ಅಮೃತಧಾರೆ ಛಾಯಾಸಿಂಗ್
ಬಹುಭಾಷಾ ನಟಿ ಛಾಯಾಸಿಂಗ್ ತಮಿಳು, ಮಲೆಯಾಳಂ, ಬಂಗಾಳಿ, ಭೋಜಪುರಿ, ತೆಲುಗು, ಒರಿಯಾ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ ರಂಗದಿಂದ ನಟನೆ ಆರಂಭಿಸಿದ ಛಾಯಾಸಿಂಗ್, ಪಿ ಶೇಷಾದ್ರಿ ನಿರ್ದೇಶನದ `ಮುನ್ನುಡಿ’ ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅವರ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ `ರಾಷ್ಟ್ರಗೀತೆ, ಚಿಟ್ಟೆ, ಗುಟ್ಟು, ತುಂಟಾಟ, ಸಖಸಖಿ, ಆಕಾಶಗಂಗೆ, ರೌಡಿ ಅಳಿಯ….’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಕನ್ನಡ ಕಿರುತೆರೆಯ `ಅಮೃತಧಾರೆ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದಾರೆ.

ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ
ರೀಷ್ಮಾ ನಾಣಯ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಕೊಡಗಿನವರಾದ ರೀಷ್ಮಾ ನಾಣಯ್ಯ, ಬಾಲ್ಯದಿಂದಲೂ ನಟಿಯಾಗಬೇಕೆಂಬ ಕನಸು ಹೊಂದಿದ್ದರು. ಶಿಕ್ಷಣದ ಬಳಿಕ ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದರು. `ದಿ ಲಿವೆನ್ ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್’ ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. ಜೋಗಿ ಪ್ರೇಮ್ ನಿರ್ದೇಶನದ `ಏಕ್ ಲವ್ ಯಾ ‘ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ನಂತರ ರಾಣಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸ್ಪೂಕಿ ಕಾಲೇಜ್ ಸಿನಿಮಾದಲ್ಲಿ ಹಳೇ ಹಾಡೊಂದಕ್ಕೆ ನೃತ್ಯ ಮಾಡಿದ್ದರು. ನಂತರ `ಬಾನ ದಾರಿಯಲ್ಲಿ, ಯುಐ, ಕೆಡಿ ದಿ ಡೆವಿಲ್, ವಾಮನ’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಕಲಕಲಾ ವಲ್ಲಭೆ ಯಶಾ ಶಿವಕುಮಾರ್
ಯಶಾ ಶಿಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ನಟಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಯಶಾ ಶಿವಕುಮಾರ್, `ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ 2019′ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭರತನಾಟ್ಯ, ಕಥಕ್, ಬಾಲಿವುಡ್, ಮಣಿಪುರಿ ಹಾಗೂ ಜಾನಪದ ಪ್ರಕಾರಗಳಲ್ಲೂ ಪರಿಣಿತಿ ಹೊಂದಿದ್ದಾರೆ. `ಪದವಿಪೂರ್ವ’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಇವರು, ಶಿವರಾಜ್ ಕುಮಾರ್ ಅಭಿನಯದ ಬೈರಾಗಿ, ಪ್ರಜ್ವಲ್ ದೇವರಾಜ್ ಅಭಿನಯದ ಗಣ ಹಾಗೂ ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಸಿನಿಮಾಗಳಲ್ಲೂ ನಟಿಸಿದ್ದಾರೆ.

`ಮಿಸ್ ಸುಪ್ರಾ ಇಂಟರ್ ನ್ಯಾಷನಲ್‘ ಆಶಾ ಭಟ್
ನಟಿ, ಮಾಡೆಲ್ ಹಾಗೂ ನಿರ್ದೇಶಕಿ ಆಶಾ ಭಟ್ ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿಯವರು. ಬಾಲಿವುಡ್ ನ ಜಂಗ್ಲಿ ಚಿತ್ರದಲ್ಲಿ ನಟಿಸಿದ್ದ ಆಶಾ ಭಟ್ ಕನ್ನಡದಲ್ಲಿ `ರಾಬರ್ಟ್’ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡರು. ಆಸ್ಟ್ರಾ ಫೌಂಡೇಶನ್ ಸ್ಥಾಪಿಸಿ ಅದರ ನಿರ್ದೇಶಕಿಯಾಗಿದ್ದಾರೆ. ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರೈಸಿದ ಅವರು ಓದುತ್ತಿದ್ದಾಗಲೇ ಫ್ಯಾಷನ್ಲೋಕಕ್ಕೆ ಎಂಟ್ರಿ ಕೊಟ್ಟರು. 2014ರಲ್ಲಿ ಪೋಲೆಂಡ್ ನಲ್ಲಿ ನಡೆದ `ಮಿಸ್ ಸುಪ್ರಾ ಇಂಟರ್ ನ್ಯಾಷನಲ್’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಕಿರೀಟ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ನಂತರ ಜಾಹೀರಾತು ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದರು.

ಡ್ಯಾನ್ಸ್ ಗೂ ಸೈ, ಮಾಡೆಲಿಂಗ್ ಗೂ ಜೈ ಅದ್ವಿತಿ ಶೆಟ್ಟಿ
ಸ್ಯಾಂಡಲ್ ವುಡ್ ನಟಿ ಅದ್ವಿತಿ ಶೆಟ್ಟಿ ಮೂಲತಃ ಮಂಗಳೂರಿನವರು. ಮಣಿಪಾಲ್ ಇನ್ ಸ್ಟಿಟ್ಯೂಟ್ ನಲ್ಲಿ ಎಂಬಿಎ ಪೂರೈಸಿರುವ ಅದ್ವಿತಿ ಶೆಟ್ಟಿ, ಹಲವಾರು ಡ್ಯಾನ್ಸ್ ಶೋಗಳನ್ನು ನೀಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ಇವರು, ಮಿಸ್ ಬಂಟ್ ಬೆಂಗಳೂರು, ಮಿಸ್ ಮಂಗಳೂರು ಬ್ಯೂಟಿ ಹೇರ್ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. 2014ರಲ್ಲಿ ತೆರೆಕಂಡ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಮಿಸ್ಟರ್ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ರಾಧಿಕಾ ಗೆಳತಿಯಾಗಿ ನಟಿಸುಲ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. `ಗಿರ್ ಗಿಟ್ಲೆ, ಫ್ಯಾನ್, ಕಾರ್ಮೋಡ ಸರಿದು, ಐರಾವತ್, ಶುಗರ್ ಫ್ಯಾಕ್ಟರಿ, ಧೀರ ಸಾಮ್ರಾಟ್’ ಚಿತ್ರಗಳಲ್ಲಿ ನಟಿಸಿದ್ದಾರೆ.

ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ ನಿಮಿಕಾ ರತ್ನಾಕರ್
ಸ್ಯಾಂಡಲ್ ವುಡ್ ನಟಿ ನಿಮಿಕಾ ರತ್ನಾಕರ್, ಮೂಲತಃ ಮಂಗಳೂರಿನವರು. ನಿಮಿಕಾ ಬೆಳೆದಿದ್ದು ಮುಂಬೈನಲ್ಲಿ. ಮಾಡೆಲ್ ಹಾಗೂ ಗಾಯಕಿಯಾಗಿರುವ ನಿಮಿಕಾ, ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ 2017ರ ವಿನ್ನರ್ ಕೂಡಾ ಹೌದು. ನಿಮಿಕಾ 2008ರಲ್ಲಿ `ರಾಮಧ್ಯಾನ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ `ರವಿಚಂದ್ರ, ಬಿಂದಾಸ್ ಗೂಗ್ಲಿ, ತ್ರಿಶೂಲಂ, ಅಬ್ಬರ ಮತ್ತು. ಮಿ. ಬ್ಯಾಚುಲರ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಿಮಿಕಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಕ್ರಾಂತಿ’ ಸಿನಿಮಾದ `ಪುಷ್ಪಲತಿ’ ಹಾಡಿಗೆ ಹೆಜ್ಜೆ ಹಾಕಿದ್ದರು.

ಸಪ್ನೋಂಕಿ ರಾಣಿ ಐಶ್ವರ್ಯಾ ಸಿಂಧೋಗಿ
ಐಶ್ವರ್ಯಾ ಸಿಂಧೋಗಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದಿರುವ ಐಶ್ವರ್ಯಾ, ರಾಜ್ಯ ಮಟ್ಟದ ಹಾಕಿ ಆಟಗಾರ್ತಿ. ಸೃಜನ್ ಲೋಕೇಶ್ ನಟನೆಯ `ಸಪ್ನೋಂಕಿ ರಾಣಿ’ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟರು. `ಸಿಂಹಾದ್ರಿ, ಮಟಾಷ್, ಸಂಯುಕ್ತ-2, ಡಾರ್ಕ್, ವಾರ್, ಯಾರು ಯಾರು ನೀ ಯಾರು?, ಸೈತಾನ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ `ನಾಗಿಣಿ-2, ತನಿಷಾ, ಮಂಗಳಗೌರಿ ಮದುವೆ, ನಮ್ಮ ಲಚ್ಚಿ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ ಶಿಪ್, ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.

ಮನೆಮನದ ಪಾರು ಮೋಕ್ಷಿತಾ ಪೈ
ಕನ್ನಡ ಕಿರುತೆರೆಯಲ್ಲಿ ಸಕ್ರಿಯಾಗಿರುವ ನಟಿ ಮೋಕ್ಷಿತಾ ಪೈರ ತವರು ಮಂಗಳೂರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈಕೆ ಧಾರಾವಾಹಿಗೆ ಆಯ್ಕೆಯಾಗಿದ್ದು ಫೇಸ್ ಬುಕ್ ಮೂಲಕ. ಇವರ ನಟನೆಯ ಮೊದಲ ಸೀರಿಯಲ್ `ಪಾರು.’ ಈ ಧಾರಾವಾಹಿ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ನಿರ್ಣಯಾ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಬಿಗ್ ಬಾಸ್ ಕನ್ನಡ ಸೀಸನ್-11ರಲ್ಲಿ 16ನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಕಿರುತೆರೆ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ತಮ್ಮನ್ನು ಗುರುತಿಸಿಕೊಂಡಿರುವ ಇವರು, `ಮಿಡ್ ಕ್ಲಾಸ್ ರಾಮಾಯಣ’ದೊಂದಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.





