- ರಾಘವೇಂದ್ರ ಅಡಿಗ ಎಚ್ಚೆನ್.
ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ಕನ್ನಡ ಚಿತ್ರದ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದ್ದು, ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ‘ಮಾರಿಗೋಲ್ಡ್’ ಚಿತ್ರದ ನಿರ್ದೇಶಕ ರಾಘವೇಂದ್ರ ನಾಯಕ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಹಂಚಿಕೊಂಡು, ತಮ್ಮ ಕಥೆಯನ್ನು ಅನಧಿಕೃತವಾಗಿ ಬಳಸಿಕೊಂಡು ಸಿನಿಮಾ ನಿರ್ಮಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಅವರು ಬರಹಗಾರರು ಮತ್ತು ಭವಿಷ್ಯದ ನಿರ್ದೇಶಕರಿಗೆ ಮುನ್ನೆಚ್ಚರಿಕೆ ನೀಡುತ್ತಾ, ಕಥೆ ಸಿದ್ಧವಾದ ತಕ್ಷಣ Screenwriters Association (SWA) ನಲ್ಲಿ ನೋಂದಾಯಿಸಿಕೊಳ್ಳುವುದು, ಪ್ರತಿಯೊಂದು ಹಂತದ ದಾಖಲೆಗಳನ್ನು ಇಮೇಲ್ ಮೂಲಕ ಸುರಕ್ಷಿತವಾಗಿಡುವುದು ಹಾಗೂ ಕಥೆ ವಿವರಿಸುವ ಸಂದರ್ಭಗಳಲ್ಲಿ ಆಡಿಯೋ ದಾಖಲೆ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಿದ್ದಾರೆ.
ಈ ರೀತಿಯ ಮುನ್ನೆಚ್ಚರಿಕೆ ವಹಿಸದ ಕಾರಣದಿಂದಲೇ ತಮಗೆ ದೊಡ್ಡ ಅನ್ಯಾಯವಾಗಿದ್ದು, ತಮ್ಮ ಕಥೆಯ ಸಂಪೂರ್ಣ ದ್ವಿತೀಯಾರ್ಧವನ್ನು ಬಳಸಿಕೊಂಡು ಸಿನಿಮಾ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕಥೆ ತಮ್ಮದೇ ಎಂಬುದು ತಮ್ಮ ಆಪ್ತ ವಲಯದ ನಿರ್ಮಾಪಕರು, ತಂತ್ರಜ್ಞರು ಹಾಗೂ ಸ್ನೇಹಿತರಿಗೆ ತಿಳಿದಿದೆ ಎಂದು ಹೇಳಿಕೊಂಡಿದ್ದಾರೆ.
ಅವರು ಮುಂದುವರೆದು, ಕನ್ನಡದ ಖ್ಯಾತ ನಿರ್ದೇಶಕ-ನಿರ್ಮಾಪಕರು ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿ, ಮುಂಗಡ ಸಂಭಾವನೆಯನ್ನೂ ನೀಡಿದ್ದರು. ಇದೇ ತಂಡದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಕಥೆಯನ್ನು ಒಬ್ಬ ‘ನಿರ್ದೇಶಕ-ನಿರ್ಮಾಪಕ ಕಮ್ ನಟ’ನಿಗೆ ವಿವರಿಸಿದ್ದಾಗಿ ತಿಳಿಸಿದ್ದಾರೆ.
ಆದರೆ, ತಮ್ಮ ಬಳಿ ಕಥೆಯ ಮೂಲದ ದಾಖಲೆಗಳಿದ್ದರೂ, ಅದೇ ಕಥೆಯನ್ನು ಆ ವ್ಯಕ್ತಿಗೆ ವಿವರಿಸಿದ್ದೆ ಎಂಬುದಕ್ಕೆ ಪೂರಕ ಸಾಕ್ಷ್ಯಗಳಿಲ್ಲದ ಕಾರಣ ತಾವು ಕಾನೂನು ಕ್ರಮ ಕೈಗೊಳ್ಳಲು ಅಸಹಾಯಕರಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಅನುಭವದಿಂದ ಪಾಠ ಕಲಿತು, ಇತರ ಬರಹಗಾರರು ಇಂತಹ ಮೋಸಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದಲೇ ಈ ಪೋಸ್ಟ್ ಹಂಚಿಕೊಂಡಿರುವುದಾಗಿ ಹೇಳಿದ್ದಾರೆ.
ಈ ನಡುವೆ, ಇತ್ತೀಚೆಗೆ ಬಿಡುಗಡೆಯಾಗಿ ಹಿಟ್ ಆದ ಕನ್ನಡ ಸಿನಿಮಾ ‘ಲವ್ ಮಾಕ್ಟೇಲ್ 3’ ಮೇಲೆ ಈ ಆರೋಪ ಇರಬಹುದು ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಿರ್ದೇಶಕ-ನಿರ್ಮಾಪಕ ಕಮ್ ನಟ ಎಂದರೆ ಡಾರ್ಲಿಂಗ್ ಕೃಷ್ಣ ಇರಬಹುದು ಎಂಬ ಚರ್ಚೆಯೂ ಜೋರಾಗಿದೆ.
ಆದರೆ, ಈ ಆರೋಪಗಳ ಬಗ್ಗೆ ಸಂಬಂಧಿತ ಚಿತ್ರತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಂದಿಲ್ಲ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.





