ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಹೋರಾಟದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಾವುದೇ ರಾಜಿ ಮಾಡಿಕೊಳ್ಳದೇ ನಿಂತಿದ್ದೇನೆ ಎಂದು ನಿರ್ಮಾಪಕ ಸಾ.ರಾ. ಗೋವಿಂದು ತಿಳಿಸಿದ್ದಾರೆ. ನಟ ಚೇತನ್ ಅಹಿಂಸಾ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಹೋರಾಟಕ್ಕೆ ಪ್ರೇರಣೆ ಡಾ. ರಾಜ್ ಕುಮಾರ್ ಎಂದು ಹೇಳಿದರು
ರಾಜ್ ಕುಮಾರ್ ಸಮಾಧಿ ವಿಚಾರದಲ್ಲಿ ಚೇತನ್ ನೀಡಿದ ದೂರಿನ ಬಗ್ಗೆ ಮಾತನಾಡಿದ ಗೋವಿಂದು, “ಸಂಸ್ಕೃತಿ ಮತ್ತು ಇತಿಹಾಸದ ಅರಿವು ಇಲ್ಲದೆ ಆರೋಪ ಮಾಡಲಾಗುತ್ತಿದೆ” ಎಂದು ತಿರುಗೇಟು ನೀಡಿದರು. ಗೋಕಾಕ್ ಚಳುವಳಿಯಲ್ಲಿ ಡಾ. ರಾಜ್ಕುಮಾರ್ ವಹಿಸಿದ್ದ ಪಾತ್ರ ಮತ್ತು ಕನ್ನಡ ಹೋರಾಟದ ಹಿನ್ನೆಲೆಯನ್ನು ಪ್ರಶ್ನಿಸಿದ ಅವರು, ಪ್ರಶಸ್ತಿಗಳು ಹೋರಾಟದ ಫಲವಾಗಿ ಸಿಗುತ್ತವೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಡಾ. ರಾಜ್ ಕುಮಾರ್ ಅವರಿಗೆ ಜಾಗದ ಕೊರತೆ ಇರಲಿಲ್ಲ. ಕುಂಬಳಗೋಡು ಪ್ರದೇಶದಲ್ಲಿ ಅವರಿಗೆ ಸುಮಾರು 15 ಎಕರೆ ಜಮೀನು ಇದ್ದರೂ, ತಮ್ಮ ಸಹೋದರರ ಕುಟುಂಬದವರು ಸಮಾಧಿಯಾಗಿರುವ ಸ್ಥಳದಲ್ಲೇ ತಾವೂ ಇರಬೇಕೆಂದು ಅವರು ಬಯಸಿದ್ದರು. ಆದರೆ ಅಭಿಮಾನಿಗಳ ಅನುಕೂಲಕ್ಕಾಗಿ ಇಂದಿನ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲಾಗಿದೆ ಎಂದು ಗೋವಿಂದು ಸ್ಪಷ್ಟಪಡಿಸಿದರು.
ತಮ್ಮ ವಿರುದ್ಧ ದಾಖಲಾಗಿರುವ ಆರೋಪಗಳನ್ನು ತಳ್ಳಿಹಾಕಿದ ಅವರು, ಯಾವುದೇ ಕಾನೂನುಬಾಹಿರ ಕೃತ್ಯ ಮಾಡಿಲ್ಲ ಎಂದು ಹೇಳಿದರು. ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿಗಳಂತೆ ಯಾವುದೇ ಪ್ರತಿಭಟನೆ ಅಥವಾ ಮೆರವಣಿಗೆ ನಡೆಸದಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಚೇತನ್ ನಡೆಸುತ್ತಿರುವ ಕ್ರಮಗಳ ವಿರುದ್ಧ ಸಮೂಹವಾಗಿ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ