ಅದು 1990ರ ದಶಕ. ನಾನು ಆಗ ಸುಮಾರು 10-12 ಉದ್ಯೋಗಿಗಳಿದ್ದ ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕಂಪನಿಯ ಮೂವರು ಪಾಲುದಾರರಲ್ಲಿ ಇಬ್ಬರು ಹಿಂದೂಗಳಾಗಿದ್ದರೆ, ಮತ್ತೊಬ್ಬರು ಕ್ರೈಸ್ತರಾಗಿದ್ದರು. ನಮ್ಮ ಸಂಸ್ಥೆಯಲ್ಲಿ ಮಾಲೀಕ-ಉದ್ಯೋಗಿ ಎಂಬ ಅಂತರಕ್ಕಿಂತ ಸಹೋದ್ಯೋಗಿ ಎಂಬ ಆತ್ಮೀಯತೆಯೇ ಹೆಚ್ಚು. ವಯಸ್ಸಿನ ಅಂತರವೂ ಹೆಚ್ಚು ಇರಲಿಲ್ಲ. ಹೀಗಾಗಿ ಎಲ್ಲರೂ ಒಂದೇ ಕುಟುಂಬದವರಂತೆ ಕೆಲಸ ಮಾಡುತ್ತಿದ್ದೆವು.
ವಾರಾಂತ್ಯದಲ್ಲಿ ಯಾರಾದರೂ ತಮ್ಮ ಊರಿಗೆ ಹೋಗಿ ಬಂದರೆ ಅಥವಾ ಯಾವುದಾದರೂ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿ ಬಂದರೆ ಅಲ್ಲಿನ ವಿಶೇಷ ಸಿಹಿತಿಂಡಿಗಳು ಅಥವಾ ದೇವರ ತೀರ್ಥ-ಪ್ರಸಾದವನ್ನು ಕಚೇರಿಗೆ ತಂದು ಎಲ್ಲರೊಂದಿಗೆ ಹಂಚಿಕೊಳ್ಳುವುದು ಒಂದು ಸುಂದರ ಸಂಪ್ರದಾಯವಾಗಿತ್ತು. ಆ ಪ್ರಸಾದವನ್ನು ಯಾರೂ ಧರ್ಮದ ಆಧಾರದ ಮೇಲೆ ಬೇರ್ಪಡಿಸದೇ ಸಂತೋಷದಿಂದ ಸ್ವೀಕರಿಸುತ್ತಿದ್ದರು.
ಒಂದು ದಿನ ಸಂಜೆ ಕಚೇರಿ ಮುಗಿದ ಬಳಿಕ ಭಾರೀ ಮಳೆ ಸುರಿಯುತ್ತಿದ್ದ ಕಾರಣ ಎಲ್ಲರೂ ಅಲ್ಲಿಯೇ ಕುಳಿತು ಹರಟೆ ಹೊಡೆಯುತ್ತಿದ್ದೆವು. ಮಾತಿನ ಮಧ್ಯೆ ಧಾರ್ಮಿಕ ನಂಬಿಕೆಗಳ ಬಗ್ಗೆ ಚರ್ಚೆ ಶುರುವಾಯಿತು. ಚರ್ಚೆ ಸ್ವಲ್ಪ ತೀವ್ರ ಸ್ವರೂಪ ಪಡೆಯುತ್ತಿದ್ದಾಗ ನಾನು ಒಮ್ಮೆಲೇ ನಮ್ಮ ಕ್ರೈಸ್ತ ಪಾಲುದಾರರನ್ನು ಕೇಳಿದೆ:
“ನಿನಗೆ ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಲ್ಲದಿದ್ದರೆ, ನಾವು ತರುವ ಪ್ರಸಾದವನ್ನು ಯಾಕೆ ಸ್ವೀಕರಿಸುತ್ತೀಯ?”
ಆ ಪ್ರಶ್ನೆ ಕೇಳಿದ ತಕ್ಷಣ ವಾತಾವರಣದಲ್ಲಿ ಕ್ಷಣಕಾಲ ಮೌನ ಆವರಿಸಿತು. “ಅಯ್ಯೋ, ನಾನು ಏನಾದರೂ ತಪ್ಪಾಗಿ ಕೇಳಿಬಿಟ್ಟೆನೇ?” ಎಂಬ ಆತಂಕ ನನ್ನ ಮನಸ್ಸಿನಲ್ಲಿ ಮೂಡಿತು.
ಅಷ್ಟರಲ್ಲಿ ನನ್ನ ಬಾಸ್ ನಗುಮುಖದಿಂದ ಮಾತನಾಡಲು ಆರಂಭಿಸಿ, ನೀನು ಕೇಳಿರುವ ಪ್ರಶ್ನೆ ಸರಿಯೇ ಇದೆ. ಅದರ ಉತ್ತರವನ್ನು ನಾನು ಕೊಡುತ್ತೇನೆ.” ಎನ್ನುತ್ತಾ,
ನಾನು ಜನ್ಮತಃ ಕ್ರೈಸ್ತ. ನಮ್ಮ ಕುಟುಂಬದಲ್ಲಿ ಕ್ರೈಸ್ತ ಸಂಪ್ರದಾಯಗಳನ್ನು ಪಾಲಿಸುತ್ತೇವೆ. ಆದರೆ ನನಗೆ ಹಿಂದೂ ಧರ್ಮದ ಮೇಲೂ ಅಪಾರ ಗೌರವ ಮತ್ತು ನಂಬಿಕೆ ಇದೆ. ನಮ್ಮ ಹಿರಿಯರಿಂದ ಕೇಳಿದಂತೆ ನಮ್ಮ ಮೂಲ ಪೂರ್ವಜರು ಗೋವಾದ ಕೊಂಕಣಿ ಗೌಡ ಸಾರಸ್ವತ ಬ್ರಾಹ್ಮಣರು. ಕಾಲಾಂತರದಲ್ಲಿ ಕೆಲವು ಪರಿಸ್ಥಿತಿಗಳಿಂದ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಆದರೆ ಅದರಿಂದ ಹಿಂದೂ ಧರ್ಮದ ಬಗ್ಗೆ ಇದ್ದ ಗೌರವ ಕಡಿಮೆಯಾಗಲಿಲ್ಲ. ನೀವು ತರುವ ಪ್ರಸಾದವನ್ನು ನೀವು ದೇವರ ಅನುಗ್ರಹ ಎಂದು ಭಕ್ತಿಯಿಂದ ಸ್ವೀಕರಿಸುತ್ತೀರಿ. ನಾನು ಅದನ್ನು ನಿಮ್ಮ ಭಕ್ತಿಯ ಸಂಕೇತವಾಗಿ ಗೌರವಿಸುತ್ತೇನೆ. ಧರ್ಮದ ಭೇದ ಮಾಡದೇ ಅದನ್ನು ಪ್ರೀತಿಯಿಂದ ಸಿಹಿ ತಿಂಡಿ ಎಂದು ಸ್ವೀಕರಿಸುತ್ತೇನೆ ಎಂದು ಮಾತನ್ನು ಮುಗಿಯುವಷ್ಟರಲ್ಲಿ ಮಳೆಯೂ ನಿಂತಿತ್ತು. ಆ ದಿನ ಎಲ್ಲರೂ ಹಗುರ ಮನಸ್ಸಿನಿಂದ ಮನೆಗಳತ್ತ ಹೊರಟೆವು.
ಈ ಹಳೆಯ ಘಟನೆಯನ್ನು ಈಗ ನೆನಪಿಸಿಕೊಳ್ಳಲು ಕಾರಣವಿದೆ.

2026ರ ಜೂನ್ 12ರಂದು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕರ್ನಾಟಕದ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಒಬ್ಬ ವ್ಯಕ್ತಿಯಾಗಿ ಅವರು ದೇವಾಲಯಕ್ಕೆ ಹೋಗುವುದು, ಪೂಜೆ ಸಲ್ಲಿಸುವುದು ಅಥವಾ ಕಾಣಿಕೆ ಅರ್ಪಿಸುವುದು ಅವರ ವೈಯಕ್ತಿಕ ಹಕ್ಕು ಮತ್ತು ನಂಬಿಕೆಯ ವಿಷಯ. ಅದನ್ನು ಯಾರೂ ಪ್ರಶ್ನಿಸುವ ಅಗತ್ಯವಿಲ್ಲ ಮತ್ತು ಪ್ರಶ್ನಿಸಲೂ ಬಾರದು.





