ಹೊಸ ಸೊಸೆ : ಅತ್ತೆ… ಅತ್ತೆ… ಇವತ್ತು ಸ್ವಲ್ಪ ನೀವೇ ಅಡುಗೆ ಮಾಡಿಬಿಡಿ. ನನಗ ತುಂಬಾ ತಲೆನೋವು, ಸ್ವಲ್ಪ ಹೊತ್ತು ಮಲಗ್ತೀನಿ.
ಹಳೆ ಅತ್ತೆ : ಆಗ್ಲಿ ಬಿಡು, ಅದೇನು ಮಹಾ… ಆದರೆ ನಿನ್ನದೆಲ್ಲ ನಾಟಕ ಅಂತ ನನಗೆ ಗೊತ್ತಾಯ್ತು ಬಿಡು. ಇಷ್ಟೆಲ್ಲ ಸುಳ್ಳು ಹೇಳಬೇಡ.
ಸೊಸೆ : ನಾನು ಹೇಳ್ತಿರೋದು ಸುಳ್ಳು ಅಂತ ನಿಮಗೆ ಹೇಗೆ ಗೊತ್ತಾಯಿತು?
ಅತ್ತೆ : ನಾನೂ ಒಂದು ಕಾಲದಲ್ಲಿ ನಿನ್ನ ತರಹ ಹೊಸ ಸೊಸೆ ಆಗಿದ್ದೆ…..
ಒಂದು ಸಲ ಮಾಡರ್ನ್ ಮಾಲತಿ ತನ್ನ ಹೊಸ ಕಾರು ನಡೆಸುತ್ತಾ ಸಿಗ್ನಲ್ ಬಳಿ ಬಂದಾಗ, ಏನೋ ಎಡವಟ್ಟಾಗಿ ಕಾರು ನಿಂತೇಹೋಗಬೇಕೇ?
ಗ್ರೀನ್ ಸಿಗ್ನಲ್ ಬಂದಿದೆ, ಆದರೂ ಜಪ್ಪಯ್ಯ ಅಂದ್ರೂ ಕಾರು ಮಾತ್ರ ಸ್ಟಾರ್ಟ್ ಆಗಲಿಲ್ಲ. ಹಿಂದೆ ನಿಂತಿದ್ದ ಗಾಡಿಯವರಿಗೆಲ್ಲ ಸಿಟ್ಟು ಬಂದು ಹಾರ್ನ್ ಮಾಡತೊಡಗಿದರು. ಸಿಗ್ನಲ್ ಗ್ರೀನ್ ಬದಲು ಯಲ್ಲೋ ಆಗಿ, ಮುಂದೆ ರೆಡ್ಗೂ ತಿರುಗಿತು! ಆದರೂ ಈಕೆಯ ಕಾರು ಸ್ಟಾರ್ಟ್ ಆಗಲೇ ಇಲ್ಲ. ಹಿಂದಿದ್ದವರಿಗೆಲ್ಲ ಅಸಹನೆ ಹೆಚ್ಚಿ ಇಡೀ ಊರಿಗೇ ಕೇಳಿಸುವಂತೆ ಹಾರ್ನ್ ಮಾಡತೊಡಗಿದರು.
ಆಗ ಕೆಲಸಕ್ಕೆ ಹೊಸದಾಗಿ ಸೇರಿದ್ದ ಕ್ಯಾತಮಾರನ ಹಳ್ಳಿಯ ಸಿಗ್ನಲ್ ಮ್ಯಾನ್ ಸಿದ್ದಪ್ಪ ಪೊಲೀಸ್ ನಡಿಗೆಯಲ್ಲಿ ಓಡಿಬಂದು, “ಏನಾಯ್ತು ಮೇಡಂ, ಮೂರು ಬಣ್ಣಗಳಲ್ಲಿ ಯಾವ ದೀಪದ ಬಣ್ಣವೂ ಇಷ್ಟ ಆಗ್ತಿಲ್ಲವೇ?” ಎಂದು ಕಳಕಳಿಯಿಂದ ವಿಚಾರಿಸಿಕೊಂಡ.
ಮದುವೆಯಾದ 15 ದಿನಗಳಿಗೆ ಹೆಂಡತಿಯ ಬರ್ತ್ಡೇ ಬಂತೆಂದು ಕುಲಕರ್ಣಿ ಹೂವಿನ ಬೊಕೆಗೆ ಆರ್ಡರ್ ಕೊಟ್ಟಿದ್ದ. ಬಿಸ್ನೆಸ್ ಟೂರ್ ಎಂದು ಹೊರಟಿದ್ದರಿಂದ ಮುಂಬೈನಿಂದಲೇ ಬೆಂಗಳೂರಿನ ಫ್ಲವರಿಸ್ಟ್ ಗೆ ಆರ್ಡರ್ ಮಾಡಿ ಹೊಸ ಹೆಂಡತಿಗೆ 24 ಹೂಗಳ ಬೊಕೆ ಕೊಡಲು ಸೂಚಿಸಿ, ಬೆಸ್ಟ್ ಹೂವುಗಳಿರಲಿ ಎಂದು 2 ಪಟ್ಟು ಹಣ ರವಾನಿಸಿದ್ದ. ಹೆಂಡತಿಗೆ ಫೋನ್ ಮಾಡಿ ವಿಷ್ ಮಾಡುತ್ತಾ, “ನಿನಗೆ ಈಗ ಎಷ್ಟು ವರ್ಷ ತುಂಬಿದವೋ ಅಷ್ಟು ಹೂಗಳ ಬೊಕೆ ಬರಲಿದೆ,” ಎಂದು ತಿಳಿಸಿದ್ದ. ಅವಳು ಆತುರದಿಂದ ಅದಕ್ಕಾಗಿ ಕಾಯತೊಡಗಿದಳು.
ಅಂದಿನ ಡೀಲ್ ನಿಂದ ಸಂತೋಷಪಟ್ಟ ಫ್ಲಾರಿಸ್ಟ್ ಈ ಕಸ್ಟಮರ್ಗೆ ಇನ್ನಷ್ಟು ಹೂವುಗಳ ಬೋನಸ್ ನನ್ನ ಪರವಾಗಿರಲಿ ಎಂದು ಬೊಕೆಗೆ 20 ಹೂಗಳನ್ನು ಹೆಚ್ಚಿಗೆ ಸೇರಿಸಿದ. ಆ ಬೊಕೆಯ ಕೊರಿಯರ್ ಪಡೆದ ಕುಲಕರ್ಣಿಯ ಹೆಂಡತಿ ತವರಿಗೆ ಹೋದಳು ಎಷ್ಟು ದಿನಗಳಾದರೂ ವಾಪಸ್ಸು ಬರಲೇ ಇಲ್ಲ. ಹೀಗೇಕಾಯಿತು ಎಂದು ಕುಲಕರ್ಣಿ ಲೆಕ್ಕ ಹಾಕುವುದರಲ್ಲೇ ಆತನಿಗೆ ವಯಸ್ಸಾಗಿ ಹೋಯಿತಂತೆ!
ರತ್ನಾ ಎಷ್ಟು ಹೊತ್ತಾದರೂ ಸಂತೆಯಲ್ಲಿ ಚೌಕಾಶಿ ಮಾಡದೆ ತರಕಾರಿ ಕೊಳ್ಳುತ್ತಿರಲಿಲ್ಲ. ಒಂದಲ್ಲ 4 ಅಂಗಡಿ ತಿರುಗಿ, 40 ಸಲ ಪ್ರಶ್ನೆ ಕೇಳುತ್ತಿದ್ದಳು. ಇದರಿಂದ ರೋಸಿದ ಅವಳ ಗಂಡ, “ಬೇಗ ಏನೋ ಒಂದು ತೆಗೆದುಕೊಂಡು ಬರಬಾರದೇ? ಈಗಾಗಲೇ ಸಂಜೆ 7 ಗಂಟೆ ಆಯ್ತು. ನಾವು ಯಾವಾಗ ಮನೆಗೆ ಹೋಗೋದು? ಯಾವಾಗ ನಾನು ಅಲ್ಲಿಂದ ಕ್ಲಬ್ಬಿಗೆ ಹೋಗೋದು…?
”ಅದಕ್ಕೆ ರತ್ನಾ ಸಾವಧಾನವಾಗಿ, “ಅಯ್ಯೋ ಸಾಕು ಸುಮ್ಮನಿರಿ, ಹಾಗೆಲ್ಲ ಅವಸರಪಟ್ಟು ನಿಮ್ಮಂಥ ಗಂಡನನ್ನು ಆರಿಸಿಕೊಂಡಿದ್ದಕ್ಕೆ ಈಗ ನಾನು ಇಷ್ಟೊಂದು ಅವಸ್ಥೆ ಪಡುತ್ತಿರುವುದು,” ಎನ್ನುವುದೇ?
ಸಂಜೆ ವಾಕಿಂಗ್ ಹೊರಟ ನವದಂಪತಿಗಳು ಪೇಟೆ ಬೀದಿ ಹಾದು ಹೋಗುತ್ತಿದ್ದರು. ಅಲ್ಲಿದ್ದ ಎಷ್ಟೋ ಚಿನ್ನದ ಒಡವೆಗಳ ಅಂಗಡಿಗಳನ್ನು ಗಮನಿಸಿ ಹೆಂಡತಿ ಕೇಳಿದಳು, “ನನ್ನ ಕುತ್ತಿಗೆ ಎದ್ದು ಕಾಣುವಂತೆ ಏನಾದರೂ ಕೊಡಿಸಬಾರದೆ?
”ಗಂಡ ತಕ್ಷಣ ಮೆಡಿಕಲ್ ಸ್ಟೋರ್ಗೆ ಹೋಗಿ ಹೆಂಡತಿಯ ಕುತ್ತಿಗೆಗೆ ಚೆನ್ನಾಗಿ ಒಪ್ಪುವಂಥ ಹೊಸ `ನೆಕ್ ಬೆಲ್ಟ್’ ಖರೀದಿಸಿ ತಂದುಕೊಡುವುದೇ?
ಇದೇ ನವದಂಪತಿಗಳು ಮುಂದಿನ ವರ್ಷ ಆಸ್ಪತ್ರೆಗೆ ಬರುವಂತಾಯಿತು. ನವ ಮಾಸ ತುಂಬಿದ್ದ ಆಕೆಯನ್ನು ಲೇಬರ್ ವಾರ್ಡ್ಗೆ ಅಡ್ಮಿಟ್ ಮಾಡಿಸಿ, ಗಂಡ ಅಲ್ಲಿದ್ದ ನರ್ಸ್ಗೆ ಹೇಳಿದ, “ನೋಡಿ ಸಿಸ್ಟರ್, ಮಗು ಹುಟ್ಟಿದರೆ ತಕ್ಷಣ ಬಂದು ತಿಳಿಸಿ. ನಾನು ಹೊರಗಿನ ಬೆಂಚ್ನಲ್ಲಿ ಕಾಯುತ್ತಾ ಇರುತ್ತೀನಿ,” ಎಂದು ಮೊದಲ ಮಗುವಿಗಾಗಿ ಕಾತುರದಿಂದ ಕಾಯತೊಡಗಿದ.
ಒಳಗೆ ಹೋಗಿ ಬಾಗಿಲು ಹಾಕಿಕೊಂಡ ನರ್ಸ್, ತಕ್ಷಣ ಬಾಗಿಲನ್ನು ತುಸು ತೆರೆದು ಇವನಿಗೆ, “ನೋಡ್ರಿ, ತಕ್ಷಣ ಹೊರಗೆ ಬಂದು ಹೇಳಕ್ಕಾಗಲ್ಲ. ಇಲ್ಲಿಂದಾನೇ ಬಾಗಿಲಲ್ಲಿ ನಿಂತು ಹೇಳಬೇಕು. ಏನಾದ್ರೂ ಶಾರ್ಟ್ ಆಗಿ ಕ್ಲೂ ಕೊಡಿ,” ಎಂದಳು.
ಆತ ಅದಕ್ಕೆ, “ಗಂಡು ಮಗು ಹುಟ್ಟಿದರೆ ಟೊಮೇಟೊ, ಹೆಣ್ಣು ಮಗು ಹುಟ್ಟಿದರೆ ಈರುಳ್ಳಿ ಅಂತ ಹೇಳಿ. ನೀವು ಹೊರಗೆ ನನ್ನ ಬಳಿ ನಡೆದು ಬರುವುದೇನೂ ಬೇಡ,” ಎಂದ.
ಆಕೆ, “ಹಾಗೇ ಆಗಲಿ,” ಎಂದಳು.
1 ತಾಸಿನ ನಂತರ ಗಂಡುಹೆಣ್ಣು ಎರಡೂ ಹುಟ್ಟಿದಾಗ, ಅವಳಿ ಮಕ್ಕಳ ಬಗ್ಗೆ ಹೇಗೆ ಹೇಳಲಿ ಎಂದು ತಲೆ ಕೆಡಿಸಿಕೊಂಡ ಆಕೆ ಬಾಗಿಲು ತೆರೆದವಳೇ, “ಸಾರ್…. ಸಲಾಡ್!”ಎನ್ನುವುದೇ?
ಪತ್ನಿ : ನಾನು ಯಾವ ಕೆಲಸವನ್ನೇ ಶುರು ಮಾಡಿದರೂ ಅದರಲ್ಲಿ ಪೂರ್ತಿ ಮುಳುಗಿಹೋಗ್ತೀನಿ.
ಪತಿ : ಛೇ….ಛೇ…? ಇಷ್ಟು ದಿನಗಳಾದರೂ ನೀನು ಬಾವಿ ತೋಡುವ ಕೆಲಸಕ್ಕೆ ಹೋಗಬಾರದೇ?
ಉಮೇಶ್ : ನನ್ನಂಥ ಹೊಸದಾಗಿ ಮದುವೆಯಾದವರು ನಿಮ್ಮಂಥ ಬ್ಯಾಚುಲರ್ಗೆ ಖಂಡಿತಾ ಒಂದು ಒಳ್ಳೆಯ ಸಲಹೆ ಕೊಡಬಹುದು.
ಸುರೇಶ್ : ಅದೇನು ಬೇಗ ಹೇಳು….
ಉಮೇಶ್ : ಯಾವ ಹುಡುಗಿಯನ್ನು ಮದುವೆಗೆ ಆರಿಸಿಕೊಳ್ಳಬೇಕೋ ಅವಳು ಶಾಲಾ ಕಾಲೇಜುಗಳ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿರಬಾರದು ಅಂತ ಮೊದಲೇ ಹೇಳಿಬಿಡಬೇಕು.
ಪತ್ನಿ : `ಅಂಜಲಿ’ ಚೆನ್ನಾಗಿರಬೇಕು, ನೋಡಲಿಲ್ಲವೇ…?
ವಾಟ್ಸ್ಆ್ಯಪ್ ಮೆಸೇಜ್ ಕಳುಹಿಸುತ್ತಾ ಹಾಗೇ ಬೀದಿಗೆ ಹೋಗಿಬಿಟ್ಟ.
ಪತ್ನಿ : ಬಾಯಿ ಮುಚ್ಚಿಕೊಂಡು ಒಳಗೆ ಬನ್ನಿ! ಪಕ್ಕದ ಮನೆ `ಅಂಜಲಿ’ಯನ್ನು ನೋಡಿ ಅಂತ ಅಲ್ಲ ನಾನು ಹೇಳಿದ್ದು, ಸೀರಿಯಲ್ ಅಂಜಲಿಯನ್ನು!
`ನಮ್ಮ ನೆರೆಮನೆಯವಳು ತನ್ನ ಗಂಡ ಹೆಚ್ಚು ಸಂಪಾದಿಸುತ್ತಾನೆ ಎಂದು ಸಾರಿಕೊಳ್ಳುವ ಹೊಸ ಉಪಾಯ ಹುಡುಕಿದ್ದಾಳೆ. ಕಂಡೋರಿಗೆಲ್ಲ ತಾನು ಸಬ್ಸಿಡಿರಹಿತ ಗ್ಯಾಸ್ ಸಿಲಿಂಡರ್ ನಲ್ಲೇ ಅಡುಗೆ ಮಾಡುವುದೆಂದು ಡಂಗೂರ ಸಾರುತ್ತಾಳೆ!
”ಸೂಚನೆ : ವಾರ್ಷಿಕ 10 ಲಕ್ಷ ಆದಾಯವುಳ್ಳವರಿಗೆ `ಗ್ಯಾಸ್ ಸಬ್ಸಿಡಿ’ ರದ್ದು!