– ರಾಘವೇಂದ್ರ ಅಡಿಗ ಎಚ್ಚೆನ್
ಕೋಮಲ್ ಅಭಿನಯದ ಚಿತ್ರಗಳು ಒಂದರಹಿಂದೊಂದು ಶುರುವಾಗುತ್ತಲೇ ಇವೆ. ಆದರೆ, ಬಿಡುಗಡೆ ಮಾತ್ರ ಆಗುತ್ತಿಲ್ಲ. ಕೋಮಲ್ ಕೈಯಲ್ಲಿ ಸದ್ಯಕ್ಕೆ ನಾಲ್ಕು ಚಿತ್ರಗಳಿದ್ದು, ನಾಲ್ಕು ಚಿತ್ರಗಳು ನಿರ್ಮಾಣ ವಿವಿಧ ಹಂತಗಳಲ್ಲಿವೆ. ಹೀಗಿರುವಾಗಲೇ, ಕೋಮಲ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.
ಅಂದಹಾಗೆ, ಕೋಮಲ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ (Sangeetha Bar and Restaurant) ಎಂದು ಹೆಸರಿಡಲಾಗಿದ್ದು, ಈ ಚಿತ್ರವನ್ನು ಸಂದೇಶ್್ ಶೆಟ್ಟಿ ಅಜ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್ ಈ ಹಿಂದೆ ‘ಕತ್ತಲೆ ಕೋಣೆ’, ‘ಇನಾಂದಾರ್’ ಮತ್ತು ‘ಗುಂಮ್ಟಿ’ ಚಿತ್ರಗಳನ್ನು ನಿರ್ಮಿಸಿದ್ದು, ಇದೀಗ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಜ್ಯೋತಿ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಈ ಚಿತ್ರದಲ್ಲಿ ಕೋಮಲ್ಗೆ ಅನುಷಾ ರೈ ನಾಯಕಿಯಾಗಿ ನಟಿಸಿದರೆ ಮೇಘನಾ ರಾಜ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಎಂ. ಕೆ. ಮಠ, ಪ್ರಕಾಶ್ ತುಮ್ಮಿನಾಡು, ವರ್ಧನ್ ತೀರ್ಥಹಳ್ಳಿ, ಸಿರಿ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಕೋಮಲ್, ‘ಇದೊಂದು ವಿಭಿನ್ನ ಸಿನಿಮಾ. ಎರಡು ಕಾಲಘಟ್ಟದಲ್ಲಿ ಈ ಕಥೆ ನಡೆಯಲಿದ್ದು, ನನ್ನದು ಎರಡು ವಿಭಿನ್ನ ಪಾತ್ರಗಳಿವೆ.
ಕಾಮಿಡಿ, ಮನರಂಜನೆಯ ಜೊತೆ ಬೇರೆ ಒಂದಷ್ಟು ವಿಷಯಗಳು ಕೂಡ ಈ ಸಿನಿಮಾದಲ್ಲಿರಲಿದೆ. ಈ ಸಿನಿಮಾದಲ್ಲಿ ನಾನು ಸಿನಿಮಾ ನಿರ್ದೇಶಕನಾಗಿ ನಟಿಸುತ್ತಿದ್ದು, ಮತ್ತೊಂದು ಪಾತ್ರದ ಬಗ್ಗೆ ಈಗಲೇ ಹೇಳಲಾರೆ’ ಎಂದರು.
ನಟಿ ಮೇಘನಾ ರಾಜ್ ಮಾತನಾಡಿ,‘ನಾನು ಸಿನಿಮಾದಿಂದ ದೂರವಾಗಿದ್ದೇನೆ ಎಂದು ಅನೇಕರು ಅಂದುಕೊಂಡಿದ್ದಾರೆ. ಆದರೆ ನಾನು, ನಿಜವಾಗಿಯೂ ಸಿನಿಮಾದಿಂದ ದೂರವಾಗಿಲ್ಲ. ಒಳ್ಳೆಯ ಕಥೆ, ಒಳ್ಳೆಯ ಪಾತ್ರಗಳು, ನನಗೆ ಇಷ್ಟವಾಗುವಂತ ಪಾತ್ರಗಳು ಸಿಕ್ಕರೆ, ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ.ಈಗಾಗಲೇ ಮಲೆಯಾಳಂನಲ್ಲೂ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಬಹಳ ದಿನಗಳ ನಂತರನಾನು ಕನ್ನಡದಲ್ಲಿ ಅಭಿನಯಿಸುತ್ತಿರುವ ಸಿನಿಮಾ. ಈ ಸಿನಿಮಾದ ಕಥೆಯನ್ನು ನಿರ್ದೇಶಕರು ಹೇಳಿದ ಕೂಡಲೇ ಇಷ್ಟವಾಗಿ ಪಾತ್ರ ಮಾಡಲು ಒಪ್ಪಿಕೊಂಡೆ.ಈ ಸಿನಿಮಾದಲ್ಲಿ 19ನೇ ಶತಮಾನದಲ್ಲಿ ಬರುವ ರಾಜಮನೆತನದ ಮಹಿಳೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನನಗೆ ಇದೊಂದು ಹೊಸತರಹದ ಪಾತ್ರ. ನೋಡುಗರಿಗೂ ನನ್ನ ಪಾತ್ರ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ’ ಎಂದರು.ಮನರಂಜನೆಯ ಜೊತೆಗೆ, ಇಂದಿನ ಕೆಲವು ಸಾಮಾಜಿಕ ವಿಷಯಗಳನ್ನೂ ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ ಎನ್ನುವ ನಿರ್ದೇಶಕ ಸಂದೇಶ್, ‘ಕೋಮಲ್ ಅವರನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಈ ಸಿನಿಮಾದಲ್ಲಿ ಕಾಣುತ್ತಾರೆ. ಇಡೀ ಸಿನಿಮಾದ ಮೊದಲರ್ಧ ಹಾಸ್ಯಭರಿತವಾಗಿ ಸಾಗಿದರೆ, ದ್ವಿತೀಯಾರ್ಧ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳ ಜೊತೆ ಸಾಗುತ್ತದೆ.ಕುಂದಾಪುರ, ಕಾಸರಗೋಡು, ಕೇರಳ, ರಾಜಸ್ತಾನ, ಹಂಪಿ ಮೊದಲಾದ ಕಡೆಗಳಲ್ಲಿ ಚಿತ್ರೀಕರಣಕ್ಕೆಪ್ಲಾನ್ ಮಾಡಿಕೊಂಡಿದ್ದೇವೆ. ಮುಂದಿನ ವರ್ಷದ ಆರಂಭದಲ್ಲಿಯೇ ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆ ಇದೆ’ ಎಂದರು.