ತಮ್ಮದೇ ಉದ್ದಿಮೆ ಆರಂಭಿಸಲು ಆಸಕ್ತಿಯುಳ್ಳ ಮಹಿಳೆಯರಿಗಾಗಿ ಗೃಹಶೋಭಾ ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತ ನಿಗಮ ನಿಯಮಿತ (KAPPEC) ಸಹಯೋಗದಲ್ಲಿ `ಗೃಹಶೋಭಾ ಎಂಪವರ್ ಹರ್’ ಇವೆಂಟ್ ನಲ್ಲಿ ಉದ್ದಿಮೆದಾರರ ಸಲುವಾಗಿ, `ಮಹಿಳಾ ಆಹಾರ ಉದ್ದಿಮೆದಾರರಿಗೆ ಸಹಾಯಕ ಉಪಕ್ರಮ’ ಕಾರ್ಯಕ್ರಮವನ್ನು, ಬೆಂಗಳೂರು ನಗರದ ಕೇಂದ್ರ ಭಾಗವಾದ ಟೌನ್ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು. ಇದರ ಪ್ರಮುಖ ಪ್ರಾಯೋಜಕರು ಎಂದರೆ ಜ್ಯೂವೆಲರಿ ಪಾರ್ಟ್ ನರ್ ಕಿಸ್ನಾ ಡೈಮಂಡ್ ಗೋಲ್ಡ್ ಜ್ಯೂವೆಲರಿ, ಅಸೋಸಿಯೇಟಿವ್ ಪಾರ್ಟ್ ನರ್ಸ್ ಹೆಲ್ತ್ ಕೇರ್ ಮೋಲ್ ಬಿಯೋ ಹಾಗೂ KMF ನಂದಿನಿ, ಮೀಡಿಯಾ ಪಾರ್ಟ್ ನರ್ ಪ್ರಜಾಪ್ರಗತಿ ಪ್ರಗತಿ ಟಿವಿ.
ಈ ಕಾರ್ಯಕ್ರಮದ ಇಡೀ ಫೋಕಸ್ ಸಾಮಾನ್ಯ ಮಹಿಳೆಯರಿಗೆ ಆಹಾರ ಉದ್ಯಮದಲ್ಲಿ ತೊಡಗಿಸಿಕೊಳ್ಳುವತ್ತ KAPPEC ಸಂಸ್ಥೆ ನೆರವು, ಸಭಿಕರಾಗಿ ಭಾಗವಹಿಸಿದ ಮಹಿಳೆಯರು ಈ ಸಂಸ್ಥೆಯ ಯೋಜನೆಗಳನ್ನು ಅರ್ಥ ಮಾಡಿಕೊಳ್ಳುವುದು, ಇದರ ಮೂಲಕ ತಾವು ಹೇಗೆ ಆಹಾರ ಉದ್ಯಮದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಸವಿವರವಾಗಿ ತಿಳಿಯಲು ನೂರಾರು ಮಹಿಳೆಯರು ಇಲ್ಲಿ ಸೇರಿದ್ದರು.
ಉದ್ಘಾಟನೆಯ ಸೆಷನ್: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, IAS, ಅವರು ಜ್ಯೋತಿ ಬೆಳಗಿಸುವುದರ ಮೂಲಕ ಪ್ರಾರಂಭೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ಇವರೊಂದಿಗೆ ಕರ್ನಾಟಕ ಹಾಲು ಒಕ್ಕೂಟದ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಬಿ. ಶಿವಸ್ವಾಮಿ, KAS, KAPPEC ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸಿ.ಎನ್. ಶಿವ ಪ್ರಕಾಶ್ ಹಾಗೂ ಪ್ರಜಾಪ್ರಗತಿ ಮತ್ತು ಪ್ರಗತಿ ಟಿವಿ ಸಂಪಾದಕರಾದ ಡಾ. ಎಸ್. ನಾಗಣ್ಣ ವೇದಿಕೆ ಅಲಂಕರಿಸಿದ್ದರು.

ಡಾ. ಶಾಲಿನಿಯವರು ಸಭಿಕರನ್ನು ಉದ್ದೇಶಿಸಿ, ಯಾವ ರೀತಿ ಮಹಿಳೆಯರು ಆಹಾರ ಉದ್ದಿಮೆ ಆರಂಭಿಸಬಹುದು ಎಂಬುದರ ಸೂಕ್ಷ್ಮ ವಿಚಾರಗಳನ್ನು ತಿಳಿಸಿಕೊಟ್ಟು, ಶ್ರದ್ಧೆ ಆಸಕ್ತಿಗಳಿಂದ ಅದನ್ನು ನಡೆಸಿಕೊಂಡು ಹೋಗಲು, KAPPEC ಸಂಸ್ಥೆ ಹೇಗೆ ಮಾರ್ಗದರ್ಶನ ನೀಡುತ್ತದೆ, ಜೊತೆಗೆ ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿಕೊಟ್ಟರು.
ನಂತರ ಶಿವಸ್ವಾಮಿಯವರು KAPPEC ಸಂಸ್ಥೆ ಯಾವ ರೀತಿ ಮಹಿಳಾ ಉದ್ದಿಮೆದಾರರಿಗೆ ಬೆನ್ನೆಲುಬಾಗಿರುತ್ತದೆ, ಸಣ್ಣ ಮೊತ್ತದ ಹೂಡಿಕೆಯಿಂದ ಉದ್ದಿಮೆ ಆರಂಭಿಸಿ, ಈ ಸಂಸ್ಥೆಯಿಂದ ಎಷ್ಟು ಮೊತ್ತದ ಸಬ್ಸಿಡಿ ಹಣದ ನೆರವು ಪಡೆಯಬಹುದು, ಮುಂದೆ ಹೇಗೆ ತಮ್ಮ ಉದ್ದಿಮೆ ಬೆಳೆಸಿಕೊಳ್ಳಬಹುದು ಎಂದು ವಿವರವಾಗಿ ತಿಳಿಸಿಕೊಟ್ಟರು.
ಆ ನಂತರ ಶಿವ ಪ್ರಕಾಶ್ ರವರು ಸವಿವರವಾಗಿ ಈ ಸಂಸ್ಥೆಯ ಆದರ್ಶ ಯೋಜನೆ, ರೂಪುರೇಷೆ ಇತ್ಯಾದಿಗಳನ್ನು ಸಾಮಾನ್ಯ ಮಹಿಳೆಯರಿಗೂ ಅರ್ಥವಾಗುವಂತೆ ಸರಳ ಮಾತುಗಳಲ್ಲಿ ಮನದಟ್ಟು ಮಾಡಿಕೊಟ್ಟರು. ನಿರುದ್ಯೋಗ ಸಮಸ್ಯೆ ನಿವಾರಣೆ, ಸಿರಿಧಾನ್ಯಗಳ ಮಹತ್ವ, ಅದರ ಆಹಾರ ಸಂಸ್ಕರಣೆಯನ್ನು ರೂಢಿಸಿಕೊಳ್ಳುವ ಕ್ರಮ, DRP ಗಳು ಅಂದ್ರೆ ಪ್ರತಿ ಜಿಲ್ಲೆಯಲ್ಲೂ ಇರುವ ತಮ್ಮ ಪ್ರತಿನಿಧಿಗಳ ಕುರಿತು ವಿವರಿಸಿ ಅವರಿಂದ ಉದ್ದಿಮೆ ಆರಂಭಿಸಲು ಸಲಹೆ, ಕ್ರಮ ಇತ್ಯಾದಿಗಳ ಬಗ್ಗೆ ತಿಳಿಸಿದರು.
ಅನಂತರ ಡಾ.ನಾಗಣ್ಣನವರು ಮಹಿಳೆಯರು ಎಂಥ ಉತ್ತಮ ಉದ್ಯಮಶೀಲರಾಗಬಹುದು, ಅವರ ಪ್ರಾಬಲ್ಯದಿಂದ ಹೇಗೆ ಉದ್ಯಮ ಬೆಳೆಯುತ್ತದೆ, ಹಳ್ಳಿಗಾಡು ಪ್ರದೇಶದಿಂದ ನವ ನಗರಗಳವರೆಗಿನ ಮಹಿಳಾ ಉದ್ಯಮಗಳ ಬೆಳವಣಿಗೆ, ಇಂದಿನ ದಿನಗಳಲ್ಲಿ ಇದರ ಅನಿವಾರ್ಯತೆ, ಹೆಣ್ಣುಮಕ್ಕಳಿಗೆ ಇದು ಹೇಗೆ ಪೂರಕ ಎಂಬುದರ ಕುರಿತು ಹಲವು ಕಿವಿಮಾತುಗಳನ್ನು ತಿಳಿಸಿಕೊಟ್ಟರು.

PMFME-KAPPEC ಸೆಷನ್: ಈ ಕುರಿತಾಗಿ KAPPEC ನ ಪನ್ನಗಶ್ರೀ ಸವಿವರಾಗಿ PMFME-SPMU ಕುರಿತಾಗಿ ವಿವರಗಳನ್ನು ತಿಳಿಸಿಕೊಟ್ಟರು. ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪಿಸಲು, ಅಭಿವೃದ್ಧಿಗೆ ಶೇ.50 ರಷ್ಟು, ಗರಿಷ್ಠ 15 ಲಕ್ಷಗಳ ಸಾಲ ಸಂಪರ್ಕಿತ ಸಹಾಯಧನ ಇತ್ಯಾದಿ ವಿವರಗಳನ್ನು ತಿಳಿಸಿದರು. ಮುಖ್ಯ ಯೋಜನೆಯ ಘಟಕಗಳು, ಇದಕ್ಕೆ ವೈಯಕ್ತಿಕ ಹಾಗೂ ರೈತ ಸಂಸ್ಥೆಯ ಉದ್ದಿಮೆದಾರರಲ್ಲಿ ಯಾರು ಅರ್ಹರು, ಸ್ಥಾಪಿಸಬಹುದಾದ ಘಟಕಗಳು, ಅರ್ಜಿ ಸಲ್ಲಿಕೆಯ ಕ್ರಮ ಪ್ರಾಥಮಿಕ ಬಂಡವಾಳ, NRLM/NULM ಅಡಿಯ ಸ್ವಸಹಾಯ ಸಂಘಗಳ ಕಾರ್ಯನಿರ್ಹಣೆ, ಸಾಮಾನ್ಯ ಮೂಲಭೂತ ಸೌಕರ್ಯ ಸ್ಥಾಪನೆ, ಬ್ರಾಂಡಿಂಗ್ ಹಾಗೂ ಮಾರುಕಟ್ಟೆಗೆ ಸಹಾಯ. ಇತ್ಯಾದಿ ಎಲ್ಲದರ ಸವಿವರಣೆ ನೀಡಿದರು. ಈ ಕುರಿತಾಗಿ ಬಂದಿದ್ದ ಮಹಿಳೆಯರು ತಮ್ಮ ಅನೇಕ ಸಂದೇಹಗಳನ್ನು ಕೇಳಿ, ಶಿವ ಪ್ರಕಾಶ್ ರಿಂದ ಉತ್ತರ ಪಡೆದುಕೊಂಡರು.
ಮಹಿಳಾ ಉದ್ದಿಮೆದಾರರ ಸಂವಾದ : ಇದರಲ್ಲಿ KAPPEC ಸಂಸ್ಥೆಯಿಂದ ಲಾಭ ಪಡೆದು ಉನ್ನತ ಉದ್ದಿಮೆದಾರರಾದ ಮಹಿಳೆಯರು ಸುದೀರ್ಘವಾಗಿ ಹೇಗೆ ತಾವು ಈ ಸಂಸ್ಥೆಯ ನೆರವು ಪಡೆದು, ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು ಎಂದು ವಿವರಿಸಿದರು.

ಇದರಲ್ಲಿ KAPPEC ನ ADA ಜೆ. ದಿವ್ಯಶ್ರೀ ಸಂವಾದದ ಮಹಿಳೆಯರನ್ನು ಸಭಿಕರಿಗೆ ಪರಿಚಯಿಸಿ, ಅವರನ್ನು ಪ್ರಶ್ನೆಗಳ ಮೂಲಕ ತಮ್ಮ ಅನುಭವ ಹಂಚಿಕೊಳ್ಳುವಂತೆ ಕಾರ್ಯಕ್ರಮ ನಡೆಸಿಕೊಟ್ಟರು. AWAKE ಸಂಸ್ಥೆಯ ಅಧ್ಯಕ್ಷೆ ಭುವನೇಶ್ವರಿ ಇಲ್ಲಿ ಸಂವಾದದ ಅಧ್ಯಕ್ಷೆ ಆಗಿದ್ದರು. ಶ್ರೀಶೈಲಜಾ ಆರ್ಗ್ಯಾನಿಕ್ಸ್ ನ ಶೈಲಜಾ, ಸಿದ್ಧಿವಿನಾಯಕ ಫುಡ್ಸ್ ನ ಯೋಗಿತಾ, ರೆಫ್ರೀಕೋ ಕಾಫಿಯ ರಂಜಿತಾ, ನ್ಯೂಟ್ರಿಯೋದ ಪಾವನಾ ಮುಂತಾದವರು ತಮ್ಮ ಜರ್ನಿ ಬಗ್ಗೆ ಹಂಚಿಕೊಂಡರು.
ಸೂಪರ್ ಡ್ಯುಯೋ ಅಡುಗೆ ಸ್ಪರ್ಧೆ : ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದ ಮಹಿಳೆಯರ ಹೆಸರಿನ ಚೀಟಿಯನ್ನು ಲಕ್ಕಿ ಡ್ರಾ ಮೂಲಕ ಆರಿಸಿದ ಶೆಫ್ ಆಶಾ ಸೋಮನಾಥ್, 10 ಮಂದಿ ಮಹಿಳೆಯರು ಅತ್ಯಾಸಕ್ತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು.

ಗೃಹಶೋಭಾ ವತಿಯಿಂದ ವಿಶೇಷವಾಗಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ 20 ನಿಮಿಷಗಳ ಕಾಲಾವಧಿ ನೀಡಿ, ಯಾರು ಅತ್ಯುತ್ತಮ, ಪೌಷ್ಟಿಕ ಆಹಾರ ತಯಾರಿಸಿದ್ದರೋ, ಅದನ್ನು ಸವಿದು ಶೆಫ್ ತೀರ್ಪಿತ್ತರು. ರಾಗಿ ಪಕೋಡ ತಯಾರಿಸಿದ್ದ ಗೌರಿ-ಶಶಿಕಲಾಗೆ ಮೊದಲನೇ, ಮಿಶ್ರ ಹಿಟ್ಟಿನ ರೊಟ್ಟಿ ತಯಾರಿಸಿದ ವಿನುತಾ-ಶ್ರೀಶೈಲಾಗೆ 2ನೇ, ಮಲ್ಟಿಗ್ರೇನ್ ರೊಟ್ಟಿ ತಯಾರಿಸಿದ ಗಂಗಾಂಬಿಕೆ-ದೀಪಶ್ರೀಗೆ 3ನೇ, ಕೇಸರಿಭಾತ್ ತಯಾರಿಸಿದ್ದ ತನುಶ್ರೀ-ಕಾವ್ಯಾ ಹಾಗೂ ಪೌಷ್ಟಿಕ ತರಕಾರಿ ರೊಟ್ಟಿ ತಯಾರಿಸಿದ ಕುಸುಮಾ-ಶಾರದಾರಿಗೆ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು.
ನ್ಯೂಟ್ರಿಷನಿಸ್ಟ್ ಸೆಷನ್: ನ್ಯೂಟ್ರಿಷನಿಸ್ಟ್ ಸುಮಾ ಚೇತನ್ ಮಹಿಳೆಯರ ಆಹಾರ ಕ್ರಮ, ಸ್ತ್ರೀ ಸ್ವಾಸ್ಥ್ಯ ಸೌಖ್ಯ, ಅವರು ಪಾಲಿಸಬೇಕಾದ ಆರೋಗ್ಯದ ವಿಧಾನಗಳು ಇತ್ಯಾದಿಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.

PCOD, ಸರ್ವೈಕಲ್ ಕ್ಯಾನ್ಸರ್ ಮುಂತಾದವು ಕಾಡದಂತೆ ವಹಿಸಬೇಕಾದ ಆಹಾರ ಕ್ರಮದ ಬಗ್ಗೆ, ಫೈಬರ್ ಯುಕ್ತ ಆಹಾರದಲ್ಲಿನ ಮಹತ್ವ, ವಿಟಮಿನ್ B12ಇತ್ಯಾದಿಗಳನ್ನು ಗಳಿಸಲು ನೈಸರ್ಗಿಕ ಲಭ್ಯವಿರುವ ಪಾಲಕ್ ಸೊಪ್ಪು, ನುಗ್ಗೇಸೊಪ್ಪು, ಅಂಜೂರ ಇತ್ಯಾದಿ ಸೇವಿಸಬೇಕೆಂದು ಸಲಹೆ ಇತ್ತರು. ಮಹಿಳೆಯರು ಥೈರಾಯ್ಡ್ ಇತ್ಯಾದಿ ತಮ್ಮನ್ನು ಕಾಡುವ ಅನೇಕ ಸಮಸ್ಯೆಗಳಿಗೆ ಎಂಥ ಪಥ್ಯ ಎಂದು ಇವರಿಂದ ಸಂದೇಹ ನಿವಾರಿಸಿಕೊಂಡರು.
ವಿಶೇಷ ಬಹುಮಾನ : ಈ ಸಲದ ಇವೆಂಟ್ ನಲ್ಲಿ, ಕಿಸ್ನಾ ಡೈಮಂಡ್ ಗೋಲ್ಡ್ ಜ್ಯೂವೆಲರಿ ಪರವಾಗಿ ಪುರುಷೋತ್ತಮ್ ಸಭಿಕರಿಗೆ ತಮ್ಮ ಬ್ರಾಂಡ್ ಕುರಿತು ವಿವರಿಸಿದರು. ವಿಕ್ರಮ್ ಮನ್ ಸುಖಾನಿ ಲಕ್ಕಿ ಡಿಪ್ ಮೂಲಕ ಆರಿಸಿ, ಅದೃಷ್ಟಶಾಲಿ ಶಿಲ್ಪಾರಿಗೆ ಡೈಮಂಡ್ ಪೆಂಡೆಂಟ್ ನ್ನು ವಿತರಿಸಿದರು.

ಗೇಮಿಂಗ್ ಸೆಷನ್ : ಇಡೀ ಕಾರ್ಯಕ್ರಮದ ನಿರೂಪಣೆ ಮಾಡುತ್ತಾ ಆ್ಯಂಕರ್ ಭಾನುಪ್ರಿಯಾ, ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳಾಮಣಿಗಳಿಗೆ ಅನೇಕ ರಸಪ್ರಶ್ನೆಗಳನ್ನು ಕೇಳಿದರು. ಅತ್ಯಾಕರ್ಷಕ ಬಹುಮಾನಗಳನ್ನು ಗೃಹಶೋಭಾ ಸಿಬ್ಬಂದಿ ಆನ್ ದಿ ಸ್ಪಾಟ್ ವಿತರಿಸಿದರು.


ಇಷ್ಟೆಲ್ಲಾ ಕಾರ್ಯಕ್ರಮ ಮುಗಿಸಿಕೊಂಡು, ಇವೆಂಟ್ ಗೆ ಬಂದಿದ್ದ ಹೆಂಗಸರು, ಅತ್ಯುತ್ತಮ ಪೌಷ್ಟಿಕ ಆಹಾರ ಸೇವಿಸಿ, ಪ್ರತಿಯೊಬ್ಬರೂ ಅಪಾರ ಉಡುಗೊರೆ ತುಂಬಿದ್ದ ಗುಡೀ ಬ್ಯಾಗ್ ನ್ನು ಪಡೆದು, ಸಂತೋಷದಿಂದ ವಿದಾಯ ಕೋರಿದರು. ಇವೆಂಟ್ ಬಹಳ ಯಶಸ್ವಿಯಾಗಿ ನೆರವೇರಿತು!
– ಪ್ರತಿನಿಧಿ





