– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಕಥನ, ನಿರ್ದೇಶನ ಹಾಗೂ ಅಭಿನಯದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ, ಇದೀಗ ಸಮಾಜಮುಖಿ ಕಾರ್ಯಗಳ ಮೂಲಕವೂ ಹೊಸ ಮಾದರಿಯಾಗಿದ್ದಾರೆ. ‘ರಿಷಬ್ ಶೆಟ್ಟಿ ಫೌಂಡೇಷನ್’ ಮೂಲಕ ಶಿಕ್ಷಣ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯಕ್ಕೆ ಅವರು ಮುಂದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
‘ಕಾಂತಾರ’ ಚಿತ್ರದ ಯಶಸ್ಸಿನ ಬಳಿಕವೂ ನೆಲದೊಂದಿಗೆ ನಂಟು ಕಳೆದುಕೊಳ್ಳದ ರಿಷಬ್ ಶೆಟ್ಟಿ, ತಾವು ಶಿಕ್ಷಣ ಪಡೆದ ಸರ್ಕಾರಿ ಶಾಲೆಯನ್ನೇ ದತ್ತು ಪಡೆದು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿದ್ದಾರೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ಕಾರ್ಯವನ್ನು ಫೌಂಡೇಷನ್ ಕೈಗೊಂಡಿದೆ.
‘ಶಿಕ್ಷಣವು ಕೇವಲ ಬದುಕನ್ನು ಬದಲಾಯಿಸುವುದಲ್ಲ, ಭವಿಷ್ಯವನ್ನೇ ರೂಪಿಸುತ್ತದೆ’ ಎಂಬ ಧ್ಯೇಯದೊಂದಿಗೆ ಫೌಂಡೇಷನ್ ಹಲವು ಶಿಕ್ಷಣ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರು, ರೈತರು ಹಾಗೂ ಹೋಟೆಲ್ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ನೆರವಾಗುತ್ತಿದೆ.
ಫೌಂಡೇಷನ್ ನೆರವು ಪಡೆದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರಿಸಲು ಸಾಧ್ಯವಾಗಿದ್ದು, ಕೆಲವರು ಪೋಷಕರನ್ನು ಕಳೆದುಕೊಂಡ ಬಳಿಕವೂ ರಿಷಬ್ ಶೆಟ್ಟಿ ನೀಡಿದ ನೆರವಿನಿಂದ ಕನಸುಗಳನ್ನು ಜೀವಂತವಾಗಿಟ್ಟುಕೊಂಡಿದ್ದೇವೆ ಎಂದು ಭಾವುಕರಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಯಶಸ್ಸನ್ನು ಸಮಾಜಕ್ಕೆ ಮರಳಿ ನೀಡುವ ಅವಕಾಶವಾಗಿ ಪರಿವರ್ತಿಸಿಕೊಂಡಿರುವ ರಿಷಬ್ ಶೆಟ್ಟಿ ಅವರ ಈ ಸಾಮಾಜಿಕ ಸೇವೆ ರಾಜ್ಯದಾದ್ಯಂತ ಪ್ರಶಂಸೆಗೆ ಪಾತ್ರವಾಗಿದ್ದು, ಅಭಿಮಾನಿಗಳು ಅವರನ್ನು ‘ರಿಯಲ್ ಹೀರೋ’ ಎಂದು ಕೊಂಡಾಡುತ್ತಿದ್ದಾರೆ





