ತನ್ನ ಅದ್ಭುತ ನಟನೆಯಿಂದ ವೀಕ್ಷಕರ ಮನದಲ್ಲಿ ಅಪೂರ್ವ ಮೋಡಿ ಮಾಡಿರುವ ನಟಿ ದೀಪಿಕಾ ಪಡುಕೋಣೆ, ಕನ್ನಡದ ಸುಪ್ರಸಿದ್ಧ ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆಯವರ ಹಿರಿ ಮಗಳು. ಮಾಡೆಲಿಂಗ್‌ನಿಂದ ಇವಳ ಕೆರಿಯರ್‌ ಶುರು. 2006ರಲ್ಲಿ ಕನ್ನಡದಲ್ಲಿ ಉಪೇಂದ್ರ ಜೊತೆ ನಟಿಸಿದ `ಐಶ್ವರ್ಯಾ’ ಇವಳ ಚಿತ್ರರಂಗದ ಚೊಚ್ಚಲ ಚಿತ್ರ.

ಕನ್ನಡತಿಯಾಗಿ ಗುರುತಿಸಿಕೊಂಡು ಬಾಲಿವುಡ್‌ ಪ್ರವೇಶಿಸಿದ ದೀಪಿಕಾ `ಓಂ ಶಾಂತಿ ಓಂ’ ಮೂಲಕ ಸ್ಟಾರ್‌ ಎನಿಸಿದಳು. ಆ ನಂತರ ಇವಳ ಪಾಲಿಗೆ 2013 ಬಂಪರ್‌ ಎನ್ನಬಹುದು. ರೇಸ್‌2, ಏ ಜಾನಿ ಹೈ ದಿವಾನಿ, ಚೆನ್ನೈ ಎಕ್ಸ್ ಪ್ರೆಸ್‌, ರಾಮಲೀಲಾ ಮುಂತಾದ ಸತತ ಯಶಸ್ವೀ ಚಿತ್ರಗಳಿಂದಾಗಿ ಅತಿ ಹೆಚ್ಚಿನ ಸಂಭಾವನೆಯೊಂದಿಗೆ ಟಾಪ್‌ 1 ಪಟ್ಟ ಗಿಟ್ಟಿಸಿಕೊಂಡಳು.

ಇವಳ ಈ ಚಿತ್ರಗಳೆಲ್ಲ ಗಳಿಕೆಯಲ್ಲಿ 100 ಕ್ರೋರ್‌ ಕ್ಲಬ್‌ ಸೇರಿದ್ದು ಆಶ್ಚರ್ಯವೇನಲ್ಲ. 2015ರ `ಹ್ಯಾಪಿ ನ್ಯೂ ಇಯರ್‌’ ಗಳಿಕೆಯಲ್ಲಿ 200 ಕ್ರೋರ್‌ ಕ್ಲಬ್‌ ಕೂಡ ದಾಟಿತು!

ಅವಳೊಂದಿಗೆ ನಡೆಸಿದ ಮಾತುಕಥೆಯ ಆಯ್ದ ಭಾಗ :

ಒಬ್ಬ ಯಶಸ್ವೀ ನಟಿ….. ಈಗ ಯಶಸ್ವೀ ವಿವಾಹಿತೆ! ಈ ಕುರಿತು ಏನು ಹೇಳ ಬಯಸುತ್ತೀರಿ?

ಮದುವೆಗೆ ಮೊದಲು ಹೆಚ್ಚೂ ಕಡಿಮೆ 5-6 ವರ್ಷ ನಾನು ರಣವೀರ್‌ ಜೊತೆ ಡೇಟಿಂಗ್‌ನಲ್ಲಿದ್ದೆ. ಆಗ ನಮ್ಮಿಬ್ಬರ ಕೆರಿಯರ್‌ ವಿಭಿನ್ನವಾಗಿತ್ತು. ಮದುವೆಗೆ ಮೊದಲಿನಿಂದಲೂ ನಾವಿಬ್ಬರೂ ನಮ್ಮ ಪರ್ಸನಲ್ ಲೈಫ್‌ ಮತ್ತು ಚಾಯ್ಸ್ ಕುರಿತು ಬಹಳ ಗೌರವಾದರ ಹೊಂದಿದ್ದೆವು. ಈಗಲೂ ಸಹ! ಒಟ್ಟಾರೆ ಹೇಳಬೇಕೆಂದರೆ ರಣವೀರ್‌ ಜೊತೆ ನನ್ನ ಮದುವೆ, ನನ್ನ ಜೀವನದ ಮಧುರ ಕ್ಷಣಗಳೆಂದೇ ಹೇಳಬೇಕು.

ನೀವು ಯಶಸ್ವೀ ನಟಿ ಎನಿಸಿದ್ದೀರಿ, ಈ ಕುರಿತಾಗಿ ನಿಮ್ಮ ಅಭಿಪ್ರಾಯ….?

ನನಗೆ ಯಾವ ಪ್ರಾಜೆಕ್ಟ್ ಸಿಗುತ್ತದೋ ಅದನ್ನು ನಾನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಆದರೆ ಪ್ರತಿ ಸಲ ನಾನು ಅದರಲ್ಲಿ ಯಶಸ್ವಿಯಾಗಲು ಸಾಧ್ಯ ಆಗುವುದಿಲ್ಲ. ಸಿನಿಮಾಗಳಲ್ಲಿ ಏರಿಳಿತ ಸಾಧಾರಣ ವಿಷಯ. ಇದನ್ನು ನಾನು ಸಹಜವಾಗಿ ಸ್ವೀಕರಿಸುತ್ತೇನೆ.

ನೀವು ಮೊದಲ ಸಲ ಅಭಿನಯವನ್ನು ವೃತ್ತಿಯಾಗಿ ಸ್ವೀಕರಿಸುತ್ತೇನೆ ಎಂದಾಗ ನಿಮ್ಮ ಮನೆಯವರ ಅಭಿಪ್ರಾಯ ಹೇಗಿತ್ತು?

ನಾನು ಸಿನಿಮಾ ಸೇರುವುದು ಅವರಿಗೆ ಅಂಥ ಖುಷಿಯ ವಿಷಯ ಆಗಿರಲಿಲ್ಲ. ನಾನು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು. ಆಗ ನಾನಿನ್ನೂ 12ನೇ ತರಗತಿಯಲ್ಲಿದ್ದೆ. ಅಪ್ಪಾಜಿ ಜೊತೆ ಇಷ್ಟಪಟ್ಟು ಬ್ಯಾಡ್ಮಿಂಟನ್‌ ಆಡುತ್ತಿದ್ದೆ. ಆ ಸಮಯದಲ್ಲಿ ಪರಿಚಿತ ಆ್ಯಡ್‌ ಗುರು ಪ್ರಸಾದ್‌ ಬಿಡ್ಡಪ್ಪ ನನ್ನ ಫೋಟೋ ಶೂಟ್‌ ಮಾಡಿದರು. ಫೋಟೋ ಬಹಳ ಚೆನ್ನಾಗಿ ಬಂದಿತ್ತು. ಆಗ ಅವರೇ ನನಗೆ ಅವನ್ನು ಕೆಲವು ಜಾಹೀರಾತು ಕಂಪನಿಗಳಿಗೆ ಕಳುಹಿಸಲು ಹೇಳಿದರು. ಕೆಲವೊಂದು ಆಫರ್ಸ್‌ ಕೊಡಿಸಿದರು.

ಹೀಗೆ ಹವ್ಯಾಸವಾಗಿ ಆರಂಭವಾದ ನನ್ನ ಮಾಡೆಲಿಂಗ್‌ ಕೆಲಸ, ನನಗೆ ಬಹಳ ಹಿಡಿಸಿತು. ಒಂದು ದಿನ ನಾನು ಅಪ್ಪಾಜಿಗೆ ಸಿನಿಮಾ ಸೇರುತ್ತೀನಿ ಎಂದೆ. ಆಗ ಅವರು ಬೇಡ ಎಂದರು. ನೀನು ಬ್ಯಾಡ್ಮಿಂಟನ್‌ ಚೆನ್ನಾಗಿ ಆಡ್ತೀಯಾ ಅದನ್ನೇ ಪ್ರೊಫೆಶನ್‌ ಮಾಡಿಕೋ ಎಂದರು.

ಅಷ್ಟರಲ್ಲಾಗಲೇ ನನ್ನ ತಂಗಿ ಈ ಫೀಲ್ಡ್ ನಲ್ಲಿ ಮುಂದೆ ಬಂದಿದ್ದಳು. ಆಗ ನಾನು ಅಮ್ಮನಿಗೆ ಒಂದು ವಚನ ನೀಡಿದೆ, ಅಮ್ಮಾ, ಒಂದು ಪಕ್ಷ ನಾನು ನಟನೆಯಲ್ಲಿ ಯಶಸ್ವಿ ಆಗದಿದ್ದರೆ ಆಗ ಖಂಡಿತಾ ಸ್ಪೋರ್ಟ್ಸ್ ಗೆ ಮರಳುತ್ತೇನೆ. ಅದಕ್ಕೆ ಸರಿ ಎಂದು ಅಮ್ಮ ಅಪ್ಪಾಜಿಯನ್ನು ಒಪ್ಪಿಸಿದರು. ಆಗ ನಾನು ಕನ್ನಡ ಸಿನಿಮಾ ಮುಗಿಸಿ, ಒಬ್ಬಂಟಿಯಾಗಿಯೇ ಮುಂಬೈ ಪ್ರವೇಶಿಸಿದೆ.

ನನ್ನ ಬಳಿ ಆಗ ಪ್ರಸಾದ್‌ ಚಿತ್ರಿಸಿದ್ದ ಪೋರ್ಟ್‌ ಫೋಲಿಯೋ ಇತ್ತು, ಕನ್ನಡ ಚಿತ್ರದ ಅನುಭವವಿತ್ತು. ನಾನು ಸುಮಾರು ಎಲ್ಲಾ ಪ್ರೊಡಕ್ಷನ್‌ ಹೌಸ್‌ಗಳಿಗೂ ಆ ಫೋಟೋ ತಲುಪಿಸಿದೆ. ಆಗ ನನಗೆ ದೊರಕಿದ್ದೇ `ಓಂ ಶಾಂತಿ ಓಂ.’ ಅಲ್ಲಿಂದ ನಾನು ಹಿಂತಿರುಗಿ ನೋಡಲಿಲ್ಲ.

ಕಷ್ಟಕರ ಸಂದರ್ಭಗಳನ್ನು ಎದುರಿಸುವ ಶಕ್ತಿ ದೀಪಿಕಾಳಿಗೆ ಎಲ್ಲಿಂದ ಬರುತ್ತದೆ?

ನನ್ನ ಪೇರೆಂಟ್ಸ್ ಮೊದಲಿನಿಂದಲೂ ನನಗೆ ಬಹಳ ಸಪೋರ್ಟಿವ್. ನಾನು ಚಿತ್ರಗಳ ಸೋಲಿನಿಂದ ಡಿಪ್ರೆಶನ್‌ಗೆ ಜಾರಿದಾಗ, ಅಪ್ಪಾಜಿ ನನಗೆ ಆಂತರಿಕ ಶಕ್ತಿಯ ಪರಿಚಯ ಮಾಡಿಸಿದರು. ಹೀಗಾಗಿ ನಾನು ಆ ಹಿಂಸಕ ಸ್ಥಿತಿಯಿಂದ ಹೊರಬರಲು ಸಾಧ್ಯವಾಯ್ತು. ಅದೇ ರೀತಿ ನನಗೆ ಸಂಗಾತಿಯಾಗಿ ಸಿಕ್ಕ ರಣವೀರ್‌ ಕೂಡ ಬಹಳ ಸಪೋರ್ಟಿವ್‌. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟದ ದಿನಗಳು ಬಂದೇ ಬರುತ್ತವೆ. ಹಾಗಾದಾಗ ನಮ್ಮನ್ನು ನಾವು ಸಶಕ್ತರನ್ನಾಗಿರಿಸಿಕೊಳ್ಳುವುದು, ಜೊತೆಗೆ ಈ ಕಷ್ಟಗಳನ್ನು ಗೆದ್ದು ಮೇಲೇರಬಲ್ಲೇ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದಿದೆಯಲ್ಲ….. ಅದು ಗ್ರೇಟ್‌ ವಿಷಯ!

– ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ