- ರಾಘವೇಂದ್ರ ಅಡಿಗ ಎಚ್ಚೆನ್.
ಬಾಲಿವುಡ್ನ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ಧುರಂಧರ್ 2: ದಿ ರಿವೆಂಜ್’ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿರಬಹುದು. ಆದರೆ ಈ ಚಿತ್ರದ ಕಂಟೆಂಟ್ ಬಗ್ಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರವನ್ನು ‘ಸಂಪೂರ್ಣ ಪ್ರೊಪಗಾಂಡಾ’ ಮತ್ತು ‘ಅತಿದೊಡ್ಡ ನಿರಾಸೆ’ ಎಂದು ಬಣ್ಣಿಸಿರುವ ಅವರು ಸುದೀರ್ಘ ಪೋಸ್ಟ್ ಮಾಡಿ ಕಾಲೆಳೆದಿದ್ದಾರೆ. ಸಿನಿಮಾ ನೋಡಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ರಮ್ಯಾ, ‘ಈಗಷ್ಟೇ ಧುರಂಧರ್ 2 ನೋಡಿದೆ. ಭರವಸೆ ಮೂಡಿಸಿದ್ದ ಸಿನಿಮಾವನ್ನು ಹೇಗೆ ಒಂದು ಸುದೀರ್ಘ ಪರೀಕ್ಷೆಯನ್ನಾಗಿ ಬದಲಿಸಬಹುದು ಎಂಬುದಕ್ಕೆ ಇದೊಂದು ಮಾಸ್ಟರ್ಕ್ಲಾಸ್. ಇದು ಅತ್ಯಂತ ನೀರಸ ಪಠ್ಯಪುಸ್ತಕವನ್ನು ಓದಿದ ಅನುಭವ ನೀಡುತ್ತದೆ. ಒಂದು ಹಂತದಲ್ಲಿ ಮೈದಾನದಲ್ಲಿ ನಡೆಯುತ್ತಿರುವ ದುರಂತವನ್ನು ನೋಡಿ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿ, ಹತಾಶೆಯಿಂದ ನಗಲು ಶುರು ಮಾಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಪ್ರೇಕ್ಷಕರಿಗೆ ಸಲಹೆ ನೀಡಿರುವ ರಮ್ಯಾ, ನೀವು ನಿಜವಾಗಿಯೂ ಈ ಸಿನಿಮಾ ನೋಡಬೇಕು ಎಂದಿದ್ದರೆ, ದಯವಿಟ್ಟು ಥಿಯೇಟರ್ನಲ್ಲಿ ಹಣ ಮತ್ತು ಸಮಯ ವ್ಯರ್ಥ ಮಾಡಬೇಡಿ. ಇದು ಕೇವಲ ಓಟಿಟಿಯಲ್ಲಿ ನೋಡಲು ಯೋಗ್ಯವಾದ ಸಿನಿಮಾ. ಅಲ್ಲಿ ಅಟ್ಲೀಸ್ಟ್ ನಮಗೆ ಬೇಸರವಾದರೆ ಸ್ಕಿಪ್ ಮಾಡುವ ಅಥವಾ ಫೋನ್ ನೋಡುವ ಅವಕಾಶವಿರುತ್ತದೆ ಎಂದಿದ್ದಾರೆ.
ಚಿತ್ರದ ನಾಯಕ ರಣವೀರ್ ಸಿಂಗ್ ಬಗ್ಗೆಯೂ ರಮ್ಯಾ ತಮಾಷೆ ಮಾಡಿದ್ದಾರೆ. ಸಿನಿಮಾವನ್ನು ರಣವೀರ್ ಸಿಂಗ್ ಹೆಗಲ ಮೇಲೆ ಹೊತ್ತಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನನಗೆ ಅಲ್ಲಿ ಅವರ ಕೂದಲು ಬಿಟ್ಟರೆ ಬೇರೇನೂ ಕಾಣಿಸಲಿಲ್ಲ. ಮೊದಲ ಭಾಗದಲ್ಲಿ ಅವರ ಕೂದಲಿಗೆ ಒಂದು ವ್ಯಕ್ತಿತ್ವ ಇತ್ತು, ಆದರೆ ಇಲ್ಲಿ ಅದು ಬರೀ ಅಡ್ಡಿಯಾಗಿ ಕಾಣಿಸುತ್ತಿದೆ. ಬಹುಶಃ ಅವರ ಕೂದಲಿಗೆ ಬೆಸ್ಟ್ ಸಪೋರ್ಟಿಂಗ್ ರೋಲ್ ಪ್ರಶಸ್ತಿ ನೀಡಬಹುದು ಎಂದು ಗೇಲಿ ಮಾಡಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರ ಮೇಲೆ ಕಿಡಿಕಾರಿದ ರಮ್ಯಾ, ‘ಹಿಂಸೆಯನ್ನು ತೋರಿಸುವುದರಲ್ಲಿ ನಿರ್ದೇಶಕರು ತಮಗೆ ತಾವೇ ಪೈಪೋಟಿ ನೀಡಿದಂತಿದೆ. ಎರಡು ಕಾಲು ಕತ್ತರಿಸಿ, ಮೈಮೇಲೆ ಸೀಮೆಎಣ್ಣೆ ಸುರಿದರೂ ಪಾತ್ರಧಾರಿ ಅದ್ಭುತವಾಗಿ ಡೈಲಾಗ್ ಹೊಡೆಯುತ್ತಾನೆ. ಇಂತಹ ಸೀನ್ಗಳನ್ನು ನೋಡಿದರೆ ಮೆಡಿಕಲ್ ಸೈನ್ಸ್ಗೆ ಜಿಂದಾಬಾದ್ ಎನ್ನಬೇಕು. ಇದಕ್ಕೆ ಆಸ್ಕರ್ ಬದಲು ನೋಬೆಲ್ ಪ್ರಶಸ್ತಿಯೇ ಕೊಡಬೇಕು ಎಂದು ಟೀಕಿಸಿದ್ದಾರೆ.
ಅತಿಯಾದ ದೇಶಭಕ್ತಿಯ ಹೆಸರಿನಲ್ಲಿ ಪ್ರೊಪಗಾಂಡಾ ಮಾಡುವುದನ್ನು ನಿಲ್ಲಿಸಿ ಎಂದು ಅವರು ಕಿವಿಮಾತು ಹೇಳಿದ್ದಾರೆ. ಇದೇ ಚಿತ್ರದ ಬಗ್ಗೆ ನಟ ಪ್ರಕಾಶ್ ರಾಜ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಸಿನಿಮಾ ಹೊಗಳಿದ ದಕ್ಷಿಣದ ಸ್ಟಾರ್ ನಟರ ವಿರುದ್ಧವೂ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.





