ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಲ್ಲಿನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಸಿದೆ.
ಸೋಮವಾರ ಬಾಂಗ್ಲಾದಲ್ಲಿ ಭಾರಿ ಬಿಗಿ ಭದ್ರತೆ, ಹಿಂಸಾಚಾರದ ಆತಂಕದ ನಡುವೆಯೇ ಕೋರ್ಟ್ ತೀರ್ಪು ಹೊರಬಿದ್ದಿದೆ. ಇದರ ಬೆನ್ನಲ್ಲೆ ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯವು ಭಾರತಕ್ಕೆ ಪತ್ರ ಬರೆದು, ಹಸೀನಾ ಅವರನ್ನು ಹಸ್ತಾಂತರಿಸುವಂತೆ ಆಗ್ರಹಿಸಿದೆ.
ತಲೆಮರೆಸಿಕೊಂಡಿರುವ ಅಪರಾಧಿ ಭಾರತದ ಆಶ್ರಯದಲ್ಲಿದ್ದಾರೆ. ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಕಾಯಿದೆ ಅನುಸಾರ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ವಾಪಾಸ್ ಕಳುಹಿಸುವುದು ನಿಮ್ಮ (ಭಾರತ ಸರಕಾರ) ಜವಾಬ್ದಾರಿ ಎಂದಿರುವ ಸಚಿವಾಲಯವು ಭಾರತದೊಂದಿಗೆ ಹಸ್ತಾಂತರ ಒಪ್ಪಂದ ಉಲ್ಲೇಖಿಸಿ, ಹಸೀನಾ ಬಾಂಗ್ಲಾದೇಶಕ್ಕೆ ಹಸ್ತಾಂತರ ಕಡ್ಡಾಯ ಎಂದು ಹೇಳಿದೆ.
ಮಾನವೀಯತೆಯ ವಿರುದ್ಧದ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಈ ವ್ಯಕ್ತಿಗಳಿಗೆ ಬೇರೆ ಯಾವುದೇ ದೇಶದಿಂದ ಆಶ್ರಯ ನೀಡುವುದು ಅತ್ಯಂತ ಸ್ನೇಹಪರವಲ್ಲದ ಕೃತ್ಯ ಮತ್ತು ನ್ಯಾಯವನ್ನು ಕಡೆಗಣಿಸುವ ಕೃತ್ಯವಾಗುತ್ತದೆ” ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹಸೀನಾ ಮತ್ತು ಮಾಜಿ ಮತ್ತು ಮಾಜಿ ಆಂತರಿಕ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರನ್ನು ಬಹು ಆರೋಪಗಳ ಮೇಲೆ ತಪ್ಪಿತಸ್ಥರೆಂದು ಘೋಷಿಸಿದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಸೋಮವಾರ (ನ.17) ಶಿಕ್ಷೆ ಪ್ರಕಟಿಸಿದೆ.
ಹಸೀನಾ ಮತ್ತು ಖಾನ್ ಅವರಲ್ಲದೆ, ಮಾಜಿ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಕೂಡ “ಮಾನವೀಯತೆಯ ವಿರುದ್ಧ ಅಪರಾಧಗಳನ್ನು” ಎಸಗಿದ ಆರೋಪದಲ್ಲಿ ತಪ್ಪಿತಸ್ಥ ಎಂದು ಕೋರ್ಟ್ ಹೇಳಿದೆ.
ಶೇಖ್ ಹಸೀನಾ ಗಡಿಪಾರು: ಬಾಂಗ್ಲಾದೇಶದ ಹಿಂದಿನ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಸಾಮೂಹಿಕ ದಂಗೆಯ ನಂತರ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲಾಯಿತು. ಕಳೆದ ವರ್ಷ ಜುಲೈನಲ್ಲಿ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದವು. ಇದು ಅಂತಿಮವಾಗಿ ಅವರ ಸರ್ಕಾರವನ್ನು ಪತನಗೊಳಿಸಿ ಆಗಸ್ಟ್ನಲ್ಲಿ ಅವರ ಪದಚ್ಯುತಿಗೆ ಕಾರಣವಾಯಿತು. ಹಸೀನಾ ಅವರ ಮಗ ಸಜೀಬ್ ವಾಝೇದ್ ಪ್ರಕಾರ, ಹಸೀನಾ ದೆಹಲಿಯ ರಹಸ್ಯ ಸುರಕ್ಷಿತ ಮನೆಯಲ್ಲಿದ್ದಾರೆ, ಅಲ್ಲಿ ಭಾರತ ಅವರಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸುತ್ತಿದೆ.
ತಮಗೆ ವಿಧಿಸಿರುವ ಮರಣದಂಡನೆಗೆ ಪ್ರತಿಕ್ರಿಯಿಸಿರುವ ಶೇಖ್ ಹಸೀನಾ, ನ್ಯಾಯಾಲಯದಲ್ಲಿ ತನ್ನ ವಿರುದ್ಧ ಮಾಡಲಾದ ಆರೋಪಗಳನ್ನು ನಿರಾಕರಿಸಿದ್ದು, ” ಯಾವುದೇ ಪ್ರಜಾಪ್ರಭುತ್ವದ ಆದೇಶವಿಲ್ಲದ ಆಯ್ಕೆಯಾಗದ ಸರ್ಕಾರವು ಸ್ಥಾಪಿಸಿದ ಮತ್ತು ಅಧ್ಯಕ್ಷತೆ ವಹಿಸುವ ಕಠೋರ ನ್ಯಾಯಮಂಡಳಿಯಿಂದ” ಈ ಆದೇಶವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.





