‘ಜೀ’ ದೇಶದ ಮೊದಲ ಬಹುಭಾಷಾ ಕಿರುಚಿತ್ರ ಸ್ಪರ್ಧೆ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ನ ಗ್ರಾಂಡ್ ಫಿನಾಲೆಗೆ ಸಿದ್ಧತೆ ಮಾಡಿಕೊಂಡಿದೆ.
ನವ ಪೀಳಿಗೆಯ ಕಥೆಗಾರರನ್ನು ಗುರುತಿಸುವ ನಿಟ್ಟಿನಲ್ಲಿ 2026 ರ ಆರಂಭದಲ್ಲಿ ಘೋಷಿಸಲಾದ ಈ ಸ್ಪರ್ಧೆ, ದೇಶಾದ್ಯಂತ ಉದಯೋನ್ಮುಖ ಪ್ರತಿಭೆಗಳು ತಮ್ಮ ಸ್ಮಾರ್ಟ್ಫೋನ್ಗಳಲ್ಲೇ ಚಿತ್ರೀಕರಿಸಿದ ವಿಶಿಷ್ಟ ಕಿರುಚಿತ್ರಗಳಿಗೆ ವೇದಿಕೆಯಾಗಿದೆ.
ಎಂಟು ಭಾರತೀಯ ಭಾಷೆಗಳಲ್ಲಿ ನಡೆದ ಈ ಸ್ಪರ್ಧೆಯ ಮುಖ್ಯ ಉದ್ದೇಶ ಸಿನಿಮಾ ನಿರ್ಮಾಣ ಕೇವಲ ಕೆಲವರಿಗಷ್ಟೇ ಸೀಮಿತವಾಗದೆ, ದೇಶದ ಮೂಲೆ ಮೂಲೆಯ ವಿಭಿನ್ನ ಸಂಸ್ಕೃತಿ ಮತ್ತು ಕಥೆಗಳಿಗೆ ಸೂಕ್ತ ಮನ್ನಣೆ ಸಿಗುವಂತೆ ಮಾಡುವುದು.
ಸ್ಪರ್ಧೆಯು ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕರನ್ನೊಳಗೊಂಡ ಜ್ಯೂರಿ ಸಮಿತಿಯು ವಿಜೇತರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಪ್ರತಿಷ್ಠಿತ ಸಮಿತಿಯಲ್ಲಿ ಅನುರಾಗ್ ಕಶ್ಯಪ್ (ಹಿಂದಿ), ರವಿ ಜಾಧವ್ (ಮರಾಠಿ), ನಾಗ್ ಅಶ್ವಿನ್ (ತೆಲುಗು), ಸೃಜಿತ್ ಮುಖರ್ಜಿ (ಬೆಂಗಾಲಿ), ಪಿ. ಸಮುದ್ರಖಣಿ (ತಮಿಳು), ಹೇಮಂತ್ ರಾವ್ (ಕನ್ನಡ) ಮತ್ತು ಲಿಜೋ ಜೋಸ್ ಪೆಲ್ಲಿಸ್ಸೆರಿ (ಮಲಯಾಳಂ) ಭಾಗಿಯಾಗಿದ್ದಾರೆ.
ಸಮಾರೋಪದಲ್ಲಿ ಪತ್ರಕರ್ತ ರಾಜೀವ್ ಮಸಂದ್ ಅವರ ನೇತೃತ್ವದಲ್ಲಿ ಜ್ಯೂರಿ ಸದಸ್ಯರ ವಿಶೇಷ ಸಂವಾದ ನಡೆಯಲಿದ್ದು, ಕಥೆ ಹೇಳುವ ಶೈಲಿ, ಪ್ರಾದೇಶಿಕ ಸಿನಿಮಾಗಳು ಮತ್ತು ಭಾರತೀಯ ಚಿತ್ರರಂಗದ ಭವಿಷ್ಯದ ಕುರಿತು ಚರ್ಚೆ ನಡೆಯಲಿದೆ.
ಮುಂಬೈನ ಪ್ರಸಿದ್ಧ ಹೋಟೆಲ್ನಲ್ಲಿ ನಡೆಯಲಿರುವ ಈ ಸಮಾರೋಪದಲ್ಲಿ ಚಿತ್ರರಂಗದ ಗಣ್ಯರು, ಮಾಧ್ಯಮ ಮುಖ್ಯಸ್ಥರು ಹಾಗೂ ಯುವ ನಿರ್ದೇಶಕರು ಒಂದೆಡೆ ಸೇರಲಿದ್ದಾರೆ. ಎಂಟು ಭಾಷಾ ವಿಭಾಗಗಳಲ್ಲಿ ವಿಜೇತರನ್ನು ಘೋಷಿಸಲಾಗುತ್ತಿದ್ದು; ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಕಥೆ, ಅತ್ಯುತ್ತಮ ಸಂಗೀತ, ಅತ್ಯುತ್ತಮ ಹಾಸ್ಯನಟ ಸೇರಿದಂತೆ ಜ್ಯೂರಿಗಳ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಯುವ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಆಯ್ಕೆಯಾದ ಅತ್ಯುತ್ತಮ ಕಿರುಚಿತ್ರಗಳ ಪ್ರಸಾರ ಹಕ್ಕುಗಳನ್ನು ಜೀ ಸಂಸ್ಥೆ ಪಡೆಯಲಿದೆ. ಈ ಕಿರುಚಿತ್ರಗಳನ್ನು ZEE5 ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್ ಮಾಡುವುದರ ಜೊತೆಗೆ, ಜೀ ಟಿವಿ, ಜೀ ಕನ್ನಡ, ಜೀ ಮರಾಠಿ, ಜೀ ಬಾಂಗ್ಲಾ, ಜೀ ತೆಲುಗು, ಜೀ ತಮಿಳು, ಜೀ ಕೇರಳಂ, ಜೀ ಜೆಸ್ಟ್ ಮತ್ತು ಜಿಂಗ್ ವಾಹಿನಿಗಳಲ್ಲಿಯೂ ಪ್ರಸಾರವಾಗಲಿವೆ. ಯುವ ಕಥೆಗಾರರಿಗೆ ಡಿಜಿಟಲ್ ಹಾಗೂ ಟಿವಿ ಮಾಧ್ಯಮಗಳೆರಡರಲ್ಲೂ ದೊಡ್ಡ ಮಟ್ಟದ ವೇದಿಕೆಯಾಗಲಿದೆ. ಇದರೊಂದಿಗೆ ಪ್ರತಿ ಭಾಷಾ ವಿಭಾಗದ ಒಬ್ಬ ವಿಜೇತರಿಗೆ ತಲಾ 2,00,000 ರೂಪಾಯಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು.
‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ನ ಕುರಿತು ಮಾತನಾಡಿರುವ ನಿರ್ದೇಶಕ ಅನುರಾಗ್ ಕಶ್ಯಪ್, ಪ್ರಯೋಗಗಳನ್ನು ಮಾಡಿ, ಸೋಲು ಗೆಲುವುಗಳ ನಡುವೆ ತಮ್ಮ ವಿಭಿನ್ನ ಶೈಲಿಯ ಕಥೆಗಳನ್ನು ಹೇಳಲು ಕಿರುಚಿತ್ರಗಳು ಸಹಕಾರಿಯಾಗಿವೆ. ಈ ಸ್ಪರ್ಧೆಯು ಮುಕ್ತ ಅಭಿವ್ಯಕ್ತಿಗೆ ರಾಷ್ಟ್ರ ಮಟ್ಟದ ವೇದಿಕೆ ಕಲ್ಪಿಸಿದೆ" ಎಂದರು.





