ಮಿನಿ ಕಥೆ –  ಡಾ. ದೀಪಾ ಹಿರೇಮಠ

5-6 ಹೆಣ್ಣುಮಕ್ಕಳಾದರೂ ವಂಶೋದ್ಧಾರಕ ಬೇಕೆಂಬ ದುರಾಸೆಗೆ ಒಳಗಾದ ತಂದೆ, ಮುಂದೆ ಮಗನಿಂದ ಅನುಭವಿಸಿದ್ದೇನು? ಮನೆಯ ಕೊನೆಯ ಮಗಳಾದ ರಾಣಿ ತನಗೇ ಕಡುಕಷ್ಟ ಬಂದಿದ್ದರೂ ಮುಂದೆ ತನ್ನ ಮಕ್ಕಳನ್ನು ಹಳ್ಳಿಗೆ ಆದರ್ಶವಾಗಿ ಬೆಳೆಸಿದ್ದು ಹೇಗೆ…..?

ಪುಟ್ಟ ಮನೆ, ತೋರಣಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿತ್ತು. ಮುತ್ತೈದೆಯರ ಕಲವರದ ಮಧ್ಯೆ ಪುಟ್ಟ ತೊಟ್ಟಿಲು ಕೊಂಚಿಗೆ, ಹೂವಿನ ಹಾರಗಳಿಂದ ಸುತ್ತಲ್ಪಟ್ಟು ನೋಡುಗರ ಕಣ್ಣಿಗೆ ಹಬ್ಬವಾಗಿತ್ತು. ಪೀಳಿಗೆಯಿಂದ ಪೀಳಿಗೆಗೆ ಆ ತೊಟ್ಟಿಲು ಸಾಕ್ಷಿಯಾಗಿತ್ತು. ಇಂದು ತುಂಬಾ ವರ್ಷಗಳ ನಂತರ ಮನೆಯ ವಂಶೋದ್ಧಾರಕನಿಗಾಗಿ ತೂಗಲು ತಯಾರಿಯಾಗಿ ಕುಳಿತಿತ್ತು.

ನನಗೂ ಹಾಲು ಕುಡಿಸುವ ಎನ್ನುತ್ತಾ, ಪಿಳಿಪಿಳಿ ಕಣ್ಣುಬಿಡುತ್ತಾ ಮಗು ಅವ್ವನ ಸೀರೆ ಜಗ್ಗುತ್ತಿತ್ತು. ತಾಯಿಯ ಕೈಯಲ್ಲಿ ಹಸುಗೂಸು ನಗುತ್ತಿತ್ತು. ಅವಳು ತಂಗಿಯನ್ನು ಎತ್ತಿಕೊಂಡ ಸುಮಾ, ಅಕ್ಕನ ಬಗಲಲ್ಲಿ ಕುಳಿತು ತನ್ನ ಅವ್ವನನ್ನು ಆಸೆಯ ಕಣ್ಣಿನಿಂದ ನೋಡುತ್ತಿತ್ತು.

“ರಾಣಿ ಬಾ ಒಳಗೆ, ನಿನ್ನ ತಮ್ಮನ ನಾಮಕರಣ ನಡೀತಿದೆ,” ಎಂದ ವಿಮಲಾರನ್ನು ನೋಡುತ್ತಾ, ಅಕ್ಕ ರಾಧಾ ನನ್ನನ್ನು ಅಂಗಡಿಗೆ ಕರೆದುಕೊಂಡು ಹೋಗಲಿಲ್ಲ, ಅಳುತ್ತಾ ಹೇಳಿದಳು.

ಒಳಗಿನಿಂದ ಬಂದ ದೊಡ್ಡ ಅಕ್ಕ ಕಮಲಾ, ಕೈ ಹಿಡಿದು ಒಳಗೆ ಕರೆದುಕೊಂಡು ಹೋಗಿ, ಹೊಸ ಲಂಗ ಚೋಲಿ ತೊಡಿಸಿ ನಿಲ್ಲಿಸಿದ್ದಳು. ಅದೇ ಅಕ್ಕ ಇಂದು ತವರು ಮನೆಯಲ್ಲಿ ನನ್ನ ಹಸಿರು ಬಳೆ ತೆಗೆಯುತ್ತಿದ್ದಾಳೆ. ಅಕ್ಕನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ, ಕಣ್ಣಲ್ಲಿನ ಕಾಂತಿ ಎಂದೊ ಬತ್ತಿ ಹೋಗಿದೆ. 15 ವರ್ಷ ದೊಡ್ಡವನಾದ ಗಂಡ, ಘಾಟಿ ಅತ್ತೆ, ಸಣ್ಣ ಸಣ್ಣ ಮೈದುನ ನಾದಿನಿಯರನ್ನು ಬೆಳೆಸುವುದರಲ್ಲಿ ತನ್ನ ಸುಖ ಸಂತೋಷಗಳು ಯಾವಾಗ ಗಡಿ ದಾಟಿದ್ದೇ ಗೊತ್ತೇ ಆಗಲಿಲ್ಲ. ಆದರೂ ನನ್ನ ದುಃಖಕ್ಕೆ ಮಿಡಿಯುತ್ತಿದ್ದಾಗಲೇ ನನ್ನ ಕಣ್ಣುಗಳನ್ನು ನೋಡಿದಳು, ನೂರಾರು ಪ್ರಶ್ನೆಗಳಿಗೆ ಏನೆಂದು ಉತ್ತರಿಸಿಯಾಳು?

ಆ ದಿನ ಅಕ್ಕ, “ಅಪ್ಪ…. ರಾಣಿ ತುಂಬಾ ಜಾಣೆ, ಅವಳನ್ನು ಚೆನ್ನಾಗಿ ಓದಿಸಿ. ಅವಳು ತನ್ನ ಕಾಲ ಮೇಲೆ ನಿಲ್ಲುವಂತಾಗಲಿ. ಸುಮನಾ ಬಾಳಂತೂ ಕುಡುಕ ಗಂಡನ ಕೈಯಲ್ಲಿ ಹಾಳಾಯಿತು. ರತ್ನಾಳನ್ನು ಒಂದು ತುತ್ತು ಉಣ್ಣಲೂ ಗತಿಯಿಲ್ಲದ ಮನೆಗೆ ಸೇರಿಸಿದಿರಿ, ಇನ್ನೂ ರಾಧಾಳನ್ನು ಹಾಗೂ ನನ್ನನ್ನು ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿ ನೊಗ ಭಾರ ಹೊರಿಸಿದಿರಿ. ಅವಳಿಗಾದರೂ ಕಲಿಯಲು ಅಕಾಶ ಕೊಡಿ,” ಎಂದು ಅಂಗಲಾಚಿದ್ದಳು.

ಆದರೆ ಅಪ್ಪನಿಗೆ ಕೇಳುವ ಮನಸ್ಥಿತಿ ಇರಲಿಲ್ಲ, ಎಲ್ಲರನ್ನೂ ಸಾಗಹಾಕಬೇಕಿತ್ತು, ಇದರಲ್ಲಿ ನಮ್ಮ ತಪ್ಪೇನಿದೆ? ತಮ್ಮ ವಾರಸುಧಾರನಿಗಾಗಿ ನಮ್ಮನ್ನು ಹುಟ್ಟಿಸಿದ. ಹರಿ ಹೆಂಡತಿ ಬಂದು ನನ್ನನ್ನು ಮೇಲೆ ಎಬ್ಬಿಸಿದಾಗ ವಾಸ್ತವಕ್ಕೆ ಬಂದು, ಅನಿತಾಳ ಮುಖ ನೋಡಿದೆ ಕಳೆಗುಂದಿತ್ತು, ಕಣ್ಣೀರು ಬತ್ತಿ ಹೋಗಿದ್ದವು. ಹರಿಯ ಮೊಂಡುತನ, ಉದ್ಯೋಗವಿಲ್ಲದೆ ಮೂರು ಹೊತ್ತು ಮನೆಯಲ್ಲಿರುವುದು, ಕೆಟ್ಟ ಚಟಗಳ ದಾಸನಾದ ಗಂಡನನ್ನು ಈ ಹುಡುಗಿ ಸಹಿಸಿಕೊಂಡಿದ್ದೇ ಹೆಚ್ಚು.

ಈ ಪುರುಷಾರ್ಥಕ್ಕೆ ಗಂಡು ಮಗು ಬೇಕಿತ್ತಾ ಅಂತ ಅಪ್ಪನನ್ನು ಕೇಳಬೇಕೆಂಬ ಮಾತು ಮನದಲ್ಲಿ ಇಂಗಿ ಹೋಯಿತು, ಏಕೆಂದರೆ ಅಪ್ಪ ಅಷ್ಟೊಂದು ಕುಸಿದುಹೋಗಿದ್ದ. ತನ್ನ ಮನೆಯಲ್ಲಿ ಪರಕೀಯನಾಗಿ ಜೀವಿಸುತ್ತಿದ್ದ. ಯಾವ ಮಗನ ಸಲುವಾಗಿ ನಮ್ಮನ್ನು ಸಾಲು ಸಾಲಾಗಿ ಹೆತ್ತನೋ ಅದೇ ಮಗ ಇಂದು ಅಪ್ಪನನ್ನು ಕಡೆಗಣಿಸಿದ್ದಾನೆ, ಒಂದು ಸಾರಿ ಹೊಡೆದೂ ಬಿಟ್ಟಿದ್ದಾನೆ.

ಅಪ್ಪ ಎಂದರೆ ಆಲದ ಮರ. ಆದರೆ ನೀನು ನಮ್ಮ ಪಾಲಿಗೆ ಮುಳ್ಳೆ ತುಂಬಿರುವ ಜಾಲಿ ಮರವಾಗಿದ್ದೆ. ಹೆಣ್ಣು ಮಕ್ಕಳೆಂದರೆ ಯಾಕಿಷ್ಟು ತಿರಸ್ಕಾರ? ಕೇಳೋಣವೆಂದೆ, ಆದರೆ ನಾನು ಒಬ್ಬ ಹೆಣ್ಣು ಕ್ಷಮೆಯಾದರಿತ್ರಿ, ಆ ರೀತಿ ಕೇಳಲಿಲ್ಲ. ಗಂಡ ಸತ್ತ ಮೇಲೆ ಎರಡು ಚಿಕ್ಕ ಮಕ್ಕಳ ಜವಾಬ್ದಾರಿ ಹೊತ್ತ ನಾನು ಆ ದಿನವೇ ತಂದೆಯ ಕೈ ಹಿಡಿದು ತವರಿನಿಂದ ನನ್ನ ಮನೆಗೆ ಕರೆದುಕೊಂಡು ಬಂದೆ.

ಮಗಳ ನಡತೆಯಿಂದ ದೊಡ್ಡ ಪ್ರಮಾಣದ ಬದಲಾವಣೆ ತಂದಿತು. ತನ್ನ ಮನಸ್ಥಿತಿಯನ್ನು ಬದಲಿಸಿಕೊಂಡ ಆ ತಂದೆ ಅಂದಿನಿಂದ ಮಗಳ  ಶಿಕ್ಷಣಕ್ಕೆ ಅಡಿಪಾಯ ಹಾಕಿದ. ಕಾಲ ಉರುಳುತ್ತಿರಲು ಮಗಳು ಶಿಕ್ಷಕಿಯಾದಳು. ತನ್ನ ತಪ್ಪಿಗೆ ಪ್ರಾಯಶ್ಚಿತ್ತದಂತೆ ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಹೆಣ್ಣು ಗಂಡು ಸಮಾನ, ಗಂಡು ಮಗುವಿಗಾಗಿ ಹೆಚ್ಚು ಹೆಣ್ಣುಗಳನ್ನು ಹಡೆಯುವವರ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಪ್ರಯತ್ನಪಡುತ್ತಾ, ತನ್ನ ಹೆಣ್ಣು ಮಕ್ಕಳಂತೆ ಬೇರೆ ಹೆಣ್ಣು ಮಕ್ಕಳು ಕಷ್ಟಪಡದ ಹಾಗೆ, ಮನವೊಲಿಸಲು ಪ್ರಯತ್ನ ಪಡುತ್ತಾ ಜೀವನದ ಮೂರನೇ ಹಂತವನ್ನು ಸಾರ್ಥಕವಾಗಿ ಸಾಗಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ