ಸಿನಿಮಾ ಮುಗಿದ ಸಾಕಷ್ಟು ಕ್ಷಣಗಳು ಕಳೆದರೂ ಜನ ಸೀಟಿನಿಂದೇಳಲು ಸಿದ್ಧವಿಲ್ಲ. ನೀರವ ಮೌನದಲ್ಲೂ ಮಡುಗಟ್ಟಿದ ಭಾವೋದ್ವೇಗ. ಕೆಲವರು ದುಃಖ ತಡೆಯಲಾರದೇ ಬಿಕ್ಕುತ್ತಿದ್ದರೆ. ಇನ್ನು ಕೆಲವರು ಇದೇನಾಗಿ ಹೋಯಿತು ಎಂಬಂತೆ ದಿಘ್ಭ್ರಾಂತಿಯಲ್ಲಿ ಮುಳುಗಿದ್ದಾರೆ. ಕೆಲವರು ನಿಜ ಪ್ರಪಂಚಕ್ಕೆ ತಕ್ಷಣ ವಾಪಾಸು ಬಂದ ಶಾಕ್ ನಲ್ಲಿದ್ದರೆ ಇನ್ನು ಕೆಲವರು ಹೊಸದಾದ ಸತ್ಯವೊಂದನ್ನು ಕಂಡುಕೊಂಡು ಆಳವಾದ ಆತ್ಮವಿಮರ್ಶೆಯಲ್ಲಿ ಮುಳುಗಿರುವಂತೆ ಕಾಣುತ್ತಾರೆ. ಇದು ಛಾವಾ ಸಿನಿಮಾದ ಕೊನೆಯಲ್ಲಿ ಥಿಯೇಟರ್ ನಲ್ಲಿ ನನಗೆ ಕಂಡ ದೃಶ್ಯ.
ಸಿನಿಮಾ ನೋಡಿ ಅದಾಗಲೇ 3 - 4 ದಿನಗಳು ಕಳೆದು ಹೋದವು. ಫಸ್ಟ್ ಡೇ ಫಸ್ಟ್ ಶೋ ನೋಡಿ ರಿವ್ಯೂ ಬರೀಬೇಕು ಅಂತಾನೇ ಸಿನಿಮಾಗೆ ಹೋಗಿದ್ದು. ಮೂರೂವರೆ ನಿಮಿಷದ ಟ್ರೈಲರ್ ನೋಡಿದ್ದರಿಂದ ಸಿನಿಮಾ ಅದ್ಭುತವಾಗೇ ಇದೆ ಅಂತ ಗೊತ್ತಿತ್ತು. ಆದರೆ ರೀವ್ಯೂ ಬರೆಯೋದು ನನ್ನ ಮುಖ್ಯ ಉದ್ದೇಶವಾಗಿತ್ತು. ಆದರೆ ಸಿನಿಮಾ ನೋಡಿದ ಕ್ಷಣದಿಂದ ಮನಸ್ಸು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿಬಿಟ್ಟಿದೆ. ಈಗಲೂ ಅಕ್ಷರಗಳನ್ನು ಪೂರ್ಣಮನಸ್ಸಿನಿಂದ ಟೈಪಿಸಲು ಆಗುತ್ತಿಲ್ಲ. ಸಿನಿಮಾದ ಹ್ಯಾಂಗೋವರ್ ನಿಂದ ಹೊರಬರಲೇ ಆಗುತ್ತಿಲ್ಲ. ನಿಜ ಹೇಳಬೇಕೆಂದರೆ ನಾನು ಸಿನಿಮಾ ಒಂದನ್ನು ನೋಡಿದ್ದೇನೆ ಅಂತಾನೇ ಅನ್ನಿಸುತ್ತಿಲ್ಲ. ಬದಲಾಗಿ ಟೈಮ್ ಮೆಷೀನ್ ನಲ್ಲಿ ಕೂತು ಇತಿಹಾಸದ ಕಾಲಗರ್ಭದಲ್ಲಿ ಹಿಂದೆ ಹೋಗಿ ಹದಿನೇಳನೇ ಶತಮಾನದ ಕೊನೆಯ ಭಾಗದ ಎಂಟು ಒಂಭತ್ತು ವರ್ಷಗಳನ್ನು ಮಹಾರಾಷ್ಟ್ರದ ಸಹ್ಯಾದ್ರಿ ಬೆಟ್ಟಗಳಲ್ಲಿ ಕಳೆದು ಬಂದೆನೇನೋ, ಔರಂಗಜೇಬನ ಕ್ರೌರ್ಯಕ್ಕೆ, ವೀರ ಸಾಂಭಾಜಿಯ ಅಂತ್ಯಕ್ಕೆ ನಾನೂ ಸಾಕ್ಷಿಯಾಗಿದ್ದೆನೇನೋ ಅನ್ನಿಸುತ್ತಿದೆ.
ಇಂತಹುದೊಂದು ಸಿನಿಮಾ ಬರಬೇಕಿತ್ತು. ಇತಿಹಾಸದಲ್ಲಿ ಮುಚ್ಚಿಹಾಕಿದ ಅದೆಷ್ಟೋ ಸತ್ಯಗಳನ್ನು ಹೊರತೆಗೆಯಲು ಇಂತಹ ಒಂದು ಪ್ರಯತ್ನ ಆಗಲೇಬೇಕಿತ್ತು. ಧರ್ಮದ ರಕ್ಷಣೆಗಾಗಿ ಅದೆಷ್ಟು ಜನ ತಮ್ಮ ಸರ್ವಸ್ವವನ್ನೂ ಅರ್ಪಿಸಿದ್ದಷ್ಟೇ ಅಲ್ಲದೇ ಅದೆಂತಾ ಯಮಯಾತನೆಯನ್ನು ಅನುಭವಿಸಬೇಕಾಯಿತು ಎಂಬುದರ ಅರಿವು ಭಾರತೀಯರಾದ ನಮಗೆ ಖಂಡಿತವಾಗಿ ಇಲ್ಲ. ಸ್ವಾತಂತ್ರ್ಯ ಹೋರಾಟವೆಂದರೆ ಬರೀ ಗಾಂಧೀಜಿಯವರ ಉಪವಾಸ ಸತ್ಯಾಗ್ರಹ, ಅಹಿಂಸೆ, ಶಾಂತಿ ಎಂದು ಭಾವಿಸಿರುವ ಹೆಚ್ಚೆಂದರೆ ಬ್ರಿಟಿಷರ ವಿರುದ್ಧ ಮಾತ್ರ ನಡೆದ ಹೋರಾಟದ ಅರಿವಿರುವ ನಮ್ಮವರಿಗೆ ಮುಸಲ್ಮಾನ ಆಕ್ರಮಣಕಾರರ ವಿರುದ್ಧ ನಡೆದ ರೋಚಕ ಇತಿಹಾಸ ಗೊತ್ತಿಲ್ಲ. ರಜಪೂತರ ಮೇಲೆ, ಸಿಖ್ಖರ ಮೇಲೆ, ನಮ್ಮದೇ ವಿಜಯನಗರ ಸಾಮ್ರಾಜ್ಯದ ಮೇಲೆ, ಅವರು ನಡೆಸಿದ ಭೀಭತ್ಸ ದಬ್ಬಾಳಿಕೆ ಮತ್ತು ಎಲ್ಲೆ ಮೀರಿದ ಹಿಂಸೆಯ ಕಥೆಗಳನ್ನು ಕೇಳಿಲ್ಲ.
ಮಾತೆತ್ತಿದರೆ ಜಾತ್ಯಾತೀತತೆ ಎನ್ನುವ ಸೋಗಲಾಡಿಗಳು ಸತ್ಯ ಹೇಳಿಬಿಟ್ಟರೆ ಕೋಮುಸೌಹಾರ್ದ ಹದಗೆಟ್ಟು ಹೋಗುವುದು ಎಂಬ ಗುಮ್ಮನನ್ನು ತೋರಿಸಿ ಅನಾದಿ ಕಾಲದಿಂದಲೂ ಇತಿಹಾಸದ ಕುರಿತು ಜಾಣಗುರುಡು ಪ್ರದರ್ಶಿಸುತ್ತಾ, ಓಲೈಕೆ ಇತಿಹಾಸ ಬರೆದು, ಓದಿಸಿ ಜನರನ್ನು ನಿರ್ವೀರ್ಯರನ್ನಾಗಿಸಿಬಿಟ್ಟಿರುವ ಇಂತಹಾ ಸಂದರ್ಭದಲ್ಲಿ ಛತ್ರಪತಿ ಸಾಂಭಾಜಿ ಮಹಾರಾಜರ ಹೋರಾಟದ ಕುರಿತಾದ ಸಿನಿಮಾ ಬಂದಿರುವುದು ನಿಜಕ್ಕೂ ಅದ್ಭುತ ಬೆಳವಣಿಗೆ. ಅದರಲ್ಲೂ ದೇಶ ವಿರೋಧಿ - ಧರ್ಮವಿರೋಧಿ ಚಿಂತನೆಗಳ ಮುಳ್ಳಿನ ಗಿಡಗಳನ್ನೇ ಬೆಳೆಸುತ್ತಾ ದೇಶಭಕ್ತಿಯ ಹೂವುಗಳನ್ನು ಬೆಳೆಸುವ ವಿಷಯದಲ್ಲಿ ಮರುಭೂಮಿಯಂತಾಗಿದ್ದ ಬಾಲಿವುಡ್ ನಲ್ಲಿ ಅಪರೂಪಕ್ಕೆ ಉಕ್ಕಿದ ಓಯಸಿಸ್ ಚಿಲುಮೆ ಈ ಸಿನಿಮಾ ಎನ್ನಬಹುದು. ಪದ್ಮಾವತಿ, ಸಾವರ್ಕರ್, ರಜಾಕಾರ್, ಕಾಶ್ಮೀರ ಫೈಲ್ಸ್, ಕೇರಳ ಫೈಲ್ಸ್, ಸಾಬರಮತಿ ಮುಂತಾದ ಸತ್ಯವನ್ನು ಬಿಚ್ಚಿಟ್ಟ ಇತ್ತೀಚಿನ ಕೆಲವು ದಿಟ್ಟ ಸಿನಿಮಾಗಳ ಸಾಲಿಗೆ ಈ ಚಿತ್ರವೂ ಸೇರುತ್ತದೆ.