ಜಾಗೀರ್ದಾರ್*

ಬೆಂಗಳೂರು: ‘ಗಣಪ’ ಮತ್ತು ‘ಕರಿಯ-2’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದ ನಟ ಸಂತೋಷ್ ಬಾಲರಾಜ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ (ಆಗಸ್ಟ್ 5) ಅಂಗವಾಗಿ, ಅವರು ನಟಿಸಿ, ನಿರ್ದೇಶಿಸಿದ್ದ ‘ಬೆಂಟ್ಲಿ’ (Bentlee) ಸಿನಿಮಾದ ಅಧಿಕೃತ ಟ್ರೇಲರ್‌ ಬಿಡುಗಡೆಯಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಅಕಾಲಿಕ ಮರಣ ಹೊಂದಿದ್ದ ಸಂತೋಷ್ ಅವರ ಅಗಲಿಕೆ ಚಂದನವನಕ್ಕೆ ದೊಡ್ಡ ಆಘಾತವನ್ನುಂಟು ಮಾಡಿತ್ತು.

ಸಿನಿ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಶ್ವೇತಾ ಬಾಲರಾಜು ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ಬಾಲರಾಜು ಅವರೊಂದಿಗೆ ಸಿಮ್ರಾನ್ ನಾಟೇಕರ್, ಶ್ರುತಿ, ಚರಣ್‌ರಾಜ್, ರಾಜಾ ಬಲವಾಡಿ ಮುಂತಾದವರು ನಟಿಸಿದ್ದಾರೆ.

ಸ್ನೇಹಿತನನ್ನು ನೆನೆದು ಭಾವುಕರಾದ ‘ಲೂಸ್ ಮಾದ’ ಯೋಗಿ

ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿರುವ ನಟ ಲೂಸ್ ಮಾದ ಯೋಗಿ ಮಾತನಾಡಿ, “ಈ ಕಾರ್ಯಕ್ರಮದಲ್ಲಿ ಖುಷಿ ಆಗ್ತಿದೆ ಅಂತಾನೂ ಹೇಳೋಕೆ ಆಗಲ್ಲ, ಬೇಜಾರಾಗ್ತಿದೆ ಅಂತಾನೂ ಹೇಳೋಕೆ ಆಗಲ್ಲ. ನಮ್ಮ ನಾಯಕ ನಟ ತೀರಿಕೊಂಡು ಒಂದು ವರ್ಷ ಆಯ್ತು ಅನ್ನುವುದು ನೆನಪಿನಲ್ಲಿ ಇರುವ ವಿಷಯ ಅಷ್ಟೇ. ಸಂತು ಎಷ್ಟು ಒಳ್ಳೆ ಸಿನಿಮಾಗಳು ಕೊಟ್ರೋ, ಎಷ್ಟು ಸಂಪಾದನೆ ಮಾಡಿದ್ರೋ ಅದೆಲ್ಲ ಒಂದು ಕಡೆಯಾದರೆ, ಅವರು ಎಷ್ಟೊಂದು ಜನ ಒಳ್ಳೆಯ ಸ್ನೇಹಿತರನ್ನ ಸಂಪಾದನೆ ಮಾಡಿದ್ದಾರೆ ಅನ್ನೋದಕ್ಕೆ ಈ ಈವೆಂಟ್ ಸಾಕ್ಷಿ” ಎಂದರು.

bently 1

“ಸಂತೋಷ್‌ಗೆ ಸಿನಿಮಾಗಳ ಬಗ್ಗೆ ತುಂಬಾ ಆಸೆ, ಕನಸುಗಳಿದ್ದವು. ಅವನನ್ನು ತುಂಬಾ ಬೇಗ ಕಳೆದುಕೊಂಡೆವು. ನಾವು ಸಿಕ್ಕಾಗ ಈ ಸಿನಿಮಾ ಬಗ್ಗೆ ಮಾತಾಡ್ತಿದ್ವಿ, ಆಗ ಇದಕ್ಕೆ ಬೇರೆ ಹೆಸರಿತ್ತು. ನಾನು ಈ ಸಿನಿಮಾಗೆ ಡಬ್ ಮಾಡ್ತೀನಿ ಅನ್ನೋ ಕಲ್ಪನೆಯೂ ನನಗಿರಲಿಲ್ಲ, ಆದರೆ ಆ ಪರಿಸ್ಥಿತಿ ಬಂತು. ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿ, ನಾವೆಲ್ಲರೂ ಥಿಯೇಟರ್‌ಗೆ ಬಂದು ನೋಡಿ ಈ ಸಿನಿಮಾನ ಗೆಲ್ಲಿಸೋಣ” ಎಂದು ವಿನಂತಿಸಿದರು.

ತಾನೇ ನಿರ್ದೇಶಿಸಿ, ನಟಿಸಿದ ಚಿತ್ರದ ಸಂಭ್ರಮ ನೋಡಲು ಸಂತೋಷ್ ಇಲ್ಲ

ಚಿತ್ರದ ಕುರಿತು ಮಾತನಾಡಿದ ನಟ ಪ್ರಮೋದ್ ಶೆಟ್ಟಿ, “ತಂದೆಯವರು ಹೋದ ಮೇಲೂ ನಿರ್ಮಾಣ ಸಂಸ್ಥೆಯನ್ನು ಕಾಪಾಡಿಕೊಂಡು, ತಾನೇ ನಿರ್ದೇಶನ ಹಾಗೂ ನಟನೆ ಮಾಡಿರುವ ಸಿನಿಮಾದ ಸಂಭ್ರಮವನ್ನು ನೋಡಲು ಸಂತೋಷ್ ಇಲ್ಲ ಅನ್ನುವುದೇ ದೊಡ್ಡ ಬೇಜಾರು. ನಾವು ಭೇಟಿಯಾದಾಗಲೆಲ್ಲಾ ಸಿನಿಮಾರಂಗಕ್ಕೆ ಇನ್ನು ಹೆಚ್ಚಿನ ಮಟ್ಟದ ಒಳ್ಳೆಯ ಸಿನಿಮಾಗಳನ್ನು ಕೊಡುವ ಯೋಚನೆಗಳನ್ನೇ ಹಂಚಿಕೊಳ್ಳುತ್ತಿದ್ದರು. ಅಂತಹ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ” ಎಂದು ತೀವ್ರ ಕಂಬನಿ ಮಿಡಿದರು.

“ನಾವು ಕೆಲವೇ ಕೆಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದರೂ, ಸಿಕ್ಕಾಗಲೆಲ್ಲಾ ಸಿನಿಮಾರಂಗವನ್ನು ಇನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ, ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುವ ಬಗ್ಗೆಯೇ ಚರ್ಚಿಸುತ್ತಿದ್ದರು. ಅಂತಹ ಉನ್ನತ ಯೋಚನೆಗಳಿದ್ದ ಒಳ್ಳೆಯ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ” ಎಂದು ಪ್ರಮೋದ್ ಶೆಟ್ಟಿ ವಿಷಾದಿಸಿದರು.

‘ಬೆಂಟ್ಲಿ’ ಚಿತ್ರಕ್ಕೆ ಜೂಡಾ ಸ್ಯಾಂಡಿ ಹಾಡುಗಳನ್ನು ಸಂಯೋಜಿಸಿದ್ದರೆ, ರವಿ ವರ್ಮ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಕೆ.ಕೆ. ಹಾಗೂ ಗುಂಡ್ಲುಪೇಟೆ ಸುರೇಶ್ ಜಂಟಿಯಾಗಿ ಛಾಯಾಗ್ರಹಣ ನಿರ್ವಹಿಸಿದ್ದು, ಉಮೇಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಇನ್ನು ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಝಂಕರ್ ಮ್ಯೂಸಿಕ್ ಸಂಸ್ಥೆ ಪಡೆದುಕೊಂಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ