ಕೇರಳ ರಾಜ್ಯದ ಮುಖ್ಯಮಂತ್ರಿ ಆಯ್ಕೆ ಕುರಿತ ಕಾಂಗ್ರೆಸ್ನ ಸಸ್ಪೆನ್ಸ್ಗೆ ಅಂತ್ಯವಾಗಿದ್ದು, ವಿ. ಡಿ. ಸತೀಶನ್ ಅವರೇ ನೂತನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗಿದೆ.
ವಿರೋಧ ಪಕ್ಷದ ನಾಯಕರಾಗಿದ್ದ ವಿ.ಡಿ.ಸತೀಶನ್ ಅವರನ್ನು ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಈ ಮುಖ್ಯಮಂತ್ರಿ ಪದವಿ ರೇಸ್ ನಲ್ಲಿ ಕೆ.ಸಿ.ವೇಣುಗೋಪಾಲ್ ಮತ್ತು ರಮೇಶ್ ಚನ್ನಿತ್ತಾಲ್ ಹೆಸರುಗಳು ಕೇಳಿಬಂದಿತ್ತಾದರೂ ವಿ.ಡಿ ಸತೀಶನ್ ಮುನ್ನಡೆ ಸಾಧಿಸಿ ಈ ಸ್ಥಾನವನ್ನು ಪಡೆದಿದ್ದಾರೆ.
2026ರ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಭರ್ಜರಿ ಜಯ ಸಾಧಿಸಿದ ಬಳಿಕ ಮುಖ್ಯಮಂತ್ರಿ ಆಯ್ಕೆ ಕುರಿತು ನಡೆಯುತ್ತಿದ್ದ ಚರ್ಚೆಗೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬಂದಿದೆ.
ಕಾಂಗ್ರೆಸ್ ನೇತೃತ್ವದ UDF ಕೇರಳ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದು ಭಾರೀ ಜನಾದೇಶ ಪಡೆದಿತ್ತು. ಇದರೊಂದಿಗೆ ಪಿಣರಾಯಿ ನೇತೃತ್ವದ ಎಡಪಕ್ಷದ ಸರ್ಕಾರವನ್ನು ಸೋಲಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದೆ.
ದೆಹಲಿಯಲ್ಲಿ ಹಲವು ದಿನಗಳಿಂದ ನಡೆದ ಚರ್ಚೆಗಳು, ಲಾಬಿ ಹಾಗೂ ಸಮಾಲೋಚನೆಗಳ ಬಳಿಕ, ಕಾಂಗ್ರೆಸ್ ತನ್ನ ವಿಧಾನಮಂಡಲ ಪಕ್ಷದ ನಾಯಕನ ಹೆಸರನ್ನು ಅಂತಿಮವಾಗಿ ಇಂದು ಘೋಷಣೆ ಮಾಡಿದೆ.
ಹಿಂದಿನ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಡಿ.ಸತೀಶನ್ ಅವರು ಎಡಪಕ್ಷ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಕ್ಷದ ಕಾರ್ಯಕರ್ತರು ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಸೇರಿ ಪ್ರಮುಖ ಮೈತ್ರಿ ಪಕ್ಷಗಳ ಬೆಂಬಲವೂ ಅವರಿಗೆ ದೊರಕಿದ್ದು ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಕಾರಣ ಎನ್ನಲಾಗಿದೆ.





