ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಬ್ಯಾಂಕ್ ಜನಾರ್ದನ್ ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. 40 ವರ್ಷಗಳ ಸುದೀರ್ಘ ಜರ್ನಿಯಲ್ಲಿ 860ಕ್ಕೂ ಅಧಿಕ ಸಿನಿಮಾಗಳು, ನೂರಾರು ನಾಟಕಗಳು, ಹತ್ತಾರು ಸೀರಿಯಲ್ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಭಿನ್ನ ವಿಭಿನ್ನ ಪಾತ್ರಗಳಿಂದ ಕೋಟ್ಯಂತರ ಮಂದಿಯನ್ನ ರಂಜಿಸಿದ್ದಾರೆ. ಇಂತಹ ಅಪರೂಪದ ಹಾಗೂ ಅವಿಸ್ಮರಣೀಯ ಕಲಾವಿದ ಬ್ಯಾಂಕ್ ಜನಾರ್ದನ್ ಉಸಿರು ಚೆಲ್ಲಿದ್ದಾರೆ.
76 ವರ್ಷದ ನಟ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ.
20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ದನ್ನ್ರ ಅವರನ್ನ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ದಿನಗಳ ಹಿಂದೆ ಮನೆಗೆ ಕರೆದೊಯ್ದಿದ್ದರು. ಆದ್ರೆ ಮತ್ತೆ ಉಸಿರಾಟ ತೊಂದರೆಯಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಏಪ್ರಿಲ್ 13ರ ಮಧ್ಯೆರಾತ್ರಿ 2.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಇವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದ್ದು, ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರು ಬಂದು ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು. ರಾಜಕಾರಣಿಗಳು ಕೂಡ ಆತ್ಮಕ್ಕೆ ಶಾಂತಿ ಕೋರಿದ್ರು.
ಒಂದು ಕಾಲದ ಬ್ಯುಸಿಯೆಸ್ಟ್ ಕಲಾವಿದರಾಗಿದ್ದ ಇವರು, ಕಾಶಿನಾಥ್ ಹಾಗೂ ಉಪೇಂದ್ರ ಸಿನಿಮಾಗಳ ಖಾಯಂ ಕಲಾವಿದ. ಬಹುತೇಕ ಎಲ್ಲಾ ಸೀನಿಯರ್ ಕಲಾವಿದ ಜೊತೆ ಸ್ಕ್ರೀನ್ ಶೇರ್ ಮಾಡಿದ ಅನುಭವ. ಡಾ ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್, ಶಶಿಕುಮಾರ್, ಅನಂತ್ ನಾಗ್, ಕಾಶಿನಾಥ್, ಉಪೇಂದ್ರ, ಜಗ್ಗೇಶ್ ಸೇರಿದಂತೆ ಇಂದಿನ ಪೀಳಿಗೆಯ ಸುದೀಪ್, ರಕ್ಷಿತ್ ಶೆಟ್ಟಿ, ಪುನೀತ್ ರಾಜ್ಕುಮಾರ್ ಸೇರಿದಂತೆ ಹೊಸ ಪ್ರತಿಭೆಗಳ ಜೊತೆಗೂ ಬಣ್ಣ ಹಚ್ಚಿದ್ದರು.
ಹೊಳಲ್ಕೆರೆಯಲ್ಲಿ ವಿಜಯ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜನಾರ್ದನ್ ಗೆ ನಾಟಕ ಹಾಗೂ ಸಿನಿಮಾಗಳ ಹುಚ್ಚು. ಬ್ಯಾಂಕ್ನಲ್ಲಿ ಕೆಲಸ ಮಾಡಿಕೊಂಡೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಜನಾರ್ದನ್ರನ್ನ ಕಂಡ ಧೀರೇಂದ್ರ ಗೋಪಾಲ್, ಬೆಂಗಳೂರಿಗೆ ಬರಲು ಸೂಚಿಸ್ತಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಪಿತಾಮಹ ಬ್ಯಾಂಕ್ ಜನಾರ್ದನ್ರ ಚೊಚ್ಚಲ ಸಿನಿಮಾ.
ಹೊಳಲ್ಕೆರೆಯಿಂದ ಸಿನಿಮಾಗಳ ಶೂಟಿಂಗ್ಗೆ ಟ್ರಾವೆಲ್ ಮಾಡೋಕೆ ತ್ರಾಸಾಗಲಿದೆ ಅಂತ ಕನಕಪುರಕ್ಕೆ ಟ್ರಾನ್ಸ್ಫರ್ ತಗೊಂಡಂತಹ ಜನಾರ್ದನ್, ಬ್ಯಾಂಕ್ ಕೆಲಸ ಮಾಡಿಕೊಂಡೇ ನೂರು ಸಿನಿಮಾಗಳನ್ನ ಮಾಡ್ತಾರೆ. ಕಾಶಿನಾಥ್ರ ಅಜಗಜಾಂತರ ಚಿತ್ರ ಅವರಿಗೊಂದು ಬ್ರೇಕ್ ನೀಡುತ್ತೆ. ಅದ್ರಲ್ಲೂ ಕಾಶಿನಾಥ್ರ ಶಿಷ್ಯ ಉಪೇಂದ್ರ ಸಿನಿಮಾಗಳಲ್ಲಿ ಇವರಿಗೆ ಒಂದು ಪಾತ್ರ ಫಿಕ್ಸ್ ಆಗಿರುತ್ತೆ.
ನಟಸಾರ್ವಭೌಮ ಡಾ ರಾಜ್ ಕುಮಾರ್ ಯಾವುದೇ ಕಾರಣಕ್ಕೂ ಬ್ಯಾಂಕ್ ಕೆಲಸ ಬಿಡಬೇಡಿ ಅಂತ ಜನಾರ್ದನ್ಗೆ ಕಿವಿಮಾತು ಹೇಳಿದ್ದರಂತೆ. ಶ್ ಚಿತ್ರದಲ್ಲಿ ಬೈಯ್ಯೋ ಪಾತ್ರ ಅಣ್ಣಾವ್ರಿಗೆ ಹಿಡಿಸಿತ್ತಂತೆ. ಆದ್ರೆ ಅಣ್ಣಾವ್ರ ಮಾತು ಕೇಳದ ಬ್ಯಾಂಕ್ ಜನಾರ್ದನ್ ಕೆಲಸ ಬಿಟ್ಟು ಎಡವಟ್ ಮಾಡಿಕೊಂಡರು. ಅಭಿನಯದಲ್ಲೇನೋ ಅವರು ಶ್ರೀಮಂತರೇ.. ಆದ್ರೆ ಅರ್ಥಿಕವಾಗಿ ಶ್ರೀಸಾಮಾನ್ಯನಾಗಿಯೇ ಉಳಿದರು. ಆ ಕಾಲದಲ್ಲಿ ಬ್ಯಾಂಕ್ ಮ್ಯಾನೇಜರ್ ಕೆಲಸ ಅಂದ್ರೆ ತಮಾಷೆಯೇ..? ನೀವೇ ಊಹಿಸಿ.