ಶಿಕ್ಷಣ ಕ್ಷೇತ್ರದಿಂದ ಬಂದು ಚಿತ್ರ ನಿರ್ಮಾಪಕಿಯಾದ ದಿಟ್ಟ ಮಹಿಳೆ ಗೀತಪ್ರಿಯಾರ ಸಾಹಸ ನಿಜಕ್ಕೂ ಮೆಚ್ಚತಕ್ಕದ್ದು. `ತಾಯವ್ವ' ಚಿತ್ರದ ಮೂಲಕ ಇವರು ಮಹಿಳಾ ಪ್ರೇಕ್ಷಕರಿಗೆ ಏನು ಹೇಳಬಯಸುತ್ತಾರೆ......?
ಇತ್ತೀಚೆಗೆ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಸಾಕಷ್ಟು ಸಂಖ್ಯೆಯ ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿವೆ. ಅದರಲ್ಲಿಯೂ ಹೊಸ ಪ್ರತಿಭಾವಂತ ನಟ ನಟಿಯರು, ನಿರ್ದೇಶಕರು ಚಿತ್ರೋದ್ಯಮಕ್ಕೆ ಬರುತ್ತಿದ್ದಾರೆ. ಅದರಂತೆ ಚಿತ್ರ ನಿರ್ಮಾಣ ಕ್ಷೇತ್ರದಲ್ಲಿಯೂ ಬಹು ಸಂಖ್ಯೆಯಲ್ಲಿ ಹೊಸಬರ ಆಗಮನವಾಗಿದೆ. ಅದರಲ್ಲಿ ಐಟಿ ಕ್ಷೇತ್ರದವರು, ಶಿಕ್ಷಣ ಕ್ಷೇತ್ರ, ರಿಯಲ್ ಎಸ್ಟೇಟ್ ಸೇರಿದಂತೆ ನಾನಾ ಕ್ಷೇತ್ರದ ವ್ಯಕ್ತಿಗಳು ಚಿತ್ರ ನಿರ್ಮಾಣ ಮಾಡಿದ್ದಾರೆ, ಮಾಡುತ್ತಿದ್ದಾರೆ ಇತ್ತೀಚೆಗೆ ಬಂದಿರುವ ನವೀನ ಚಿತ್ರಗಳಲ್ಲಿ ಮಾಮೂಲಿಯಾದ ಪ್ರೀತಿ, ಪ್ರೇಮ, ಗ್ಯಾಂಗ್ ವಾರ್ ಅಂತಹ ವಿಷಯಗಳಲ್ಲದೆ ವೈದ್ಯಕೀಯ ಸಂಶೋಧನೆ, ಶಿಕ್ಷಣದ ಮಹತ್ವ, ಅನ್ಯಾಯದ ವಿರುದ್ಧ ನ್ಯಾಯಾಲದಲ್ಲಿ ಕಾನೂನಿನ ಸಮರ ಹೀಗೆ ನಾನಾ ಮಹತ್ವದ ವಿಷಯ ವೈವಿಧ್ಯತೆಗಳಿರುತ್ತವೆ. ಅಂತಹುದೇ ಸಾಲಿನಲ್ಲಿ ಸೇರಬಹುದಾದ ಇತ್ತೀಚಿನ ಒಂದು ಹೊಸಾ ಸಿನಿಮಾ ಎಂದರೆ `ತಾಯವ್ವ.'
ಗ್ರಾಮೀಣ ಸೂಲಗಿತ್ತಿ `ತಾಯವ್ವ' ಎಂದರೆ ಗ್ರಾಮಗಳಲ್ಲಿರುವ ಸೂಲಗಿತ್ತಿ. ಈ ಸಿನಿಮಾ ಹೇಳಹೊರಟಿರುವುದು ಸಹ ಅದೇ ಸೂಲಗಿತ್ತಿಯ ಕಥೆ. ಇಂದಿನ ಯುವ ಪೀಳಿಗೆಗೆ ಹೆರಿಗೆಗಳೆಂದರೆ ಆಸ್ಪತ್ರೆಗಳಲ್ಲಿ ನಡೆಸುವ ಸಹಜ ಅಥವಾ ಸಿಸೇರಿಯನ್ ಹೆರಿಗೆಗಳ ಕುರಿತಂತೆ ಅರಿವಿರುತ್ತದೆ. ಆದರೆ ನಮ್ಮ ಹಿಂದಿನ ತಲೆಮಾರಿನಲ್ಲಿ ಯಾರೂ ಹೆರಿಗೆಗಾಗಿ ಆಸ್ಪತ್ರೆಗೆ ಹೋದವರಲ್ಲ. ಬದಲಿಗೆ ಆಯಾ ಗ್ರಾಮಗಳಲಿದ್ದ ಸೂಲಗಿತ್ತಿಯರೇ ಹೆರಿಗೆಯನ್ನು ಮಾಡಿಸುತ್ತಿದ್ದರು. ಅವೆಲ್ಲ ಸಹಜ ಹೆರಿಗೆಗಳಾಗಿರುತ್ತಿದ್ದವು.
ಇಂತಹ ಸೂಲಗಿತ್ತಿಯರ ಜೀವನ ಹೇಗಿರುತ್ತದೆ ಎನ್ನುವುದನ್ನು ಇಂದಿನ ಆಧುನಿಕ ಸಮಾಜಕ್ಕೆ ಪರಿಚಯಿಸುವುದಕ್ಕಾಗಿ ಇವರು ಸಿನಿಮಾ `ತಾಯವ್ವ.' ಗ್ರಾಮೀಣ ಸೊಗಡಿನ ಕಥಾಹಂದರ, ಸೂಲಗಿತ್ತಿಯ ಬದುಕಿನ ಮೇಲೊಂದು ಚಿತ್ರ ಈ `ತಾಯವ್.'

ತಾಯವ್ವನಾಗಿ ಉಮಾಶ್ರೀ
ಈ ಹಿಂದೆ ಕಿಚ್ಚ ಸುದೀಪ್ ಹಾಗೂ ಉಮಾಶ್ರೀ ಅಭಿನಯದ `ತಾಯವ್ವ' ಸಿನಿಮಾ ತೆರೆಗೆ ಬಂದಿತ್ತು. ಅದು ಸುದೀಪ್ ರ ಚೊಚ್ಚಲ ಸಿನಿಮಾ ಸಹ ಹೌದು. ಈಗ ಮತ್ತೆ ಅದೇ ಹೆಸರಿನಲ್ಲಿ ಈ ಸಿನಿಮಾ ಬಂದಿದೆ. ಈ ಬಾರಿ `ತಾಯವ್ವ'ನಾಗಿ ಗೀತಪ್ರಿಯಾ ಕಾಣಿಸಿಕೊಂಡಿದ್ದಾರೆ.
`ಅಮರ ಫಿಲಂಸ್' ಮತ್ತು `ಜಯಶಂಕರ ಟಾಕೀಸ್' ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗಿರುವ `ತಾಯವ್ವ' ಸಿನಿಮಾಕ್ಕೆ ಸಾತ್ವಿಕ್ ಪವನ್ ಕುಮಾರ್ ನಿರ್ದೇಶನ ನೀಡಿದ್ದಾರೆ. ಅನಂತ್ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ `ತಾಯವ್ವ' ಚಿತ್ರದ ಗೀತೆಗಳಿಗೆ ಸ್ವತಃ ಗೀತಪ್ರಿಯಾ ಅವರೇ ಧ್ವನಿಯಾಗಿದ್ದಾರೆ.
ಬಹುಮುಖ ಪ್ರತಿಭೆ ಗೀತಪ್ರಿಯಾ
ಅಂದಹಾಗೆ ಈ ಗೀತಪ್ರಿಯಾ ಅವರದು ಬಹುಮುಖ ಪ್ರತಿಭೆ. ಶಿಕ್ಷಣ, ಸಮಾಜಸೇವೆ, ಮಹಿಳಾಪರ ಹೋರಾಟ, ಇತರ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಈಕೆ `ತಾಯವ್ವ' ಚಿತ್ರದ ಮೂಲಕ ನಟಿ, ನಿರ್ಮಾಪಕಿ, ಗಾಯಕಿಯಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದು ಇಷ್ಟೆಲ್ಲಾ ಸಾಧನೆ ಮಾಡಿ ಇನ್ನಷ್ಟು ಮಹಿಳೆಯರಿಗೆ ಸ್ಛೂರ್ತಿಯಾಗಬಲ್ಲ ಗೀತಪ್ರಿಯಾರ ಕಿರುಪರಿಚಯ ಈ ಮುಂದಿದೆ.
ಗೀತಪ್ರಿಯಾರ ಹಿನ್ನೆಲೆ
ಮೂಲತಃ ಚಿಕ್ಕಮಗಳೂರಿನವರಾದ ಗೀತಪ್ರಿಯಾ ಉನ್ನತ ವ್ಯಾಸಂಗ, ವೃತ್ತಿಕ್ಷೇತ್ರದಲ್ಲಿ ಸಾಧನೆ ಮಾಡಿರುವುದೆಲ್ಲ ಬೆಂಗಳೂರಿನಲ್ಲಿಯೇ. `ಕೃಪಾನಿಧಿ ಗ್ರೂಫ್ ಆಫ್ ಇನ್ ಸ್ಟಿಟ್ಯೂಷನ್ಸ್' ಮೂಲಕ ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಹಾಗೂ ಸಮಾಜಮುಖಿ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರ ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಂದು ವಿಶ್ವದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.





