– ರಾಘವೇಂದ್ರ ಅಡಿಗ ಎಚ್ಚೆನ್.
ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಭಾರೀ ಆಘಾತ ಉಂಟುಮಾಡುವಂತಹ ದುರಂತ ಸುದ್ದಿ ಹೊರಬಿದ್ದಿದೆ. ಖ್ಯಾತ ನಿರ್ಮಾಪಕ ಆರ್. ಬಿ. ಚೌಧರಿ ಅವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿ ಅಪಾರ ಖ್ಯಾತಿ ಪಡೆದಿದ್ದ ಅವರು, ತಮ್ಮ ವೃತ್ತಿಜೀವನದಲ್ಲಿ ಅನೇಕ ಸ್ಟಾರ್ಗಳನ್ನು ಬೆಳೆಸಿದ ವ್ಯಕ್ತಿಯಾಗಿದ್ದರು. ಅವರ ಅಗಲಿಕೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಮೂಲತಃ ರಾಜಸ್ಥಾನದ ಉದಯಪುರ ಮೂಲದ ಚೌಧರಿ ಅವರು, ಕೆಲವು ದಿನಗಳ ಹಿಂದೆ ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರಯಾಣಿಸುತ್ತಿದ್ದಾಗ ಭೀಕರ ಕಾರು ಅಪಘಾತ ಸಂಭವಿಸಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಮೇ 6ರಂದು ಚೆನ್ನೈಗೆ ತರಲಾಗುತ್ತಿದ್ದು, ಅಲ್ಲಿ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆಯಲಿದ್ದಾರೆ.
ಚೌಧರಿ ಅವರು ‘ಸೂಪರ್ ಗುಡ್ ಫಿಲ್ಮ್ಸ್’ ಸಂಸ್ಥೆಯ ಮೂಲಕ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಗಳಿಸಿದ್ದರು. 1990ರ ದಶಕದಿಂದಲೇ ಅವರು ನಿರ್ಮಾಣ ಮಾಡಿದ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದ್ದವು. ‘ಸೂರ್ಯವಂಶಂ’, ‘ಪುದುವಸಂತಂ’, ‘ನಟ್ಟಮೈ’, ‘ರಾಜಾ’, ‘ಆನಂದಂ’ ಮೊದಲಾದ ಹಿಟ್ ಸಿನಿಮಾಗಳು ಅವರ ಬ್ಯಾನರ್ನಡಿಯಲ್ಲಿ ಮೂಡಿಬಂದಿವೆ.
ಚಿತ್ರರಂಗದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದರು. ಅನೇಕ ನಿರ್ದೇಶಕರು ಮತ್ತು ನಟರು ಅವರ ಸಹಕಾರದಿಂದಲೇ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ವಿಜಯ್ ಅವರ ವೃತ್ತಿಜೀವನದಲ್ಲಿ ಚೌಧರಿ ಮಹತ್ವದ ಪಾತ್ರವಹಿಸಿದ್ದರು. ‘ಪೂವೇ ಉನಕ್ಕಾಗ’, ‘ಲವ್ ಟುಡೇ’, ‘ತುಳ್ಳಾದ ಮನಮುಮ್ ತುಳ್ಳುಮ್’, ‘ಶಾಹಜಹಾನ್’, ‘ತಿರುಪಾಚಿ’ ಮೊದಲಾದ ಸಿನಿಮಾಗಳು ವಿಜಯ್ ಅವರನ್ನು ಸ್ಟಾರ್ ನಟನನ್ನಾಗಿ ರೂಪಿಸಿವೆ.
ವಿಜಯ್ ಅವರ ಚಾಕೊಲೇಟ್ ಬಾಯ್ ಇಮೇಜ್ ಅನ್ನು ಬಲಪಡಿಸಿದ ಚಿತ್ರಗಳಿಗೂ, ನಂತರದ ಮಾಸ್ ಹೀರೋ ಆಗಿ ಅವರನ್ನು ರೂಪಿಸಿದ ಸಿನಿಮಾಗಳಿಗೂ ಚೌಧರಿ ಪ್ರಮುಖ ಕಾರಣರಾಗಿದ್ದರು. ಅವರಿಬ್ಬರ ನಡುವಿನ ಸಂಬಂಧ ವೃತ್ತಿಜೀವನಕ್ಕಿಂತಲೂ ಹೆಚ್ಚು ಆತ್ಮೀಯವಾಗಿತ್ತು.





