ರಾಷ್ಟ್ರ ರಾಜಧಾನಿ ದಿಲ್ಲಿಯ ಚಾಂದಿನಿ ಚೌಕ್​ ಬಳಿಯ ಕೆಂಪುಕೋಟೆ ಮೆಟ್ರೋ ಸ್ಟೇಶನ್​ ಬಳಿ ಭಾರೀ ಪ್ರಮಾಣದ ಬಾಂಬ್ ಸ್ಫೋಟ ಸಂಭವಿಸಿದೆ. ಜನನಿಬಿಡ ಪ್ರದಶದ ಕಾರಿನಲ್ಲಿ ಬಾಂಬ್​ ಬ್ಲಾಸ್ಟ್​ ಆಗಿದ್ದು, ಸ್ಥಳದಲ್ಲಿದ್ದ ಜನರ ದೇಹಗಳು ಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

10 ಜನ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಲ್​ಎನ್​ಜಿಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.ಸೋಮವಾರ ಸಂಜೆ 6.52ರ ವೇಳೆಗೆ ಕೆಂಪುಕೋಟೆ ನಿಲ್ದಾಣದ ಬಳಿ ಜನನಿಬಿಡ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಹರಿಯಾಣ ನೋಂದಣಿ ಸಂಖ್ಯೆಯ ಹುಂಡೈ ಐ20 ಕಾರು ರೆಡ್​ ಸಿಗ್ನಲ್ ಬಳಿ ಬಂದು ನಿಂತ ಕೂಡಲೇ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಜನರ ದೇಹಗಳ ಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬ್ಲಾಸ್ಟ್​ನಿಂದಾಗಿ ಕಾರಿನ ಅಕ್ಕಪಕ್ಕದಲ್ಲಿದ್ದ 6 ಕಾರುಗಳು, 2 ಆಟೋಗಳಿಗೂ ಬೆಂಕಿ ಹಬ್ಬಿದ್ದು ಅವು ಸುಟ್ಟು ಕರಕಲಾಗಿವೆ. ಸಮೀಪದಲ್ಲಿದ್ದ ಇತರ ಕಾರುಗಳ ಗಾಜುಗಳೂ ಛಿದ್ರಗೊಂಡಿವೆ.

ಮೊದಲು ಶಾರ್ಟ್​ ಸಕ್ರ್ಯೂಟ್​ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಸ್ಫೋಟದ ತೀವ್ರತೆ ಗಮನಿಸಿ ಇದು ಉಗ್ರ ಕೃತ್ಯವಿರಬಹುದು ಎನ್ನಲಾಗಿದೆ.  ಸ್ಫೋಟದ ಬೆನ್ನಲ್ಲೇ ದಿಲ್ಲಿಯ ಹಲವೆಡೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ, ಎನ್​ ಐ ಎ ಡಿಐಜಿ ಬಳಿಯಿಂದ ವಿವರಣೆ ಪಡೆದಿದ್ದಾರೆ.

ಸೋಮವಾರ ಬೆಳಗ್ಗೆ ದಿಲ್ಲಿ ಹೊರವಲಯದ ಫರೀದಾಬಾದ್​ನಲ್ಲಿ ಅಮೋನಿಯಂ ನೈಟ್ರೇಟ್​, ಆರ್​ ಡಿಎಕ್ಸ್​ ಸೇರಿದಂತೆ 3000 ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರ ಬೆನ್ನಲ್ಲೇ ದಿಲ್ಲಿಯಲ್ಲಿ ಬಾಂಬ್​ ಸ್ಫೋಟವಾಗಿರುವುದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ