ಬಿಗ್ಬಾಸ್ ಖ್ಯಾತಿಯ ಪ್ರಥಮ್ ನಾಯಕನಾಗಿ ನಟಿಸಿರುವ, ಪಿ.ವಿ.ಆರ್.ಸ್ವಾಮಿ ಗೂಗಾರೆದೊಡ್ಡಿ ಅವರ ನಿರ್ದೇಶನದ ಬಹು ನಿರೀಕ್ಷಿತ "ಫಸ್ಟ್ ನೈಟ್ ವಿತ್ ದೆವ್ವ" ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಏಪ್ರಿಲ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನೆರವೇರಿತು. ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಕೂಡ ಪ್ರಥಮ್ ಅವರೇ ರಚಿಸಿದ್ದಾರೆ, ಇದೇ ಚಿತ್ರದಲ್ಲಿ ನಟಿಸಿರುವ ಹಿರಿಯನಟ ಶ್ರೀನಿವಾಸಮೂರ್ತಿ ಅವರು ಟ್ರೇಲರ್ ಗೆ ಚಾಲನೆ ನೀಡಿದರು.
ನಾಯಕ ಪ್ರಥಮ್ ಮಾತನಾಡುತ್ತಾ, ನಮ್ಮ ಚಿತ್ರದ ಡಬ್ಬಿಂಗ್, ಸ್ಯಾಟಲೈಟ್ ರೈಟ್ಸ್ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ, ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವ ಹಾರರ್ ಕಾಮಿಡಿ ಚಿತ್ರವಿದು, ನಾಯಕನಿಗೆ ಮದುವೆಯಾಗುತ್ತದೆ, ಆತನಿಗೆ ತನ್ನ ಹೆಂಡತಿ ದೆವ್ವ ಎಂಬುದು ಮದುವೆಯಾದ ಕೂಡಲೇ ಗೊತ್ತಾಗುತ್ತದೆ. ನಂತರ ಆತನ ಫಸ್ಟ್ ನೈಟ್ ಆಗುತ್ತಾ ಇಲ್ವಾ ಎನ್ನುವುದೇ ನಮ್ಮ ಚಿತ್ರದ ಕಥಾಹಂದರ.

ನಾನೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದೇನೆ ಎಂದರು.
ನಿರ್ದೇಶಕ ಪಿ.ವಿ.ಆರ್. ಸ್ವಾಮಿ ಮಾತನಾಡಿ, ಪ್ರಥಮ್ ಅವರು ಒಳ್ಳೆಯ ಮಾತುಗಾರ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ಮಾತು ತುಂಬಾ ಕಮ್ಮಿ. ಎಲ್ಲರ ಸಹಕಾರದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ನಾನು ಛಾಯಾಗ್ರಾಹಕನಾಗಿ ಬಹಳ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ ಈ ಚಿತ್ರಕ್ಕೂ ನಾನೇ ಛಾಯಾಗ್ರಹಣದ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. ಇದು ನಾನು ಛಾಯಾಗ್ರಾಹಕನಾಗಿ ಕಾರ್ಯ ನಿರ್ವಹಿಸಿರುವ 53ನೇ ಸಿನಿಮಾ.
"ಫಸ್ಟ್ ನೈಟ್ ವಿತ್ ದೆವ್ವ" ನನ್ನ ನಿರ್ದೇಶನದ ಐದನೇ ಚಿತ್ರ. ಈ ಚಿತ್ರದಲ್ಲಿ ಮಿಮಿಕ್ರಿ ಗೋಪಿ, ತುಕಾಲಿ ಸಂತು, ಸುಶ್ಮಿತಾ ಇವರೆಲ್ಲರ ಪಾತ್ರಗಳು ಪ್ರಭಾವ ಬೀರುತ್ತದೆ ಒಟ್ಟು 30 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ ಎಂದು ತಿಳಿಸಿದರು.
ಇದು ಕಾಮಿಡಿ ಹಾರರ್ ಚಿತ್ರ, ಪ್ರಥಮ್ ಅವರ ಪತ್ನಿಯಾಗಿ ನಾನು ನಟಿಸಿದ್ದೇನೆ. ಇನ್ನೋಸೆಂಟ್ ಹುಡುಗಿಯ ಪಾತ್ರ. ನನ್ನ ಹೇಗೆ ಚೇಂಜ್ ಆಗುತ್ತಾ ಹೋಗುತ್ತದೆ ಎನ್ನುವುದೇ ವಿಶೇಷ, ಎರಡು ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕಿ ನಿಖಿತಾಸ್ವಾಮಿ ಹೇಳಿದರು,
ಹಿರಿಯನಟ ಶ್ರೀನಿವಾಸಮೂರ್ತಿ ಮಾತನಾಡಿ, ನಾನು ಅಣ್ಣಾವ್ರ ಕಾಲದ ನಟರ ಜತೆಗೂ ನಟಿಸಿದ್ದೇನೆ. ಈಗಿನ ಕಾಲದ ನಟರ ಜತೆಗೂ ನಟಿಸಿದ್ದೇನೆ ನನಗೆ ಅಂಥಾ ಬದಲಾವಣೆ ಏನೂ ಕಾಣಿಸುತ್ತಿಲ್ಲ ಎಂದು ಹೇಳಿದರು. ಮಿಮಿಕ್ರಿ ಗೋಪಿ ಮಾತನಾಡಿ ಪ್ರಥಮ್ ಹಾಗೂ ಸ್ವಾಮಿ ಇಬ್ಬರೂ ಸೇರಿ ನನ್ನಿಂದ ಬೆಳಗಿನ ಜಾವದವರೆಗೂ ಕೆಲಸ ಮಾಡಿಸಿದ್ದಾರೆ, ಮಿಮಿಕ್ರಿ ಕೂಡ ಮಾಡಿಸಿದ್ದಾರೆ ಎಂದು ಹೇಳಿದರು,
ಅದ್ವಿಕ್ ವರ್ಮ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ, ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ. ಹರೀಶ್ರಾಜ್ ಅವರದು ವಿಲನ್ ಪಾತ್ರವಾದರೂ ಸ್ಪೆಷಲ್ ಆಗಿದೆ. ಸುಶ್ಮಿತಾ, ಜೀವಿತಾ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ತುಕಾಲಿ ಸಂತೋಷ್ ಇವರೆಲ್ಲ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ನವೀನ್, ಪುನೀತ್ ಕಾರ್ಯನಿರ್ವಹಿಸಿದ್ದಾರೆ.





