ಸರಸ್ವತಿ*

ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಹೆಚ್.ಕೆ ಪ್ರಕಾಶ್ ನಿರ್ಮಾಣದ, “ದಿಯಾ”, “ಬ್ಲಿಂಕ್” ಸೇರಿದಂತೆ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ಮತ್ತು ಬೃಂದಾ ಆಚಾರ್ಯ ನಾಯಕಿಯಾಗಿ ‌ನಟಿಸಿರುವ ಹಾಗೂ ಅಭಿಷೇಕ್ ಎಂ ನಿರ್ದೇಶನದ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ‌ರೋರಿಂಗ್ ಸ್ಟಾರ್ ಶ್ರೀಮುರಳಿ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನೆನಪಿರಲಿ ಪ್ರೇಮ್ , ಮೇಘನಾ ಗಾಂವ್ಕರ್, ಲಹರಿ ವೇಲು ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಸ್ನೇಹಿತರ ಜೊತೆ ಸೇರಿ “ಪಿನಾಕ” ಎಂಬ ವಿ.ಎಫ್.ಎಕ್ಸ್ ಸ್ಟುಡಿಯೋ ನಡೆಸುತ್ತಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಅಭಿಷೇಕ್, ಕರೋನ ಸಮಯದಲ್ಲಿ ಕಿರುಚಿತ್ರ ಮಾಡಲು ಹೊರಟ ಕಥೆ ಇದು. ಆನಂತರ ಇದನ್ನು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಅನಿಸಿತು. ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರು ಕಥೆ ಮೆಚ್ಚಿಕೊಂಡರು. ದೀಕ್ಷಿತ್ ಶೆಟ್ಟಿ, ಬೃಂದಾ ಆಚಾರ್ಯ ನಾಯಕ – ನಾಯಕಿ ಅಂತ ನಿಗದಿಯಾಯಿತು. ಆನಂತರ ಚಿತ್ರಕ್ಕೆ ಚಾಲನೆ ದೊರೆಯಿತು. ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ. ಚಿತ್ರ ಅಂದುಕೊಂಡ ಹಾಗೆ ಬಂದಿರುವುದಕ್ಕೆ ಚಿತ್ರತಂಡದ ಸಹಕಾರವೇ ಪ್ರಮುಖ ಕಾರಣ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ. ನಮ್ಮ ಚಿತ್ರ ನವೆಂಬರ್ 21ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

Bank 1

“ರಂಗಿತರಂಗ” ಚಿತ್ರದಿಂದ ನಿರ್ಮಾಪಕನಾದೆ. ಇದು ನನ್ನ ನಿರ್ಮಾಣದ ಆರನೇ ಚಿತ್ರ. ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ನಿರ್ಮಾಣವಾಗಿದೆ. ನಮ್ಮ ಎಲ್ಲಾ ಚಿತ್ರಕ್ಕೆ ತಾವುಗಳು ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ ಎಂದರು ನಿರ್ಮಾಪಕ ಎಚ್.ಕೆ ಪ್ರಕಾಶ್.

ನನ್ನ “ದಿಯಾ” ಹಾಗೂ “ಬ್ಲಿಂಕ್” ಸಿನಿಮಾಗಳಿಗೆ ತಾವೆಲ್ಲಾ ನೀಡಿದ ಪ್ರೋತ್ಸಾಹ ಅಪಾರ. ನನಗೆ ಬೇರೆಬೇರೆ ಜಾನರ್ ನ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ. ಅದರಂತೆ ಹಿಂದಿನ ಚಿತ್ರಗಳ ಜಾನರ್ ಬೇರೆ. ಇದೇ ಬೇರೆ. ನಮ್ಮ ಚಿತ್ರ ಗೆದ್ದೆ ಗೆಲ್ಲುತ್ತದೆ ಎನ್ನುವ ಭರವಸೆ ಇದೆ. ಚಿತ್ರದ ಸಕ್ಸಸ್ ಮೀಟ್ ನಲ್ಲಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಇನ್ನೂ, ನವೆಂಬರ್ 21 ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ನೋಡುವ ಮೂಲಕ ಚಿತ್ರವನ್ನು ಗೆಲ್ಲಿಸಬೇಕೆಂದು ನಾಯಕ ದೀಕ್ಷಿತ್ ಶೆಟ್ಟಿ ಹೇಳಿದರು‌.

ನನ್ನನ್ನು ಎಲ್ಲರೂ ನಿನಗೆ ಯಾರು ಪೈಪೋಟಿ ಅಂತ ಕೇಳುತ್ತಿದ್ದರು. ನನಗೆ ನಾನೇ ಪೈಪೋಟಿ ಅಂತ ಹೇಳುತ್ತಿದ್ದೆ. ಇಗ ಅದು ನಿಜ ಆಗಿದೆ. ನವೆಂಬರ್ 21 ರಂದು ನನ್ನ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗುತ್ತಿದೆ. ಎರಡರಲ್ಲೂ ವಿಭಿನ್ನ ಪಾತ್ರಗಳು. “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದಲ್ಲಿ ಅಭಿನಯಿಸಿದ್ದು ಬಹಳ ಸಂತೋಷವಾಗಿದೆ ಎಂದರು ನಾಯಕಿ ಬೃಂದಾ ಆಚಾರ್ಯ.

ನಾಯಕನ ಸ್ನೇಹಿತರಾಗಿ ನಟಿಸಿರುವ ಶ್ರೀವತ್ಸ, ಶ್ರೇಯಸ್ ಶರ್ಮ, ಅಶ್ವಿನ್ ರಾವ್ ಪಲ್ಲಕ್ಕಿ, ವಿನುತ್ ಹಾಗೂ ನಟಿ ಉಷಾ ಭಂಡಾರಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ