ಅತಿ ಸಾಮಾನ್ಯ ಕುಟುಂಬದಿಂದ ಬಂದ ಒಬ್ಬ ಹೆಣ್ಣುಮಗಳು, ಇಂದು ನಮ್ಮ ಇಡೀ ದೇಶವೇ ಕೊಂಡಾಡುವಂತೆ ಹಿರಿಯ ಕ್ಯಾನ್ಯರ್ ತಜ್ಞೆಯಾಗಿ ಬೆಳೆದು ಬಂದದ್ದು ಹೇಗೆ…….?
ಸಂಸ್ಕೃತದ ಶ್ಲೋಕವೊಂದರಲ್ಲಿ ವೈದ್ಯೋ ನಾರಾಯಣೋ ಹರಿಃ ಎನ್ನುವ ಸಾಲು ಬರುತ್ತದೆ. ಅದಕ್ಕೆ ಹಲವರು ರೋಗದಿಂದ ಬಳಲುತ್ತಿದ್ದವರನ್ನು ವೈದ್ಯರುಗಳು ತಮ್ಮ ಬುದ್ಧಿ ಶಕ್ತಿಯನ್ನು ಬಳಸಿ ರಕ್ಷಿಸುವ ಕಾರಣ ಅವರನ್ನು ಸಾಕ್ಷಾತ್ ನಾರಾಯಣನ ಅಪರಾವತಾರ ಎಂದು ಅರ್ಥೈಸುತ್ತಾರೆ. ಆದರೆ ವಾಸ್ತವವಾಗಿ ಇಂದಿನ ಕಾಲದಲ್ಲಿ ಅಂತಹ ವೈದ್ಯರು ಸಿಗುವುದು ಬಹಳ ಕಷ್ಟ ಎನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ. ಅದರಲ್ಲೂ ಸರ್ಕಾರೀ ವೈದ್ಯರೆಂದರೆ, ಅವರ ಮೇಲೆ ಜನರ ನಂಬಿಕೆಗಳು ಅಷ್ಟಕ್ಕಷ್ಟೇ. ಆದರೆ ಅಪರೂಪಕ್ಕೆ ಜನ ಸೇವೆಯೇ ಜನಾರ್ಧನನ ಸೇಲೆ ಎಂದು ರೋಗಿಗಳ ಸೇವೆಗಾಗಿಯೇ ತಮ್ಮನ್ನು ಸಂಪೂರ್ಣವಾಗಿ ಮುಡಿಪಾಗಿಟ್ಟು, ಸರ್ಕಾರಿ ಸೇವೆಯಿಂದ ನಿವೃತ್ತರಾದರೂ, ಸಮಾಜ ಸೇವೆಯಲ್ಲೇ ನಿರತರಾಗಿರುವ ಅಪರೂಪ ಮತ್ತು ಅನುರೂಪದ ವೈದ್ಯೋಕದ ದೈತ್ಯ ಮತ್ತು ಮಾನವೀಯ ಪ್ರತಿಮೆಯಾಗಿರುವ ಹಿರಿಯ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆಯವರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಕಷ್ಟ ಕಾರ್ಪಣ್ಯದ ಬಾಲ್ಯ
ವಿಜಯಲಕ್ಷ್ಮಿ ಮೂಲತಃ ಗುಲ್ಬರ್ಗಾದ ಕೊಳೆಗೇರಿಯಲ್ಲಿ ಹಳೆಯ ಚಪ್ಪಲಿಯನ್ನು ಹೊಲಿಯುವ ಕಾರ್ಯವನ್ನು ಮಾಡುತ್ತಿದ್ದ ಅತ್ಯಂತ ಹಿಂದುಳಿದ ಜಾತಿಗೆ ಸೇರಿದ್ದ ಬಾಬುರಾವ್ ದೇಶಮಾನೆ ಮತ್ತು ರತ್ನಮ್ಮನವರ ಮಗಳು. ಯಜಮಾನರ ಆದಾಯದಿಂದ ಕುಟುಂಬ ನಡೆಸಲು ಸಾಧ್ಯವಾಗುತ್ತಿರಲಿಲ್ಲವಾದ ಕಾರಣ ರಸ್ತೆ ಬದಿಯಲ್ಲಿ ಬಿಸಿಲು ಮಳೆ ಎಂಬುದನ್ನು ಲೆಕ್ಕಿಸದೇ ರತ್ನಮ್ಮ ತರಕಾರಿಯನ್ನು ಮಾರುತ್ತಿದ್ದರು. ಇವರ ಎಂಟು ಮಕ್ಕಳಲ್ಲಿ ಈಕೆ ಹಿರಿಯ ಮಗಳಾಗಿ ಜನಿಸಿದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ, ಔಪಚಾರಿಕವಾಗಿ ಯಾವುದೇ ಶಿಕ್ಷಣವನ್ನು ಪಡೆಯದಿದ್ದರೂ ಬಾಬೂರಾವ್ ತಮ್ಮ ಜಾತಿ ಮತ್ತು ವೃತ್ತಿಪರತೆಯ ತಡೆಗೋಡೆಗಳನ್ನು ಮುರಿದು ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮವಾಗಿ ಬದುಕಬೇಕೆಂಬ ಆಸೆಯಿಂದಾಗಿ ಮಕ್ಕಳೆಲ್ಲರಿಗೂ ಉತ್ತಮ ಶಿಕ್ಷಣ ಕೊಡಿಸಬೇಕು ಎನ್ನುವುದು ಹೆತ್ತವರ ಆಸೆಯಾಗಿತ್ತು.
ಹೆತ್ತವರ ಹಿರಿಯಾಸೆ
ಅದರಲ್ಲೂ ತಮ್ಮ ಹಿರಿಯ ಮಗಳನ್ನು ಸರ್ಜನ್ ಮಾಡಿಸಬೇಕೆಂಬ ಆಸೆ. ಹಾಗಾಗಿ ಅಂದಿನ ಕಾಲದಲ್ಲಿ ಕೇವಲ ಗಂಡು ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಬಾಬೂರಾವ್ ತಮ್ಮ ಏಳು ಹೆಣ್ಣುಮಕ್ಕಳು ಮತ್ತು ಒಬ್ಬನೇ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿ ಓದಲು ಅನುವು ಮಾಡಿಕೊಟ್ಟರು.
ವಿಜಯಲಕ್ಷ್ಮಿ ತಮ್ಮ ಶಾಲೆ ಮುಗಿಸಿದ ಕೂಡಲೇ ನೇರವಾಗಿ ತಮ್ಮ ತಾಯಿಯವರ ಅಂಗಡಿಗೆ ಹೋಗಿ ಅಲ್ಲಿ ಅಮ್ಮನ ಜೊತೆ ತರಕಾರಿ ಮಾರಲು ಸಹಾಯ ಮಾಡುತ್ತಿದ್ದುದಲ್ಲದೇ, ಅಲ್ಲೇ ಬಿಡುವು ಮಾಡಿಕೊಂಡು ಅಂಗಡಿಯಲ್ಲೇ ಓದುತ್ತಿದ್ದರು. ಅವರಮ್ಮ ತುಂಬಾ ಧೈರ್ಯವಂತೆ ಮತ್ತು ಗಟ್ಟಿಗಿತ್ತಿಯೂ ಕೂಡ ಆಗಿದ್ದ ಕಾರಣ, ಆಕೆ ದುಡಿದ ಹಣವನ್ನೆಲ್ಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಮೀಸಲಿಟ್ಟಿದ್ದರು.
ಮಕ್ಕಳೂ ಸಹ ತಮ್ಮ ತಾಯಿ ತಂದೆಯರ ಆಸೆಗೆ ತಣ್ಣೀರು ಎರಚದೇ ತಮಗೆ ಸಿಗುತ್ತಿದ್ದ ಸಕಲ ಸರ್ಕಾರಿ ಅನುಕೂಲಗಳನ್ನು ಸೂಕ್ತವಾಗಿ ಬಳಸಿಕೊಂಡು ಕಷ್ಟಪಟ್ಟು ಓದತೊಡಗಿದರು. ಅದರಲ್ಲೂ ವಿಜಯಲಕ್ಷ್ಮಿ ಎಂಬಿಬಿಎಸ್ ಗೆ ಪ್ರವೇಶ ಪಡೆಯುವ ವೇಳೆಯಲ್ಲಿ ಗುಲ್ಬರ್ಗಾದಲ್ಲಿ ತೀವ್ರವಾದ ಬರಗಾಲವಿದ್ದ ಕಾರಣ, ಆಕೆಯ ಕಾಲೇಜು ಪ್ರವೇಶಕ್ಕೆ ಹಣ ಹೊಂಚಲು ಆಗದೇ ಹೋದ ಸಂದರ್ಭದಲ್ಲಿ ಆಕೆಯ ತಾಯಿ, ತಮ್ಮ ತಾಯಿಯ ಮಂಗಳಸೂತ್ರವನ್ನೇ ಮಾರಿ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿದರು.
ಅಷ್ಟೆಲ್ಲಾ ಕಷ್ಟಪಟ್ಟು ಹಣವನ್ನು ಹೊಂಚಿಕೊಂಡು ತಂದೆ ಮಗಳು ಎಂಬಿಬಿಎಸ್ ಸಂದರ್ಶನಕ್ಕಾಗಿ ಬೆಂಗಳೂರಿಗೆ ಬಂದರು. ಆ ಸಮಯದಲ್ಲಿ ಇದ್ದಕ್ಕಿದ್ದಂತೆಯೇ ಸಂದರ್ಶನವನ್ನು ಮುಂದೂಡಿದಾಗ, ಹೊರಗೆ ಸುರಿಯುತ್ತಿದ್ದ ಮಳೆಯಲ್ಲಿ ಎಲ್ಲಿಗೆ ಹೋಗಬೇಕೆಂದು ತಿಳಿಯದೇ ಹೋದಾಗ, ಆಕೆಯ ತಂದೆ ಅಲ್ಲಿಯೇ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕೂಲಿ ಕಾರ್ಮಿಕರ ಬಳಿ ತಮ್ಮ ಅಳಲನ್ನು ತೋಡಿಕೊಂಡು, ಅವರ ಪುಟ್ಟ ಮನೆಯಲ್ಲೇ ವಿಜಯಲಕ್ಷ್ಮಿಯನ್ನು ಮಲಗಿಸಿ, ಅವರ ತಂದೆ ಚಳಿ, ಮಳೆ, ಗಾಳಿಯನ್ನೂ ಲೆಕ್ಕಿಸದೇ ಇಡೀ ರಾತ್ರಿ ನಿದ್ರಿಸದೇ ಮನೆಯ ಹೊರಗೇ ಕಾದಿದ್ದನ್ನು ವಿಜಯಲಕ್ಷ್ಮಿ ತಮ್ಮ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲವಂತೆ.
ವೈದ್ಯ ವೃತ್ತಿಯ ಆರಂಭ
1980ರಲ್ಲಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ವೈದ್ಯಕೀಯ ಪದವಿ ಮುಗಿಸಿ, 1985ರಲ್ಲಿ ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ವೈದ್ಯರಾಗಿ ಸೇರಿಕೊಂಡರು. ಯಶಸ್ವಿ ಕ್ಯಾನ್ಸರ್ ತಜ್ಞೆ. ಅದೇ ಸಮಯದಲ್ಲಿ ತಮ್ಮ ಜೀವನದ ಬೆನ್ನೆಲುಬಾಗಿದ್ದ ಅವರ ತಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನಿಧನರಾದಾಗಲೇ ಡಾ. ವಿಜಯಲಕ್ಷ್ಮಿಯವರಿಗೆ ಕ್ಯಾನ್ಸರ್ ಎಂದರೇನು? ಎಂಬುದರ ಬಗ್ಗೆ ಕುತೂಹಲ ಮೂಡಿ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ 1989ರಲ್ಲಿ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ತರಬೇತಿ ನಂತರ, 1993ರಲ್ಲಿ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಎಫ್ಎಐಎಸ್ ಫೆಲೋಶಿಪ್ ಗೆ ಪಾತ್ರರಾದರು. ನಂತರ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿಯಾಗಿ ಸೇರಿಕೊಂಡು, ಮುಂದಿನ ದಿನಗಳಲ್ಲಿ ಅದೇ ವಿಭಾಗದ ಮುಖ್ಯಸ್ಥೆಯಾಗಿ, ಅಂತಿಮವಾಗಿ ಅದೇ ಸಂಸ್ಥೆಯ ನಿರ್ದೇಶಕಿಯೂ ಆಗಿ ನಿವೃತ್ತರಾದರು. ತಮ್ಮ ವೃತ್ತಿ ಜೀವನದಲ್ಲಿ ಸ್ತನ ಕ್ಯಾನ್ಸರ್ ಕುರಿತು ಅನೇಕ ಜಾಗೃತಿ ಅಭಿಯಾನಗಳನ್ನು ನಡೆಸಿದ್ದಲ್ಲದೇ ಕ್ಯಾನ್ಸರ್ ಕುರಿತಾಗಿ ಸಂಶೋಧನಾತ್ಮಕ ಪುಸ್ತಕಗಳನ್ನೂ ಪ್ರಕಟಿಸಿದರು. ತಮ್ಮ ಸಹೋದರ ಅಜಯ್ ರನ್ನು ಹೆಸರಾಂತ ವಕೀಲರನ್ನಾಗಿ ಮಾಡಿಸಿದ್ದಲ್ಲದೇ, ತಮ್ಮ ಉಳಿದ ಏಳು ಜನ ಸೋದರಿಯರ ವಿದ್ಯಾಭ್ಯಾಸಕ್ಕಾಗಿ ಅವಿವಾಹಿತರಾಗಿ ಉಳಿದು, ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು, ಅವರೆಲ್ಲರಿಗೂ ಉತ್ತಮವಾದ ಬದುಕನ್ನು ಕಟ್ಟಿಕೊಟ್ಟ ವಿಜಯಲಕ್ಷ್ಮಿ ನಿಜಕ್ಕೂ ಅಭಿನಂದನಾರ್ಹರೇ ಸರಿ.
ಸರಳ ವ್ಯಕ್ತಿತ್ವ
ಕಿದ್ವಾಯಿ ಸಂಸ್ಥೆಯಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ವಿಜಯಲಕ್ಷ್ಮಿ ಬೆಳಗ್ಗೆ 6 ಗಂಟೆಗೆಲ್ಲಾ ಕಿದ್ವಾಯಿ ಆಸ್ಪತ್ರೆಗೆ ಬರುತ್ತಿದ್ದರು. ಅಷ್ಟು ದೊಡ್ಡ ಹುದ್ದೆಯಲ್ಲಿದ್ದರೂ, ಸ್ವಲ್ಪ ಹಮ್ಮುಬಿಮ್ಮು ಇಲ್ಲದೇ ಸಾಧಾರಣ ಸೀರೆಯನ್ನು ಉಟ್ಟುಕೊಳ್ಳುತ್ತಿದ್ದುದಲ್ಲದೇ, ಕೈಯಲ್ಲಿ ವಾಚ್ ಸಹ ಕಟ್ಟುತ್ತಿರಲಿಲ್ಲ. ಅಲ್ಲಿನ ಜನರ ಚಟುವಟಿಕೆಗಳನ್ನು ನೋಡಿಯೇ ಇಷ್ಟು ಗಂಟೆಯಾಗಿರಬಹುದು ಎಂದು ತಿಳಿಯುತ್ತಿದ್ದರಂತೆ. ಪುರುಷರ ವಿಭಾಗವೆಂದೇ ಖ್ಯಾತಿ ಪಡೆದಿದ್ದ ಸರ್ಜಿಕಲ್ ಆಂಕಾಲಜಿ ತುಂಬಾ ಕಷ್ಟದ ಕೆಲಸ ಎನಿಸಿದರೂ ಬಹಳ ಜಾಗರೂಕತೆಯಿಂದಲೇ ಇವರು ಆ ಕೆಲಸವನ್ನು ನಿರ್ವಹಿಸಿದರು.
ಸೇವೆಯೇ ಬದುಕು
ಅವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಯಾವ ರೋಗಿ ಬಂದರೂ ಅವರೆಲ್ಲರಿಗೂ ಬೆಡ್ ಸಿಗುವವರೆಗೂ ಅವರೊಂದಿಗೆ ಇರುತ್ತಿದ್ದರು. ಅದನ್ನು ಕಂಡವರಿಗೆ ಅವರ ವ್ಯಕ್ತಿತ್ವದ ಬಗ್ಗೆ ಅಪಾರ ಗೌರವ ಮೂಡಿಸುತ್ತಿತ್ತು. ಅನೇಕ ಬಾರಿ ಸರ್ಜರಿ ಮಾಡುವ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಊಟವನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಅವರೆಂದೂ ತಮ್ಮ ವೃತ್ತಿಯಿಂದ ವಿಮುಖರಾದ ಉದಾಹರಣೆಯೇ ಇಲ್ಲ. ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಕಾಲವನ್ನು ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ಕೊಡುವುದಕ್ಕಾಗಿಯೇ ತಮ್ಮ ಸೇವೆಯನ್ನು ಮುಡಿಪಾಗಿಟ್ಟರು.
ಎಲ್ಲರ ಕಷ್ಟಗಳನ್ನು ನಿವಾರಿಸಲೆಂದೇ ಸಾಮಾನ್ಯ ಗೊಲ್ಲರ ಮನೆಯಲ್ಲಿ ಹುಟ್ಟಿ ಬೆಳೆದ ಭಗಾನ್ ಶ್ರೀ ಕೃಷ್ಣನನ್ನು ಬಹಳವಾಗಿ ನಂಬುವ ಡಾ. ವಿಜಯಲಕ್ಷ್ಮಿ ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿದಂತೆ ಕರ್ಮಣ್ಯೇ ವಾಧಿಕಾರಸ್ತೇ ಮಾಫೀಷು ಕದಾಚನ ಅರ್ಥಾತ್ ನಿನ್ನ ಕೆಲಸವನ್ನು ನೀನು ಸರಿಯಾಗಿ ಮಾಡಿ ಅದರ ಫಲಾಫಲಗಳನ್ನು ಭಗವಂತನ ಮೇಲೆ ಬಿಡು ಎಂಬುದನ್ನೇ ಆದರ್ಶವಾಗಿ ಇಟ್ಟುಕೊಂಡು ಭಗವಾನ್ ಶ್ರೀ ಕೃಷ್ಣನನ್ನು ಭಕ್ತಿಯಿಂದ ಆರಾಧಿಸುತ್ತಾ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುತ್ತಿದ್ದುದು ಬಹಳ ವಿಶೇಷವಾಗಿದೆ. ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿ ಇಟ್ಟುಕೊಂಡಿದ್ದಾರೆ. ಇತ್ತೀಚಿನ ವರ್ಷದಲ್ಲಿ ಒಂದು ದಿನವೂ ರಜೆಯನ್ನು ತೆಗೆದುಕೊಳ್ಳದೇ, ಪ್ರತಿ ದಿನ 18 ಗಂಟೆಗಳ ಕಾಲ ದೇಶಕ್ಕಾಗಿ ದುಡಿಯುವ ಪ್ರಧಾನಿ ನರೇಂದ್ರ ಮೋದಿಯವರನ್ನು ಆದರ್ಶವಾಗಿ ಡಾ. ವಿಜಯಲಕ್ಷ್ಮಿ ಇಷ್ಟಪಡುತ್ತಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ಹಾಗೂ ಅನುಭವಿ ವೈದ್ಯರು ಇರುವುದರಿಂದ, ಜನ ಸಾಮಾನ್ಯರೆಲ್ಲರೂ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯವನ್ನು ಪಡೆಯುವ ಮೂಲಕ ಆರೋಗ್ಯವಾಗಿ ಇರುವುದರ ಜೊತೆಗೆ, ಹಣವನ್ನೂ ಉಳಿಸಬಹುದು ಎಂಬುದನ್ನು ವಿಜಯಲಕ್ಮಿ ಸದಾಕಾಲ ಎಲ್ಲಾ ಕಡೆ ಹೇಳುತ್ತಾರೆ. ಕೆಲವು ವರ್ಷಗಳ ಹಿಂದೆ ಅವರಿಗೇ ಹೃದಯಾಘಾತವಾದಾಗ, ತಮಗೆ ಪರಿಚಯವಿದ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯದೇ, ತಮ್ಮ ಮಾತಿಗೆ ತಕ್ಕಂತೆ ಸರ್ಕಾರಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಎಲ್ಲರಿಗೂ ಮಾದರಿ ಆಗಿರುವುದು ಅಭಿನಂದನಾರ್ಹವಾಗಿದೆ.
ಪ್ರಶಸ್ತಿ ಪುರಸ್ಕಾರಗಳು
ವೈದ್ಯಕೀಯ ಸೇವೆಯಲ್ಲಿ ಅಪರಿಮಿತವಾದ ಸಾಧನೆ ಮಾಡಿರುವುದನ್ನು ಮೆಚ್ಚಿ ಸರ್ಕಾರ ಮತ್ತು ಹಲವಾರು ಸಂಘ ಸಂಸ್ಥೆಗಳು ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ಪ್ರಮುಖವಾದವುಗಳು :
ಕರ್ನಾಟಕ ಸರ್ಕಾರದ ರಾಜ್ಯೋತ್ಸ ಪ್ರಶಸ್ತಿ
ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
ಅಂತಾರಾಷ್ಟ್ರೀಯ ವಲಯದ ರಾಷ್ಟ್ರೀಯ ರತ್ನ
ಕೆಂಪೇಗೌಡ ಪ್ರಶಸ್ತಿ
ಕಿದ್ವಾಯಿ ಸಂಸ್ಥೆಯಿಂದ ವಯೋಸಹಜವಾಗಿ ನಿವೃತ್ತರಾದ ಇವರು, ಖಾಸಗಿ ಆಸ್ಪತ್ರೆಗಳಿಗೆ ಸೇರಿಕೊಳ್ಳದೇ ಅಥವಾ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೇ ಸಮಾಜ ಸೇವೆ ಮಾಡುವ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್ತಿನ ಸದಸ್ಯೆಯಾಗಿ ಇರುವುದಲ್ಲದೇ, ಸದ್ಯಕ್ಕೆ ವಿಎಚ್ಪಿಯ ಒಂಬತ್ತು ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ವಿಜಯಲಕ್ಷ್ಮಿ ದೇಶಮಾನೆ ಕೂಡ ಒಬ್ಬರಾಗಿದ್ದಾರೆ. 2017 ರಲ್ಲಿ ವಿಎಚ್ಪಿಯ ಕರ್ನಾಟಕ ಪ್ರದೇಶದ ಅಧ್ಯಕ್ಷರಾಗುವ ಮೂಲಕ, ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಮಹಿಳೆ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಡಿಸೆಂಬರ್ 2020ರಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕರ್ನಾಟಕ ಅಧ್ಯಾಯದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನಿವೃತ್ತಿಯ ನಂತರ
ನಿವೃತ್ತಿಯ ನಂತರ ತನ್ನ ಕೆಲಸ ಅರ್ಧ ಮಾತ್ರ ಮುಗಿದಿದ್ದು ಇನ್ನೂ ಹತ್ತಾರು ಸಾಮಾಜಿಕ ಸೇವಾ ಚಟುವಟಿಕೆಗಳು, ಜಾಗೃತಿ ಶಿಬಿರಗಳು, ಸಂಶೋಧನಾ ಕಾರ್ಯಗಳು ಮತ್ತು ಹಳ್ಳಿಗಳಲ್ಲಿ ಶಿಕ್ಷಣ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೇ, ಇದೇ ಚಟುವಟಿಕೆಗಳಿಗಾಗಿಯೇ ತಿಂಗಳ 15 ದಿನಗಳನ್ನು ಮೀಸಲಿಟ್ಟಿದ್ದಾರೆ. ಉಳಿದ 15 ದಿನಗಳಲ್ಲಿ ಮನೆಯಲ್ಲೇ ಅಗತ್ಯ ಇರುವವರಿಗೆ ಚಿಕಿತ್ಸೆ ಮತ್ತು ಸಮಾಲೋಚನೆಯನ್ನು ಉಚಿತವಾಗಿ ನೀಡುತ್ತಿರುವುದು ಅತ್ಯಂತ ಗಮನಾರ್ಹವಾಗಿದೆ.
ಕಿತ್ತು ತಿನ್ನುವ ಬಡತನ, ಅಪಮಾನ, ಸಾಮಾಜಿಕ ಅಸಡ್ಡೆಯ ನಡುವೆಯೂ ಕೆಳ ಸಮುದಾಯದ ಹೆಣ್ಣುಮಗಳೊಬ್ಬಳು ಈ ದೇಶದ ಗಣ್ಯಮಾನ್ಯಳಾಗಿ ಅರಳಿ ನಿಂತಿದ್ದಲ್ಲದೇ, ಜನಸೇವೆಯೇ ಜನಾರ್ಧನನ ಸೇವೆ, ನೊಂದವರ ಕಂಬನಿ ಒರೆಸುವುದೇ ದೈವಾರಾಧನೆ ಎಂಬುದಕ್ಕೆ ನಿಜರೂಪಾಗಿ `ಸೇವೆ’ ಎಂಬ ಪದದ ಅನ್ವರ್ಥವಾಗಿ ಸಮಾಜಕ್ಕಾಗಿಯೇ ಪ್ರಾಮಾಣಿಕತೆ, ದಕ್ಷತೆ ಮತ್ತು ಕಠಿಣ ಪರಿಶ್ರಮದ ಮೂಲಕ ತಮ್ಮ ಬದುಕನ್ನೇ ಮೀಸಲಾಗಿಟ್ಟಿರುವ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ, ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿಯಾಗಿ ಇರುವ ಡಾ. ವಿಜಯಲಕ್ಷ್ಮಿ ದೇಶಮಾನೆ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ!
– ಶ್ರೀಕಂಠ ಬಾಳಗಂಚಿ