– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ದೂರ ತೀರ ಯಾನ
ನಿರ್ಮಾಣ: ದೇವರಾಜ್ ಆರ್.
ನಿರ್ದೇಶನ: ಮಂಸೋರೆ
ತಾರಾಂಗಣ: ವಿಜಯ್ ಕೃಷ್ಣ, ಪ್ರಿಯಾಂಕಾ ಕುಮಾರ್, ಶ್ರುತಿ ಹರಿಹರನ್, ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ ಮುಂತಾದವರು.
ರೇಟಿಂಗ್: 3/5
ಆಕಾಶ್ ಒಬ್ಬ ವಯೋಲಿನ್ ವಾದಕ, ಹಾಗೂ ಭೂಮಿ ಕೊಳಲು ವಾದಕಿ 5 ವರ್ಷಗಳಿಂದ ಪ್ರೇಮಿಗಳಾಗಿರುತ್ತಾರೆ. ಆದರೆ ಇಬ್ಬರ ನಡುವೆ ಚಿಕ್ಕ ಪುಟ್ಟ ವಿಷಯಗಳಿಗೂ ಕಿತ್ತಾಡಿಕೊಳ್ಳುತ್ತಾರೆ. ಅದು ಕಾಫಿ ಟೀ ವಿಷಯದಲ್ಲಿಯೂ ಜಗಳ ಆಗುವಷ್ಟರ ಮಟ್ಟಿಗೆ ಇದೆ. ಹಾಗಾಗಿ ಇಬ್ಬರೂ ಮದುವೆಯಾಗದೆ ಬೇರೆ ಆಗುವುದಕ್ಕೆ ನಿರ್ಧರಿಸುತ್ತಾರೆ. ಅದಕ್ಕೆ ಮುನ್ನ ಒಂದು ವಾರ ಇಬ್ಬರೂ ಒಟ್ಟಿಗೇ ಪಯಣಿಸಿ ನಂತರ ಬೇರಾಗಬೇಕು ಎನ್ನುವ ತೀರ್ಮಾನ ಮಾಡುತ್ತಾರೆ. ಆ ಒಂದು ವಾರದ ಪಯಣವೇ “ದೂರ ತೀರ ಯಾನ”
ನಿರ್ದೇಶಕ ಮಂಸೋರೆ ಈ ಬಾರಿ ಹೊಸದೊಂದು ಸ್ವರೂಪದ ಕಥೆಯನ್ನು ತೆಗೆದುಕೊಂಡು ಬಂದಿದ್ದಾರೆ. ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್ 1978’, ‘19-20-21’ ಎಲ್ಲವುಗಳಿಗಿಂತ ಇದು ಬೇರೆಯದೇ ರೀತಿಯ ಕಥೆ. ಮುಖ್ಯವಾಗಿ ಈ ಸಿನಿಮಾ ಪ್ರೇಮಿಗಳು ಹೇಗೆ ಒಂದಾಗುತ್ತಾರೆ ಎನ್ನುವುದಕ್ಕಿಂತ ಪ್ರೇಮಿಗಳ ನಡುವೆ ಬ್ರೇಕಪ್ ಆಗುವಾಗ ಹೇಗೆ ಗೌರವಯುತವಾಗಿ ದೂರವಾಗುವುದು ಎಂಬುದನ್ನು ತೋರಿಸಲಾಗಿದೆ. ದಾಂಪತ್ಯ ಅಥವಾ ಪ್ರೇಮದ ಜೀವನದಲ್ಲಿ ಹೊಂದಾಣಿಕೆಯ ಬದುಕಿನ ಬಗ್ಗೆ ಕೆಲವು ಸಿದ್ದ ಸೂತ್ರವಿದೆ. ಆದರೆ ಹಾಗೆ ಸಿದ್ದ ಸೂತ್ರ ಪಾಲನೆ ಮಾಡುವವರೆಲ್ಲಾ ಖುಷಿಯಾಗಿದ್ದಾರೆಯೆ? ಅದು ಸಾಧ್ಯವಿದೆಯ? ಈ ಪ್ರಶ್ನೆಗೆ ಚಿತ್ರದಲ್ಲಿ ಉತ್ತರ ಕೊಡುವ ಪ್ರಯತ್ನ ಇದೆ. ಇದೊಂದು ಪ್ರೇಮಕಥೆ,, ಅದರಲ್ಲೂ ಈಗಿನ ಜನರೇಷನ್ ಅನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ.. ಇಂದಿನ ಕಾಲದ ಪ್ರೇಮಿಗಳ ತವಕ ತಲ್ಲಣಗಳಿಗೆ ಇದು ಕನ್ನಡಿಯಾಗಿದೆ.
ಚಿತ್ರಕಥೆ ಸೊಗಸಾಗಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರದ ಹೈಲೈಟ್, ಕಾರ್ತಿಕ್ ಹಾಗೂ ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕಥೆಗೆ ಪೂರಕವಾಗಿದೆ. ಆದರೆ ಕಥೆಯಲ್ಲಿ ಹೆಚ್ಚು ತಿರುವು ಇಲ್ಲ, ಸಿನಿಮಾದಲ್ಲಿ ಎಲ್ಲೂ ಹಾಸ್ಯ ಸನ್ನಿವೇಶಗಳಿಲ್ಲ ನಿಧಾನಗತಿಯ ನಿರೂಪಣೆಯೂ ಕೆಲವೆಡೆ ನೀರಸ ಎನಿಸಬಹುದು
ನಾಯಕ ವಿಜಯ್ ಕೃಷ್ಣ ಹಾಗೂ ನಾಯಕಿ ಪ್ರಿಯಾಂಕಾ ಕುಮಾರ್ ಅವರು ಇಡೀ ಸಿನಿಮಾ ಆವರಿಸಿಕೊಳ್ಳುತ್ತಾರೆ. ಇಬ್ಬರದೂ ಸಹಜಾಭಿನಯವಿದೆ. ಆದರೆ ಕೆಲ ಭಾವನಾತ್ಮಕ ಸನ್ನಿವೇಶಗಳಲ್ಲಿ ಪ್ರಿಯಾಂಕಾ ಅವರಿಂದ ಇನ್ನಷ್ಟು ಉತ್ತಮ ನಟನೆಯ ನಿರೀಕ್ಷೆ ಇತ್ತು. ಉಳಿದಂತೆ ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ, , ಕೃಷ್ಣ ಹೆಬ್ಬಾಲೆ,ಅವರೆಲ್ಲರ ಪಾತ್ರಗಳು ಹೀಗೆ ಬಂದು ಹಾಗೆ ಮರೆಯಾಗುತ್ತದೆ.