ಸಮಾಜದಲ್ಲಿ ಮಹಿಳೆಯರ ಪಾತ್ರ ಬದಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಆರ್ಥಿಕವಾಗಿ ಬಲಶಾಲಿಯಾಗುವುದು ಏಕೆ ಮುಖ್ಯ? ಎಂಬುದನ್ನು ಅರಿಯೋಣ……..
ದೇಶ ಬದಲಾಗುತ್ತಿದೆ. ಮಹಿಳೆಯರ ಸ್ಥಿತಿಯೂ ಸುಧಾರಿಸುತ್ತಿದೆ. ಸಮಯದ ಜೊತೆ ಜೊತೆಗೆ ಮಹಿಳೆಯರು ಶಕ್ತಿಶಾಲಿಗಳಾಗುತ್ತಿದ್ದಾರೆ. ಇಂದಿರಾಗಾಂಧಿ, ಇಂದಿರಾನೂಯಿ ಮತ್ತು ಕಿರಣ್ ಬೇಡಿಯಿಂದ ಹಿಡಿದು ಸಾನಿಯಾ ಮಿರ್ಜಾ, ಸುನೀತಾ ವಿಲಿಯಮ್ಸ್ ಮತ್ತು ಕಲ್ಪನಾ ಚಾವ್ಲಾವರೆಗೆ ಅನೇಕ ಆಧುನಿಕ ಭಾರತೀಯ ಮಹಿಳೆಯರು ವಿಶ್ವದಾದ್ಯಂತ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಆದರೆ ಇನ್ನೂ, ಮನೆಯಲ್ಲಾಗಲಿ ಅಥವಾ ಹೊರಗಾಗಲಿ ಮಹಿಳೆಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಅಪರಾಧಗಳು ನಿರಂತರವಾಗಿ ಹೆಚ್ಚುತ್ತಿವೆ.
ಮಹಿಳೆಯರು ಪುರುಷರ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿರುವುದೇ ಇದಕ್ಕೆ ಮೂಲ ಕಾರಣ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ.
ಇಂದಿಗೂ ಸಹ ಮಹಿಳೆಯರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುವುದಕ್ಕೆ ಕಾರಣವೆಂದರೆ, ಅವರು ಇತರರ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿರುವುದು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.48 ರಷ್ಟು ಮಹಿಳೆಯರಿದ್ದರೆ, ಅವರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಭಾರತದ ಜಿಡಿಪಿಯಲ್ಲಿ ಮಹಿಳೆಯರ ಕೊಡುಗೆ ಕೇವಲ ಶೇ.18ರಷ್ಟು ಮಾತ್ರ ಇದೆ.
ನಮ್ಮ ಸಮಾಜದಲ್ಲಿ ಇಂದಿಗೂ ಮಹಿಳೆಯರ ದೊಡ್ಡ ವರ್ಗ ಸಾಮಾಜಿಕ ಬಂಧಗಳ ಸಂಕೋಲೆಗಳನ್ನು ಸಂಪೂರ್ಣವಾಗಿ ಮುರಿಯಲು ಸಾಧ್ಯವಾಗಿಲ್ಲ. ಅವರು ತಮ್ಮ ಮನೆಯಲ್ಲೇ ತಮ್ಮದೇ ಆದ ಸ್ವತಂತ್ರ ಅಸ್ತಿತ್ವವನ್ನು ಹೊಂದಿರುವುದಿಲ್ಲ. ಒಂದು ರೀತಿಯಲ್ಲಿ, ನಮ್ಮ ಪಿತೃಪ್ರಧಾನ ಸಮಾಜ ಹುಟ್ಟಿನಿಂದಲೇ ಅವರನ್ನು ಹಾಗೆ ರೂಪಿಸಲು ಪ್ರಾರಂಭಿಸುತ್ತದೆ. ಅವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪುರುಷರ ಬೆಂಬಲನ್ನು ಹುಡುಕುವಂತೆ ಹಾಗೂ ಪ್ರತಿ ಕೆಲಸಕ್ಕೂ ಪುರುಷರ ಮೇಲೆ ಅವಲಂಬಿತರಾಗುವಂತೆ ಮಾಡುತ್ತದೆ.
ಒಬ್ಬ ಮಹಿಳೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಯಸಿದಾಗ, ಪುರಾಣಗಳಲ್ಲಿ ಬರೆಯಲಾದ ಹಲವಾರು ಪದ್ಧತಿ, ಸಂಪ್ರದಾಯ ಮತ್ತು ಬೋಧನೆಗಳನ್ನು ಮಾಡುವ ಮೂಲಕ ಅವಲಂಬಿತ ಜೀವನವನ್ನು ನಡೆಸುವಂತೆ ಒತ್ತಡ ಹೇರಲಾಗುತ್ತದೆ.
ಸಮಾನ ಅವಕಾಶ ನೀಡಬೇಕು
ಭಾರತದ ಸಂಸತ್ತಿನಲ್ಲಿ ಕೇವಲ ಶೇ.14 ಮಹಿಳೆಯರಿದ್ದಾರೆ. ಅದೇ ರೀತಿ, ಪಂಚಾಯತ್ ಮಟ್ಟದಲ್ಲಿ ಹೆಚ್ಚಿನ ಮಹಿಳೆಯರನ್ನು ಮುಖವಾಡದಂತೆ ಬಳಸಲಾಗುತ್ತದೆ. ಅಂದರೆ, ಚುನಾವಣೆಯಲ್ಲಿ ಮಹಿಳೆ ಗೆಲ್ಲುತ್ತಾಳೆ. ಆದರೆ, ಅಧಿಕಾರಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಅವರ ಕುಟುಂಬದ ಸದಸ್ಯರು ತೆಗೆದುಕೊಳ್ಳುತ್ತಾರೆ. ದೇಶದ ಸುಪ್ರೀಂಕೋರ್ಟ್ ಸೇರಿದಂತೆ ಹೈಹೋರ್ಟ್ ಗಳಲ್ಲಿ ಪ್ರಸ್ತುತ ಇರುವ ನ್ಯಾಯಮೂರ್ತಿಗಳಲ್ಲಿ ಕೇವಲ ಶೇ.11ರಷ್ಟು ಮಾತ್ರ ಮಹಿಳೆಯರಿದ್ದಾರೆ.
ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು, ಸಾಂಪ್ರದಾಯಿಕ ರೂಢಿಗಳನ್ನು ಬಿಟ್ಟು ದೇಶ ಮತ್ತು ಕುಟುಂಬದ ಸದಸ್ಯರಾಗುವುದು ಇಂದಿನ ಅಗತ್ಯವಾಗಿದೆ. ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯವನ್ನು ಕೊನೆಗೊಳಿಸಿ, ಪುರುಷರಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಿದ್ದೇ ಆದರೆ ಗೀತಾ ಗೋಪಿನಾಥ್, ಇಂದಿರಾ ನೂಯಿ, ಕಿರಣ್ ಮಜುಂದಾರ್ ರಂತೆ ಇತರ ಮಹಿಳೆಯರೂ ಸಹ ಸಬಲರಾಗಬಹುದು.
ಶಿಕ್ಷಣ ಮತ್ತು ಸ್ವಾವಲಂಬನೆ
ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ಅಡುಗೆ ಮತ್ತು ಮನೆಕೆಲಸದಲ್ಲಿ ಪರಿಣಿತಿಯನ್ನು ಕಲಿಸಲಾಗುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಮಹಿಳೆಯರು ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಅತಿ ಮುಖ್ಯ. ಇದು ಕೇವಲ ಕುಟುಂಬಕ್ಕೆ ಮಾತ್ರವಲ್ಲದೆ, ಪ್ರತಿಯೊಬ್ಬ ಮಹಿಳೆಗೂ ಅತ್ಯವಶ್ಯಕ. ಕುಟುಂಬ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವಾಗ ಅಥವಾ ಯಾವುದೇ ಹುಡುಗಿಯ ವೈವಾಹಿಕ ಜೀವನದಲ್ಲಿ ಹಠಾತ್ ಸಮಸ್ಯೆ ಎದುರಾದಾಗ ಶಿಕ್ಷಣದ ಮಹತ್ವದ ಬಗ್ಗೆ ಅರಿವಾಗುತ್ತದೆ.
ಅಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ಮತ್ತು ಆರ್ಥಿಕ ಅವಲಂಬನೆಯಿಂದ ಮಾತ್ರ ಹೆಣ್ಣು ತನ್ನ ಹೆತ್ತವರ ಅಥವಾ ಗಂಡನ ಸಹಾಯವಿಲ್ಲದೆ ಗೌರವಯುತವಾಗಿ ಬದುಕಬಲ್ಲಳು.
ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿರುವುದು ಬಹಳ ಮುಖ್ಯ. ಭಾರತದಲ್ಲಿ ಎಲ್ಲದರಲ್ಲೂ ಪರಿಣಿತಿ ಹೊಂದಿರುವ ಗೃಹಿಣಿಯರು ಮತ್ತು ತಾಯಂದಿರು ಬಹಳಷ್ಟು ಮಂದಿ ಇದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಅವರು ತಮ್ಮ ವೃತ್ತಿ ಜೀವನವನ್ನು ತ್ಯಜಿಸಿಬಿಡುತ್ತಾರೆ. ಅನೇಕ ಮಹಿಳೆಯರು ವಿದ್ಯಾವಂತರಾಗಿರುತ್ತಾರೆ. ಆದರೆ ಹೆರಿಗೆ ರಜೆಯ ನಂತರ ಅವರಿಗೆ ಕಛೇರಿಗೆ ಮರಳಲೂ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರು ತಮ್ಮ ವೃತ್ತಿ ಜೀವನವನ್ನು ತ್ಯಜಿಸಬೇಕಾಗುತ್ತದೆ. ಅಂತಹ ಮಹಿಳೆಯರು ನಂತರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದನ್ನು ಎದುರಿಸಲು ಅವರಿಗೆ ಅವಕಾಶವೇ ಇಲ್ಲದಂತಾಗುತ್ತದೆ.
ಆರ್ಥಿಕ ಸ್ವಾವಲಂಬನೆಯ ವಿಷಯ
ಜೀವನದಲ್ಲಿ ಹಣವೇ ಸರ್ವಸ್ವವಲ್ಲದಿದ್ದರೂ, ಹಣವಿಲ್ಲದೆ ಉತ್ತಮ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಹಣ ನಮಗೆ ಸ್ವಾವಲಂಬನೆ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ನೀಡುತ್ತದೆ. ಸಾಮಾನ್ಯವಾಗಿ, ಗೃಹಿಣಿಯರು ತಮ್ಮ ಮನೆಯ ಮತ್ತು ಸಣ್ಣಪುಟ್ಟ ಖರ್ಚುಗಳಿಗೆ ತಮ್ಮ ಗಂಡನ ಮೇಲೆ ಅವಲಂಬಿತರಾಗಿರುತ್ತಾರೆ. ಗಂಡನ ಸಂಪಾದನೆಯಿಂದ ಖರ್ಚು ವೆಚ್ಚಕ್ಕೆ ಯಾವುದೇ ತೊಂದರೆ ಇಲ್ಲದಿದ್ದರೂ, ಹೆಣ್ಣಿನ ಅಸ್ತಿತ್ವವೇ ಹತ್ತಿಕ್ಕಿದಂತೆ ಕಾಣುತ್ತದೆ. ಅವರು ಆರ್ಥಿಕ ಸ್ವಾವಲಂಬನೆಗೆ ತಮ್ಮದೇ ಆದ ವಿಶಿಷ್ಟ ಅರ್ಥವನ್ನು ಹೊಂದಿರುತ್ತಾರೆ.
ಒಬ್ಬ ಮಹಿಳೆ ಉದ್ಯೋಗ ಅಥವಾ ಯಾವುದೇ ವ್ಯವಹಾರವನ್ನು ಮಾಡಿದಾಗ, ಅವಳು ಹಣವನ್ನು ಗಳಿಸುವುದಲ್ಲದೆ, ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಾಳೆ ಮತ್ತು ಆರ್ಥಿಕವಾಗಿ ಸ್ವತಂತ್ರಳಾಗುತ್ತಾಳೆ. ಅವಳು ಅನೇಕ ರೀತಿಯಲ್ಲಿ ತನ್ನನ್ನು ತಾನು ಉತ್ತಮ ವ್ಯಕ್ತಿಯನ್ನಾಗಿ ಮಾಡಿಕೊಳ್ಳುತ್ತ ಹೆಜ್ಜೆ ಹಾಕುತ್ತಾಳೆ.
ಆರ್ಥಿಕ ಸ್ವಾತಂತ್ರ್ಯದ ಪ್ರಯೋಜನ
ಮಹಿಳೆ ಮನೆಯ ಖರ್ಚು ವೆಚ್ಚದಲ್ಲಿ ಪುರುಷನಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವಂತಾಗಬೇಕು. ಮಹಿಳೆ ಆರ್ಥಿಕವಾಗಿ ಸ್ವತಂತ್ರಳಾದಾಗ ಮಾತ್ರ ತನ್ನ ಕುಟುಂಬದ ಬೆಂಬಲಕ್ಕೆ ನಿಲ್ಲುವಂತಾಗುತ್ತಾಳೆ. ಇಂದಿನ ಹಣದುಬ್ಬರದ ಯುಗದಲ್ಲಿ ಕೇವಲ ಒಬ್ಬ ವ್ಯಕ್ತಿಯ ಸಂಬಳದಿಂದ ಮನೆಯ ಖರ್ಚು ವೆಚ್ಚಗಳನ್ನು ಸರಿದೂಗಿಸುವುದು ಬಹಳ ಕಷ್ಟಕರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯ ಆದಾಯ ಮನೆಯ ವೆಚ್ಚಗಳನ್ನು ಹೆಚ್ಚಿನ ಮಟ್ಟದಲ್ಲಿ ಸುಲಭಗೊಳಿಸುತ್ತದೆ. ಅವಳು ತನ್ನ ಸ್ವಂತ ಮತ್ತು ತನ್ನ ಮಕ್ಕಳ ಖರ್ಚುಗಳನ್ನು ಭರಿಸುವ ಸಾಮರ್ಥ್ಯ ಹೊಂದುತ್ತಾಳೆ. ಪತಿ ಅನಾರೋಗ್ಯಕ್ಕೆ ಒಳಗಾಗಿದ್ದರೆ ಅಥವಾ ಕೆಲಸ ಕಳೆದುಕೊಂಡಿದ್ದರೆ, ಮಹಿಳೆ ಕುಟುಂಬಕ್ಕೆ ಆಸರೆಯಾಗಬಲ್ಲಳು.
ಆರ್ಥಿಕ ಸ್ವಾತಂತ್ರ್ಯದ ಭಾವನೆ
ಮಹಿಳೆಯರು ಆರ್ಥಿಕವಾಗಿ ಪುರುಷರ ಮೇಲೆ ಅವಲಂಬಿತರಾಗಿದ್ದರೆ, ಅವರು ಪ್ರತಿಯೊಂದು ಸಣ್ಣಪುಟ್ಟ ಖರ್ಚುಗಳಿಗೆ ತಮ್ಮ ಗಂಡನಿಂದ ಹಣವನ್ನು ಕೇಳಬೇಕಾಗುತ್ತದೆ. ಗಂಡ ಹಣ ಕೊಡುವಲ್ಲಿ ನಿರಾಕರಿಸಿದರೆ, ತಮ್ಮ ಆತ್ಮಾಭಿಮಾನವನ್ನೇ ಪಣವಾಗಿಟ್ಟು ಬದುಕಬೇಕಾಗುತ್ತದೆ. ಅನೇಕ ಬಾರಿ ಗಂಡನೂ ಸಹ ಹಣದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಾನೆ. ಇದರಿಂದ ಮನಸ್ಸನ್ನು ಘಾಸಿ ಮಾಡಿಕೊಳ್ಳುವ ಮಹಿಳೆ, ತನ್ನ ಅಗತ್ಯಗಳನ್ನು ಮಿತಿಗೊಳಿಸಿಕೊಳ್ಳಲು ಆರಂಭಿಸುತ್ತಾಳೆ.
ಆದರೆ, ಆರ್ಥಿಕ ಸ್ವಾವಲಂಬನೆಯು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಆಕೆ ತಾನು ಸಂಪಾದನೆ ಮಾಡುವ ಮಾರ್ಗವನ್ನು ಕಂಡುಕೊಂಡಾಗ, ತಮ್ಮ ಸ್ವಂತ ಖರ್ಚುಗಳನ್ನು ನೋಡಿಕೊಳ್ಳಲು ಪ್ರತ್ಯೇಕವಾಗಿ ಯಾರದೇ ಅನುಮತಿಯನ್ನು ಪಡೆಯುವ ಅಗತ್ಯ ಇರುವುದಿಲ್ಲ.
ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ
ಗಳಿಸುವ ಮತ್ತು ಆರ್ಥಿಕವಾಗಿ ಸ್ವತಂತ್ರರಾಗಿರುವ ಮಹಿಳೆಯರು ಕುಟುಂಬದಲ್ಲಿ ಹೆಚ್ಚಿನ ಗೌರವವನ್ನು ಪಡೆದುಕೊಳ್ಳುತ್ತಾರೆ. ಮನೆಯಲ್ಲಿ ದಿನ 24 ಗಂಟೆ ಕೆಲಸ ಮಾಡಲು ಸಿದ್ಧರಿದ್ದರೂ, ಕುಟುಂಬದವರು ತಮ್ಮ ಮನೆಯ ಕೆಲಸಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ಅದೇ ಸಮಯದಲ್ಲಿ ಅವಳು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಸ್ವಂತ ವ್ಯವಹಾರ ಮಾಡುತ್ತಿದ್ದರೆ, ಅವಳ ಪತಿ ಅಥವಾ ಕುಟುಂಬದ ಸದಸ್ಯರು ಸೇರಿದಂತೆ ಸಂಬಂಧಿಕರು ಮತ್ತು ನೆರೆಹೊರೆಯವರು ಸಹ ಅವಳನ್ನು ಗೌರವದಿಂದ ನೋಡುತ್ತಾರೆ.
ಎಲ್ಲವನ್ನೂ ಎದುರಿಸಬಲ್ಲಳು
ಭಾರತೀಯ ಮನೆಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೈಹಿಕ ಮತ್ತು ಮಾನಸಿಕ ಹಿಂಸೆಗಳು ಹೊಸದೇನಲ್ಲ. ಆದರೆ ಹೆಚ್ಚಿನ ಮಹಿಳೆಯರು ಈ ಹಿಂಸೆಯನ್ನು ಸಹಿಸಿಕೊಳ್ಳುತ್ತಾರೆ. ಏಕೆಂದರೆ ಅವರು ಆರ್ಥಿಕವಾಗಿ ಸ್ವತಂತ್ರರಾಗಿರುವುದಿಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಮನೆ ಬಿಟ್ಟು ಹೋಗಬೇಕಾದೀತು, ನಂತರ ತಾವು ಮತ್ತು ತಮ್ಮ ಮಕ್ಕಳು ಜೀವನ ಸಾಗಿಸುವುದು ಹೇಗೆ ಎಂಬ ಭಾವನೆ ಅವರದು. ಈ ಆಲೋಚನೆಯಿಂದಾಗಿ, ಅವರು ತಮ್ಮ ಜೀವನದುದ್ದಕ್ಕೂ ವಿಷಕಾರಿ ಸಂಬಂಧದಲ್ಲಿ ಸಿಲುಕಿಕೊಳ್ಳುತ್ತಾರೆ.
ಆದರೆ ಮಹಿಳೆ ಆರ್ಥಿಕವಾಗಿ ಸ್ವತಂತ್ರಳಾಗಿದ್ದರೆ, ಅಂತಹ ಸಂಬಂಧವನ್ನು ಮುಂದುವರಿಸಲು ನಿರಾಕರಿಸಬಹುದು. ಅಲ್ಲದೆ, ಅವಳು ಒಂಟಿಯಾಗಿ ಬದುಕಲು ನಿರ್ಧರಿಸಿದರೆ, ಅವಿವಾಹಿತಳಾಗಿಯೂ ಉಳಿಯಬಹುದು. ಹಳೆಯ ಆಲೋಚನೆ ಮತ್ತು ಸಂಪ್ರದಾಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲು ಸಹ ಆಕೆ ಧೈರ್ಯವನ್ನು ಮಾಡಬಹುದು.
ಆತ್ಮವಿಶ್ವಾಸ ಹೆಚ್ಚುತ್ತದೆ
ಆರ್ಥಿಕ ಸ್ವಾವಲಂಬನೆ ಮಹಿಳೆಯರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸುತ್ತದೆ. ಅವಳು ತನ್ನ ಪತಿ ಮತ್ತು ಕುಟುಂಬದವರ ಅವಲಂಬನೆಯನ್ನು ಹೊರತುಪಡಿಸಿ, ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿದ್ದಾಳೆ ಎಂಬುದನ್ನು ಅರಿತುಕೊಳ್ಳುತ್ತಾಳೆ. ಸಮಾಜದ ಜನರು ಅವಳನ್ನು ತನ್ನ ಗಂಡನ ಹೆಸರಿನಿಂದ ಮಾತ್ರ ತಿಳಿಯುವುದಿಲ್ಲ. ಅವಳಿಗೆ ಆಕೆಯದೇ ಆದ ಅಸ್ತಿತ್ವವಿರುತ್ತದೆ. ಅಲ್ಲದೆ, ಜನರು ಅವಳನ್ನು ಆಕೆಯ ಹೆಸರಿನಿಂದಲೇ ಗುರುತಿಸಲು ಆರಂಭಿಸುತ್ತಾರೆ.
ಈ ಆತ್ಮವಿಶ್ವಾಸ ಅವಳನ್ನು ಜೀವನದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸುತ್ತದೆ. ಆಕೆ ತನ್ನನ್ನು ತಾನು ಉತ್ತಮವಾಗಿ ಪರಿಗಣಿಸಲು ಮತ್ತು ತನ್ನ ವ್ಯಕ್ತಿತ್ವವನ್ನು ಸುಧಾರಿಸಲು ಸಮರ್ಥಳಾಗಿರುತ್ತಾಳೆ. ಅವಳು ಎಲ್ಲಾ ರೀತಿಯ ಬಟ್ಟೆಗಳನ್ನು ಧರಿಸುವಲ್ಲಿ ಹಾಗೂ ಜನರಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮನಸ್ಥಿತಿಯನ್ನೂ ಹೊಂದಿರುತ್ತಾಳೆ.
ಮಹಿಳೆಯರು ಹಾಗೂ ಹೂಡಿಕೆ ಆರ್ಥಿಕ ಸ್ವಾವಲಂಬನೆಗಾಗಿ ಹಣ ಸಂಪಾದಿಸುವುದು ಮತ್ತು ಉಳಿಸುವುದರ ಜೊತೆಗೆ ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವುದು ಹೇಗೆ ಎಂದು ತಿಳಿದಿರಬೇಕು. ಮಹಿಳೆಯರು ತಮ್ಮ ಸಂಪಾದನೆಯ ಹಣವನ್ನು ಹೂಡಿಕೆ ಮಾಡಲು ಹಲವಾರು ಆಯ್ಕೆಗಳಿವೆ. ಚಿನ್ನದ ಮೇಲೆ ಹೂಡಿಕೆ ಮಾಡುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚಿನ್ನದಲ್ಲಿ ಹೂಡಿಕೆಯಲ್ಲೂ ಹಲವಾರು ಆಯ್ಕೆಗಳಿವೆ. ಇದರಲ್ಲಿ ಚಿನ್ನದ ನಿಧಿಗಳು, ಚಿನ್ನದ ವಿನಿಮಯ, ವ್ಯಾಪಾರದ ನಿಧಿಗಳು, ಚಿನ್ನದ ಬಾರ್ ಗಳು, ಆಭರಣ, ನಾಣ್ಯಗಳು, ಚಿನ್ನದ ಬಾಂಡ್ ನಂತಹ ಹಲವಾರು ಆಯ್ಕೆಗಳು ಇದರಲ್ಲಿ ಸೇರಿವೆ.
ಉದ್ಯೋಗಸ್ಥ ಮಹಿಳೆಯರು ಭಾರತ ಸರ್ಕಾರದ ನಿವೃತ್ತಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ವೃದ್ಧಾಪ್ಯಕ್ಕಾಗಿ ಪಿಂಚಣಿ ನಿಧಿಯನ್ನು ಸಂಗ್ರಹಿಸಬಹುದು. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬಹುದು.
ಅಪಾಯ ಮುಕ್ತ ಹೂಡಿಕೆಯ ಆಯ್ಕೆಗಳನ್ನು ಹುಡುಕುತ್ತಿರುವವರಿಗೆ ಎಫ್ ಡಿ ಸಹ ಉತ್ತಮ ಆಯ್ಕೆಯಾಗಿದೆ. ಕೆಲಸ ಮಾಡುವ ಮಹಿಳೆಯರು ಅಥವಾ ಗೃಹಿಣಿಯರು, ಸಾರ್ವಜನಿಕ ಭವಿಷ್ಯ ನಿಧಿ ಅವರಿಗೆ ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಇದರಲ್ಲಿ 15 ವರ್ಷಗಳ ಕಾಲ ಹೂಡಿಕೆ ಮಾಡಬೇಕು. ಅದಕ್ಕೆ ಸರ್ಕಾರ ಉತ್ತಮ ಬಡ್ಡಿ ನೀಡುತ್ತದೆ.
ಅದೇ ರೀತಿ ಹೂಡಿಕೆ ಯೋಜನೆಗಳಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರೀ ಹೆಚ್ಚು ಸುರಕ್ಷಿತವಾಗಿರುತ್ತದೆ. ಇದರಲ್ಲಿ ನೀವು ನಿಗದಿತ ಸಮಯಕ್ಕೆ ನಿಗದಿತ ಮೊತ್ತವನ್ನು ಹೂಡಿಕೆ ಮಾಡಬಹುದು.
ಯೋಜನೆಯ ಅವಧಿ ಪೂರ್ಣವಾದ ನಂತರ, ನೀವು ಪೂರ್ಣ ಹಣವನ್ನು ಪಡೆಯುತ್ತೀರಿ. ಈ ಯೋಜನೆಯು ಮಹಿಳೆಯರಿಗೆ ಉತ್ತಮವಾಗಿರುತ್ತದೆ. ಏಕೆಂದರೆ ನಿಮ್ಮ ಉಳಿತಾಯವನ್ನು ನಿರ್ದಿಷ್ಟ ಅವಧಿಯೊಳಗೆ ಬಡ್ಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ.
ನಿಶ್ಚಿತ ಠೇವಣಿ ಯೋಜನೆ
ಹೂಡಿಕೆ ಮತ್ತು ಉಳಿತಾಯಕ್ಕೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ನಿಮ್ಮ ಖರ್ಚುಗಳ ನಂತರ ಉಳಿದಿರುವ ಮೊತ್ತದ ಎಫ್ ಡಿ ಮಾಡಬಹುದು.
ವಿವಿಧ ಬ್ಯಾಂಕ್ ಗಳಲ್ಲಿ, ವಿವಿಧ ದರಗಳಲ್ಲಿ ಬಡ್ಡಿ ಲಭ್ಯವಿದೆ. ಅಗತ್ಯವಿದ್ದರೆ, ಎಫ್ ಡಿಯನ್ನು ಅವಧಿ ಮುಗಿಯುವ ಮುನ್ನವೇ ತೆಗೆದುಕೊಳ್ಳಬಹುದು. ಇದನ್ನು ನೀವು ಯಾವುದೇ ಬ್ಯಾಂಕಿನಲ್ಲಿ ತೆರೆಯಬಹುದು.
ಕಡಿಮೆ ಅಪಾಯವಿರುವ ಹೂಡಿಕೆ ಯೋಜನೆಗೆ ನೀವು ಸಿದ್ಧರಾಗಿದ್ದರೆ, ಮ್ಯೂಚುಯೆಲ್ ಫಂಡ್ ಎಸ್ ಐಪಿ ನಿಮಗೆ ಉತ್ತಮ ಆಯ್ಕೆಯಾಗಿರುತ್ತದೆ. ವ್ಯವಸ್ಥಿತ ಹೂಡಿಕೆ ಯೋಜನೆ (ಎಫ್ಐಪಿ) ಮೂಲಕ ನೀವು ಸ್ವಲ್ಪ ಹಣವನ್ನು ಮ್ಯೂಚುಯೆಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು.
ನಿಮ್ಮ ಮೊಬೈಲ್ ನಲ್ಲಿ ನೀವು ಅಪ್ಲಿಕೇಶನ್ ಡೌನ್ ಲೋಡ್ ಮಾಡಬಹುದು ಮತ್ತು ಮ್ಯೂಚುಯೆಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.
ಈ ಹೂಡಿಕೆಯಲ್ಲಿ ಮಾಡಿದ ಲಾಭದಿಂದ, ಮ್ಯೂಚುಯೆಲ್ ಫಂಡ್ ಕಂಪನಿ ತನ್ನ ಶುಲ್ಕವನ್ನು ಕಡಿತಗೊಳಿಸಿಕೊಂಡು, ಉಳಿದ ಮೊತ್ತವನ್ನು ನಿಮಗೆ ನೀಡುತ್ತದೆ. ಸಾಲ ನಿಧಿ, ಈಕ್ವಿಟಿ ಫಂಡ್, ಸಮತೋಲಿತ ನಿಧಿಗಳು ಇತ್ಯಾದಿಗಳಂತಹ ಮ್ಯೂಚುಯೆಲ್ ಫಂಡ್ ಗಳ ವಿವಿಧ ಯೋಜನೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತವೆ. ಮ್ಯೂಚುಯೆಲ್ ಫಂಡ್ ಗಳಲ್ಲಿನ ದೀರ್ಘಾವಧಿಯ ಬಂಡವಾಳ ಲಾಭಗಳು ತೆರಿಗೆ ಮುಕ್ತವಾಗಿವೆ. ಇದರಲ್ಲಿ ಆದಾಯ ತೆರಿಗೆಯಲ್ಲೂ ವಿನಾಯಿತಿ ಸಿಗುತ್ತದೆ.
– ಗಿರಿಜಾ ಮೂರ್ತಿ
ಪ್ರತಿಭೆಗೆ ತಕ್ಕ ಮಾನ್ಯತೆ ಸಿಗಲಿ
ಸಾಮಾಜಿಕ ಕಾರ್ಯಕರ್ತೆ ಸುನಂದಾ ರಾಜೇಂದ್ರ ಪವಾರ್ ಹೇಳುವಂತೆ, ಮಲ್ಟಿಟಾಸ್ಕ್ ಮತ್ತು ಹಣ ನಿರ್ವಹಣೆಯಲ್ಲಿ ಮಹಿಳೆಯರು ಬಹಳ ಉತ್ತಮರು. ಆದರೆ ಅವರು ತಾವು ಅರ್ಹತೆ ಇರುವಷ್ಟು ಮಾನ್ಯತೆಯನ್ನು ಪಡೆಯುವುದಿಲ್ಲ. ಇಂದಿಗೂ ಮಹಿಳೆಯ ಕೆಲಸ ಕೇವಲ ಗೃಹಿಣಿಯ ಪಾತ್ರ ಮತ್ತು ತನ್ನ ಕುಟುಂಬದ ಸದಸ್ಯರನ್ನು ನೋಡಿಕೊಳ್ಳುವುದು ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ಪ್ರತಿಯೊಬ್ಬ ಮಹಿಳೆ ತನ್ನ ಮೌಲ್ಯವನ್ನು ತಿಳಿದಿರಬೇಕು. ಅವಳು ತಳಮಟ್ಟದಿಂದ ಉತ್ತಮ, ಅಲ್ಲಿಂದ ಅತ್ಯುನ್ನತ ಮಟ್ಟವನ್ನು ತಲುಪಬಲ್ಲಳು ಎಂದು ಅರಿವಿರಬೇಕು.
ಇಂದು ಮಹಿಳೆ ಪ್ರತಿ ವಿಷಯದಲ್ಲೂ ಪುರುಷನಿಗೆ ಸರಿ ಸಮಾನವಾದ ಸಾಮರ್ಥ್ಯವನ್ನು ಹೊಂದಿದ್ದಾಳೆ ಮತ್ತು ಸ್ವತಂತ್ರ ವ್ಯಕ್ತಿಯಾಗಿ ತನ್ನ ಛಾಪನ್ನು ಉಳಿಸಿಕೊಂಡು ಸಮಾಜದ ಗೌರವಕ್ಕೆ ಅರ್ಹಳಾಗಿದ್ದಾಳೆ. ಆದ್ದರಿಂದ ಹೆಚ್ಚು ಹೆಚ್ಚು ಜನರಿಗೆ ಶಿಕ್ಷಣ ನೀಡಿದಾಗ ಮಾತ್ರ, ಪುರುಷ ಮತ್ತು ಮಹಿಳೆ ಸಮಾನರು ಎಂಬ ಭಾವನೆ ಮೂಡಲು ಆರಂಭವಾಗುತ್ತದೆ. ಅನೇಕ ತಲೆಮಾರುಗಳಿಂದ ಜಾರಿಯಲ್ಲಿರುವ ಮತ್ತು ಯುವ ಪೀಳಿಗೆಗೆ ರವಾನಿಸುವ ಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಹೊರಬರಲು ಇದು ಸಾಧ್ಯವಾಗುತ್ತದೆ.
ವಿದ್ಯಾವಂತ ಮಹಿಳೆಯರು ಒಗ್ಗೂಡಿ ಸ್ವಸಹಾಯ ಗುಂಪುಗಳನ್ನು ರಚಿಸಿದಾಗ, ಅವರು ಇತರ ಮಹಿಳೆಯರನ್ನು ಪ್ರೋತ್ಸಾಹಿಸಿ, ಸಬಲೀಕರಣಗೊಳಿಸುತ್ತಾರೆ ಮತ್ತು ಒಟ್ಟಿಗೆ ಶ್ರೇಷ್ಠತೆಯನ್ನು ಸಾಧಿಸುತ್ತಾರೆ. ಗೃಹಿಣಿಯರಿಂದ ಹಿಡಿದು ಉನ್ನತ ಸ್ಥಾಪಿತ ಉದ್ಯಮಿಗಳವರೆಗೆ ತಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸಿಕೊಳ್ಳುತ್ತಾರೆ. ಮಹಿಳೆಯರು ತಮ್ಮ ಪ್ರತಿಭೆಯ ವಿಷಯದಲ್ಲಿ ತಮ್ಮ ಮೌಲ್ಯವನ್ನು ತಿಳಿದುಕೊಳ್ಳಬೇಕು. ಇದು ಅವರ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತನ್ನಲ್ಲಿರುವ ಪ್ರತಿಭೆಗೆ ತಕ್ಕಷ್ಟು ಕೂಡ ಸಂಬಳ ಸಿಗುವುದಿಲ್ಲ.
ಅಂಕಿಅಂಶಗಳು ಏನು ಹೇಳುತ್ತವೆ?
2021-22ರಲ್ಲಿ ಇತ್ತೀಚೆಗೆ ಬಿಡುಗಡೆಯಾದ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್ ಎಚ್ ಇ) ಪ್ರಕಾರ, ಕಳೆದ 8 ವರ್ಷಗಳಲ್ಲಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉನ್ನತ ಶಿಕ್ಷಣಕ್ಕೆ ದಾಖಲಾಗಿದ್ದಾರೆ. 2014-15ರಿಂದ ಉನ್ನತ ಶಿಕ್ಷಣಕ್ಕೆ (91 ಲಕ್ಷ) ದಾಖಲಾತಿಯಲ್ಲಿ ಒಟ್ಟು ಹೆಚ್ಚಳದಲ್ಲಿ ಶೇ.55ರಷ್ಟು ಮಹಿಳೆಯರಿದ್ದಾರೆ ಎಂದು ಹೇಳಲಾಗಿದೆ. ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಸಮೀಕ್ಷೆಯ ಪ್ರಕಾರ, ಒಟ್ಟಾರೆ ಮಹಿಳಾ ದಾಖಲಾತಿ 2020-21ರಲ್ಲಿ 2.01 ಕೋಟಿಯಿಂದ 2021-22ರ ಅವಧಿಯಲ್ಲಿ 2.07 ಕೋಟಿಗೆ ಏರಿದೆ. ನಿಸ್ಸಂಶಯವಾಗಿ ಹೇಳುವುದಾದರೆ, ಹೆಣ್ಣುಮಕ್ಕಳಲ್ಲಿ ಅಧ್ಯಯನ ಮತ್ತು ಪ್ರಗತಿಯ ಉತ್ಸಾಹ ಪುರುಷರಿಗಿಂತ ಹೆಚ್ಚಾಗಿದೆ ಎನ್ನಬಹುದು. ಸಾಮಾನ್ಯವಾಗಿ, ಪ್ರತಿ ವರ್ಷ 10 ಮತ್ತು 12ನೇ ತರಗತಿಯ ಫಲಿತಾಂಶಗಳಲ್ಲಿ ಹುಡುಗಿಯರು ಹೆಚ್ಚಿನ ಹಾಗೂ ಅತ್ಯುತ್ತಮ ಫಲಿತಾಂಶ ಪಡೆಯುವುದನ್ನು ಸಹ ನಾವು ಕಾಣಬಹುದು.
ಆದರೆ ಉದ್ಯೋಗ ಮತ್ತು ವೃತ್ತಿ ಜೀವನಕ್ಕೆ ಬಂದಾಗ ಹೆಣ್ಣುಮಕ್ಕಳು ಇನ್ನೂ ಏಕೆ ಹಿಂದುಳಿದಿದ್ದಾರೆ? ಜೀವನದ ಪ್ರತಿ ತಿರುವಿನಲ್ಲಿಯೂ ಅವರು ತಮ್ಮ ಗಂಡನನ್ನು ಏಕೆ ಅನುಸರಿಸಲು ಪ್ರಾರಂಭಿಸುತ್ತಾರೆ? ಇದು ನಮ್ಮ ಪಿತೃ ಪ್ರಭುತ್ವದ ಮನಸ್ಥಿತಿ, ಧಾರ್ಮಿಕ ಬೋಧನೆಗಳು ಮತ್ತು ಸರ್ಕಾರದ ನಿರ್ಧಾರಗಳ ಫಲಿತಾಂಶವೇ?
ಅಮೆರಿಕಾದ ಥಿಂಕ್ ಟ್ಯಾಂಕ್ ಪ್ಯೂ ಸಂಶೋಧನಾ ಕೇಂದ್ರ ಇತ್ತೀಚೆಗೆ ಆಸಕ್ತಿದಾಯಕ ಅಧ್ಯಯನ ನಡೆಸಿದೆ. ಇದರಲ್ಲಿ ಭಾರತದ ಮಹಿಳೆಯರ ಬಗ್ಗೆ ಪುರುಷರ ಚಿಂತನೆಯನ್ನು ಅಧ್ಯಯನ ಮಾಡಲಾಗಿದೆ. ಈ ವರದಿಯು 2019ರ ಅಂತ್ಯದಿಂದ 2020ರ ಆರಂಭದವರೆಗೆ ಆಧರಿಸಿದ್ದು, 29,999 ಭಾರತೀಯ ವಯಸ್ಕರಲ್ಲಿ ನಡೆದಿದೆ. ಇದರಲ್ಲಿ, ಹೆಂಡತಿ ಯಾವಾಗಲೂ ತನ್ನ ಗಂಡನಿಗೆ ವಿಧೇಯಳಾಗಿರಬೇಕು ಎಂದು ಹೆಚ್ಚಿನ ಭಾರತೀಯರು ಒಪ್ಪಿಕೊಳ್ಳುತ್ತಾರೆ ಎಂದು ಅಧ್ಯಯನ ಕಂಡುಹಿಡಿದಿದೆ.
ಕಡಿಮೆ ಉದ್ಯೋಗಗಳು ಇದ್ದಾಗ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಿಗೆ ಕೆಲಸ ಮಾಡುವ ಹಕ್ಕಿದೆ ಎಂಬ ಕಲ್ಪನೆಯನ್ನು ಸುಮಾರು ಶೇ.80ರಷ್ಟು ಜನರು ಒಪ್ಪಿಕೊಂಡಿದ್ದಾರೆ. 10ರಲ್ಲಿ 9 (ಶೇ.87) ಭಾರತೀಯರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಹೆಂಡತಿ ಯಾವಾಗಲೂ ತನ್ನ ಗಂಡನಿಗೆ ಯಾವುದೇ ಪರಿಸ್ಥಿತಿಯಲ್ಲೂ ವಿಧೇಯಳಾಗಿರಬೇಕು ಎಂದು ವರದಿ ಹೇಳುತ್ತದೆ.
ಗಂಡಂದಿರ ಬದಲು ಹೆಂಡತಿಯರು ತಮ್ಮ ವೃತ್ತಿ ಮತ್ತು ಉದ್ಯೋಗವನ್ನು ಏಕೆ ತ್ಯಾಗ ಮಾಡುತ್ತಾರೆ? ಭಾರತ ಸೇರಿದಂತೆ ಪ್ರಪಂಚದಾದ್ಯಂತ ಮಹಿಳೆಯುರು ಶಿಕ್ಷಣ ಕ್ಷೇತ್ರದಲ್ಲಿ ಪುರುಷರಿಗಿಂತ ಮುಂದಿದ್ದಾರೆ ಆದರೆ, ಉದ್ಯೋಗ ಮತ್ತು ಉದ್ಯೋಗದ ವಿಷಯದಲ್ಲಿ ಹಾಗೂ ಮದುವೆಯ ನಂತರ ಒಬ್ಬರ ಉದ್ಯೋಗ ಅಥವಾ ವ್ಯವಹಾರವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅವರು ಹೆಚ್ಚಾಗಿ ಹಿಂದುಳಿದಿದ್ದಾರೆ ಹಾಗೂ ತ್ಯಾಗ ಮಾಡುವವರು ಸಹ ಮಹಿಳೆಯರೇ ಆಗಿರುತ್ತಾರೆ.
ಜಾಗತಿಕ ಸಲಹಾ ಕಂಪನಿ ಡೆಲಾಯ್ಟ್ ನ `ಮೆನ್ ಅಟ್ ವರ್ಲ್ಡ್-’ ವರದಿಗಾಗಿ, ಸಂಶೋಧಕರು 10 ದೇಶಗಳಲ್ಲಿ 5,000 ಮಹಿಳೆಯರ ಸಮೀಕ್ಷೆ ನಡೆಸಿದರು. ಇವರಲ್ಲಿ ಶೇ.98ರಷ್ಟು ಮಹಿಳೆಯರು ಪುರುಷರೊಂದಿಗೆ ಸಂಬಂಧ ಹೊಂದಿದ್ದರು. ಈ ಪೈಕಿ ಶೇ.40ರಷ್ಟು ಮಹಿಳೆಯರು ತಮ್ಮ ಪತಿ ಅಥವಾ ಪುರುಷ ಸಂಗಾತಿಯ ವೃತ್ತಿಗೆ ಆದ್ಯತೆ ನೀಡುತ್ತಾರೆ ಎಂದು ಸಮೀಕ್ಷೆ ಕಂಡುಹಿಡಿದಿದೆ.
ಈ ಕಾರಣದಿಂದಲೇ ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಪುರುಷರಿಗಿಂತ ಮುಂದಿದ್ದರೂ, ಉದ್ಯೋಗ ಮತ್ತು ಉದ್ಯೋಗದ ವಿಚಾರದಲ್ಲಿ ಹೆಚ್ಚಾಗಿ ಹಿಂದುಳಿಯುತ್ತಾರೆ.
ಪುರುಷರು ಗಳಿಸುವ ಒಂದು ರೂಪಾಯಿಗೆ ಹೋಲಿಸಿದರೆ ವಿಶ್ವದಾದ್ಯಂತ ಮಹಿಳೆಯರು ಕೇವಲ 77 ಪೈಸೆ ಗಳಿಸುತ್ತಾರೆ ಎಂದು ಸಂಶೋಧನೆ ಹೇಳುತ್ತದೆ. ಆದಾಯದಲ್ಲಿ ವ್ಯತ್ಯಾಸವಾದರೆ ಕಷ್ಟಕಾಲ ಬಂದಾಗ ಕಡಿಮೆ ಹಣ ಗಳಿಸುವವರು ಹಿಂದೆ ಸರಿಯುವುದು ಸಹಜ. ಗಂಡನ ಆದಾಯಕ್ಕೆ ಹೋಲಿಸಿದರೆ ಹೆಣ್ಣಿನ ವರಮಾನ ಹೆಚ್ಚಾಗತೊಡಗಿದರೂ ಗಂಡನ ವೃತ್ತಿಗಿಂತ ಅವಳ ವೃತ್ತಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಏಕೆಂದರೆ ಇಲ್ಲಿ ಗಂಡವ ಅಹಂಕಾರವನ್ನು ತಣಿಸಲು ಮತ್ತು ಕುಟುಂಬದವರ ಅಸಮಾಧಾನವನ್ನು ತಪ್ಪಿಸಲು ತನ್ನ ಕೆಲಸವನ್ನು ಸಹ ಮಹಿಳೆ ತ್ಯಾಗ ಮಾಡಬೇಕಾಗುತ್ತದೆ.
ಮಹಿಳೆಯರು ಈಗ ತಮ್ಮ ಹೃದಯಕ್ಕಿಂತ ಹೆಚ್ಚಾಗಿ ತಮ್ಮ ಬುದ್ಧಿಯನ್ನು ಬಳಸಿಕೊಂಡು ಧೈರ್ಯದಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ತಮ್ಮ ಸ್ವಾವಲಂಬನೆಯನ್ನು ಕಳೆದುಕೊಳ್ಳಬಾರದು. ವಿದ್ಯಾವಂತ ಮತ್ತು ಸ್ವಾವಲಂಬಿ ಮಹಿಳೆ ಪ್ರತಿ ಸಮಸ್ಯೆಯನ್ನು ಪರಿಹರಿಸಬಲ್ಲಳು. ಅವಳು ತನ್ನ ಹೆತ್ತವರಿಗೆ ಅಥವಾ ಅತ್ತೆಗೆ ಬೆಂಬಲದ ವ್ಯವಸ್ಥೆಯಾಗಬಹುದು. ಕುಟುಂಬದ ಸದಸ್ಯರು ಮತ್ತು ಮಹಿಳೆ ಸ್ವತಃ ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದನ್ನು ಕಾರ್ಯಗತಗೊಳಿಸಬೇಕು.





