– ರಾಘವೇಂದ್ರ ಅಡಿಗ ಎಚ್ಚೆನ್.
ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕ ದಿನೇಶ್ ಬಾಬು ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ಉತ್ತರ’. ‘ಕಸ್ತೂರಿ ಮಹಲ್’ ತೆರೆಕಂಡು ಮೂರು ವರ್ಷಗಳ ಬಳಿಕ ಅವರು ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದು, ಈ ಹಿನ್ನೆಲೆಯಲ್ಲಿ ‘ಉತ್ತರ’ ಸಿನಿಮಾ ವಿಶೇಷತೆ ಪಡೆದುಕೊಂಡಿದೆ.
ಹೆಣ್ಣೊಬ್ಬಳು ಮೈಮರೆತು ಪರಪುರುಷನ ಜತೆ ಸಂಪರ್ಕ ಹೊಂದುವುದನ್ನು ಸ್ವತಃ ಆಕೆಯೇ ಪತಿಯೇ ವಿಡಿಯೋ ಮಾಡಿ ಹಂಚುತ್ತಾನೆ. ಬಳಿಕ ನಡೆಯುವ ಸಂಘರ್ಷ ಕೋರ್ಟ್ ಮೆಟ್ಟಿಲೇರುತ್ತದೆ. ನ್ಯಾಯಲಯದಲ್ಲಿ ನಡೆಯುವ ಗಂಭೀರ ವಾದ-ವಿವಾದವೇ ‘ಉತ್ತರ’ ಚಿತ್ರದ ಕಥಾವಸ್ತು. ಕೌಟುಂಬಿಕ ಮೌಲ್ಯಗಳು, ದೇಶದ ಕಾನೂನು ವ್ಯವಸ್ಥೆ ನಡುವೆ ನಡೆಯುವ ಗಂಭೀರ ಚರ್ಚೆ ಇದೆ. ಸಣ್ಣ ಎಳೆಯ ಸೂಕ್ಷ್ಮ ಘಟನೆಯನ್ನ ಇಟ್ಟುಕೊಂಡು ಒಂದು ವಿಭಿನ್ನ ಕಥೆಯನ್ನೆ ಡೈರೆಕ್ಟರ್ ದಿನೇಶ್ ಬಾಬು ಮಾಡಿದ್ದಾರೆ.

ಚಿತ್ರದಲ್ಲಿ ನ್ಯಾಯಾಧೀಶರಾಗಿ ಹಿರಿಯ ನಟಿ ತಾರಾ ಅನುರಾಧಾ ಕಾಣಿಸಿಕೊಂಡಿದ್ದಾರೆ. ತಾರಾ ಅವರು ಈ ಹಿಂದೆ ಎಲ್ಲ ರೀತಿಯ ಪಾತ್ರ ಮಾಡಿದ್ದಾರೆ. ಆದರೆ, ಜಡ್ಜ್ ಪಾತ್ರ ಮಾತ್ರ ಮಾಡಿರಲಿಲ್ಲ. ನೆಚ್ಚಿನ ಡೈರೆಕ್ಟರ್ ದಿನೇಶ್ ಬಾಬು ಅವರ “ಉತ್ತರ” ಚಿತ್ರದಲ್ಲಿ ತಾರಾ ಅವರು ಈಗ ಜಡ್ಜ್ ರೋಲ್ ಮಾಡಿದ್ದಾರೆ. ಇನ್ನು ‘ಬಿಗ್ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಅಶ್ವಿನಿ ಗೌಡ ವಕೀಲರಾಗಿ ಪಾಟೀಸವಾಲಿಗಿಳಿದಿದ್ದಾರೆ. ನಾರಾಯಣ್ ಸ್ವಾಮಿ, ಸಂಪುತ್ರ ಆಳ್ವ ತಾರಾಬಳಗದಲ್ಲಿದ್ದಾರೆ. ನಾಗೇಶ್ವರ ರಾವ್ ಚಿತ್ರಕ್ಕೆ ಬಂಡವಾಳ ಹೂಡುವ ಜತೆಗೆ ಪ್ರಮುಖ ಪಾತ್ರದಲ್ಲಿದ್ದಾರೆ.
ಚಿತ್ರದ ಪ್ರಥಮ ಭಾಗ ಸಾಧಾರಣ ಎನಿಸುತ್ತದೆ ಆದರೆ ದ್ವಿತೀಯ ಭಾಗ ಅದರಲ್ಲಿ ಬರುವ ಕೋರ್ಟ್ ರೂಂ ಡ್ರಾಮಾ ಚಿತ್ರದ ತೂಕ ಹೆಚ್ಚಿಸಿದೆ. ಬೇರೆ ಪಾತ್ರಧಾರಿಗಳ ಅಭಿನಯ ಒಂದು ತೂಕ ಆದರೆ ತಾರಾ ಅವರದೇ ಒಂದು ತೂಕ. ನ್ಯಾಯಾಧೀಶರ ಪಾತ್ರ ಅವರಾಡುವ ಬುದ್ಧಿ ಮಾತು ಇಂದಿನ ಸಾಮಾಜಿಕ ಪರಿಸರದಲ್ಲಿ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ.
ಒಟ್ಟಿನಲ್ಲಿ ಕುಟುಂಬ ಸಮೇತ ನೋಡಬಹುದಾದ ಚಿತ್ರ ಈ ಉತ್ತರ.





