನು ನಿನ್ನ ತಂದೆ ಆ ದಿನ ಹೀಗೆಯೇ ಸಂಭ್ರಮಪಟ್ಟೆವು. ನಿನ್ನನ್ನು ಮೊದಲ ಬಾರಿ ಆ ಪೊಲೀಸ್ ಸಮಸ್ತ್ರದಲ್ಲಿ ನೋಡಿ ಹೆಮ್ಮೆಪಟ್ಟೆ. ನಿನ್ನ ಕರ್ತವ್ಯ ನಿಷ್ಠೆಯಿಂದ ನೀನು ಎಲ್ಲರಿಗೂ ದುಃಸ್ವಪ್ನನಾದೆ. ಎಲ್ಲರೂ ನಿನ್ನ ಹೆಸರಿಗೆ ಜೈಕಾರ ಹಾಕುತ್ತಿದ್ದರು. ಆದರೆ ಕಳ್ಳಕಾಕರಿಗೆ ನಿನ್ನ ಮೇಲೆ ಎಲ್ಲಿಲ್ಲದ ಸಿಟ್ಟು. ನಿನಗೋ ಸಿಟ್ಟು ಕಡಿಮೆ ಇರಲಿಲ್ಲ. ಆ ಸಿಟ್ಟನ್ನು ಕಡಿಮೆ ಮಾಡಲು ಸರಿಯಾದ ಜೋಡಿಯಾಗಿ ಬಂದಳು ರಾಧಾ.....
`ನನ್ನ ಸೊಸೆ, ತನ್ನ ನಗುಮುಖದಿಂದ ನಮ್ಮ ಮನೆ ತುಂಬಿದಳು. ಅವಳ ಮುಗ್ಧತನ, ಒಳ್ಳೆಯ ಮನಸ್ಸು ನಮಗೆ ಸೊಸೆ ಎಂಬ ಭಾವ ಬರಲೇ ಇಲ್ಲ. ಅವಳು ಮನೆ ಮಗಳಾದಳು. ಒಳ್ಳೆಯವರಿಗೆ ಕಾಲವಿಲ್ಲ ಎನ್ನುವ ಹಾಗೆ ವಿಷ ಸರ್ಪಗಳ ಮಧ್ಯೆ ತನ್ನ ಪ್ರಾಮಾಣಿಕತೆಯನ್ನು ಒರೆ ಹಚ್ಚಿ ದುಡಿಯುವ ನಿನ್ನನ್ನು ಆ ಪಾಪಿಗಳು ಕೊಂದುಬಿಟ್ಟರು,' ಜಾನಕಮ್ಮನ ಕಣ್ಣಿಂದ ಕಣ್ಣೀರು ಒಂದೇ ಸಮನೆ ಸುರಿಯಲಾರಂಭಿಸಿತು.
ಮಡಿಲಲ್ಲಿ ಎಳೆ ಕೂಸನ್ನು ಇಟ್ಟುಕೊಂಡು ರಾಧಾ ಮಗಳಿಗಾಗಿ, ಗಂಡನ ಆಸೆಗಾಗಿ ಧೈರ್ಯ ತಂದುಕೊಂಡು ಜೀವನ ಎದುರಿಸಿದಳು.
ಇನ್ನೂ ಚಿಕ್ಕ ವಯಸ್ಸು, ಸಂಸಾರದ ಸುಖ ಕಾಣುವ ಮನಸ್ಸು. ಮಗು ನಮಗೆ ಕೊಡು ನಾವು ಸಾಕುತ್ತೇವೆ. ನೀನು ತರಿಗೆ ಹೋಗಿ, ಬೇರೆ ಮದುವೆಯಾಗು, ಎಂದು ಹೇಳಿದರೂ ಕೇಳಲಿಲ್ಲ.
ಬಾಯಿ ತುಂಬಾ ಮಗಳೇ ಅನ್ನುತ್ತೀರಿ. ಒಂದು ದಿನ ತವರು ಮನೆಯ ನೆನಪು ಬರದ ಹಾಗೆ ನೋಡಿಕೊಂಡಿದ್ದೀರಿ. ಜೀವನದ ಆಸರೆ, ಇಳಿವಯಸ್ಸಿನ ಊರುಗೋಲಾಗಿದ್ದ ಸ್ವಂತ ಮಗನನ್ನು ಕಳೆದುಕೊಂಡು ಎಷ್ಟು ದುಃಖದಲ್ಲಿ ಇದ್ದೀರಿ ಅಂತ ನನಗೆ ಗೊತ್ತು. ನಾನು, ನಿಮ್ಮ ಮೊಮ್ಮಗಳು ಎಲ್ಲಿಯೂ ಹೋಗುವುದಿಲ್ಲ. ನಿಮ್ಮ ಜೊತೆ ನಿಮ್ಮ ಮಗನಾಗಿ ನಿಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು, ಎಂದು ಹೇಳಿದ ರಾಧಾಳಾ ಮಾತುಗಳು ಇಂದಿಗೂ ನೆನಪಾಗುತ್ತದೆ.