ಆಕಸ್ಮಿಕಾಗಿ ಭೇಟಿಯಾದ ಮಹತಿ– ಸುಮುಖ ಗಾಢವಾದ ಸ್ನೇಹ ಹೊಂದಿ ಮುಂದೆ ಪ್ರೇಮಿಗಳಾದರು. ಇನ್ನೂ ಬಿ.ಇ ಕಲಿಯುತ್ತಿದ್ದ ಮಹತಿ ತನ್ನ ವ್ಯಾಸಂಗ ಪೂರ್ಣಗೊಳಿಸದೆ, ಪ್ರೇಮದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗಿ ಸುಮುಖನನ್ನು ಕೂಡಲೇ ಮದುವೆಯಾಗಲು ನಿರ್ಧರಿಸಿದಳು. ಇಬ್ಬರ ಮನೆಯಲ್ಲೂ ಎಷ್ಟೇ ಬೇಡವೆಂದರೂ ಕೇಳದೆ, ಆತುರವಾಗಿ ಮದುವೆ ಮುಗಿಸಿಕೊಂಡರು. ಎಲ್ಲ ಅನುಕೂಲಕರವಾಗಿದ್ದ ಅವರ ಸಂಸಾರದಲ್ಲಿ ನಿಧಾನವಾಗಿ ಅಪಸ್ವರ ಮೊಳಗ ತೊಡಗಿತು. ಸಾಂಸಾರಿಕ ಕಲಹಗಳಿಗೆ ಹೆಚ್ಚಿನ ಮಹತ್ವ ನೀಡಬಾರದೆಂಬ ಪ್ರೌಢತೆ ಇಬ್ಬರಿಗೂ ಇರಲಿಲ್ಲ. ಚಿಕ್ಕ ಪುಟ್ಟ ವಿರಸವನ್ನೇ ದೊಡ್ಡದು ಮಾಡಿ ದೂರವಾಗುವ ಸಂದರ್ಭ ತಂದುಕೊಂಡರು……..
ಮುಂದೆ ಓದಿ
ಆತುರದಲ್ಲಿ ಪ್ರೇಮ ವಿವಾಹವಾದ ಮಹತಿ–ಸುಮುಖ ಸಂಸಾರದಲ್ಲಿನ ಸಣ್ಣ ಪುಟ್ಟ ಜಗಳಗಳನ್ನೇ ದೊಡ್ಡದು ಮಾಡಿಕೊಂಡು ಇಬ್ಬರೂ ಬೇರೆಯಾಗುವ ಸಂದರ್ಭ ತಂದುಕೊಂಡರು. ಮುಂದೆ ಅವರಿಬ್ಬರ ಬದುಕು ಕವಲೊಡೆದದ್ದು ಹೇಗೆ? ಇಬ್ಬರಲ್ಲಿ ಸೋತವರಾರು…. ಗೆದ್ದವರಾರು……?
ಹೀಗೆ ದಿನೇ ದಿನೇ ಇಬ್ಬರ ನಡುವೆ ಸಣ್ಣಪುಟ್ಟ ವಿಷಯಕ್ಕೆ ಜಗಳ, ಕೋಪ, ವಿರಸ ಜಾಸ್ತಿಯಾಯಿತು. ಕಿಚ್ಚು ಹಚ್ಚಿದವಳು ಏನೂ ತಿಳಿಯದವಳಂತೆ ಇಬ್ಬರ ಜೊತೆಗೂ ಒಳ್ಳೆಯವಳ ತರಹ ನಟಿಸುತ್ತಾ, ಮನದಲ್ಲಿ ಖುಷಿಯಿಂದ ಇದ್ದಳು.
ಮಹತಿಗೆ ದಿನಾ ಒಂದಲ್ಲ ಒಂದು ಕಿರಿ ಕಿರಿ ಮನೆಯಲ್ಲಿ, ಸಣ್ಣಪುಟ್ಟದಕ್ಕೂ ನಮ್ಮ ಮನೆಯ ಪದ್ಧತಿ ಹೀಗೆ ಇರಬೇಕು, ಹಾಗೆ ಇರಬೇಕು ಎಂದು ಅತ್ತೆ ಹೇಳುತ್ತಿದ್ದರು. ನೈಟ್ ಡ್ರೆಸ್, ನೈಟಿ ಯಾವುದೂ ಹಾಕುವ ಹಾಗಿಲ್ಲ. ಮತ್ತೆ ಮತ್ತೆ ಅದೇ ಹೇಳುತ್ತಿದ್ದರು. ಚೂಡಿದಾರ್, ಸೀರೆ ಬಿಟ್ಟು ಇನ್ನೇನು ಧರಿಸುವ ಹಾಗಿರಲಿಲ್ಲ.
ಮಹತಿ ಹೆಚ್ಚಾಗಿ ಪ್ಯಾಂಟ್ ಹಾಕುತ್ತಿದ್ದಳು. ಆದರೆ ಅತ್ತೆ ಮನೆಯಲ್ಲಿ ಹಾಕುವ ಹಾಗಿರಲಿಲ್ಲ. ಅವಳಿಗೆ ಸೀರೆ ಉಡಲು ಬರುತ್ತಿರಲಿಲ್ಲ, ಅದು ಕಷ್ಟದ ಕೆಲಸವಾಗಿತ್ತು. ಆದರೆ ಕುಟುಂಬದಲ್ಲಿ ಸಂಬಂಧಿಕರ ಮಧ್ಯೆ ನಡೆಯುತ್ತಿದ್ದ ಸಣ್ಣಪುಟ್ಟ ಪೂಜೆ, ಕುಂಕುಮಕ್ಕೆ ಕರೆದಾಗ ಸೀರೆ ಉಟ್ಟು ಹೋಗಬೇಕಾಗಿತ್ತು.
ಚಂಚಲಾ ಎಷ್ಟೋ ಕಡೆ ಕೆಲಸದ ನೆಪವೊಡ್ಡಿ ಹೋಗುತ್ತಲೇ ಇರಲಿಲ್ಲ. ಮಹತಿಗಾದರೆ ಹೋಗಲೇಬೇಕೆಂಬ ಬಲವಂತ. ಏಕಾದರೂ ಮದುವೆ ಮಾಡಿಕೊಂಡೆ ಅನಿಸುತ್ತಿತ್ತು ಮಹತಿಗೆ. ಅಮ್ಮ ಹೇಳಿದ್ದು ನಿಜ. ಆತುರಪಟ್ಟೆ ಎಂದು ಮನದಲ್ಲೇ ಅಳುತ್ತಿದ್ದಳು.
ಸುಮುಖನಿಗಂತೂ ಮೂಗಿನ ತುದಿಯಲ್ಲಿ ಕೋಪ. ಯಾವ ಸಾಮಾನು ಎಲ್ಲಿರಬೇಕೋ ಅಲ್ಲೇ ಇರಬೇಕಿತ್ತು. ಸ್ವಲ್ಪ ವ್ಯತ್ಯಾಸವಾದರೂ ದೊಡ್ಡ ಜಗಳವಾಡುತ್ತಿದ್ದ. ಅದಕ್ಕೆ ಅತ್ತಿಗೆ ಬೇರೆ ಹೇಳಿ ಕೊಡುತ್ತಿದ್ದಳು.
“ಸುಮುಖ, ನೀನು ಈಗಲೇ ಮಹತಿಯನ್ನು ಕಂಟ್ರೋಲ್ ಗೆ ತೆಗೆದುಕೊಳ್ಳಬೇಕು. ನೋಡು, ನೀವು ಜಗಳವಾಡುವಾಗ ಅವಳ ಧ್ವನಿಯೇ ಜೋರಾಗಿ ಕೇಳುತ್ತದೆ. ನೀನೂ ಜೋರಾಗಬೇಕು. ನಿಮ್ಮ ಅಣ್ಣನಿಗೆ ನಾನು ಎಷ್ಟು ಹೆದರ್ತೀನಿ ಗೊತ್ತಾ…..?” ಎಂದು ಸುಮುಖ ಹೆಂಡತಿಗೆ ಬೈಯುವಂತೆ ಅವನ ತಲೆ ತುಂಬಿಸುತ್ತಿದ್ದಳು.
ಎರಡು ದಿನ ಕೆಲಸದವರು ಬರದೇ ಇದ್ದಾಗ ಮಹತಿಗೆ ಮನೆ ಸ್ವಚ್ಛ ಮಾಡಲು ಹೇಳಿದರು. ಅವಳು ತನಗೆ ಬರುವುದಿಲ್ಲವೆಂದಳು. ಚಂಚಲಾ ಯಾರೂ ಇಲ್ಲದ ಸಮಯ ನೋಡಿ, ಸುಮುಖನ ಬಳಿ ಮಹತಿಯ ಅಮ್ಮನ ಹತ್ತಿರ ಮಾತನಾಡು ಎಂದು ಹೇಳಿಕೊಟ್ಟಳು.
ಅವನೂ ಹಾಗೇ ಮಾಡಿದ. ಅತ್ತೆ ಸುಜಯಾಗೆ ಫೋನ್ ಮಾಡಿ, “ನಿಮ್ಮ ಮಗಳಿಗೆ ಏನು ಕಲಿಸಿದ್ದೀರಾ….? ಗುಡಿಸಲು, ಮನೆ ಒರೆಸಲು ಬರುವುದಿಲ್ಲ…” ಎಂದೆಲ್ಲಾ ಹೇಳಿದ.
“ಅವಳು ತುಂಬಾ ಚಿಕ್ಕವಳು. ನಿಧಾನಕ್ಕೆ ಕಲಿಯುತ್ತಾಳೆ,” ಎಂದು ಹೇಳಿದರು ಸುಜಯಾ.
“ನೀವು ಒದ್ದು ಬುದ್ಧಿ ಕಲಿಸಬೇಕಿತ್ತು. ನಮ್ಮನೆಗಳಲ್ಲಿ ಹೆಣ್ಣು ಮಕ್ಕಳಿಗೆ ಹಾಗೆ ಕಲಿಸಿದ್ದೇವೆ,” ಎಂದ ಕಟುವಾಗಿ.
ಯಾಕೋ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ ಎನಿಸಿ ಸುಜಯಾ ಮತ್ತು ಅನಂತ್ ಮಗಳ ಮನೆಗೆ ಹೋಗಿ ಮಾತನಾಡಬೇಕೆಂದು ನಿಶ್ಚಯಿಸಿದರು. ಮಹತಿಯ ಅಪ್ಪನಿಗೆ ತುಂಬಾ ಕೋಪ ಬಂದಿತ್ತು. ಆದರೂ ಸಹಿಸಿಕೊಂಡು ಮಗಳ ಮನೆಗೆ ಹೋಗಿ ಸುಮುಖನ ಅಪ್ಪ, ಅಮ್ಮನ ಬಳಿ ಮಾತನಾಡಿದರು.
ಅದಕ್ಕವರು, “ನಮ್ಮ ಮಗನಿಗೂ ಹೇಳ್ತೀವಿ. ನೀವು ಮಹತಿಗೂ ಹೇಳಿ. ಇಬ್ಬರೂ ಕೋಪ ಮಾಡಿಕೊಂಡು ಕೂಗಾಡಿದರೆ ಹೇಗೆ….? ನೋಡಿದವರು ನಗುತ್ತಾರೆ,” ಎಂದು ಹೇಳಿ ಇಬ್ಬರನ್ನೂ ಕೂರಿಸಿಕೊಂಡು ನಾಲ್ಕು ಮಂದಿ ಬುದ್ಧಿ ಹೇಳಿದರು.
ಸಂಸಾರವೆಂದರೆ ಹೀಗೆ ಎಲ್ಲಾ ಸರಿಯಿರುವುದಿಲ್ಲ. ಒಬ್ಬರಿಗೊಬ್ಬರು ಹೊಂದಿಕೊಂಡು ಸಮರಸದಿಂದ ಜೀವನ ಮಾಡಬೇಕು. ಇಬ್ಬರೂ ಕೋಪ ಕಡಿಮೆ ಮಾಡಿಕೊಳ್ಳಿರೆಂದು ಬುದ್ಧಿವಾದ ಹೇಳಿದರು.
ಸುಮುಖನ ಅಪ್ಪ ಯಾರೂ ಇಲ್ಲದಿರುವಾಗ ಅವನ ಬಳಿ ಬಂದು, “ಮಹತಿ ಇನ್ನೂ ಚಿಕ್ಕವಳು. ಮನೆಯವರನ್ನು ಬಿಟ್ಟು ನಿನ್ನನ್ನು ನಂಬಿ ಬಂದಿದ್ದಾಳೆ. ಅವಳನ್ನು ಚೆನ್ನಾಗಿ ನೋಡಿಕೊ. ನಿಧಾನವಾಗಿ ತಿಳಿಸಿ ಹೇಳು. ನೀನು ಈ ವಿಚಾರದಲ್ಲಿ ಯಾರ ಮಾತನ್ನೂ ಕೇಳಬೇಡ. ಅವಳು ನಿನ್ನ ಹೆಂಡತಿ, ಅವಳ ಜವಾಬ್ದಾರಿ ನಿನ್ನದು,” ಎಂದು ಸೂಕ್ಷ್ಮವಾಗಿ ತಿಳಿ ಹೇಳಿದರು.
ಅಂತೂ ಮುಂದೆ ಕೆಲವು ದಿನ ಯಾವ ವಿರಸವಿಲ್ಲದೆ ಇಬ್ಬರೂ ಸಹನೆಯಿಂದ ಇದ್ದರು. ಮಹತಿ ಸಹ ಮತ್ತೆ ಡ್ಯಾನ್ಸ್ ಕ್ಲಾಸಿಗೆ ಸೇರಿಕೊಂಡಳು. ಕಾಲೇಜು, ಡ್ಯಾನ್ಸ್ ಕ್ಲಾಸ್ ಎಂದು ಸಮಯ ಸುಗಮವಾಗಿ ಸರಿಯುತ್ತಿತ್ತು.
ಮಹತಿ, ಸುಮುಖ ಸಣ್ಣ ಪುಟ್ಟದ್ದಕ್ಕೆ ಕಿತ್ತಾಡುವುದು ಕಡಿಮೆಯಾಗಿತ್ತು. ಒಂದು ದಿನ ಮಹತಿಯನ್ನು ಅವಳ ಅಮ್ಮನ ಮನೆಗೆ ಕರೆದುಕೊಂಡು ಹೋದ. ಅತ್ತೆ ಮಾವ ಪ್ರೀತಿಯಿಂದ ಮಾತನಾಡಿಸಿ, ಹೀಗೆ ಇಬ್ಬರೂ ನಗುತ್ತಿದ್ದರೆ ಎಷ್ಟು ಚಂದ ಎಂದು ಹೇಳಿದರು.
ಮಹತಿಗೆ ನೃತ್ಯ ಶಾಲೆಯಲ್ಲಿ ವಾರ್ಷಿಕೋತ್ಸವವೆಂದು ದಿನಾ ಕ್ಲಾಸ್ ಮುಗಿಸಿ ಮನೆಗೆ ಬರುವುದು ತುಂಬಾ ತಡವಾಗುತ್ತಿತ್ತು. ಗಂಡ ಮತ್ತು ಅತ್ತೆಗೆ ಮೊದಲೇ ಹೇಳಿದ್ದಳು. ಅವರು ಮೊದಲು ಸರಿಯೆಂದರು.
ದೊಡ್ಡ ಸೊಸೆ ಚಂಚಲಾ, “ಮಹತಿ ದಿನಾ ಬರುವುದು ಎಷ್ಟು ತಡವಾಗುತ್ತೆ. ಪಾಪ ಅವಳಿಗೂ ಕಷ್ಟ, ಅವಳು ಮದುವೆಯಾದ ಮೇಲೆ ಇದೆಲ್ಲಾ ಇಟ್ಟುಕೊಳ್ಳಬಾರದು. ಹೆಣ್ಣುಮಕ್ಕಳು ರಾತ್ರಿ ಬರೋದು ಯಾಕೋ ಚೆನ್ನಾಗಿ ಕಾಣುವುದಿಲ್ಲ. ಮೊದಲೇ ನಮ್ಮದು ಸಂಪ್ರದಾಯಸ್ಥ ಕುಟುಂಬ,” ಎಂದು ಅತ್ತೆ ಬಳಿ ಚುಚ್ಚಿದಳು.
ಮಹತಿಯ ಅತ್ತೆಗೂ ಇದು ಸರಿ ಎನಿಸಿತು, `ಹೌದು ಮದುವೆಯಾದ ಮೇಲೆ ಇದೆಲ್ಲಾ ಸರಿಯಿಲ್ಲ. ಹೆಣ್ಣು ಮಕ್ಕಳು ರಾತ್ರಿ ಮನೆಗೆ ಬಂದರೆ ಏನು ಚಂದ. ಈಗ ಹೇಳಿದರೆ ಬೇಸರ ಮಾಡಿಕೊಳ್ಳುವಳು. ಈ ವಾರ್ಷಿಕೋತ್ಸವ ಮುಗಿಯಲಿ ಆಮೇಲೆ ಹೇಳೋಣ,’ ಎಂದುಕೊಂಡು ಸುಮ್ಮನಾದರು.
ದಿನಾಲು ಸುಮ್ಮ ಸುಮ್ಮನೆ ಸುಮುಖನಿಗೆ ಫೋನ್ ಮಾಡಿ ಮಾತನಾಡುತ್ತಿದ್ದಳು ಚಂಚಲಾ. ಇಬ್ಬರೂ ಹೊರಗಡೆ ಹೋದಾಗ, `ಊಟಕ್ಕೆ ಬರುವಿರಾ…? ಅನ್ನಕ್ಕೆ ಇಡಲಾ….?’ ಅಂತಲೋ `ಇಲ್ಲ ಅಂಗಡಿಯಿಂದ ಏನೋ ಸಾಮಾನು ತನ್ನಿ….’ ಅಂತಲೋ ಒಟ್ಟಿನಲ್ಲಿ ಮಹತಿ, ಸುಮುಖ ಜೊತೆಯಾಗಿದ್ದಾಗ ಸುಮುಖನಿಗೆ ಫೋನ್ ಮಾಡುವುದು, ಮಾತನಾಡುವುದು ಮಾಡುತ್ತಿದ್ದಳು. ಮೊದಲಿನಿಂದ ಸಲಿಗೆ ಎಂದು ತಪ್ಪು ತಿಳಿಯದೆ ಮಹತಿ ಸುಮ್ಮನೆ ಇದ್ದಳು.
ಒಂದು ದಿನ ಮಹತಿ ಯಾರಿಗೋ ಫೋನ್ ಮಾಡಲೆಂದು ಸಮುಖನ ಫೋನ್ ತೆಗೆದುಕೊಂಡಳು. ಅದರಲ್ಲಿ ಚಂಚಲಾಳದೇ ಬೇಕಾದಷ್ಟು ಮಿಸ್ಡ್ ಕಾಲ್ ಇತ್ತು. ಯಾಕೋ ಸಂಶಯವಾಗಿ ಫೋನ್ ಕಾಲ್ ಲಿಸ್ಟ್ ಚೆಕ್ ಮಾಡಿದಾಗ ಹಿಂದಿನ ದಿನ ಅರ್ಧ ಗಂಟೆ ಮಾತನಾಡಿದ್ದು ಗೊತ್ತಾಯಿತು.
ಅದರಲ್ಲಿ ಕಾಲ್ ರೆಕಾರ್ಡರ್ ಇದ್ದ ಕಾರಣ, ಸುಮುಖನನ್ನು ಕರೆದು, “ನೋಡು ಸುಮುಖ, ನಿಮ್ಮ ಅತ್ತಿಗೆ ದಿನಾ ಫೋನ್ಮಾಡುತ್ತಾರಲ್ಲಾ…. ಏನು ಮಾತನಾಡುತ್ತಾರೆ ಎಂದು ಕೇಳುವುದಿಲ್ಲ. ಆದರೂ ನಾನು ಒಮ್ಮೆ ಕೇಳಲೆ ನೀನು ಇಲ್ಲೇ ಇರು….” ಎಂದಳು.
“ಬೇಡ ಮಹತಿ….,” ಎಂದು ಸುಮುಖ ಎಷ್ಟೇ ಹೇಳಿದರೂ ಕೇಳದೆ ಪ್ಲೇ ಮಾಡಿದಳು.`ಸುಮುಖ, ನೀನು ಯಾಕೆ ಮಹತಿಗೆ ನೃತ್ಯ ಕಲಿಯಲು ಒಪ್ಪಿಗೆ ಕೊಟ್ಟೆ…. ಬೇಡ ಅನ್ನಬೇಕಿತ್ತು. ಮದುವೆಯಾದ ಮೇಲೆ ಇದೆಲ್ಲ ಏನು ಚೆಂದ. ನಾವು ಮನೆಯಲ್ಲಿ ಒಪ್ಪಿಕೊಂಡು ಕಾಲೇಜಿಗೆ ಕಳುಹಿಸುತ್ತಿದ್ದೇವೆ. ಸಂಗೀತ ಕ್ಲಾಸ್ ಗೆ ಹೋಗಬೇಕು ಅಂತ ಏನೋ ಹೇಳುತ್ತಿದ್ದಳು. ನೀನು ಬೇಡ ಅಂತ ಹೇಳು. ನೀನು ಎಲ್ಲದಕ್ಕೂ ಹ್ಞೂಂ ಎಂದರೆ ಅವಳು ನಿನ್ನ ತಲೆ ಮೇಲೆ ಕುಳಿತುಕೊಳ್ಳುತ್ತಾಳೆ. ನನ್ನನ್ನು ನೋಡು, ನನಗೆ ಇಷ್ಟವಿರುವುದನ್ನು ನಿಮ್ಮಣ್ಣ ಬೇಡ ಎಂದರೆ ನಾನು ಮಾಡುವುದಿಲ್ಲ. ನನ್ನ ಹವ್ಯಾಸಕ್ಕಿಂತ ನಮ್ಮ ಮನೆ ಗೌರವ ಮುಖ್ಯ. ನಮ್ಮ ಮನೆಯಲ್ಲಿ ಅತ್ತೆ, ಮಾವ ಒಳ್ಳೆಯವರು. ಅದಕ್ಕಾಗಿ ಇವಳು ಹೀಗೆಲ್ಲಾ ಆಡುತ್ತಿದ್ದಾಳೆ. ನೀನು ಅವಳ ಅಮ್ಮ ಅಪ್ಪನ ಬಳಿ ಮಾತನಾಡು. ಅವರು ಬಂದು ನಿನಗೆ ಬುದ್ಧಿ ಹೇಳುವುದು ಏಕೆ? ಅವರು ನಮ್ಮ ಮನೆಗೆ ಬಂದಾಗ ನನಗೆ ಕೋಪ ಬಂದಿತ್ತು. ಎಷ್ಟು ಒಳ್ಳೆಯ ಹುಡುಗ ನೀನು. ನಿನಗೆ ಬುದ್ಧಿ ಹೇಳುವುದಕ್ಕೆ ಏನಿದೆ? ನಾನೇ ಮಧ್ಯೆ ಮಾತನಾಡೋಣ ಅಂತ ಬಂದೆ. ಆದರೆ ನಿಮ್ಮ ಅಣ್ಣ ನನ್ನನ್ನು ತಡೆದರು.’ ಹೀಗೆ ಬಗೆ ಬಗೆಯಾಗಿ ಚಾಡಿ ಹೇಳಿದ್ದನ್ನು ಕೇಳಿ ಮಹತಿಗೆ ಕೋಪ ಬಂದಿತು. ಹಳೆಯ ಕಾಲ್ ರೆಕಾರ್ಡ್ ಗಳನ್ನೆಲ್ಲಾ ಕೇಳಿದಳು. ಎಲ್ಲದರಲ್ಲೂ ಚಂಚಲಾ ನಯವಾಗಿ ಚಾಡಿ ಹೇಳುವುದೇ ಇತ್ತು. ಕೋಪಗೊಂಡ ಮಹತಿ, “ನೀನು…. ನೀನು ನಿನ್ನೆ ನನ್ನ ಮೇಲೆ ಸಿಡಿಮಿಡಿಗೊಂಡಿದ್ದು ಇದಕ್ಕೇನಾ….?” ಎಂದು ಕೇಳಿದಳು.
ಅದಕ್ಕೆ ಸುಮುಖ, “ಅವರು ನನಗೆ ತಾಯಿ ಸಮಾನ. ಅವರು ನಮ್ಮ ಮನೆಯವರು. ನಾವೆಲ್ಲ ಚೆನ್ನಾಗಿ ಇರಲಿ ಎಂದು ಹೇಳಿದ್ದಾರೆ ಅಷ್ಟೇ. ಅವರಿಗೆ ನೀನೇನೂ ಹೇಳಬೇಡ,” ಎಂದು ಕೋಪದಿಂದ ಹೇಳಿದ.
“ಓಹೋ…. ಹಾಗಿದ್ದರೆ ನಾನು ಮನೆಯಳಲ್ಲ ಅಲ್ವಾ….?”
“ನೀನು ಈಗ ಬಂದಿರುವೆ. ಅವರು ನಾಲ್ಕು ವರ್ಷ ಮುಂಚೆ ಬಂದವರು. ಅವರಿಗೆ ಎಲ್ಲಾ ಗೊತ್ತು…. ತಲೆಹರಟೆ ಮಾಡಬೇಡ,” ಎಂದು ರೇಗಿದ. ಮಹತಿಗೂ ಕೋಪ ನೆತ್ತಿಗೇರಿತು. ಅವಳು ಜೋರಾಗಿ ಕೂಗಾಡಿದಳು.
“ನಾನು ಹೇಳಿದ ಹೇಗೆ ಕೇಳುವ ಹಾಗಿದ್ದರೆ ಇರು…. ಇಲ್ಲಾ ಅಂದರೆ ಹೊರಟು ಹೋಗು,” ಎಂದು ಅವನೂ ಕೂಗಾಡಿದ.
“ಸರಿ ನಿಮಗೆ ನನ್ನ ಅವಶ್ಯಕತೆ ಇಲ್ಲ ಅಂದ ಮೇಲೆ ನನಗೂ ಬೇಡ. ನಾನು ಈಗಲೇ ಹೋಗುವೆ,” ಎಂದು ಬಟ್ಟೆ ಪ್ಯಾಕ್ ಮಾಡಿಕೊಂಡು ಹೊರಟೇಬಿಟ್ಟಳು.
ಮನೆಗೆ ಬಂದ ಮಹತಿ ಅಪ್ಪ ಅಮ್ಮನ ಬಳಿ, “ನಾವು ಸುಖವಾಗಿ ಇರಲು ಆ ಚಂಚಲಾ ಬಿಡುವುದಿಲ್ಲ. ಸುಮುಖ ಮೊದಲಿನ ಹಾಗಿಲ್ಲ. ಅತ್ತಿಗೆ ಹೇಳಿದ ಮಾತು ಕೇಳುತ್ತಾನೆ. ಅಮ್ಮಾ, ನಾನು ತಪ್ಪು ಮಾಡಿದೆ. ನಾನು ಬದುಕಿರಬಾರದು,” ಎಂದು ಜೋರಾಗಿ ಅತ್ತಳು.
ಸುಜಯಾ ಮತ್ತು ಅನಂತ್, “ನೀನು ಸಮಾಧಾನ ಮಾಡಿಕೋ. ನಾವು ಮಾತನಾಡುತ್ತೀವಿ,” ಎಂದು ಮಗಳನ್ನು ಸಂತೈಸಿದರು. `ಇನ್ನೂ ಸುಮ್ಮನೆ ಇದ್ದರೆ ಸರಿಯಾಗುವುದಿಲ್ಲ. ಹೀಗೆ ಆದರೆ ಮಹತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅವಳು ಮೊದ
ಲೇ ತುಂಬಾ ಸೂಕ್ಷ್ಮ ಸ್ವಭಾವದವಳು,’ ಎಂದು ಸುಜಯಾ ಅನಂತ್ ಮಾತನಾಡಿಕೊಂಡು ತಾವೇ ಸುಮುಖನಿಗೆ ಫೋನ್ ಮಾಡಿದರು.
ಆದರೆ ಸುಮುಖನ ಸಿಟ್ಟು ಕಡಿಮೆ ಆಗಿರಲಿಲ್ಲ. “ನಿಮ್ಮ ಮಗಳಿಗೆ ಎಷ್ಟು ಧೈರ್ಯ….? ಅವಳೇ ಮನೆ ಬಿಟ್ಟು ಹೋಗಿದ್ದಾಳೆ. ಬೇಕಿದ್ದರೆ ಅವಳೇ ಬರಲಿ…. ನಾನು ಕರೆಯಲು ಬರೋಲ್ಲ,” ಎಂದ ಖಂಡಿತವಾಗಿ.
ಮಹತಿಗೆ ಎಷ್ಟೇ ಬುದ್ಧಿ ಹೇಳಿದರೂ ಅವಳು, “ಇನ್ನೆಂದೂ ನಾನು ಅಲ್ಲಿಗೆ ಹೋಗುವುದಿಲ್ಲ ಅಮ್ಮಾ…. ಸುಮುಖನಿಗೆ ಮೊದಲೇ ಕೋಪ ಜಾಸ್ತಿ. ಏನಾದರೂ ಮಾತನಾಡಿದರೆ ಕತ್ತು ಹಿಸುಕಲು ಬರುತ್ತಾನೆ. ಮನೆಯವರು ಏನೇ ಹೇಳಿದರೂ ಅದು ತಪ್ಪಾಗಿದ್ದರೂ ಅದನ್ನು ಕೇಳುತ್ತಾನೆ ಮಾಡುತ್ತಾನೆ. ನೀನು ಇದ್ದರೆ ಇರು ಇಲ್ಲದಿದ್ದರೆ ಹೋಗು ಎಂದ ಮೇಲೆ ಮತ್ತೆ ನಾನು ಹೇಗೆ ಹೋಗಲಿ….? ನನಗೂ ಸ್ವಾಭಿಮಾನ ಇದೆ,” ಎಂದು ಹಠ ಹಿಡಿದಳು.
ಅದೇ ದಿನ ಮಹತಿಯ ಚಿಕ್ಕಪ್ಪ ಅಂದರೆ ಅನಂತನ ತಮ್ಮ ಮನೆಗೆ ಬಂದಿದ್ದರು. ವಿಷಯ ಕೇಳಿ, “ಅಣ್ಣಾ, ನಾನೂ ಬರುತ್ತೇನೆ ನಡಿ, ಆ ಹೆಂಗಸಿನ ಬಳಿ ಮತ್ತು ಮನೆಯವರ ಬಳಿ ಕೂತು ಮಾತನಾಡೋಣ,” ಎಂದರು. ಮೂವರು ಸುಮುಖನ ಮನೆಗೆ ಬಂದು ಅವನ ಅಪ್ಪ ಅಮ್ಮನ ಬಳಿ ಮಾತನಾಡಿದರು. ಅದಕ್ಕವರು, “ಚಂಚಲಾ ಏಕೆ ಫೋನ್ ಮಾಡುತ್ತಾಳೆ…..? ಮಹತಿ ಏನೋ ತಪ್ಪಾಗಿ ತಿಳಿದುಕೊಂಡಿದ್ದಾಳೆ. ಚಂಚಲಾ ಹಾಗೆಲ್ಲಾ ಚಾಡಿ ಹೇಳಿಕೊಡುವವಳಲ್ಲ,” ಎಂದೆಲ್ಲಾ ವಾದಿಸಿದರು.
“ಇಲ್ಲ… ನೀವು ಚಂಚಲಾಳನ್ನು ಕರೆಯಿರಿ ನಾವು ಕೇಳುತ್ತೇವೆ,” ಎಂದರು ಮಹತಿಯ ಚಿಕ್ಕಪ್ಪ.
ಚಂಚಲಾಳ ಬಳಿ ಕೇಳಿದ್ದಕ್ಕೆ, “ಸುಮುಖ ನನಗೆ ಮಗನ ಹಾಗೆ. ಅದಕ್ಕೆ ಇವರಿಬ್ಬರು ಜಗಳವಾಡುವುದನ್ನು ನೋಡಲಾರದೆ ಸುಮುಖನಿಗೆ ಬುದ್ಧಿ ಹೇಳಿದೆ ಅಷ್ಟೆ,” ಎಂದಳು.
ಅವಳ ಮಾತಿನಿಂದ ರೊಚ್ಚಿಗೆದ್ದ ಮಹತಿಯ ಚಿಕ್ಕಪ್ಪ, “ಏನಮ್ಮಾ…. ನೀನು ಸಂಸಾರ ಸರಿ ಮಾಡುವುದನ್ನು ಬಿಟ್ಟು ಒಡೆಯಲು ನೋಡುವೆಯಾ? ಬುದ್ಧಿ ಹೇಳುವುದಿದ್ದರೆ ಇಬ್ಬರನ್ನೂ ಕೂರಿಸಿ ಮಾತನಾಡು… ಅದೇಕೆ ಅವನೊಬ್ಬನಿಗೆ ಮಾತ್ರ ಫೋನ್ ಮಾಡುತ್ತಿ….? ಮತ್ತೆ ಮತ್ತೆ ಹೀಗೆ ಮಾಡಿದರೆ ನಾನು ಸುಮ್ಮನೆ ಇರುವುದಿಲ್ಲ. ಸುಮುಖನಿಗೆ ಬುದ್ಧಿ ಹೇಳಲು ಅವನ ಅಪ್ಪ ಅಪ್ಪ ಇದ್ದಾರೆ. ನೀನು ಮಹತಿಯಂತೆ ಈ ಮನೆಗೆ ಸೊಸೆ. ನಿನ್ನ ಪಾಡಿಗೆ ನೀನಿದ್ದರೆ ಸರಿ ಇಲ್ಲ ಎಂದರೆ ನಾವು ಸುಮ್ಮನಿರೋಲ್ಲ,” ಎಂದರು.
“ನನ್ನ ಮಗಳು ಅನಾಥೆಯಲ್ಲ. ನಾನು ಅಪ್ಪ ಇನ್ನೂ ಬದುಕಿರುವೆವು. ಅವಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಹೀಗೆಲ್ಲ ಹಿಂಸೆ ಮಾಡುವುದ್ದಿದರೆ ನಾವು ಅವಳನ್ನು ಕಳುಹಿಸುವುದಿಲ್ಲ,” ಎಂದರು ಮಹತಿಯ ಅಪ್ಪ.
ಚಂಚಲಾ ಏನೂ ಮಾತನಾಡದೆ ಅಳುತ್ತಾ ಒಳಗಡೆ ಹೋದಳು. ಸುಮುಖನ ಅಮ್ಮ ಅಪ್ಪನ ಬಳಿ ಮಾತನಾಡಿ ಅವನಿಗೆ ನಮ್ಮ ಮನೆಗೆ ಬರಲು ಹೇಳಿ. ನಾವು ಅವನ ಬಳಿ ಮಾತನಾಡಿ ನಂತರ ಮಗಳನ್ನು ಕಳುಹಿಸುತ್ತೇವೆ ಎಂದು ಹೇಳಿ ಅಲ್ಲಿಂದ ಹೊರಟರು.
ಸುಮುಖ ಮನೆಗೆ ಬರುತ್ತಿದ್ದಂತೆ ಚಂಚಲಾ, ಇಲ್ಲದ ಸಲ್ಲದ ನಾಟಕ ಮಾಡುತ್ತಾ, “ಇವತ್ತು ಮಹತಿಯ ಅಪ್ಪ, ಅಮ್ಮ ಅವಳ ಚಿಕ್ಕಪ್ಪನನ್ನು ಕರೆದುಕೊಂಡು ಬಂದು ನನಗೆ ಬೈದರು,” ಎಂದು ಹೇಳುತ್ತಾ ಜೋರಾಗಿ ಅಳುತ್ತಲೇ, “ಸುಮುಖ, ನೀನು ಮೊದಲು ಎಷ್ಟು ಸಂತೋಷದಿಂದ ಇದ್ದೆ. ಮದುವೆಯಾದ ಮೇಲೆ ನಿನ್ನ ನೋಡೋಕೆ ಆಗ್ತಾ ಇಲ್ಲ. ಯಾವಾಗಲೂ ಏನೋ ಬೇಸರದಿಂದ ಇರುತ್ತೀ.. ಇದನ್ನು ನೋಡಿ ನಾನು ನಿನ್ನ ಹತ್ತಿರ ಮಾತನಾಡಿದ್ದು ತಪ್ಪಾ…? ನಿನ್ನನ್ನು ನನ್ನ ಮಗ ಎಂದು ತಿಳಿದಿರುವೆ. ನಿನ್ನನ್ನು ನೋಡಿ ನನಗೆ ಸಂಕಟವಾಗುತ್ತದೆ. ಅದಕ್ಕೆ ನಾನು ನಿನಗೆ ಬುದ್ಧಿ ಹೇಳಿದೆ,” ಎಂದು ನಾಟಕವಾಡಿದಳು.
ಸುಮಖನ ಅಪ್ಪ ಮಗನಿಗೆ, “ಇದೆಲ್ಲಾ ಸರಿಯಲ್ಲ ಸುಮುಖ. ನೀನು ಮದುವೆ ಮಾಡಿಕೊಂಡ ಮೇಲೆ ಅವಳು ನಿನ್ನವಳು. ನಮ್ಮದೇ ಇನ್ನೊಂದು ಮನೆ ಇದೆಯಲ್ಲ, ಅಲ್ಲಿ ನೀವಿಬ್ಬರೂ ಸ್ವಲ್ಪ ದಿನ ಬೇರೆ ಸಂಸಾರ ಇರಿ. ಹೋಗು ಮಹತಿಯನ್ನು ಕರೆದುಕೊಂಡು ಬಾ,” ಎಂದರು ಕಟುವಾಗಿ.
“ಅಪ್ಪಾ, ನಿಮಗೇನೂ ಗೊತ್ತಾಗಲ್ಲ. ನೀವು ಸುಮ್ಮನೆ ಇರಿ. ಈಗ ನಾವು ಸೋತರೆ ಸರಿಯಲ್ಲ,” ಎಂದ ಸುಮುಖ.
ಅವನ ಅಣ್ಣ ಕೂಡ, “ಸ್ವಲ್ಪ ದಿನ ಸುಮ್ಮನೆ ಇದ್ದು ಬಿಡಿ ಇಬ್ಬರಿಗೂ ಕೋಪ ಕಡಿಮೆಯಾದ ಮೇಲೆ ಬೇರೆ ಮನೆಗೆ ಕಳುಹಿಸೋಣ,” ಎಂದ.
ಚಂಚಲಾ ಯಾರೂ ಇಲ್ಲದ ಸಮಯದಲ್ಲಿ ಸುಮುಖನ ತಲೆ ತಿಂದಳು, “ಮಹತಿ ಮನೆಯವರಿಗೆ ತುಂಬಾ ಅಹಂಕಾರ ಸುಮುಖ, ನಮ್ಮ ಮನೆಗೆ ಬಂದು ನಮ್ಮೆಲ್ಲರ ಮೇಲೆ ಜೋರು ಮಾಡಿದರು. ಅತ್ತೆ, ಮಾವ ಪಾಪ ಅವರಿಂದ ಬಾಯಿಗೆ ಬಂದಂತೆ ಬೈಸಿಕೊಂಡರೂ, ನಿನಗೆ ಬೇಜಾರವಾಗುತ್ತೆ ಎಂದು ನಿನ್ನ ಬಳಿ ಏನೂ ಹೇಳಲಿಲ್ಲ. ಅತ್ತೆ ಮಾವ ಎಷ್ಟು ಒಳ್ಳೆಯವರು. ಒಂದು ದಿನ ಯಾರೊಬ್ಬರ ಬಳಿ ಮಾತು ಕೇಳಿದವರಲ್ಲ. ಅಷ್ಟಲ್ಲದೇ, ನನ್ನ ಮೇಲೆ ಸಹ ಜೋರು ಮಾಡಿದರು. ಅವರ ಕೋಪ ನೋಡಿದರೆ ನನಗೆ ಹೊಡೆದೇ ಬಿಡುವರೇನೋ ಎಂದುಕೊಂಡೆ. ನಾನು ಮಹತಿಯನ್ನು ತಂಗಿ ಎಂದು ಭಾವಿಸಿ ಅವಳಿಗೆ ಎಷ್ಟು ಸಹಾಯ ಮಾಡಿದೆ,” ಎಂದು ಮೊಸಳೆ ಕಣ್ಮೀರು ಬಿಡುತ್ತಾ ತನಗೆ ಬಹಳ ಬೇಸರವಾಗಿದೆಯೇನೋ ಎಂಬಂತೆ ಹೇಳಿಕೊಂಡಳು.
“ಅತ್ತಿಗೆ ನೀವು ಬೇಸರ ಮಾಡಿಕೊಳ್ಳಬೇಡಿ. ನಾನು ಅವಳಿಗೂ ಅವಳ ಕುಟುಂಬಕ್ಕೂ ಬುದ್ಧಿ ಕಲಿಸ್ತೀನಿ. ನಾವು ಕೈಯಲ್ಲಿ ಆಗದವರು ಅಂದುಕೊಂಡಿದ್ದಾರೆ. ಅವರಿಗೆ ನನ್ನ ತಾಕತ್ತು ತೋರಿಸುವೆ,” ಎಂದ ಸುಮುಖ, `ಪಾಪ ಅಮ್ಮ ಅಪ್ಪ ನನ್ನಿಂದ ಮಾತು ಕೇಳುವ ಹಾಗಾಯಿತು. ಅವರನ್ನು ಅಪಮಾನಿಸಿದ್ದಾರಲ್ಲಾ….. ಇನ್ನು ನಾನು ಸುಮ್ಮನೆ ಇರುವುದಿಲ್ಲ. ಅವರಿಗೆ ಮಾತ್ರ ಜನ ಇದಾರಾ…? ನಮಗೆ ಯಾರೂ ಇಲ್ವಾ….? ನಾನು ತೋರಿಸ್ತೀನಿ,’ ಎಂದು ಮನದಲ್ಲೇ ಅಂದುಕೊಂಡ.
ಸುಮಖನಿಗೆ ಮೊದಲೇ ಕೋಪ ಜಾಸ್ತಿ. ಬುದ್ಧಿ ಹೇಳಲು ಯಾರನ್ನೋ ಕರೆದುಕೊಂಡು ಬಂದಿದ್ದರೆಂದು ಕೇಳಿ ಅವನ ಕೋಪ ಜಾಸ್ತಿಯಾಯಿತು. ವಿವೇಕ ಕಳೆದುಕೊಂಡ ಅವನು ಅಮ್ಮ, ಅಪ್ಪ, ಅಣ್ಣ ಯಾರನ್ನೂ ವಿಚಾರಿಸದೆ ಅತ್ತಿಗೆ ಮಾತನ್ನು ಮಾತ್ರವೇ ನಂಬಿದ.
ಎರಡು ದಿನಗಳ ಕಳೆದವು. ಅಂದು ಸಂಜೆ ಸಮಯದಲ್ಲಿ ಅನಂತ್ ಹಾಗೂ ಸುಜಯಾ ಕಾಫಿ ಕುಡಿಯುತ್ತಾ ಕುಳಿತಿದ್ದರು. ಅಷ್ಟರಲ್ಲಿ ಬಾಗಿಲು ಬೆಲ್ ಆಯಿತು. ಅನಂತ್ ಎದ್ದು ಬಾಗಿಲು ತೆಗೆಯುತ್ತಿದ್ದಂತೆ ನಾಲ್ಕೈದು ಹುಡುಗರು ಒಳಗೆ ನುಗ್ಗಿದರು.
ಅನಂತ್, “ಯಾರು…. ಯಾರು….?” ಎಂದು ಕೇಳುವಷ್ಟರಲ್ಲಿ, “ನೀವು ನಮ್ಮ ಗೆಳೆಯನ ಮನೆಗೆ ಹೋಗಿ ಗಲಾಟೆ ಮಾಡುತ್ತೀರಾ…..? ನಮ್ಮ ಸುಮುಖನ ಮನೆಯವರು ತುಂಬಾ ಒಳ್ಳೆಯವರು,” ಎನ್ನುತ್ತಾ ಅನಂತ್ ನ ಮೇಲೆ ಹಲ್ಲೆ ಮಾಡಿದರು.
“ಸುಮುಖ ಬರಲಿಲ್ಲವೇ….? ಬನ್ನಿ ಕುಳಿತು ಮಾತನಾಡೋಣ. ಹೊಡೆಯುವುದನ್ನು ನಿಲ್ಲಿಸಿ, ಯಾರಾದರೂ ಸಹಾಯ ಮಾಡಿ,” ಎಂದು ಎಷ್ಟೇ ಕೂಗಾಡಿದರೂ ಕೇಳದೆ ಆತನನ್ನು ಚೆನ್ನಾಗಿ ಥಳಿಸಿದರು. ಆತ ನೆಲಕ್ಕೆ ಕುಸಿದು ಬಿದ್ದಾಗ, “ಇನ್ನೊಮ್ಮೆ ಸುಮುಖನ ಮನೆಯವರ ತಂಟೆಗೆ ಬಂದರೆ ಹುಷಾರು,“ ಎಂದು ಹೇಳಿ ಹೋದರು.
ಗಲಾಟೆ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದರು. ಅನಂತ್ ರನ್ನು ಎತ್ತಿ ಕೂರಿಸಿ, ನೀರು ಕುಡಿಸಿದರು. ಅಳುತ್ತಿದ್ದ ಸುಜಯಾಗೆ, “ಅಳಬೇಡಿ, ಮೊದಲು ಇವರನ್ನು ಹಾಸ್ಪಿಟಲ್ ಗೆ ಸೇರಿಸೋಣ,” ಎಂದು ಒಬ್ಬರು ಕಾರು ತೆಗೆದುಕೊಂಡು ಬಂದರು.
ಆ ಸಮಯದಲ್ಲಿ ಮಹತಿ ಮನೆಯಲ್ಲಿ ಇರಲಿಲ್ಲ. ಮಹತಿ ಮೊಬೈಲ್ ಗೆ ಸುಮುಖನಿಂದ ಒಂದು ಸಂದೇಶ ಬಂದಿತು, `ನಮ್ಮ ಮನೆ ತಂಟೆಗೆ ಬಂದರೆ ಏನಾಗುತ್ತೆ ಅಂತ ಗೊತ್ತಾಯಿತಾ….?’ ಮಹತಿ ಗಾಬರಿಯಿಂದ ಅಮ್ಮನಿಗೆ ಫೋನ್ ಮಾಡಿದಳು. ಆಕೆ ಆಸ್ಪತ್ರೆಗೆ ಬರಲು ಹೇಳಿದರು. ಆಸ್ಪತ್ರೆಗೆ ಬಂದ ಮಹತಿ ಅಪ್ಪನ ಸ್ಥಿತಿಯನ್ನು ನೋಡಿ ಜೋರಾಗಿ ಅತ್ತುಬಿಟ್ಟಳು.
“ಮಹತಿ, ಇದು ನಿನ್ನ ಗಂಡನ ಕೈವಾಡ. ಅವನು ಹೊರಗಡೆ ಕಾರಿನಲ್ಲಿ ಕುಳಿತು ಇವರುಗಳನ್ನು ಒಳಗೆ ಕಳುಹಿಸಿ ಈ ರೀತಿ ಹೊಡೆಸಿದ. ನಾನೇ ಕಣ್ಣಾರೆ ಕಂಡೆ,” ಎಂದು ಪಕ್ಕದ ಮನೆಯವರೊಬ್ಬರು ಹೇಳಿದರು.
ಮಹತಿ ಕೋಪದಿಂದ ಕುದ್ದು ಹೋದಳು ಸುಮುಖನಿಗೆ ಫೋನ್ ಮಾಡಿ, “ನೀನು ಇಷ್ಟು ಕೀಳು ಮಟ್ಟದ ಮನುಷ್ಯ ಅಂತ ತಿಳಿದಿರಲಿಲ್ಲ. ರೌಡಿಗಳನ್ನು ಬಿಟ್ಟು ಹೊಡೆಸುತ್ತೀಯಾ….? ನೀನು ಜೈಲು ಕಂಬಿ ಎಣಿಸುವ ಹಾಗೆ ಮಾಡುವೆ,” ಎಂದು ಕೂಗಾಡಿದಳು.
ಆದರೆ ಅವನೇನೂ ಹೆದರಲಿಲ್ಲ, “ಏನು ಮಾಡುತ್ತೀಯೋ ಮಾಡು. ನಾನು ಏನು ಅನ್ನೋದು ತೋರಿಸಿರುವೆ. ನಾನು ಯಾವುದಕ್ಕೂ ಹೆದರವುದಿಲ್ಲ,” ಎಂದ ಹೇಳಿದ.
ಮಹತಿ ಅಪ್ಪನಿಗೆ ಬಿಪಿ ಜಾಸ್ತಿಯಾದ ಕಾರಣ ಒಂದು ದಿನ ಆಸ್ಪತ್ರೆಯಲ್ಲೇ ಇರಲಿ ಎಂದರು ಡಾಕ್ಟರ್. ಅವರ ಜೊತೆಗೆ ಪಕ್ಕದ ಮನೆಯವರು ನಾವು ಇರ್ತೀವಿ. ನೀವು ಮನೆಗೆ ಹೋಗಿ ಎಂದು ಅಮ್ಮ, ಮಗಳನ್ನು ಮನೆಗೆ ಕಳುಹಿಸಿದರು. ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆಂದ ಮಹಿತಿಗೆ ಸುಜಯಾ, “ಬೇಡ ಸಂಬಂಧ ಇನ್ನೂ ಹಾಳಾಗುವುದು ಬೇಡ,” ಎಂದರು.
ಅದಕ್ಕೆ ಮಹತಿ, “ಇನ್ನೆಲ್ಲಿಯ ಸಂಬಂಧ….? ಅವನು ಇಷ್ಟು ಕೀಳು ಮಟ್ಟಕ್ಕೆ ಇಳಿದ ಮೇಲೆ ಅವನ ಜೊತೆ ಮತ್ತೆ ಬಾಳಲು ಸಾಧ್ಯವಾ….? ನೀನು ಎಷ್ಟು ಹೇಳಿದೆ. ಇದು ಪ್ರೀತಿಯಲ್ಲ, ಬರೀಯ ಆಕರ್ಷಣೆ ಅಷ್ಟೇ. ಈಗಲೇ ಮದುವೆ ಬೇಡ ಅಂತ. ಆದರೆ ನಾವಿಬ್ಬರೂ ನಿನ್ನ ಮಾತು ಕೇಳಲಿಲ್ಲ. ಸುಮುಖ ನಾವು ಅಂದುಕೊಂಡ ಹಾಗೆ ಒಳ್ಳೆಯವನಲ್ಲ. ಅವನ ಅಮ್ಮ, ಅತ್ತಿಗೆಗೆ ನಾನು ಏನೂ ಹೇಳಬಾರದು. ಅವರು ನನ್ನನ್ನು ಸುಮ್ಮಸಮ್ಮನೆ ಬೈದರೂ ನಾನು ಬೈಸಿಕೊಳ್ಳಬೇಕೆಂದು ಅವನು ಹೇಳುತ್ತಿದ್ದ. ಅವರ ಅತ್ತಿಗೆಗೆ ತಿರುಗಿ ಮಾತನಾಡಿದೆ ಅಂತ ನನ್ನ ಕತ್ತು ಹಿಸುಕಿದ್ದ. ನಾನು ನಿಮಗೆ ಹೇಳಿರಲಿಲ್ಲ. ಎರಡು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ. ನನಗೆ ಈಗ ಬುದ್ಧಿ ಬಂದಿದೆ. ನಾನು ಒಂಟಿಯಾಗಿ ಸಮಾಜ ಎದುರಿಸುವೆ. ನಾನು ಇನ್ನು ಆ ಮನೆಗೆ ಹೋಗುವುದಿಲ್ಲ,” ಎಂದು ಅಳುತ್ತಾ ಹೇಳಿದಳು.
“ಅಳಬೇಡ ಸುಮ್ಮನಿರು. ಅಪ್ಪ ಮನೆಗೆ ಬಂದ ಮೇಲೆ ಮಾತನಾಡೋಣ,” ಎಂದರು ಸುಜಯಾ. ಅನಂತ್ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಮೇಲೆ ಅನಂತ್ ಹಾಗೂ ಸುಜಯಾ ಯೋಚಿಸಿ ಮಹತಿಗೆ, “ಸದ್ಯಕ್ಕಂತೂ ನಿನ್ನನ್ನು ವಾಪಸ್ ಕಳುಹಿಸಲ್ಲ. ಸ್ವಲ್ಪ ಸಮಯ ಬಿಟ್ಟು ಮುಂದಿನ ತೀರ್ಮಾನ ತೆಗೆದುಕೊಳ್ಳೋಣ. ನಮಗೆ ನೀನು ಮುಖ್ಯ,” ಎಂದು ಅವಳನ್ನು ಸಮಾಧಾನಪಡಿಸಿದರು.
“ಪೊಲೀಸ್ ಗೆ ಹೇಳುವುದು ಬೇಡ. ಅವರಿಗೆ ಶಿಕ್ಷೆ ಕೊಡಲು ದೇವರಿದ್ದಾನೆ. ನಾವು ಅವರ ಹಾಗೆ ಕೀಳು ಮಟ್ಟಕ್ಕೆ ಇಳಿಯುವುದು ಬೇಡ,” ಎಂದು ಸುಜಯಾ ಹೇಳಿದರು.
ನಂತರ ಮಹತಿಯ ಮಾವನಿಗೆ ಫೋನ್ ಮಾಡಿ, “ನಿಮ್ಮ ಮಗ ರೌಡಿಗಳನ್ನು ಕಳುಹಿಸಿ ಹೊಡೆಸಿದ. ಮತ್ತೆ ನಿಮ್ಮ ಮನೆಗೆ ನಮ್ಮ ಮಗಳನ್ನು ಕಳುಹಿಸಲು ಧೈರ್ಯವಿಲ್ಲ. ನಮ್ಮ ಮಗಳನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ,” ಎಂದರು ಮಹತಿಯ ಅಮ್ಮ ಅಪ್ಪ.
ಅವರಿಗೂ ಮಗ ಮಾಡಿದ್ದು ತಪ್ಪು ಎಂದು ಅನಿಸಿದರೂ ದೊಡ್ಡ ಮಗ ಸೊಸೆ, ಸುಮುಖ ಮಾಡಿದ್ದೇ ಸರಿ ಎಂದು ವಾದಿಸಿದಾಗ ಏನೂ ಹೇಳಲಾಗದೆ ಸುಮ್ಮನಾದರು.
ಮಹತಿ ಮನೆಯವರು ಸುಮ್ಮನಾಗಿದ್ದನ್ನು ನೋಡಿ ಸುಮುಖ, “ಇದು ತನ್ನದೇ ಗೆಲುವು. ತನಗೆ ಹೆದರಿದರು. ನೋಡಿ ಅತ್ತಿಗೆ, ಪೊಲೀಸ್ ಗೆ ಹೋಗಲು ಭಯವಾಗಿದೆ ಅವರಿಗೆ. ಇದು ನನ್ನ ಗೆಲುವು,” ಎಂದು ಅಣ್ಣ ಅತ್ತಿಗೆ ಬಳಿ ಬೀಗಿದ.
ಚಂಚಲಾ, “ನಿನ್ನದೇ ಸರಿ ಸಮುಖ. ಅವಳಿಲ್ಲದಿದ್ದರೆ ಇನ್ನೊಂದು ಮದುವೆಯಾಗ್ತೀಯಂತೆ ಸುಮ್ಮನಿರು. ನೀನು ಸರಿಯಾಗಿ ಮಾಡಿದೆ. ಅವಳು ಸಾಯುವತನಕ ಒಂಟಿಯಾಗಿ ನರಳಬೇಕು,” ಎಂದು ಸುಮುಖನಿಗೆ ಹೇಳುತ್ತಾ ಒಳಗೊಳಗೇ ಹಿಗ್ಗಿದಳು.
ಇಲ್ಲಿ ಯಾರಿಗೆ ಜಯ ಅಂತ ತಿಳಿಯದೆ ಸುಮುಖ ಮಾತ್ರ ತನ್ನದೇ ಗೆಲುವು ಎಂದು ಬೀಗುತ್ತಿದ್ದ.
ಸುಮುಖ ರೌಡಿಗಳಂತ ತನ್ನ ಗೆಳೆಯರನ್ನು ಕಳುಹಿಸಿ ತನ್ನ ಅಪ್ಪನ ಮೇಲೆ ಹಲ್ಲೆ ಮಾಡಿಸಿದ್ದು ಮಹತಿಯ ಮನಸ್ಸಿಗೆ ತುಂಬಾ ನೋವಾಗಿತ್ತು. ಸುಮುಖನ ಮೇಲಿನ ಪ್ರೀತಿ ಒಲವು ಸತ್ತು ಹೋಗಿತ್ತು. ಇನ್ನೂ ಯಾವುದೇ ಕಾರಣಕ್ಕೂ ತಾನು ಅವನ ಜೊತೆ ಬಾಳಲು ಸಾಧ್ಯವಿಲ್ಲವೆಂದು ತೀರ್ಮಾನಿಸಿದ ಅವಳು, ಮನೆಯಲ್ಲೂ ಅದನ್ನೇ ಹೇಳಿದ್ದಳು.
ಇದು ಎಂದಿಗೂ ಸರಿಹೊಂದುವ ಸಂಸಾರವಲ್ಲ ಎಂದು ಯೋಚಿಸಿದ ಎರಡೂ ಮನೆಯ ದೊಡ್ಡವರು ವಿಚ್ಛೇದನಕ್ಕೆ ಒಪ್ಪಿಕೊಂಡು ವಕೀಲರ ಬಳಿ ಹೋದರು.
ಮಹತಿ, ತನಗೆ ಸುಮುಖನಿಂದ ಯಾವುದೇ ಪರಿಹಾರ ಬೇಡ ಎಂದು ಖಡಾಖಂಡಿತವಾಗಿ ನಿರಾಕರಿಸಿದಳು. ಅವಳ ಅಮ್ಮ ಅಪ್ಪ ಸಹ ಹಾಗೆ ಹೇಳಿದರು. ಕೋರ್ಟ್ ನಲ್ಲಿ ಕೇಸಿಗಾಗಿ ಓಡಾಟ, ಮನದ ಒತ್ತಡಗಳೆಲ್ಲಾ ಸೇರಿ ಮಹತಿಗೆ ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಎಜುಕೇಶನ್ ಕಂಪ್ಲೀಟ್ ಆಗಲಿಲ್ಲ. ಅವಳ ಮುಂದಿನ ಭವಿಷ್ಯ ಹೇಗೆ ಎಂದು ಸುಜಯಾಗೆ ಯೋಚನೆ ಶುರುವಾಯಿತು.
ಅವಳು ಸ್ವಲ್ಪ ಬಿಜಿಯಾಗಿದ್ದರೆ ಸ್ವಲ್ಪವಾದರೂ ಮರೆಯಬಹುದು ಎಂದು ಅವಳನ್ನು ನೃತ್ಯಶಾಲೆಗೆ ಕರೆದುಕೊಂಡು ಹೋದರು. ಮಹತಿಯ ಗುರುಗಳಾದ ಅನುರಾಧಾರಿಗೆ ಎಲ್ಲಾ ವಿಷಯ ಮೊದಲೇ ಗೊತ್ತಿತ್ತು.
ಅವರು, “ಮಹತಿ ಇಲ್ಲಿಗೆ ಬರಲಿ. ತುಂಬಾ ಹೊಸ ಮಕ್ಕಳು ಸೇರಿದ್ದಾರೆ. ಅವರಿಗೆಲ್ಲ ಮಹತಿಯೇ ಕಲಿಸಲಿ. ನಾನು ಅವಳಿಗೆ ಸಂಬಳ ಕೊಡುವೆ. ಹಾಗೆಯೇ ನೃತ್ಯದಲ್ಲಿ ಮುಂದುವರಿಯಲಿ. ಅವಳಿಗೆ ಇದರಲ್ಲಿ ಒಳ್ಳೆಯ ಭವಿಷ್ಯವಿದೆ,” ಎಂದು ಹೇಳಿದಾಗ ಸುಜಯಾಗೆ ನಿರಾಳವಾಯಿತು.
ಮಹತಿ ಯಾವಾಗಲೂ ತವರಿನಲ್ಲೇ ಇರುವುದನ್ನು ನೋಡಿದ ಅಕ್ಕಪಕ್ಕದವರು ಸಂಬಂಧಿಕರು, `ಏಕೆ ಗಂಡನ ಮನೆಗೆ ಹೋಗುದಿಲ್ವಾ…?’ ಎಂದು ಕೇಳುತ್ತಿದ್ದರು. ವಿಷಯ ತಿಳಿಯದವರು, `ಏನಾಯಿತು…’ ಎಂದು ಸಿಕ್ಕಾಗೆಲ್ಲಾ ಕೇಳುತ್ತಿದ್ದರು.
ವಾಕಿಂಗ್ ಗೆ ಹೋಗಲಿ, ಯಾವುದೇ ಸಮಾರಂಭಕ್ಕೆ ಹೋಗಲಿ ಸಿಕ್ಕಿದವರೆಲ್ಲಾ ಮೊದಲು ಕೇಳುತ್ತಿದ್ದ ಪ್ರಶ್ನೆಯೇ ಇದು. ಆ ಕಡೆ ಸುಮುಖನ ಅಪ್ಪ ಅಮ್ಮನನ್ನು ಸಹ ಏಕೆ ಸೊಸೇನಾ ತವರಿಗೆ ಕಳುಹಿಸಿದ್ದೀರಾ….? ಎಂದು ಕೇಳುವವರೇ. ಎರಡೂ ಮನೆಯವರಿಗೂ ಹೊರಗೆ ಹೋಗಲು ಬೇಸರವಾಗುತ್ತಿತ್ತು.
ನಮ್ಮ ಸಮಾಜದಲ್ಲೇ ಹೀಗೆ. ಬೇರೆಯವರ ಮನೆಯ ವಿಷಯ ಅಂದರೆ ಇನ್ನಿಲ್ಲದ ಕುತೂಹಲ ಜನರಿಗೆ. ನೋವು ಮರೆಯಲು ಬಯಸಿದಷ್ಟೂ ಮರೆಯಲು ಬಿಡುವುದಿಲ್ಲ ಈ ಜನರು.
ಇಲ್ಲಿ ಶಿಕ್ಷೆಯಾಗಿದ್ದು ಎರಡೂ ಮನೆಯ ಹಿರಿಯರಿಗೆ. ಸುಜಯಾ ಮತ್ತು ಅನಂತ್ ರಂತೂ ಜೀವನದಲ್ಲಿ ಯಾವ ತೊಂದರೆ ಕಷ್ಟಗಳಿಲ್ಲದೆ, ಸುಖದಿಂದ ಇದ್ದವರು. ಸುಂದರ ಸಂಸಾರ ಅವರದಾಗಿತ್ತು. ಅವಮಾನ, ಕಷ್ಟ ಅನ್ನುವುದನ್ನು ಅರಿಯದೆ ಬಾಳಿದವರು. ಆದರೆ ಈ ಇಳಿ ವಯಸ್ಸಿನಲ್ಲಿ ಇದೊಂದು ಕೊರಗಾಯಿತು.
ಒಮ್ಮೊಮ್ಮೆ ಸುಮುಖನಿಗೆ ಅನಿಸುತ್ತಿತ್ತು, `ಹೌದು, ಮಹತಿ ಇನ್ನೊಂದು ಪರಿಸರದಲ್ಲಿ ಬೆಳೆದು ಬಂದವಳು. ಅವಳಿಗೆ ಹೊಂದಿಕೊಳ್ಳಲು ಅವಕಾಶ ಕೊಡಬೇಕಿತ್ತು. ನೀನು ನನ್ನ ಹಾಗೆ, ನಮ್ಮ ಮನೆಯವರ ಹಾಗೆ ಇರಬೇಕು ಎಂದು ನಾನು ಅವಳ ಮೇಲೆ ಒತ್ತಡ ಹೇರಿದ್ದು ಜಾಸ್ತಿಯಾಯಿತೇನೋ…? ಅತ್ತಿಗೆಯ ಮಾತು ಕೇಳಿ ತಪ್ಪು ಮಾಡಿದೆನೇನೋ,’ ಎನಿಸತೊಡಗಿತು. ಆದರೆ ಚಂಚಲಾ ಮಾತ್ರ ಸುಮುಖನ ಮನಸ್ಸು ಮಹತಿಯ ಕಡೆ ವಾಲದ ಹಾಗೆ ಏನಾದರೂ ಮಾಡುತ್ತಲೇ ಇದ್ದಳು.
ಮಹತಿ ಮಾತ್ರ ಎಲ್ಲಾ ಯೋಚನೆ ಬಿಟ್ಟು ತನ್ನ ಮನಸ್ಸನ್ನು ನೃತ್ಯದ ಕಡೆಗೆ ಇಟ್ಟಳು. ಇದರಲ್ಲಿ ಏನಾದರೂ ಸಾಧನೆ ಮಾಡುವುದೆನ್ನುವುದೇ ಅವಳ ಗುರಿಯಾಗಿತ್ತು. ಆದ್ದರಿಂದ ಯಾರ ಕುಹಕದ ಮಾತಿಗೂ ಕಿವಿಗೊಡದೆ ಇದ್ದಳು. ಸುಮುಖನಿಂದ ಬೇರೆಯಾಗಿದ್ದು ತಪ್ಪು ಅಂತ ಅವಳ ಮನದಲ್ಲಿ ಒಂದು ಸಲವೂ ಸುಳಿಯಲೇ ಇಲ್ಲ. ಅವಳ ಪಾಲಿಗೆ ಅವನು ಬದಲಾಗದ ಮನುಷ್ಯ. ತನ್ನ ಮನವನ್ನು ಎಂದೂ ಅರ್ಥ ಮಾಡಿಕೊಳ್ಳಲಿಲ್ಲ…. ನಾನು ಬಿಟ್ಟು ಬಂದಿದ್ದೆ ಸರಿ ಎನಿಸಿತು. ಇನ್ನೆಂದೂ ಮತ್ತೆ ಜೀವನದಲ್ಲಿ ಎಡವಬಾರದು. ಒಂಟಿಯಾಗಿ ನಿಂತು ಗೆಲ್ಲಬೇಕು ಎಂದು ಗಟ್ಟಿ ನಿರ್ಧಾರದಿಂದ ಎಲ್ಲಾ ಯೋಚನೆಗಳನ್ನು ಬದಿಗೊತ್ತಿ, ತನ್ನ ತನು, ಮನಗಳಲ್ಲಿ ನೃತ್ಯವನ್ನು ತುಂಬಿಕೊಂಡಳು.
ಮಹತಿಗೆ ಸುಮುಖನಿಂದ ಬಿಡುಗಡೆ ಸಿಕ್ಕಿತು. ಅವಳ ಮನಸ್ಸಿಗೆ ನಿರಾಳವಾಯಿತು. ಮತ್ತೆ ಅವನ ಜೊತೆಗೆ ಬಾಳಬೇಕು ಎಂದರೆ ಅವಳ ಮನಸ್ಸಿಗೆ ಹಿಂಸೆಯಾಗುತ್ತಿತ್ತು. ಮಹತಿಯ ಅಣ್ಣ ಇಂಡಿಯಾಗೆ ಬಂದವನೇ ತಂಗಿಗೆ ವಿದ್ಯಾಭ್ಯಾಸ ಮುಂದುರಿಸು ಎಂದ. ಆದರೆ ಮಹತಿ ತನಗೆ ಇಷ್ಟವಿಲ್ಲ ತಾನು ನೃತ್ಯದಲ್ಲಿ ಮುಂದುವರಿಯುವೆ ಎಂದುಬಿಟ್ಟಳು.
ಈಗಾಗಲೇ ಮಹತಿಗೆ ತುಂಬಾ ಜನ ಅಭಿಮಾನಿಗಳು ಹುಟ್ಟಿಕೊಂಡರು. ಬೆಂಗಳೂರಿನಲ್ಲಿ ಎಲ್ಲಾ ಕಡೆ ಅವಳ ನೃತ್ಯ ತಂಡಕ್ಕೆ ಒಳ್ಳೆಯ ಆಹ್ವಾನ ಸಿಕ್ಕತೊಡಗಿತು. ಮಹತಿಯೊಬ್ಬಳೇ ತುಂಬಾ ಪ್ರೋಗ್ರಾಂ ಕೊಡುತ್ತಿದ್ದಳು. ಎಲ್ಲರೂ ಅವಳ ನೃತ್ಯವನ್ನು ಇಷ್ಟಪಡಲಾರಂಭಿಸಿದರು. ಮಹತಿಯ ಗುರುಗಳು ತನ್ನ ನೃತ್ಯ ಶಾಲೆಯನ್ನು ಅವಳೇ ಮುಂದುವರಿಸು ಎಂದು ಹೇಳಿ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸಲು ಬಯಸಿದರು.
ಚಂಚಲಾ ಸುಮುಖನಿಗೆ ಇನ್ನೊಂದು ಮದುವೆ ಮಾಡಲು ತಯಾರಿ ನಡೆಸಿದ್ದಳು. ಎಲ್ಲಾ ಕಡೆ ಹುಡುಗಿಯ ಮನೆಯವರ ಜೊತೆ ತಾನೇ ಮಾತನಾಡುತ್ತಿದ್ದಳು. ಸುಮುಖ ಬೇಡ ಎಂದರೆ ಕೇಳದೆ ಎಲ್ಲಾ ಕಡೆ ಹೆಣ್ಣು ನೋಡುತ್ತಿದ್ದಳು. ಬಂದವರಿಗೆಲ್ಲಾ ಇವನ ಕಥೆ ತಿಳಿದು ಯಾರೂ ಒಪ್ಪುತ್ತಿರಲಿಲ್ಲ. ಕೊನೆಗೂ ಒಂದು ಹುಡುಗಿ ಮನೆಯವರಿಗೆ, ಒಬ್ಬ ಹುಡುಗಿ ಹೊಂದಿಕೊಳ್ಳಲಿಲ್ಲ ಎಂದರೆ ಅವಳಿಗೆ ನಾವೆಲ್ಲ ಜೊತೆಗೆ ಇರುವುದು ಅವಳಿಗೆ ಇಷ್ಟವಿರಲಿಲ್ಲ. ಅದಕ್ಕೆ ಡೈವೋರ್ಸ್ ಪಡೆದಳು ಎಂದು ನಂಬಿಸಿ ಅವರನ್ನು ಮದುವೆಗೆ ಒಪ್ಪಿಸಿದಳು.
ಆ ಹುಡುಗಿಯ ಮನೆಯವರು ನಿಶ್ಚಿತಾರ್ಥ ಬೇಡ ಎಂದು ತಾಂಬೂಲ ಬದಲಾಯಿಸಿಕೊಂಡರು. ಇನ್ನೂ ಮೂರು ತಿಂಗಳಿಗೆ ಮದುವೆ ನಿಶ್ಚಯವಾಯಿತು. ಹಾಗೆಯೇ ಮದುವೆಯ ಬಟ್ಟೆ, ಒಡವೆ ಎಲ್ಲಾ ತರಲು ಹುಡುಗಿ ಹಾಗೂ ಸುಮುಖನ ಜೊತೆಗೆ ತಾನೇ ಹೋಗುತ್ತಿದ್ದಳು. ಚಂಚಲಾ ಎಲ್ಲಾ ಕಡೆ ಅತಿಯಾಗಿ ಮೈದುನನ ಜೊತೆ ಮಾತನಾಡುವುದು, ನಗುವುದು ನೋಡಿ ಹುಡುಗಿಗೆ ಬೇಸರವಾಯಿತು.
ಹುಡುಗಿಗೆ ಜವಳಿ, ಮೈದುನನ ಜವಳಿ ಎಲ್ಲವನ್ನೂ ತಾನೇ ಆರಿಸುತ್ತಿದ್ದಳು. ಸುಮುಖ ಸಹ ಚಂಚಲಾ ಆರಿಸುವುದನ್ನೇ ತೆಗೆದುಕೊಂಡ. ಹುಡುಗಿಯೂ ಹಾಗೆ ಮಾಡಿದಳು. ಮತ್ತೆ ಮದುವೆಯ ಓಡಾಟವೆಲ್ಲಾ ಅವಳೇ ಮಾಡುತ್ತಿದ್ದಳು. ಎಲ್ಲರಿಗೂ ಪತ್ರಿಕೆ ಕೊಟ್ಟಾಗಿತ್ತು. ಇನ್ನೂ ಮದುವೆ ಎಂಟು ದಿನ ಇದೆ ಎನ್ನುವಾಗ ಸುಮುಖನ ಹುಟ್ಟಿದ್ದ ದಿನ ಬಂದಿತು.
ಚಂಚಲಾ, ಹುಡುಗಿಯ ತಂದೆ ತಾಯಿ, ಅಣ್ಣ ಅತ್ತಿಗೆಯರನ್ನೆಲ್ಲಾ ಕರೆಸಿ ಸುಮುಖನ ಬರ್ತ್ ಡೇ ಆಚರಿಸಿ ಕೇಕ್ ಕಟ್ ಮಾಡಿಸುವ ಕಾರ್ಯಕ್ರಮ ಇಟ್ಟುಕೊಂಡಳು. ಸುಮುಖನ ಅಮ್ಮ, ಅಪ್ಪ ಎಲ್ಲಾ ಬಂದು ಸೇರಿದರು. ಎಲ್ಲರ ಬಳಿಯೂ ನಗುನಗುತ್ತಾ ಓಡಾಡುತ್ತಿದ್ದಳು ಚಂಚಲಾ.
ಸುಮುಖನ ಅಮ್ಮ ಅಪ್ಪನಿಗೆ ಸಧ್ಯ ಮಗನ ಜೀವನ ಸರಿಯಾಗುವುದೆಂದು ಕಂಡು ಖುಷಿಯಾಯಿತು. ಆದರೆ ಆ ಖುಷಿ ಹೆಚ್ಚು ಸಮಯವಿರಲಿಲ್ಲ. ಕೇಕ್ ಕಟ್ ಮಾಡಿದ ಮೇಲೆ ಚಂಚಲಾ ಸುಮುಖನಿಗೆ ಕೇಕ್ ತಿನ್ನಿಸಿ ಅವನ ಮುಖಕ್ಕೆಲ್ಲಾ ಕೇಕ್ ಬಳಿದಳು. ಅಲ್ಲೇ ಇದ್ದ ಹುಡುಗಿಗೆ ಅವರ ಮನೆಯವರಿಗೆ ಒಂದು ರೀತಿಯ ಖೇದವಾಯಿತು. ಚಂಚಲಾ ಸುಮುಖನ ಜೊತೆ ಅಷ್ಟು ಸಲಿಗೆಯಿಂದ ಇರುವುದು ನೋಡಿ ಅವರಿಗೆ ಇಷ್ಟವಾಗಲಿಲ್ಲ.
ಮನೆಗೆ ಹೋದ ತಕ್ಷಣ, “ನನಗೆ ಈ ಮದುವೆ ಬೇಡ. ಅತ್ತಿಗೆ ಮೈದುನರ ಸಲಿಗೆ ತುಂಬಾ ಜಾಸ್ತಿಯಾಗಿದೆ. ಈ ಮೂರು ತಿಂಗಳಿಂದ ನಾನು ನೋಡುತ್ತಲೇ ಇದ್ದೀನಿ. ಅವನು ಅತ್ತಿಗೆ ಹೇಳಿದ ಹಾಗೆ ಕೇಳುತ್ತಾನೆ. ಮುಂದೆಯೂ ಸಹ ಹೀಗೆ ಆಗುತ್ತದೆ. ಆದ್ದರಿಂದ ನನಗೆ ಈ ಮದುವೆ ಬೇಡ,” ಎಂದು ಹಠ ಮಾಡಿದಳು ಹುಡುಗಿ.
ಹುಡುಗಿಯ ಅಣ್ಣ ಅತ್ತಿಗೆಗೆ ತಮ್ಮ ತಂಗಿ ಹೇಳಿದ್ದು ನಿಜವೆನಿಸಿ, ಸುಮುಖನ ಮನೆಗೆ ಫೋನ್ ಮಾಡಿ, “ಕ್ಷಮಿಸಿ ಸರ್, ನಮಗೆ ಈ ಮದುವೆ ಇಷ್ಟವಿಲ್ಲ. ಅತ್ತಿಗೆ, ಮೈದುನರ ಸಲಿಗೆ ಅತಿಯಾಗಿದೆ. ನಮ್ಮ ಹುಡುಗಿ ಈ ಮದುವೆ ಬೇಡವೆನ್ನುತ್ತಿದ್ದಾಳೆ. ಅವಳನ್ನು ಬಲವಂತ ಮಾಡಲು ನಮಗೆ ಇಷ್ಟವಿಲ್ಲ,” ಎಂದು ಹೇಳಿದ ಅವರಣ್ಣ.
“ಚಂಚಲಾಗೆ ಅಣ್ಣ, ತಮ್ಮ ಯಾರೂ ಇಲ್ಲ. ಇದಕ್ಕೆ ಸುಮುಖನನ್ನು ತನ್ನ ತಮ್ಮನೆಂದು ಹಚ್ಚಿಕೊಂಡಿದ್ದಾಳೆ,” ಎಂದು ಸುಮುಖನ ತಂದೆ ಹೇಳಿದರು.
“ಸಾಕು ಸುಮ್ಮನೆ ಇರಿ ಸರ್. ಅಕ್ಕ ತಮ್ಮ ಹೇಗಿರುತ್ತಾರೆ ಎಂದು ಗೊತ್ತು. ಎಲ್ಲದಕ್ಕೂ ಒಂದು ಮಿತಿಯಿರಬೇಕು. ಇವರದು ಅತಿಯಾಯಿತು. ನನ್ನ ತಂಗಿ ಬೇಡವೆಂದ ಮೇಲೆ ಅವಳನ್ನು ಬಲವಂತಪಡಿಸಲು ನಮಗೆ ಇಷ್ಟವಿಲ್ಲ,” ಎಂದು ಹುಡುಗಿಯ ಅಣ್ಣ ಹೇಳಿದ.
ಈ ಮದುವೆಯೂ ಮುರಿದು ಬಿತ್ತು. ಎಲ್ಲರಿಗೂ ಪತ್ರಿಕೆ ಹಂಚಿಯಾಗಿತ್ತು. ಸುಮುಖನ ಮನೆಯವರಿಗೆ ಅವಮಾನದ ಮೇಲೆ ಅವಮಾನವಾಯಿತು. ಚಂಚಲಾ, “ಮತ್ತೆ ಹುಡುಗಿಯ ಬಳಿ ಮಾತನಾಡುವೆ,” ಎಂದಳು.
ಮನೆಯಲ್ಲಿ ಎಲ್ಲರೂ, “ಸಧ್ಯ! ನೀನು ಸುಮ್ಮನೆ ಇರು,” ಎಂದರು.
“ಎಲ್ಲಾ ನಿನ್ನಿಂದಲೇ ಆಗಿದ್ದು. ಮೈದುನನ ಜೊತೆಗೆ ಹೇಗಿರಬೇಕೋ ಹಾಗಿದ್ದರೆ ಮಹತಿಯೇ ಅವನ ಜೊತೆಯಲ್ಲಿ ಇರುತ್ತಿದ್ದಳು,” ಎಂದರು ಸುಮುಖನ ಅಮ್ಮ.
“ಮನೆ ಬಿಟ್ಟು ಹೋದರೂ ಅವಳದೇ ಜಪ. ಇನ್ನೂ ಅವಳೇ ನಿಮಗೆ ಹೆಚ್ಚು,” ಎಂದು ಚಂಚಲಾ ಕೋಪ ಮಾಡಿಕೊಂಡಳು. ಜೊತೆಗೆ ಜಗಳವಾಡಿ ಗಂಡನನ್ನು ಹೆದರಿಸಿ ಬೆದರಿಸಿ ಬೇರೆ ಮನೆ ಮಾಡಿಕೊಂಡು ಹೋದಳು.
ಸುಮುಖನಿಗೆ ಇದೆಲ್ಲಾ ನೋಡಿ ಇನ್ನಷ್ಟು ಬೇಸರವಾಗಿ ವಿದೇಶಕ್ಕೆ ಹೊರಟುಹೋದ.
ಈ ಕಡೆ ಮಹತಿ ಮಾತ್ರ ದಿನದಿಂದ ದಿನಕ್ಕೆ ಹೆಸರು ಮಾಡುತ್ತಾ ಬಹಳ ಸಂತೋಷವಾಗಿ, ಸುಖವಾಗಿ ಇದ್ದಳು. ವಿದೇಶಗಳಲ್ಲೂ ಅವಳ ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ಮಹತಿಯ ಅಣ್ಣ ಸಹ ಮದುವೆಯಾಗಿ ವಿದೇಶದಲ್ಲಿಯೇ ನೆಲೆಸಿದ್ದ. ಮಹತಿಗೆ ಇನ್ನೊಂದು ಮದುವೆ ಮಾಡಲು ಪ್ರಯತ್ನಿಸಿದರೂ ಅವಳು ಒಪ್ಪಲಿಲ್ಲ. ಎಷ್ಟೊಂದು ಒಳ್ಳೆಯ ಸಂಬಂಧಗಳು ಬಂದರೂ ಮಹತಿ ಬೇಡವೆಂದಳು.
ಈಗಿನ ಐದಾರು ವರ್ಷದ ಮಹತಿಯ ಸಾಧನೆ ನೋಡಿ ಅನಂತ್ ಹಾಗೂ ಸುಜಯಾರಿಗೆ ಖುಷಿಯೋ ಖುಷಿ. ಹಣ, ಕೀರ್ತಿ ಎಲ್ಲಾ ಮಹತಿಗೆ ಒಲಿದಿತ್ತು. ಹಾಗೆ ಮದುವೆಯೂ ಆಗಿಬಿಟ್ಟರೆ ಒಳ್ಳೆಯದು ಎಂದುಕೊಂಡರು.
ಮಹತಿ ಸಹ ನಗುನಗುತ್ತಾ ಸಂತೋಷದಿಂದ ಇದ್ದಳು. ಹೀಗಿರುವಾಗ ಅವಳನ್ನು ಮದುವೆಯಾಗಲು ಒಂದು ಹುಡುಗ ಬಹಳ ಬಲವಂತ ಮಾಡಿದ. ಜೀವನವೆಲ್ಲಾ ಒಂಟಿಯಾಗಿರುವೆಯಾ ಎಂದು ಬುದ್ಧಿ ಹೇಳಿದ.
ಅದಕ್ಕೆ ಮಹತಿ ಹೌದು ಒಂಟಿಯಾಗಿ ಇರುವೆ ಎಂದಳು. ಅಪ್ಪ ಅಮ್ಮನಿಗೆ. “ ಅಮ್ಮಾ, ನನಗೆ ಪ್ರಕೃತಿಯ ಎಲ್ಲವನ್ನೂ ಸವಿಯುವ ಬಯಕೆ. ಆದರೆ ಮದುವೆ, ಸಂಸಾರ ಎಲ್ಲಾ ಸಾಕು ಎನಿಸಿದೆ. ಅದನ್ನು ನಾನು ನೋಡಿದ್ದಾಗಿದೆ. ಆದರೆ ಹೆಣ್ಣಿಗೆ ಮಗು ಹುಟ್ಟಿದಾಗಲೇ ಆಕೆ ಸಂತೃಪ್ತಳು. ನಾನು ಮಗುವಿನ ಪ್ರತಿಯೊಂದು ಹಂತವನ್ನೂ ಅನುಭವಿಸಲು ಬಯಸುವೆ. ಆ ಮಗುವಿನ ಬೆಳವಣಿಗೆಯ ಪ್ರತಿಕ್ಷಣವನ್ನು ಕಣ್ಣಾರೆ ನೋಡು ಆಸೆಯಾಗಿದೆ. ಅದಕ್ಕಾಗಿ ನಾನೊಂದು ನಿರ್ಧಾರ ಮಾಡಿರುವೆ. ಅದಕ್ಕೆ ನಿಮ್ಮ ಸಹಕಾರ ಬೇಕು,” ಎಂದಳು.
“ಏನು ನಿನ್ನ ನಿರ್ಧಾರ….” ಅಪ್ಪ ಕೇಳಿದರು.
“ಯಾವುದಾದರೊಂದು ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವೆಯಾ….?” ಸುಜಯಾ ಕೇಳಿದರು.
“ಉಹ್ಞೂಂ…,” ಎನ್ನುವಂತೆ ತಲೆಯಾಡಿಸಿದಳು ಮಹತಿ.
“ಮತ್ತೆ ನಿನ್ನ ನಿರ್ಧಾರವೇನು? ನಿನ್ನಣ್ಣ ಮಹೇಂದ್ರನ ಮಗುವನ್ನು ಸಾಕುವೆಯಾ….?”
“ಇಲ್ಲ ಅಮ್ಮಾ….. ನಾನು ಗರ್ಭಿಣಿಯರು ಅನುಭವಿಸುವ ನೋವು, ಸಂಕಟ ಎಲ್ಲವನ್ನೂ ಅನುಭವಿಸಬೇಕು. ಸೃಷ್ಟಿಯ ಪ್ರತಿಯೊಂದು ಲೀಲೆಗಳನ್ನು ಅನುಭವಿಸಬೇಕು. ಅದಕ್ಕೆ ಸಿಂಗಲ್ ಪೇರೆಂಟ್ ಆಗಿ ಮಗುವನ್ನು ಹೆರುವೆ. ಡಾಕ್ಟರ್ ಹತ್ತಿರ ಮಾತನಾಡಿದ್ದೇನೆ ಸ್ಪರ್ಮ್ ಡೊನೇಷನ್ ಮೂಲಕ ಫರ್ಟಿಲಿಟಿ ಟ್ರೀಟ್ ಮೆಂಟ್ ಮಾಡಿಸಿಕೊಂಡು ಗರ್ಭ ಧರಿಸುತ್ತೇನೆ. ಈಗ ತುಂಬಾ ಜನ ಮದುವೆ ಇಷ್ಟವಿಲ್ಲದವರು ಹೀಗೆ ಮಾಡುತ್ತಾರೆ,” ಎಂದಳು.
“ಮಹತಿ, ನೀನಿನ್ನೂ ಚಿಕ್ಕವಳು. ಎಷ್ಟು ಕಾಲ ಒಂಟಿಯಾಗಿ ಇರುವೆ. ಈಗ ನಾವು ಇದ್ದೀವಿ. ಮುಂದೆ ಹೇಗೆಮ್ಮಾ…. ಹೆಣ್ಣಿಗೆ ಗಂಡಿನಾಸರೆ ಬೇಕು. ನಿನ್ನನ್ನು ಇಷ್ಟಪಡುವ ಹುಡುಗನನ್ನು ಮದುವೆಯಾಗು,” ಎಂದು ಪರಿಪರಿಯಾಗಿ ಹೇಳಿದರು.
“ಇಲ್ಲಮ್ಮಾ….. ನನ್ನ ನಿರ್ಧಾರ ಸರಿಯಾಗಿದೆ. ನಾನು ಒಂಟಿಯಾಗಿ ಮಗುವನ್ನು ಹೆತ್ತು ಸಾಕಿ ಬೆಳೆಸಿ, ಈ ಸಮಾಜಕ್ಕೆ ತೋರಿಸುವೆ,” ಎಂದು ದೃಢ ನಿರ್ಧಾರದಿಂದ, “ಬೇರೆ ಮನೆಗೆ ಸೊಸೆಯಾಗಿ ಹೋಗುವ ಹೆಣ್ಣು ಮಕ್ಕಳಿಗೆ ನೋವು ಕೊಡುವ ಅತ್ತೆ ಮಾವಂದಿರಿಗೆ ನನ್ನ ಜೀವನ ಮಾದರಿಯಾಗಬೇಕು,” ಎಂದಳು.
ಜೊತೆಗೆ ತಾನು ಅಂದುಕೊಂಡಿದ್ದನ್ನು ಮಾಡಿಯೂ ತೋರಿಸಿದಳು. ಮಹತಿ ಐವಿಎಫ್ ಮುಖಾಂತರ ಗರ್ಭ ಧರಿಸಿದಳು. ಗರ್ಭ ಧರಿಸಿದಾಗ ದೇಹದಲ್ಲಿ ಆಗುವ ಪ್ರತಿಯೊಂದು ಬದಲಾವಣೆಯನ್ನೂ ಖುಷಿಯಿಂದ ಅನುಭವಿಸುತ್ತಾ, ತನ್ನ ಶಿಷ್ಯರಿಗೆ ಕ್ಲಾಸ್ನಡೆಸಲು ಹೇಳಿ ಮಧ್ಯೆ ಮಧ್ಯೆ ಹೋಗಿ ನೃತ್ಯ ಶಾಲೆಯಲ್ಲಿ ಕುಳಿತು ಸಲಹೆಗಳನ್ನು ಕೊಟ್ಟು ಬರುತ್ತಿದ್ದಳು. ನವ ಮಾಸದ ನಂತರ ಅವಳಿ ಮಕ್ಕಳಿಗೆ ಜನ್ಮವಿತ್ತಳು. ಈಗ ಮಹತಿ ಒಂದು ಗಂಡು, ಹೆಣ್ಣು ಇಬ್ಬರು ಮಕ್ಕಳ ತಾಯಿ.
ಮಕ್ಕಳಿಗೆ ಆವರು ತಿಂಗಳು ತುಂಬುತ್ತಿರುವ ಹಾಗೆ ಮತ್ತೆ ನೃತ್ಯ ಮಾಡಲು, ಕಲಿಸಲು ಹೊರಟಳು. ಮಹತಿ ಮಗುವನ್ನು ನೋಡಿಕೊಳ್ಳಲು ಇಬ್ಬರು ಆಯಾಗಳನ್ನು ನೇಮಿಸಿದಳು.
ಮಕ್ಕಳಿಗೆ ಮೂರು ವರ್ಷವಾದಾಗ ಮಹತಿಗೆ ಮತ್ತೆ ವಿದೇಶದಲ್ಲಿ ಪ್ರೋಗ್ರಾಂ ಕೊಡುವ ಸಂಬರ್ಧ ಬಂದಿತು. ಈ ಸಾರಿ ಅಮ್ಮ ಅಪ್ಪ ಹಾಗೂ ಮಕ್ಕಳನ್ನು ಕರೆದುಕೊಂಡು ಹೋದಳು. ಅಲ್ಲಿ ಉಳಿದುಕೊಳ್ಳಲು ಅಣ್ಣನ ಮನೆ ಇತ್ತು. ಅದು ತುಂಬಾ ಪ್ರತಿಷ್ಠಿತವಾದ ಅಮೆರಿಕಾದ ಅಕ್ಕಾ ಸಮ್ಮೇಳನವಾಗಿತ್ತು.
ಸುಮುಖ ಅಮೆರಿಕಾದಲ್ಲಿಯೇ ನೆಲೆಸಿದ್ದ. ಇಂಡಿಯಾದಲ್ಲಿ ಅವನ ಅಣ್ಣ ಅತ್ತಿಗೆ ಬೇರೆ ಮನೆ ಮಾಡಿಕೊಂಡಿದ್ದರು. ಇಬ್ಬರು ಗಂಡು ಮಕ್ಕಳನ್ನು ಹೆತ್ತಿದ್ದರೂ, ಅವರ ಹೆತ್ತವರು ಈ ವಯಸ್ಸಿನಲ್ಲಿ ಇಬ್ಬರೇ ಇರಬೇಕಾಯಿತು. ಫೋನ್ ಮಾಡಿದಾಗೆಲ್ಲಾ ಸುಮುಖನಿಗೆ, “ಮಹತಿ ಮದುವೆಯಾಗಿಲ್ಲ. ಅವಳ ಜೊತೆ ಕ್ಷಮೆ ಕೇಳು, ಮಾತನಾಡಿ ಅವಳನ್ನು ಕರೆಸಿಕೋ,” ಎಂದು ಹೇಳುತ್ತಿದ್ದರು.
ಒಮ್ಮೆ ಸುಮುಖ ಮಹತಿ ಮಕ್ಕಳೊಂದಿಗಿರುವ ಫೋಟೋವನ್ನು ಯಾವುದೋ ಪತ್ರಿಕೆಯಲ್ಲಿ ನೋಡಿದ್ದ. ಅವಳಿಗೆ ಬೇರೆ ಮದುವೆಯಾಗಿದೆ ಎಂದುಕೊಂಡಿದ್ದ.
ಅಕ್ಕಾ ಸಮ್ಮೇಳನದಲ್ಲಿ ಮಹತಿಯ ನೃತ್ಯ ಕಾರ್ಯಕ್ರಮವಿದ್ದ ದಿನ ಸುಮುಖ ಸಹ ಅಲ್ಲಿಗೆ ಬಂದಿದ್ದ. ಅಲ್ಲಿ ಮಹತಿಯ ಅಮ್ಮ ಅಪ್ಪ ಅವಳ ಮಕ್ಕಳಿಬ್ಬರನ್ನು ಕರೆದುಕೊಂಡು ಬಂದಿರುವುದನ್ನು ನೋಡಿದ.
ಮಾತನಾಡಿಸಲು ಮುಖವಿರಲಿಲ್ಲ. ತಾನೇ ರೌಡಿಗಳನ್ನು ಬಿಟ್ಟು ಹೊಡೆಸಿದ್ದ. ಅಷ್ಟು ಹೊತ್ತಿಗೆ ಮಹತಿಯ ನೃತ್ಯ ಶುರುವಾಯಿತು. ಅವಳನ್ನು ನೋಡುತ್ತಾ ತಾನೇ ಮೈ ಮರೆತ.
ನಿಜವಾಗಲೂ ಮಹತಿ ಅದ್ಭುತ ನೃತ್ಯಗಾರ್ತಿ. ನಿಜಕ್ಕೂ ಅವಳು ನನ್ನಿಂದ ದೂರ ಹೋಗಿದ್ದೆ ಸರಿ. ಇಲ್ಲವೆಂದರೆ ತಾನೆಲ್ಲಿ ಅವಳಿಗೆ ನೃತ್ಯ ಮಾಡಲು ಬಿಡುತ್ತಿದ್ದೆ ಅನಿಸಿತು. ಅಲ್ಲಿ ಯಾರೋ ಮಾತನಾಡುವುದು ಕೇಳಿಸಿತು. ಮಹತಿಯವರು ಮದುವೆಯಾಗಿಲ್ಲ. ಅವರು ಸಿಂಗಲ್ ಪೇರೆಂಟ್. ಮಕ್ಕಳಿಗೆ ತಾಯಿ ತಂದೆ ಎರಡೂ ಅವರೇ ಆಗಿದ್ದಾರೆ.
ಓ… ಅವಳು ಮದುವೆಯಾಗದೆ ಒಂಟಿಯಾಗಿ ಜೀವನದಲ್ಲಿ ಗೆದ್ದಳು. ಆದರೆ ಅವಳನ್ನು ನೋಯಿಸಿದ ನಮ್ಮ ಕುಟುಂಬ ಛಿದ್ರ ಛಿದ್ರವಾಯಿತು. ಈಗ ಅಣ್ಣ, ಅತ್ತಿಗೆಗೂ ಮಕ್ಕಳಿಲ್ಲ. ದಿನಾ ಜಗಳವಂತೆ. ಅಣ್ಣ ಫೋನ್ ಮಾಡಿ, `ಮಹತಿ ಒಳ್ಳೆಯ ಹುಡುಗಿ ಅವಳಿಗೆ ನೋವು ಕೊಟ್ಟೆವು. ಈಗ ನಮ್ಮ ಜೀವನ ನರಕವಾಗಿದೆ ಕಣೋ. ಮಹತಿಯನ್ನು ಕ್ಷಮಿಸು ಅಂತ ಕೇಳಲು ಯೋಗ್ಯತೆ ಇಲ್ಲದವರಾಗಿದ್ದೇವೆ,’ ಎಂದಿದ್ದು ನೆನಪಾಯಿತು.
`ಹೌದು…. ಎಷ್ಟು ಕನಸು ಹೊತ್ತು ನನ್ನನ್ನು ನಂಬಿ ಬಂದಿದ್ದಳು. ನಾನು ಅಮ್ಮ, ಅತ್ತಿಗೆಯ ಮಾತು ಕೇಳಿಕೊಂಡು ಅವಳಿಗೆ ನೋವು ಕೊಟ್ಟೆನಲ್ಲಾ,’ ಎಂದು ಪರಿತಪಿಸಿದ.
ಹಾಗೆಯೇ ಟಿವಿ ಹಾಕಿದ ಅಲ್ಲಿ ಮಹತಿಯ ಸಂದರ್ಶನ ಬರುತ್ತಿತ್ತು. ಅವಳು ಹೇಳುತ್ತಿದ್ದಳು, `ನಾನು ಅರಿಯದ ವಯಸ್ಸಿನಲ್ಲಿ ಆದ ಆಕರ್ಷಣೆಯನ್ನು ಪ್ರೇಮ ಎಂದು ತಿಳಿದು ಮೋಸ ಹೋದೆ. ನನಗೆ ನನ್ನ ಅಣ್ಣ ಹಾಗೂ ಹೆತ್ತವರು ಧೈರ್ಯ ಹೇಳಿ ಬಾಳಲು ಅವಕಾಶ ಮಾಡಿಕೊಟ್ಟರು. ಅದಕ್ಕೆ ಈಗ ನಾನು ನೆಮ್ಮದಿಯಿಂದ ಇದ್ದು, ಇಷ್ಟು ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು. ಈಗ ಹಣ, ಕೀರ್ತಿ ಎರಡೂ ನನ್ನ ಜೊತೆಗಿದೆ.
`ಮುಂದೆ ಸಹ ಒಂಟಿಯಾಗಿಯೇ ಈ ಎರಡು ಮಕ್ಕಳಿಗೆ ಅಮ್ಮ ಅಪ್ಪ ಎರಡೂ ನಾನೇ ಆಗಿ ಬೆಳೆಸುವೆ. ಎಲ್ಲಾ ಹೆಣ್ಣು ಮಕ್ಕಳಿಗೂ ಒಂದು ಕಿವಿಮಾತು. ಜೀವನದಲ್ಲಿ ಒಮ್ಮೆ ಸೋತರೆ ಹತಾಶರಾಗಬೇಡಿ. ಅದಕ್ಕೆ ಆತ್ಯಹತ್ಯೆಯೊಂದೇ ಪರಿಹಾರವಲ್ಲ. ಜೀವನದಲ್ಲಿ ಒಂದು ದಾರಿ ಮುಚ್ಚಿದರೆ ಇನ್ನೊಂದು ದಾರಿ ಇರುವುದು, ನಾವು ಅಂಜದೆ ಅಳುಕದೆ ಶಾಂತಿಯಿಂದ ಆ ದಾರಿಯಲ್ಲಿ ಮುನ್ನಡೆಯಬೇಕು. ಹುಟ್ಟುವಾಗ ಒಂಟಿಯಾಗಿ ಬಂದಿದ್ದೇವೆ. ಒಂಟಿಯಾಗಿ ಬದುಕಲು ಹೆದರಬಾರದು. ಆಗ ಶಾಂತಿಯುತ ಬದುಕು ನಮ್ಮದಾಗುತ್ತದೆ.’ ಎಂದಳು.
`ಮಹತಿ ಇನ್ನೂ ತನ್ನ ಪಾಲಿಗೆ `ಗಗನ ಕುಸುಮ’ ಅವಳು ತನ್ನಿಂದ ತುಂಬಾ ದೂರ ಹೋಗಿದ್ದಾಳೆ. ಅವಳಲ್ಲ ಒಂಟಿ, ಅವಳು ಜೀವನದಲ್ಲಿ ಗೆದ್ದವಳು. ನಾನು ಸೋತೆ…. ನಾನೇ ಒಂಟಿಯಾಗಿದ್ದು,’ ಎಂದು ಸುಮುಖ ಯೋಚಿಸುತ್ತಾ ತಲೆಯ ಮೇಲೆ ಕೈ ಹೊತ್ತು ಕುಳಿತ.