‘ಜೀ’ ದೇಶದ ಮೊದಲ ಬಹುಭಾಷಾ ಕಿರುಚಿತ್ರ ಸ್ಪರ್ಧೆ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ನ ಗ್ರಾಂಡ್ ಫಿನಾಲೆಗೆ ಸಿದ್ಧತೆ ಮಾಡಿಕೊಂಡಿದೆ.
ನವ ಪೀಳಿಗೆಯ ಕಥೆಗಾರರನ್ನು ಗುರುತಿಸುವ ನಿಟ್ಟಿನಲ್ಲಿ 2026 ರ ಆರಂಭದಲ್ಲಿ ಘೋಷಿಸಲಾದ ಈ ಸ್ಪರ್ಧೆ, ದೇಶಾದ್ಯಂತ ಉದಯೋನ್ಮುಖ ಪ್ರತಿಭೆಗಳು ತಮ್ಮ ಸ್ಮಾರ್ಟ್ಫೋನ್ಗಳಲ್ಲೇ ಚಿತ್ರೀಕರಿಸಿದ ವಿಶಿಷ್ಟ ಕಿರುಚಿತ್ರಗಳಿಗೆ ವೇದಿಕೆಯಾಗಿದೆ.
ಎಂಟು ಭಾರತೀಯ ಭಾಷೆಗಳಲ್ಲಿ ನಡೆದ ಈ ಸ್ಪರ್ಧೆಯ ಮುಖ್ಯ ಉದ್ದೇಶ ಸಿನಿಮಾ ನಿರ್ಮಾಣ ಕೇವಲ ಕೆಲವರಿಗಷ್ಟೇ ಸೀಮಿತವಾಗದೆ, ದೇಶದ ಮೂಲೆ ಮೂಲೆಯ ವಿಭಿನ್ನ ಸಂಸ್ಕೃತಿ ಮತ್ತು ಕಥೆಗಳಿಗೆ ಸೂಕ್ತ ಮನ್ನಣೆ ಸಿಗುವಂತೆ ಮಾಡುವುದು.
ಸ್ಪರ್ಧೆಯು ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕರನ್ನೊಳಗೊಂಡ ಜ್ಯೂರಿ ಸಮಿತಿಯು ವಿಜೇತರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಪ್ರತಿಷ್ಠಿತ ಸಮಿತಿಯಲ್ಲಿ ಅನುರಾಗ್ ಕಶ್ಯಪ್ (ಹಿಂದಿ), ರವಿ ಜಾಧವ್ (ಮರಾಠಿ), ನಾಗ್ ಅಶ್ವಿನ್ (ತೆಲುಗು), ಸೃಜಿತ್ ಮುಖರ್ಜಿ (ಬೆಂಗಾಲಿ), ಪಿ. ಸಮುದ್ರಖಣಿ (ತಮಿಳು), ಹೇಮಂತ್ ರಾವ್ (ಕನ್ನಡ) ಮತ್ತು ಲಿಜೋ ಜೋಸ್ ಪೆಲ್ಲಿಸ್ಸೆರಿ (ಮಲಯಾಳಂ) ಭಾಗಿಯಾಗಿದ್ದಾರೆ.
ಸಮಾರೋಪದಲ್ಲಿ ಪತ್ರಕರ್ತ ರಾಜೀವ್ ಮಸಂದ್ ಅವರ ನೇತೃತ್ವದಲ್ಲಿ ಜ್ಯೂರಿ ಸದಸ್ಯರ ವಿಶೇಷ ಸಂವಾದ ನಡೆಯಲಿದ್ದು, ಕಥೆ ಹೇಳುವ ಶೈಲಿ, ಪ್ರಾದೇಶಿಕ ಸಿನಿಮಾಗಳು ಮತ್ತು ಭಾರತೀಯ ಚಿತ್ರರಂಗದ ಭವಿಷ್ಯದ ಕುರಿತು ಚರ್ಚೆ ನಡೆಯಲಿದೆ.
ಮುಂಬೈನ ಪ್ರಸಿದ್ಧ ಹೋಟೆಲ್ನಲ್ಲಿ ನಡೆಯಲಿರುವ ಈ ಸಮಾರೋಪದಲ್ಲಿ ಚಿತ್ರರಂಗದ ಗಣ್ಯರು, ಮಾಧ್ಯಮ ಮುಖ್ಯಸ್ಥರು ಹಾಗೂ ಯುವ ನಿರ್ದೇಶಕರು ಒಂದೆಡೆ ಸೇರಲಿದ್ದಾರೆ. ಎಂಟು ಭಾಷಾ ವಿಭಾಗಗಳಲ್ಲಿ ವಿಜೇತರನ್ನು ಘೋಷಿಸಲಾಗುತ್ತಿದ್ದು; ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಕಥೆ, ಅತ್ಯುತ್ತಮ ಸಂಗೀತ, ಅತ್ಯುತ್ತಮ ಹಾಸ್ಯನಟ ಸೇರಿದಂತೆ ಜ್ಯೂರಿಗಳ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಯುವ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಆಯ್ಕೆಯಾದ ಅತ್ಯುತ್ತಮ ಕಿರುಚಿತ್ರಗಳ ಪ್ರಸಾರ ಹಕ್ಕುಗಳನ್ನು ಜೀ ಸಂಸ್ಥೆ ಪಡೆಯಲಿದೆ. ಈ ಕಿರುಚಿತ್ರಗಳನ್ನು ZEE5 ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್ ಮಾಡುವುದರ ಜೊತೆಗೆ, ಜೀ ಟಿವಿ, ಜೀ ಕನ್ನಡ, ಜೀ ಮರಾಠಿ, ಜೀ ಬಾಂಗ್ಲಾ, ಜೀ ತೆಲುಗು, ಜೀ ತಮಿಳು, ಜೀ ಕೇರಳಂ, ಜೀ ಜೆಸ್ಟ್ ಮತ್ತು ಜಿಂಗ್ ವಾಹಿನಿಗಳಲ್ಲಿಯೂ ಪ್ರಸಾರವಾಗಲಿವೆ. ಯುವ ಕಥೆಗಾರರಿಗೆ ಡಿಜಿಟಲ್ ಹಾಗೂ ಟಿವಿ ಮಾಧ್ಯಮಗಳೆರಡರಲ್ಲೂ ದೊಡ್ಡ ಮಟ್ಟದ ವೇದಿಕೆಯಾಗಲಿದೆ. ಇದರೊಂದಿಗೆ ಪ್ರತಿ ಭಾಷಾ ವಿಭಾಗದ ಒಬ್ಬ ವಿಜೇತರಿಗೆ ತಲಾ 2,00,000 ರೂಪಾಯಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು.
‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ನ ಕುರಿತು ಮಾತನಾಡಿರುವ ನಿರ್ದೇಶಕ ಅನುರಾಗ್ ಕಶ್ಯಪ್, ಪ್ರಯೋಗಗಳನ್ನು ಮಾಡಿ, ಸೋಲು ಗೆಲುವುಗಳ ನಡುವೆ ತಮ್ಮ ವಿಭಿನ್ನ ಶೈಲಿಯ ಕಥೆಗಳನ್ನು ಹೇಳಲು ಕಿರುಚಿತ್ರಗಳು ಸಹಕಾರಿಯಾಗಿವೆ. ಈ ಸ್ಪರ್ಧೆಯು ಮುಕ್ತ ಅಭಿವ್ಯಕ್ತಿಗೆ ರಾಷ್ಟ್ರ ಮಟ್ಟದ ವೇದಿಕೆ ಕಲ್ಪಿಸಿದೆ” ಎಂದರು.
ನಿರ್ದೇಶಕ ಹೇಮಂತ್ ರಾವ್ ಮಾತನಾಡಿ, “ಹೊಸ ಪ್ರಯೋಗಗಳನ್ನು ನಾವು ಎಷ್ಟು ಧೈರ್ಯದಿಂದ ಬೆಂಬಲಿಸುತ್ತೇವೆಯೋ, ಅದರ ಮೇಲೆ ಚಿತ್ರರಂಗದ ಭವಿಷ್ಯ ನಿಂತಿದೆ. ಈ ವೇದಿಕೆಯು ಯುವ ನಿರ್ದೇಶಕರಿಗೆ ಯಾವುದೇ ಕಟ್ಟುಪಾಡುಗಳಿಲ್ಲದೆ ತಮ್ಮ ಕಥೆಗಳನ್ನು ಹೇಳಲು ಆತ್ಮವಿಶ್ವಾಸ ನೀಡಿದೆ” ಎಂದಿದ್ದಾರೆ.
ನಾಗ್ ಅಶ್ವಿನ್ ಮಾತನಾಡಿ, “ಯಾವುದೇ ಚೌಕಟ್ಟುಗಳಿಗೆ ಸಿಲುಕದ ಹೊಸ ಪ್ರತಿಭೆಗಳು ಅದ್ಭುತ ಆಲೋಚನೆಗಳನ್ನು ಹೊಂದಿರುತ್ತಾರೆ . ಇಂದಿನ ತಂತ್ರಜ್ಞಾನದ ಸುಲಭ ಲಭ್ಯತೆ ಯುವ ಪೀಳಿಗೆಯ ಕಲ್ಪನಾ ಶಕ್ತಿಗೆ ಹೊಸ ಆಯಾಮ ನೀಡಿದೆ” ಎಂದು ಹೇಳಿದ್ದಾರೆ.
ರವಿ ಜಾಧವ್ ಮಾತನಾಡಿ,”ಭಾರತೀಯ ಚಿತ್ರರಂಗದ ಅಸಲಿ ಶಕ್ತಿ ಇರುವುದೇ ನಮ್ಮ ಪ್ರಾದೇಶಿಕ ಕಥೆಗಳಲ್ಲಿ. ಇದು ವಿಭಿನ್ನ ಹಿನ್ನೆಲೆಯ ಧ್ವನಿಗಳನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ಅದ್ಭುತ ಪ್ರಯತ್ನ” ಎಂದಿದ್ದಾರೆ.
ಸೃಜಿತ್ ಮುಖರ್ಜಿ ಮಾತನಾಡಿ, ” ಸಿನಿಮಾಗಳಿಗೆ ಈಗ ಭಾಷೆ ಮತ್ತು ಭೌಗೋಳಿಕ ಗಡಿಗಳಿಲ್ಲ. ಇಂತಹ ವೇದಿಕೆಗಳು ಒಳ್ಳೆ ಕಥೆಗಳಿಗೆ ಉತ್ತಮ ಅವಕಾಶ ನೀಡಿ ಪ್ರೇಕ್ಷಕರನ್ನು ತಲುಪುವಲ್ಲಿ ಸಹಕಾರಿಯಾಗಿವೆ” ಎಂದು ಹೇಳಿದ್ದಾರೆ.
ಲಿಜೋ ಜೋಸ್ ಪೆಲ್ಲಿಸ್ಸೆರಿ, “ಭಾರತೀಯ ಸಿನಿಮಾರಂಗ ಸದಾ ಹೊಸತನವನ್ನು ಬಯಸುತ್ತದೆ ಕಥೆ ಹೇಳುವ ಹಳೆಯ ಶೈಲಿಯನ್ನು ಮೀರಿ, ಪ್ರೇಕ್ಷಕರನ್ನು ಬೆರಗುಗೊಳಿಸುವ ಹೊಸ ಧ್ವನಿಗಳಿಗೆ ಅವಕಾಶ ನೀಡುವುದು ಮುಖ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಿ. ಸಮುದ್ರಖಣಿ, “ನೈಜ ಜೀವನದ ಅನುಭವಗಳಿಂದ ಬಂದ ಕಥೆಗಳು ನೇರವಾಗಿ ಪ್ರೇಕ್ಷಕರ ಮನ ಮುಟ್ಟುತ್ತವೆ. ಅಂತಹ ಕಥೆಗಳಿಗೆ ಇಲ್ಲಿ ಮನ್ನಣೆ ಸಿಗುತ್ತಿರುವುದು ಸಂತಸದ ವಿಚಾರ. ಜೀ ಸಂಸ್ಥೆ ಆಯೋಜಿಸುತ್ತಿರುವ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಸಮಾರೋಪವು, ಕೇವಲ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾಗಿರದೆ ದೇಶದ ಸಾಂಸ್ಕೃತಿಕ ವೈವಿದ್ಯತೆ,ಸೃಜನಶೀಲತೆ ಮತ್ತು ಯುವ ಕಥೆಗಾರರನ್ನು ಸಂಭ್ರಮಿಸುವ ವೇದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೀ ಕನ್ನಡ & ಜೀ 5 ಚೀಫ್ ಚಾನೆಲ್ ಆಫೀಸರ್ ದೀಪಕ್ ಶ್ರೀರಾಮುಲು ಮಾತನಾಡಿ, ” ಜೀ ನೆಟ್ವರ್ಕ್ ಹೊಸ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ವೇದಿಕೆ ಕಲ್ಪಿಸುತ್ತಾ ಬಂದಿದೆ. ಈ ಹಾದಿಯಲ್ಲಿ ಅನೇಕ ನಿರ್ದೇಶಕರು, ಬರಹಗಾರರು, ನಟರು ಹೀಗೆ ಅನೇಕರ ಕಲಿಕೆಗೆ ಜೀ ಪೂರಕವಾಗಿದೆ. ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಜೀ ರೈಟರ್ಸ್ ರೂಮ್ ಎನ್ನುವ ಹೊಸ ಹೆಜ್ಜೆಯನ್ನು ಇಟ್ಟಿತ್ತು. ಈ ಬಾರಿ ದೇಶದಲ್ಲೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಬಹುಭಾಷಾ ಕಿರುಚಿತ್ರ ಸ್ಪರ್ಧೆಯನ್ನು ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಆಯೋಜಿಸಲಾಗಿತ್ತು .ಈ ಪ್ರಯತ್ನಕ್ಕೆ ಚಿತ್ರರಂಗದ ಖ್ಯಾತ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರಿಂದ ಕೂಡ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಸ್ಪರ್ಧೆಯ ಗ್ರಾಂಡ್ ಫಿನಾಲೆ ಜೂನ್ 5 ರಂದು ನಡೆಯಲಿದ್ದು ಈ ವೇದಿಕೆ ಉದಯೋನ್ಮುಖ ಪ್ರತಿಭೆಗಳನ್ನು ಚಿತ್ರರಂಗ, ಮುಖ್ಯ ವಾಹಿನಿ ಹಾಗೂ OTTಗೆ ಪರಿಚಯಿಸುವ ಅದ್ಭುತ ಕಾರ್ಯಕ್ರಮವಾಗಲಿದೆ. ಇಂತಹ ಸೃಜನಾತ್ಮಕ ಹಾಗೂ ಅರ್ಥ ಪೂರ್ಣ ವೇದಿಕೆಯನ್ನು ಸೃಷ್ಟಿಸುವಲ್ಲಿ ಮಾರ್ಗದರ್ಶನ ನೀಡಿರುವ ರಾಘವೇಂದ್ರ ಹುಣಸೂರು, ಜೀ ತಂಡಕ್ಕೂ ನನ್ನ ಕೃತಜ್ಞತೆಗಳು ಹಾಗೂ ಎಲ್ಲಾ ಸ್ಪರ್ಧಾರ್ಥಿಗಳಿಗೂ ಶುಭವಾಗಲಿ” ಎಂದಿದ್ದಾರೆ.





