- ರಾಘವೇಂದ್ರ ಅಡಿಗ ಎಚ್ಚೆನ್.
ಈ ಹಿಂದೆ "ದಿ ಸೂಟ್" ಚಿತ್ರದಲ್ಲಿ ನಾಯಕನಾಗಿ ಜನಮೆಚ್ಚುಗೆ ಗಳಿಸಿದ್ದ ಕಮಲ್ ರಾಜ್ ಈಗ ಚಿತ್ರ ನಿರ್ಮಾಣದ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೂ ಒಂದಲ್ಲ ಎರಡಲ್ಲ ಮೂರು ಚಿತ್ರಗಳ ಘೋಷಣೆ ಮಾಡಿದ್ದಾರೆ.ಹೌದು ಕಮಲ್ ರಾಜ್ ಮೊಹಬ್ಬತ್ ಜಿಂದಾಬಾದ್, ಟಾಸ್ಕ್ ಹಾಗೂ ನಾಳೆ ನಮ್ಮ ಭರವಸೆ - ಈ 3 ಚಿತ್ರಗಳಲ್ಲಿ ಅಭಿನಯಿಸುವ ಜೊತೆಗೆ ತಮ್ಮ ಕಮಲ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅವರೇ ನಿರ್ಮಾಣವನ್ನೂ ಮಾಡುತ್ತಿದ್ದಾರೆ.
ಈ ಮೂರು ಸಿನಿಮಾಗಳ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. . ವಿ.ನಾಗೇಂದ್ರ ಪ್ರಸಾದ್, ಉಮೇಶ್ ಬಣಕಾರ್, ನಿರ್ದೇಶಕ ಓಂ ಸಾಯಿ ಪ್ರಕಾಶ್, ರವಿ ಶ್ರೀವತ್ಸ, ನಟಿ ಪ್ರಿಯಾಂಕಾ ಉಪೇಂದ್ರ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಮೂರು ಸಿನಿಮಾಗಳ ಕುರಿತು ಮಾತನಾಡಿದ ಕಮಲ್ ರಾಜ್ ಈ ಚಿತ್ರಗಳಲ್ಲಿ ನಾನು ಲವರ್ ಬಾಯ್, ಡಿಟೆಕ್ಟಿವ್ ಸೇರಿ ಮುಂತಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ
ನಾಳೆ ನಮ್ಮ ಭರವಸೆ' ಚಿತ್ರದಲ್ಲಿ ಒಟ್ಟೂ 50 ಪಾತ್ರವನ್ನು ನಿರ್ವಹಿಸುತ್ತೇನೆ. 75 ಸೀನ್ಗಳಿರುವ ಈ ಚಿತ್ರವನ್ನು 10 ಜನ ನಿರ್ದೇಶಿಸಲಿದ್ದಾರೆ ಇದಕ್ಕೆ ಮುನ್ನ 40ಕ್ಕೂ ಹೆಚ್ಚು ಚಿತ್ರಗಳಿಗೆ ಇನ್ವೆಸ್ಟ್ ಮಾಡಿದ್ದು, ಆ ಪೈಕಿ ಒಂದು ಸಿನಿಮಾ ರಿಲೀಸ್ ಆಗಿದೆ. ಹಾಗಾಗಿ, ಇಂಡಸ್ಟ್ರಿ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ' ಎನ್ನುತ್ತಾರೆ.
ಇದಲ್ಲದೆ ಮೊಹಬ್ಬತ್ ಜಿಂದಾಬಾದ್ ಚಿತ್ರದಲ್ಲಿ 14 ಹಾಡುಗಳಿದ್ದು, ಬಾಲಿವುಡ್ ಸೇರಿದಂತೆ ಬಹುಭಾಷಾ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ತಯಾರಾಗಲಿದೆ. ಈಗಾಗಲೇ ಮೂರೂ ಸಿನಿಮಾಗಳ ಶೂಟಿಂಗ್ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಅವರು ವಿವರಿಸಿದರು.
ಮೂರನೇ ಚಿತ್ರ ಟಾಸ್ಕ್ ಚಿತ್ರವನ್ನು ಐವರು ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಆ ಪೈಕಿ, ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಒಂದು ಕಥೆಯನ್ನು ನಿರ್ದೇಶನ ಮಾಡುತ್ತಿದ್ದಾರೆ .
ನಿರ್ದೇಶಕ ಓಂ ಸಾಯಿಪ್ರಕಾಶ್ ಮಾತನಾಡಿ ನನ್ನ 'ಸೆ.10' ಚಿತ್ರದ ವಿತರಣೆಗೆ ಕಮಲ್ ಕೈಜೋಡಿಸಿದ್ದಾರೆ. ಅವರು ರಿಯಲ್ ಎಸ್ಟೇಟ್ನಲ್ಲಿ ಸಾಧನೆ ಮಾಡಿದವರು. ಈಗ ಸಿನಿಮಾದಲ್ಲಿ ಏನಾದರೂ ಸಾಧನೆಗೈಯಬೇಕೆಂಬ ಉದ್ದೇಶದೊಂದಿಗೆ ಬಂದಿದ್ದಾರೆ. ನಾನು 150 ಚಿತ್ರ ಮಾಡಿದವನಾದರೂ, 5 ಜನರಲ್ಲಿ ಒಬ್ಬ ನಿರ್ದೇಶಕನಾಗಲು ಒಪ್ಪಿದೆ. ಇದು ಗಿವ್ ಅಂಡ್ ಟೇಕ್ ಪಾಲಿಸಿ ಎಂದು ಹೇಳಿದರು.
ನಟಿ ಪ್ರಿಯಾಂಕಾ ಉಪೇಂದ್ರ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕಮಲ್ ರಾಜ್ ಅವರ ಈ ಸಾಹಸಕ್ಕೆ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಇದರೊಂದಿಗೆ ಡಾ. ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ರವಿ ಶ್ರೀವತ್ಸ ಸಹ ಅವರ ಕಾರ್ಯಕ್ಕೆ ಶುಭ ಕೋರಿದರು.
ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳ ಆಗಮನವಾಗುತ್ತಿದ್ದು ಈ ನಿಟ್ಟಿನಲ್ಲಿ ಕಮಲ್ ರಾಜ್ ಅವರ ಕೆಲಸಕ್ಕೆ ನಾವು ಸಹ ಶುಭ ಹಾರೈಸೋಣ.