ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಅಂತ್ಯಕ್ರಿಯೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನಡೆಯಿತು.

ಅಂತ್ಯಕ್ರಿಯೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸಿಎಂ ದೇವೆಂದ್ರ ಫಡ್ನವೀಸ್‌, ಶರದ್‌ಪವಾರ್‌ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಬೆಳಗ್ಗೆ 11 ಗಂಟೆ ಸುಮಾರಿಗೆ ಬಾರಾಮತಿಯ ವಿದ್ಯಾ ಪ್ರತಿಷ್ಠಾನದ ಕ್ರೀಡಾ ಮೈದಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಶಾಸಕರು, ಸಚಿವರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಅಜಿತ್‌ ಪವಾರ್‌ ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ ಬಾರಾಮತಿಯ ಪುಣ್ಯಶ್ಲೋಕ್‌ ಅಹಲ್ಯಾದೇವಿ ಆಸ್ಪತ್ರೆಯಿಂದ ಬಾರಾಮತಿಯ ಬಳಿಯ ಅವರ ಕಟೇವಾಡಿ ಗ್ರಾಮಕ್ಕೆ ಕೊಂಡೊಯ್ಯಲಾಯಿತು.

ಅಂತ್ಯಕ್ರಿಯೆಗೂ ಮುನ್ನ ಬಾರಾಮತಿಯಲ್ಲಿ ಮೆರವಣಿಗೆ ನಡೆಸಲಾಯಿತು. ಲಕ್ಷಾಂತರ ಮಂದಿ ಕಣ್ಣೀರ ವಿದಾಯ ಸಲ್ಲಿಸಿದರು. ಅಜಿತ್ ಪವಾರ್ ಅಮರ ರಹೇ ಎಂಬ ಘೋಷಣೆಗಳು ಮೊಳಗಿದ್ದು, ಅನೇಕರು ಕಣ್ಣೀರು ಸುರಿಸುತ್ತಾ ತಮ್ಮ ಪ್ರೀತಿಯ ನಾಯಕನ ಸ್ಮರಿಸಿದರು.

ಅಂತ್ಯಕ್ರಿಯೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಪೂರ್ಣ ಸರ್ಕಾರಿ ಗೌರವ ನೀಡಲಾಯಿತು. ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು, ಪೊಲೀಸ್ ಮತ್ತು ಸೇನಾ ಸಿಬ್ಬಂದಿ ಉಪಸ್ಥಿತರಿದ್ದರು. ಮೃತದೇಹವನ್ನು ರಾಷ್ಟ್ರೀಯ ಧ್ವಜದಿಂದ ಸುತ್ತಿ, ಸೇನಾ ಸಿಬ್ಬಂದಿ ಗೌರವ ಸಲ್ಲಿಸಿದರು.

ಕ್ಯಾಪ್ಟನ್‌ ಸುಮಿತ್‌ ಕಪೂರ್‌, ಸಹ-ಪೈಲಟ್‌ ಕ್ಯಾಪ್ಟನ್‌ ಶಾಂಭವಿ ಪಾಠಕ್‌, ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್‌ ಜಾಧವ್‌ ಮತ್ತು ವಿಮಾನ ಸಹಾಯಕಿ ಪಿಂಕಿ ಮಾಲಿ  ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ