ಜಾಗೀರ್ದಾರ್*
ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕರು ಎಂಟ್ರಿ ಕೊಡುತ್ತಲೇ ಇದ್ದಾರೆ. ಹೊಸ ನಿರ್ದೇಶಕರ ಸಿನಿಮಾ ಎಂದರೆ ಏನಾದರೂ ಹೊಸತನ ಇರಬಹುದು ಎಂಬ ನಂಬಿಕೆ ಕೂಡ ಪ್ರೇಕ್ಷಕರಿಗೆ ಇರುತ್ತದೆ. ಈಗ ಹೊಸ ತಂಡವೊಂದು ಟೈಟಲ್ ಪೋಸ್ಟರ್ ಮೂಲಕ ಪರಿಚಯಗೊಂಡಿದೆ. ಈ ಸಿನಿಮಾ ಹೆಸರು ಬಂದೂಕ್. ಹೊಸ ನಿರ್ದೇಶಕರ ಜೊತೆ ಘಟಾನುಘಟಿ ತಾರಾಬಳಗ ಕೈ ಜೋಡಿಸಿದೆ.
ಯುವ ಪ್ರತಿಭೆ ಮಹೇಶ್ ರವಿಕುಮಾರ್ ಬರೆದು ನಿರ್ದೇಶನ ಮಾಡಿರುವ ಚೊಚ್ಚಲ ಚಿತ್ರ ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದಲ್ಲಿ ಬಾಲಾಜಿ ಮನೋಹರ್, ಶ್ವೇತಾ ಪ್ರಸಾದ್, ಗೋಪಾಲ ಕೃಷ್ಣ ದೇಶಪಾಂಡೆ, ಶಂಕರ್ ಅಶ್ವಥ್, ಹರೀಶ್ ರೈ ಅವರಂತಹ ಪ್ರತಿಭಾನ್ವಿತ ತಾರಾಬಳಗ ಅಭಿನಯಿಸಿದೆ.
ಕ್ರೈಮ್ ಆಕ್ಷನ್ ಡ್ರಾಮಾ ಕಥಾಹಂದರ ಹೊಂದಿರುವ ಬಂದೂಕ್ ಸಿನಿಮಾಗೆ ಶ್ರೀನಿವಾಸ್ ಮೂರ್ತಿ ಮತ್ತು ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಪೈಡಿ ರಾಮಕೃಷ್ಣ ಸಹ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಹೊನ್ನಾವರ, ಉಡುಪಿ, ಮಲ್ಪೆ, ಮಂಗಳೂರು ಶೂಟಿಂಗ್ ಮಾಡಿದೆ. ಹೆಚ್ ವೈ ರೋಹಿತ್ ಕುಮಾರ್ ಛಾಯಾಗ್ರಹಣ, ವಸಂತಕುಮಾರ್ ಸಂಕಲನ, ಪ್ರಸನ್ನ ಕುಮಾರ್ ಎಂಎಸ್ ಸಂಗೀತ ಚಿತ್ರಕ್ಕಿದೆ. ಫಸ್ಟ್ ಲುಕ್ ಬಿಡುಗಡೆ ಮೂಲಕ ಪರಿಚಯಗೊಂಡಿರುವ ಚಿತ್ರತಂಡ ಜುಲೈ 25ಕ್ಕೆ ಬೆಳ್ಳಿತೆರೆ ಅಖಾಡಕ್ಕೆ ಇಳಿಯಲಿದೆ.