– ರಾಘವೇಂದ್ರ ಅಡಿಗ ಎಚ್ಚೆನ್
ಹೊಸಬರ *’ಸುಖೀಭವ’* ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದ್ದ ಹೆಬ್ಬುಲಿ ಮತ್ತು ರಾಬರ್ಟ್ ಚಿತ್ರಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಮತ್ತೆ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದರು.
ನಂತರ ಅವರು ಮಾತನಾಡುತ್ತಾ, ಸಿನಿಮಾ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಜನಗಳ ಮುಂದೆ ತಂದಿಟ್ಟರೆ ಅವರು ಎಂದಿಗೂ ಕೈ ಬಿಡುವುದಿಲ್ಲ. ಮನೇಲಿ ದುಡ್ಡು ಎಲ್ಲಿ ಇಡಬೇಕು ಅನ್ನುವಷ್ಟರ ಮಟ್ಟಿಗೆ ಸಿನಿಮಾದಿಂದ ಹಣ,ಕೀರ್ತಿ ಸಂಪಾದಿಸಿದ್ದೇನೆ. ಕೆಲವರು ಸಿನಿಮಾ ಉದ್ಯಮದ ಬಗ್ಗೆ ನಕರಾತ್ಮಕ ಟೇಕೆಗಳನ್ನು ಮಾಡುತ್ತಿರುತ್ತಾರೆ. ಪರಿಪೂರ್ಣ ಶ್ರಮದಿಂದ ಸರಿಯಾಗಿ ಚಿತ್ರ ಮಾಡಿದ್ದಲ್ಲಿ ದಡ ಸೇರುವುದು ಖಚಿತ. ಚಿತ್ರ ಗಲ್ಲಿಸುವುದು ಜನಗಳ ಜವಬ್ದಾರಿಯಾಗಿರುವುದಿಲ್ಲ. ತಂಡದವರದು ಆಗಿರುತ್ತದೆ. ಪ್ರಸ್ತುತ ವೆಬ್ಸೈಟ್ದಲ್ಲಿ ರಾ ಕಂಟೆಂಟ್ ನೋಡುತ್ತಿರುವುದರಿಂದ ಸಿನಿಮಾದ ಮೇಲೆ ಜನರು ಮೃದು ಧೋರಣೆ ಹೊಂದಿರುತ್ತಾರೆ. ಜನರಿಗೆ ಎಲ್ಲಾ ರೀತಿಯ ಮನರಂಜನೆ ಬೇಕು. ನಮ್ಮಲ್ಲಿ ಕನ್ನಡ ಚಿತ್ರಗಳಿಗಿಂತ ಇತರೆ ಭಾಷೆಯ ಚಿತ್ರಗಳು ಜಾಸ್ತಿ ವ್ಯಾಪಾರ ಮಾಡುತ್ತಿದೆ. ಕೇವಲ ಯಾರೋ ಯುಟ್ಯೂಬ್, ಎಫ್ಬಿನಲ್ಲಿ ವಿಮರ್ಶೆ ಹಾಕಿದ ಮಾತ್ರಕ್ಕೆ ಯಾರ ಹಣೆಬರೆಹ ಬರೆಯೋದಿಕ್ಕೆ ಆಗೋದಿಲ್ಲ. ನೀವುಗಳು ಸಿನಿಮಾ ನೋಡಿ ನಿಮ್ಮ ಅಭಿಪ್ರ್ರಾಯ ತಿಳಿಸಿದಾಗ ಮಾತ್ರ ಎಲ್ಲರಿಗೂ ತಲುಪುವಲ್ಲಿ ಸಹಕಾರಿಯಾಗುತ್ತದೆ. ನಿಮ್ಮಗಳ ಚಪ್ಪಾಳೆ, ಸೆಲ್ಫಿ ಟಿಕೆಟ್ಗೆ ಪರಿವರ್ತನೆಯಾಗಲೆಂದು ಉಮಾಪತಿ ಶ್ರೀನಿವಾಸಗೌಡ ಮೈಕ್ನ್ನು ಹಸ್ತಾಂತರಿಸಿದರು.

ದಂಪತಿಗಳಾದ ಸಂತೋಷ್ ಕುಮಾರ್-ಭಾರ್ಗವಿ ಸಂತೋಷ್, ಮಗನ ಹೆಸರಾದ ವೇದ್ ಆರ್ಯನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಎನ್.ಕೆ.ರಾಜೇಶ್ನಾಯ್ಡು ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಮಹೇಂದ್ರ ನಾಯಕ. ಸುಶ್ಮಿತ ನಾಯಕ್ ಹಾಗೂ ವಿಯಾನ್ಶಿ ಗ್ಡೆ ನಾಯಕಿಯರು. ಉಳಿದಂತೆ ಗೌರವ್ ಶೆಟ್ಟಿ, ಶೋಭರಾಜ್, ರವಿಶಂಕರ್ ಗೌಡ, ಸುನಿಲ್ ಪುರಾಣಿಕ್, ತುಕಾಲಿಸಂತು, ಮೈತ್ರಿ ಜಗ್ಗಿ ಮುಂತಾದವರು ಅಭಿನಯಿಸಿದ್ದಾರೆ. ಮೂರು ಹಾಡುಗಳಿಗೆ ಪ್ರಮೋದ್ ಮರವಂತೆ, ಕೊನೆಯ ಗೀತೆಗೆ ಸಂತೋಷ್ಕುಮಾರ್ ಮತ್ತು ಎನ್.ಕೆ.ರಾಜೇಶ್ ನಾಯ್ಡು ಸಾಹಿತ್ಯ ಒದಗಿಸಿದ್ದಾರೆ. ಬಿ.ಜೆ.ಭರತ್-ಶುಭಮ್-ವಿಯಾನ್.ಎಸ್.ಎ ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ನಟ ಶರಣ್ ’ಬೇಡ ಮಚ್ಚಾ ಬೇಡ’ ಸಾಲಿನ ಗೀತೆಗೆ ಧ್ವನಿಯಾಗಿರುವುದು ವಿಶೇಷ.

ಛಾಯಾಗ್ರಹಣ ಎಸ್.ಬಿ.ಮಂಜುನಾಥ್ ನಾಯಕ್, ಕಾರ್ಯಕಾರಿ ನಿರ್ಮಾಪಕ ವಿನಯ್.ಎನ್, ಸಂಕಲನ ಮಧುತುಂಬುಕೆರೆ, ಸಾಹಸ ನರಸಿಂಹ ಅವರದಾಗಿದೆ. ಬೆಂಗಳೂರು, ಉಡುಪಿ, ಸಕಲೇಶಪುರ, ಕಳಸ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.





